ಮೋದಿಗೆ ಸಿಕ್ಕಿತು ಟ್ರಾವಲ್ ಪರ್ಮಿಟ್

ಗುಜರಾತ್ ನಲ್ಲಿ ನಡೆದ ನರಮೇಧಕ್ಕೆ ನರೇಂದ್ರ ಮೋದಿ ಕಾರಣ ಎಂದು ಭಾರತೀಯರೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಭಾವನೆಗೆ ಪೂರಕವಾಗಿ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳು ಮೋದಿ ತಮ್ಮ ದೇಶಕ್ಕೆ ಕಾಲಿಡಲು ಅನುಮತಿ ನಿರಾಕರಿಸಿದ್ದವು. ಭಾರತದ ಒಳಗೂ ಈ ನಿಲುವಿಗೆ ಸಹಮತ ಸಹ ವ್ಯಕ್ತವಾಗಿತ್ತು. ಕಳೆದ ಬಿಹಾರದ ಚುನಾವಣೆಯ ಸಮಯ ಭಾಜಪದ ಪರವಾಗಿ ನರೇಂದ್ರ ಮೋದಿ ಬಿಹಾರಕ್ಕೆ ಬರುವ ವಿಷಯ ತಿಳಿದ ಅಲ್ಲಿನ ಮುಖ್ಯಮಂತ್ರಿ ನೀತೀಶ್ ಕುಮಾರ್ ತಮ್ಮ ರಾಜ್ಯಕ್ಕೆ ಆತ ಕಾಲಿಡ ಕೂಡದು ಎಂದು ತಾಕೀತು ಮಾಡಿ ವಿವಾದಕ್ಕೆ ಒಳಗಾಗಿದ್ದರು. ಮೋದಿ ಇಲ್ಲದೆಯೇ ಅಲ್ಲಿನ ಚುನಾವಣೆಯನ್ನ ಭಾಜಪ – ನಿತೀಶ್ ಪಕ್ಷದ ಒಕ್ಕೂಟ ಜಯಿಸಿತ್ತು. ಹೊರದೇಶಗಳಲ್ಲೂ, ಸ್ವದೇಶದಲ್ಲೂ ಈ ತೆರನಾದ ಅಭಿಪ್ರಾಯ ನರೇಂದ್ರ ಮೋದಿ  ಬಗ್ಗೆ ಇರುವಾಗ ಮೋದಿಯಾಗಲೀ ಭಾಜಪ ವಾಗಲೀ ಆತ್ಮಾವಲೋಕನ ಏಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಒಂದು ಒಗಟು.  ಸುಖಾಸುಮ್ಮನೆ ಯಾರನ್ನೂ ನಮ್ಮ ಮನೆ ಕಡೆ ತಲೆ ಹಾಕಬೇಡ ಎಂದು ಯಾರೂ  ತಾಕೀತು ಮಾಡೋಲ್ಲ. ನಮ್ಮ ದೇಶದ ಚರಿತ್ರೆಯಲ್ಲಿ ಈ ರೀತಿಯ ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಗೆ ಒಳಗಾದ ಒಬ್ಬನೇ ಒಬ್ಬ  ರಾಜಕಾರಣಿಯ ಹೆಸರು ನಮ್ಮ ನೆನಪಿಗೆ ಬರುವುದೇ?

ಗುಜರಾತ್ ರಾಜ್ಯದ ಹೆಸರು ಕೇಳಿದ ಕೂಡಲೇ ನಮ್ಮ ಕಣ್ಣಿಗೆ ಎದುರಾಗೋದು ಮುಗ್ಧರ ಹತ್ಯೆ ಮತ್ತು ಆಕ್ರಂದನ. ಗುಜರಾತ್ ನ ಮೇಲಿನ ಈ ಕಳಂಕ ವನ್ನು ತೊಡೆದು ಹಾಕಲು ಮೋದಿಯ ಅಂತರ್ಜಾಲ ಅಭಿಮಾನೀ ಸಮುದಾಯ ಹಗಲೂ ರಾತ್ರಿ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದ್ದೇ. ಗುಜರಾತ್ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ, ಅಂಥ ರಾಜ್ಯ ಈ ದೇಶದಲ್ಲೆಂದೂ ಉದಯಿಸಿಲ್ಲ ಎಂದು ಟಾಮ್ ಟಾಮ್ ಮಾಡಿದ್ದೆ ಮಾಡಿದ್ದು. ಇದು ಪೊಳ್ಳು ಮತ್ತು ಸುಳ್ಳುಗಳ propaganda ಎಂದು ಭಾರತೀಯರಿಗೆ ಮನವರಿಕೆ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಗುಜರಾತ್ ನ ಅಭಿವೃದ್ಧಿ ಒಂದು myth ಎಂದು ಈಗ ವೇದ್ಯವಾಯಿತು. ಗುಜರಾತ್ ಗಿಂತ ಅಭಿವೃದ್ಧಿಯ ಪಥದಲ್ಲಿ ಬಿಹಾರ ದಾಪುಗಾಲು ಹಾಕುತ್ತಿದೆ. 

ನರೇಂದ್ರ ಮೋದಿ ಯನ್ನು ಯಾವ ಕಾರಣಕ್ಕೆ ಮತ್ತು ಉದ್ದೇಶಕ್ಕೆ  ಹೊಗಳಲಾಗುತ್ತಿದೆ, ಪ್ರಧಾನಿ ಹುದ್ದೆಗೆ ನಾಮಕರಣ ಮಾಡಲು ಉತ್ಸುಕತೆ, ಉತ್ಸಾಹ ತೋರಿ ಬರುತ್ತಿದೆ ಎಂದು ತಿಳಿಯದಷ್ಟು ಮೂಢ ನಲ್ಲ ಭಾರತೀಯ. ಗುಜರಾತ್ ಮು. ಮಂತ್ರಿಯ ಮೇಲಿನ ಪ್ರಯಾಣದ ನಿರ್ಬಂಧವನ್ನು ತೆಗೆದ ಇಂಗ್ಲೆಂಡ್ ದೇಶದ ಈ ಕ್ರಮ ಎಷ್ಟು ವಿವೇಚನಾಪೂರ್ಣ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ವ್ಯಾಪಾರದ ಹಿತದೃಷ್ಟಿಯ ಮುಂದೆ ಮಾನವೀಯ ಮೌಲ್ಯಗಳು ಗೌಣ ಎಂದು ಇಂಗ್ಲೆಂಡ್ ದೇಶಕ್ಕೆ ಅನ್ನಿಸಿದರೆ ಅದು ಅವರಿಗೆ ಬಿಟ್ಟ ಆಯ್ಕೆ. ಅವರ ಹಿತ್ತಲಿನಲ್ಲೇ ನಡೆದ ಯಹೂದ್ಯರ ವಿರುದ್ಧ ನಡೆದ ಸಾಮೂಹಿಕ ನರಸಂಹಾರದ ಅನುಭವ ಇರುವ ದೇಶ ಇಂಗ್ಲೆಂಡ್. ಅವರಿಗೆ ನಾವು ಪಾಠ ಹೇಳುವ ಅಗತ್ಯ ಇಲ್ಲ. ನರೇಂದ್ರ ಮೋದಿಯನ್ನು ಗುಜರಾತ್ ನ ಮುಸ್ಲಿಮರು ಕ್ಷಮಿಸಿದ್ದಾರೆ. ಉತ್ತರ ಪ್ರದೇಶದ ‘ದೇವೋ ಬಂದ್’ ಇಸ್ಲಾಮೀ ಸಂಸ್ಥೆಯ ‘ಮೌಲಾನ ವಾಸ್ತಾನ್ವಿ’ ಕೂಡಾ ಹಳತನ್ನು ಮರೆತು ಮುನ್ನಡೆಯುವ ಮಾತನ್ನಾಡಿದ್ದಾರೆ. ಆದರೂ ಮನುಷ್ಯ ನಿರ್ದೋಷಿ ಯಾಗಿದ್ದರೆ ತನ್ನ ಹೆಸರಿಗೆ ಅಂಟಿದ ಕಳಂಕವನ್ನು ತೊಡೆಯುವ ಶತಾಯ ಗತಾಯ ಪ್ರಯತ್ನಿಸ ಬೇಕು, ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕು. ಈ ನಿಟ್ಟಿನಲ್ಲಿ ಗುಜರಾತಿನ ಮುಖ್ಯಮಂತ್ರಿ ತೊಡಗಿಸಿಕೊಂಡರೆ ‘feeling of closure’ ನ ಅವಕಾಶ ಭಾರತೀಯರಿಗೆ ಆತ ಕೊಟ್ಟಂತಾಗುತ್ತದೆ. ಆ ಕಾಲ ನಿಜಕ್ಕೂ ಬರಬಹುದೇ?            

ಸೊಕ್ಕಿದ ಪ್ರವಾಸಿ

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು ಇಂಗ್ಲೆಂಡ್ ನ ಪತ್ರಿಕೆಯೊಂದು ನಮ್ಮನ್ನು ಜರೆಯಿತು. ಅತಿಥಿಗಳನ್ನು ಆದರಿಸುವ ಪರಿ ಇದು. ಹೊಸ ತಂತ್ರ ಜ್ಞಾನ ( lbw verdicts under the Decision Review System ) ವನ್ನು ನಾವು ತಿರಸ್ಕರಿಸಿದ್ದಿದ್ದರೆ ಅದಕ್ಕೆ ಉತ್ತರಿಸ ಬೇಕಾದ ರೀತಿ ಇದಲ್ಲ.

ಹೌದು ಕ್ರಿಕೆಟ್ ಇಂಗ್ಲೆಂಡಿನ ಹುಲ್ಲುಗಾವಲಿನಲ್ಲಿ ಕುರಿ ಮೇಯಿಸುತ್ತಿದ್ದ ಕುರುಬರಿಂದ ಬಂದಿರಬಹುದು. ಆದರೆ ಆ ಕ್ರೀಡೆಗೆ ಮಾನ್ಯತೆ, ಜನಪ್ರಿಯತೆ, ರಂಗು, ಸ್ಪರ್ದೆ ಎಲ್ಲವನ್ನೂ ಒದಗಿಸಿದ್ದು ಏಷ್ಯಾದ ತಂಡಗಳು. ಕ್ರಿಕೆಟ್ ಇಂದು ವಿಶ್ವ ಮಾನ್ಯ ಕ್ರೀಡೆಯಾಗಿ ಕಂಗೊಳಿಸಿದರೆ ಅದರ ಕೀರ್ತಿಗೆ ಭಾರತ, ಶ್ರೀಲಂಕಾ, ಪಾಕಿಸ್ತಾನ ಭಾಜನರು. ಅದರಲ್ಲೂ ಭಾರತೀಯರ ಅಭೂತಪೂರ್ವ ಬೆಂಬಲ ಇಂದು ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿ ಹೊರ ಹೊಮ್ಮಲು ಕಾರಣ. ಭಾರತ ವಿಶ್ವದ ನಂಬರ್ ವನ್ ಕ್ರಿಕೆಟ್ ರಾಷ್ಟ್ರವಾಗದೆ ಬರೀ ಒಂದು “ಆಮ್ಲೆಟ್” ಆಗಿದ್ದಿದ್ದರೆ ಸರಿಯಾಗಿ ಬೆಂದಿಲ್ಲ ಎಂದು ಅಡುಗೆ ಕೋಣೆಗೆ ಕಳಿಸಬಹುದಿತ್ತು. ಈ ಮಾತಿನ ಧಾಟಿ ನೋಡಿ. ನಮ್ಮ ನಡತೆ ಸರಿಯಿಲ್ಲ ಎಂದು ಅವರ ಭಾವನೆ. ಭಾರತದ ನಿರ್ಧಾರದ ವಿರುದ್ಧ ICC ಮೊರೆ ಹೋಗೋ ಬದಲು ಮಾಧ್ಯಮದ ಮೊರೆ ಏಕೆ ಹೋದರೋ ಅವರಿಗೇ ಗೊತ್ತು. ಈ ಸರಣಿಯಲ್ಲಿ ಯಾರ ಕಾನೂನಿಗೆ ಮಾನ್ಯತೆ ಎಂದು ಎಂಬುದನ್ನು ಭಾರತ ತೋರಿಸಿ ಕೊಟ್ಟಿತು ತನ್ನ ರೂಪಾಯಿಯ ಶಕ್ತಿ (“rupee-pile of influence” ) ಮೂಲಕ ಎಂದು ದೂರಿತು ಪತ್ರಿಕೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತದ ನಾಯಕ ಹೇಳಿದ ಮಾತನ್ನೂ ಈ ಲೇಖನದಲ್ಲಿ ಉದ್ಧರಿಸಲಾಯಿತು; ಆತ್ಮ ಸಾಕ್ಷಿಯಿಲ್ಲದೆ ಬಿಳಿ ಕೋಟ್ (ಅಂಪೈರ್) ಧರಿಸಿದವರ ಮೇಲೆ ಒತ್ತಡ ಹೇರಲಾಯಿತಂತೆ.

“ಆಧುನಿಕ ತಂತ್ರಜ್ಞಾನ ಉಪಯೋಗಿಸಲು ಒಪ್ಪದಿರುವುದು ಪ್ರವಾಸಿಗಳು ಮಾಡಿದ ವಿಧ್ವಂಸಕ ಕೃತ್ಯ” ಎನ್ನುವ ಶೀರ್ಷಿಕೆಯಡಿ ಬಂದ ಉದ್ದನಾದ ಲೇಖನ ಟೀಕೆ ಮಾಡಬೇಕೆಂದೇ ಬರೆದಿದ್ದು. ಕ್ರೀಡೆಯಲ್ಲೇ ಆಗಲೀ, ಸಂಸ್ಕಾರದಲ್ಲೇ ಆಗಲೀ, ವಾಣಿಜ್ಯವಹಿವಾಹಿಟಿನಲ್ಲೇ ಆಗಲೀ ಭಾರತದ ಉನ್ನತಿ ವಿದೇಶೀಯರಿಗೆ ಜೀರ್ಣಿಸಿಕೊಳ್ಳಲಾಗದ ಬೆಳವಣಿಗೆ. ಹೀಗೆ ಅಜೀರ್ಣದಿಂದ ನರಳುವಾಗ ದೇಶವೊಂದು “ಮೊಟ್ಟೆ ದೋಸೆ” ( ಆಮ್ಲೆಟ್ ) ಆಗಿ ಕಾಣುತ್ತದೆ. ಪ್ರವಾಸಿಗಳು ಸೊಕ್ಕಿದವರಂತೆ ಕಾಣುತ್ತಾರೆ.

http://www.independent.co.uk/sport/cricket/james-lawton-arrogant-tourists-refusal-to-embrace-technology-was-nothing-short-of-sabotage-2318950.html

ಒಂದು ಬಾಷ್ಪಾಂಜಲಿ, ಶಾಂತಿ ದೂತನಿಗೆ

ಬ್ರಿಟನ್ ಮೂಲದ ಶಾಂತಿ ದೂತ ಬ್ರಯಾನ್ ಹಾವ್ ಇನ್ನಿಲ್ಲ. ಎರಡು ವರ್ಷಗಳ ಹಿಂದೆ ಬ್ರಯನ್ ಹಾವ್ ನನ್ನು ‘ಬ್ರಿಟಿಷ್ ಏಕಲವ್ಯ’ ಎನ್ನುವ ಶೀರ್ಷಿಕೆಯಡಿ ಒಂದು ಲೇಖನ ಬರೆದು ನನ್ನ ‘ಹಳೇ ಸೆತುವೆ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ದುರ್ದೈವ, ಈಗ ಅವನಿಗೆ ಶ್ರದ್ಧಾಂಜಲಿ ಹೇಳುವ ಸಮಯ.

ಬ್ರಿಟಿಷ್ ಸಂಸತ್ ಭವನದ ಎದುರು ಚಳಿ ಮಳೆಗೆ ಮೈಯ್ಯೊಡ್ಡಿ ಡೇರೆ ಯೊಳಗೆ ಬದುಕುತ್ತಾ ಆಫ್ಘನ್ ಗುಡ್ಡ ಗಾಡಿನ ಲ್ಲಿ ಮತ್ತು ಇರಾಕ್ ನಲ್ಲಿ ನಡೆದ ಮಾರಣ ಹೋಮ ದ ಬಗ್ಗೆ ವಿಶ್ವದ ಗಮನ ಸೆಳೆಯಲು ಪ್ರಯತ್ನ ಪಡುತ್ತಿದ್ದ ಧ್ವನಿ ನಿಸ್ತೇಜ ಈತನ ಸಾವಿನೊಂದಿಗೆ. ರಾಜಕಾರಣಿಗಳ ಬೆದರಿಕೆಗೆ, ಪೊಲೀಸರ ದಬ್ಬಾಳಿಕೆಗೆ ಸಡ್ಡು ಹೊಡೆದು ನಿಂತಿದ್ದ ಹಾವ್ ಕೊನೆಗೆ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಶರಣಾದ ಈ ತಿಂಗಳ ೧೮ ರಂದು. ಈತನ ಸಾವಿನೊಂದಿಗೆ ಬುಶ್ ಮತ್ತು ಬ್ಲೇರ್ ರಂಥ ಯುದ್ಧ ಕೋರರಿಗೆ ಒಸಾಮಾ ಸಾವಿನಿಂದಿಂದ ಸಿಕ್ಕ ‘closure’ ಭಾವ ಅಥವಾ ನಿರಾಳ ಭಾವ ಸಿಕ್ಕಿರಬಹುದು. ಲಂಚ ಸಮಾಜದ ಅವಿಭಾಜ್ಯ ಅಂಗ ಮಾತ್ರವಲ್ಲ ಅದೊಂದು ಮಾಮೂಲು ಧಂಧೆ ಎನ್ನುವ ಮಟ್ಟಕ್ಕೆ ಬಂದಾಗ ಅದರ ವಿರುದ್ಧ ಸೊಲ್ಲೆತ್ತಿದ ಸಿರಿವಂತ ಸಾಧು ರಾಮ್ ದೇವ್ ಮತ್ತು ಸಮಾಜ ಸೇವಕ ಅಣ್ಣಾ ಹಜಾರೆ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದಂತೆಯೇ ಈತನೂ ಸಹ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಬ್ರಯನ್ ಕೆಚ್ಚೆದೆಯ ವ್ಯಕ್ತಿ. ನಾವೆಂದೂ ಮಾಡಲಾಗದ, ಕೆಲಸವನ್ನೂ ಆತ ಮಾಡಿ ತೋರಿಸಿದ. ಸರಕಾರದಿಂದ, ವ್ಯವಸ್ಥೆಯಿಂದ ಪ್ರತಿರೋಧ ಎದುರಾದಾಗ ವೇಷ ಬದಲಿಸಿಕೊಂಡು ಕಾಲಿಗೆ ಬುದ್ಧಿ ಹೇಳುವ ಯತ್ನ ಮಾಡಲಿಲ್ಲ.

ಶಾಂತಿಯ ಪರಂಪರೆ ಹುಟ್ಟು ಹಾಕಿದ ಬ್ರಯನ್ ನಮಗೆಲ್ಲರಿಗೂ ಒಂದು ಪಾಠ. ಉರಿ ಬಿಸಿಲಿನಲ್ಲಿ ಒಂದು ಘಂಟೆ ನಿಂತು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸದ ನಾವು ಬ್ರಯನ್ ರೀತಿ ಹಗಲು ರಾತ್ರಿ ಪೂರ್ತಿ ಹತ್ತು ವರ್ಷಗಳ ಕಾಲ ಒಂದು ಕಡೆ ಡೇರೆ ಬಿಗಿದು ಕೂರಲು ಸಾಧ್ಯವೇ? ಅದರ ಮೇಲೆ ರಾಜಕಾರಣಿಗಳ ಕಟು ಟೀಕೆ. ಪೊಲೀಸರ ನಿರಂತರ ಒತ್ತಡ, ಡೇರೆ ಖಾಲಿ ಮಾಡಲು. ಒಮ್ಮೆ ಪೊಲೀಸರು ಬಂದು ಅವನು ಡೇರೆ ಹೊರಗೆ ಅಂಟಿಸಿದ್ದ ಕೈಬರಹದ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದರು. ಮರು ದಿನ ಶ್ರದ್ಧೆಯಿಂದ ಮತ್ತೆ ತಾನು ಬರೆಯಬೇಕಾದುದನ್ನು ಬರೆದು ನೇತು ಹಾಕಿದ ತಾನೇ ಬೀಡು ಬಿಟ್ಟಿದ್ದ ಠಿಕಾಣಿ ಹೊರಗೆ. ಈತನನ್ನು ಕೆಲವರು, ಧೀಮಂತ, ಶಾಂತಿ ದೂತ ಎಂದು ಕೊಂಡಾಡಿದರೆ ರಾಜಕಾರಣಿಗಳಿಗೆ ಈತ ಒಂದು nuisance. ಸಂಸತ್ ಭವನದ ಘನತೆಯನ್ನು ಗೌರವವನ್ನೂ ತನ್ನ ಭಿತ್ತಿ ಪತ್ರಗಳಿಂದ, ಬಾವುಟ, banner, placard, poster, teddy bears ಗಳಿಂದ ಹಾಳುಗೆಡವುತ್ತಿದ್ದಾನೆ ಎಂದು ದೂರು. ಈತ ಹಾಕಿದ್ದ ಡೇರೆ ಮತ್ತು ಅದರ ಸುತ್ತ ಮುತ್ತ ಅಂಟಿಸಿದ್ದ ಮುಗ್ಧ ಮಕ್ಕಳ, ಸ್ತ್ರೀಯರ ರೋದನದ ಚಿತ್ರಗಳು, ಭಿತ್ತಿ ಪತ್ರಗಳು ಸಂಸತ್ ವಲಯವನ್ನು ಕೊಳೆ ಗೇರಿಯಾಗಿ ಪರಿವರ್ತಿಸಿವೆ ಎಂದು ದೂರಿದ ರಾಜಕಾರಣಿಗೆ ಈ ವಿಷಯ ಹೊಳೆಯದೆ ಹೋಯಿತು ಸುಳ್ಳುಗಳನ್ನು ಹೆಣೆದು, ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ, ಕಾಲು ಕೆರೆದು ಯುದ್ಧಕ್ಕೆ ಹೋಗೋದು ಕೊಳೆಗೇರಿ ಎಬ್ಬಿಸುವುದಕ್ಕಿಂತ ಗಬ್ಬು ಕೆಲಸ ಎಂದು.

ಬ್ರಯನ್ ಹೀಗೆ ಹಗಲು ರಾತ್ರಿ ಎನ್ನದೆ ತನ್ನ ಕೌಟುಂಬಿಕ ಬದುಕನ್ನು ಬಿಟ್ಟು ವಿಶ್ವದ ಯಾವ್ಯಾವುದೋ ಮೂಲೆಯಲ್ಲಿ ನೆಲೆಸುವ ಜನರ ಮೇಲೆ ಈತನಿಗಿರುವ ಮರುಕ, ಕಾಳಜಿಗೆ ಆಸಕ್ತರಾಗಿ ಈತನೊಂದಿಗೆ ಮಾತಿಗೆ ನಿಲ್ಲುವವರ ಮೇಲೂ ಕೆಲವು ಜನರು ಹರಿಹಾಯ್ದಿದ್ದಿದೆ. ಈ ಜನ ಎಂಥವರೆಂದರೆ ಸರಕಾರ ಮಾಡುವುದು ತಪ್ಪು ಎಂದು ತೋರಿದರೂ ಪ್ರತಿಭಟಿಸಲು ಅವರಲ್ಲಿ ಬೇಕಾದ ಕಸುವು ಇರುವುದಿಲ್ಲ, ಅಥವಾ ವೇಳೆ ಇರೋಲ್ಲ. ಬೇರೆಯವ ಈ ಕಾರ್ಯವನ್ನ ಕೈಗೆತ್ತಿಕೊಂಡಾಗ ಭೀತಿ ಆವರಿಸಿಕೊಳ್ಳುತ್ತದೆ. ಆಗ ಬೈಗುಳಗಳ ಸುರಿಮಳೆ. ಸರಕಾರದ ಪರ ವಕಾಲತ್ತು. ಇಂಥ ಜನರ ಅಲ್ಪತನದಿಂದ ಈತ ಇನ್ನಷ್ಟು ಎತ್ತರಕ್ಕೆ ಬೆಳೆದನೆ ಹೊರತು ಈತನ ಕೆಚ್ಚನ್ನು ಕುಗ್ಗಿಸಲಿಲ್ಲ. ಕಟು ಮಾತುಗಳು. ಲಂಡನ್ನಿಗೆ ಬರುವ ಪ್ರವಾಸಿಗರಿಗೆ ಈತನ ಡೇರೆ ಒಂದು ಪ್ರಮುಖ ಆಕರ್ಷಣೆಯಾಗಿತ್ತು.

ಹೀಗೆ ಹೊರಗಿನವರ, ಸಂಘಟನೆಗಳ ವಶೀಲಿ ಬಾಜೀ ಇಲ್ಲದೆ ತೆರನಾದ ಸವಾಲುಗಳಿಗೆ ಧೃತಿಗೆಡದೆ ಸ್ಥೈರ್ಯದಿಂದ ತಾವು ನಂಬಿದ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಡುವ ಸಾಧಕರು ಅಲ್ಲಲ್ಲಿ ಕಾಣಲು ಸಿಗುತ್ತಾರೆ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಿದ ನಮ್ಮವರೇ ಆದ ವ್ಯಕ್ತಿಯೊಬ್ಬರ ಉದಾಹರಣೆ ಇದೆ. ಅವರೇ ‘ಹೊಟ್ಟೆ ಪಕ್ಷ’ ದ ರಂಗ ಸ್ವಾಮಿ.

ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಉಂಡದ್ದು ಸೋಲನ್ನೇ ಆದರೂ ಬಡವರಿಗೆ ಕಿಲೋ ಗ್ರಾಂ ಗೆ ಒಂದು ರೂಪಾಯಿ ಅಕ್ಕಿ ಕೊಡುವ ವಾಗ್ದಾನ ದ ಮೂಲಕ ಚುನಾವಣೆಗಳನ್ನು ಸೆಣಸುತ್ತಿದ್ದರು ಹೊಟ್ಟೆ ಪಕ್ಷದ ರಂಗ ಸ್ವಾಮಿ. ಚಿಕ್ಕಮಗಳೂರಿನಲ್ಲಿ ಇಂದಿರಾ ವಿರುದ್ಧವೂ ಸ್ಪರ್ದಿಸಿದ್ದ ರಂಗ ಸ್ವಾಮೀ ಬಹುಶಃ ತಾವು ಗೆಲ್ಲುವುದಿಲ್ಲ ಎನ್ನುವ ಸ್ಪಷ್ಟ ಅರಿವಿದ್ದೂ ಚುನಾವಣೆಯಲ್ಲಿ ಸ್ಪರ್ದೆಗೆ ಮುಂದಾಗುತ್ತಿದ್ದದ್ದು ಒಪ್ಪೊತ್ತಿನ ಅನ್ನಕ್ಕಾಗಿ ಬಡವರು ಪಡುವ ಬವಣೆ ಬಗ್ಗೆ ರಾಜಕಾರಣಿಗಳ ಮನ ಸೆಳೆಯುವ ಉದ್ದೇಶವೂ ಆಗಿರಬಹುದು. ಚುನಾವಣೆ ಪ್ರಚಾರಕ್ಕೆ ಇವರು ಬಂದಾಗ ಸೋಲುವುದು ಗ್ಯಾರಂಟಿಯಾದರೂ ಯಾಕಾದರೂ ಈತ ನಿಲ್ಲುತ್ತಾರೋ ಎಂದು ಜನ ಕನಿಕರ ಮತ್ತು ಅಪಹಾಸ್ಯದಿಂದ ಮಾತಾಡಿದರೆ ಇವರಿಗೆ ಅದರ ಪರಿವೆಯಿಲ್ಲ. ರಂಗ ಸ್ವಾಮೀ ನಿಧನರಾಗಿ ನಾಲ್ಕು ವರ್ಷಗಳಾ ದುವಂತೆ. ಆದರೆ ನನಗೆ ತಿಳಿದಿದ್ದು ಬ್ರಯನ್ ಹಾವ್ ತೀರಿ ಹೋದ ದಿನ.

ಒಂದು ಕಡೆ ಬುಶ್ ಮತ್ತು ಬ್ಲೇರ್ ರ ಸುಳ್ಳಿನಿಂದ ಪ್ರೇರಿತವಾದ ಸೈನ್ಯಗಳು ದಿನದ ೨೪ ಘಂಟೆಗಳ ಕಾಲ ನಿರಂತರ ಇರಾಕ್ ಆಫ್ಘಾನಿಸ್ತಾನ, ಮುಂತಾದ ದೇಶಗಳ ಮೇಲೆ ಬಾಂಬುಗಳ ಮಳೆಗರೆಯುತ್ತಿದ್ದರೆ ಈ ಕೃತ್ಯಗಳ ವಿರುದ್ಧ ಈತ ಪ್ರತಿರೋಧ ನಡೆಸಿದ ೧೦ ವರ್ಷ ಪೂರ್ತಿ. ಕ್ಯಾನ್ಸರ್ ರೋಗದ ಚಿಕಿತ್ಸೆಗೆಂದು ಜರ್ಮನಿ ದೇಶಕ್ಕೆ ಹೋದ ಬ್ರಯನ್ ಮರಳಿ ಬರದೆ ಡೇರೆ ಖಾಲಿಯಾಯಿತೆ ವಿನಃ ಅವನನ್ನು ಹೊರಹಾಕಲು ಬ್ರಿಟಿಶ್ ಸರಕಾರ ನಡೆಸಿದ ಎಲ್ಲ ಪ್ರಯತ್ನಗಳೂ (ನಮ್ಮ ದೇಶದ UPA ಸರಕಾರಕ್ಕೆ ಈತನ ಡೇರೆ ಖಾಲಿ ಮಾಡಿಸುವ ಕೆಲಸದ ಗುತ್ತಿಗೆ ನೀಡಿದ್ದರೆ ಏನಾಗುತ್ತಿತ್ತೋ ಊಹಿಸಿ) ವಿಫಲವಾದವು. ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷಿಯಿಲ್ಲದೆ ‘ಮೆಗಾ ಫೋನ್’ ಹಿಡಿದು ತನ್ನ ಕಸುಬನ್ನು ಅತೀ ಶ್ರದ್ಧೆಯಿಂದ ಮಾಡುತ್ತಿದ್ದ ಈ ‘ಬಡಗಿ’ ಗೆ ೨೦೦೭ ರಲ್ಲಿ ‘ಚಾನಲ್ ೪’ ಟೀವೀ ಸಂಸ್ಥೆ ‘ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಅವನನ್ನು ಆಯ್ಕೆ ಮಾಡಿದಾಗ ಹಿಗ್ಗಿದ ಬ್ರಯನ್ ತನಗೆ ಟೋನಿ ಬ್ಲೇರ್ ಮತ್ತು ಡೇವಿಡ್ ಕೆಮರೂನ್ ರಿಗಿಂತ ಹೆಚ್ಚು ಮತ ನೀಡಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಹರ್ಷದಿಂದ ಅಭಿನಂದನೆ ಸಲ್ಲಿಸಿದ. ಯುದ್ಧ ಕೋರ ನಾಯಕರ ಕೃತ್ಯಗಳ ಕಾರಣ ನೋವನ್ನನುಭವಿಸುವ ಜನರಿಗಾಗಿ ಏಕಾಂಗಿಯಾಗಿ ಹೋರಾಡಿದ ಬ್ರಯನ್ ವೈಯಕ್ತಿಕ ಜೀವನದಲ್ಲಿ ನೋವನ್ನೂ, ಹಿನ್ನಡೆಯನ್ನೂ ಕಂಡ. ೨೦೦೧ ರಲ್ಲಿ ಈ ಅಪರೂಪದ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಆರಂಬಿಸಿದ ಒಂದು ವರ್ಷದ ಒಳಗೆ ಈತನ ಪತ್ನಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದಳು. ವಿಚಲಿತನಾಗದ ಬ್ರಯನ್ ಹೇಳಿದ್ದು ನಾನು ನನ್ನ ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ, ಅವರು ದೂರವಾಗುವಂತೆ ಮಾಡಿದ್ದೂ ದುರುಳ ನಾಯಕರೆ ಎಂದು ಹಲುಬುತ್ತಾನೆ.

ಬ್ರಯನ್ ಗೆ ಏಳು ಜನ ಮಕ್ಕಳಿದ್ದರು.

ಅರ್ಧ ಘಂಟೆ, ಅರೆ ಬೆತ್ತಲೆ

ಗ್ರಂಥಾಲಯ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶತಮಾನಗಳಿಂದ ಸುಣ್ಣ ಬಣ್ಣ ಕಾಣದೆ ಶಿಥಿಲ ಗೊಂಡ, ಒಳ ಹೋದ ಕೂಡಲೇ ಗ್ರಂಥಪಾಲಕ ಎನ್ನುವ ನಿಸ್ತೇಜ, ಸುಸ್ತಾದ, ಹಗಲುಗನಸು ಕಾಣುತ್ತಾ ಕೂತ ವ್ಯಕ್ತಿಯ ದರ್ಶನ ಮತ್ತು ಪುಸ್ತಕಗಳ ಕವಟು ವಾಸನೆ. musty smell. ಯಾವುದೇ ರೀತಿಯಿಂದಲೂ inviting ಅಲ್ಲದ ಒಂದು ತಾಣ, ಗ್ರಂಥಾಲಯ. ಆದರೆ ಎಲ್ಲಾ ಗ್ರಂಥಾಲಯಗಳೂ ಹಾಗೆ ಆಗ ಬೇಕಿಂದಿಲ್ಲವಲ್ಲ?  ಮನುಷ್ಯ ಕ್ರಿಯೇಟಿವ್ ಜೀವಿ. ಕಸದಲ್ಲೂ ರಸ ತೆಗೆಯುವ ಸೃಜನಶೀಲ. ಹೀಗಿರುವಾಗ ಗ್ರಂಥಾಲಯ ಏಕೆ ತನ್ನ creativity ಪರಿಧಿಯಿಂದ ಹೊರಗುಳಿಯಬೇಕು ? ಕಸಿವಿಸಿಯಾಗುವ creativity ಆದರೇನಂತೆ, ಒಂದರ್ಧ ಘಂಟೆಯಾದರೂ ಕಸಿವಿಸಿ ಯನ್ನು ತಡೆಹಿಡಿಯೋಕೆ ಆಗೋಲ್ವೆ? ಅದೂ ವಾರದ ಒಂದೇ ದಿನ ರೀ, ಬುಧವಾರ, ಅದೂ ಅರ್ಧ ಘಂಟೆ ಮಾತ್ರ, ಅದೂ ಜನಜಂಗುಳಿ ತೂಕಡಿಸಲು ಇಷ್ಟಪಡುವ ಮಧ್ಯಾಹ್ನದ ಸಮಯ.  

ಇಂಗ್ಲೆಂಡಿನ ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳು ಒಂದು “ಬ್ರೇಕ್ ಫಾಸ್ಟ್ ಕ್ಲಬ್” ಅನ್ನೋ ಒಂದು ಗುಂಪನ್ನು ಕಟ್ಟಿ ಕೊಂಡಿದ್ದು ಇದಕ್ಕೆ ಸೇರಿದವರು ಬುಧವಾರದ ಮಧ್ಯಾಹ್ನದ ನಂತರ ಅರ್ಧ ಘಂಟೆಗಳ ಕಾಲ ಸಲ್ಮಾನ್ ಖಾನ್ ರಾಗಲು ಉತ್ಸುಕರಾಗುತ್ತಾರೆ. ಅರೆ ನಗ್ನ ಎಂದ ಕೂಡಲೇ ಈ ನಟನ ಹೆಸರೇ ಅಲ್ಲವೇ ಎಲ್ಲರಿಗೂ ಹೊಳೆಯೋದು; (ನನ್ನ ತಂಗಿಯ ಎರಡೂವರೆ ವರ್ಷದ ಪೋರ ‘ಅಹ್ಮದ್’ ತನ್ನ ಅಂಗಿ ಬಿಚ್ಚಿ ಸಲ್ಮಾನ್ ಖಾನ್ ಎಂದು ಬೀಗಿದ).

ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳ ಈ ತಿಕ್ಕಲುತನ ಸ್ವಲ್ಪ ಅತಿಯಾಗಿ ತೋರಿತು ಆಡಳಿತ ಮಂಡಳಿಗೆ. ಬೀದಿಯಲ್ಲಿ, ಬಸ್ಸುಗಳಲ್ಲಿ, ಕೆಫೆ ಗಳಲ್ಲಿ ಎಲ್ಲೆಂದರಲ್ಲಿ ನಗ್ನತೆ ನೋಡಿ, ನೋಡಿ ಬೇಸತ್ತಿದ್ದ ಅವರುಗಳಿಗೆ ಗ್ರಂಥಾಲಯವೂ ಪೆಡಂಭೂತವಾಗಿ ಕಾಡಿತು. ವಿದ್ಯಾರ್ಥಿಗಳಿಗೆ (ನಗ್ನಾರ್ಥಿ?) ಒಂದು ಸಂದೇಶ ಕಳಿಸಿದರು. ‘ಈ ಮೇಲ್’ ಸಂದೇಶ. ಕೂಡಲೇ ಮಾನವಾಗಿ ಬಟ್ಟೆ ತೊಟ್ಟುಕೊಂಡು ಬರುವುದು ಕ್ಷೇಮ, ನಿಮ್ಮ ಈ ನಗ್ನತೆ a piece of harmless fun ಆಗಿ ಕಂಡರೂ ಗ್ರಂಥಾಲಯಕ್ಕೆ ಬರುವ ಪುಸ್ತಕ ಪ್ರಿಯರಿಗೆ ನಿಮ್ಮೀ ನಡತೆ distraction ಆಗಿ ತೋರುತ್ತಿರೋದರಿಂದ ಕೂಡಲೇ ಈ ನಡವಳಿಕೆಗೆ ಪೂರ್ಣ ವಿರಾಮ ಹಾಕಬೇಕು ಎಂದು. ಈ ಧಮಕಿಗೆ ಕೆರಳಿ ವಿದ್ಯಾರ್ಥಿಗಳು ಪುಣ್ಯಕ್ಕೆ ಅರೆ ನಗ್ನರಲ್ಲ, ಗ್ರಹಚಾರಕ್ಕೆ ಪೂರ್ಣ ನಗ್ನಾರದಾರೋ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.

ಈ ಮೇಲೆ ಹೇಳಿದ ಗ್ರಂಥಾಲಯಕ್ಕೆ ಹೊರ ದೇಶಗಳ ನಾಯಕರೂ ಭೆಟ್ಟಿ ಕೊಡುತ್ತಾರಂತೆ. ಬಹುಶಃ ಇಟಲಿ ದೇಶದ ಪ್ರಧಾನಿ ಬೆರ್ಲಸ್ಕೊನಿ ಯಂಥ ನಾಯಕರಿಗೆ ವಿದ್ಯಾರ್ಥಿಗಳ ಈ ನಡತೆ ಕಸಿವಿಸಿ ತರದೇ ಕಚಗುಳಿ ತರ ಬಹುದೇನೋ?  

ಸರಿ, ಈ creativity ಗೆ ಸಿಕ್ಕ ಸ್ಫೂರ್ತಿಯಾದರೂ ಎಲ್ಲಿಂದ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರೋ? ಮೇಲಿನ ಚಿತ್ರದಲ್ಲಿ ಎಡ ಮೂಲೆಯಲ್ಲಿ ಪುಸ್ತಕದ ಶೆಲ್ಫ್ ಗಳನ್ನು ಕಾಯಲೆಂದು ನಿಲ್ಲಿಸಿರುವ ಪ್ರತಿಮೆ ಆಗಿರಲಿಕ್ಕಿಲ್ಲ ತಾನೇ ಸ್ಫೂರ್ತಿಯ ಉಗಮ?  

ಚಿತ್ರ ಕೃಪೆ: http://thequirkyglobe.blogspot.com/2011/06/wednesday-is-half-naked-day-at-library.html

ಬುರ್ಖಾ ನಿಷೇಧ

ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು ಜರಗುತ್ತಿದ್ದರೆ ಮತ್ತೊಂದು ಕಡೆ ತಾನು ಮಾನವಾಗಿ ತನ್ನ ಶರೀರವನ್ನು ಮುಚ್ಚಿಕೊಂಡು ಓಡಾಡುತ್ತೇನೆ ಎಂದು ಹೇಳುವ ಮಹಿಳೆಯರ ಮೇಲೆ ಸಮಾಜದ ದಿಗ್ಬಂಧನ, ಕಾನೂನು. ಫ್ರಾನ್ಸ್ ನ ಅಧ್ಯಕ್ಷ ಮಹಾಶಯನ ಲೈಂಗಿಕ ಚಟುವಟಿಕೆ ತಿಳಿದವರಿಗೆ ಅಲ್ಲಿನ ಸಂಸತ್ತಿನಲ್ಲಿ ಅವನಂಥ ಎಷ್ಟು ಸದಸ್ಯರು ತಮ್ಮ ಅಧ್ಯಕ್ಷನ ರೀತಿ ಹೆಣ್ಣನ್ನು ತಮ್ಮ ತೃಷೆಗಾಗಿ ಉಪಯೋಗಿಸಿಕೊಳ್ಳುತ್ತಿರಬಹುದು ಎಂದು ಯೋಚಿಸಿದರೆ ತಪ್ಪಿಲ್ಲ. ಇದೇ ನಡತೆಗೆಟ್ಟ ಗಂಡಸರು ಹೆಣ್ಣು ವಿವಸ್ತ್ರಳಾಗೋದನ್ನು ಬಯಸುತ್ತಾ ಮಾನವಾಗಿ ನಡೆಯಲಿಚ್ಚಿಸುವ ಮಹಿಳೆಯರ ಮೇಲೆ ಕಾನೂನಿನ ತೂಗುಗತ್ತಿಯನ್ನು ಇಳಿ ಬಿಡುತ್ತಾರೆ. ಇವರಿಗೆ ಮಹಿಳೆ ಮೈತುಂಬಾ ಹೊದ್ದು ಕೊಳ್ಳುವುದು ಗುಲಾಮಗಿರಿಯ ಸಂಕೇತ. ಶೋಷಣೆಯ ಹೆಗ್ಗುರುತು. ಹೆಣ್ಣು ಕನಿಷ್ಠ ಉಡುಗೆ ತೊಡುವುದು ultimate civilization.     

ಬೆತ್ತಲೆ, ಕನಿಷ್ಠ ಉಡುಗೆ ಇಷ್ಟ ಪಡುವ ವಿಶ್ವ. ದೊಡ್ಡ ಕೋಲಾಹಲವನ್ನೇ ಸೃಷ್ಟಿಸುತ್ತಿದೆ ಈ ಸುಮಾರು ಐದು ಮೀಟರು ಬಟ್ಟೆ. ಮೂರೂ ಬಿಟ್ಟು, ಕನಿಷ್ಠ ಉಡುಗೆ ತೊಟ್ಟು ತಮ್ಮ ಶರೀರ ದಾರಿಹೋಕರ ಕಣ್ಣುಗಳಿಗೆ ಎಂದು ಬಿಂಕದಿಂದ ನಡೆಯುವ ಉದಾರವಾದಿ ಮಹಿಳೆ ಮತ್ತು ಇಂಥ ಉಡುಗೆಗಳಲ್ಲಿ ಪರಸ್ತ್ರೀಯರನ್ನು ನೋಡಿ ನಾಲಗೆ ಚಪ್ಪರಿಸಿ ಸವಿಯುವ  ಪುರುಷರಿಗೆ ಈ ಬುರ್ಖಾ ಎನ್ನುವ ವಸ್ತ್ರ ಸಹ್ಯವಾದರೂ ಹೇಗಾದೀತು? ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ಹೆಣ್ಣನ್ನು ನಾನಾ ಬಗೆಯ  ಉಡುಗೆಗಳಲ್ಲಿ ಅತ್ತಿಂದಿತ್ತ ಓಡಾಡಿಸಿ ಕ್ಯಾಮೆರಾ ಕಣ್ಣುಗಳಿಂದ ಅವಳ ಉಬ್ಬು ತಗ್ಗುಗಳನ್ನು ವಿವಿಧ ಕೊನಗಳಲ್ಲಿ ಸೆರೆಹಿಡಿದು, ಅವಳ ಅಂಗ ಸೌಷ್ಟವದ ಅಳತೆ ತೆಗೆದು ತಾವು ಕಲ್ಪಿಸಿಕೊಂಡ ಮಾನ ದಂಡಕ್ಕೆ ಅವಳ ಅಳತೆಯಿದ್ದರೆ ಅವಳನ್ನು ವಿಶ್ವ ಸುಂದರಿ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ದ್ಯಾಟ್, ಮಿಸ್ ದಿಸ್ ಎಂದು ಪ್ರಶಸ್ತಿ ಕೊಟ್ಟು ನಗ್ನತೆಯನ್ನು, ಬಹಿರಂಗ ಸೌಂದರ್ಯವನ್ನು ಸನ್ಮಾನಿಸುವ, ಆದರಿಸುವ ಸಮಾಜಕ್ಕೆ ಖಂಡಿತವಾಗಿಯೂ ಪಥ್ಯವಲ್ಲ ಬುರ್ಖಾ. ಈ ರೀತಿಯ ಅಳತೆಗೆ ನಿಲುಕದ ಬಹುಪಾಲು ಮಹಿಳೆಯರು  ಕೀಳರಿಮೆಯಿಂದ ಬಳಲುತ್ತಿದ್ದರೆ ಅದೊಂದು ಸಮಸ್ಯೆ ಅಲ್ಲ ಇವರಿಗೆ. size and beauty obssessed ಸಮೂಹಕ್ಕೆ.

ಬುರ್ಖಾ ನಿಷೇಧಿಸುವಲ್ಲಿ  ಫ್ರಾನ್ಸ್ ಕಾನೂನನನ್ನು ಜಾರಿ ಗೊಳಿಸಿದಂತೆ ಇಂಗ್ಲೆಂಡ್ ಸಹಾ ಬುರ್ಖಾ ನಿಷೇಧ ಕಾನೂನನ್ನು ತರಬೇಕೆಂದು ಒತ್ತಾಯಿಸುತ್ತಿರುವ ಜನರು ಹೆಣ್ಣನ್ನು ಸೌಂದರ್ಯ  ಪ್ರಸಾಧನ ಉತ್ಪಾದಿಸುವವರ, ಕಾಮ ಪಿಪಾಸುಗಳ ಆಟಿಕೆಯಾಗಿ ಬಳಸಿಕೊಳ್ಳುತ್ತಾ ತಮ್ಮನ್ನು ತಾವು ನಾಗರೀಕರು ಎಂದು ಬೆನ್ನು ತಟ್ಟಿ ಕೊಳ್ಳುವವರ ದಾರ್ಷ್ಟ್ಯತನವನ್ನು ಮೆಚ್ಚಲೇ ಬೇಕು. ಬುರ್ಖಾ ಗುಲಾಮಗಿರಿಯ ಸಂಕೇತ, ಪುರುಷರ ಒತ್ತಾಯಕ್ಕೆ ಮಣಿದು ಮಹಿಳೆಯರು ಧರಿಸುತ್ತಾರೆ ಎಂದು ವಾದಿಸುವ ಸಮೂಹಕ್ಕೆ ಈ ಸತ್ಯದ ಅರಿವಾದದ್ದು ಯಾವಾಗಲೋ ಏನೋ? ಅವರಿಗೆ ಹೇಗೆ ಗೊತ್ತು ಇದು ಪುರುಷ ಹೇರಿದ ಕಟ್ಟಳೆ ಎಂದು? ಸ್ವಂತ ಇಷ್ಟದಿಂದ ಹಿಜಾಬ್ ಧರಿಸುವ ಮಹಿಳೆಯರನ್ನು ನಾನು ನೋಡಿದ್ದೇನೆ. ತನ್ನ ತಾಯಿ ಧರಿಸುವ ಹಿಜಾಬನ್ನು ನೋಡಿ ಪುಟ್ಟ ಮಗುವೂ ತಾಯಿಯನ್ನು ಅನುಕರಿಸಲು ನೋಡುತ್ತದೆ. ಹೊರಗೆ ಮಹಿಳೆಯರು ತಮಗಿಷ್ಟದ, ನವೀನ ಶೈಲಿಯ ಬಟ್ಟೆ ಧರಿಸಿ ಹೋಗುವುದನ್ನು ಕಂಡರೂ ಆ ಪುಟ್ಟ ಮಗುವಿಗೆ ತನ್ನ ತಾಯಿ ಧರಿಸುವ ಕಪ್ಪು ಬಣ್ಣದ ಬುರ್ಖಾ ಕರಾಳವಾಗಿ ಕಾಣೋದಿಲ್ಲ. ಇಲ್ಲಿ ಆ ಮುಗ್ಧ ಮಗು ಕಾಣೋದು ತನ್ನ ತಾಯಿಯ ನಾರ್ಮಲ್ ಉಡುಗೆ ಮಾತ್ರ. ಬುರ್ಖಾ ಪದ್ಧತಿ ಇಸ್ಲಾಮಿನ ನಿಯಮವೋ, ಕಟ್ಟಳೆಯೋ ಅಲ್ಲ. ಪವಿತ್ರ ಕುರಾನಿನಲ್ಲಿ ದೇವರು ನಿರ್ದೇಶಿಸಿದ್ದು ಹೆಣ್ಣು ಮತ್ತು ಗಂಡು ಮೈ ತುಂಬಾ ಉಡಲು. ಅಂಗ ಸೌಷ್ಟವ ಪ್ರದರ್ಶಿಸದಂತೆ ತಾಕೀತು. ಹೆಣ್ಣು ಗಂಡು ಇಬ್ಬರೂ ತಮ್ಮ ದೃಷ್ಟಿಗಳನ್ನು ಅನಾವಶ್ಯವಾಗಿ ಬೇಕೆಂದಲ್ಲಿ ಹರಿಬಿಡದೆ ನಡೆಯಲು ಅಪೇಕ್ಷೆ, ನೆಲ ನೋಡಿ ವಿನೀತರಾಗಿ ನಡೆಯಲು ಸೂಚನೆ. ಇವು ಮಾತ್ರ ಇರುವುದು ಕುರಾನಿನಲ್ಲಿ. ಬಟ್ಟೆ ಹೀಗೆ ಇರಬೇಕು, ಇಂಥ ಬಣ್ಣದ್ದೇ ಆಗಿರಬೇಕು ಎಂದು ಎಲ್ಲೂ ಹೇಳಿಲ್ಲ. ಹಾಗಿದ್ದರೆ ಬುರ್ಖಾ ಸಾರ್ವತ್ರಿಕವಾಗಿರುತ್ತಿತ್ತು. ವಿಶ್ವದ ಬಹುಪಾಲು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ದೂರದ ದೇಶಗಳ ಮಾತೇಕೆ ನಮ್ಮ ಪಕ್ಕದ ಕೇರಳದಲ್ಲೂ ಬಹುಪಾಲು ಮಹಿಳೆಯರು ಬುರ್ಖಾ ಧರಿಸುವುದಿಲ್ಲ. ಉದ್ದದ ತೋಳಿನ ರವಿಕೆ, ಮೈ ತುಂಬಾ ಸೀರೆ ಉಟ್ಟು ಕೊಳ್ಳುತ್ತಾರೆ. ಅಲ್ಲಿ ಯಾವ ಮುಲ್ಲಾ ಮಹಾಶಯರೂ ಫತ್ವಾ ಹೊರಡಿಸಲಿಲ್ಲ, ಕಪ್ಪು ಬಟ್ಟೆಯಿಂದ ಬಿಗಿದು ಕೊಳ್ಳಿ ನಿಮ್ಮ ಶರೀರವನ್ನು ಎಂದು. ಬುರ್ಖಾ ಒಂದು ಸಾಮಾಜಿಕ, ಸಾಂಸ್ಕೃತಿಕ ಉಡುಗೆ. ಸುಡಾನಿನ ಮಹಿಳೆಯರು ಸೀರೆ ಥರಾ ಕಾಣುವ  ಬಟ್ಟೆಯನ್ನು ಮೈ ತುಂಬಾ ಹೊದ್ದು ಕೊಳ್ಳುತ್ತಾರೆ. ಇರಾನಿನಲ್ಲಿ ಎಲ್ಲಾ  ಮಹಿಳೆಯರೂ ಧರಿಸುವುದಿಲ್ಲ. ಶೇಕಡಾ ೯೮ ಮುಸ್ಲಿಮರಿರುವ ತುರ್ಕಿ, ಟುನೀಸಿಯಾ ದೇಶಗಳ ಮಹಿಳೆಯರೂ ಸಹ ಬುರ್ಖಾ ಧಾರಿಗಳಲ್ಲ. ಅಲ್ಲಿ ಮುಲ್ಲಾಗಳ ಹಾವಳಿ ಇಲ್ಲ ಎಂದಲ್ಲ, ಆದರೆ ಇದೊಂದು ಧಾರ್ಮಿಕ ಉಡುಗೆ ಯಲ್ಲ ಎನ್ನುವ ಅರಿವಿರುವುದರಿಂದಲೇ ಅವರು ಅಲ್ಲಿನ ಮಹಿಳೆಯರ ಮೇಲೆ ಈ ವಸ್ತ್ರವನ್ನು ಹೇರದಿರುವುದು.

ಈ ಮೇಲಿನ ಮಾತಿಗೆ ಪುಷ್ಟಿಯಾಗಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿ ಸುತ್ತೇನೆ. ಪುರಾತನ ನಾಗರೀಕತೆಯ ತವರಾದ ಈಜಿಪ್ಟ್ ದೇಶ ಇಸ್ಲಾಂ ಧರ್ಮವನ್ನ ಅನುಸರಿಸುವ ದೇಶ. ಅಲ್ಲಿನ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯ ಅಲ್- ಅಜ್ಹರ್ ಸ್ಥಾಪಿತ ವಾಗಿದ್ದು ಕ್ರಿ. ಷ ೯೫೦ ರಲ್ಲಿ. ಅಲ್ಲಿನ “ರೆಕ್ಟರ್” ಆಗಿದ್ದ ಇತ್ತೀಚೆಗೆ ದಿವಂಗತರಾದ ಶೇಖ್ ತಂತಾವೀ. ಇವರು ಜಗದ್ವಿಖ್ಯಾತ ಮುಸ್ಲಿಂ ವಿಧ್ವಾಂಸ. ಅತ್ಯಂತ ಕ್ಲಿಷ್ಟ ಶರಿಯಾ ದ ಸಮಸ್ಯೆಗಳಿಗೆ ಮುಸ್ಲಿಂ ವಿಶ್ವ ಉತ್ತರ ಅರಸೋದು ಇವರಲ್ಲಿ. ಆರು ತಿಂಗಳ ಹಿಂದೆ ನಡೆದ ವಿಶ್ವ ವಿದ್ಯಾಲಯದ ಸಮಾರಂಭವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭಿಕರಲ್ಲಿ ಒಬ್ಬ ಹದಿ ಹರೆಯದ ಯುವತಿಯೊಬ್ಬಳು ಹಿಜಾಬ್ ಮಾತ್ರವಲ್ಲದೆ ಕಣ್ಣು ಮಾತ್ರ ಕಾಣುವಂಥ “ನಿಕಾಬ್” ಸಹ ಧರಿಸಿದ್ದಳು. ಭಾಷಣ ಮಾಡುತ್ತಿದ್ದ ತಂತಾವೀ ಯುವತಿಗೆ ಹೇಳಿದರು ಮುಖದ ಮೇಲಿನ ನಿಕಾಬ್ ತೆಗೆಯುವಂತೆ. ಆಕೆ ಒಪ್ಪಲಿಲ್ಲ. ಒತ್ತಾಯಿಸಿದಾಗ ಆಕೆ ಹೇಳಿದಳು ಇದು ನನ್ನ ಧಾರ್ಮಿಕ ಉಡುಗೆ, ನನ್ನ ಸ್ವಂತ ಇಷ್ಟದಿಂದ ಧರಿಸಿದ್ದು ಎಂದು. ಇದನ್ನು ಕೇಳಿ ಕುಪಿತರಾದ ತಂತಾವೀ ಹೇಳದರು, ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿರುವ ಈ ಸುಪ್ರಸಿದ್ಧ ವಿದ್ಯಾಲಯದ ಕುಲಪತಿಯಾದ ನನಗಿಂತ ನಿನಗೆ ಗೊತ್ತೋ ಇಸ್ಲಾಮಿನ ಉಡುಗೆ ಬಗ್ಗೆ? ನೀನು ಧರಿಸುತ್ತಿರುವ ಮುಖ ಮುಚ್ಚಿ ಕೊಳ್ಳುವ ನಿಕಾಬ್ ಇಸ್ಲಾಮಿನ ಕಾನೂನಲ್ಲ, ಅದೊಂದು ಸಾಮಾಜಿಕ ಉಡುಗೆ ಎಂದು ಹೇಳಿ ಆಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಅದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತು ಮುಸ್ಲಿಂ ಜಗತ್ತಿನಲ್ಲಿ, ವಿಶೇಷವಾಗಿ ಅರಬ್ ವಲಯಗಳಲ್ಲಿ. ಆಕೆ ಯಾರ ಬಲವಂತವೂ ಇಲ್ಲದೆ ತನ್ನ ಇಷ್ಟಾನುಸಾರ ಧರಿಸಿದ ವಸ್ತ್ರಕ್ಕೆ ಈ ವಿಧ್ವಾಂಸರ  ಆಕ್ಷೇಪವೇಕೆ ಎಂದು ಅವರನ್ನು ಟೀಕಿಸಲಾಯಿತು.

ಕುವೈತ್ ಅರಬ್ ಮುಸ್ಲಿಂ ರಾಷ್ಟ್ರ. ಅಲ್ಲಿನ ಸಂಸತ್ತಿನಲ್ಲಿ ಕೆಲವರು ಮಹಿಳಾ ಸದಸ್ಯೆಯರೂ ಇದ್ದಾರೆ. ಅವರಲ್ಲಿ ಇಬ್ಬರು ಸಂಸದೆಯರು ಹಿಜಾಬ್ ಧರಿಸುವುದಿಲ್ಲ. ಅರಬ್ ರಾಷ್ಟ್ರವಾದ ಮೇಲೆ ಧರ್ಮಗುರುಗಳ ವರ್ಚಸ್ಸು ಇಲ್ಲದ್ದಿಲ್ಲ, ಆದರೂ ಯಾವುದೇ ಧರ್ಮ ಗುರುವೂ ಇದುವರೆಗೆ ಆ ಸಂಸದೆಯರ ವಿರುದ್ಧ ಫತ್ವ ಹೊರಡಿಸಲಿಲ್ಲ.

ಮಧ್ಯ ಪ್ರಾಚ್ಯದ “ಜೋರ್ಡನ್” ದೇಶ ಪುರಾತನ ವಂಶಸ್ಥರ ರಾಜಮನೆತನ ಆಳುವ ದೇಶ. ಇಲ್ಲಿನ ರಾಜ ಅಬ್ದುಲ್ಲಾ ರ ಪತ್ನಿ “ರಾನಿಯಾ” ಹಿಜಾಬ ಧರಿಸುವುದಿಲ್ಲ. ಜೋರ್ಡನ್ ದೇಶದ ಧರ್ಮಗುರುಗಳು ಆಕೆಯ ವಿರುದ್ಧ ಫತ್ವ ಹೊರಡಿಸಲಿಲ್ಲ. ಜೋರ್ಡನ್ ದೇಶದ ರಾಣಿ ಮಾತು ದಿವಂಗತ ಬೆನಜೀರ್ ಭುಟ್ಟೋ ಹಿಜಾಬ್ ಧರಿಸದೆಯೂ ಮುಸ್ಲಿಮರಾಗಿರಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟು ಇಸ್ಲಾಂ ಯಾವ ರೀತಿ ಶಿಷ್ಟಾಚಾರ ಮತ್ತು ಆಧುನಿಕತೆಯೊಂದಿಗೆ ಹೆಜ್ಜೆ ಹಾಕಬಲ್ಲದು ಎಂದು ತೋರಿಸಿ ಕೊಟ್ಟ ಮುಸ್ಲಿಂ ಮಹಿಳೆಯರು.    

ಒಬ್ಬ ಮಹಿಳೆ ಹಿಜಾಬ್ ಧರಿಸಿದ ಮಾತ್ರಕ್ಕೆ ಪರಿಪೂರ್ಣ ಮುಸ್ಲಿಮಳಾಗುವುದಿಲ್ಲ. ಹಿಜಾಬ್ ಧರಿಸದೆಯೂ ಮುಸ್ಲಿಂ ಮಹಿಳೆ ತನ್ನ ಇಸ್ಲಾಮೀ ಸಂಸ್ಕೃತಿಯನ್ನು ಹೆಮ್ಮೆಯಿಂದ ಕೊಂಡಾಡಬಹುದು. ಆದರೆ ಆಕೆ ಏನನ್ನು ಧರಿಸಬೇಕು ಏನನ್ನು ಧರಿಸಬಾರದು ಎಂದು ನಿರ್ಧರಿಸುವ ಸಮಾಜ ಅವಳಿಗೂ ಅವಳದೇ ಆದ ಹಕ್ಕುಗಳಿವೆ, ಆ ಹಕ್ಕನ್ನು ಚಲಾಯಿಸಿಕೊಳ್ಳುವ ಅವಕಾಶವನ್ನೂ ಆಕೆಗೆ ನೀಡಬೇಕು ಎನ್ನುವುದನ್ನು ಮರೆಯಬಾರದು.    

ಇನ್ನು ಓರ್ವ ಮಹಿಳೆ ತನಗಿಷ್ಟವಾದ ಬಟ್ಟೆ ತೊಟ್ಟರೆ ಅವಳ ಸ್ವಾತಂತ್ರ್ಯಕ್ಕೆ ಹೇಗೆ ಅವಳು ಧರಿಸುವ ವಸ್ತ್ರ ಮುಳುವಾಗುತ್ತದೆ ಅನ್ನೋದೇ ಒಂದು ದೊಡ್ಡ ಒಗಟು.        

ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ತೋರಿಸುವ ಸಮಾಜ ಗಲಭೆ, ಜನಾಂಗ ಧ್ವೇಷ ಗಳಂಥ ಸಂದರ್ಭಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ರಾಜಾರೋಷ ಅತ್ಯಾಚಾರ ಕಣ್ಣಿಗೆ ಗೋಚರಿಸೋಲ್ಲ ಏಕೆಂದರೆ ತಮಗೆ ಎಲ್ಲಿ ಬೇಕು ಅಲ್ಲಿ ಮಾತ್ರ  ಕಣ್ಣುಗಳನ್ನು ತೆರೆಯುತ್ತಾರೆ, ಬೇಡದೆಡೆ ತಾತ್ಕಾಲಿಕ, ಕುರುಡನ್ನು ಪ್ರದರ್ಶಿಸುತ್ತಾರೆ.   

ಸ್ವಾತಂತ್ರ್ಯದ ಹರಣದ ಬಗ್ಗೆ ಮಾತನಾಡುವ ಜನರಿಗೆ ಈವಾನ್ ಗೊಎಥ್ ಹೇಳಿದ ಮಾತು ನೆನಪಿಗೆ ತರಬೇಕು; “ತಾವು ಎಲ್ಲರಿಗಿಂತ ಸ್ವತಂತ್ರರು ಎಂದು ಭಾವಿಸಿ ನಡೆಯುವ ಜನರಷ್ಟು ಗುಲಾಮಗಿರಿಯಲ್ಲಿ ಬಂಧಿಸಲ್ಪಟ್ಟವರು  ಬೇರಾರಿಲ್ಲ”.

“None are more hopelessly enslaved than those who falsely believe they are free.”
von Goethe

 

ಹಿಜಾಬ್ ವಿವಿಧ ಧರ್ಮಗಳಲ್ಲಿ: ಯಹೂದ್ಯರು ತಮ್ಮ ಮಹಿಳೆಯರು ಶರೀರವನ್ನು ಸಂಪೂರ್ಣವಾಗಿ ಮುಚ್ಚುವಂಥ ವಸ್ತ್ರ ಧರಿಸಲು ಉತ್ತೆಜಿಸುತ್ತಿದ್ದರು. ಕೂದಲನ್ನು ಪ್ರದರ್ಶಿಸಿ ನಡೆಯುವುದು ಅಪರಾಧ. ಉಚ್ಚ ಕುಲೀನ ಸ್ತ್ರೀಯರು ತಲೆಯ ಮೇಲೆ ಬಟ್ಟೆ ಧರಿಸುತ್ತಿದ್ದರು ಮತ್ತು ಸಮಾಜದ ಕೆಳಸ್ತರದ ಮಹಿಳೆಯರು ಪ್ರತಿಷ್ಠೆ ಗಾಗಿ ತಲೆ ಕೂದಲನ್ನು ಮುಚ್ಚುತ್ತಿದ್ದರು. ಯಹೂದ್ಯ ಸಮಾಜದಲ್ಲಿ ವೇಶ್ಯೆಯರು ತಲೆ ಕೂದಲನ್ನು ಮರೆ ಮಾಚುವಂತಿಲ್ಲ.

ಕ್ರೈಸ್ತ ಧರ್ಮದಲ್ಲಿ: ಸಂತ “ಪಾಲ್” ಹೊಸ ಒಡಂಬಡಿಕೆಯಲ್ಲಿ ಹೇಳಿದ್ದು ಹೀಗೆ: ಪ್ರತೀ ಗಂಡಿನ ತಲೆಯೂ ಕ್ರೈಸ್ತನದು ಮತ್ತು ಪ್ರತೀ ಹೆಣ್ಣಿನ ತಲೆ ಗಂಡಿನದು ಮತ್ತು ಕ್ರಿಸ್ತನ ತಲೆ ದೇವರದು. ಪ್ರತೀ ಹೆಣ್ಣು ತಲೆ ಕೂದಲನ್ನು ಮರೆ ಮಾಚಲೇ ಬೇಕು ಇಲ್ಲಾ ತಲೆ ಬೋಳಿಸಿ ಕೊಳ್ಳಬೇಕು. ಗಂಡು ತಲೆ ಕೂದಲನ್ನು ಮರೆಮಾಚೋ ಅಗತ್ಯ ಇಲ್ಲ ಏಕೆಂದರೆ ಗಂಡು ದೇವರ ಪ್ರತಿ ರೂಪ. ಆದರೆ ಹೆಣ್ಣು ಗಂಡಿನ ಗೌರವ, ಘನತೆ. ಕ್ರೈಸ್ತ ಧರ್ಮ ಗುರುಗಳ ಪ್ರಕಾರ ಹೆಣ್ಣು ತಲೆ ಕೂದಲನ್ನು ಮರೆಮಾಚುವುದು ಆಕೆ ಗಂಡಿಗೆ ಮತ್ತು ದೇವರಿಗೆ ವಿಧೇಯಳಾಗಿರಬೇಕಾದ ಕುರುಹು.  ಯಹೂದ್ಯ ಮತ್ತು ಕ್ರೈಸ್ತ ಧರ್ಮದಲ್ಲಿ ಹಿಜಾಬ್ ಗಂಡಿಗೆ ಮತ್ತು ಸಮಾಜಕ್ಕೆ ಹೆಣ್ಣು ವಿಧೇಯಳಾಗುವ ನಿಟ್ಟಿನಲ್ಲಿ ಆಗ್ರಹಿಸಿದರೆ, ಬಯಸಿದರೆ ಇಸ್ಲಾಮ್ ಹಿಜಾಬನ್ನು ಬಯಸಿದ್ದು ಹೆಣ್ಣಿನ ನಮ್ರ ನಡತೆಯನ್ನು ಉತ್ತೇಜಿಸಲು ಮತ್ತು ಪರಪುರುಷರ ಆಸಕ್ತ ಕಣ್ಣುಗಳಿಂದ ರಕ್ಷಿಸಿಕೊಳ್ಳಲು.      

 

ಕೆನಡಾದ ಕ್ವೀನ್ಸ್ ವಿಶ್ವ ವಿದ್ಯಾಲಯ ಹೊರಡಿಸಿದ ಒಂದು ಪತ್ರದಲ್ಲಿ ಈ ಆಘಾತಕಾರಿ ಅಂಶಗಳು ಒಳಗೊಂಡಿದ್ದವು.  ಪ್ರತೀ ೬ ನಿಮಿಷ ಗಳಿಗೊಮ್ಮೆ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ;

ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ.

ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಬಲಾತ್ಕಾರದ ಅಪಾಯಕ್ಕೆ ಸಿಲುಕಿರುತ್ತಾಳೆ.

ಪ್ರತೀ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಕಾಲೇಜು ವ್ಯಾಸಂಗದ ವೇಳೆ ಲೈಂಗಿಕ ಶೋಷಣೆಗೆ ಒಳಪತ್ತಿರುತ್ತಾಳೆ.

ಆಧುನಿಕ ವಿಶ್ವದಲ್ಲಿ ಆಧುನಿಕ ಮನೋಭಾವದ ವ್ಯಕ್ತಿಗಳು ತಮ್ಮ ಆಧುನಿಕತೆಗೆ ವಸ್ತ್ರ ವನ್ನು ಮಾನದಂಡ ವಾಗಿರಿಸ ಕೂಡದು. ಗಂಡು ಮುಚ್ಚಿದಷ್ಟೂ gentleman ಮತ್ತು ಹೆಣ್ಣು ತೆರೆದಷ್ಟೂ cultured lady. ಈ ಮಾನ ದಂಡವನ್ನು ಎಲ್ಲರ ಮೇಲೂ ಹೇರಕೂಡದು.

ವೈಯಕ್ತಿವಾಗಿ ನಾನು ನಿಕಾಬ್ ಅಭಿಮಾನಿಯಲ್ಲ. ಬುರ್ಖಾ ಧರಿಸದೆಯೂ ಹೆಣ್ಣು ತನ್ನ ಅಂಗ ಸೌಷ್ಠವ ಪ್ರದರ್ಶಿಸದೆ ಬದುಕಬಹುದು. ಇತ್ತೀಚೆಗೆ ವಿವಾಹಿತರಾದ ಮಹೇಂದ್ರ ಸಿಂಗ್ ಧೋನಿ ಯವರ ಪತ್ನಿ ತುಂಬು ತೋಳಿನ ( full sleeved) ಚೂಡಿದಾರ್ ಧರಿಸಿ ತಲೆಯ ಮೇಲೆ ದುಪಟ್ಟಾ ಹಾಕಿಕೊಂಡು ಅಭಿನಂದಿಸಲು ಬಂದ ಜನರನ್ನು ಸ್ವೀಕರಿಸಿದರು ಎಂದು ಯಾರೋ ಹೇಳಿದರು. ಇಲ್ಲಿ ಈ ನವವಿವಾಹಿತೆ ತನಗರಿವಿಲ್ಲದೆಯೇ ಇಸ್ಲಾಮೀ ಸಂಸ್ಕೃತಿಯ ಉಡುಗೆಗೆ ಮಾರು ಹೋಗಿರಬೇಕು.       

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಕೇಳಿದಳು ಯಾವುದರ ಬಗ್ಗೆ ಬರೆಯುತ್ತಿದ್ದೀರಿ ಎಂದು. ಯೂರೋಪಿನಲ್ಲಿ ಬುರ್ಖಾ ಬ್ಯಾನ್ ಮಾಡ್ತಾರಂತೆ, ಅದರ ಬಗ್ಗೆ ಬರೆಯುತ್ತಿದ್ದೇನೆ ಎಂದೆ. ಅರ್ಥವಾಗದೆ ಕೇಳಿದಳು, ಬುರ್ಖಾ ಬ್ಯಾನ್ ಮಾಡ್ತಾರ? ಏಕೆ? ಕಾರಣ ಏನು?

ಕಾರಣ ನನಗೂ ಗೊತ್ತಿಲ್ಲ. ಕೆಲವೊಮ್ಮೆ  ಸಿಂಪಲ್ ಪ್ರಶ್ನೆಗಳಿಗೆ ಸಿಂಪಲ್ ಉತ್ತರ not so simple.