ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?
ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ “ಕೃತಿ” ಗಳನ್ನು ಖಂಡಿಸೋಣ. ಆದರೆ ಹೇಗೆ? ಹುಸೇನರ ಕುಂಚ ತನ್ನ ಪಾತ್ರಗಳನ್ನು ವಿವಸ್ತ್ರಗೊಳಿಸಿ ಆತ ತನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವಂತೆ ಮಾಡಿದರೆ ಇದರ ಬಗ್ಗೆ ನಮ್ಮ ಲೇಖನಿಯನ್ನು (ಕೀಲಿಗಳನ್ನು) ಸಂಭ್ರಮದಿಂದ ಹರಿಬಿಟ್ಟು ನಾವೂ ವಿವಸ್ತ್ರರಾದೆವು. ನಮ್ಮ ಮಟ್ಟಿಗೆ ಹುಸೇನ್ ದೇಶ ಕಳೆದುಕೊಂಡರೂ ಆತನ ಮಟ್ಟಿಗೆ ದೇಶದ ಪರಿಕಲ್ಪನೆ ಅವನಿಗೆ ಇಲ್ಲವಂತೆ. ಆತನ ಅಥವಾ ಯಾವುದೇ ಕಲಾವಿದನ ರಾಜ್ಯ ಭೌಗೋಳಿಕ ಅಲ್ಲವಂತೆ. ಅವರದು ಕುಂಚದ ಸಾಮ್ರಾಜ್ಯ. ಅವರುಗಳು ಕುಂಚ ಮಾತೆಯ ಸುಪುತ್ರರು. ಅವರು ಗೀಚುವ ಗೆರೆಗಳೇ ಅವರ ಗಡಿ. ವ್ಯಾಪ್ತಿಯಿಲ್ಲದ ಸರಹದ್ದು. ಗಾಳಿ ಬಂದ ಕಡೆ ತೂರಿ ಕೊಳ್ಳುವ ಹಾಗೆ. ಕುಂಚ ತೋರಿದೆಡೆ ಪಯಣ. “ಕಾಯಾ, ವಾಚಾ, ಕುಂಚ” ಇವರ ಮಂತ್ರ.
ಹುಸೇನರ ಬಗ್ಗೆ ಟೀಕಿಸಿ ಬಂದ ವಾಕ್ಯ ರತ್ನಗಳನ್ನೂ, ವ್ಯಂಗ್ಯವನ್ನೂ ನೋಡಿದಾಗ ಸುಶಿಕ್ಷಿತ ಸಮಾಜಕ್ಕೆ ಇನ್ನಷ್ಟು ಶಿಕ್ಷಣದ ಅವಶ್ಯಕತೆ ಎದ್ದು ಕಾಣುತ್ತದೆ. ಇಲ್ಲಿ ನಮಗೆ ತೋಚಿದ ರೀತಿಯಲ್ಲಿ ಬರೆದು ನಾವು ಸಾಧಿಸಿದ್ದು ನಮ್ಮ ತಿಳುವಳಿಕೆಯ ಕೊರತೆಯ ಪ್ರದರ್ಶನ. ಈ ಮಾತನ್ನು ನಾನು ಹೇಳುತ್ತಿರುವ ಉದ್ದೇಶ ದಯಮಾಡಿ ಅರ್ಥ ಮಾಡಿಕೊಳ್ಳಿ. ನಾನು ಸೇರಿದ ಸಮಾಜ ಇಂಥ ವಿಷಯಗಳು ಬಂದಾಗ ಹದ್ದು ಮೀರಿ ಅಸಹನೆ ಮೆರೆದು, ಕಲ್ಲು ಹೊಡೆದು, ಅರಚಾಡಿ ತಮಗೆ ತೋಚಿದ ರೀತಿಯಲ್ಲಿ ಅಸಮಾಧಾನವನ್ನೂ ಕೋಪವನ್ನೂ ಪ್ರದರ್ಶಿಸಿತು. ಪರಿಣಾಮ? ದೊಡ್ಡ ನಾಮ. ಡೆನ್ಮಾರ್ಕಿನಿಂದ ಹಿಡಿದು ಶಿವಮೊಗ್ಗದವರೆಗೂ ನಮ್ಮ ಕಾಲು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂಗ್ಲೆಂಡಿನಿಂದ, ಇರಾನಿನವರೆಗೂ ನಾವು ನಗೆಪಾಟಲಿಗೀಡು. ಪವಿತ್ರ ಕುರಾನ್ “ಸಹನೆ, ಸಂಯಮ” ವನ್ನು ಜೀವನ ರೀತಿಯಾಗಿಸುವಂತೆ ಪದೇ, ಪದೇ ಹಲವು ಕಡೆಗಳಲ್ಲಿ ಸಾರಿದರೂ ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿರುವ ಸಮಾಜದ ಒಂದು negligible ಭಾಗ ಅಸಹನೆಯ ವಿಷವನ್ನು ಪಸರಿಸುತ್ತಾ ಸಾಗುತ್ತಿದೆ. (and verily whoso is patient and forgiveth, that verily is the steadfast heart of things 42-43) ಸಹನಾಮಯಿಗಳೂ, ಕ್ಷಮಾಶೀಲರೂ ಆದವರು ಸಮರ್ಪಕ ಕಾರ್ಯಗಳನ್ನೇ ಮಾಡುವರು. ಪವಿತ್ರ ಕುರಾನಿನ ಈ ಸೂಕ್ತಕ್ಕೂ ಧರ್ಮದ ಭಾರವನ್ನು ತಮ್ಮ ಮೆದುಳಿಲ್ಲದ, ಚಿಂತಿಸದ ತಲೆಯ ಮೇಲೆ ಹೊತ್ತು ಹೇಸಿಗೆಯ ವಾತಾವರಣವನ್ನು ಸೃಷ್ಟಿಸಿಕೊಂಡಿರುವ ಬೆರಳೆಣಿಕೆಯ ಜನರ ನಡವಳಿಕೆಗೂ ಇರುವ ವ್ಯತ್ಯಾಸ ನೋಡಿ. ಹುಸೇನರ ಕುರಿತ ಲೇಖನಕ್ಕೆ ಪ್ರತಿಕ್ರಿಯಾ ರೂಪದಲ್ಲಿ ಬಂದ ಮಹಾ ವಾಕ್ಯಗಳನ್ನು ಆಫ್ಘಾನಿಸ್ತಾನದ “ಪಷ್ತು” ಭಾಷೆಗೋ ಅಥವಾ ಕಂದಹಾರದ ಯಾವುದಾದರೂ ಭಾಷೆಗೋ ಅನುವಾದಿಸಿ ನೋಡಿ. ಕಣ್ಣಿನೆದುರು ಬಂದು ನಿಲ್ಲುವುದಿಲ್ಲವೇ ಮುಲ್ಲಾ ಉಮರನ, ಅವನಂಥವರ ಹೇಳಿಕೆಗಳು, ಹಾವ ಭಾವಗಳು? ಸರಿಯೋ ತಪ್ಪೋ? ಆವೇಶದಿಂದ ಬರೆದಾಗ ನಮ್ಮ ನಿಜ ವೇಷ ಸರ್ವವೇದ್ಯವಾಗಿ ಬಿಡುತ್ತೆ. ಹಾಗಾಗುವುದು ಬೇಡ. ನಮ್ಮ ನಂಬಿಕೆಗಳನ್ನು, ಆದರ್ಶಗಳನ್ನು ರಕ್ಷಿಸಲು ವೈಚಾರಿಕ ಮಾರ್ಗಗಳಿವೆ. ವಿಚಾರವಂತರು ಎಂದು ಬಿರುದು ಇಟ್ಟುಕೊಂಡು ನಮ್ಮ ಭಾವನೆಗಳೊಂದಿಗೆ ಚೆಲ್ಲುತನ ತೋರುವ ವಿಚಾರವಾದಿಗಳಿಗೆ ಒಳ್ಳೆಯ ಮಾತಿನಲ್ಲಿ ತಿಳಿ ಹೇಳೋಣ. ಅವರ ಸೃಷ್ಟಿ (ಅದೆಂಥದ್ದೇ ಮಹಾಕಾವ್ಯವಾಗಿರಲಿ, ಇತಿ”ಹಾಸ್ಯ”ವಾಗಿರಲಿ, ಚಿತ್ರವಾಗಿರಲಿ) ಕೀಳು ಅಭಿರುಚಿಯಿಂದ ಕೂಡಿದ್ದು ಎಂದು ಜನರಲ್ಲಿ ಅರಿವು ಮೂಡಿಸಿ ಅಂಥ ಕಲಾವಿದರಿಗೆ ಮಣೆ ಹಾಕುವುದರಿಂದ ಜನರನ್ನು ತಡೆಯೋಣ. ಆದರೆ ಎಲ್ಲವೂ ನಾಗರೀಕ ಶೈಲಿಯಲ್ಲಿ. ನಮ್ಮ ಮನೆ (charity begins at home), ಮತ್ತು ಶಿಕ್ಷಣ ಹೇಳಿಕೊಟ್ಟ ಮಾದರಿಯಲ್ಲಿ. ಕಾಲದ ಪರೀಕ್ಷೆ ಗೆದ್ದು ನಾವು ಉಳಿಸಿಕೊಂಡು ಬಂದ ಸಂಸ್ಕೃತಿಯ ರೀತಿಯಲ್ಲಿ. ಅಪನಂಬಿಕೆ, ಅಸಹನೆಯಿಂದ ರೋಸಿದ, ಬಳಲಿದ ವಿಶ್ವ ನಮ್ಮೆಡೆ ದೃಷ್ಟಿ ಬೀರುತ್ತಿದೆ…
Time tested value ಗಳಿಗಾಗಿ. let us not disappoint.