ಮುತ್ತು ಕೊಡುವವಳು ಬಂದಾಗ…

ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ, ಹೀಗಂತ ಲಾರಿ ಮೇಲೋ ಆಟೋ ರಿಕ್ಷಾ ಮೇಲೋ ಬರೆದಿದ್ದನ್ನು ಓದಿದ ನೆನಪು. ತಾಯಿ, ಅಮ್ಮ, ಮಾತೆ, ಮಾತೋಶ್ರೀ, ಅಬ್ಬೆ, ಹೆಸರುಗಳೆಷ್ಟೇ ಇರಲಿ ಅವರ ಪಾತ್ರ ಮಾತ್ರ ಯಾರಿಂದಲೂ ಅನುಕರಿಸಲು ಆಗದ ಮಾತು. ಎಲ್ಲಾ ಸಂಸ್ಕೃತಿಗಳೂ ಮಾತೆಯ ಹಿರಿಮೆಯನ್ನು ಕೊಂಡಾಡಿವೆ. ತಾಯಿಯನ್ನು ಪೂಜಿಸಿಯೂ ಇವೆ. ಆದರೂ ಆಗಾಗ ನಾವು ನೋಡುವುದು, ಕೇಳುವುದು ವ್ಯತಿರಿಕ್ತವಾದುದನ್ನೇ. ತಾಯಿಯನ್ನು ತೆಗಳುವುದು, ಹಲ್ಲೆ ಮಾಡುವುದು, ಮುಪ್ಪಿನಲ್ಲಿ ಆಕೆಯನ್ನು ನೋಡಿ ಕೊಳ್ಳದೆ ವೃದ್ಧಾಶ್ರಮಕ್ಕೆ ಅಟ್ಟಿ ಮಗುಮ್ಮಾಗಿ ಇದ್ದು ಬಿಡುವುದು, ಹೀಗೆ ಆಕೆಯ ಅವಗಣನೆ ಸಾಮಾನ್ಯ ದೃಶ್ಯವಾಗುತ್ತಿದೆ. ಇಸ್ಲಾಮಿನಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ ನೀಡಿ ಆಕೆಯನ್ನು ಚೆನ್ನಾಗಿ ನೋಡಿ ಕೊಳ್ಳುವುದು ಧರ್ಮದ ಒಂದು ಅಂಗವಾಗಿ ಪರಿಗಣಿಸಲಾಗಿದೆ. ಮಕ್ಕಳ ಸ್ವರ್ಗ ತಾಯಿಯ ಕಾಲಡಿ ಎಂದು ಪ್ರವಾದಿಗಳು ಹೇಳಿ ತಾಯಿಯ ಮಹತ್ವಕ್ಕೆ ಒಂದು ಮೆರುಗನ್ನೇ ನೀಡಿದರು.

ನಾಲ್ಕು ಮಕ್ಕಳನ್ನು ಹೆತ್ತ ತಾಯಿ ತನ್ನ ನಾಲ್ಕೂ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾಳೆ, ಆರೈಕೆ ಮಾಡುತ್ತಾಳೆ, ಅವರು ತಮ್ಮ ಕಾಲ ಮೇಲೆ ನಿಲ್ಲುವ ತನಕ ತಾನು ವಿಶ್ರಾಂತಿ ತೆಗೆದುಕೊಳ್ಳದೆ ದುಡಿಯುತ್ತಾಳೆ ಅವರ ಏಳಿಗೆಗಾಗಿ. ಆದರೆ ದೊಡ್ಡವರಾದ ಮೇಲೆ ಈ ನಾಲ್ಕೂ ಮಕ್ಕಳು ಸೇರಿ ಒಬ್ಬ ತಾಯಿಯನ್ನು ನೋಡಿ ಕೊಳ್ಳಲಾಗದೆ ಆಕೆಯನ್ನು ತ್ಯಜಿಸುತ್ತಾರೆ.

ನಮ್ಮನ್ನು ಹೆತ್ತು ಬೆಳೆಸಿ, ಪ್ರೀತಿಸಿ, ಪೋಷಿಸಿ, ನಮ್ಮನ್ನು ಯಾರ ಹಂಗಿಗೂ ಬಿಡದೆ ಸ್ವಾಭಿಮಾನಿಗಳಾಗಿ ಬದುಕಲು ಬೇಕಾದ ಬದುಕಿನ ಹೆದ್ದಾರಿ ಸೃಷ್ಟಿಸುವ ತಾಯಿಗೆ ಈ ಮಾತೆಯರ ದಿನದಂದು ಒಂದು ಆದರಪೂರ್ವಕ ನಮನ.

‘ವಾ’ ಎಂದರೆ ವಾರ್, ‘ಕಾ’ ಎಂದರೆ ಕಾರ್

ನಮ್ಮ ಕಂಪೆನಿಗೆ ಹೊಸತಾಗಿ ಅಮೆರಿಕೆಯವನೊಬ್ಬ ಸೇರಿಕೊಂಡ. ಈಗ ಇಬ್ಬರು ಅಮೆರಿಕನ್ನರು ನಮ್ಮೊಂದಿಗೆ. ಈತ ಕೊಲರಾಡೋ ರಾಜ್ಯದವ. ಪ್ರಥಮ ಬಾರಿಗೆ ಸೌದಿಗೆ ಬಂದಿದ್ದರಿಂದ  ಸ್ವಲ್ಪ ಈತನಿಗೆ ಆತಂಕ, ಗಾಭರಿ. ತನ್ನ ದೇಶದಲ್ಲಿ ಸೌದಿ ಮತ್ತು ಅರಬರ ಕುರಿತ ಮಾಧ್ಯಮಗಳ ಕಪೋಲಕಲ್ಪಿತ ವಾರ್ತೆಗಳನ್ನು ಕೇಳಿ ಅಭಿಪ್ರಾಯ ರೂಪಿಸಿಕೊಂಡ ಈತ ಸೌದಿಗೆ ಬರಲು ಧೈರ್ಯ ಮಾಡಿದ್ದೇ ದೊಡ್ದದೆನ್ನಬೇಕು. ಟಾಡ್ ಇಲಿಯಟ್ ಹೆಸರಿನ ಈತ ಟಿಪಿಕಲ್ ಅಮೆರಿಕನ್ನರ ಥರ ಸ್ಥೂಲಕಾಯಿ.

 

ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವವರ ಹೆಸರುಗಳು ಈತನಿಗೆ ಸ್ವಲ್ಪ ವಿಚಿತ್ರ. ರಾಬ್, ಬಾಬ್, ಜೇನ್, ಪೀಟರ್ ಮುಂತಾದ ಹೆಸರುಗಳ ಪರಿಚಯ ಮಾತ್ರ ಇರುವ ಇವನಿಗೆ ಇಲ್ಲಿನ ಹೆಸರುಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳುವ ಮಾತಿರಲಿ, ಉಚ್ಚರಿಸುವುದೂ ಕಷ್ಟ. ಒಂದು ಹೆಸರನ್ನು ಮಾತ್ರ ಅವನಿಗೆ ನಾನು ಚೆನ್ನಾಗಿ ಕಲಿಸಿದೆ. ನಮ್ಮ ರಿಯಾದ್ ಶಾಖೆಯಲ್ಲಿ ಕೆಲಸ ಮಾಡುವ ಒಬ್ಬನ ಹೆಸರು ಮುಹಮ್ಮದ್ ಅಲಿ. ಟಾಡ್ ನಿಗೆ ಹೇಳಿದಾಗ ಹೆಸರನ್ನು ಬರೆದು ಕೊಡು ಜ್ಞಾಪಕ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಎಂದ. ನಾನಂದೆ, ನಿನ್ನ ದೇಶದಲ್ಲಿ ಸುಪ್ರಸಿದ್ದ ಬಾಕ್ಸರ್ ಒಬ್ಬನಿದ್ದಾನಲ್ಲ, ಕಪ್ಪು ಜನಾಂಗದ ಪೈಕಿಯವ ಎಂದಾಗ ಒಹ್,  i know, he is muhammad ali. ಎಂದ. ನಾನಂದೆ ರಿಯಾದ್ ನವನ ಹೆಸರೂ ಇದೇ ಎಂದಾಗ, great, this is very easy for me, thank you, ಎಂದು ಮುಗುಳ್ನಕ್ಕ. ಹೆಸರನ್ನು ಈ ರೀತಿ ನೆನಪಿನಲ್ಲಿ ಇಟ್ಟು ಕೊಳ್ಳುವುದಕ್ಕೆ remembering names by association ಎನ್ನುತ್ತಾರೆ.

 

ನಿಮಗೆ ಗೊತ್ತಿರುವಂತೆ ಮಲಯಾಳೀಗಳು ಆಂಗ್ಲ ಭಾಷೆಯನ್ನೂ, ಹಿಂದಿ ಭಾಷೆಯನ್ನೂ, ಸ್ವಲ್ಪ different ಆಗಿ ಉಚ್ಚರಿಸುತ್ತಾರೆ. ಸ್ಕೂಲ್ ಗೆ, “ಸ್ಕೂಳ್”, ಲಾರಿ ಗೆ “ಳೋರಿ”, ಭಾರತ್ ಮಾತಾ ಗೆ, “ಭಾರದ್ ಮಾದಾ”, ಗೀತಾ ಗೆ “ಗೀದಾ” ಹೀಗೆ. ನಮ್ಮಲ್ಲಿರುವ ಮಲಯಾಳೀ ರಾಜ್ಯದವ “ಟಾಡ್” ನನ್ನು “ಟೋಡ್” ಎಂದು ಕರೆಯುತ್ತಿದ್ದ.  ಟೋಡ್ (toad) ಎಂದರೆ ಕಪ್ಪೆ ಅಲ್ಲವಾ? ಹೀಗೆಲ್ಲಾ pronounce ಮಾಡಿ ನಮ್ಮದು ಸರಿಯಾದ ಉಚ್ಛಾರ ಎನ್ನುತ್ತಾರೆ ಮಲಯಾಳೀಗಳು. ಶ್ರೀಲಂಕೆ ಯವರದೂ ಇದೇ ಕಥೆ. ಅವರು ಮಾತನ್ನಾಡುವ ಆಂಗ್ಲ ಭಾಷೆಗೆ ‘r’ ಉಚ್ಛಾರವಿಲ್ಲ. “ವಾರ್” ಗೆ ‘ವಾ’ ಎನ್ನುತ್ತಾರೆ, “ಕಾರ್” ಗೆ ‘ಕಾ’ ಎನ್ನುತ್ತಾರೆ. ‘r’ ಉಚ್ಚರಿಸದಿದ್ದರೆ ತಾವು ಅಮೆರಿಕನ್ನರೋ, ಬ್ರಿಟಿಷರೋ ಆಗಿಬಿಡುತ್ತೇವೆ ಎನ್ನುವ ಭ್ರಮೆಯೋ ಏನೋ.   

 

ಹೇಗೆ ನಡೀತಿದೆ ಹೊಸ ವರ್ಷ, (ಕಾಲು ಭಾಗ ಮುಗೀತು)

ಹೇಗೆ ನಡೀತಿದೆ ಹೊಸ ವರ್ಷ?

ನನ್ನ ಈ ವರ್ಷದ ರೆಸಲ್ಯೂಶನ್ ‘ಶಾರ್ಟ್ ಹ್ಯಾಂಡ್’ ಕಲೀಬೇಕೆಂತಲೋ, ಪರ್ವತಾರೋಹಣ ಮಾಡಬೇಕೆಂದೋ ಅಲ್ಲ. ನನ್ನ ಹಣಕಾಸಿನ ಹದಗೆಟ್ಟ ಪರಿಸ್ಥಿತಿಯ ಕಡೆ ಗಮನ ಇಡೋದು. ಅದು ಬಿಟ್ಟರೆ ನನ್ನ ನೈಕೀ ಶೂ ನಿಂದ ಧೂಳು ಕೆಡವಿ, ಶೂ ಒಳಗೆ ಜಿರಳೆ, ಚೇಳು ಏನಾದರೂ ಸೇರಿಕೊಂಡಿಲ್ಲ ಎಂದು ಖಾತ್ರಿ ಪಡಿಸಿಕೊಂಡು ರಸ್ತೆ ಹಿಟ್ ಮಾಡೋದು. ಒಂದು ಕಾಲದಲ್ಲಿ ಬೊಜ್ಜು ಧನಿಕರ ಲಕ್ಷಣ. ಈಗ ಅದು ಸೋಂಬೇರಿ ತನದ ದ್ಯೋತಕ. ಬದುಕಿನ ಬಗ್ಗೆ careless attititude ಎಂದು ಪರಿಗಣಿತ ಬೊಜ್ಜುಳ್ಳವ. ಆದರೆ ಈ ವ್ಯಾಯಾಮ ಎನ್ನುವುದಿದೆಯಲ್ಲ ಅದು ಮಾಮೂಲಿ ಕೆಲಸ ಅಲ್ಲ. ಜಾಗ್ ಮಾಡಲು ರಿಮೈಂಡ ಮಾಡೇ ಎಂದರೆ ಮನದನ್ನೆ ಹೇಳುತ್ತಾಳೆ, ಮಗನಿಗೆ ಹೋಂ ವರ್ಕ್ ಮಾಡು, ಮಗಳಿಗೆ ಸೋಫಾದ ಮೇಲೆ ಕೂತು ತಿನ್ನಬೇಡ ಎಂದು ರಿಮೈಂಡ ಮಾಡಿ ಆಯುಷ್ಯ ಸವೆಸುತ್ತಿರುವುದು ಸಾಲದು ಈಗ ನಿಮಗೂ ರಿಮೈಂದ್ ಮಾಡ ಬೇಕಾ ಓಡಲು  ಎಂದು ಮೂಗು ಮುರಿಯುತ್ತಾಳೆ.  ಹೋಗಲಿ ಜೊತೆಗೆ ಬಾ ಎಂದರೆ ಬರಲು ತಯಾರಿಲ್ಲ. ಅವಳ ಪ್ರಕಾರ ಖಾಲೆಸ್ಟ್ರಾಲು, ಬೀಪೀ, ಟ್ರೈ ಗ್ಲಿಸರೈಡ್, ಹಾಳೂ ಮೂಳೂ ಎಲ್ಲಾ ಗಂಡಸರಿಗೆ ಮಾತ್ರ, ಮಹಿಳೆಯರ ಹತ್ತಿರ ಸುಳಿಯೋದಿಲ್ಲ ಅಂತ. ಹೌದು, ನಾನೂ ಇಲ್ಲಿಯವರೆಗೂ ಹೆಚ್ಚಾಗಿ ಕೇಳಿರೋದು ಗಂಡಸರಿಗೇ ಈ ಅಟ್ಯಾಕು, ಸ್ಟ್ರೋಕು. ನೀವು ಕೇಳಿದ್ದೀರಾ, ಮಹಿಳೆಯರಿಗೆ ಇದು ತಗುಲಿರೋದು? ತೀರಾ ಇಲ್ಲ ಎಂದಲ್ಲ, ಆದರೆ ಅಪರೂಪ. ಹಾಗಾದರೆ ಅವರಿಗೆ ತಗಲೋ ರೋಗ ಯಾವುದು? ಛೀ, ನನ್ನ ಪ್ರಾಬ್ಲಂ ಅದಲ್ಲ. ನನ್ನ ಬೊಜ್ಜು ಮತ್ತು ನನ್ನ ಬೊಕ್ಕಸ. ಇವು ನನ್ನ ಪ್ರಾಬ್ಲಂಗಳು. ಇವೆರಡನ್ನ ಸರಿಯಾಗಿ ನೋಡಿಕೊಂಡರೆ ಬಾಳು ಸುಂದರ, trouble free, stroke free.  ಸರಿ ಜನವರಿ ಒಂದರಂದು ಶೂ ಕೊಡವಿ, ಒಳಗೇನೂ ಚೇಳು, ಹುಳು ಇಲ್ಲ ಎಂದು ಖಾತ್ರಿಪಡಿಸಿಕೊಂಡು ರಸ್ತೆ ಹಿಟ್ ಮಾಡಿದೆ. ಇಲ್ಲಿ ಸಾಮಾನ್ಯವಾಗಿ ಜಾಗ್, ವಾಕ್ ಮಾಡೋದು ರಾತ್ರಿ ಸಮಯ. ಮರುಭೂಮಿಯ ಹಗಲಿನ ಉಷ್ಣ ನಿಮಗೆ ಗೊತ್ತೇ ಇದೆಯಲ್ಲ. ಆ ಉಷ್ಣದಲ್ಲಿ ಜಾಗಿಂಗ್ ಮಾಡಿದರೆ ಜಾಗ್ ಮುಗಿಯುವ ಮೊದಲೇ ಮನುಷ್ಯ ಕರಗಿ ನೀರಾಗಿ ಚರಂಡಿ ಸೇರಿರುತ್ತಾನೆ. ಸಂಜೆಯಾದರೆ ವಾತಾವರಣ ಸ್ವಲ್ಪ ಮಾನವೀಯತೆ ತೋರಿಸಲು ಆರಂಭಿಸುತ್ತೆ. ಹಾಗಾಗಿ ಸಂಜೆ ಅಥವಾ ರಾತ್ರಿ ಪ್ರಶಸ್ತ. ಮನೆಯ ಹತ್ತಿರವೇ ಇರುವ ೮ ಲೇನುಗಳ ರಸ್ತೆಯ ಮಧ್ಯೆ ಖರ್ಜೂರದ ಸಾಲು ಮರಗಳ ನಡುವಿನ paved sidewalk ಮೇಲೆ ನನ್ನ ಹೊಸವರ್ಷದ ರೆಸಲ್ಯುಶನ್ ಸಾಕಾರಗೊಳಿಸಿದೆ. ಮನೆಯಿಂದ ಹೊರಡುವಾಗ ಎಷ್ಟು ದಿನ ಈ ಡ್ರಾಮ ಎಂದು ಕಣ್ಣಲ್ಲೇ ಕೇಳಿದ ಮಡದಿಗೆ smiley face ಕೊಟ್ಟು, ಬಾಬಾ, ಬರುವಾಗ strawberry juice ತಗೊಂಡ್ ಬಾ ಎಂದು ಅರಚಿದ ಮಗಳಿಗೆ ತರುತ್ತೇನೆ ಬಾಯ್ ಎಂದು ಹೇಳಿ ಮನೆಯಿಂದ ಹೊರಟೆ. ಆಹ್ಲಾದಕರ ಸಂಜೆ, ತುಂಬಾ ದಿನಗಳ ನಂತರ ನೋಡಿದ ನನ್ನನ್ನು ಖರ್ಜೂರದ ಮರಗಳು ದಿವ್ಯ ಅಸಡ್ಡೆ ತೋರಿಸಿದವು. ರಾತ್ರಿಯಾದ್ದರಿಂದ ಟ್ರಾಫಿಕ್ ಕಡಿಮೆ, ಹಾಗಾಗಿ ಪಡ್ಡೆ ಹುಡುಗರ ಭರ್ರೋ ಭರ್ರೋ ಎಂದು ೧೫೦ ಕಿ ಮೀ ವೇಗದ ಕಾರಿನ ರೇಸು. ಜನವರಿ ಒಂದಕ್ಕೆ ಆರಂಭವಾದ ನನ್ನ ಈ ವಾಕ್ ಈಗಲೂ ಮುಂದುವರೆದಿದೆ. ಶುಭ ಲಕ್ಷಣ.

ಮೊನ್ನೆ ಗುರುವಾರ ಕಮೆನಿಯಲ್ಲಿ get together. ಹಲವಾರು ಬಹುಮಾನಗಳನ್ನು ಇಟ್ಟಿರುತ್ತಾರೆ. ಗ್ಯಾಲಕ್ಸಿ ಟ್ಯಾಬ್ ಗಳು, ಮೊಬೈಲ್ ಫೋನ್ ಗಳು, ರಿಸ್ಟ್ ವಾಚ್ ಗಳು. ನಗದು ಬಹುಮಾನಗಳು… ಎಲ್ಲಾ ಉದ್ಯೋಗಿಗಳಿಗೂ ಸಿಗುವಂತೆ ಕಾಮನ್ ನಗದು ಬಹುಮಾನ ಸಹ ಇರುತ್ತದೆ. ತಲಾ ಒಬ್ಬೊಬ್ಬರಿಗೆ ೧೦ ಸಾವಿರ ಸಿಗುತ್ತದೆ ಕಾಮನ್ ಬಹುಮಾನ. ಆಟ ಓಟಗಳಲ್ಲಿ ಗೆದ್ದವರಿಗೆ ಬಹುಮಾನ. ಹೀಗೆ ಬಹುಮಾನಗಳ ಸುಗ್ಗಿ. ಸುಮಾರು get together ಗಳಲ್ಲಿ ಭಾಗವಹಿಸಿದ ನನಗೆ ದೊಡ್ಡ ರೀತಿಯ ಬಹುಮಾನ ಗಿಟ್ಟಿ ಲ್ಲ. ಗೆಲ್ಲುವ ಮುಸುಡಿ ನನ್ನದಲ್ಲ ಎಂದು ನನ್ನ ಒಳಮನ ಹೇಳುತ್ತದೆ. ಆದರೂ ಆಸೆ ಅನ್ನೋದು ಒಂದಿರುತ್ತಲ್ಲ. ಈ ಸಲದ ಬಂಪರ್ ನಗದು ಬಹುಮಾನ ಸುಮಾರು ಎಪ್ಪತ್ತು ಸಾವಿರ ಎಂದಾಗ ವಾವ್ ಎನ್ನುವ ಸ್ವರದೊಂದಿಗೆ ಜೊಳ್ಳೂ ಉದುರಿತು. ಊಟದ ನಂತರ  ಮಧ್ಯಾಹ್ನ ೨ ಕ್ಕೆ ಆರಂಭವಾದ ಚಟುವಟಿಕೆಗಳು ಮಧ್ಯ ರಾತ್ರಿ ಮೀರಿ ನಡೆದವು. ರಾತ್ರಿ ಒಂದು ಘಂಟೆಗೆ ಶುರು ನಗದು ಬಹುಮಾನಗಳ raffle. ಮೊಟ್ಟ ಮೊದಲ raffle ನಲ್ಲಿ ಹೆಸರು ಬಂದರೆ ಮೂರನೇ ಬಹುಮಾನ, ೨೮,೦೦೦ ರೂಪಾಯಿ. ಅದರ ನಂತರ ಬರುವ ಹೆಸರುಗಳಿಗೆ common prize. ಪಟ್ಟಿಯ ಅರ್ಧ ಹೆಸರುಗಳು ಮುಗಿದ ನಂತರ ಬರುವ ಮತ್ತೊಂದು ಹೆಸರಿಗೆ ೩೬,೦೦೦. ಅದರ ನಂತರ ಮತ್ತಷ್ಟು ಹೆಸರುಗಳು. ಎಲ್ಲ ಕಾಮನ್ ಬಹುಮಾನಗಳಿಗಾಗಿ. ಕೊನೆಯ ಬಂಪರ್ ಬಹುಮಾನಕ್ಕೆ ಇನ್ನೂ ಐದು ಹೆಸರುಗಳು ಉಳಿದು ಕೊಂಡವು. ಅವುಗಳಲ್ಲಿ ನನ್ನದೂ ಒಂದು. ಈಗ ಗೆಳೆಯರ ಬಳಗದಲ್ಲಿ ಗುಸು ಗುಸು. ನನ್ನ ಪತ್ನಿಯಂತೂ ಯಾವುದೆ excitement ತೋರಿಸದೆ ಸುಮ್ಮನೆ ಕುಳಿತಿದ್ದಳು, ನನಗೆ ಬರುವ ಚಾನ್ಸ್ ಇಲ್ಲ ಎಂದು. ನನಗಂತೂ ಒಂದು ರೀತಿಯ ಆತ್ಮ ವಿಶ್ವಾಸ. ಆತ್ಮ ವಿಶ್ವಾಸ ಹೊಂದಲು ಚಿಕ್ಕಾಸಿನ ಖರ್ಚಿಲ್ಲವಲ್ಲ. ನನಗೇ ತಗಲೋದು ಎನ್ನುವ ಫೋಸು. ಕೊನೆಗೆ ಮೂರು ಹೆಸರುಗಳು ಉಳಿದು ಕೊಂಡವು, ನನ್ನ ಹೆಸರೂ ಸೇರಿ. ಮತ್ತೊಂದು ಹೆಸರಿನ ಕೂಗೂ ಮುಗಿಯಿತು, ನಾನು ಬಚಾವ್. ಕೊನೆಗೆ ಎರಡು ಹೆಸರುಗಳು. ಹೆಸರು ಕೂಗುವ ನಮ್ಮ operations director ಸ್ವಲ್ಪ ಲವಲವಿಕೆಯವರು. ಬೇಗನೆ ಹೆಸರನ್ನು ಕೂಗೋಲ್ಲ. ನನ್ನ ಆತ್ಮ ವಿಶ್ವಾಸ ನಿಧಾನವಾಗಿ ಆವಿಯಾಗಿ ಹೋಗತೊಡಗಿತು. ಇಷ್ಟು ದೂರ ಬಂದ ನಾನು ಬಂಪರ್ ಪಡೆಯದೇ ಹೋದರೆ?   

ಮೆಲ್ಲಗೆ ನನ್ನ ಪತ್ನಿಯ ಕಡೆ ಕಣ್ಣು ಹೊರಳಿಸಿದೆ, ಮುದ್ದೆಯಾಗಿ ಕೂತವಳು ಸ್ವಲ್ಪ ಎಚ್ಚರವಾದಳು. ಗೆಲುವಿನ ವಾಸನೆ ಬಡಿದು ಶಾಪಿಂಗ್ ಲಿಸ್ಟ್ ಸುರು ಸುರುಳಿ ಯಾಗಿ ಅವಳ ಕಣ್ಣ ಮುಂದೆ ಹಾದು ಹೋಗಿರಬೇಕು. ನಾನು ನನ್ನ ಮೈ ಕೊಡವಿಕೊಂಡೆ, ಒಹ್, ಬಹುಮಾನ ಸಿಗದಿದ್ದರೇನಂತೆ, ನಾನೇನೂ ಅದಕ್ಕಾಗಿ ಹಣ ಹೂಡಿಲ್ಲವಲ್ಲ, ಎಂದು ಆವಿಯಾಗಿ ಮಾಯವಾಗುತ್ತಿದ್ದ ಆತ್ಮವಿಶಾಸವನ್ನು ಮತ್ತೊಮ್ಮೆ ಹಿಂದಕ್ಕೆ ಕರೆಸಿದೆ. ಒಂದಿಷ್ಟು ಕಾಲೆಳೆತ ಅದೂ ಇದೂ ಎಂದು ನಮ್ಮನ್ನು ಪರದಾಡಿಸಿ ಡಬ್ಬ ದೊಳಕ್ಕೆ ಕೈ ಬಿಟ್ಟರು ನತದೃಷ್ಟ ಹೆಸರನ್ನು ಕರೆಯಲು. ಸುರುಳಿ ಮಾಡಿ ಇಟ್ಟಿದ್ದ ಹೆಸರನ್ನು ಮೆಲ್ಲಗೆ ತೆರೆಯುತ್ತಾ ನನ್ನತ್ತ ನೋಟ ಹರಿಸಿದರು ಬಾಸ್. ನನ್ನ ಕತೆ ಮುಗಿಯಿತು ಎಂದು ನಾನಂದು ಕೊಳ್ಳುತ್ತಿದ್ದಂತೆ ಹೊರಬಂತು ಹೆಸರು ಅವರ ಬಾಯಿಂದ. ನತದೃಷ್ಟ ಹೆಸರು. ಪಾಪದ common ಬಹುಮಾನದ ವಾರೀಸುದಾರನ ಹೆಸರು. ಸಖೇದಾಶ್ಚರ್ಯ, ಆ ಹೆಸರು ನನ್ನದಾಗಿರಲಿಲ್ಲ. ನಾನು ಕೆಲಸ ಮಾಡುವ finance department ನಿಂದ ದೊಡ್ಡ ಕೂಗು, ನನಗೆ ಬಹುಮಾನ ಸಿಕ್ಕ ಖುಷಿಯಲ್ಲಿ. ನನ್ನ ಮಡದಿ ಅವಳ ಗೆಳತಿಗೆ ಇವತ್ತಿನ ಚಿನ್ನದ ರೇಟೇನೆಂದು ಕೇಳುತ್ತಿದ್ದ ಹಾಗೆ ಖುಷಿಯಿಂದ ಓಡಿದೆ ಬಹುಮಾನ ಪಡೆಯಲು. ಎಪ್ಪತ್ತು ಸಾವಿರ ಭರ್ತಿ.   

 

೨೪೪ ವರ್ಷಗಳ ಪರಂಪರೆಗೆ ಬಿತ್ತು ತೆರೆ

“ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ” ಇನ್ನಿಲ್ಲ. ೨೪೪ ವರ್ಷಗಳಿಂದ ಸತತವಾಗಿ ಪುಸ್ತಕ ಪ್ರಿಯರ ಫೇವರಿಟ್ ಆಗಿದ್ದ ಈ ವಿಶ್ವಕೋಶ ಆನ್ ಲೈನ್ ಆವೃತ್ತಿಯಾಗಿ ಮಾತ್ರ ಲಭ್ಯ. ನಮಗೆ ಬೇಕಾದ ವಿಷಯಗಳ, ಕುತೂಹಲದ ಬಗ್ಗೆ ಚಿತ್ರಗಳ ಸಮೇತ ವಿವರ ನೀಡುತ್ತಿದ್ದ ಈ ಗ್ರಂಥಶ್ರೇಣಿ ಆನ್ ಲೈನ್ ಧಾಳಿಗೆ ತುತ್ತಾಗಿ ಕೊನೆಯುಸಿರೆಳೆಯಿತು. ಈ ವಿಶ್ವ ಕೋಶ ವನ್ನು  ಸಾಮಾನ್ಯವಾಗಿ ಗ್ರಂಥಾಲಯಗಳಲ್ಲಿ ಅದಕ್ಕೆಂದೇ ಮಾಡಿಸಿದ ಗಾಜಿನ ಅಥವಾ ಮರದ ಬಾಕ್ಸ್ ನಲ್ಲಿ ಇಟ್ಟಿರುತ್ತಾರೆ. ಈ ಪುಸ್ತಕಗಳು ದುಬಾರಿ, ಏಕೆಂದರೆ ೩೨ ಗ್ರಂಥಗಳ ಈ ಶ್ರೇಣಿ ಆಧುನಿಕ ಪ್ರಿಂಟ್ ತಂತ್ರಜ್ಞಾನ ಉಪಯೋಗಿಸಿ ಕಲಾತ್ಮಕವಾಗಿಯೂ, ಸುಂದರವಾಗಿಯೂ ಓದುಗರ ಕೈ ಸೇರುತ್ತದೆ. ೧೭೬೮ ರಲ್ಲಿ ಬ್ರಿಟನ್ ದೇಶದ  edinburgh (ಉಚ್ಛಾರ, ಎಡಿನ್ ಬ್ರ ) ನಿಂದ ಪ್ರಕಾಶಿತವಾಗಲು ಆರಂಭಗೊಂಡ ಈ ವಿಶ್ವಕೋಶ ೨೪೪ ವರ್ಷಗಳ ಕಾಲ ವಿಶ್ವದಾದ್ಯಂತ ಮನ್ನಣೆ ಗಳಿಸಿಕೊಂಡಿತ್ತು. ನಮಗೆ ಸಿಗುವ ಸುದ್ದಿ ನಿಖರವಾದ್ದು ಎಂದು ಖಾತ್ರಿಯಾಗಬೇಕಿದ್ದರೆ ಅದು ಬೀ ಬೀ ಸೀ ಬಾಯಿಂದ ಬರಬೇಕು. ಅಷ್ಟೊಂದು ನಂಬುಗೆ ಇಟ್ಟುಕೊಂಡಿದ್ದ ಮಾಧ್ಯಮ ಬೀ ಬೀ ಸೀ. ಅದೇ ರೀತಿ ಈ ವಿಶ್ವಕೋಶದ ಬಗ್ಗೆಯೂ ಹೇಳಬಹುದು. ಕಲೆಯ ಬಗ್ಗೆಯಾಗಲೀ, ವೈಜ್ಞಾನಿಕ ವಿಷಯವೇ ಆಗಲೀ ಎಲ್ಲದಕ್ಕೂ “ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ” ದ್ದೇ ಕೊನೆಯ ಮಾತು.  

‘ವೆಬ್’ ಅನ್ನೋ ಹೆಬ್ಬಾವು ನಾವು ಪ್ರೀತಿಯಿಂದ ಸಾಕಿ ಕೊಂಡಿದ್ದವುಗಳನ್ನು ನುಂಗುತ್ತಾ ಬರುತ್ತಿದೆ. age old ಪೋಸ್ಟ್ ಹೋಗಿ “ಇ ಮೇಲ್”, ಜನರನ್ನು ಮುಖಾಮುಖಿ ಭೆಟ್ಟಿ ಯಾಗುತ್ತಿದ್ದ ಜಮಾನ ಹೋಗಿ ಫೇಸ್ ಬುಕ್, ಟ್ವಿಟರ್ ಮೂಲಕ ನಮ್ಮ ಸ್ಟೇಟಸ್ ಗಳ ವರದಿ, ಪತ್ರಿಕೆಗಳು ನಿಧಾನವಾಗಿ ಮಾಯವಾಗಿ ಆನ್ ಲೈನ್ ಆವೃತ್ತಿಗಳು. ಪುಸ್ತಕಗಳು ಮಾಯವಾಗಿ “ಇ ಪುಸ್ತಕ” ಗಳು…ಒಂದೇ, ಎರಡೇ? ಜೇಡನ ಮಾಯಾಜಾಲಕ್ಕೆ ಜನ ಸಿಲುಕಿ ಕೊಂಡರು. ಅತೀ ವೇಗದಲ್ಲಿ, ಸುಲಭವಾಗಿ ವಿಷಯ ತಿಳಿಯಲು ವೆಬ್ ಲೋಕ ಅನುವು ಮಾಡಿ ಕೊಟ್ಟಿತು.  ಆನ್ಲೈನ್ ಪ್ರಪಂಚದಲ್ಲಿ ನಮಗೆ ಬೇಕಾದ ವಿಷಯಗಳ ಬಗ್ಗೆ ತಿಳಿಯಲು ಯಾವುದೇ ದೊಡ್ಡ ದೊಡ್ಡ ಗ್ರಂಥದಲ್ಲಿ ಮುಖ ಹುದುಗಿಸಬೇಕಿಲ್ಲ. ಕೇವಲ ನಮ್ಮ ಬೆರಳ ತುದಿಗಳನ್ನು ಕೀಲಿ ಮಣೆ ಮೇಲೆ ಸವರಿದರೆ ಸಾಕು, ಅಲ್ಲಾವುದ್ದೀನನ ಮಾಂತ್ರಿಕ ದೀಪ ನಾಚಬೇಕು ಆ ರೀತಿ ಅನಾವರಣ ಗೊಳ್ಳುತ್ತದೆ ನಾವು ಬಯಸಿದ್ದು. ಇನ್ಸ್ಟಂಟ್ ಫುಡ್ ನಂತೆ ನಿಮಗೆ ವಿಷಯಗಳು ,ಮಾಹಿತಿಗಳು ಲಭ್ಯ; ಕೃಪೆ, ವಿಕಿಪೀಡಿಯಾ, ವೆಬ್ ಸೈಟುಗಳು, ಬ್ಲಾಗುಗಳು. ಇವೆಲ್ಲವೂ ಬೆರಳ ತುದಿಯ ಮೇಲೆ ನಿಂತಿರುವಾಗ ಯಾರಿಗೆ ಬೇಕು ಕಿಸೆಯೂ, ಕೈಗಳೂ ಹೊರಲಾರದ ಪುಸ್ತಕಗಳು?

ಪ್ರಪಂಚ ಬಹಳ ಫಾಸ್ಟ್ ಆಗಿ ಓಡುತ್ತಿದೆ. ನಾವ್ಯಾವುದನ್ನು ಹೊಸತು ಎಂದು ನಮ್ಮದನ್ನಾಗಿಸಿ ಕೊಳ್ಳುತ್ತೇವೆಯೋ ಅವು ಅಷ್ಟೇ ಫಾಸ್ಟ್ ಆಗಿ outdated ಆಗುತ್ತಿವೆ. ಆಂಟಿಕ್ ಆಗಿ ನಮ್ಮೊಂದಿಗೆ ಇರುವ ಕೆಲವು ವಸ್ತುಗಳಲ್ಲಿ ಬ್ರಿಟಾನಿಕ ವಿಶ್ವಕೋಶವೂ ಇದ್ದರೆ ಎಷ್ಟು ಚೆಂದ ಅಲ್ಲವೇ? ಭಾರತದಲ್ಲಿ ಸುಮಾರು ೬೫,೦೦೦ ರೂಪಾಯಿ ಗಳಿಗೆ ಈ ವಿಶ್ವಕೋಶ ಸಿಗುತ್ತದೆ. ನಾನು  ಗಂಭೀರವಾಗಿ ಯೋಚಿಸುತ್ತಿದ್ದೇನೆ ಒಂದನ್ನು ‘ಅಪ್ನಾ’ಯಿಸಲು. ಬ್ಯಾಂಕ್ ಏನಾದರೂ ಸಾಲ ಗೀಲ ಕೊಡಬಹುದೇ ? ಬಡ್ಡಿರಹಿತ ಸಾಲವನ್ನ ? ಅಂಥಾ ಸೌಲಭ್ಯವನ್ನೆನಾದರೂ ಬ್ಯಾಂಕೋ, ಸರಕಾರವೋ ಮಾಡಿದ್ದರೆ ನನಗೆ ‘ಜಾನ್ಕಾರಿ’ ಕೊಡಿ.

೧೮ ನೆ ಶತಮಾನದ ಒಂದು ಕನಸು, ೨೧ ನೆ ಶತಮಾನದಲ್ಲಿ ಅಂತ್ಯ. ಕಂಪ್ಯೂಟರ್ ಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಸಂಪ್ರದಾಯಿಕ ಕಾಗದದ ಕಥೆ ಮುಗಿಯಿತು, ಪೇಪರ್ ಲೆಸ್ ಯುಗ ಆರಂಭ ಎಂದು ಜನ ಪುಳಕಿತರಾದರು. ಕಾಗದದ ಪುಸ್ತಕ, ಎಷ್ಟೊಂದು selfless ನೋಡಿ. ಬ್ಯಾಟರಿ ಕೇಳೋಲ್ಲ, ವಿದ್ಯುಚ್ಛಕ್ತಿ ಯನ್ನು ಬೇಡೋಲ್ಲ, ಚಾರ್ಜರ್ ಬಯಸೋಲ್ಲ, ನೇಣು ಹಾಕಿ ಕೊಳ್ಳೋಲ್ಲ (hang), ಬಿದ್ದರೆ ಕಾಲು ಮುರಿದುಕೊಂಡು ಮೂಲೆ ಸೇರೋಲ್ಲ, ಆದರೂ ಇದನ್ನು ಮನುಷ್ಯ ನಿರ್ದಯವಾಗಿ ಮೂಲೆ ಗುಂಪು ಮಾಡುವತ್ತ ದಾಪುಗಾಲು ಹಾಕುತ್ತಿದ್ದಾನೆ.      

ಚಿತ್ರ ಕೃಪೆ: https://picasaweb.google.com/

 

ದಿಲ್ಲಿ ಗದ್ದುಗೆ ಸನಿಹ

ತಾಳ್ಮೆ ತಂದು ಕೊಳ್ಳಿ…ಇದು ಮುಲಾಯಂ ಸಿಂಗರ  ಸಮಾಜವಾದೀ ಪಕ್ಷ ಪ್ರಮುಖ ವಿರೋಧ ಪಕ್ಷ ಭಾ.ಜ.ಪ ಕ್ಕೆ ಹೇಳಿಕೊಟ್ಟ ಮಂತ್ರ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ ಸಮಾಜವಾದೀ ಪಕ್ಷ ದೊಡ್ಡ ದೊಡ್ಡ ಪಕ್ಷಗಳಿಗೆ ದೊಡ್ಡ ಆಘಾತವನ್ನೇ ನೀಡಿತು. ಉತ್ತರ ಪ್ರದೇಶ, ಉತ್ತರ್ ಖಾಂಡ್, ಪಂಜಾಬ್, ಗೋವಾ. ಸಿಕ್ಕಿಂ ರಾಜ್ಯಗಳಲ್ಲಿ ನಡೆದ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಭರವಸೆಯನ್ನೇನೂ ನೀಡಿಲ್ಲ. ಯುವರಾಜ ಎಂದೇ ಬಿರುದಾಂಕಿತರಾದ ರಾಹುಲ್ ಗಾಂಧಿಯವರ ವರ್ಚಸ್ಸು ಅಷ್ಟಾಗಿ ಕೆಲಸ ಮಾಡಿಲ್ಲ. ಇದೇ ಹಣೆ ಬರಹವೇ ಭಾಜಪ ದ್ದೂ ಸಹ. ಹಾಗಾಗಿ ಕಾಂಗ್ರೆಸ್ ಆಗಲೀ, ಭಾಜಪ ವಾಗಲೀ ಈಗಲೇ ಕೇಂದ್ರದ ಕುರ್ಚಿಯ ವಾಸನೆ ತಮ್ಮ ಮೂಗಿಗೆ ತಾಗಿಸಿ ಕೊಳ್ಳುವ ಆತುರ ತೋರಬೇಕಿಲ್ಲ. ಹಾಗೆಯೇ  ಭಾಜಪ ತನ್ನ ಪಕ್ಷದ outlook ಅನ್ನು drastic ಆಗಿ ಬದಲಿಸಿ ಕೊಳ್ಳುವ ಅಗತ್ಯವೂ ಸಹ ಇದೆ.

ನಮ್ಮ ದೇಶ ವಿಭಿನ್ನ ಸಂಸ್ಕೃತಿಗಳ ಬೀಡು. ಭಾರತೀಯ ಸಂಸ್ಕೃತಿ ಶ್ರೀಮಂತಗೊಂಡಿರುವುದು ಹಲವು ಸಂಸ್ಕಾರಗಳನ್ನು, ನಂಬಿಕೆಗಳನ್ನು ತನ್ನದು ಎಂದು ಒಪ್ಪಿಕೊಳ್ಳುವ ಔದಾರ್ಯದ ಕಾರಣ. ಇದನ್ನು ಗಮನದಲ್ಲಿಟ್ಟು ಕೊಂಡು ಎಲ್ಲರನ್ನೂ ಸೇರಿಸಿಕೊಂಡು ದೇಶ ಕಟ್ಟುವ ಸಂಕಲ್ಪ ಈ ಪಕ್ಷ ಮಾಡಿದರೆ ದಿಲ್ಲಿ ಗದ್ದುಗೆ ಸನಿಹ.

why do they hate us?

ಆಫ್ಘಾನಿಸ್ತಾನದಲ್ಲಿ ಅಮೆರಿಕೆಯ ಸೈನ್ಯ ದಿಂದ ಮತ್ತೊಂದು ಅತಿರೇಕ. ಕೆಲ ದಿನಗಳ ಹಿಂದೆ ಪವಿತ್ರ ಕುರ್’ಆನ್ ಗ್ರಂಥಗಳನ್ನು ಸುಟ್ಟು ಸುದ್ದಿ ಮಾಡಿದ ಅಮೆರಿಕನ್ನರು ಈಗ ಸಾಮೂಹಿಕ ಕಗ್ಗೊಲೆ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಕ್ಕಿ ಬಿದ್ದಿದ್ದಾರೆ. ಅಮೆರಿಕೆಯ ಸೈನಿಕನೊಬ್ಬ ತನ್ನ ಬ್ಯಾರಕ್ ನಿಂದ ಮಧ್ಯರಾತ್ರಿ ಎದ್ದು ಸಮೀಪದ ಗ್ರಾಮಕ್ಕೆ ನುಗ್ಗಿ ಮನೆಗಳಲ್ಲಿ ಮಲಗಿದ್ದ ಜನರ ಮೇಲೆ ಎರ್ರಾ ಬಿರ್ರಿ ಗುಂಡಿನ ಧಾಳಿ ನಡೆಸಿ ೧೬ ಜನರನ್ನು ಕೊಂದ. ಸತ್ತವರಲ್ಲಿ ೯ ಮಕ್ಕಳು ಸೇರಿದ್ದರು. ಈ ತೆರನಾದ senseless ಕೃತ್ಯಗಳು ಒಂದಲ್ಲ, ಎರಡಲ್ಲ, ನಮ್ಮ ಅರಿವಿಗೆ ಬಂದಿರುವುದು. ೨೦೦೬ ರಲ್ಲಿ ಇರಾಕಿನಲ್ಲಿ ೧೪ ವರ್ಷ ಪ್ರಾಯದ ಹುಡಗಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನೂ  ಆಕೆಯ ಇಡೀ ಕುಟುಂಬವನ್ನೂ ಅಮೆರಿಕೆಯ ಸೈನಿಕರು ಕೊಂದು ಹಾಕಿದ್ದರು.

ಈತ ಮಾನಸಿಕವಾಗಿ ಅಸ್ವಸ್ಥ ಎಂದು ಹೇಳಿ ಕೈ ತೊಳೆದು ಕೊಳ್ಳಲು ಅಮೇರಿಕಾ ನೋಡುತ್ತಿದೆ. ದೀರ್ಘಕಾಲದ ಮಿಲಿಟರಿ ಸೇವೆಯ ಕಾರಣ ಸೈನಿಕರು ಒತ್ತಡಕ್ಕೆ ಸಿಲುಕಿ ಕೊಳ್ಳುತ್ತಾರಂತೆ. ಇದನ್ನು ಆಂಗ್ಲ ಭಾಷೆಯಲ್ಲಿ PTSD ( post traumatic stress disorder ) ಎಂದು ಕರೆಯುತ್ತಾರೆ. ಆದರೆ ಈ ಸೈನಿಕ ptsd ಯಿಂದ ಬಳಲುತ್ತಿದ್ದನೆ ಎನ್ನುವುದು ಗೊತ್ತಿಲ್ಲ.  

ಅವಕಾಶ ಸಿಕ್ಕಾಗ ಯಾವುದಾದರೂ ದೇಶದೊಳಕ್ಕೆ ನುಗ್ಗುವುದು ಹೇಗೆ ಎಂದು ವಿಶ್ವದ ಸೂಪರ್ ಪವರ್ ಅಮೆರಿಕೆಗೆ ಯಾರೂ ಹೇಳಿ ಕೊಡಬೇಕಿಲ್ಲ. ಆದರೆ ನುಗ್ಗಿದ ನಂತರ ಅಲ್ಲಿನ ಜನರ ರೀತಿ ರಿವಾಜು, ಸಂಸ್ಕೃತಿ ಮುಂತಾದುವುಗಳ ಬಗ್ಗೆ ಸರಿಯಾಗಿ ಟ್ರೇನ್ ಮಾಡಲು ಜನರ ಅವಶ್ಯಕತೆ ಇದೆ ಎಂದು ಅಮೆರಿಕೆಯ ಸೈನ್ಯ ಎಸಗಿದ ಕೃತ್ಯಗಳು ಹೇಳುತ್ತವೆ.

ನನ್ನ ಅಮೆರಿಕೆಯ ಭೇಟಿ ವೇಳೆ ಕೆಲವು ಅಮೆರಿಕನ್ನರ ಭೇಟಿಯಾಯಿತು ರೆಸ್ಟುರಾಂಟ್ ಒಂದರಲ್ಲಿ. ಹೀಗೇ ಮಾತನಾಡುತ್ತಿದ್ದಾಗ ಅವರುಗಳು ಹೇಳಿದ್ದು,  we do so much to poor and needy countries in the world and why do they still hate us? ಇದಕ್ಕೆ ಉತ್ತರ ನನ್ನ ಬಳಿ ಇದ್ದರೂ ಹೇಳಲು ಸಾಧ್ಯವಾಗಲಿಲ್ಲ.  ಕಾರಣ ನಾನು ಅವರ ಅತಿಥಿ. ಅತಿಥಿ ನಲ್ನುಡಿಗಳನ್ನೇ ಆಡಬೇಕು, ಎಷ್ಟೇ ಕಷ್ಟವಾದರೂ.

ಜ್ಞಾಪಕ ಶಕ್ತಿ ಹೆಚ್ಚಲು…..

ಜ್ಞಾಪಕ ಶಕ್ತಿ ಹೆಚ್ಚಲು  ದಿನಕ್ಕೊಂದು ಲೋಟ ಹಾಲು ಕುಡಿಯಬೇಕಂತೆ. ಅಮೆರಿಕೆಯ ಮೇಯ್ನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ, ಅಥವಾ some-ಶೋಧನೆ. ಯಾವುದಾರೂ ಕಂಪೆನಿ, ಹಾಲಿನ ಕಂಪೆನಿಯೋ, ಚಾಕಲೇಟ್ ಕಂಪೆನಿಯೋ some thing ಕೊಟ್ಟರೆ ಅವರಿಗೆ ಇಷ್ಟವಾದ , ಅವರ ಉತ್ಪಾದನೆಗಳು ಮಾರಾಟವಾಗಲು ಸಹಾಯಕವಾಗುವ some-ಶೋಧನೆಗಳು ಲಭ್ಯ. ಇಲ್ಲಿ ಯಾರಾದರೂ ಈ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಹಾಲು ಕುಡಿಯಿರಿ, ಕುಡಿದರೆ ಒಳ್ಳೆಯದು ಎನ್ನವುದು ನಮ್ಮ ಭೂಮಿಯಷ್ಟೇ ಹಳತಾದ ಸತ್ಯ. ಅದಕ್ಕೆ ಅಲ್ಲವೇ ಮನುಷ್ಯನಿಂದ ಹಿಡಿದು ಮೃಗಗಳವರೆಗೂ ಭೂಮಿಗೆ ಉದುರಿದ ಕೂಡಲೇ ಭಗವಂತ ಹಾಲಿನ ಸರಬರಾಜನ್ನು  ಅಡೆತಡೆಯಿಲ್ಲದೆ ಮುಂದುವರೆಸಿರುವುದು?

ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತಂತೆ. ಎಲ್ಲರೂ ಕಿವಿ ನಿಮಿರಿಸಿ ಕೇಳುವ, ಕಣ್ಣರಳಿಸಿ ನೋಡುವ ವಿಷ್ಯ ಇದು. ವಾವ್, ನನ್ನ ಮಟ್ಟಿಗೆ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ ಕೊಳ್ಳುವುದಕ್ಕಿಂತ ಇಂಪಾರ್ಟೆಂಟ್ ಈ ಜ್ಞಾಪಕ ಶಕ್ತಿ ವರ್ಧನೆ. ಏಕೆಂದರೆ ಜ್ಞಾಪಕ ಶಕ್ತಿ ಇಲ್ಲ ಎಂದರೆ ಲೈಂಗಿಕ ಚಟುವಟಿಕೆ ನಡೆಸುವುದನ್ನು ಮರೆತು ಬಿಡುತ್ತೇವೆ. ಕೆಲವೊಮ್ಮೆ ಹಸಿವಿನಂತೆ ಲೈಂಗಿಕ ಬಯಕೆಗಳು spontaneous ಆಗಿ ಬಂದರೂ ಬದುಕಿನಲ್ಲಿ ಒಂದು ಸ್ಟೇಜ್ ಬರುತ್ತೆ ಜ್ಞಾಪಕ ಬಂದಾಗ ದೈಹಿಕ ಸುಖ ಪಡೆಯಬೇಕು ಎನ್ನುವ ಆಸೆ. ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚು, ೨೩ ರಿಂದ ೯೮ ವರ್ಷ ವಯಸ್ಸಿನ ಸುಮಾರು ೯೦೦ ‘ಎಳೆ’ಯರ ಮೇಲೆ ನಡೆಸಿದ ಸಂಶೋಧನೆಯಿಂದ ಕಂಡು ಕೊಂಡ ಅಂಶ ಇದು. ಆದರೆ ಈಗ ನಾವು ಸೇವಿಸುತ್ತಿರುವುದು – ಹಾಲಾಗಲೀ, ಸೊಪ್ಪಾಗಲೀ, ಮೊಟ್ಟೆಯಾಗಲೀ, ಮಾಂಸವಾಗಲೀ – ಆಹಾರಕ್ಕಿಂತ ಹೆಚ್ಚು ರಾಸಾಯನಿಕಗಳನ್ನು. ಗೊಬ್ಬರದಿಂದ ಶುರುವಾದ ಈ ರಾಸಾಯನಿಕಗಳ ಹಸ್ತಕ್ಷೇಪ ಸೇಬಿನ ಹಣ್ಣಿಗೆ ಮೆರುಗನ್ನು ನೀಡುವವರೆಗೆ ಬಂದು ತಲುಪಿದೆ. ತರಕಾರೀ, ಹಣ್ಣುಗಳು, ಮಾಂಸ ಇವುಗಳಿಗೆ ರಾಸಾಯನಿಕ ಸಿಂಪಡಿಸೀ, ಸಿಂಪಡಿಸೀ ಈಗ ಆಹಾರಕ್ಕೆ ಅಂಟಿಕೊಂಡ ರಸಾಯನಿಕಗಳನ್ನು ತೊಳೆದು ತೆಗೆಯಲು ಮತ್ತೊಂದು ರೀತಿಯ washing detergent ಬಂದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಅಲ್ಲವೇ?

ಈಗ ಮತ್ತೊಮ್ಮೆ ಹಾಲಿನ ವಿಷಯಕ್ಕೆ ಬರೋಣ. ಹಾಲು ಕುಡಿಯೋಣ, ಅದು ಹಾಲಿನ ಲಕ್ಷಣ ಹೊಂದಿದ್ದರೆ. ಅರ್ಥ? ನಮ್ಮ ದೇಶದಲ್ಲಿ ಸಿಗುವ ಹಾಲು ಹಾಲಲ್ವಂತೆ. ಅಂದ್ರೆ? ಅಂದ್ರೆ, ನಾವು ಕುಡಿಯೋ ಹಾಲಿಗೆ ಯೂರಿಯಾ, ಹಾಳೂ ಮೂಳೂ ಸೇರಿಸಿ ಕೊಡ್ತಾರಂತೆ. ಒಹ್, ಹಾಗಾದ್ರೆ ಹಾಲು ಕುಡಿದು ನಮ್ಮ ಜ್ಞಾಪಕ ಶಕ್ತಿ ವರ್ಧಿಸುವುದೂ ಬೇಡ, ಈಗ ಇರೋ ಶಕ್ತಿಯೇ ಸಾಕು ಎಂದು ಹಾಲಿಗೆ ಬೆನ್ನು ತಿರುಗಿಸಿದರೆ ಒಳ್ಳೆಯದು ಎಂದು ನನ್ನ ಒಪೀನಿಯನ್ನು.

ಒಂದು “ಲಾ” ಪ್ರಹಸನ

ಏನ್ ಲಾ…. ಏನಿಲ್ಲ ಕಣ್ಲಾ ; ಇದು ಮೊನ್ನೆ ಮೊನ್ನೆ ನಮ್ಮ ರಾಜ್ಯದಲ್ಲಿ ನಡೆದ ಗದ್ದಲದ ವಿಶ್ಲೇಷಣೆ ಮತ್ತು ಫಲಿತಾಂಶ. ಪತ್ರಕರ್ತರ, ವಕೀಲರ, ಪೊಲೀಸರ ಮಧ್ಯೆ ಜಗಳ ಕಂಡ ನಮ್ಮ ರಾಜ್ಯ ತನ್ನ ಅಪಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿತು. ರಂ. ಶ್ರೀ. ಮುಗಳಿಯವರ “ಎಂಥ ನಾಡಿದು, ಎಂಥ ಕಾಡಾಯಿತೋ” ಪರಿತಾಪಕ್ಕೆ ತಕ್ಕಂತೆ ನಡೆದು ಕೊಂಡಿತು ನಮ್ಮ ಪ್ರೀತಿಯ ರಾಜ್ಯ. ಆದರೆ ಈ ಲೇಖನ ಆ ಜಗಳದ ಬಗ್ಗೆ ಅಲ್ಲ. ಇದು ಸ್ವಲ್ಪ ಬೇರೆ ತೆರನಾದುದು. ಮರುಭೂಮಿಯ ಈ “ಲಾ” ನಮ್ಮ ಮೈ ಪರಚಿಕೊಳ್ಳುವಂತೆ ಮಾಡುತ್ತದೆ. ಅಸಹಾಯಕೆಯಿಂದ ಬಸವಳಿಯುವಂತೆ ಮಾಡುತ್ತದೆ. ಯಾವುದೋ ಒಂದು ಹಿಂದಿ ಚಿತ್ರದಲ್ಲಿ ಯಕಃಶ್ಚಿತ್ ಸೊಳ್ಳೆ ನಟ ನಾನಾ ಪಾಟೇಕರ್ ನನ್ನು ನಪುಂಸಕನನ್ನಾಗಿಸಿದಂತೆ; ಸಾಲಾ, ಏಕ್ ಮಚ್ಛರ್, ಆದ್ಮಿ ಕೋ ಹಿಜಡಾ ಬನಾ ದೇತಾ ಹೈ.    

ಅರೇಬಿಕ್ ಭಾಷೆಯ “ಲಾ” ಪದದ ಅರ್ಥ “NO” ಎಂದು. ಈ ಮಾತು ಅರಬ್ ನ ಬಾಯಿಂದ ಬಿತ್ತು ಎಂದರೆ ಅದನ್ನು ಸರಿ ಪಡಿಸಲು ಯಾರಿಂದಲೂ ಸುಲಭ ಸಾಧ್ಯವಲ್ಲ. ನಮ್ಮ ಸಂವಿಧಾನಕ್ಕೆ ತಿದ್ದುಪಡಿ ಬೇಕಾದರೂ ತರಬಹುದು ಈ ಲಾ ಗೆ ತಿದ್ದುಪಡಿ ತರೋದು ಅಸಾಧ್ಯ. ಬ್ಯಾಂಕಿನಲ್ಲಿ, ಪೊಲೀಸ್ ಪೇದೆಯ ಕಯ್ಯಲ್ಲಿ, ಕಸ್ಟಮ್ಸ್ ನಲ್ಲಿ, ಕಚೇರಿಯಲ್ಲಿ, ಎಲ್ಲಿ ಹೋದರೂ ಈ ಪದದ ರುಚಿ ಆಗುತ್ತಲೇ ಇರುತ್ತದೆ. ಮೊನ್ನೆ ನನ್ನ ಮಿತ್ರರೊಬ್ಬರಿಗೆ ಆದ ಅನುಭವ ಇದು.

ದುಬೈ ನಿಂದ ರಿಯಾದ್ ವಿಮಾನ ನಿಲ್ದಾಣಕ್ಕೆ ಇಳಿದು ಕಸ್ಟಮ್ಸ್ ಚೆಕ್ ಗಾಗಿ ಸರತಿಯಲ್ಲಿ ನಿಂತರು ನನ್ನ ಮಿತ್ರರು. ಅವರ ಮುಂದೆ ಫ್ರಾನ್ಸ್ ದೇಶದ ಸೂಟು ಬೂಟು ಧರಿಸಿದ ಬಿಳಿಯ ನಿಂತಿದ್ದ. ದುಬೈ ನಿಂದ ರಿಯಾದ್ transit ಆಗಿ ಪ್ಯಾರಿಸ್ ಹೋಗುವವನಿದ್ದ ಈ ಫ್ರೆಂಚ್ ಪ್ರಜೆ. ಕಸ್ಟಮ್ಸ್ ನಲ್ಲಿ ಅವನ ಸೂಟ್ ಕೇಸನ್ನು ಪರಿಶೀಲಿಸಿದಾಗ ದೊಡ್ಡ ಬಾಟಲಿಯೊಂದು ಅಧಿಕಾರಿಯ ಕಣ್ಣಿಗೆ ಬಿತ್ತು. ಬೆಲೆಬಾಳುವ ಬ್ರಾಂಡಿ ಬಾಟಲಿ. ಬಾಟಲಿಯನ್ನು ಕೈಯ್ಯಲ್ಲಿ ಹಿಡಿದು ಹೊರಳಿಸುತ್ತಾ ಹುಬ್ಬೇರಿಸಿದ ಕಸ್ಟಮ್ಸ್ ಆಫೀಸರ್. ಬಿಳಿಯ ಕಣ್ಣುಗಳನ್ನು ರೋಲ್ ಮಾಡುತ್ತಾ nonchalant ಆಗಿ ಭುಜ ಹಾರಿಸಿದ. clash of culture. ಒಬ್ಬನಿಗೆ ಮದ್ಯ ನಿಷಿದ್ಧ, ಎದುರು ನಿಂತವನಿಗೆ way of life. ಮದ್ಯ ನಮ್ಮ ದೇಶದಲ್ಲಿ ನಿಷಿದ್ಧ ಎಂದು ಆಫೀಸರ್ ಹೇಳಿದಾಗ ಬಿಳಿಯ ಹೇಳಿದ, ನನಗೆ ಗೊತ್ತು, ಆದರೆ ನಾನು ದುಬೈ ನಿಂದ ಬರುತ್ತಿದ್ದೇನೆ, ನನ್ನ ದೇಶಕ್ಕೆ ಹೋಗುವ ದಾರಿಯಲ್ಲಿ ರಿಯಾದ್ ನಲ್ಲಿ ಇಳಿದಿದ್ದೇನೆ ನನ್ನ ವಿಮಾನ ಹೊರಡುವ ತನಕ ಎಂದ. ಆಫೀಸರ್ ಹೇಳಿದ “ಲಾ”. ಬಿಳಿಯ ಹೇಳಿದ ನಾನು ನಿನ್ನ ದೇಶದಲ್ಲಿ ವಾಸಿಸಲೋ, ನೌಕರಿ ಮಾಡಲೋ ಬಂದಿಲ್ಲ, ಟ್ರಾನ್ಸಿಟ್ ಮೇಲೆ ಬಂದಿದ್ದೇನೆ ಎಂದು ವಾದಿಸಿದ. ಆಫೀಸರ್ ಮತ್ತೊಮ್ಮೆ ಗಿಳಿಯಂತೆ ಉಲಿದ “ಲಾ”. ಸಹನೆಯ ಎಲ್ಲೆ ಪರೀಕ್ಷಿಸುತ್ತಿದ್ದ ಆಫೀಸರ್ ನನ್ನು ದುರುಗುಟ್ಟಿ ನೋಡಿದ ಬಿಳಿಯ ಸರಿ, ಅದನ್ನು ನೀನೇ ಇಟ್ಟು ಕೋ, ನನ್ನನ್ನು ಹೋಗಲು ಬಿಡು ಎಂದ. ಅದಕ್ಕೂ ಬಂತು ಉತ್ತರ ‘ಲಾ’. “ನನ್ನ ಧರ್ಮದಲ್ಲಿ ನಾನು ಕುಡಿಯುವಂತಿಲ್ಲ” ಎಂದ ಆಫೀಸರ್. ಅದಕ್ಕೆ ಬಿಳಿಯ ಹೇಳಿದ ನಿನಗೆ ಏನು ಬೇಕೋ ಅದು ಮಾಡು, ಗಾರ್ಬೇಜ್ ಗೆ ಬೇಕಾದರೂ ಎಸೆ, ನನ್ನನ್ನು ಹೋಗಲು ಕೊಡು ಎಂದ ಹತಾಶೆಯಿಂದ. ಆಫೀಸರ್ ಹೇಳಿದ ‘ಲಾ’…..ನಾನು ಈ ಬಾಟಲಿಯನ್ನು ನನ್ನ ಹತ್ತಿರ ಇಟ್ಟುಕೊಂಡು ನಿನ್ನನ್ನು ಕಳಿಸಿದರೆ ನಾನದನ್ನು ಕುಡಿಯುತ್ತೇನೆ ಎಂದು ನೀನು ತಿಳಿಯಬಹುದು. ಪರಚಿಕೊಳ್ಳುತ್ತಾ  ಬಿಳಿಯ ಕೇಳಿದ ನಾನೀಗ ಏನು ಮಾಡಬೇಕು…………? ಆಫೀಸರ್ ಹೇಳಿದ ನೀನು ನನ್ನ ಜೊತೆ ಬರಬೇಕು. ಎಲ್ಲಿಗೆ ಎಂದ ಬಿಳಿಯ. ಟಾಯ್ಲೆಟ್ಟಿಗೆ ಎಂದು ಹೇಳುತ್ತಾ ಟಾಯ್ಲೆಟ್ ಕಡೆ ನಡೆದ ಆಫೀಸರ್. ಬೇರೆ ದಾರಿ ಕಾಣದೇ ಬಿಳಿಯ ಅವನನ್ನು ಹಿಂಬಾಲಿಸಿದ. ಸಾರಾಯಿ ಬಾಟಲಿಯ ಕಾರ್ಕ್ ತೆಗೆದು ಗಟ ಗಟ, ಗಟ ಗಟ ಎಂದು ಆಫೀಸರ್ ಟಾಯ್ಲೆಟ್ ಗುಂಡಿಯ ಗಂಟಲಿಗೆ ಸುರಿದ ಮದ್ಯ. ಬರಿದಾದ ಬಾಟಲಿಯನ್ನು ನುಚ್ಚು ನೂರು ಮಾಡಿ ಅವನ ಕಡೆಗೆ ಒಂದು ಮಂದಹಾಸ ಬೀರಿ ನಡೆದ. ಕ್ಷಣ ಕಾಲ ದಂಗಾಗಿ ನಿಂತು, ಸಾವರಿಸಿಕೊಂಡು ತನ್ನ ಸಾಮಾನುಗಳನ್ನು ಸೂಟ್ ಕೇಸಿನಲ್ಲಿ ತುಂಬಿಸಿ ಕೊಂಡು ಜಾಗ ಖಾಲಿ ಮಾಡಿದ ನತದೃಷ್ಟ ಫ್ರೆಂಚ್ ಪ್ರಜೆ.

ಚಿತ್ರ ಏನು?: ಚಿತ್ರದಲ್ಲಿರುವುದು “ಲಾ” ಕಾರದ ಕಲಿಗ್ರಫಿ (caligraphy) ರೂಪ. ಕಲಿಗ್ರಫಿ ಎಂದರೆ ಸುಂದರ ಬರಹ ಅಂತ. ಅರೇಬಿಕ್ ಭಾಷೆ cursive ಆಗಿರುವುದರ ಕಾರಣ ಕಲಾತ್ಮಕವಾಗಿ  ಹೇಗೆ ಬೇಕಾದರೂ, ಯಾವ ರೂಪದಲ್ಲೂ ಬರೆಯಬಹುದು. ಇದೊಂದು ಜನಪ್ರಿಯ ಕಲೆ. ಕಲಿಗ್ರಫಿ ಗಾಗಿ ವಿಶೇಷ ಪೆನ್ನುಗಳು ಬೇಕಾಗುತ್ತವೆ, ಅದರೊಂದಿಗೆ ಕಲಾವಂತಿಕೆ ಮತ್ತು ಸಂಯಮ ಕೂಡಾ. 

ಚಿತ್ರ ಕೃಪೆ: http://www.oweis.com

ಸಂತೃಪ್ತ ಹೆಣ್ಣು ಗಂಡಿಗೆ ಇಷ್ಟ, ಕೋಪಗ್ರಸ್ಥ ಗಂಡು ಹೆಣ್ಣಿಗೆ ಇಷ್ಟ….

ತನ್ನ ಪತ್ನಿ ಅಥವಾ ಪ್ರೇಯಸಿ ಸಂತೃಪ್ತಳಾಗಿದ್ದರೆ ಅದು ಗಂಡಿಗೆ ಸಂತಸ ತರುತ್ತದಂತೆ. ಅದೇ ಸಮಯ ಕೋಪಗ್ರಸ್ಥ, ಚಿಂತಿತ ಪತಿ ಅಥವಾ ಪ್ರಿಯಕರ ಹೆಣ್ಣಿಗೆ ಇಷ್ಟವಂತೆ. ಇದ್ಯಾವ ಸೀಮೆಯ ಗುಣ ಕಣಯ್ಯಾ ಎಂದಿರಾ? ೧೫೬ ಹೆಣ್ಣು ಗಂಡು ಜೋಡಿಗಳ ಮೇಲೆ ನಡೆದ ಅಧ್ಯಯನ ಈ ಅಂಶವನ್ನು ಬೆಳಕಿಗೆ ತಂದಿದೆ. ಇದು NPR ರೇಡಿಯೋ ದ ವೆಬ್ ತಾಣದಲ್ಲಿ ಸಿಕ್ಕ ಸುದ್ದಿ. ಇರಲಿ ಬಿಡಿ ಅವರು ಚೆನ್ನಾಗಿದ್ದರೆ ಸಾಕು, ನಮ್ಮ ಬದುಕು ಸಾರ್ಥಕ ಎಂದು ನಿರುಮ್ಮಳವಾಗಿ ಇರಬೇಡಿ. ಇದನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು. ಈ ಸ್ಯಾಡಿಸ್ಟ್ ಮನೋಭಾವ ಮನೆಯ ಅಥವಾ ಪಾರ್ಕಿನ (ಪ್ರೇಯಸಿ ನ ಕಾಣೋದು ಪಾರ್ಕನಲ್ಲಿ ತಾನೇ?) ಹೊಸ್ತಿಲು ದಾಟಿ ಒಳಗೆ ಬರೋದು ಬೇಡ. ನಾವು ತೊಳಲಾಡುವಾಗ, ನಮ್ಮ ತೊಳಲಾಟ ಇವರಿಗೇಕೆ orgasmic pleasure ಕೊಡುತ್ತೋ? ನೋಡಿ, ಅಧ್ಯಯನ ಅಷ್ಟೇನೂ ಸ್ಪಷ್ಟವಾಗಿ ಹೇಳ್ತಾ ಇಲ್ಲ ಈ ಖಾಯಿಲೆ ಬಗ್ಗೆ. ನನ್ನ ‘ಟೇಕ್’ ಏನಪ್ಪಾ ಅಂದರೆ ನಾವು ಗಂಡಸರು ಒಂದು ರೀತಿಯ samaritan ಗಳು. ಪರರ ಸಂತೋಷ ನಮ್ಮ ಸಂತೋಷ. ಅದರಲ್ಲೂ ಹೆಂಡತಿ ಅಥವಾ ಪ್ರೇಯಸಿಯ ವಿಷಯ ಬಂದಾಗ ಹೇಳೋದು ಬೇಡ. ಅವರ ಸಂತೋಷಕ್ಕೆ ಏನು ಬೇಕಾದರೂ ಮಾಡಬಲ್ಲೆವು. ದಿನವಿಡೀ ದುಡಿದು ದಣಿದರೂ ಮನೆಗೆ ಅಥವಾ ಪಾರ್ಕಿಗೆ ಬರುವಾಗ ಆಕೆಗೆ ಹೂವೋ, ಚಾಕಲೇಟೋ ತಂದು ಆಕೆಯ ಮೊಗದ ಮೇಲಿನ ಮಂದಹಾಸ ನಮ್ಮ ದಣಿದ ಮೊಗದ ಮೇಲೆ ಸುರಿದು ಕೊಂಡು ಆನಂದಿಸುವುದಿಲ್ಲವೇ ನಾವು ಗಂಡಸರು? ಆಕೆಯ ಮುಖದ ಮೇಲಿನ ಮಂದಹಾಸದ ಎದುರು ನಮ್ಮ ದಣಿವು ನೋವು, ದುಮ್ಮಾನ ಎಲ್ಲವೂ ಗೌಣ ನಮಗೆ.

ಈಗ ಆಕೆಯ ಸರತಿ. ಅಲ್ಲಾ, ನಮಗೆ ಎಡವಟ್ಟಾದರೆ ಈಕೆ ಏಕೆ ಕುಣಿಯುತ್ತಾಳೆ? men are from mars, women are from venus ನ ಸಿಂಡ್ರೋಮೋ ಇದು? ಗಂಡು ಬುಧ ಗ್ರಹದವನೂ, ಹೆಣ್ಣು ಶುಕ್ರ ಗ್ರಹದವರೂ ಎಂದು ತನಗೆ ತೋಚಿದ್ದನ್ನು ಗೀಚಿ ಕೋಟಿಗಟ್ಟಲೆ ಬಾಚಿಕೊಂಡ ಲೇಖಕ john gray ಹಿಡಿತಕ್ಕೂ ಸಿಗೊಲ್ಲ ಹೆಣ್ಣು. ನೀರಿನ ಮೇಲಿನ ಹೆಜ್ಜೆ ಬೇಕಾದರೂ ನೋಡಬಹುದಂತೆ, ಹೆಣ್ಣಿನ ಮನಸ್ಸಿನ ಮರ್ಮ ಯಾರಿಗೂ ಹಿಡಿಯೋಕೆ ಆಗೋಲ್ಲ. ಇದು ಶತ ಶತಮಾನಗಳಿಂದ ಋಷಿ ಪುಂಗವ ರಿಂದ ಹಿಡಿದು ನನ್ನಂಥ ಆರ್ಡಿನರಿ ಮಿಕ ನ ವರೆಗೆ ಕಾಡಿದ, ಕಾಡುವ conundrum. ಹಾಗಾದರೆ ಈ ಖಾಯಿಲೆಗೆ ಕಾರಣ ನೀರಿನ ಮೇಲಿನ ಹೆಜ್ಜೆ ಥರವೋ? ನನ್ನ ಪ್ರಕಾರ ಬಹುಶಃ ಹೆಣ್ಣಿಗೆ ಚಿಂತಿತ ಗಂಡು ಕ್ರಿಯಾಶೀಲ ಗಂಡಾಗಿ ಕಾಣುತ್ತಿರಬಹುದು. ಎಷ್ಟಿದ್ದರೂ,   ಪರಂಪರಾಗತವಾಗಿ ಗಂಡು bread winner ತಾನೇ? ಕೂಳನ್ನು ಹೊಂದಿಸೋದು (ಅಥವಾ ಚಾಕಲೇಟನ್ನು) ಅಷ್ಟು ಸುಲಭ ಸಾಧ್ಯವಲ್ಲ. ಏಕೆಂದರೆ ಇದು dog eat dog world. ನಾಯಿ ನಾಯಿಯನ್ನೇ ಬೇಟೆಯಾಡೋ ಜಮಾನ. ಅಂಥದ್ದರಲ್ಲಿ ಗಂಡಿನ ನೆತ್ತಿಯ ಮೇಲೆ ಸುಕ್ಕು ಕಂಡರೆ ಹೆಣ್ಣಿಗೆ ಸಂತೋಷ ತರುತ್ತದೆ. ಅಥವಾ ರಿಲೇಶನ್ ಶಿಪ್ ಅನ್ನೋ ಹಡಗು ಡೋಲಾಯಮಾನ ಸ್ಥಿತಿಯಲ್ಲಿದ್ದರೆ ಅದರ ರೆಪೇರಿ ಸಹ ಗಂಡಿನ ಹೆಗಲ ಮೇಲೇ ಬೀಳೋದು. ಇಲ್ಲದಿದ್ದರೆ ಅಡುಗೆ ಮನೆಯಲ್ಲಿ ಗದ್ದಲ ಹೆಚ್ಚುತ್ತೆ. ಪಾತ್ರೆ ಪಗಡಿಗಳು ಹಾರುವ ತಟ್ಟೆ ಗಳಾಗುತ್ತವೆ. ತಮ್ಮ ಸಂಬಂಧ cadbury’s ಗಿಂತ ಅಥವಾ ಅಚ್ಚು ಬೆಲ್ಲಕ್ಕಿಂತ ಇನ್ನಷ್ಟು ಮಧುರಗೊಳಿಸಲು ಪಾಪ ತನ್ನ ಗಂಡು ಪಡುವ ಪಾಡು ಹೆಣ್ಣಿಗೆ ಸಂತೋಷ ತರುತ್ತಿರಬಹುದು. ಏಕೆಂದರೆ ಹಡಗು ಮುಳುಗೋದು ಅವಳಿಗೆ ಇಷ್ಟವಿಲ್ಲ. ಮುಳುಗಿದರೆ ಗಂಡು ಸುಲಭವಾಗಿ ಮತ್ತೊಂದು ಹಡಗನ್ನು ಹೊಂದಿಸಿ ಕೊಳ್ಳುತ್ತಾನೆ. ಸದ್ಯದ ಪರಿಸ್ಥಿತಿಯಲ್ಲಿ ಈ ಮಾತು ಹೆಣ್ಣಿಗೆ ಅಷ್ಟು ಸುಲಭವಾಗಿ ಅನ್ವಯವಾಗೋದಿಲ್ಲ. ಮೇಲೆ ಹೇಳಿದ ಎರಡು ಕಾರಣಗಳಿಗಾಗಿ ಗಂಡಿನ ರೋಷ ಹೆಣ್ಣಿಗೆ ಅಪ್ಯಾಯಮಾನ.

image courtesy: www.photobucket.com

ಹಾಕಿರಣ್ಣ, ಈಕೆಗೊಂದು ಸೆಲ್ಯೂಟ್

ಅಂತಾರಾಷ್ಟ್ರೀಯ ಮಹಿಳಾ ದಿನ. ಹೆಣ್ಣುಮಗಳ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ದಿನಗಳ ಆಚರಣೆ ಅರ್ಥಹೀನ ನಾವು ಅದರ ಹಿಂದಿನ ಅರ್ಥ ಹುಡುಕಿ ಮಹಿಳೆಗಾಗಿ ಸಮಾನತೆಯ ಪ್ರಬಂಧ ಸೃಷ್ಟಿಸಲು ಅಸಮರ್ಥರಾದಾಗ. ಆಧುನಿಕ ಯುಗದಲಿ ಮಹಿಳೆ ಬಹಳಷ್ಟನ್ನು ಸಾಧಿಸಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಈಗಲೂ ಆಕೆ ಕಗ್ಗತ್ತಿಲಿನಲ್ಲಿ ತಡಕಾಡುತ್ತಿದ್ದಾಳೆ. ಬಿರುದು ಬಾವಲಿ, ಸಮ್ಮಾನ ಸಂಪತ್ತಿಗಾಗಿ ಅಲ್ಲ, ದೇವರು ಹೆಣ್ಣು ಗಂಡು ಎನ್ನುವ ಬೇಧವಿಲ್ಲದೆ ಕೊಡಮಾಡಿದ ಸ್ವಾತಂತ್ರ್ಯಕ್ಕಾಗಿ.

ಮಹಿಳೆಯ ಹುಟ್ಟು ಈಗಲೂ ಕೆಲವು ಸಮಾಜಗಳಲ್ಲಿ ಅಸಮಾಧಾನ, ಅತೃಪ್ತಿ ತರುತ್ತದೆ. ಗಂಡು ಮಗುವನ್ನ ಹೆರುವುದು ಹೆಣ್ಣಿಗೆ ಪ್ರತಿಷ್ಠೆ ತಂದು ಕೊಡುತ್ತದೆ. ಗಂಡು ಮಗುವಿನ ಜನ್ಮ ಕುಟುಂಬದಲ್ಲಿ, ನೆಂಟರಿಷ್ಟರಲ್ಲಿ ಸಂತಸವನ್ನು ಹರಡುತ್ತದೆ. ಒಂದೆರಡು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ತಾಯಿಗೆ ನಿನ್ನ ಹೊಟ್ಟೆಯಲ್ಲಿ ದೇವರು ಗಂಡು ಮಗುವನ್ನ ಹಾಕಿಲ್ಲವೆ ಎಂದು ಮೂದಲಿಕೆ ಕೇಳಿ ಬರುತ್ತದೆ. ಗಂಡು ಸಂತಾನಕ್ಕೆ ಇರುವ ಬೇಡಿಕೆ ಕಂಡ ವೈದ್ಯಕೀಯ ಸಮೂಹ ಕೂಡಾ ಅಲ್ಟ್ರಾ ಸೌಂಡ್, ಅಬಾರ್ಶನ್ ಮೂಲಕ ಹೆಣ್ಣಿನ ಹುಟ್ಟನ್ನು ಕೊನೆಗೊಳಿಸುವ ನೀಚ ಪ್ರವೃತ್ತಿಗೆ ಸಾಕ್ಷಿ ಯಾಗುತ್ತಿದೆ.  ಗುಜರಾತಿನಲ್ಲಿ ಗಂಡು ಮಕ್ಕಳನ್ನು ಸೃಷ್ಟಿಸುವ ಕ್ಲಿನಿಕ್ ಕಾರ್ಯಾಚರಣೆಯ ಆಘಾತಕಾರಿ ಸುದ್ದಿಯ ಬಗ್ಗೆ ಇತ್ತೀಚೆಗೆ ತಾನೇ ಓದಿದ್ದೇವೆ. ಹೆಣ್ಣು ಮಗುವಿನ ಸಂತಾನ ಇಲ್ಲದಂತೆ ಮಾಡುವ ಇನ್ನೂ ಯಾವ ಯಾವ ತೆರನಾದ ಟ್ರಿಕ್ಕು ಗಳು ಅವಿತು ಕೊಂಡಿವೆಯೋ ಕುಬುದ್ಧಿ ತಲೆಗಳಲ್ಲಿ. ಅರೇಬಿಯದಲ್ಲಿ ಹುಟ್ಟುವ ಮೊದಲ ಮಗು ಹೆಣ್ಣಾದರೆ ಜೀವಂತ ಹೂಳುತ್ತಿದ್ದರಂತೆ. ಹುಟ್ಟಿದ ಹೆಣ್ಣುಮಗುವಿನ ಬಾಯೊಳಗೆ ಬೂಸಾ ಹಾಕಿ ಕೊಲ್ಲುತ್ತಿದ್ದರು ತಮಿಳು ನಾಡಿನಲ್ಲಿ. ಅರೇಬಿಯಾದ ಅನಿಷ್ಟ ಅಮಾನವೀಯ ಪದ್ಧತಿಗೆ ಪ್ರವಾದಿ ಮುಹಮ್ಮದರು ಅಂತ್ಯ ಹಾಡಿದರು. ಯಾವ ತಪ್ಪೂ ಮಾಡದ ಹೆಣ್ಣು ಹಸುಳೆ ಯನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಎಂದು ಸಮಜಾಯಿಷಿ ಕೇಳಲಾಗುವುದು ಎಂದು ದೇವರು ಪವಿತ್ರ ಕುರಾನ್ ನಲ್ಲಿ ಕಟ್ಟೆಚ್ಚರ ನೀಡುತ್ತಾನೆ. ಯಾರು ತಮಗೆ ಹೆಣ್ಣು ಮಕ್ಕಳನ್ನು ತಾರತಮ್ಯ ತೋರಿಸದೆ ಅವರ ಲಾಲನೆ ಪೋಷಣೆ ಮಾಡಿ ಸಂರಕ್ಷಿಸುವರೋ ಅವರು ಮತ್ತು ನಾನು ಸ್ವರ್ಗ ಲೋಕದಲ್ಲಿ ಇಷ್ಟು ಸಮೀಪ ಇರುತ್ತೇವೆ ಎಂದು ಪ್ರವಾದಿಗಳು ತಮ್ಮ ತೋರುಬೆರಳನ್ನು ಮತ್ತು ಮಧ್ಯದ ಬೆರಳನ್ನು ತೋರಿಸಿ ಹೇಳುತ್ತಾರೆ. ಆಸ್ತಿಯಲ್ಲಿ ಹಕ್ಕು, ವಿಚ್ಛೇದನದಲ್ಲಿ ಹಕ್ಕು, ವಿಧವೆಗೆ ಮರು ವಿವಾಹದ ಹಕ್ಕು, ವೇದ ಪಾರಾಯಣದಲ್ಲಿ ಹಕ್ಕು ಹೀಗೆ ಎಲ್ಲ ರೀತಿಯ ಹಕ್ಕುಗಳಿಗೆ ಮಹಿಳೆಯನ್ನು ಅರ್ಹಳನ್ನಾಗಿಸಿದ ಪ್ರವಾದಿಗಳು ಮಹಿಳೆಯನ್ನು ಯಾವ ರೀತಿ ನಡೆಸಿ ಕೊಳ್ಳಬೇಕು ಎಂದು ಜಗತ್ತಿಗೆ ತೋರಿಸಿ  ಒಂದು ಮಹಾ ಪರಂಪರೆಯನ್ನೇ ಹುಟ್ಟು ಹಾಕಿದರು. ದುರದೃಷ್ಟವಶಾತ್ ಈ ಹಕ್ಕುಗಳನ್ನ ಕೊಡ ಮಾಡಲು ಮುಸ್ಲಿಂ ಸಮಾಜ ಚೌಕಾಸಿ ಮಾಡುತ್ತಿರುವುದು ಖಂಡನೀಯ.

ಮದುವೆ ವಿಷಯದ ತಕರಾರಿಗೆ ಮಹಿಳೆಯೊಬ್ಬಳನ್ನು ನಗ್ನವಾಗಿ ಪರೇಡ್ ಮಾಡಲಾಯಿತು ಲಾಹೋರ್ ನಗರದಲ್ಲಿ. ಈ ತೆರನಾದ ಮಹಿಳೆ ವಿರುದ್ಧದ ಹಿಂಸೆ ನಮಗೆ ಎಲ್ಲೆಲ್ಲೂ ಕಾಣಲು ಸಿಗುತ್ತದೆ. ಈ ವಿಷಯದಲ್ಲಿ ಅತಿ ಮುಂದುವರಿದ, ಅತಿ ಹಿಂದುಳಿದ ದೇಶಗಳು ಸಮಾನತೆಯನ್ನು ಸಾಧಿಸಿವೆ. ಇಂಗ್ಲೆಂಡ್ ನಲ್ಲಿ ಪ್ರತೀ ಮೂವರು ಹೆಣ್ಣುಮಕ್ಕಳಿಗೆ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಂತೆ. ಸೂರ್ಯ ಮುಳುಗದ ಸಾಮ್ರಾಜ್ಯದ ಕಥೆ ಇದು. ಕುಡಿತ, ಜೂಜು ಮುಂತಾದ ಅನಿಷ್ಟಗಳಿಗೆ ಗುಲಾಮನಾದ ಗಂಡು ಮಹಿಳೆಯ ಮೇಲೆ ದೌರ್ಜನ್ವ ಎಸಗುತ್ತಾನೆ. ವರವ ನೀಡು ತಾಯೆ ಕುಡುಕನಲ್ಲದ ಗಂಡನ. ಈ ಮಾತಿನ ಹಿಂದೆ ಹೆಣ್ಣು ನೆಮ್ಮದಿಯ ಬದುಕು ಬಯಸುವುದು ವ್ಯಕ್ತ ವಾಗುತ್ತದೆ. ಕಾರು ಬಂಗಲೆ ಕೇಳುತ್ತಿಲ್ಲ ಆಕೆ. ಕೇವಲ ನೆಮ್ಮದಿಯ ಬದುಕು ಆಕೆಯ ಆಸೆ. 

ಗರ್ಭ ನಿರೋಧಕ ಸೌಲಭ್ಯ ಕೇಳಿದ ವಿಶ್ವ ವಿದ್ಯಾಲಯದ ಹೆಣ್ಣು ಮಗಳೊಬ್ಬಳನ್ನು ಅಮೆರಿಕೆಯ ರೇಡಿಯೋ ಬಾತ್ಮೀದಾರ “ರಷ್ ಲಿಂಬಾ” (rush limbaugh) ವೇಶ್ಯೆ ಎಂದು ಜರೆದ. ಕಾಮ ತೀಟೆ ತೀರಿಸಿ ಕೊಳ್ಳಲು ಸರಕಾರ ಭರಿಸಬೇಕಂತೆ ವೆಚ್ಚ ಎಂದು ಕೀಳು ಮಟ್ಟದ ವಾಗ್ದಾಳಿ ಮಾಡಿದ ಈ ಬಲಪಂಥೀಯ ವರದಿಗಾರ. ಇದು ಅತ್ಯಂತ ಮುಂದುವರೆದ ದೇಶವೊಂದರ ಕಥೆ. ಇಂಥ ಮಾತುಗಳನ್ನು ತಲೆ ಕೆಟ್ಟ ತಾಲಿಬಾನಿಯೂ ಆಡಿರಲಿಕ್ಕಿಲ್ಲ. ಗುಹೆಗೆಳಲ್ಲಿ ಅಡಗಿ ಕೂತು ಮಹಿಳೆಗೆ ಸ್ವಾತಂತ್ರ್ಯ ಕೊಡಲು ಒಪ್ಪದ ತಾಲಿಬಾನಿ ಬಾಯಿಂದ ಇಂಥ ಮಾತುಗಳು ಹೊರಡಲಿಲ್ಲ. ಗಗನಚುಂಬಿ ಕಟ್ಟಡಗಳ ನಾಡಿನಿಂದ ಬಂದವು ಈ ಮಾತುಗಳು. ಅದ್ಯಾವ ನಿಗೂಢ ಕಾರಣಕ್ಕೆ ಮಹಿಳೆಯನ್ನು ಗಂಡು ಶತ್ರು ಎಂದು ಪರಿಗಣಿಸುತ್ತಾನೋ ಅರ್ಥವಾಗುತ್ತಿಲ್ಲ. ಈಡನ್ ಉದ್ಯಾನವನದಲ್ಲಿ ದೇವರು  ನಿಷಿದ್ಧ ಗೊಳಿಸಿದ ಸೇಬನ್ನು ತಿನ್ನಲು ಆಡಂ ನಿಗೆ ಈವ್ ಉತ್ತೇಜಿಸಿದ ಕಾರಣ ದೇವರು ಮಹಿಳೆಗೆ ಪ್ರಸವ ವೇದನೆ ನೀಡಿದ ಎನ್ನುವ ಮತಿಹೀನರೂ ಇದ್ದಾರೆ. ಅಂದರೆ ಈ ಮಹಿಳೆ ವಿರುದ್ಧದ ಭಾವನೆಗೆ, ನಡವಳಿಕೆಗೆ ಕಾರಣ ಸಿಗುತ್ತದೆ.

ಮಹಿಳೆಯನ್ನು ಹಾಯ್, ಸೆಕ್ಸಿ ಎಂದು ಕರೆದರೆ ಸಿಕ್ಸಿಸ್ಟ್ ಆಗಬಹುದೋ ಅಥವಾ ಅದು ಒಂದು complimentary ಯೋ ಎಂದು ಒಂದು ಪತ್ರಿಕೆ ಕೇಳುತ್ತದೆ. ಮಾಧ್ಯಮಗಳು ಹೆಣ್ಣಿನ ಸೌಂದರ್ಯಕ್ಕೆ ಕೊಡುತ್ತಿರುವ ಅತೀವ ಮಹತ್ವ ಆಕೆ ತನಗರಿವಿಲ್ಲದೆಯೇ ಕೀಳರಿಮೆ ಬೆಳೆಸಿಕೊಂಡು ತೊಳಲಾಡುವಂತೆ ಮಾಡುತ್ತಿದೆ. ಅಂತರಂಗದ ಸೌಂದರ್ಯಕ್ಕೆ ಮಹತ್ವ ಮನ್ನಣೆ ಬರುವವರೆಗೆ ಈ ಕೀಳರಿಮೆಯ ಬವಣೆ ಹೆಣ್ಣಿಗೆ ತಪ್ಪದು. ಮಾಧ್ಯಮಗಳ, ಸೌಂದರ್ಯ ಪ್ರಸಾಧನ ಉತ್ಪಾದಿಸುವ ಕಂಪೆನಿಗಳ ಈ ನಡವಳಿಕೆಗೆ ದಾರಿ ಬೇರೆ ಕಾಣದೇ ತನಗರಿವಿಲ್ಲದಂತೆಯೇ ಭಾಗವಹಿಸುತ್ತಿರುವುದು ಖೇದಕರ. ಮಹಿಳೆಗೆ ಹೆಚ್ಚು ಮೈ ಪ್ರದರ್ಶನ ಮಾಡಲು ಕೊಟ್ಟ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ ಎಂದು ಬಗೆದ ಆಧುನಿಕ ವಿಶ್ವ ಮಹಿಳೆಯನ್ನು ಎಲ್ಲ ರೀತಿಯ ಅಪಮಾನಗಳಿಗೆ ಎಗ್ಗಿಲ್ಲದೆ ಉಪಯೋಗಿಸಿ ಕೊಂಡಿತು. ಕನಿಷ್ಠ ಉಡುಗೆ ತೊಟ್ಟು cat walk ಮಹಿಳೆಯ ಸೌಂದರ್ಯಕ್ಕೆ ಆಶ್ಚರ್ಯದಿಂದ ಹುಬ್ಬೇರಿಸಿ ಕರತಾಡನ ಮಾಡುವ ಜನ ಆಕೆ ವೇತನದಲ್ಲಿ ಸಮಾನತೆ ಬೇಡಿದಾಗ ಹುಬ್ಬು ಗಂಟಿಕ್ಕುತ್ತಾರೆ. ಹೆರಿಗೆ ವೇಳೆ ಅವಳಿಗೆ ಬೇಕಾದ ಸೌಲಭ್ಯ ಕೊಡಲು ತಕರಾರು ಮಾಡುತ್ತಾರೆ. ಗಂಡಿನಂತೆಯೇ ದುಡಿದರೂ ಅವಳ ಶ್ರಮಕ್ಕೆ ಬೆಲೆಯಿಲ್ಲ. ಹೊಲ ಗದ್ದೆಗಳಲ್ಲಿ ಕೆಲಸಮಾಡುವ, ಮನೆಗೆಲಸ ಮಾಡುವ, ತಮ್ಮದೇ ವ್ಯಾಪಾರ ಧಂಧೆ ನಡೆಸುವ, ಚಿಕ್ಕ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೂ ಇಲ್ಲ, ಭದ್ರತೆಯೂ ಇಲ್ಲ. 

ಇಷ್ಟೆಲ್ಲಾ ಅಡೆ ತಡೆಗಳ ನಡುವೆಯೂ, ದೌರ್ಜನ್ಯ ಅಪಮಾನಗಳ ಮಧ್ಯೆಯೂ ಹೆಣ್ಣು ಸಾಧನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಳೆ. ನನಗೆ ಪರಿಚಯದ ವ್ಯಕ್ತಿಯೊಬ್ಬರ ಅವಳಿ ಹೆಣ್ಣುಮಕ್ಕಳು ಗಣಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವೀಧರೆಯರಾದರು. ಡಿಗ್ರೀ ಪಡೆದು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಒಳ್ಳೆಯ ಸಂಸ್ಥೆಯಲ್ಲಿ ಕೆಲಸವೂ ಸಿಕ್ಕಿತು. ಗ್ರಾಮ ಪ್ರದೇಶದಿಂದ, ಮುಸ್ಲಿಂ ಕುಟುಂಬದಿಂದ ಬಂದ ಈ ಹೆಣ್ಣು ಮಕ್ಕಳು ಸುತ್ತ ಮುತ್ತಲಿನವರ ಅಸಮ್ಮತಿಗೆ ಸೊಪ್ಪು ಹಾಕದೆ, ತನ್ನ ಪಾಲಕರ ಪ್ರೋತ್ಸಾಹದಿಂದ ತಮ್ಮ ಶಿಕ್ಷಣದ ಉದ್ದಕ್ಕೂ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾ ತಮ್ಮ ಕನಸನ್ನು ನನಸಾಗಿಸಿಕೊಂಡರು.

ಹೀಗೆ ಸಮಾಜದ ಕೆಂಗಣ್ಣಿಗೆ, ಕುಹಕಕ್ಕೆ ತಲೆ ಬಾಗದೆ ಮುನ್ನಡೆಯ ದೃಢವಾದ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.

ಚಿತ್ರ ಕೃಪೆ: http://www.nationalgeographic.com