ಈಗ ಅತ್ಯಾಚಾರ ‘ಕಾಮನ್ ಫೆನಾಮೆನಾ’ ನಮ್ಮ ದೇಶದಲ್ಲಿ

ಈಗ ಅತ್ಯಾಚಾರ ಕಾಮನ್ ಫೆನಾಮೆನಾ ನಮ್ಮ ದೇಶದಲ್ಲಿ. ಟೈಮ್ಸ್ ಆಫ್ ಇಂಡಿಯಾ ದ ಆನ್ ಲೈನ್ ಆವೃತ್ತಿಯ ಮಧ್ಯ ಭಾಗದ ಸುದ್ದಿ ಯಲ್ಲಿ ದಿನವೂ ರಾರಾಜಿಸುವ ಚಟುವಟಿಕೆ ಈ ರೇಪು ಎನ್ನುವ ಅಸಹ್ಯ ಹುಟ್ಟಿಸುವ perversion. ಇದಕ್ಕೆ ಮುಖ್ಯ ಕಾರಣ ಎಂದರೆ ರೇಪಿಗೆ ತಕ್ಕ ಶಿಕ್ಷೆಯ ಕೊರತೆ ಅದರೊಂದಿಗೇ ಈ ನೀಚ ಕೃತ್ಯಕ್ಕೆ ಮಹಿಳೆಯನ್ನು ಹೊಣೆಯಾಗಿಸುವ  ನಾಚಿಕೆಗೆಟ್ಟ ವರ್ತನೆ. ಮಹಿಳೆ ಸರಿಯಾಗಿ ಬಟ್ಟೆ ಉಡಲು ಅಸಮರ್ಥಳಾದರೆ ರೇಪ್ ಬಂದು ಎರಗುತ್ತದೆ ಎನ್ನುವುದು ಬಹಳಷ್ಟು ಜನರ ವಕ್ರ ನ್ಯಾಯ. ವಯಸ್ಕ, ಹದಿಹರೆಯದ ಹೆಣ್ಣಿನ ಉಡುಗೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವುದಾದರೆ ಒಂದೂವರೆ, ಎರಡು, ಮೂರು ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಏನು ಸಮಜಾಯಿಷಿ?

ಇಂದು ೧೧ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಈ ಅಮಾನುಷ ಕೃತ್ಯಗಳು ನಾಗರೀಕ ಸಮಾಜದ ಕಣ್ಣು ತೆರೆಸಲು ವಿಫಲ ವಾಗುತ್ತಿರುವುದು ದಿಗಿಲನ್ನು ಹುಟ್ಟಿಸುತ್ತಿದೆ. ನನ್ನ ಪ್ರಕಾರ ಅತ್ಯಾಚಾರ ಭ್ರಷ್ಟಾಚಾರಕ್ಕಿಂತ ಕೀಳು, ಅಸಹ್ಯ. ಅತ್ಯಾಚಾರದ ವಿರುದ್ಧ ಅಣ್ಣಾ ಹಜಾರೆ, ಕೇಜರಿವಾಲ (ನಾನು ಈತನ ಫ್ಯಾನ್ ಅಲ್ಲ) ನಂಥವರು ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಬರೀ ಜನ ಸಾಮಾನ್ಯನ ಅಭಿಪ್ರಾಯ ಮಾತ್ರವಲ್ಲ ಮಂತ್ರಿ ಮಹೋದಯರೂ, ಪೊಲೀಸ್ ಅಧಿಕಾರಿಗಳೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.  ಈಗ ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಕೊಡುವ ಸಲಹೆ ಏನೆಂದರೆ ಹೆಣ್ಣು ಗಂಡುಗಳ ವಿವಾಹಾರ್ಹ ವಯಸ್ಸನ್ನು ಇಳಿಸಬೇಕು ಎನ್ನುವುದು. ಒಂದು ಕಡೆ ಸರಿಯಾಗಿ ಬಟ್ಟೆ ತೊಡು ಇಲ್ಲಾ ಮಾನ ಕಳೆದು ಕೊಳ್ಳಲು ತಯಾರಾಗು ಎನ್ನುವ ಎಚ್ಚರಿಕೆಗೆ ಮದುವೆ ವಯಸ್ಸನು ಇಳಿತ ಮಾಡಿದರೆ ರೇಪ್ ದರದಲ್ಲಿ ಕಡಿತ ಬರಬಹುದು ಎನ್ನುವ ವಾದಕ್ಕೆ ಜೋಡಿ ಎನ್ನುವಂತೆ ಬರುತ್ತಿದೆ ಮಂತ್ರಿಯ ಸಲಹೆ. ಈ ಮಾತಿನೊಂದಿಗೆ ಈ ಮು. ಮಂತ್ರಿ ಮುಘಲರನ್ನೂ ಎಳೆದು ತರುತ್ತಾನೆ. ಕುಣಿಯಲು ಬಾರದವಳು ನೆಲ ಡೊಂಕು ಎಂದಳಂತೆ, ಆಳನು ಬಾರದವನು ಮುಘಲರನ್ನು, ಪೋರ್ಚುಗೀಸರನ್ನು ಹೊನೆಯಾಗಿಸುತ್ತಾನೆ ತನ್ನ ಹೊಣೆಗೇಡಿತನಕ್ಕೆ.

ಒಟ್ಟಿನಲ್ಲಿ ಸಮಾಜದ ನಿಲುವು ಇಷ್ಟೇ. ಏನೇ ಆಗಲಿ, ಏನೇ ಬರಲಿ, ನಾವು ಮಾತ್ರ ನಮ್ಮ ಗಂಡು ಮಕ್ಕಳಿಗೆ ನೈತಿಕತೆಯ ಪಾಠ ಹೇಳೋಲ್ಲ, ಪರ ಹೆಣ್ಣನ್ನು ಗೌರವದಿಂದ ಕಾಣಲು ಉತ್ತೇ ಜಿಸೋಲ್ಲ ಎನ್ನುವ ಹೊಟ್ಟೆ ತೊಳೆಸುವಂಥ ಮೊಂಡುತನ. ನಮ್ಮ ಸಂಸ್ಕಾರ ಅಂಥದ್ದು, ಇಂಥದ್ದು ಎಂದು vainglorious ಆಗಿ ಕಣ್ಣು ಮುಚ್ಚಿ, ಎದೆಯುಬ್ಬಿಸಿ ನಡೆದರೆ ಸಾಲದು. ಅತ್ಯಾಚಾರದಂಥ ಅವಮಾನಕಾರೀ ಸಾಮಾಜಿಕ ಪಿಡುಗಿಗೆ ಇತಿಶ್ರೀ ಹಾಡಲೇ ಬೇಕು.              

ಋತು ಗಾನ

ಋತು ಚಕ್ರ ಒಂದು ರೀತಿಯ ರಾಕೆಟ್ ಸೈನ್ಸ್ ಕೆಲವರಿಗೆ. ಒಬ್ಬ ಗಂಡು ಋತು ಚಕ್ರದ ಬಗ್ಗೆ ಬರೆದಾಗ ಸಹಜವಾಗಿಯೇ ಹುಬ್ಬುಗಳು ಮೇಲೇರುತ್ತವೆ. ಏಕೆಂದರೆ ಇದು ಪುರುಷರ domain ಅಲ್ಲ. writer’s block ನಿಂದ ಹೊರಬರಲು ವಿಷಯವೊಂದನ್ನು ಹುಡುಕುತ್ತಿದ್ದಾಗ ಹೊಳೆಯಿತೀ ವಿಷಯ, ಹಳೇ ಲಾಪ್ ಟಾಪ್ ಬದಲಿಸಿ ಮೊನ್ನೆ ತಾನೇ ಕೊಂಡ ಹೊಸ ಅತಿ ತೆಳುವಾದ “ಅಲ್ಟ್ರಾ ಬುಕ್’ ಲಾಪ್ ಟಾಪ್ ನಿಂದ ಹೊರಹೊಮ್ಮಿದ ಲೇಖನ ಓದಿ.

ನಾನು ಬೆಂಗಳೂರಿನಲ್ಲಿ ಮೆಡಿಕಲ್ ಟ್ರಾನ್ಸ್ ಕ್ರಿಪ್ಶನ್ ಮಾಡುತ್ತಿರುವಾಗ ಟ್ರೈನರ್ ಒಬ್ಬರು ಅಮೇರಿಕನ್ ಮಹಿಳೆ. ಆಕೆ human anatomy ವಿಷಯ ಕಲಿಸುವಾಗ ಋತು ಚಕ್ರದ ವಿಷಯ ಬಂತು. ಕೆಣಕಲೆಂದೇ ಏನೋ ಹುಡುಗರನ್ನು ಒಬ್ಬೊಬ್ಬರಾಗಿ ಎಬ್ಬಿಸಿ you know how long menstruation lasts ಎಂದು ಕೇಳಿದಾಗ ಇಡೀ ತರಗತಿಯೇ ನಗೆಗಡಲಲ್ಲಿ ಮುಳುಗುವ ಉತ್ತರ ಬರುತ್ತಿತ್ತು. ಒಬ್ಬ ಹತ್ತು ದಿನ ಎಂದರೆ, ಮತ್ತೊಬ್ಬ ಇನ್ನೂ ಮುಂದಕ್ಕೆ ಹೋಗಿ ಆರು ತಿಂಗಳು ಎಂದು ಬಿಟ್ಟ. ಆಕೆ ನಗುತ್ತಾ ಮಹಿಳೆಯರ ಈ ಮಾಸಿಕ ವಿದ್ಯಮಾನವನ್ನು ವಿವರಿಸಿ knives fly in the kitchen and this is the time guys have to leave town ಎಂದು ಹೇಳಿದಾಗ ಹೆಣ್ಣು ಮಕ್ಕಳು ಗಹಗಹಿಸಿ ನಕ್ಕಿದ್ದರು.

ನಾನು ಚಿಕ್ಕವನಿದ್ದಾಗ ಕೆಲವರು ಹೇಳಿದ್ದು ಕೇಳಿದ್ದೇನೆ, ಅವಳು ದೊಡ್ಡವಳಾದಳು ಎಂದು. ನಿನ್ನೆ ನಾನು ಹೇಗೆ ನೋಡಿದ್ದೇನೋ ಹಾಗೆಯೇ ಇದ್ದಾಳಲ್ಲಾ ಇವಳು, ಮತ್ತೆ ದೊಡ್ಡವಳಾದಳು ಎಂದರೆ ಏನರ್ಥ ಎನ್ನುವ ನನ್ನ ಹುಡುಗು ಜಿಜ್ಞಾಸೆಗೆ ಉತ್ತರ ಸಿಕ್ಕಿರಲಿಲ್ಲ. ಈಗಿನ ಥರ ಉತ್ತರ ಕೊಡುವಷ್ಟು ಬೆಳೆದಿರಲಿಲ್ಲ ಸಮಾಜ ಆಗ.

ಸೌದಿ ಅರೇಬಿಯಕ್ಕೆ ಬಂದಾಗ ಇಲ್ಲಿ ಕಾಣುವುದೆಲ್ಲಾ ಹೊಸತು ನನಗೆ. ಒಮ್ಮೆ ಒಂದು ಮನೆಯ ಮೇಲೆ ಸೌದಿ ದೇಶದ ಧ್ವಜ ಹಾರಿದ್ದನ್ನು ಕಂಡೆ. ನಮ್ಮ ದೇಶದಲ್ಲಿ ಮನೆಗಳ ಮೇಲೆ, ಅಲ್ಲಿ ಇಲ್ಲಿ ಎಂದು ಬಾವುಟ ಹಾರಿಸುವ ಹಾಗಿಲ್ಲವಲ್ಲ. ಹಾಗಾಗಿ ಕುತೂಹಲದಿಂದ ಒಬ್ಬ ಶ್ರೀಲಂಕೆಯ ವ್ಯಕ್ತಿಯ ಹತ್ತಿರ ಕೇಳಿದಾಗ ಆತ ಹೇಳಿದ ಆ ಮನೆಯ ಹುಡುಗಿ ವಯಸ್ಸಿಗೆ ಬಂದಿದ್ದಾಳೆ, ಅದನ್ನು ತಿಳಿಸುವುವ ಉದ್ದೇಶದಿಂದ ಬಾವುಟ ಹಾರಿಸುತ್ತಾರೆ ಎಂದಿದ್ದ ಕುಚೋದ್ಯಭರಿತ ಹಾಸ್ಯದ ಯಾವುದೇ ಸುಳಿವನ್ನೂ ಕೊಡದೆ. ನಮ್ಮ ದೇಶದಲ್ಲಿ ಕೆಲವರು ಮನೆಯ ಜಗುಲಿಯ ಸುತ್ತ ಒಂದು ಬೆಡ್ ಶೀಟ್ ಮರೆ ಮಾಡಿ ಅಲ್ಲಿ ಹುಡಗಿಯನ್ನು ಕೂರಿಸುವುದನ್ನು ನಾನು ನೋಡಿದ್ದೇನೆ. ಇನ್ನೂ ಒಂದು ಸಮುದಾಯದವರು ಚಪ್ಪರ ಹಾಕಿ ಹುಡುಗಿ ಸಿಂಗರಿಸಿ ಯನ್ನು ಕೂರಿಸುತ್ತಾರೆ. ಈಗ ಇದೆಲ್ಲಾ ಬದಲಾಗಿರಬೇಕು. ಇದು ಬದಲಾಗಿದೆಯೇ, ಇಲ್ಲವೇ ಎಂದು ಗಮನಿಸಲೇ ಬೇಕಾದ, ಕುತೂಹಲ ಭರಿತ ವಿಷಯವೂ ಅಲ್ಲ ಅನ್ನಿ ಇದು.

ಏನೇ ಇರಲಿ, ಮಹಿಳೆಯರಿಗೆ ಆಗುವ ಈ ಜೈವಿಕ ಬದಲಾವಣೆ ವಿವಿಧ ಸಮಾಜಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಿಸುತ್ತದೆ. ಕ್ರೈಸ್ತರ ಹಳೆ ಒಡಂಬಡಿಕೆ ಪ್ರಕಾರ ಋತು ಚಕ್ರ ಅರ್ಧ ಸಾವಿನಂತೆ. ಪವಿತ್ರ ವಾದುದನ್ನು ಅಪವಿತ್ರ ಗೊಳಿಸುತ್ತದೆ ಋತು ಚಕ್ರ ಎನ್ನುವ ಅಭಿಪ್ರಾಯದೊಂದಿಗೆ ಅದು ಒಂದು ಶಾಪ ಎನ್ನುವ ಅಭಿಪ್ರಾಯ ಹಳೆ ಒಡಂಬಡಿಕೆ ಕಾಲದ ಜನರದ್ದಾಗಿತ್ತು. ಇಥಿಯೋಪಿಯಾ ದೇಶದಲ್ಲಿ ಈ ಅವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಅದಕ್ಕೆಂದೇ ನಿರ್ಮಿಸಲಾಗಿದ್ದ ಗುಡಿಸಿಲಿಗೆ ಹೋಗಿ ವಾಸವಾಗುವ ಪದ್ಧತಿ ಇದೆಯಂತೆ. ದೇವತೆಯರನ್ನು ಆರಾಧಿಸುವ ಪ್ರಾಚೀನ ಸಮಾಜಗಳಲ್ಲಿ ಋತು ಚಕ್ರ ಒಂದು ಪವಿತ್ರ ಕ್ರಿಯೆ. ಹಾಗೂ ತಿಂಗಳಿನ ಆ ಅವಧಿಯಲ್ಲಿ ಮಹಿಳೆ ಹೆಚ್ಚು ಬಲಶಾಲೀ ಎನ್ನುವ ಅಭಿಪ್ರಾಯವೂ ಇತ್ತು. ಅಷ್ಟೇ ಅಲ್ಲ ಈ ಅವಧಿಯಲ್ಲಿ ಮಹಿಳೆ ಗದ್ದೆ ಹೊಲದಲ್ಲಿ ಓಡಾಡಿದರೆ ಬೆಳೆ ಚೆನ್ನಾಗಿ ಆಗುವ ನಂಬಿಕೆ ಇತ್ತಂತೆ.

 ಇಸ್ಲಾಮಿನಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ, ಈ ಸಮಯದಲ್ಲಿ ಮಹಿಳೆ ನಮಾಜ್ ನಿರ್ವಹಿಸುವಂತಿಲ್ಲ , ಪವಿತ್ರ ಕುರಾನ್ ಪಠಿಸುವಂತಿಲ್ಲ, ವೃತಾಚಾರಣೆ ಪಾಲಿಸುವಂತಿಲ್ಲ. ಒಮ್ಮೆ ಪ್ರವಾದಿಗಳು ತಮ್ಮ ಪತ್ನಿಗೆ ನೀರು ಕೊಡೆಂದು ಕೇಳಿದಾಗ, ನಾನು ಋತುಮತಿ ಯಾಗಿದ್ದೇನೆ ಎನ್ನುವ ಉತ್ತರ ಬಂತು. ಆಗ ಪ್ರವಾದಿಗಳು ಕೇಳಿದರು, ಅದರಲ್ಲೇನು ತಪ್ಪು? ಋತು ಚಕ್ರ ಆಗೋದು ಬಿಡೋದು ನಿನ್ನ ಕೈಯಲ್ಲಿಲ್ಲವಲ್ಲ ಎಂದು ಉತ್ತರಿಸಿದ್ದರು. ಅಂದರೆ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ದೈನಂದಿನ ಚಟುವಟಿಕೆ ಸಾಂಗವಾಗಿ ನಡೆಸಬಹುದು ಎಂದಾಗಿತ್ತು ಪ್ರವಾದಿಗಳ ಅಭಿಪ್ರಾಯ.

ಸ್ಟೀವ್ ಜಾಬ್ಸ್ ರವರ ಆಪಲ್ ಕಂಪೆನಿ ಮೊದಲ ಬಾರಿಗೆ i pad ತಯಾರಿಸಿ ಅದಕ್ಕೆ ಹೆಸರೇನೆಂದು ಇಡಬೇಕು ಎಂದು i pad ಒಳಗೊಂಡು ಒಂದೆರಡು ಹೆಸರುಗಳನ್ನು ಕೊಟ್ಟು ಜನರ ಅಭಿಪ್ರಾಯ ನೋಡಿದಾಗ ಬಹಳ ಜನ ಹೇಳಿದ್ದು i pad ಹೆಸರು ಬೇಡ, ಇದು ಸ್ತ್ರೀಯರ ಋತುಚಕ್ರವನ್ನು ನೆನಪಿಸುತ್ತದೆ, kotex pad, ‘always ‘ pad ಗಳ ತೆರನಾದ ಹೆಸರು ಬೇಡ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೂ ಆಪಲ್ ಸಂಸ್ಥೆ ಇವುಗಳನ್ನು ಕಿವಿಗೆ ಹಾಕಿ ಕೊಳ್ಳದೆ ವಿಶ್ವಕ್ಕೆ ನೀಡಿದರು i pad . ಎಲ್ಲರೊಳಗೊಂದಾಗು ಎನ್ನುವ ಮಾತಿನಲ್ಲಿ ಆಪಲ್ ಗೆ ನಂಬಿಕೆಯಿಲ್ಲ. ಸ್ವಲ್ಪ ಸರಿದು ನಿಂತು ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಕಾಲಿಡುತ್ತಾರೆ ಆಪಲ್ ಜನ. ಹಾಗಾಗಿ ಅಷ್ಟೊಂದು ಯಶಸ್ವಿ ಈ ಕಂಪೆನಿ.

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಬಂದು ಕೇಳಿದಳು, ಬೆಳಗ್ಗಿನಿಂದ ಲಾಪ್ ಟಾಪ್ ಅನ್ನ ಅಂಟಿಸಿ ಕೊಂಡು ಕೂತಿದ್ದೀರಾ (ಶುಕ್ರವಾರ ರಜೆ ಯಾದ್ದರಿಂದ), ಸಾಕು ಏಳಿ ಈಗ ಎಂದಾಗ ನಾನು, ತಡಿಯೇ ಋತು ಚಕ್ರದ ಬಗ್ಗೆ ಬರೆಯುತ್ತಿದ್ದೇನೆ ಎಂದಿದ್ದೇ ತಡ, ಓಹೋ, ನಿಮಗೂ ಶುರು ಆಗ್ಬಿಡ್ತಾ ಅದು… ಅಲ್ಲಾ ಮತ್ತೆ… ಎಂದು ಸಿಡುಕಿ ಮರೆಯಾದಳು.

live in, three some, ನಮ್ಮ ದೇಶದಲ್ಲಿ?

ಅಹಮದಾಬಾದಿನಲ್ಲಿ ಬಾಳ ಗೆಳೆಯ /ತಿ ಯರನ್ನು ಕಂಡುಕೊಳ್ಳುವ ಒಂದು ಮೇಳವಂತೆ. ಬದುಕಿನ ಸಂಜೆಯಲ್ಲಿರುವವರು ಬದುಕಿನ ಒಂದಿಷ್ಟು ಪ್ರಕಾಶವನ್ನು ತಮ್ಮ ಬಾಳಿನೊಳಕ್ಕೆ ಬಿಟ್ಟು ಕೊಳ್ಳಲು ಸದವಕಾಶ. ಇದರಲ್ಲೇನು ವಿಶೇಷ? ವಿಶೇಷ ಇದೆ. ಇವರುಗಳು ಮದುವೆಯಾಗೋಲ್ಲವಂತೆ. “ಲಿವ್ ಇನ್” ಅಂತೆ. ಅಡುಗೆ ಚೆನ್ನಾಗಿದೆಯೋ ಇಲ್ಲವೋ ಎಂದು ನೋಡುವ tastiing ಥರ. ಅಮೇರಿಕನ್ ಅಥವಾ ಪಾಶ್ಚಾತ್ಯ ಸ್ಟೈಲ್ ಅಂತೆ. ಹೌದು. ಆಧುನಿಕ ಬದುಕಿಗೆ ಬರ್ಗರ್, ಬಾಸ್ಕಿನ್ ರಾಬಿನ್ಸ್, ಜೀನ್ಸ್ ಅನಿವಾರ್ಯ ಆಗೋದಾದರೆ ಹೆಣ್ಣು ಗಂಡಿನ ನಡುವಿನ ಬಂಧವೂ, ಬದುಕುವ ರೀತಿಯೂ ಅವರ ಹಾಗೇ ಯಾಕಾಗಕೂಡದು? ಎಲ್ಲಿಯವರೆಗೆ ನಾವು ಪಾಶ್ಚಾತ್ಯರನ್ನು ಅನುಕರಿಸ ಬಹುದು ಎನ್ನುವದು ಕಠಿಣ ಪ್ರಶ್ನೆ.  

ಅಸ್ಸಾಂ, ಕರ್ನಾಟಕ, ಗುಜರಾತ ರಾಜ್ಯಗಳಿಂದ ಬಂದಿದ್ದರಂತೆ ಜನ ಈ ಮೇಳದಲ್ಲಿ ಪಾಲುಗೊಳ್ಳಲು. ಒಂದು ರೀತಿಯ ಸಾಮೂಹಿಕ ಸ್ವಯಂವರ. ಈ ಅನಿಷ್ಠಕರ ಬೆಳವಣಿಗೆಯನ್ನು ಧಾರ್ಮಿಕ ನಾಯಕರುಗಳು ವಿರೋಧಿಸುವುದು ದೇಶದ, ಸಂಸ್ಕೃತಿಯ ಹಿತದೃಷ್ಟಿಯಿಂದ ಒಳ್ಳೆಯದು. ಇಂದು ಲಿವ್ ಇನ್, ನಾಳೆ three some ಮಟ್ಟಕೆ ಇಳಿಯಬಾರದು ಸಂಬಂಧಗಳು.     

ಮೇಲಿನ ಹೊಸ ಸಂಪ್ರದಾಯವನ್ನು ವಿರೋಧಿಸಿದ ವ್ಯಕ್ತಿಯೊಬ್ಬ ಹೇಳಿದ. ಹಿರಿಯರು ಈ ರೀತಿಯ ಸಂಬಂಧಗಳನ್ನು ಇಷ್ಟ ಪದುವುದಾದರೆ ನಾಳೆ ದಿನ ಕಿರಿಯರೂ ಅದನ್ನೇ ಬಯಸಬಹುದು. ಅವರೇಕೆ ತಾನೇ ಬಯಸಬಾರದು?  ತಮ್ಮ ಅಜ್ಜ  ಅಥವಾ ಅಜ್ಜಿ ಬಯಸಿದ್ದು ತನಗೂ ಇರಲಿ ಎಂದರೆ ತಡೆಯಲು ಸಾಧ್ಯವೇ ಅಥವಾ ತಡೆಯುವುದು ತರವೇ?

“ಪಂಚ ಕನ್ಯೆ” ಯರ ವಿದಾಯ

“ಪಂಚ ಕನ್ಯೆ” ಯರ ವಿದಾಯ ಪರಂಪರೆ ಮುಕ್ತಾಯ, ನೇಪಾಳದಲ್ಲಿ.  ಪಂಚ ಕನ್ಯೆಯರು ಎಂದ ಕೂಡಲೇ ಆರತಿ, ಭಾರತಿ, ಮಂಜುಳ, ಕಲ್ಪನ, ಚಂದ್ರಕಲಾ…. ಇವರೇ ನಮ್ಮ ಕನ್ನಡ ನಾಡಿನ ಪಂಚ ಕನ್ನೆಯರೂ……ಎನ್ನೋ ಹಾಡು ನೆನಪಿಗೆ ಬಂದಿರಬೇಕು ಆಲ್ವಾ? ಬಿಟ್ಹಾಕಿ, ಇದು ಆ ಗತಕಾಲದ ನಮ್ಮೆಲ್ಲರ ಮನ ರಂಜಿಸಿದ ಕನ್ನೆಯರ ಕಥೆಯಲ್ಲ, ನಮ್ಮ ದೇಶದ ಉತ್ತರದ ಗಡಿಯಾಚೆಗಿನ ನೇಪಾಳದ ಕನ್ನೆಯರ ವ್ಯಥೆಯ ಕಥೆಯಿದು.

ನೇಪಾಳದ ರಾಷ್ಟ್ರ ನಾಯಕ ಹೊರದೇಶದ ಪ್ರವಾಸ ಹೊರಟಾಗ ಅವರನ್ನು ಬೀಳ್ಕೊಡಲು ಐದು ಕನ್ಯೆಯರನ್ನು ಸಿದ್ಧ ಪಡಿಸಲಾಗುತ್ತಿತ್ತಂತೆ. ದುರ್ಗ, ಸರಸ್ವತಿ, ಲಕ್ಷ್ಮಿ, ರಾಧ, ಅನ್ನಪೂರ್ಣ ಎನ್ನುವ ಯಶಸ್ಸನ್ನು ತರುವ ಈ ದೇವತೆಗಳನ್ನು ಪ್ರತಿನಿಧಿಸುವ ಪಂಚ ಕನ್ಯೆಯರು ಪ್ರವಾಸ ಹೋಗುವ ನಾಯಕನಿಗೆ ಶುಭವಾಗಲು ಮತ್ತು ಸಂಪತ್ತು ಸಿಗಲೆಂದು ಹಾರೈಸಿ ಈ ವ್ಯವಸ್ಥೆ ಮಾಡುತ್ತಿದ್ದರಂತೆ. ಶಾಲೆಗೆ ಹೋಗುವ ಈ ಹೆಣ್ಣು ಮಕ್ಕಳು ಸುಡು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ನಿಂತು ಅವರಿಗೆ ಶುಭ ಕೋರುವುದನ್ನು ಕಂಡು ಮರುಗಿದ ಅಧ್ಯಕ್ಷರು ಈ ಪರಂಪರೆಗೆ ಮಂಗಳ ಹಾಡಲು ತೀರ್ಮಾನಿಸಿದರಂತೆ.

ಶತಮಾನಗಳಿಂದ ನಡೆದು ಕೊಂಡು ಬರುತ್ತಿದ್ದ ಈ five virgin farewell ಸಮಾರೋಹದ ಪರಂಪರೆಗೆ ನೇಪಾಳದ ಅಧ್ಯಕ್ಷರು ಕೊನೆಗೂ good bye, good riddance ಹೇಳಿ ಸುಡು ಬಿಸಿಲಿನ ಬೇಗೆಯಿಂದ ಕನ್ನೆಯರ ಬಿಡುಗಡೆಗೆ ನಾಂದಿ ಹಾಡಿದರು.

ಅರ್ಧ ಘಂಟೆ, ಅರೆ ಬೆತ್ತಲೆ

ಗ್ರಂಥಾಲಯ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶತಮಾನಗಳಿಂದ ಸುಣ್ಣ ಬಣ್ಣ ಕಾಣದೆ ಶಿಥಿಲ ಗೊಂಡ, ಒಳ ಹೋದ ಕೂಡಲೇ ಗ್ರಂಥಪಾಲಕ ಎನ್ನುವ ನಿಸ್ತೇಜ, ಸುಸ್ತಾದ, ಹಗಲುಗನಸು ಕಾಣುತ್ತಾ ಕೂತ ವ್ಯಕ್ತಿಯ ದರ್ಶನ ಮತ್ತು ಪುಸ್ತಕಗಳ ಕವಟು ವಾಸನೆ. musty smell. ಯಾವುದೇ ರೀತಿಯಿಂದಲೂ inviting ಅಲ್ಲದ ಒಂದು ತಾಣ, ಗ್ರಂಥಾಲಯ. ಆದರೆ ಎಲ್ಲಾ ಗ್ರಂಥಾಲಯಗಳೂ ಹಾಗೆ ಆಗ ಬೇಕಿಂದಿಲ್ಲವಲ್ಲ?  ಮನುಷ್ಯ ಕ್ರಿಯೇಟಿವ್ ಜೀವಿ. ಕಸದಲ್ಲೂ ರಸ ತೆಗೆಯುವ ಸೃಜನಶೀಲ. ಹೀಗಿರುವಾಗ ಗ್ರಂಥಾಲಯ ಏಕೆ ತನ್ನ creativity ಪರಿಧಿಯಿಂದ ಹೊರಗುಳಿಯಬೇಕು ? ಕಸಿವಿಸಿಯಾಗುವ creativity ಆದರೇನಂತೆ, ಒಂದರ್ಧ ಘಂಟೆಯಾದರೂ ಕಸಿವಿಸಿ ಯನ್ನು ತಡೆಹಿಡಿಯೋಕೆ ಆಗೋಲ್ವೆ? ಅದೂ ವಾರದ ಒಂದೇ ದಿನ ರೀ, ಬುಧವಾರ, ಅದೂ ಅರ್ಧ ಘಂಟೆ ಮಾತ್ರ, ಅದೂ ಜನಜಂಗುಳಿ ತೂಕಡಿಸಲು ಇಷ್ಟಪಡುವ ಮಧ್ಯಾಹ್ನದ ಸಮಯ.  

ಇಂಗ್ಲೆಂಡಿನ ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳು ಒಂದು “ಬ್ರೇಕ್ ಫಾಸ್ಟ್ ಕ್ಲಬ್” ಅನ್ನೋ ಒಂದು ಗುಂಪನ್ನು ಕಟ್ಟಿ ಕೊಂಡಿದ್ದು ಇದಕ್ಕೆ ಸೇರಿದವರು ಬುಧವಾರದ ಮಧ್ಯಾಹ್ನದ ನಂತರ ಅರ್ಧ ಘಂಟೆಗಳ ಕಾಲ ಸಲ್ಮಾನ್ ಖಾನ್ ರಾಗಲು ಉತ್ಸುಕರಾಗುತ್ತಾರೆ. ಅರೆ ನಗ್ನ ಎಂದ ಕೂಡಲೇ ಈ ನಟನ ಹೆಸರೇ ಅಲ್ಲವೇ ಎಲ್ಲರಿಗೂ ಹೊಳೆಯೋದು; (ನನ್ನ ತಂಗಿಯ ಎರಡೂವರೆ ವರ್ಷದ ಪೋರ ‘ಅಹ್ಮದ್’ ತನ್ನ ಅಂಗಿ ಬಿಚ್ಚಿ ಸಲ್ಮಾನ್ ಖಾನ್ ಎಂದು ಬೀಗಿದ).

ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳ ಈ ತಿಕ್ಕಲುತನ ಸ್ವಲ್ಪ ಅತಿಯಾಗಿ ತೋರಿತು ಆಡಳಿತ ಮಂಡಳಿಗೆ. ಬೀದಿಯಲ್ಲಿ, ಬಸ್ಸುಗಳಲ್ಲಿ, ಕೆಫೆ ಗಳಲ್ಲಿ ಎಲ್ಲೆಂದರಲ್ಲಿ ನಗ್ನತೆ ನೋಡಿ, ನೋಡಿ ಬೇಸತ್ತಿದ್ದ ಅವರುಗಳಿಗೆ ಗ್ರಂಥಾಲಯವೂ ಪೆಡಂಭೂತವಾಗಿ ಕಾಡಿತು. ವಿದ್ಯಾರ್ಥಿಗಳಿಗೆ (ನಗ್ನಾರ್ಥಿ?) ಒಂದು ಸಂದೇಶ ಕಳಿಸಿದರು. ‘ಈ ಮೇಲ್’ ಸಂದೇಶ. ಕೂಡಲೇ ಮಾನವಾಗಿ ಬಟ್ಟೆ ತೊಟ್ಟುಕೊಂಡು ಬರುವುದು ಕ್ಷೇಮ, ನಿಮ್ಮ ಈ ನಗ್ನತೆ a piece of harmless fun ಆಗಿ ಕಂಡರೂ ಗ್ರಂಥಾಲಯಕ್ಕೆ ಬರುವ ಪುಸ್ತಕ ಪ್ರಿಯರಿಗೆ ನಿಮ್ಮೀ ನಡತೆ distraction ಆಗಿ ತೋರುತ್ತಿರೋದರಿಂದ ಕೂಡಲೇ ಈ ನಡವಳಿಕೆಗೆ ಪೂರ್ಣ ವಿರಾಮ ಹಾಕಬೇಕು ಎಂದು. ಈ ಧಮಕಿಗೆ ಕೆರಳಿ ವಿದ್ಯಾರ್ಥಿಗಳು ಪುಣ್ಯಕ್ಕೆ ಅರೆ ನಗ್ನರಲ್ಲ, ಗ್ರಹಚಾರಕ್ಕೆ ಪೂರ್ಣ ನಗ್ನಾರದಾರೋ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.

ಈ ಮೇಲೆ ಹೇಳಿದ ಗ್ರಂಥಾಲಯಕ್ಕೆ ಹೊರ ದೇಶಗಳ ನಾಯಕರೂ ಭೆಟ್ಟಿ ಕೊಡುತ್ತಾರಂತೆ. ಬಹುಶಃ ಇಟಲಿ ದೇಶದ ಪ್ರಧಾನಿ ಬೆರ್ಲಸ್ಕೊನಿ ಯಂಥ ನಾಯಕರಿಗೆ ವಿದ್ಯಾರ್ಥಿಗಳ ಈ ನಡತೆ ಕಸಿವಿಸಿ ತರದೇ ಕಚಗುಳಿ ತರ ಬಹುದೇನೋ?  

ಸರಿ, ಈ creativity ಗೆ ಸಿಕ್ಕ ಸ್ಫೂರ್ತಿಯಾದರೂ ಎಲ್ಲಿಂದ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರೋ? ಮೇಲಿನ ಚಿತ್ರದಲ್ಲಿ ಎಡ ಮೂಲೆಯಲ್ಲಿ ಪುಸ್ತಕದ ಶೆಲ್ಫ್ ಗಳನ್ನು ಕಾಯಲೆಂದು ನಿಲ್ಲಿಸಿರುವ ಪ್ರತಿಮೆ ಆಗಿರಲಿಕ್ಕಿಲ್ಲ ತಾನೇ ಸ್ಫೂರ್ತಿಯ ಉಗಮ?  

ಚಿತ್ರ ಕೃಪೆ: http://thequirkyglobe.blogspot.com/2011/06/wednesday-is-half-naked-day-at-library.html

ನಡೆದಾಡುವ ನೈದಿಲೆ…ಓಡಾಡುವ porn ಮಸಾಲ

cheergirl ಗಳು ನಡೆದಾಡುವ ನೈದಿಲೆ ಅಲ್ಲ, ಓಡಾಡುವ porn ಗಳು. ಈ ಮಾತನ್ನು ಯಾವುದೇ ಸಂಪ್ರದಾಯವಾದಿ ಹೇಳಿದ್ದಲ್ಲ. ಕ್ರಿಕೆಟ್ ಆಟದಲ್ಲಿ ಸಿಕ್ಸರ್ ಗಳು ಸಿಡಿದಾಗ, ವಿಕೆಟ್ ಪತನಗೊಂಡಾಗ ಮಾದಕ ನೃತ್ಯ ಮಾಡಿ ಜನರನ್ನು ಆಟಗಾರರನ್ನು ಹುರಿದುಂಬಿಸಲು ನೇಮಕಗೊಂಡ, ಚಿಯರ್ ಗರ್ಲ್ ವೃತ್ತಿಯನ್ನು ಆರಿಸಿಕೊಂಡ  ಹೆಣ್ಣು ಮಗಳ ಅಳಲು, ದುಮ್ಮಾನ ತುಂಬಿದ ಮಾತುಗಳು. ಕ್ರಿಕೆಟ್ ಮ್ಯಾಚ್ ಹೆಸರಿನಲ್ಲಿ ಜೊಳ್ಳು ಸುರಿಸುತ್ತಾ ಟೀವೀ ಪರದೆ ಮುಂದೆ ಕೂತು ಈ ಹುಡುಗಿಯರ ಹಾವಭಾವವನ್ನು ಆಸ್ವಾದಿಸುವ ನಾವು ಎಂದಾದರೂ ಈ ಹೆಣ್ಣುಮಕ್ಕಳ ಅರೆನಗ್ನ ಶೋಷಣೆಯ ಬಗ್ಗೆ ಆಲೋಚಿಸಿದ್ದೇವೆಯೇ? ಅವರುಗಳ ಹಾವ ಭಾವ, curve ಗಳನ್ನು ನೋಡುತ್ತಾ ಮೈಮರೆಯುವ ಉನ್ಮತ್ತ ಮನಸ್ಸು ಈ ಚಿಂತನೆಗೆ ತನ್ನ ಮೆದುಳನ್ನು ತಯಾರು ಮಾಡೀತೇ?  we are like walking porn ಎಂದು ಹೇಳುವ ಈ ಹುಡುಗಿಯ ಮಾತುಗಳು, ನಮ್ಮಲ್ಲಿ ಪ್ರತಿಭಟಿಸುವ ದನಿಯನ್ನು ಹುಟ್ಟು ಹಾಕೀತೇ?

೨೨ ವರ್ಷದ Gabriella Pasqualotto ಹೇಳುತ್ತಾಳೆ, it’s true. At parties, once people are drunk, they get really touchy-freely and misbehave, assuming that we’re easy girls,”- ಹೇಗಿದೆ ನೋಡಿ ಮೇಲಿನ ಆಕೆಯ ಮಾತುಗಳು. ಇಲ್ಲಿ ಒಂದು ಮಾತನ್ನು ನೆನಪಿಡಬೇಕು. ಯಾವಾಗ ಹೆಣ್ಣು ಕನಿಷ್ಠ ಉಡುಗೆ ತೊಡುತ್ತಾಳೋ, ಪ್ರಚೋದಕ ರೀತಿಯಲ್ಲಿ ಆಕೆಯ ಮೈ ಪ್ರದರ್ಶನ ನಡೆಯುವುದೋ, ಹಾವಭಾವ ಪ್ರದರ್ಶನ ಆಗುವುದೋ ಆದರೆ ತಪ್ಪು ಸನ್ನೆಗೆ ಎಡೆಮಾಡಿಕೊಟ್ಟು ಅವಳನ್ನು ಜನ ಸಾರ್ವಜನಿಕ ಉದ್ಯಾನ ಎಂದು ಭಾವಿಸಲು ಆರಂಭಿಸುತ್ತಾರೆ. easy girl ಎಂದು ಹಿಂಬಾಲಿಸುತ್ತಾರೆ. ಹಾಗಾದರೆ ಉಡುಗೆ ತೊಡುಗೆ ಯ ಶಿಷ್ಟಾಚಾರ ಹೆಣ್ಣಿಗೆ ಮಾತ್ರ ಸೀಮಿತವೋ? ಗಂಡು ಹೇಗೆ ಬೇಕಾದರೂ ಹಾಗೆ ವರ್ತಿಸಬಹುದೋ? ಅಲ್ಲ, ಗಂಡೂ ಸಹ ಮಾನವಾಗಿ ತೊಡಲು ಕಲಿಯಬೇಕು. ಆದರೆ ನಿಸರ್ಗದತ್ತವಾಗಿ ಗಂಡು ಹಚ್ಚು visual ಮತ್ತು ಹೆಣ್ಣು more practical ಆದ ಕಾರಣ ಹೆಣ್ಣು ಸ್ವಲ್ಪ ಜಾಗರೂಕಳಾಗಿರುವುದು ಕ್ಷೇಮ. 

ಹೆಣ್ಣು ಮಾನವಾಗಿ ಉಡಬೇಕು ಎಂದು ಹಿರಿಯರು ಹೇಳುತ್ತಿದ್ದರು. ಸಂಜೆಯ ಹೊತ್ತು ಮನೆಯ ಜಗುಲಿಯ ಮೇಲೋ, ಮೆಟ್ಟಿಲುಗಳ ಮೇಲೋ ಕೂತ ಹೆಣ್ಣು ಮಗಳಿಗೆ ತಾಯಿ ಗದರಿಸುವುದಿದೆ, ಕಾಲಿನ ಮೇಲೆ ಲಂಗ ಎಳೆದು ಕೋ ಎಂದು. ದಾರಿ ಹೋಕರಿಗೆ ತನ್ನ ಮಗಳ ಹಾವ ಭಾವ ಯಾವುದೇ ರೀತಿಯ ಕೆಟ್ಟ ನೋಟ ಕ್ಕೆ ಎಡೆ ಮಾಡಿ ಕೊಡಬಾರದು ಎಂದು ತಾಯಿಯಾದವಳ ಕಾಳಜಿ, ಮುತುವರ್ಜಿ. ಈ ಮುತವರ್ಜಿ ಆ ತಾಯಿಗೆ ತನ್ನ ಸಂಸ್ಕಾರ ಕಲಿಸಿರುತ್ತದೆ.    

ಮುಂದುವರೆಯುತ್ತಾ “ಗೇಬ್ರಿಯೆಲಾ” ಹೀಗೆ ಟ್ವೀಟಿಸುತ್ತಾಳೆ, people treat us like ‘pieces of meat’- ಇಲ್ಲದೆ ಏನಂತೆ, ಹೌದು ಚರ್ಮದ ಪ್ರದರ್ಶನ ಹೆಚ್ಚಾದಾಗ ಮೈ ಮನಸ್ಸು ಮಾಂಸ ದ ತುಂಡಿಗಾಗಿ ಹಾತೊರೆಯುವುದು ಸಹಜವೇ.

To the citizens, we are practically like walking porn!…. it is complete voyeurism… the men see your face, then your boobs, your butt, and then your boobs again..ಭಾಷೆಯ ಮರ್ಯಾದೆಯನ್ನು ಬದಿಗಿಟ್ಟು ಬರೆಯಬೇಕಾದೀತೆನ್ನುವ ಆತಂಕದಿಂದ  ಮೇಲಿನದನ್ನು ಭಾಷಾಂತರಿಸಿಲ್ಲ. ತಲೆಯ ಮೇಲೆ ಮೊಳೆ ಹೊಡೆವ ರೀತಿಯಲ್ಲಿಲ್ಲವೇ ಮೇಲಿನ ಮಾತುಗಳು?

ಚೀರ್ ಗರ್ಲ್ಸ್ ಇಲ್ಲದೆಯೂ ಕ್ರಿಕೆಟ್ ರಂಜಕ, ಮೋಹಕ. ಇವರಿಲ್ಲದೆಯೂ ಕ್ರಿಕೆಟ್ ಆಟವನ್ನು ಆಸ್ವಾದಿಸ ಬಹುದು. ಒಂದೊಮ್ಮೆ ಆಸ್ವಾದಿಸಿಯೂ ಇದ್ದೇವೆ. ಎಷ್ಟೋ ಜನ ಈ ಚಿಯರ್ ಗರ್ಲ್ ಗಳ ಕಾರಣ ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಹುಟ್ಟಿಸಿ ಕೊಂಡಿದ್ದಾರೆಂದೂ ಕೇಳಿದ್ದೇನೆ.  

ಆದರೆ ದಿನಗಳೆದಂತೆ, ಕಾಲ ಚಕ್ರ ಓಡುತ್ತಿರುವಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಿವೆ ಒಳ್ಳೆಯದರಿಂದ ಕೆಡುಕಿನ ಕಡೆಗೆ. ಇಂದು ನಮ್ಮ ಹೆಣ್ಣು ಮಕ್ಕಳು ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ “ relationship: its complicated” ಎಂದು ಬರೆಯಲು ಹಿಂದೆ ಮುಂದೆ ನೋಡುತ್ತಿಲ್ಲ. ಈಗ ಎಲ್ಲವೂ ‘ಕೂಲ್’.

ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು

ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು – ಕ್ರೈಸ್ತ ಧರ್ಮದ “ಹಳೇ ಒಡಂಬಡಿಕೆ” ಯ ಈ ಮಾತುಗಳು ಇಸ್ಲಾಮಿನ ಶರಿಯಾ ಕಾನೂನಿನಲ್ಲೂ ಶಿಫಾರಸು ಮಾಡಲಾಗಿದೆ. ಒಂದು ರೀತಿಯ ಸೇಡಿಗೆ ಸೇಡು. ಆದರೆ ಇದನ್ನು ತಪ್ಪು ಎನ್ನುವವರೂ ಕೆಲವೊಮ್ಮೆ ಘಟನೆಗಳ, ಅಪರಾಧಗಳ ಕ್ರೌರ್ಯದ ಗಂಭೀರತೆಯನ್ನು ಗಮನದಲ್ಲಿಟ್ಟು ಕೊಂಡು ಈ ರೀತಿಯ retributory justice ವಿಧಾನ ಸರಿ ಎಂದು ವಾದಿಸುವರು.   

ಕಣ್ಣಿಗೆ ಕಣ್ಣು ಬೇಕು ಎನ್ನುವವರು ಒಂದು ಕಡೆಯಾದರೆ ಮಾನವೀಯ ದೃಷ್ಟಿಯಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಬೇಕು ಎನ್ನುವವರು ಮತ್ತೊಂದು ಕಡೆ. ಪ್ರತೀಕಾರ ಮಾನವ ಸಹಜ ಗುಣ. ಪುಟ್ಟ ಮಕ್ಕಳ ಪ್ರತಿಕ್ರಿಯೆಗಳೂ ಈ  ಮಾನವ ಸಹಜ ಗುಣಕ್ಕೆ ಅನುಗುಣವಾಗಿಯೇ ಇರುವುದನ್ನು ಗಮನಿಸಿದ್ದೇವೆ. ಕ್ಷಮಿಸುವವನು ಉದಾರಿ, ಆ ಗುಣ ಎಲ್ಲರಿಗೂ ಬರಬೇಕೆಂದಿಲ್ಲ. ಸಮಾಜ ಶಿಕ್ಷೆಯನ್ನು ಪ್ರತೀಕಾರ ಎನ್ನುವ ದೃಷ್ಟಿಯಿಂದ ನೋಡಬಾರದು, ಹಾಗೆ ನೋಡಿದಾಗ ಒಸಮಾ ಬಿನ್ ಲಾದೆನ್ ನ ವಧೆಯೂ ಸಮ್ಮತವೆನ್ನಿಸದು. ಒಸಾಮಾ ನ ವಧೆ ಸರಿ ಎಂದು ನಾಗರೀಕ ಸಮಾಜ ಖಂಡಿತವಾಗಿ ಒಪ್ಪುತ್ತದೆ. ಕೆಲವರು ಅವನನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕಿತ್ತು ಎನ್ನುವವರೂ ಇದ್ದಾರೆ. ಆದರೆ ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಲು ಮಾಡಿ ಕೊಳ್ಳ ಬೇಕಾದ ಸಿದ್ಧತೆಗಳನ್ನು ನೋಡಿದಾಗ, ಅದರ ಎಡರು ತೊಡರು ಗಳನ್ನು, ಗಮನಕ್ಕೆ ತೆಗೆದು ಕೊಂಡಾಗ targeted elemination ಹೆಚ್ಚು ಪ್ರಾಯೋಗಿಕ ಎಂದು ತೋರುತ್ತದೆ.  

ಪ್ರತಿಭಾವಂತಳಾದ ಇಂಜಿನಿಯರಿಂಗ್ ಪದವೀಧರೆಯಾದ ಇರಾನಿನ ಯುವತಿ ಅಮೀನ ಬೆಹ್ರಾಮಿಯ ಜೀವನ ಸಂಪೂರ್ಣವಾಗಿ ನಾಶವಾಗಿ ಹೋಯಿತು, ತನ್ನನ್ನು ಬಯಸಿದ ಮಾಜಿದ್ ಮೋವಾಹೆದಿ ಎನ್ನುವ ನರ ರಾಕ್ಷಸನಿಂದ. ಆಮಿನಾಳನ್ನು ವಿವಾಹವಾಗಲು ಬಯಸಿದ್ದ ಮಾಜಿದ್ ಈಕೆಯ ಅಸಮ್ಮತಿಯಿಂದ ಕ್ರುದ್ಧನಾದ. ನನ್ನನ್ನು ಮದುವೆಯಾಗದಿದ್ದರೆ ಕೊಲ್ಲುತ್ತೇನೆ ಎಂದು ಮೊದಲಿಗೆ ಬೆದರಿಸಿದ್ದ ಇವನು ಮನಸ್ಸು ಬದಲಿಸಿ ನನಗೆ ಸಿಗದ ಇವಳು ಬೇರಾರಿಗೂ ಸಿಗಕೂಡದು ಎಂದು ತೀರ್ಮಾನಿಸಿದ . ಒಂದು ಬಕೆಟ್ ತುಂಬಾ ಆಸಿಡ್ ಅನ್ನು ಅಮೀನಾಳ ಮುಖದ ಮೇಲೆ ಎರಚಿದ. ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡ ಈಕೆ ಭಯ ಹುಟ್ಟಿಸುವಂಥ ಕುರೂಪಿಯಾದಳು.  ಇರಾನಿನ ನ್ಯಾಯಾಲಯ ದಂಡವನ್ನೂ ಸೆರೆವಾಸದ ಶಿಕ್ಷೆಯನ್ನೂ ವಿಧಿಸಿತು ಮಾಜಿದ್ ನಿಗೆ. ಈ ತೀರ್ಪಿಗೆ ಅಮೀನ ಸಮ್ಮತಿಸಲಿಲ್ಲ. ನನ್ನ ನೋವನ್ನು  ಸ್ವತಃ ತನ್ನ ಕಣ್ಣು ಗಳನ್ನು ಕಳೆದು ಕೊಳ್ಳುವ ಮೂಲಕ ಮಾತ್ರ ಮಾಜಿದ್ ಅರಿಯಬಲ್ಲ ಎಂದು ವಾದಿಸಿದಳು. ಇದೇ ೧೪ ಮೇ, ೨೦೧೧ ರಂದು ಆಕೆಗೆ ಸಿಕ್ಕಿತು ಬಯಸಿದ ನ್ಯಾಯ. ಹತ್ತಿರದ ಆಸ್ಪತ್ರೆಗೆ ಮಾಜಿದ್ ನನ್ನು ದಾಖಲಿಸಿ ಅವನಿಗೆ ಅರಿವಳಿಕೆ ಕೊಟ್ಟು ಅವನ ಕಣ್ಣುಗಳಲ್ಲಿ ಆಸಿಡ್ ಪ್ರೋಕ್ಷಣೆ ಮಾಡಲು ತೀರ್ಮಾನ ವಾಯಿತು. ಈಗ ಆಗಮನವಾಯಿತು “ಕರುಣಾನಿಧಿ” ಜನರ ದಂಡು. amnesty international ನೇತೃತ್ವದ ಈ ದಂಡು ಹೇಳಿದ್ದು ಈ ರೀತಿ ನ್ಯಾಯ “ ಕಿರುಕುಳಕ್ಕೆ ಸಮಾನ” ಎಂದು. ಕ್ರೂರ ಮಾಜಿದ್ ಎಸಗಿದ ಕೃತ್ಯಕ್ಕೆ ಯಾವ ರೀತಿಯ ವಿಶ್ಲೇಷಣೆ ಕೊಡುತ್ತದೋ ಅಮ್ನೆಸ್ಟಿ. ಪಾಶ್ಚಾತ್ಯರ ಯಾವುದೇ ಮಾತಿಗೂ ಒಲ್ಲೆ ಎಂದು ಹೇಳಿ ಸುಖ ಅನುಭವಿಸುವ ಇರಾನ್ amnesty ಯ ಮಾತಿಗೆ ತಲೆ ಬಾಗಿತು. ಆದರೆ ಅಮೀನಾ ಮಾತ್ರ ತನ್ನ ಹೊರಾಟವನ್ನು ಖಂಡಿತಾ ಮುಂದುವರೆಸುವಳು. ಕಣ್ಣಿಗೆ ಕಣ್ಣು, ಈ ನ್ಯಾಯದಿಂದ ಮಾತ್ರ ಈಕೆ ತೃಪ್ತಳಾಗುವಳು. ಈ ತೆರನಾದ ನ್ಯಾಯದಿಂದ ಭಾವೀ ರಾಕ್ಷಸರು ಪಾಠ ಕಲಿಯಬೇಕು.          

ಗಾಂಧೀಜಿ ಪ್ರಕಾರ ಕಣ್ಣಿಗೆ ಕಣ್ಣು ಎನ್ನುವ ಪ್ರತೀಕಾರದ ಶಿಕ್ಷೆಯಿಂದ ಪ್ರಪಂಚವೇ ಕುರುಡಾಗಬಹುದು. ಇಡೀ ಪ್ರಪಂಚವೇ ಅನೈತಿಕತೆ, ಅನ್ಯಾಯ, ಹಿಂಸೆ ಎಸಗುವ ಕಣ್ಣಾಗುವುದಾದರೆ ಅದು ಕುರುಡಾಗಿರುವುದೇ ಹೆಚ್ಚು ಲೇಸು. ಇಲ್ಲದಿದ್ದರೆ ಪ್ರಪಂಚವೇ ಕುರೂಪಗೊಳ್ಳುವ ಸಾಧ್ಯತೆ ಹೆಚ್ಚು. ಗಾಂಧೀಜಿಯ ಈ ಮಾತಿಗೆ ನಾವು ಸಮ್ಮತಿಸಿದರೆ ಅವರನ್ನು ವಧಿಸಿದ ದ್ರೋಹಿಯನ್ನು ದೇಶ ಸುಮ್ಮನೆ ಬಿಡಬೇಕಿತ್ತು. ಯೋಚಿಸಿ ನೋಡಿ, ಮೈ ಝುಮ್ಮೆನ್ನುವುದಿಲ್ಲವೇ?  ಕೆಲವೊಂದು ಮಾತುಗಳು ಎಲ್ಲಾ ಕಾಲಕ್ಕೂ ಉದ್ಧರಿಸಲು ಉಪಯೋಗಕ್ಕೆ ಬರಬಹುದು, ದಯೆಯ ಆ ಮಾತುಗಳನ್ನು ಭಾಷಣಗಳಲ್ಲೂ, ಬರಹಗಳಲ್ಲೂ ಉಪಯೋಗಿಸಲು ಸುಂದರವಾಗಬಹುದು. quote ರೂಪದಲ್ಲಿ ಆಕರ್ಷಕ ಈ ಹೇಳಿಕೆಗಳು. ಆದರೆ ಸಮಾಜದ ಸ್ವಾಸ್ಥ್ಯವನ್ನೂ, ಹಿತವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡಾಗ ಮಾಜಿದ್ ನಂಥ ದುರುಳರ ಕಣ್ಣುಗಳನ್ನು ಕೀಳಲೇಬೇಕು. ಮುಗ್ಧ, ಅಮಾಯಕ ಹೆಣ್ಣಿನ ಕಣ್ಣುಗಳನ್ನು ಕಿತ್ತ ಅವನ ಕಣ್ಣುಗಳು ತನ್ನ ಕ್ರೌರ್ಯವನ್ನು ಕಂಡು ಹಿಗ್ಗಬಾರದು. ಅಂತಾರಾಷ್ಟ್ರೀಯ ಒತ್ತಡಕ್ಕೆ ಇರಾನ್ ತಲೆಬಾಗದೆ ಆಕೆ ಬಯಸಿದ ನ್ಯಾಯವವನ್ನು ಅವಳಿಗೆ ದಯಪಾಲಿಸಲೇಬೇಕು.  

ಹಿಂಸೆಗೆ ಪ್ರತಿ ಹಿಂಸೆಯಾಗಿ ಅಸ್ತ್ರ ದ ಪ್ರಯೋಗ ನಡೆಯದಿದ್ದರೆ ಪ್ರಪಂಚ ಸುರಕ್ಷಿತ ಸ್ಥಳವಲ್ಲ. ಸ್ಪೇನ್ ದೇಶದ ದ್ವೀಪವೊಂದರ ಪ್ರವಾಸದಲ್ಲಿದ್ದ ಇಂಗ್ಲೆಂಡಿನ ಮಧ್ಯ ವಯಸ್ಕ ಮಹಿಳೆಯೊಬ್ಬರನ್ನು ಯಾವುದೇ ಕಾರಣವಿಲ್ಲದೆ ಓರ್ವ ಯುವಕ ೧೫ ಬಾರಿ ಚಾಕುವಿನಿಂದ ಇರಿದದ್ದು ಸಾಲದು ಎಂದು ಆಕೆಯ ರುಂಡಚ್ಛೇದ ಮಾಡಿ ರಸ್ತೆ ಬದಿಗೆ ಎಸೆದ. ಈ ಮಹಿಳೆ ಪ್ರವಾಸದ ವೇಳೆ ಅಲ್ಲಿನ ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದಳಂತೆ. ಇಂಥ ಹಿಂಸ್ರ ಪಶುಗಳನ್ನು ಸಮಾಜ ಸಹಿಸಿದಾಗ, ಅವರಿಗೆ ತಕ್ಕ ಶಿಕ್ಷೆ ಕೊಡುವಲ್ಲಿ ವಿಫಲವಾದಾಗ ಇಂಥ ಕರುಳು ಹಿಂಡುವ ಘಟನೆಗಳು ಎಲ್ಲೆಲ್ಲೂ ಕಾಣಲು ಸಿಗುತ್ತವೆ. ಕೊಲೆಗಾರ ಒಂದೆರಡು ವರ್ಷ ಜೇಲಿನಲ್ಲಿ ಕಳೆದು ಸಮಾಜಕ್ಕೆ ಮರಳಿ ಬರುತ್ತಾನೆ ತನ್ನ ಮಿಕವನ್ನು ಅರಸುತ್ತಾ.

ಸಮಸ್ಯೆಯ ಜಾಡನ್ನು ಹಿಡಿದು…..

Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution ಪುಸ್ತಕದಲ್ಲಿ ಫ್ರೆಂಚ್ ಕ್ರಾಂತಿ ವಾಸ್ತವ ಕ್ರಾಂತಿಗಿಂತ ಬಹು ಮೊದಲೇ ಶುರುವಾಗಿತ್ತು ಎಂದು ವಾದವನ್ನು ಮಂಡಿಸಿದ. ೧೮ ನೇ ಶತಮಾನದ ಕೊನೆಯಭಾಗದಲ್ಲಿ ನಡೆದ ಫ್ರೆಂಚ್ ಕ್ರಾಂತಿಗೆ ದಶಕಗಳ ಮೊದಲೇ ಭೂಗತ ಕಂಪನಗಳು ಶುರುವಾಗಿತ್ತು ಹಾಗೂ ಅಸಮಾನತೆ ಮತ್ತು ಅನ್ಯಾಯದ ಕಾರಣ ನಡೆದ ಈ ಕ್ರಾಂತಿಯ ಸುಳಿವನ್ನು ಜನ ಮೊದಲೇ ಅರಿತು ಜಾಣತನದಿಂದ ಪ್ರತಿಕ್ರಯಿಸಿದ್ದರೆ “ಭೀತಿಯ ಆಳ್ವಿಕೆ” (Reign of Terror) ಯನ್ನು ತಡೆಗಟ್ಟಬಹುದಿತ್ತು ಎಂದೂ ಹೇಳಿದ.

ಮೇಲಿನ ಹೇಳಿಕೆಯಲ್ಲಿ ನಮಗೆ ನಮ್ಮ ಮಧ್ಯೆಯೇ ಸಂಭವಿಸುತ್ತಿರುವ ಘಟನೆಗಳೊಂದಿಗೆ  ಸಾಮ್ಯತೆ ಕಾಣುತ್ತಿದೆಯೇ? ನಿನ್ನೆ ನಡೆದ ಬರ್ಬರ ಸಾಮೂಹಿಕ ಹತ್ಯೆಗೆ ಕಾರಣರಾದ ಮಾವೋ ಗಳು ನಮಗೆ ಈ ಸಾಮ್ಯತೆಯನ್ನು ಒದಗಿಸುತ್ತಿಲ್ಲವೇ? ಕಾಡಿನಿಂದ ಆರಂಭವಾದ ಸಾವಿನ ಛಾಯೆ ಈಗ ನಗರಗಳನ್ನೂ ಆವರಿಸತೊಡಗಿದೆ. ಎಲ್ಲರಿಗೂ ತಿಳಿದಂತೆ ಈ ನಕ್ಸಲ್, ಮಾವೋ ಮುಂತಾದ ಚಳುವಳಿಗಳು ಬಹು ಹಿಂದೆಯೇ ಶುರುವಾಗಿದ್ದವು. ಆದರೆ ಪ್ರಪಂಚದ ಎಲ್ಲಾ ಸರಕಾರಗಳಂತೆ ನಮ್ಮ ಸರಕಾರವೂ ಕಣ್ಣು ಬಿಟ್ಟಿದ್ದು ಹಿಂಸೆ ಕೈ ಮೀರಿದಾಗ, ರಕ್ತ ದ ಹೊಳೆ ಹರಿಯಲು ತೊಡಗಿದಾಗ. ಝರಿಯ ರೀತಿ ಆರಂಭವಾದ ಈ ಚಳುವಳಿ ರಕ್ತದ ಕಾಲುವೆಯನ್ನು ಹರಿಬಿಟ್ಟಾಗ ನಾವು ಕಂಗಾಲು. ನಿಜವಾಗಿ ಹೇಳಬೇಕೆಂದರೆ ಈ ಚಳುವಳಿಯನ್ನು ಹತ್ತಿಕ್ಕಲು ಬೇಕಾದ ಯಾವ ಪರಿಹಾರವೂ ನಮ್ಮಲ್ಲಿಲ್ಲ. ಇದ್ದಿದ್ದರೆ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರು ದಂತೆವಾಡ ದಲ್ಲಿ ಜೀವ ತೆತ್ತಾಗಲೇ ಹೊರಬರುತ್ತಿತ್ತು ಪರಿಹಾರದ ಅಸ್ತ್ರ. ಈ ಸಾಮಾಜಿಕ ಸಮಸ್ಯೆಗೆ  ಸೈನಿಕ ಪರಿಹಾರವಾಗಲಿ, ಸಾಮಾಜಿಕ ಪರಿಹಾರವಾಗಲಿ ನಮಗೆ ಕಾಣುತ್ತಿಲ್ಲ. ನಕ್ಸಲ್ ಪೀಡೆಯನ್ನು ಬಲಿ ಹಾಕಲು ಸೈನ್ಯವನ್ನು ಕಾನನಕ್ಕೆ ಬಿಡಲು ಸಾಧ್ಯವಿಲ್ಲ ಎಂದು ನಾವು ಅರಿತಿದ್ದಾಯಿತು ಶ್ರೀಲಂಕೆಯಲ್ಲಿ. ತಮಿಳು ಭಯೋತ್ಪಾದಕರನ್ನು ಸದೆ ಬಡಿಯಲು ರಾಜೀವ್ ಗಾಂಧೀ ಆತುರ ತೋರಿಸಿ ಬೆರಳು ಕಚ್ಚಿ ಕೊಂಡಿದ್ದು ಮಾತ್ರವಲ್ಲ, ಶ್ರೀಲಂಕೆಯ ಅಂದಿನ ಅಧಕ್ಷ J.R. ಜಯವರ್ಧನೆ ಯವರ ರಾಜಕೀಯ ದಾಳಕ್ಕೆ ಬಲಿಯಾಗಿ, ಅಲ್ಲಿನ ಸೇನೆಯ ದ್ರೋಹದಿಂದಲೂ, ಕಾಡಿನಲ್ಲಿ ಹೋರಾಡಿದ ಅನುಭವದ ಕೊರತೆಯೂ ನಾವು ಮುಖ ಭಂಗ ಅನುಭವಿಸುವಂತೆ ಮಾಡಿತು. ಕಾಡಿನಲ್ಲಿ ಅವಿತು ಹೋರಾಡುವ ನಕ್ಸಲರು vietnam ನ “ವಿಎಟ್ ಕಾಂಗ್” ಥರದ ಹೋರಾಟಗಾರರು. ಸಾಮಾನ್ಯ ಜನ ಯಾರು, ನಕ್ಸಲರು ಯಾರು ಎಂದು ಹೇಳಲು ಸಾಧ್ಯವಿಲ್ಲ. vietnam ನಲ್ಲಿ ಅಮೇರಿಕಾ ಸೋತು ಸುಣ್ಣವಾಗಿದ್ದು ಈ ವ್ಯತ್ಯಾಸದ ಅರಿವಿಲ್ಲದೆ ಇದ್ದುದರಿಂದ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ನಮ್ಮ ಸೈನ್ಯವನ್ನು ಕಾಡಿಗೆ ಕಳಿಸಬಾರದು. ದುಡುಕಿನ, ಮೂರ್ಖ ಸಾಹಸಕ್ಕೆ ನಮ್ಮ ಸೈನಿಕರು ಬಲಿಯಾಗುವುದು ಬೇಡ.  

ಶ್ರೀಮಂತ ಅತಿ ಶ್ರೀಮಂತನಾಗುತ್ತಿರುವುದು ಮತ್ತು ಬಡವ ದಿನೇ ದಿನೇ ಬಡತನದ ಪಾತಾಳಕ್ಕೆ ಇಳಿಯುತ್ತಿರುವುದು ನಮಗೆ ತಿಳಿದ ಸತ್ಯ. ಆದರೆ ಬಂಡವಾಳಶಾಹಿ ವ್ಯವಸ್ಥೆಯ ಮೊರೆ ಹೋದ ನಮಗೆ ಝಗ ಝಗಿಸುವ ನಿಯಾನ್ ಬೆಳಕುಗಳು, ಗಗನ ಚುಂಬಿ ಗೋಪುರಗಳು, ಕೆಲವು fly over ಗಳು ನಮ್ಮ ದೃಷ್ಟಿ ತಪ್ಪಿಸಿದವು. ನಮಗೆ ಟಾಟಾ, ಗೋದ್ರೆಜ್, ಅಂಬಾನಿಗಳಂಥವರ ಶ್ರೀಮಂತಿಕೆ,  ಬಾಲಿವುಡ್ ತಾರೆಯರ ಬದುಕುವ ರೀತಿ ಮೋಡಿ ಮಾಡಿದವು. ಇದೇ ನಿಜವಾದ ಭಾರತ ಎನ್ನುವ ಭ್ರಮೆ ಆವರಿಸಿತು. ಈ ಭ್ರಮೆಗೆ ಆಂಗ್ಲ ಮಾಧ್ಯಮಗಳು, ಕೃತಕ ಬದುಕನ್ನು ವೈಭವೀಕರಿಸುವ ಟಿವಿ ಧಾರಾವಾಹಿಗಳು ನೀರೆರೆದು ನಾವು ಪ್ರಗತಿಯಲ್ಲಿ  ಅಮೆರಿಕೆಯನ್ನು ಹಿಂದಕ್ಕೆ ಹಾಕಲು ಮೂರು ಗಜ ದೂರ ಮಾತ್ರ ಉಳಿದಿರುವುದು ಎಂದು ನಂಬುವಂತೆ ಮಾಡಿದವು. ಆದರೆ ವಾಸ್ತವವೋ? ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಪಾಲು ಒಪ್ಪೊತ್ತಿನ ಕೂಳಿಗಾಗಿ ಹರ ಸಾಹಸ ಮಾಡಬೇಕು. ದಿನೇ ದಿನೇ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದವು. ಇಂಟರ್ನೆಟ್ ಯುಗ ಮತ್ತೊಂದು ರೀತಿಯ ಸಮಾಜವನ್ನೇ ಸೃಷ್ಟಿಸಿತು. ಎಂದೂ ಕಾಣದ ಕೇಳದ ದಶಸಾವಿರದಲ್ಲಿ ಎಷ್ಟು ಸೊನ್ನೆಗಳಿವೆ ಎಂದು ಗೊತ್ತಿಲ್ಲದ ಸಮುದಾಯ ಧಿಡೀರನೆ ದೊಡ್ಡ ಮೊತ್ತದ ಸಂಬಳ ಪಡೆದು ಮೆರೆಯಲು ತೊಡಗಿತು. ಚೌಕಾಶಿ ಎಂದರೆ ಒಂದು ಕೀಳು ಪರಿಪಾಠ ಎನ್ನುವ ಮಟ್ಟಿಗೆ ಹೇಳಿದ ಬೆಲೆಗೆ ಸಾಮಾನುಗಳನ್ನು ಕೊಂಡು ಬಡ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸಿತು. ಈ ರೀತಿಯ ಅಸಹಾಯಕ ಪರಿಸ್ಥಿತಿ ನಕ್ಸಲರಿಗೆ ವರದಾನವಾಗಿ ಪರಿಣಮಿಸಿತು.  ಥಳಕಿನ ಬದುಕು ಶೋಷಣೆ ಎಂದು ಜನರಿಗೆ ಮನವರಿಕೆ ಮಾಡಿಸಿ ಮುಗ್ಧ ಜನ ಶಸ್ತ್ರದ ಮೊರೆ ಹೋಗುವಂತೆ ಮಾಡಿತು.

ಹಿಂಸೆಯಿಂದ ಯಾರಿಗೂ ಲಾಭವಿಲ್ಲ ಎಂದು ಹೊಟ್ಟೆ ತುಂಬಿದವನಿಗೆ, ದೊಡ್ಡ ಕಾರನ್ನು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ ಟ್ಯಾಂಕ್ ತುಂಬುವವನಿಗೆ  ಗೊತ್ತು. ಆದರೆ ಹೊಟ್ಟೆಗಿಲ್ಲದೆ ಚೀರಾಡುವ, ತನ್ನ ಪುಟಾಣಿಗಳನ್ನು ವ್ಯರ್ಥವಾಗಿ ಸಮಾಧಾನ ಪಡಿಸಲು ಹೆಣಗಾಡುವವನಿಗೆ ಗೊತ್ತೇ ಈ ಸಾಮಾನ್ಯ ಲಾಜಿಕ್? ದಾರಿ ಕಾಣದೆ ಅಸಹಾಯಕರಾಗಿ ತನ್ನ ಹೊಟ್ಟೆಗಿಲ್ಲದಿದ್ದರೂ ಚಿಂತೆಯಿಲ್ಲ ನಮ್ಮನ್ನು ವಂಚಿಸಿದ ವ್ಯವಸ್ಥೆ ವಿರುದ್ಧ ಹೋರಾಡಿ ರಕ್ತ ಹರಿಸಬೇಕು ಎನ್ನುವುದು ಇವರ ಗುರಿಯಾಯಿತು. ಸಂಪತ್ತನ್ನು ದೋಚಿ ದುರಹಂಕಾರದಿಂದ ಮೆರೆಯುವವರಿಗೆ ತಿಳಿದಿರಲಿಲ್ಲವೇ ಇದೇ ಸಂಪತ್ತು ಅಸೂಯೆಯ ಹಾವಾಗಿ ಬಂದು ಕಚ್ಚೀತು ಎಂದು? ಪಾಪ ಅವರಿಗೆ ತಿಳಿಯುವ ಸಾಧ್ಯತೆ ತುಂಬಾ ಕಡಿಮೆ. surround sound ಮ್ಯೂಸಿಕ್ ಸಿಸ್ಟಂ, ಮತ್ತು ಹೋಂ ಥಿಯೇಟರ್ ನಲ್ಲಿ ಹಾಡು ಕೇಳುತ್ತಾ ಮೈಮರೆಯುವ ಮಂದಿಗೆ ಬಡವನ ಆಕ್ರಂದನ ಮುಟ್ಟದು, ಕೇಳದು. ಅಂದರೆ ಈ ರೀತಿಯ ತಾರತಮ್ಯದ ಬದುಕು ಗೂಳಿಯಾಗಿ ನಮ್ಮ ಮೇಲೆಯೇ ಎರಗದು ಎಂದು ನಮಗೆ ತಿಳಿದಿಲ್ಲ ಎಂದಲ್ಲ. ನಾವೆಷ್ಟೇ ಕೃತಕ ಮುಗ್ಧತೆ ಯನ್ನು ಪ್ರದರ್ಶಿಸಿದರೂ ನಮ್ಮೊಳಗೊಬ್ಬ ಇದ್ದೇ ಇರುತ್ತಾನಲ್ಲವೇ? ಮನಸ್ಸಾಕ್ಷಿ ಎಂಬ “ಗುರು” (inner teacher) ನಮಗೆ ತಿಳಿ ಹೇಳುತ್ತಲೇ ಇರುತ್ತಾನೆ. ಆದರೆ ಹಿತೋಪದೇಶ ಮಾಡುವ ತಂದೆಯನ್ನು, ಹಿರಿಯರನ್ನು ಅವಗಣನೆ ಮಾಡಿ ಬಾಯಿ ಮುಚ್ಚಿಸುವ ರೀತಿ ಈ ಗುರುವಿಗೂ ಇದೇ ಉಪಚಾರವನ್ನು ನಾವು ಕೊಟ್ಟೆವು. ಪರಿಣಾಮ ಈ ರಕ್ತದೋಕುಳಿ. ಏಕಾಏಕಿ ಮಕ್ಕಳು ತಬ್ಬಲಿಯಾಗುತ್ತಾರೆ, ಸುಮಂಗಲಿಯರು ವಿಧವೆಯರಾಗುತ್ತಾರೆ. ವೃದ್ಧ ಪಾಲಕರು ಪೋಷಿಸುವ ಮಕ್ಕಳನ್ನು ಕಳೆದುಕೊಂಡು ಪರಿತಪಿಸುತ್ತಾರೆ. ಭಯ, ಅಸಹಾಯಕತೆ ಎಲ್ಲೆಲ್ಲೂ ಆವರಿಸುತದೆ.

ನಿಸರ್ಗ calm before storm ರೀತಿ ನಮ್ಮ ನ್ನು ಅಚ್ಚರಿಗೊಳಿಸುತ್ತದೆ. ಆದರೆ ನಾವು ಕಾಣುತ್ತಿರುವ ನಕ್ಸಲ್ ಪ್ರತಿರೋಧಗಳು ಏಕಾಕಿ ಬಂದು ಬಿದ್ದಿದ್ದಲ್ಲ. ಚಿಕ್ಕ ಚಿಕ್ಕ ಕಂಪನಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಬಹುಶಃ ನಮಗದು ಸಂಗೀತದ drum ನ ಸದ್ದಿನಂತೆ ಕೇಳಿಸಿತು. ಮೇಲೆ ಹೇಳಿದಂತೆ ದೊಡ್ಡ ಮಟ್ಟದ ಹಿಂಸೆ ಆದಾಗಲೇ ಸರಕಾರ ತೂಕಡಿಕೆಯಿಂದ ತಲೆ ಎತ್ತುವಂತೆ ಮಾಡುವುದು. ತಲೆ ಎತ್ತಿದ ಮೇಲೋ? ತಲೆ, ಬಾಲ ಇಲ್ಲದ, ನಿಲ್ಲದ ಹರಟೆ. ಒಣ ಜಂಭ, ಒಣ ಬೆದರಿಕೆ. ಒಂದಿಷ್ಟು ಟಾಕ್ ಷೋ ಗಳು. ನಿವೃತ್ತ ಅಧಿಕಾರಿಗಳನ್ನು ಕರೆಸಿ ಒಂದಿಷ್ಟು ಚರ್ಚೆ, ನಂತರ ಮಹೋಗನಿ ಹಲಗೆಗಳಿಂದ ಆವೃತ್ತವಾದ, ಹವಾನಿ ಯಂತ್ರಿತ ಕಚೇರಿಗೆ ಹಿಂದಿರುಗಿ ಮತ್ತೊಂದು ತೂಕಡಿಕೆಗೆ ಸಿದ್ಧತೆ. ಇವರು ತೂಕಡಿಸುತ್ತಿರುವಾಗ ಅಮಾಯಕರು ರೈಲು ಹಳಿಗಳ ಮೇಲೆ ತಮ್ಮ ರಕ್ತ ಹರಿಬಿಟ್ಟು ಕೊಂಡು ಪ್ರಾಣ ಕಳೆದುಕೊಳ್ಳುವುದು. ಒಂದು ರೀತಿಯ vicious cycle.     

ಯಾವುದೇ ವಿವಾದ, ಸಮಸ್ಯೆ ಪರಿಹರಿಸಲು ಮಾತುಕತೆ ಬೇಕು. ಮಾತುಕತೆ ಎಂಥ ಸನ್ನಿವೇಶಗಳಿಗೂ ಒಂದು ದಿವ್ಯ ಮಂತ್ರ. ಜನ ಪರಸ್ಪರ ಮಾತನಾಡಬೇಕು. ಕಿವುಡತನ ಪ್ರದರ್ಶಿಸದೆ ಸವಾಧಾನವಾಗಿ ಒಬ್ಬರನ್ನೊಬ್ಬರು  ಅರಿಯಲು ಆರಂಭಿಸಬೇಕು. ಈ ಪ್ರಕ್ರಿಯೆ ಸಮಯ ತೆಗೆದು ಕೊಂಡರೂ ಆ ಸಮಯ ವ್ಯರ್ಥವಾಗಿ ಹೋಗುವುದಿಲ್ಲ.    

ಕ್ಷಿಪಣಿ ಉಡಾವಣೆಗಳು, ಚಂದ್ರಯಾನ, ಕಾಮನ್ ವೆಲ್ತ್ ಕ್ರೀಡೆಗಳು ಹಸಿದ ಜನರಿಗೆ ಒಪ್ಪೊತ್ತಿನ ಅನ್ನವನ್ನೋ, ಜೀವರಕ್ಷಕ ಔಷಧಿಗಳನ್ನೋ ಪೂರೈಸಲಾರವು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಮ್ ಸದಸ್ಯತ್ವ ದಿಂದ ದೊಡ್ಡ ಲಾಭವೇನೂ ಇಲ್ಲ. ನಮ್ಮ ego ವನ್ನು ಇನ್ನಷ್ಟು ಉಬ್ಬಿಸುತ್ತದೆ ಅಷ್ಟೇ. ಆಳುವವರು ಬಡವರ, ಅವಕಾಶ ವಂಚಿತರ ಹಿತದೃಷ್ಟಿಯ ಕಡೆ ತಮ್ಮ ದೃಷ್ಟಿ ನೆಡಬೇಕು. ಕೈಗಾರಿಕೋದ್ಯಮಿಗಳ, ಅಗರ್ಭ ಶ್ರೀಮಂತರ ಕೈಗಳಿಂದ “ಮದ್ಯ ತುಂಬಿದ ಪೆಗ್ಗು” ಗಳನ್ನು ಕಸಿದು ಒಂದು ಪರಿಹಾರಕ್ಕೆ ಅವರನ್ನೂ ಎಳೆದು ತರಬೇಕು. ತೆರಿಗೆ ವಂಚಿಸಿ ಮತ್ತು ತಮಗೆ ತೋಚಿದ ದಾರಿ ಹಿಡಿದು ಸಂಪತ್ತು ದೋಚುವವರಿಗೆ ಸಾಮಾಜಿಕ ಜವಾಬ್ದಾರಿ ಸಹ ಇರಬೇಕು. ಕ್ಷಿಪಣಿಗಳು ತಮ್ಮ ಘಳಿಗೆಗಾಗಿ ಇನ್ನಷ್ಟು ಸಮಯ ಕಾಯಲಿ. ಹಸಿದ ಉದರಕ್ಕೆ ಸಮಯ ಎನ್ನುವುದ ಜೀವನಾಡಿ. ಇನ್ನಷ್ಟು ಸಮಯ ವ್ಯರ್ಥಗೊಳಿಸದೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ದಿಷ್ಟ ಕಾರ್ಯ ಸೂಚಿಗೆ ಅಂತಿಟ್ಟುಕೊಂಡು ಬಡವರ, ನಿರ್ಗತಿಕರ ಆಕಾಂಕ್ಷೆ ಗಳನ್ನು ನೆರವೇರಿಸುವತ್ತ ಸರಕಾರ ಗಮನ ನೀಡಬೇಕು. ಅಲ್ಲಿಯವರೆಗೆ ನಕ್ಸಲರನ್ನು ಗಾಂಧೀವಾದಿಗಳು ಎಂದೆಲ್ಲಾ ಬಣ್ಣಿಸಿ ಯಾರಿಗೂ ಪ್ರಯೋಜನ ತಾರದ ಲೇಖನಗಳನ್ನ ಪ್ರಕಟಿಸಿ ಪರಿಸ್ಥಿತಿಯನ್ನು ಇನ್ನಷ್ಟು ಗೋಜಲುಗೊಳಿಸುವ ಬುದ್ಧಿವಂತರು ತಮ್ಮ ಲೇಖನಿಗೆ ಕಡಿವಾಣ ಹಾಕಲಿ.

ಕಟುಕನಿಗಾಗಿ ಕಾಯುತಿಹ ಕುರಿಗಳು ಮತ್ತು ಕುವರಿಯರು

                                            

ನಾಗರೀಕ ಸಮಾಜಕ್ಕೆ ಕಳಂಕವಾಗಿರುವ ವೇಶ್ಯಾವಾಟಿಕೆ ಬಗ್ಗೆ ಸನ್ಮನಸ್ಸಿನ ಕನ್ನಡಿಗರೊಬ್ಬರು “ಸಂಪದ” ದದಲ್ಲಿ ಚರ್ಚೆ ಇಟ್ಟು ತಾವು ಬೆಂಗಳೂರಿನಲ್ಲಿ ಕಂಡ ದೃಶ್ಯದ ಬಗ್ಗೆ ಓದುಗರ ಗಮನ ಸೆಳೆದರು.

ಮೈಮಾರುವ, ವೇಶ್ಯಾವಾಟಿಕೆ, ಹಾದರ, ಹೀಗೆಲ್ಲಾ ವಿವಿಧ ನಾಮಾವಳಿಗಳಿಂದ ಗುರುತಿಸಲ್ಪಡುವ flesh trade ಇಂದು ನಿನ್ನೆಯದಲ್ಲ. ಇದು world’s oldest profession ಅಂತೆ. ಈ ವೃತ್ತಿಗೆ profession ಅಂತ ಕರೆದು ದಾರ್ಶನಿಕ ಅಥವಾ ಸಮಾಜ ಶಾಸ್ತ್ರಜ್ಞ ಈ ವೃತ್ತಿಗೆ ಒಂದು definition ಕೊಟ್ಟು ಮನುಷ್ಯನ ನೂರಾರು ವೃತ್ತಿಗಳಲ್ಲಿ ಇದೂ ಒಂದು ಎಂದು ಪ್ರತಿಬಿಂಬಿಸಿ ಪರೋಕ್ಷವಾಗಿ ಪ್ರೋತ್ಸಾಹಿಸಿದ್ದಾನೆ. ಮತ್ತೊಂದು ಕಡೆ ನಮ್ಮ ಹೆಣ್ಣು ಮನೆಯ ಹೆಣ್ಣು ಮಕ್ಕಳು ಮಾನವಾಗಿ ಓಡಾಡಲು ಪರರ ಹೆಣ್ಣು ಮಕ್ಕಳು ಮಾನ ಬಿಟ್ಟು ಮೆಜೆಸ್ಟಿಕ್ ನಲ್ಲೋ ಇನ್ಯಾವುದಾದರೂ ರೆಡ್ ಲೈಟ್ ಏರಿಯಾದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗಿರಾಕಿಗೆ ಕಾಯಬೇಕು. ಹೇಗಿದೆ ವ್ಯವಸ್ಥೆ? ಈ ವ್ಯವಸ್ಥೆ ಸರಿ ಎಂದು ಹೇಳುವ ಮಹಿಳೆಯರೂ ಇದ್ದಾರೆ.

ಯಾವ ಹೆಣ್ಣೂ ತನ್ನ ಸ್ವ ಇಚ್ಚೆಯಿಂದ ಈ ದಂಧೆಗೆ ಇಳಿಯುವುದಿಲ್ಲ. ಹೌದು ಶಾಪಿಂಗ್ ಗೀಳು ಹಚ್ಚಿಕೊಂಡ ಕೆಲವರು ಶೋಕಿಗಾಗಿ, (ಇದರಲ್ಲಿ ಗೃಹಿಣಿಯರೂ ಸೇರಿದ್ದಾರೆ ಎನ್ನುವುದನ್ನು ಮರೆಯಬಾರದು) ಈ ಕೆಲಸಕ್ಕೆ ಇಳಿಯುತ್ತಾರೆ. ಈ ದಂಧೆಯ ಬಗ್ಗೆ ಕೂಲಂಕುಷವಾಗಿ ನೋಡಿದಾಗ ನಮಗೆ ಸಿಗುವ ಕಾರಣಗಳು ಹಲವು. ಬಳಕೆದಾರ ಸಂಸ್ಕೃತಿ, ಕೊಳ್ಳಲು ಪ್ರೇರೇಪಿಸುವ ಜಾಹೀರಾತುಗಳು, ಸಂಪತ್ತನ್ನು ವೈಭವೀಕರಿಸುವ ಸೀರಿಯಲ್ಲುಗಳು. ಇದಲ್ಲದೆ ಸಂಪತ್ತಿನ ಬಗೆಗಿನ ಸಮಾಜದ ದೃಷ್ಟಿಕೋನ. ಯಶಸ್ವೀ ವ್ಯಕ್ತಿ ಬಳಿ ದೊಡ್ಡ ಕಾರು, ಬಂಗಲೆ ಇದ್ದರೆ ಅವನಿಗೆ ಮನ್ನಣೆ. ಆ ಬಂಗಲೆ, ಕಾರು, ಸಂಪತ್ತು ಹೇಗೆ ಬಂತು ಎಂದು ಕೇಳುವ ಅರಿಯುವ ಹಂಬಲ ಸಮಾಜಕ್ಕಿದೆಯೇ? ಯಾವುದಾದರೂ upscale neighbourhood ಕಡೆ ನಡೆದರೆ ತಿಳಿಯುತ್ತೆ. ನೋಡಪ್ಪಾ, ಅಲ್ಲಿರೋ ಬಂಗಲೆ forest conservator ಅವರದು. ಅಲ್ಲಿ ನಿಂತಿದೆಯಲ್ಲಾ ದೊಡ್ಡ ಕಾರು,ಅದು pwd engineer ಅವರದು, ಅಲ್ಲಿ ಯಮಾಹಾ ಬೈಕಿನಲ್ಲಿ ಹೋಗ್ತಾ ಇದ್ದಾನಲ್ಲ ಅವನು ಕೆಎಸ್ಸಾರ್ಟೀಸಿ ಬಸ್ಸಿನ ಕಂಡಕ್ಟರನ ಮಗ, MBBS ಮಾಡ್ತಾ ಇದ್ದಾನೆ……….ಹೀಗೆ ಸಾಗುತ್ತದೆ ಗುಣಗಾನ, ಪ್ರಶಂಸೆ, ಭಕ್ತಿ ಭಾವ. ನಾವೆಂದಾದರೂ ಯೋಚಿಸಿದ್ದೇವೆಯೇ ಈ ವ್ಯಕ್ತಿಗಳು ಪಡೆಯುವ ಸಂಬಳದಲ್ಲಿ ಈ ಸೌಕರ್ಯಗಳನ್ನು ತಮದಾಗಿಸಿಕೊಳ್ಳಲು ಅವರಿಂದ ಸಾಧ್ಯವೇ ಎಂದು? ಮಾನ ಬಿಟ್ಟು ಸಂಪಾದನೆ ಮಾಡಿದರೆ ಸಂಪಾದನೆ ಮಾನವನ್ನು ತಂದು ಕೊಡುತ್ತದಂತೆ. ಎಷ್ಟು ಸೊಗಸಾಗಿ ಮರಳಿ ಬಂತು ನೋಡಿ ಮಾನ ಇಲ್ಲಿ. ಈಗ ವೇಶ್ಯಾವಾಟಿಕೆಗೂ ಇಲ್ಲಿ ಬರೆದಿರುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ತಾನೇ?

ಅನೈತಿಕ ಸಂಪಾದನೆಯನ್ನು ಕಂಡು ಹಿಗ್ಗಿ, ಹೊಗಳುವ ಸಮಾಜ ಒಳಗೊಳಗೇ ಅದೇ ರೀತಿ ತಾನೂ ಆಗಬೇಕೆಂದು ಬಯಸುತ್ತದೆ. ಈ ಸಂಪತ್ತನ್ನು ನೋಡಿದ ಸಾಮಾನ್ಯ ಗೃಹಿಣಿ ತನ್ನ ಗಂಡನನ್ನು ಪ್ರೇರೇಪಿಸುತ್ತಾಳೆ ಅಡ್ಡ ದಾರಿ ಹಿಡಿ ದು ಸಂಪಾದಿಸಲು. ಅಬಲೆ ಬಯಸುತ್ತಾಳೆ ತನ್ನ ಮೈ ಮಾಟವನ್ನು ಶ್ರೀಮಂತನಿಗೆ ಉಣಿಸಿದರೆ ಅವನಂತೆಯೇ ತಾನೂ ಸುಖವಾಗಿ ಇರಬಹುದು ಎಂದು. ಲಂಚ ಪಡೆಯುವ ವ್ಯಕ್ತಿ ಒಂದು ರೀತಿಯ ಹಾದರ ಮಾಡಿದರೆ ಏರು ಜವ್ವನೆ ಮತ್ತೊಂದು ರೀತಿಯ ಹಾದರಕ್ಕೆ ಇಳಿಯುತ್ತಾಳೆ. ಇಬ್ಬರ ಉದ್ದೇಶ ಸ್ಪಷ್ಟ. ಭರ್ಜರಿಯಾಗಿ ಬಾಳುವುದು.

ಶೀಲ ಮತ್ತು ಅಶ್ಲೀಲದ ಮಧ್ಯೆ ಇರುವ ಪರದೆ ಬಹು ತೆಳುವಾದುದು. ಯಾವುದೋ ಒಂದು ಘಳಿಗೆಯಲ್ಲಿ, ಯಾವುದೋ ಒಂದು ಕಾರಣಕ್ಕೆ ಆ ಪರದೆ ಸರಿಯಿತೋ ಪಯಣ ಶುರು ಅನೀತಿಯೆಡೆಗೆ. ಚಿಕ್ಕ ಪುಟ್ಟ, ಒಂದು ಸಲ, ಎರಡು ಸಲ, ಎಂದು ತಮಗರಿವಿಲ್ಲದೆಯೇ ಅನೈತಿಕತೆಯ ಪ್ರಪಾತಕ್ಕೆ ಜಾರುತ್ತಾರೆ. ಟೀವೀ ಆನ್ ಮಾಡಿದರೆ ಸೀರಿಯಲ್ಲುಗಳಲ್ಲಿ ಸಾವಿರ ಕೋಟಿಗಳ ಮಾತು, ಬೀದಿಯಲ್ಲಿ ಹೋದರೆ ಭರ್ರ್ ಎಂದು ಹೋಗುವ ಮಾರುತಿ, ಹೊಂಡಾ, ಮರ್ಸಿಡೀಸ್ ಗಳು. ಪರಿಣಾಮ? ಈ ಮೇಲೆ ಹೇಳಿದ ಸಂಪತ್ತನ್ನು ಕಂಡು ಜೊಲ್ಲು ಸುರಿಸಿ ನೋಡುತ್ತಾ ಮೆಜೆಸ್ಟಿಕ್ನಲ್ಲಿ ನಿಲ್ಲುವ ನೀರೆಯರು.

ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ

ನಿರಂಕುಶ ರಾಜಪ್ರಭುತ್ವ ಇರುವ, democracy ಎಂದರೆ ಡೈನೋಸಾರಾ ಎಂದು ಗಾಭರಿಯಲ್ಲಿ ಕೇಳುವ ಅರೇಬಿಯಾದಲ್ಲಿ ಎಂಥ ಬಂದ್ ಎಂದಿರಾ? ನಮ್ಮಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಥವಾ ವಿರೋಧಪಕ್ಷಗಳವರ ಜೀವ ಸುಟ್ಟು ತಿನ್ನಲು ನೀಡುವ ಕರೆಗೆ ಸ್ವಲ್ಪ ಭಿನ್ನ ಅರೇಬಿಯಾದ ಬಂದ್. ಎಷ್ಟೇ ಗಡಿಬಿಡಿ ಇದ್ದರೂ ನಮ್ಮನ್ನು ಸೃಷ್ಟಿಸಿ ಈ ಭೂಲೋಕಕ್ಕೆ ತಂದ ಆ ದೇವನನ್ನು ಆರಾಧಿಸಲು ಅಂಗಡಿ ಮುಂಗಟ್ಟುಗಳು ಬಂದ್ ಆಚರಿಸುತ್ತವೆ. ಬಹುತೇಕವಾಗಿ ಭಗವಂತನಿಗಾಗಿರುವ ಈ ಬಂದ್ ಸ್ವ-ಪ್ರೇರಣೆಯಿಂದ ನಡೆಯುತ್ತದೆ. ಕೆಲವೊಮ್ಮೆ “promotion of virtue and prevention of vice” department ಗೆ ಸೇರಿದ ಪೊಲೀಸರು (ಇವರನ್ನು “ಹಯ್ಯ” ಎಂತಲೂ ಕರೆಯುತ್ತಾರೆ) ಈ ಕಾನೂನನ್ನು ಜಾರಿ ಗೊಳಿಸುತ್ತಾರೆ. ಇವರ ಕೆಲಸವೇ ಜನರು ಪ್ರಾರ್ಥನೆಗೆ ಹೋಗುವಂತೆ ಮಾಡುವುದು.

ಪ್ರಥಮವಾಗಿ ಸೌದಿ ಅರೇಬಿಯಾಕ್ಕೆ ಬರುವವರಿಗೆ ಇದೊಂದು ವಿಚಿತ್ರ ವಿದ್ಯಮಾನವಾಗಿ ಕಾಣುತ್ತದೆ. ಪ್ರಪಂಚದಲ್ಲಿ ಬೇರಾವುದೇ ಮುಸ್ಲಿಂ ರಾಷ್ಟ್ರಗಳಲ್ಲೂ ಈ ರೀತಿಯ ವ್ಯವಸ್ಥೆಯಿಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ತೋರಿದರೂ ಬಹಳಷ್ಟು ಜನರಿಗೆ ಒಂಥರಾ ಕಿರಿಕಿರಿ. ಯಾವುದಾದರೂ ಕೆಲಕ್ಕೆಂದು ಹೊರಟರೆ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. ಅದರಲ್ಲೋ ಚಳಿ ಗಾಳದಲ್ಲಿ ಸಂಜೆಯ ಮತ್ತು ರಾತ್ರಿಯ ಪ್ರಾರ್ಥನೆಗಳ ಮಧ್ಯೆ ಕೇವಲ ಒಂದು ಘಂಟೆಯ ಅಂತರ. ಅಂಥ ಸಮಯದಲ್ಲಿ ರಾತ್ರಿಯ ಪ್ರಾರ್ಥನೆ ಮುಗಿದ ನಂತರವೇ ಶಾಪಿಂಗ್ ಹೋಗುವುದು ಲೇಸು. ಜೆಡ್ಡಾ ರಾತ್ರಿ ಬದುಕಿಗೆ ಖ್ಯಾತ. ಬಹುತೇಕ ಅಂಗಡಿಗಳು ಮಧ್ಯ ರಾತ್ರಿ ವರೆಗೆ ತೆರೆದಿರುತ್ತವೆ, ಕೆಲವೊಂದು ಸೂಪರ್ ಮಾರ್ಕೆಟ್ ಗಳು ೨೪ ಘಂಟೆಯೂ ತೆರೆದಿರುತ್ತವೆ. ಹೀಗೆ ಪ್ರಾರ್ಥನೆಗೆಂದು ಅಂಗಡಿ ಮುಂಗಟ್ಟುಗಳು ಮುಚ್ಚುವ ಪರಿಪಾಠ ಕೆಲವರಿಗೆ ಬೇಸರ, ಕೋಪ ತರಿಸುತ್ತದೆ. any time is prayer time here ಎಂದು ಒಬ್ಬ ಬಿಳಿಯ ಅಸಹನೆಯಿಂದ ನನ್ನಲ್ಲಿ ಹೇಳಿದ. ಅವನೇಕೆ ನನ್ನ ಆರು ವರ್ಷದ ಮಗನೂ ಮೊನ್ನೆ ಇದೇ ರೀತಿಯ ಮಾತನ್ನಾಡಿದ. ಜರೀರ್ ಪುಸ್ತಕದಂಗಡಿ ನೋಡಿದಾಗೆಲ್ಲಾ ಅಪ್ಪ, ಜರೀರ್ ಗೆ ಹೋಗೋಣ ಬಾ (ಜರೀರ್ ಇಲ್ಲಿನ ಸುಪ್ರಸಿದ್ಧ ಪುಸ್ತಕ ಮಳಿಗೆ) ಎಂದು ಗೋಗರೆದಾಗ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. i dont like salah, every day is salah time ಎಂದು ತನ್ನ ತನ್ನ ಹರುಕು ಮುರುಕು ಆಂಗ್ಲ ಭಾಷೆಯಲ್ಲಿ ಸಿಡಿದೇಳುತ್ತಾನೆ. ನನಗೆ “ಸಲಾ” ಇಷ್ಟವಿಲ್ಲ, ಯಾವಾಗ ನೋಡಿದರೂ ಸಲಾ ಸಮಯ ಎಂದು ಅವನು ಹೇಳುವ ರೀತಿ ಇದು.

“ಸಲಾ” ಎಂದರೆ ಅರಬಿ ಭಾಷೆಯಲ್ಲಿ “ಆರಾಧನೆ”. ನಾವು ನಮಾಜ್ ಎಂದು ಹೇಳುತ್ತೆವಲ್ಲ, ಅದು. ಸಲಾ ಎನ್ನುವ ಪದ “ಸಿಲ್” ಎನ್ನುವ ಪದದಿಂದ ಬಂದಿದ್ದು ಮತ್ತು “ಸಿಲ್” ಎಂದರೆ ಸಂಪರ್ಕ ಅಂತ. ವಾಹ್, ನಮ್ಮನ್ನು ಮಣ್ಣಿನಿಂದ ಸೃಷ್ಟಿಸಿ, ದೇವದೂತರಿಂದ ನಮಗೆ ಸಾಷ್ಟಾಂಗ ಮಾಡಿಸಿ ಅವನ ಉತ್ತಾರಾಧಿಕಾರಿಯಾಗಿ ಭೂಲೋಕ ಆಳಲು ಕಳಿಸಿದ ಪರಮಾತ್ಮನೊಂದಿಗೆ ಸಂಪರ್ಕ. ನೇರ ಸಂಪರ್ಕ. ಯಾರ ಮಧ್ಯಸ್ಥಿಕೆಯೂ ಇಲ್ಲದ ನೇರ ಒಡನಾಟ.ಇಂಥ ಪರಮಾತ್ಮನಿಗೆ ಸಾಷ್ಟಾಂಗ ಎರಗಲು ಸಮಯ ನಿಗದಿ ಪಡಿಸಿದರೆ ನಮ್ಮ ಶಾಪ್ಪಿಂಗ್ ತೆವಲಿಗೆ ಇದು ಅಡ್ಡ ಎಂದು ಅದರ ವಿರುದ್ಧ ನಮ್ಮ ತಗಾದೆ.

ನೀವು ಶಾಪಿಂಗ್ ಮಾಡುತ್ತಿರುವಾಗ ನಮಾಜಿನ ಕರೆ ಮೊಳಗಿದರೂ ನಿಮ್ಮನ್ನು ಹೊರಗಟ್ಟುತ್ತಾರೆ. ನೀವು ಗೋಣಿ ಚೀಲ ಭರ್ತಿ ರೊಕ್ಕ ಇಟ್ಟುಕೊಂಡು ಹೋಗಿದ್ದರೂ ಆ ಹಣ ಅಂಗಡಿಯವನಿಗೆ ಬೇಡ. ಮೊದಲು ಪ್ರಾರ್ಥನೆ ನಂತರ ನಿನ್ನ ವ್ಯಾಪಾರ ಎನ್ನುತ್ತಾರೆ. ಅಷ್ಟೊಂದು ಭಯ ಕಾನೂನಿನದು. ಪೊಲೀಸರು ಬಂದರೆ ಸರಿಯಾದ ದಂಡ ವಿಧಿಸುತ್ತಾರೆ ಎಂದು ಭಯ. ಕೆಲವೊಮ್ಮೆ ನನಗೂ ಅನ್ನಿಸುವುದುಂಟು. ಭಗವಂತನ ಆರಾಧನೆಗೆ ಮೂರನೆಯವರ ಬಲವಂತ ಏಕೆ ಎಂದು.

ಜೆಡ್ಡಾದಲ್ಲಿ ಸಾರಿಗೆ ತಡೆ ಸಿಕ್ಕಾಪಟ್ಟೆ. ಎಲ್ಲರ ಹತ್ತಿರವೂ ಕಾರು. ಇಲ್ಲದೆ ಏನು, ಪೆಟ್ರೋಲ್ ಒಂದು ಲೀಟರ್ ಗೆ ಇಲ್ಲಿನ ೪೫ ಪೈಸ (ಭಾರತದ ಐದು ರೂಪಾಯಿಗಿಂತ ಕಡಿಮೆ). ಕಾರನೂ ಸಾಕುವುದು ಸುಲಭ ತಾನೇ. ಹೀಗೆ ಈ ಟ್ರಾಫಿಕ್ ಅನ್ನು ದಾಟಿಕೊಂಡು ಅಂಗಡಿ ಸೇರಿದೆವು ಅನ್ನುವಷ್ಟರಲ್ಲಿ ಸಲಾ ಟೈಂ. ಕೆಲವೊಮ್ಮೆ ಶಾಪಿಂಗ್ ಮಧ್ಯೆ ನಮಾಜಿನ ಸಮಯವಾದರೂ ನಿರ್ದಾಕ್ಷಿಣ್ಯದಿಂದ ಹೊರಗಟ್ಟುತ್ತಾರೆ. ಆದರೆ ಎಲ್ಲಾ ಮಾಲುಗಳಲ್ಲೂ, ಇನ್ನಿತರ ಸ್ಥಳಗಳಲ್ಲೂ ಆರಾಧನೆಗೆ ವಿಶೇಷ ಸೌಲಭ್ಯವಿದೆ. ಏನಿಲ್ಲವೆಂದರೂ ಪ್ರತಿಯೊಬ್ಬರ ಕಾರಿನಲ್ಲಿ ಚಿಕ್ಕ ಕಂಬಳಿ (prayer rug) ಇರುತ್ತದೆ. ಎಲ್ಲಿ ನಿಂತಿರುತ್ತಾರೋ ಅಲ್ಲೇ ಹಾಸಿ ಭಗವಂತನ ಸ್ತುತಿ ಮಾಡುತ್ತಾರೆ.      

ಒಮ್ಮೆ ನಾನು ನನ್ನ ಸೋದರಿಯ ಟಿವಿ ರೆಪೇರಿ ಮಾಡಿಸಲೆಂದು “ಬಲದ್” ಎಂದು ಕರೆಯಲ್ಪಡುವ ಜೆಡ್ಡಾ ನಗರದ ಪ್ರಮುಖ ಆಕರ್ಷಣೆಯ ವಲಯಕ್ಕೆ ಹೋದೆ. ಆಗ ತಾನೇ ಸೂರ್ಯ ಅಸ್ತಮಿಸುತ್ತಿದ್ದ. ಸೂರ್ಯಾಸ್ತಮಾನದ ಪ್ರಾಥನೆಯ ಸಮಯ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಶುರು ಆಗುವುದರಲ್ಲಿತ್ತು. ಅಷ್ಟರಲ್ಲೇ ಅಂಗಡಿ ತಲುಪಿದ ನಾನು ಅಂಗಡಿಯವನಿಗೆ ಟಿವಿ ಒಪ್ಪಿಸಿ ಬೇಕಾದ ಕಾಗದ ಅವನಿಂದ ಪಡೆದು ಅಂಗಡಿ ಹೊರಗೆ ಕಾಲಿಡುವಷ್ಟರಲ್ಲಿ ಬಂದರು ಪೊಲೀಸರು. ಅಂಗಡಿಯ ಮುಂದೆ ಜೀಪ್ ನಿಲ್ಲಿಸಿದ್ದೆ, ಧಡ ಧಡ ಇಳಿದು ನನ್ನನ್ನೂ, ಅಂಗಡಿಯ ಬಾಗಿಲು ಹಾಕುತ್ತಿದ್ದವನನ್ನೂ, ಇನ್ನಿಬ್ಬರನ್ನೂ ಜೀಪ್ ಹತ್ತಿಸಿದರು. ನಾವು ಪ್ರಾಥನೆಗೆ ಹೋಗಲೇ ಹೊರಟಿದ್ದು ಎಂದು ಹೇಳಿದರೂ ಕೇಳದೆ ನಮ್ಮಿಂದ ನಮ್ಮ ಗುರುತು ಚೀಟಿ ಪಡೆದುಕೊಂಡು ಓಡಿಸಿದರು ಜೀಪನ್ನು ಹತ್ತಿರದಲ್ಲೇ ಇದ್ದ ಮಸೀದಿಗೆ. ನನ್ನೊಂದಿಗೆ ಇದ್ದ ನಮ್ಮ ಆಫೀಸಿನ ಹುಡುಗನೊಬ್ಬ ಹೆದರಿ ಈಗೇನಾಗಬಹುದು ಎಂದು ಕಣ್ ಸನ್ನೆಯಿಂದ ಕೇಳುತ್ತಿದ್ದ. ಪಾಪ ಅವನು ಭಾರತದಿಂದ ಬಂದ ಹೊಸತು. ಎಂಥ ಸ್ವಾಗತ ಸಿಕ್ಕಿದೆ ಇವನಿಗೆ ಎಂದು ನನಗೆ ಒಂದು ಕಡೆ ನಗು, ಮತ್ತೊಂದು ಕಡೆ ಕನಿಕರ. ನನಗಂತೂ ಇಂಥವನ್ನು ಕೇಳಿ, ಓದಿ ಸಾಕಷ್ಟು ಪರಿಚಯವಿತ್ತು. ನಾವೇನೂ ಕಳ್ಳ ಕಾಕರಲ್ಲವಲ್ಲ. ಭಯ ಏಕೆ ಎಂದು ಅವರು ತಂದು ಬಿಟ್ಟ ಮಸೀದಿಯ ಬಳಿ ಇಳಿದೆ. ಪೊಲೀಸ್ ಜೀಪಿನಿಂದ ಇಳಿದ ನಮ್ಮನ್ನು ನೋಡಲು ಜನರಿಗೆ ಒಂಥರಾ ಮೋಜು. ಆಹಾ, ನಮಾಜ್ ಮಾಡದೆ ಅಡ್ಡಾಡುತ್ತೀರಾ  ಎಂದು ತುಂಟತನದಿಂದ ನಮ್ಮೆಡೆ ನೋಟ ಬೀರಿ ನಗುತ್ತಿದ್ದರು. ಒಂದು ರೀತಿಯ ಅವಮಾನ ತಾನೇ? ನಮಾಜಿನ ಸಮಯದಲ್ಲಿ ನಮಾಜ್ ಮಾಡುವುದು ಬಿಟ್ಟು ಟಿವಿ ರೆಪೇರಿ, ಮತ್ತೇನೋ ಕೆಲಸ. ಸರಿ ನಾವು ಓಡಿ ಹೋಗದಂತೆ ನಮ್ಮ ಗುರುತಿನ ಚೀಟಿ ಜಪ್ತಿ ಆಗಿದೆಯಲ್ಲ. ನಾವು ನಮಾಜ್ ಮಾಡಿ ಜೀಪಿನ ಹತ್ತಿರ ಬಂದು ಪೊಲೀಸರೊಂದಿಗೆ ನಮ್ಮ ಯಾತ್ರೆ ಠಾಣೆಯ ಕಡೆ. ನಮಾಜ್ ಮಾಡಿಸಿ ಸುಮ್ಮನೆ ತಾಂಬೂಲ ಕೊಟ್ಟು ಕಳಿಸುವುದಿಲ್ಲ. ಠಾಣೆಗೆ ಹೋಗಬೇಕು. ಸರಿ ಠಾಣೆ ತಲುಪಿದೆವು. ಅಲ್ಲಿದ್ದ ಅಧಿಕಾರಿ ಸೌಮ್ಯವಾದ ಸ್ವರದಲ್ಲಿ ಕೇಳಿದ ನಮಾಜ್ ಮಾಡಲು ಎಂದು ಧಾಡಿ ಎಂದು. ನಾವು ನಮ್ಮ ಕಾರಣವನ್ನು ಹೇಳುತ್ತಿದ್ದಂತೆ ಅದೇನನ್ನೋ ಅರಬ್ಬೀ ಭಾಷೆಯಲ್ಲಿ ಬರೆದು ಸಹಿ, ಹೆಬ್ಬಟ್ಟು ಒತ್ತಿಸಿಕೊಂಡು ಬಿಟ್ಟರು. ಯಾರೋ ಹೇಳಿದರು ಈ ರೀತಿ ಮೂರು ಬಾರಿ ನಮ್ಮ ಹೆಸರು ದಾಖಲಾದರೆ ಗಡೀಪಾರಂತೆ. ನಮ್ಮ ಕಾರಿನಿಂದ ಬಹು ದೂರ ಬಂದಿದ್ದೆವು. ಅವರೇನು ನಮ್ಮನ್ನು ಕರೆತಂದ ಸ್ಥಳಕ್ಕೆ ಬಿಡಲು ಅವರ ಬೀಗರೇ ನಾವು? ಟ್ಯಾಕ್ಸಿ ಹಿಡಿದು ನನ್ನ ಕಾರಿರುವ ಸ್ಥಳಕ್ಕೆ ಬಂದೆ. ಇಷ್ಟು ಸುಲಭವಾಗಿ ಸಮಸ್ಯೆ ಪರಿಹಾರವಾಗಿದ್ದು ನಮ್ಮ ಪುಣ್ಯವೆಂದೇ ಹೇಳಬೇಕು. ಮತ್ತೇನು ನೇಣು ಹಾಕುತ್ತಿದ್ದರಾ ಎಂದು ಕೇಳಬೇಡಿ. ನಮಾಜ್ ಮಾಡಿಸಿ, ಠಾಣೆಗೆ ತಂದ ನಂತರ ಕೆಲವು ತಲೆ ಕೆಟ್ಟ ಪೊಲೀಸರು ಅವರದೇ ಆದ ರೀತಿಯಲ್ಲಿ ರಾಟೆ ಏರಿಸುತ್ತಾರೆ. ಅಂದರೆ ನಿಮಗೆ ನಮಾಜ್ ಗೊತ್ತಲ್ಲ. ನಿಲ್ಲುವುದು, ಬಾಗುವುದು, ಸಾಷ್ಟಾಂಗ ಎರಗುವುದು, ನಂತರ ಮಗುದೊಮ್ಮೆ ನೇರವಾಗಿ ನಿಲ್ಲುವುದು. ಒಂದು ರೀತಿಯ ಶಾಸ್ತ್ರೀಯ ನೃತ್ಯ, ಕ್ಷಮಿಸಿ ಶಾಸ್ತ್ರೀಯ ಭಸ್ಕಿ. ಹೀಗೆ ಮೂರು ಸಲ ಆವರ್ತಿಸಿದಾಗ ಸೂರ್ಯಾಸ್ತಮಾನದ ನಮಾಜ್ ಮುಗಿದಂತೆ.  ಈ ರೀತಿಯ ಬಾಗುವುದು, ಏಳುವುದು ಈ ಸರ್ಕಸ್ಸನ್ನು ಸುಮಾರು ಐವತ್ತೋ, ನೂರೋ ಸಲ ಮಾಡಿಸಿ ಬಿಡುತ್ತಾರೆ. ಅದಾದ ಮೇಲೆ ಆಗುವ ಗತಿ ಗೊತ್ತೇ ಇದೆಯಲ್ಲ, ಅನುಭವ ಚಿತ್ರದಲ್ಲಿ ಕಾಶೀನಾಥ್ ಹುಡುಗಿಯರನ್ನು ಪಟಾಯಿಸಲು ಬಾಡಿ ಬಿಲ್ಡ್ ಎಂದು ಭಸ್ಕಿ ಜೋರಾಗಿ ಹೊಡೆದು ನಡೆದ ಶೈಲಿ. ಆ ಗತಿ ನಮಾಜ್ ಮಾಡದವನಿಗೆ. ದೇವರಾದರೂ ಕನಿಕರ ತೋರಿಸಿಯಾನು, ಪೊಲೀಸರು ತೋರಿಸುವುದಿಲ್ಲ.

ಜನರಿಂದ ನಮಾಜ್ ಮಾಡಿಸಿದ ಈ ಪೊಲೀಸರು ಬಿಡುವಿದ್ದರೆ ಮಾಲ್ ಗಳಿಗೆ ಹೋಗುತ್ತಾರೆ ಚೇಷ್ಟೆಗೆಂದು ಬರುವ ಪಡ್ಡೆ ಹುಡುಗ ಹುಡುಗಿಯರಿಗಾಗಿ. ಸ್ವಲ್ಪ ಅನುಮಾನ ಕಂಡರೂ ಸಾಕು ಅವರನ್ನು ಕರೆದು ತಾಕೀತು ಮಾಡುತ್ತಾರೆ, ಇಲ್ಲಾ ಭಸ್ಕಿ ಹೊಡೆಸಿ ಗೋಳು ಹೊಯ್ದುಕೊಳ್ಳುವ ಪೋಲೀಸರಾದರೆ ಅಪ್ಪಂದಿರನ್ನು ಕರೆಸುತ್ತಾರೆ ಠಾಣೆಗೆ. ಜನ್ಮ ಕೊಟ್ಟರೆ ಸಾಲದು, ಸರಿಯಾಗಿ ಸಾಕಬೇಕು ಎಂದು ಬುದ್ಧಿ ಹೇಳಲು. ಇವರ ವಿರುದ್ಧ ಯಾರೂ ಸೊಲ್ಲೆತ್ತುವುದಿಲ್ಲ, ಏಕೆಂದರೆ ಇವರ ವಿರುದ್ಧ ನೀವು ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಪ್ರಯೋಜನವಿಲ್ಲ, ನ್ಯಾಯ ಹೇಳುವವನೂ ಇವರ ವರ್ಗಕ್ಕೇ ಸೇರಿದವನು. 

ಒಮ್ಮೆ ನಗರದ ಮಧ್ಯ ಭಾಗದಲ್ಲಿರುವ ಹಿರಾ ಮಾಲ್ನಲ್ಲಿ ಅಡ್ಡಾಡುತ್ತಾ ಇರುವಾಗ ಕಂಡಿದ್ದು. ನಾಲ್ಕು ಜನ ಹುಡುಗರು ಬೆರ್ಮುಡ, ಉದ್ದದ ಕೂದಲು, ಕೊರಳಿಗೆ ಸರ, ಕೈಗೆ ಕಡಗ ಹೀಗೆ ಒಂದು ಥರಾ ಜಿಪ್ಸಿ ಗಳ ಥರಾ ನಡೆಯುತ್ತಿದ್ದರು. ಆಗಮನವಾಯಿತು ಈ ಪೊಲೀಸರದು.  ಸಮಾಜದಲ್ಲಿ ನೈತಿಕತೆ ಕಾಪಾಡಲು ನಿಯಮಿಸಲ್ಪಟ್ಟ “ಮುತಾವಾ”ಗಳು. ಆ ಹುಡುಗರನ್ನು ನಿಲ್ಲಿಸಿ ಶುರು ಮಾಡಿದರು ಪ್ರಶ್ನೆಗಳನ್ನು. ಕೂದಲು ಹೀಗೇಕೆ ಬಿಟ್ಟಿದ್ದೀಯ, ಇದೇನು ನಿನ್ನ ಅವತಾರ, ನೀವೆಲ್ಲಿ ವಾಸವಾಗಿದ್ದೀರಾ….. ಹುಡುಗರು ಭಯದಿಂದ ಕೇಳಿದ ಪ್ರಶ್ನೆಗಳಿಗೆ ತಡಬಡಿಸಿ ಉತ್ತರಿಸಿ ಇನ್ನು ಈ ವೇಷದಲ್ಲಿ ನಾವು ಅಡ್ಡಾಡುವುದಿಲ್ಲ ಎಂದು ಹೇಳಿ ಅವರ ಕೈಗಳಿಂದ ತಪ್ಪಿಸಿಕೊಂಡರು. ಕೆಲವೊಮ್ಮೆ ಇಷ್ಟರಲ್ಲೇ ನಿಲ್ಲುತ್ತದೆ ಈ ವಿಚಾರಣೆ, ಒಂದಿಷ್ಟು ಕೌನ್ಸೆಲಿಂಗ್ನೊಂದಿಗೆ. ಒಂದು ದಿನ ನಾನು ನನ್ನ ಶ್ರೀಮತಿ ಮಕ್ಕಾದ ಮಸೀಯಿಂದ ಹೊರ ನಡೆಯುತ್ತಿದ್ದಾಗ ಬಂದ ಇಂಥದ್ದೇ ಒಬ್ಬ ಪೋಲೀಸಪ್ಪ. ನನ್ನನ್ನು ತಡೆದು ನಿನ್ನ ಪತ್ನಿಯೇಕೆ perfume ಧರಿಸಿದ್ದಾಳೆ ಎಂದು. ನೀನೆಕಪ್ಪ ನನ್ನ ಹೆಂಡತಿಗೆ ಮೂಗು ತಾಗಿಸಿದ್ದು ಎಂದು ಕೇಳಲು ಮನಸ್ಸಾದರೂ ನಿನ್ನ ಮೂಗಿಗೆ ಬಡಿದಿದ್ದು ನನ್ನ Mont Blanc ಪರ್ಫ್ಯೂಂ ಎಂದು ಹೇಳಿ ಮುಂದೆ ನಡೆದೆ. ಸ್ತ್ರೀಯರು ಸುಗಂಧ ದ್ರವ್ಯ ಹಚ್ಚಿಕೊಳ್ಳಬಾರದು, ಅದು ಪರ ಪುರುಷರಿಗೆ open invitation.

ಕೆಲವೊಮ್ಮೆ ನವಿರಾಗಿ ವರ್ತಿಸುವ “ಮುತಾವಾ” ಎಂದೂ ಕರೆಯಲ್ಪಡುವ ಈ ಸಮಾಜ ಸುಧಾರಕರಿಂದ  ಸಮಾಜಕ್ಕೇನೋ ಒಳ್ಳೆಯದೇ. ಇಲ್ಲಿನ ನಿಯಮಿತ ಸ್ವಾತಂತ್ರ್ಯದ ಚೌಕಟ್ಟಿನೊಳಗೆ ಅನಿಯಮಿತವಾಗಿ ವರ್ತಿಸುವ ಯುವ ವರ್ಗಕ್ಕೆ, ಯೌವ್ವನದ ಎಗ್ಗಿಲ್ಲದ ರಭಸಕ್ಕೆ  ತಡೆ ಒಡ್ಡುವ ಇಂಥ road hump ಗಳು ಅವಶ್ಯಕ.

ಸೌದಿ ಅರೇಬಿಯಾದಲ್ಲಿ ಆಗುವ ಭಗವಂತನ ನಾಮ ಸ್ಮರಣೆ ಬೇರಾವ ದೇಶದಲ್ಲೂ ಆಗಲಿಕ್ಕಿಲ್ಲವೇನೋ. ರಸ್ತೆ ಬದಿಯಲ್ಲಿ, ಬ್ಯಾಂಕಿನಲ್ಲಿ ಸರತಿಯಲ್ಲಿ ನಿಂತಾಗ, ಜಾಹೀರಾತಿನ ಮಧ್ಯೆ ಹೀಗೆ ಎಲ್ಲೆಡೆ ದೇವರನ್ನು ಸ್ಮರಿಸಲು, ಕೊಂಡಾಡಲು ಕರೆ. ಹೀಗೆ ಸದಾ ದೇವನಾಮ ಸ್ಮರಣೆ ಮಾಡುವ ಸಮಾಜ ಅದೇ ದೇವನ ಆದೇಶವನ್ನು ಕಡೆಗಣಿಸುವುದರಲ್ಲೂ ಮುಂದು ಎಂದರೆ ನಿಮಗೆ ಅಚ್ಚರಿ ಆಗಬಹುದು. ಈ ದ್ವಂದ್ವ ನಮಗೆ ಹೇರಳವಾಗಿ ಈ ಮರಳುಗಾಡಿನಲ್ಲಿ ಕಾಣಲು ಸಿಗುತ್ತದೆ.