ಮಾಧ್ಯಮಗಳು ನಂಬಲನರ್ಹ

ಚಾರ್ಲ್ಸ್ ಶೋಭರಾಜ್ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ಬಿಕಿನಿ ಕಿಲ್ಲರ್ ಎಂದೂ ಕರೆಯುತ್ತಾರೆ. ಈತ ಪೂಲೀಸರಿಗೆ ಲಂಚ್ ಕೊಟ್ಟೋ ಚಳ್ಳೆ ಹಣ್ಣು ತಿನ್ನಿಸಿಯೋ ತಪ್ಪಿಸಿಕೊಳ್ಳುತ್ತಿದ್ದ. ಒಮ್ಮೆ ಯಾರೋ ಒಬ್ಬ ಭಾರತೀಯ ಪೊಲೀಸರು ಇವನ ಹಿಂದೆ ಬಿದ್ದಿದ್ದಾರೆ ಎಂದು  ಪ್ರಸ್ತಾಪಿಸಿದಾಗ ಶೋಭ ರಾಜ್, ಓಹ್, ಭಾರತೀಯ ಪೊಲೀಸರು ೫ ರೂಪಾಯಿ ಪೊಲೀಸರು, ಐದು ರೂಪಾಯಿಯ ನೋಟನ್ನು ಕೊಟ್ಟರೆ ಬಿಟ್ಟು ಬಿಡುತ್ತಾರೆ ಎಂದು ಗಹ ಗಹಿಸಿ ನಕ್ಕಿದ್ದ. ಕೊನೆಗೆ ಇವನಿಗೆ ಮುಳುವಾಗಿದ್ದು ಒಬ್ಬ ಒಬ್ಬ ದಕ್ಷ ಭಾರತೀಯ ಪೊಲೀಸ್ ಅಧಿಕಾರಿ. ಚಾಣಕ್ಷ  ಪೊಲೀಸ್ ಅಧಿಕಾರಿ  “ಮಧುಕರ್ ಜೆನ್ಡೇ” ೧೯೯೬ ರಲ್ಲಿ ಅತ್ಯದ್ಭುತವಾದ ಕಾರ್ಯಾಚರಣೆ ಯೊಂದರಲ್ಲಿ ಚಾರ್ಲ್ಸ್ ನನ್ನು ಅರೆಸ್ಟ್ ಮಾಡಿದ್ದರು.

ಇವನ ದಸ್ತಗಿರಿಯೊಂದಿಗೆ ಭಾರತೀಯ ಪೊಲೀಸರು ಐದು ರೂಪಾಯಿ ಪೊಲೀಸರಲ್ಲ ಎಂದು ಸುಂದರವಾಗಿ ಸಾಬೀತಾಯಿತು. ಪೊಲೀಸ್ ಇಲಾಖೆಯ ವೃತ್ತಿಪರತೆ ವಿಜ್ರಂಭಿಸಿತು.

ವಿಜಯ್ ಮಲ್ಯ ರವರ ಕಿಂಗ್ ಫಿಶರ್ ಆರ್ಥಿಕ ಸಂಕಟ ದಲ್ಲಿರುವ ವೈಮಾನಿಕ  ಸಂಸ್ಥೆ. ಉತ್ತರ ಭಾರತದ ಮೋಸಗಾರ, ವಂಚಕ ಉದ್ಯಮಿಗಳಲ್ಲಿ ರಕ್ತಗತವಾಗಿರುವ ಕಪಟತನ, ಸರಕಾರೀ  ವ್ಯವಸ್ಥೆಯನ್ನ ಸಲೀಸಾಗಿ ಜೇಬಿಗಿಳಿಸಿ ಕೊಳ್ಳುವ ಕಂತ್ರಿ ಗುಣ ಈ ಕನ್ನಡಿಗ ಉದ್ಯಮಿಯಲ್ಲಿ ಇಲ್ಲ. ಇವರ ಹಣಕಾಸು ತೊಂದರೆಗಳಿಗೆ ರೆಕ್ಕೆ ಪುಕ್ಕ ಕೊಟ್ಟಿದ್ದು ಮಾತ್ರವಲ್ಲದೆ ವರ್ಣರಂಜಿತವಾಗಿ ಪ್ರಕಟಿಸಿ ತೀಟೆ ತೀರಿಸಿ ಕೊಂಡವು ಪತ್ರಿಕೆಗಳು. ಬಹುಶಃ ಕೆಲವು ಉದ್ಯಮಿಗಳ ಹಾಗೆ ದಕ್ಷಿಣೆ ಬಿಸಾಕುವ ಗುಣ ಮಲ್ಯರಲ್ಲಿಲ್ಲದ್ದರಿಂದಲೋ ಏನೋ ಇವರ ಬೆನ್ನು ಹತ್ತಿದವು. ತಮ್ಮನ್ನು ಗುರಿಯಾಗಿಸಿ ನಡೆಯುತ್ತಿರವ witch hunting ಗೆ ಬೇಸತ್ತ ಮಲ್ಯ ಕೊನೆಗೆ ಉದುರಿಸಿದರು ನನಗೂ ನಿಮಗೂ ತಿಳಿದಿದ್ದ ನುಡಿ ಮುತ್ತುಗಳನ್ನು; indian media has no credibility. ಭಾರತೀಯ ಮಾಧ್ಯಮಗಳು “ನಂಬಲರ್ಹ ಎಂದು.  ನಂಬಲನರ್ಹ ಅಥವಾ ಯೋಗ್ಯತೆಗೆಟ್ಟ  ಮಾಧ್ಯಮಗಳು ಎಂದರೂ ಸರಿಯೇ.

ಪತ್ರಕರ್ತರ ಮೇಲಿನ ವಿಶ್ವಾಸ ಕ್ರಮೇಣ ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ೧೯೮೦ ರ ಕ್ಕಿಂತ ಮೊದಲಿದ್ದ  ಪತ್ರಕರ್ತರ ಮೇಲಿನ ವಿಶ್ವಾಸ ಈಗ ಇಲ್ಲ. ಈಗ ಮಾಧ್ಯಮಗಳು ಸರಕಾರೀ ಯಂತ್ರಗಳ, ರಾಜಕಾರಣಿಗಳ ‘ಸ್ಟೆನೋ ಗ್ರಾಫರ್’ ಗಳಾಗಿ ಮಾರ್ಪಟ್ಟಿದ್ದಾರೆ. ರಾಜಕಾರಣಿ ಅಥವಾ ಅಧಿಕಾರಿಗಳು ಹೇಳಿದ್ದು ಸರಿಯೇ ಎಂದು ತನಿಖೆ ನಡೆಸಿ ವರದಿ ಮಾಡುವ ವ್ಯವಧಾನ, ವೃತ್ತಿಪರತೆ  ಇವರಿಗಿಲ್ಲ. ಯಾವ ಆಮಿಷಕ್ಕಾಗಿ ಪತ್ರಕರ್ತನಿಗಿರಬೇಕಾದ ಗುಣಗಳನ್ನ ಇವರು ಬಲಿ ಕೊಟ್ಟಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ. ಕೆಲವು ಪತ್ರಕರ್ತರು ತಮ್ಮ ರಾಜಕೀಯ ಅಜೆಂಡಾ ಗಳಿಗೆ ಹೊಂದುವ ವರದಿ ಪ್ರಕಟಿಸಿ ಪತ್ರಕರ್ತ ಹುದ್ದೆಗೆ ಕಳಂಕ ತರುವ, ಆ ಹುದ್ದೆಯ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿರುವುದೂ ಸಹ ಜನ ಗಮನಿಸುತ್ತಿದ್ದಾರೆ.      ಒಂದು ಪತ್ರಿಕೆ ಬರೆದ ವರದಿಗಳ ಕಾರಣ ಕರ್ನಾಟಕದ ಒಂದು ಪಟ್ಟಣ  ಸಂಪೂರ್ಣ ಬಂದ್ ಅನ್ನೂ ಆಚರಿಸಿತಂತೆ. ಹಿಂದೆಂದೂ  ಇದನ್ನು ಹೋಲುವ ಘಟನೆ ಕರ್ನಾಟಕದಲ್ಲಿ ನಡೆದ ಬಗ್ಗೆ ನನಗೆ ನೆನಪಿಲ್ಲ. unprecedented ಎನ್ನಬಹುದುನಮ್ಮ ನಾಡಿನಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಬಂದು ನಿಂತಿದೆ ಇಂದು.

ಒಬ್ಬ ಪತ್ರಕರ್ತ ಎನ್ನಿಸಿ ಕೊಳ್ಳಲು ನಾಲ್ಕು ವಾಕ್ಯಗಳನ್ನು ಹೆಣೆಯುವ ಕಲೆ ರೂಢಿಸಿ ಕೊಂಡರೆ ಸಾಲದು, ಕನಿಷ್ಠ ಓದು ಬರಹದ ವಿದ್ಯೆ ಮಾತ್ರ ಸಾಲದು. ಪಕ್ಷ ಅಥವಾ ಸಿದ್ಧಾಂತ ನಿಷ್ಠೆ ತೋರಿಸುವ ‘ಪಟ್ಟೆ’ಗಳು ಸಹ ಇರಕೂಡದು   ಪತ್ರಕರ್ತನಲ್ಲಿ. ಬದಲಿಗೆ   ವೃತ್ತಿ ಪರತೆಯ ಗುಣಗಳು ಇರಬೇಕು, libel and libel law ಇವುಗಳ ಜ್ಞಾನವೂ ಇರಬೇಕು. ಓಹ್, ಇದು ಒಂದು ಬಹು ದೊಡ್ಡ ಬೇಡಿಕೆಯಾಗಿ ತೋರಬಹುದೇನೋ ಪತ್ರಕರ್ತರ ವೇಷ ತೊಟ್ಟ ಜನರಿಗೆ.

ತಮ್ಮ ಬಗೆಗಿನ ವಿಜಯ್ ಮಲ್ಯರವರ ಲೆಕ್ಕಾಚಾರ ತಪ್ಪು ಎಂದು ಜನರಿಗೆ ಮನವರಿಕೆ ಮಾಡುವ ಕೆಲಸ ಈ ಪತ್ರಕರ್ತ ಸಮೂಹ ಮಾಡೀತೆ?

 

ಅ-ಣ್ಣಾ-ರಣ್ಯ ರೋದನ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು.  ಸ್ವಾತಂತ್ರ್ಯಕ್ಕಾಗಿನ ತುಡಿತ, ದಾಸ್ಯದಿಂದ ಬಿಡಿಸಿ ಕೊಂಡು ನಮ್ಮನ್ನು ನಾವೇ ಆಳಿಕೊಳ್ಳುವ ಮಹದಾಸೆ ಈ ಚಳುವಳಿಗೆ ಪ್ರೇರಣೆ. ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು ನಮ್ಮನ್ನು ದಾಸ್ಯ ಮುಕ್ತ ಗೊಳಿಸಿದರು ೧೯೪೭ ರಲ್ಲಿ. ಸ್ವಾತಂತ್ರ್ಯ ತರುವ ಹರ್ಷ, ಪುಳಕವನ್ನು ಭಾರತೀಯರು ಅನುಭವಿಸಿದರು.  ಆದರೆ ಅರವತ್ತೈದು ವರ್ಷಗಳ ನಂತರ ನಾವು ನಮಗರಿವಿಲ್ಲದೆಯೇ ಬಾಣಲೆಯಿಂದ ಬೆಂಕಿಗೆ ಜಾರಿದ ವಾಸ್ತವದ ಅರಿವು ನಿಧಾನವಾಗಿ ಆಗ ತೊಡಗಿತು.  

೧೯೪೭ ರಲ್ಲಿ ನಮ್ಮ ಹಾಗೇ ಕಡುಬಡತನ ದಿಂದ ಬಳಲುತ್ತಿದ್ದ ದೇಶ ದಕ್ಷಿಣ ಕೊರಿಯಾ ಇಂದು ಶ್ರೀಮಂತಿಕೆಯಲ್ಲಿ ವಿಶ್ವದ ಅಗ್ರಮಾನ್ಯ ದೇಶಗಳ ಸಾಲಿನಲ್ಲಿ ನಿಂತಿದೆ. ನಮ್ಮ ನೆರೆಯ ಚೀನಾ ಪ್ರಜಾಪ್ರಭುತ್ವ, ಅದೂ, ಇದೂ ಎಂದು ಯಾವುದೇ ಸದ್ದು ಗದ್ದಲ ಮಾಡದೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದೆ. ಆದರೆ ನಾವು ಮಾತ್ರ ರಾಜಕಾರಣಿ – ಅಧಿಕಾರಶಾಹಿ ಚಕ್ರವ್ಯೂಹದಲ್ಲಿ ಸಿಕ್ಕು ನರಳುತ್ತಿದ್ದೇವೆ. ಭ್ರಷ್ಟಾಚಾರ ದೇಶವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದೆ.   

ದಿನೇ ದಿನೇ ಒಂದಲ್ಲ ಒಂದು ಹಗರಣದಿಂದ ಕಂಗೆಟ್ಟ ದೇಶಕ್ಕೆ ಆಶಾ ದೀಪವಾಗಿ ಬಂದರು ಅಣ್ಣಾ ಹಜಾರೆ. ‘ಎನಫ್ ಈಸ್ ಎನಫ್’ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಜನರೂ ಆರಂಭದಲ್ಲಿ ಹುಮ್ಮಸ್ಸು ತೋರಿಸಿದರು. ಅಣ್ಣಾ ಜನಪ್ರಿಯತೆ ಪಡೆಯುತ್ತಿದ್ದಂತೆ ಸರಕಾರ ಎಚ್ಚೆತ್ತು ಕೊಳ್ಳಲು ಆರಂಭಿಸಿತು. ಅಣ್ಣಾ ಜೊತೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಸಹ ಸೇರಿಕೊಂಡರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಎಂಥೆಂಥ ಲಂಚಗುಳಿ ಅಧಿಕಾರಿಗಳನ್ನು ಕಂಡಿರಲಿಕ್ಕಿಲ್ಲ. ಬೇಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸೊಲ್ಲೆತ್ತಿದ್ದು ನಾವೆಂದಾದರೂ ಕೇಳಿದ್ದೇವೆಯೇ? ಎಲ್ಲಿಂದ ಪುಟಿದೆದ್ದಿತು ಲಂಚದ ವಿರುದ್ಧ ಹೋರಾಡೋ ಹಂಬಲ? ಕಿರಣ್ ಬೇಡಿ ಮಧ್ಯೆ ಮತ್ತೊಂದು ವ್ಯಕ್ತಿ, ಅರವಿಂದ  ಕೇಜರಿವಾಲ ಅಂತೆ. ಸ್ವಾತಂತ್ರ್ಯ ಚಳುವಳಿಯಲ್ಲೋ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲೋ, ಬೇರೆಲ್ಲೂ ಈ ವ್ಯಕ್ತಿಯ ಹೆಸರು ಕೇಳಿದ್ದಿಲ್ಲ. ಯಾರೀತ? who is this kejriwala? ‘ವೋ, ಕೇಸರಿ ವಾಲ ಹೈ’ ಎಂದು ಮೂದಲಿಸಿತು ಕಾಂಗ್ರೆಸ್.   ಇವೆಲ್ಲಾ ಆದ ನಂತರ ಜನ ರೊಚ್ಚಿಗೆದ್ದಿದ್ದನ್ನು ಗಮನಿಸಿದ ಕೇಂದ್ರದ ಆಳುವ ಪಕ್ಷಕ್ಕೆ ಈಗ ದುರ್ಬೀನಿಟ್ಟು ನೋಡ ತೊಡಗಿತು. ಅಣ್ಣಾ ಜೊತೆ ವೇದಿಕೆಯ ಮೇಲೆ ಯಾರ್ಯಾರಿದ್ದಾರೆ? ಅವರ ಹಿನ್ನೆಲೆ ಏನು? ಯಾವ ಸಂಘಟನೆಗಳ ಒಲವು ಇವರಿಗೆ? ಹಿಡ್ಡನ್ ಅಜೆಂಡಾ ಏನಾದರೂ ಇದೆಯೇ ಈ ಚಳುವಳಿ ಹಿಂದೆ? ಹೀಗೆ ನೂರೆಂಟು ಅನುಮಾನಗಳನ್ನು ಹರಿ ಬಿಟ್ಟು ಜನರನ್ನು ಕನ್ಫ್ಯೂಸ್ ಮಾಡಿ ಬಿಟ್ಟರು.  ಎಡಬಿಡದ ವಾಕ್ಪ್ರಹಾರ, ಆರೋಪ ಪ್ರತ್ಯಾರೋಪಗಳ ಗದ್ದಲದಲ್ಲಿ ಚಳುವಳಿ ತನ್ನ ಮಹತ್ವ ಕಳೆದು ಕೊಂಡಿತು. ಈ ಚಳುವಳಿಯಲ್ಲೂ ನುಸುಳಲೇ ಬೇಕಿತ್ತೆ ರಾಜಕಾರಣ?

ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಕ್ಕಿ ಕೊಂಡ ಸಾಮಾನ್ಯ ಪ್ರಜೆ ಲಂಚದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ. ಲಂಚಕ್ಕಾಗಿನ ಅಧಿಕಾರಿಗಳ  ತೀರದ  ದಾಹಕ್ಕೆ ಬೇರೆ ದಾರಿ, ಕಾಣದೇ ಮೂರು ಗೋಣಿಚೀಲ ತುಂಬಾ ಸುಮಾರು ನಲವತ್ತು ತರಾ ವರಿ, ನಮೂನೆ ನಮೂನೆ (ಥೇಟ್ ಲಂಚಗುಳಿಗಳ ಥರ) ಹಾವುಗಳನ್ನು ಸರಕಾರೀ ಕಛೇರಿಯೊಳಕ್ಕೆ ತಂದು ಗೋಣಿ ಚೀಲ ಬರಿದು ಮಾಡಿ ಬಿಟ್ಟರು ರೈತರಾದ ಹುಕ್ಕುಲ್ ಖಾನ್ ಮತ್ತು ರಾಮ್ ಕುಲ್ ರಾಮ್. ಭಯಭೀತರಾದ ಅಧಿಕಾರಿಗಳು ಓಟ ಕಿತ್ತರು. ಇದು ಹತಾಶ ಪ್ರಜೆಯ ಹತಾಶ ಪ್ರತಿಕ್ರಿಯೆ. ಇದರಿಂದ ಅಧಿಕಾರಿಗಳು ಏನಾದರೂ ಕಲಿತಾರೆಯೇ ಪಾಠವನ್ನು? no chance. ಹಾವುಗಳನ್ನು ಹರಿ ಬಿಟ್ಟ ರೈತರನ್ನೇ ಖಳ ನಾಯಕರನ್ನಾಗಿಸಿ ಬಿಡುತ್ತಾರೆ, ಈ ಹಾವುಗಳಿಗಿಂತ ಅಪಾಯಕಾರಿಯಾದ ಅಧಿಕಾರಿಶಾಹಿ ಹಾವು.        

ಲಂಚದ ಹಾವಳಿ ವಿರುದ್ಧ ನಮ್ಮಲ್ಲಿ ಬಹಳಷ್ಟು ಕಾನೂನುಗಳಿವೆ. ಕಾನೂನಿನ ಪ್ರಕಾರ ಲಂಚ ಕೊಡುವುದು ಲಂಚ ತೆಗೆದುಕೊಳ್ಳುವಷ್ಟೇ ಅಪರಾಧ. ಲಂಚಗುಳಿಗಳ ವಿರುದ್ಧ ಸಮರ ಸಾರಿದ ಅಣ್ಣಾ ಲಂಚ ಕೊಡುವವರ ವಿರುದ್ಧ ಸೊಲ್ಲನ್ನೇಕೆ ಎತ್ತುತ್ತಿಲ್ಲ, ಇದು ಕೆಲವರ ಜಿಜ್ಞಾಸೆ. ಕೊಡುವವನಿಲ್ಲದಿದ್ದರೆ ಭವತಿ ಭಿಕ್ಷಾಂದೇಹಿ ಎನ್ನುವವನ ಅಸ್ತಿತ್ವ ಇರುವುದಿಲ್ಲ, ಅಲ್ಲವೇ?  

ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೊರಹೋದಾಗ ಜ್ಯೂಸ್ ಕೊಳ್ಳಲು ಹೋಗುವ ಪುಟ್ಟ ಬಕಾಲಾ ಎಂದು ಕರೆಯಲ್ಪಡುವ ಮಿನಿ ಮಾರ್ಕೆಟ್ ಇದೆ. ಅಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ವ್ಯಕ್ತಿಯೊಬ್ಬ ಕಾಣದೇ ಇದ್ದುದರಿಂದ ವಿಚಾರಿಸಿದೆ. ಆಗ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹೇಳಿದ, ಅವರನ್ನು ಜೈಲಿಗೆ ಹಾಕಿದಾರೆ ಎಂದು. ಅರೆ, ಜೈಲಾ, ಅಂಥ ಮನುಷ್ಯ ಅಲ್ಲವಲ್ಲಾ ಈತ ಎಂದು ನನ್ನ ಅನುಮಾನವನ್ನು ವ್ಯಕ್ತ ಪಡಿಸಿದಾಗ ಆತ ಹೇಳಿದ ಪುರಸಭೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ೨೦೦ ರಿಯಾಲ್ ( ಸುಮಾರು ೨,೭೦೦ ರೂ. ) ಲಂಚ ಕೊಟ್ಟಿದ್ದು ಕಾರಣ ಎಂದು.

ನಮ್ಮ ಕಂಪೆನಿಯ ಮಾಲೀಕರ ಮಿತ್ರರಿಗೆ ಸಂಭವಿಸಿದ್ದು ಇದು. ಸುಮಾರು ಹತ್ತುವರ್ಷಗಳ ಹಿಂದೆ ಸೌದಿ ಅರೇಬಿಯಾದ ಮತ್ತೊಂದು ನಗರವಾದ ದಮ್ಮಾಮಿನ ಬಂದರಿನಲ್ಲಿ ವಿದೇಶದಿಂದ ಆಮದಾಗಿ ಬಂದ ಸರಕನ್ನು ಸ್ವಲ್ಪ ಬೇಗನೆ ಬಿಡಿಸಿ ಕೊಳ್ಳಲು ಅಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಲಂಚ ಕೊಟ್ಟರು. ಹತ್ತು ವರ್ಷಗಳ ನಂತರ ಈ ವಿಷಯ ಬೆಳಕಿಗೆ ಬಂದು ಅವರನ್ನು ಕೂಡಲೇ ದೇಶದಿಂದ ಗಡೀ ಪಾರು ಮಾಡಿದರು. ಪಾಕಿಸ್ತಾನ ಮೂಲದ ಈ ವ್ಯಕ್ತಿ ಚಿಕ್ಕ ಆಸಾಮಿ ಅಲ್ಲ. ದಮ್ಮಾಮಿನ ಬಂದರಿನಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತನಂದೆ ಆದ ಕಂಪೆನಿ ಸಹ ಆರಂಭಿಸಿದ್ದರು. ಏಕಾಯೇಕಿ ಅವರನ್ನು  ಗಡೀಪಾರು ಮಾಡಿತು ಸೌದಿ ಸರಕಾರ. ದಮ್ಮಾಮಿನ ಪಕ್ಕದ ಲ್ಲೇ ಇರುವ ಪುಟ್ಟ ಬಹರೇನ್ ದೇಶದಲ್ಲಿ ಕೂತು ತಮ್ಮ ವಹಿವಾಟನ್ನು ನಿಯಂತ್ರಿಸುತ್ತಿದ್ದಾರೆ. ಹೇಗಿದೆ, ನಮ್ಮ ಕಾನೂನು, ಅರೇಬಿಯಾದ ಸರ್ವಾಧಿಕಾರಿ ಕಾನೂನು? ಇಲ್ಲಿ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಸಿಗುವುದರಿಂದ ಜನರಿಗೆ ಫ್ರೀಡಂ, ಡೆಮಾಕ್ರಸಿ ಇವುಗಳ ಚಿಂತೆ ಇಲ್ಲ. ನಮಗೆ ಫ್ರೀಡಂ ಇದ್ದರೂ ಒಂದು ನಿಸ್ಶಹಾಯಕತೆ, ಕಟ್ಟಿ ಹಾಕಲ್ಪಟ್ಟ ಭಾವ.

ಸರಿ, ಸಮಾಜದ ಎಲ್ಲ ವರ್ಗದವರನ್ನೂ ಯಾವುದೆ ಬೇಧ ಭಾವ ಇಲ್ಲದೆ ಬಾಧಿಸುವ ಈ ಲಂಚಕೋರತನ ದ ವಿರುದ್ಧದ ಹೋರಾಟ ಏಕೆ ಬಿರುಸಾಗಿಲ್ಲ? ಜನ ಏಕೆ ದೊಡ್ಡ ರೀತಿಯಲ್ಲಿ ಭಾಗವಹಿಸುತ್ತಿಲ್ಲ? ಎಲ್ಲೋ ಒಂದೆರಡು ನಗರ ಪ್ರದೇಶಗಳಲ್ಲಿ ಒಂದು ರೀತಿಯ boredom ಕಳೆಯಲೆಂಬಂತೆ ಬಂದ ಒಂದಿಷ್ಟು ಯುವಜನರು. ಅಣ್ಣಾ ಮನವಿಗೆ ಜನ ಕಿವಿಗೊಡದಿರಲು ಕಾರಣ ಭ್ರ್ಹಷ್ಟಾಚಾರದ ಬಗ್ಗೆ ಜನರಿಗೆ ಇರುವ ಪರೋಕ್ಷ ಒಲವು ಕಾರಣ ಇರಬಹುದು. ಯಾವುದೇ ಕೆಲಸ ಕೈಗೆತ್ತಿಕೊಳ್ಳಬೇಕಾದರೂ ಆ ಕೆಲಸದಲ್ಲಿ ನಮಗೆ passion ಎನ್ನುವುದು ಇರಬೇಕು. ardent passion. ಅದು ನಮ್ಮಲ್ಲಿ ಕಾಣಲು ಸಿಗಲಿಲ್ಲ ಈ ಚಳುವಳಿಯಲ್ಲಿ. ಅದೇ ಸಮಯ ನಮಗಿಷ್ಟವಾದ, ಊಟ ನಿದ್ದೆಯನ್ನೂ ತ್ಯಜಿಸಿ ಆಸಕ್ತಿ ತೋರಿಸುವ ಕ್ರಿಕೆಟ್ ಆಟದ ಕಡೆ ನಮ್ಮ ಆಸಕ್ತಿ ಸ್ವಲ್ಪ ನೋಡಿ. ಯಾವುದಾದರೂ ಪಂದ್ಯದಲ್ಲಿ ಭಾರತ ಸೋತರೆ ಪ್ರತೀ ತಿಮ್ಮ, ಬೋರ, ವೆಂಕ ಎಕ್ಸ್ಪರ್ಟ್ ಆಗಿ ಬಿಡುತ್ತಾರೆ. ಥತ್, ನಾಯಕ  ಟಾಸ್ ಗೆದ್ದು ಬ್ಯಾಟಿಂಗ್ ತಗೋ ಬೇಕಿತ್ತು, ನಾವು ಚೇಸ್ ಮಾಡಲು ನಾಲಾಯಕ್ಕು ಅಂತ ಅವ್ನಿಗ್ ಗೊತ್ತಿಲ್ವಾ….ಪಿಚ್ ತುಂಬಾ ಸ್ಲೋ ಆಗೋಯ್ತು…. ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಬೇಕಿತ್ತು ನೋಡು….. ಅಂಪೈರ್ ಕೈ ಕೊಟ್ಟ……..ಎಲ್ಲಿಂದ ಸಿಕ್ಕುದ್ನೋ ಈ ಕೋಚು?……. D/L ಮೆಥಡ್ ಸರಿಯಿಲ್ಲ, ನಮಗೆ ಅನುಕೂಲ ಆಗ್ಲಿಲ್ಲ ಡಕ್ವರ್ಥ್ ಲೀವೈಸ್ (D/L)……. ವಾವ್, ನೋಡಿದಿರಾ ಜ್ಞಾನವನ್ನು? ಇವರ ಅನಾಲಿಸಿಸ್ ಗಳಿಗೆ ಜೆಫ್ ಬಾಯ್ಕಾಟ್, ಹರ್ಷ ಭೋಗ್ಲೆ ಯಂಥವರು ಹಿಮ್ಮೆಟ್ಟುತ್ತಾರೆ. ಆ ಪಾಟಿ ಜ್ಞಾನ. ಜೀವಮಾನದಲ್ಲಿ ಬ್ಯಾಟ್ ಹಿಡಿದಿರದ, ಪಿಚ್ ಮೇಲೆ ಹೆಜ್ಜೆಯೂರಿಲ್ಲದವರ ಅನಾಲಿಸಿಸ್ಸು ಇದು. ಅದೇ ಸಮಯ ಅಣ್ಣಾ ಹಜಾರೆ ಹೆಸರು ಕೇಳಿದ ಕೂಡಲೇ ಯಾರಪ್ಪಾ ಈ ತಾತ ಎಂದು ಗೂಗ್ಲಿಸಿ ನೋಡುತ್ತಾರೆ. ಕ್ರಿಕೆಟ್ ನ ಗೂಗ್ಲೀ ಬಗ್ಗೆ ಸರಾಗವಾಗಿ ಮಾತನಾಡುವವರು ಅಣ್ಣಾ ಬಗ್ಗೆ ತಿಳಿಯಲು ಗೂಗ್ಲ್ ಮೊರೆ ಹೋಗುತ್ತಾರೆ. ಈಗ ತಿಳಿಯಾಯಿತೆ ಮರ್ಮ? ಲಂಚದ ವಿರುದ್ಧದ ಜನರ ಆಸಕ್ತಿ ನಿರಾಸಕ್ತಿ, ಅನಾದಾರದ ಮರ್ಮ? ಇದೇ passion ತರುವ ಫಲಿತಾಂಶ. ದೇಶವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರದ ಬಗ್ಗೆ ಕ್ರಿಕೆಟ್ ಕಡೆ ತೋರಿಸುವ ಕಿಂಚಿತ್ ಆಸಕ್ತಿಯನ್ನಾದರೂ ಜನ ತೋರಿಸಿದ್ದಿದ್ದರೆ ಬೀದಿಗಳು ಪ್ರತಿಭಟಿಸುವ ಜನರಿಂದ ತುಂಬಿ ಹೋಗುತ್ತಿದ್ದವು.  ಒಂದು ದಿನದ ಕಡ್ಡಾಯ ಓವರ್ಗಳ ಪಂದ್ಯಕ್ಕಾಗಿ ಮೈದಾನ ತುಂಬುವಂತೆ.

ಎರಡನೇ ವಿಶ್ವ ಮಹಾಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಅಂದಿನ ಬ್ರಿಟಿಶ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಯನ್ನು  ಮನವಿ ಮಾಡಿಕೊಂಡ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಡ ಎಂದು. ಬಹುಶಃ ಆಳಿಕೊಳ್ಳುವ ಸಾಮರ್ಥ್ಯ ಭಾರತೀಯರಿಗೆ ಇನ್ನೂ ಬಂದಿಲ್ಲ ಎಂದು ಈ ಸಿಗಾರ್ ಪ್ರೇಮಿ ಮುತ್ಸದ್ದಿಗೆ ತೋರಿರಬೇಕು. ಹಳೇ ತಲೆಮಾರಿನ, ವಯಸ್ಸಾದ ಯಾರನ್ನೇ ಹೀಗೇ ಮಾತಿಗೆ ಕೇಳಿ, ಅಯ್ಯೋ ಬ್ರಿಟಿಷರ ಕಾರುಬಾರೆ ಚೆನ್ನಿತ್ತು ಎನ್ನದಿರಲಾರರು. ಈ ಮಾತನ್ನು ಹತಾಶ ಜನರ ಬಾಯಲ್ಲಿ ಹಾಕಿದವರು, ನಮ್ಮ ಖಾದಿಧಾರಿ ರಾಜಕಾರಣಿಗಳು. ಆದರೆ ಪ್ರಜಾ ಪ್ರಭುತ್ವಕ್ಕೆ ಅವರೇ ಜೀವಾಳ. ಶಪಿಸುತ್ತಾ, ರಮಿಸುತ್ತಾ ಅವರೊಂದಿಗೇ ಕಳೆಯಬೇಕು ಕಾಲವನ್ನು ನಾವು ಮತ್ತು ನಮ್ಮ ಪ್ರೀತಿಯ ದೇಶ.

೨೦೧೧… ಹೀಗಿತ್ತು !

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಸಂದು ಹೋದ ವರ್ಷ ನಮಗೆ ನೀಡಿದ ಹರ್ಷ, ಭರವಸೆ ಮತ್ತು ದುಃಖ ದುಮ್ಮಾನಗಳ ಕುರಿತು ಸ್ವಲ್ಪ ಓದಿ.

ಈ ವರ್ಷ ಸರ್ವಾಧಿಕಾರದ ಉಸಿರು ಗಟ್ಟಿಸುವ ವಾತಾವರಣದಿಂದ ಕೆಲವು ದೇಶಗಳ ಜನರಿಗೆ ಮುಕ್ತಿ ಸಿಕ್ಕಿದರೆ ತಮ್ಮ ಬದುಕಿನಲ್ಲಿ ಅಮೋಘವಾದದ್ದನ್ನು ಸಾಧಿಸಿ ಸಾರ್ಥಕ ಬದುಕು ಸಾಗಿಸಿ ಕಣ್ಮರೆಯಾದ ಚೇತನಗಳು ಹಲವು.

ಉತ್ತರ ಆಫ್ರಿಕಾದ ಪುಟ್ಟ ದೇಶ ಟುನೀಸಿಯಾದಲ್ಲಿ ಅರಬ್ ಕ್ರಾಂತಿ. “ಅರಬ್ ವಸಂತ” ಎಂದು ಬಣ್ಣಿಸಲ್ಪಟ್ಟ ಈ ಕ್ರಾಂತಿ ೨೩ ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಜೈನುಲ್ ಆಬಿದೀನ್ ರ ಕುರ್ಚಿ ಪಲ್ಲಟ ಮಾಡಿತು. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿ ಜನಸಾಮಾನ್ಯರನ್ನು ಬಾಧಿಸಿತು. ಲಂಚಗುಳಿತನದಿಂದ ಬೇಸತ್ತ ನಿರೋದ್ಯೋಗಿ ಯುವಕ “ಮುಹಮ್ಮದ್ ಬೂ ಅಜೀಜಿ” ಆತ್ಮಹತ್ಯೆ ಮಾಡಿಕೊಂಡಾಗ ಬಂತು ಸರಕಾರಕ್ಕೆ ಸಂಚಕಾರ. ಜನ ಸಿಡಿದೆದ್ದರು, ಪ್ರದರ್ಶನಗಳು ನಡೆದವು. ಅಲ್ಲಿನ ಅಧ್ಯಕ್ಷನ ಯಾವ ಸಾಂತ್ವನದ ಮಾತುಗಳೂ ಜನರ ಆಕ್ರೋಶ ತಣಿಸಲು ವಿಫಲವಾದವು. ದಾರಿಗಾಣದೆ ಆಬಿದೀನ್ ದೇಶ ಬಿಟ್ಟು ಓಡಿದ. ಟುನೀಸಿಯಾ ಸರಕಾರ ಪತನವಾಗುತ್ತಿದಂತೆಯೇ ಈಜಿಪ್ಟ್, ಲಿಬಿಯಾ, ಸಿರಿಯಾ, ಯೆಮೆನ್, ಬಹರೇನ್, ದೇಶಗಳಿಗೂ ಕಾಲಿಟ್ಟಿತು ಅರಬ್ ವಸಂತ. ಮೂರು ದಶಕಗಳ ಕಾಲ ಈಜಿಪ್ಟ್ ದೇಶವನ್ನು ಆಳಿದ ಮುಬಾರಕ್ ಕೊನೆಗೂ ಅಧಿಕಾರ ತ್ಯಜಿಸಿದ. ರಕ್ತದ ಕೊನೇ ತೊಟ್ಟಿನ ವರೆಗೂ ಹೋರಾಡುವೆ ಎಂದ ಬಲಿಷ್ಠ ಮುಅಮ್ಮರ್  ಗದ್ದಾಫಿ ಕ್ರಾಂತಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಹತನಾದ. ಲಿಬ್ಯಾ ವಸಂತದ ಸಂಭ್ರಮದ ಕುಣಿತ ಕಂಡಿತು. ಅರಬರಿಗೆ ಸ್ವಾತಂತ್ರ್ಯ ಎಂದರೇನು ಎಂದು ಗೊತ್ತಿಲ್ಲ ಎಂದು ಮೂಗು ಮುರಿಯುತ್ತಿದ್ದ ವಿಶ್ವ ಅರಬರ ಸ್ವಾತಂತ್ರ್ಯಕ್ಕಾಗಿನ ತುಡಿತ ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಂಡಿತು.

ಅರಬ್ ದೇಶಗಳ ಈ ರಾಜಕೀಯ ವಿದ್ಯಮಾನಗಳಿಗೆ ಒತ್ತು ಕೊಟ್ಟ, ಕುಮ್ಮಕ್ಕು ನೀಡಿದ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್ ಗಳು ರಾರಾಜಿಸಿದವು. ಸಾಮಾನ್ಯವಾಗಿ ತಂತ್ರಜ್ಞಾನ ಉಳ್ಳವರ ಸೊತ್ತು. ಆದರೆ ಸಾಮಾಜಿಕ ತಾಣಗಳು ಈ ಅಸಮಾನತೆಯನ್ನು ಅಮೋಘವಾಗಿ ಹೋಗಲಾಡಿಸಿದವು.  ಕಂಪ್ಯೂಟರ್ ತಂತ್ರಜ್ಞಾನ ಜನರನ್ನು ದಾಸ್ಯದ ಸಂಕೋಲೆಯಿಂದ ಹೊರಬರಲು ದೊಡ್ಡ ರೀತಿಯಲ್ಲಿ ಸಹಾಯ ಮಾಡಿತು.  

ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕೆಯ ಕೆಂಗಣ್ಣಿಗೆ ಸಿಕ್ಕು ನುಚ್ಚು ನೂರಾದ ಜಪಾನ್ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು ಮಾರ್ಚ್ ೨೦೧೧ ರಲ್ಲಿ. ತ್ಸುನಾಮಿ ಅಲೆಗಳು ಜಪಾನ್ ದ್ವೀಪವನ್ನು ನಿರ್ದಯವಾಗಿ ಗುಡಿಸಿ ಹಾಕಿತು. ೧೬,೦೦೦ ಕ್ಕೂ ಮಿಕ್ಕು ಜನ ಸತ್ತರು. ನಿಸರ್ಗ ತಮ್ಮ ಮೇಲೆ ಈ ರೀತಿ ಎರಗಿ ಬಂದರೂ ಧೃತಿಗೆಡದೆ, ದುರಾದೃಷ್ಟವನ್ನು ಶಪಿಸದೆ, ಜಪಾನೀಯರು ತಾಳ್ಮೆಯಿಂದ ಅಳಿದುಳಿದುದನ್ನು ಹೆಕ್ಕಿ ತಮ್ಮ ಬದುಕಿನ ಮರುನಿರ್ಮಾಣದ ಕಡೆ ಗಮನ ನೆಟ್ಟರು.   

ಮುಪ್ಪಿನೊಂದಿಗೆ ಶೃಂಗಾರ ಚಟುವಟಿಗಳು ಸಾಮಾನ್ಯವಾಗಿ ಕೊನೆಯಾಗುತ್ತವೆ ಅಥವಾ ಹಂಪ್ ಗಳನ್ನು ದಾಟುವ ವಾಹನಗಳಂತೆ ನಿಧಾನವಾಗುತ್ತವೆ. ಆದರೆ ಚಿರ ರಸಿಕ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲಸ್ಕೊನಿ ಯ ಹಾರ್ಮೋನುಗಳು ಯುವಜನರನ್ನು ನಾಚಿಸುತ್ತವೆ. ಉರುಳುವ ವರ್ಷಗಳು ಪಂಚಾಂಗಕ್ಕೆ ಮಾತ್ರ ಸೀಮಿತ, ತನ್ನ ಲೈಂಗಿಕ ಚಪಲಕ್ಕಲ್ಲ ಎಂದು ಹದಿ ಹರೆಯದ ಪೋರಿಯರೊಂದಿಗೆ ಸಲ್ಲಾಪ ಆಡಿ ಕಷ್ಟಕ್ಕೆ ಸಿಕ್ಕಿಕೊಂಡ ಪ್ರಧಾನಿ. ಲೈಂಗಿಕ ಹಗರಣಕ್ಕೆ ಬಲಿಯಾಗದೆ ಅಚ್ಚರಿದಾಯಕವಾಗಿ ಬದುಕುಳಿದ ಬೆರ್ಲೋ ಅಧಿಕಾರ ತ್ಯಜಿಸಿದ್ದು ಆರ್ಥಿಕ ಸಮಸ್ಯೆ ಕಾರಣ.

ಏಪ್ರಿಲ್ ತಿಂಗಳ ಮೊದಲ ದಿನ ಮೂರ್ಖರ ದಿನ. ಕೇಂದ್ರ ಸರಕಾರ ಭ್ರಷ್ಟಾಚಾರದ ಮೂಲಕ ಲಂಗು ಲಗಾಮಿಲ್ಲದೆ ದೇಶವನ್ನು ಒಂದು ಮೂರ್ಖರ ಸಂತೆ ರೀತಿ ನಡೆಸಿ ಕೊಳ್ಳಲು ತೊಡಗಿದಾಗ ಸಿಡಿದೆದ್ದರು “ಇಳಿ ಚೇತನ” ಅಣ್ಣಾ ಹಜಾರೆ. ತನ್ನ ಸ್ವ ಪ್ರಯತ್ನದಿಂದ ಮಹಾರಾಷ್ಟ್ರದ ಹಳ್ಳಿಯೊಂದನ್ನು ಅಭಿವೃದ್ಧಿ ಗೊಳಿಸಿದ ಈ ಸ್ವಾತಂತ್ರ್ಯ ಹೋರಾಟಗಾರ ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ ಆವರಿಸಿಕೊಂಡ ಲಂಚಗುಳಿತನವನ್ನು ಇಲ್ಲವಾಗಿಸಲು ಉಪವಾಸ ಸತ್ಯಾಗ್ರಹ ಶುರು ಮಾಡಿದರು. ಐದು ಸಾವಿರ ಮೈಲು ದೂರದಿಂದ ವ್ಯಾಪಾರಕ್ಕೆ ಎಂದು ಬಂದು ನಮ್ಮನ್ನು ಒದ್ದು, ದಬ್ಬಾಳಿಕೆಯಿಂದ ಆಡಳಿತ ನಡೆಸಿದ ಪರದೇಸೀ ಬ್ರಿಟಿಷರೂ ಉಪವಾಸ ಸತ್ಯಾಗ್ರಹಕ್ಕೆ ಮಣಿದರು. ಆದರೆ ನಮ್ಮ ದೇಸೀ ನಾಯಕರು ಜಪ್ಪಯ್ಯ ಎನ್ನಲಿಲ್ಲ. ಬ್ರಿಟಿಷರಿಗಿದ್ದ ನಾಚಿಕೆ, ಔದಾರ್ಯ ಇವ್ಯಾವುವೂ ನಮ್ಮ ನಾಯಕರಲ್ಲಿ ಕಾಣದಾಯಿತು. ಅಣ್ಣಾರವರ ಆಂದೋಲನವನ್ನು  ಮೊದ ಮೊದಲು ಅವಗಣನೆ ಮಾಡಿ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಭಯ ಬಿದ್ದು ಲೋಕಪಾಲ್ ಮಸೂದೆಗೆ ಒಪ್ಪುವ ನಾಟಕ ಆಡಿ ಅಣ್ಣಾ ರಿಗೆ ಸೊಗಸಾಗಿ ನಾಮ ಬಳಿದರು. ಅದೂ ಸಾಲದು ಎಂಬಂತೆ ಅಣ್ಣಾ ಜೊತೆ ವೇದಿಕೆಯಲ್ಲಿರುವವರ ಪೂರ್ವಾಪರ ಚರಿತ್ರೆ ತೆಗೆದು ಅಣ್ಣಾ ದೇಶ ಎಣಿಸಿದ ಮುಗ್ಧ ಅಣ್ಣಾ ಅಲ್ಲ, ಆರೆಸ್ಸೆಸ್ ಏಜೆಂಟ್ ಎಂದು ಪ್ರಚಾರ ಮಾಡಿ ಲಂಚದ ವಿರುದ್ಧದ ಅಂದೋಲನದ ದಿಕ್ಕನ್ನೇ ದಿಕ್ಕಾ ಪಾಲು ಮಾಡಿತು ಕೇಂದ್ರ ಸರಕಾರ. ತುನೀಸಿಯಾದ ಬೂ ಅಜೀಜಿ ಯ ಆತ್ಮ ಹತ್ಯೆ ಮತ್ತು ಜನರ ಪ್ರತಿಭಟನೆಗೆ ಅಲ್ಲಿನ ಅಧ್ಯಕ್ಷ ಲಂಚಗುಳಿಯಾದರೂ, ಮರ್ಯಾದಸ್ಥನಂತೆ ತಲೆ ಬಾಗಿ ಹೊರನಡೆದ.  ನಮ್ಮಲ್ಲಿ ಹಾಗಾಗಲಿಲ್ಲ. ನಮ್ಮ ಕೇಂದ್ರ ಸರಕಾರಕ್ಕೆ ತಲೆ ಇದ್ದರಲ್ಲವೇ ಬಾಗುವ ಪ್ರಶ್ನೆ ಏಳೋದು.          

ನಾರ್ವೆ ದೇಶದಲ್ಲಿ ನರಸಂಹಾರ: ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾದ ಅಇರೋಪ್ಯ ಖಂಡದ “ನಾರ್ವೆ” ಪುಟ್ಟ ದೇಶ. ಇಲ್ಲಿನ ಸಾಲ್ಮನ್ ಜಾತಿಯ ಮೀನು ಜಗತ್ಪ್ರಸಿದ್ಧ. ಸಾಲ್ಮನ್ ಮೀನು ಹೃದಯಕ್ಕೆ ತುಂಬಾ ಒಳ್ಳೆಯದಂತೆ. land of midnight sun ಎಂದೂ ಅರಿಯಲ್ಪಡುವ ಈ ದೇಶದಲ್ಲಿ ವರ್ಷದ ಕೆಲವೊಂದು ತಿಂಗಳು ಸೂರ್ಯ ಮಧ್ಯ ರಾತ್ರಿ ಉದಯಿಸುತ್ತಾನೆ. ೩೨ ವರ್ಷ ಪ್ರಾಯದ ಸುಂದರ ಯುವಕ ‘ಆಂಡರ್ಸ್ ಬೆಹ್ರಿಂಗ್ ಬ್ರೆವಿಕ್’ ಪ್ರಶಾಂತ ನಾರ್ವೆ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದ ತನ್ನ ನಿರ್ದಯೀ ಹಿಂಸೆಯ ಮೂಲಕ. ರಾಜಧಾನಿ ಓಸ್ಲೋ ನಗರದಲ್ಲಿ ಬಾಂಬಿಟ್ಟು ನಗರದ ಸಮೀಪದಲ್ಲೇ ಇದ್ದ ದ್ವೀಪಕ್ಕೆ ಹೋಗಿ ಅಲ್ಲಿ ನೆರೆದಿದ್ದ ನೂರಾರು ಜನರ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿ ೮೦ ಕ್ಕೂ ಹೆಚ್ಚು ಜನರನ್ನು ಕೊಂದ. ಕ್ರೈಸ್ತ ಮೂಲಭೂತವಾದಿಯಾಗಿದ್ದ ಈತನ ಕ್ರೌರ್ಯಕ್ಕೆ ವಿಶ್ವ ಬೆಚ್ಚಿತು, ರಾತ್ರಿ ಉದಯಿಸುತ್ತಿದ್ದ ಸೂರ್ಯ ಹಾಡು ಹಗಲೇ ಅಸ್ತಮಿಸಿದ ಇವನ ಕ್ರೌರ್ಯಕ್ಕೆ ಬೆಚ್ಚಿ.  

ಯಾವುದೇ ಕಾರಣವಿಲ್ಲದೆ ಇರಾಕಿನ ಮೇಲೆ ಧಾಳಿ ಮಾಡಿ, ಆ ದೇಶವನ್ನು ಆಕ್ರಮಿಸಿಕೊಂಡು ಎರಡು ದಶಲಕ್ಷಕ್ಕೂ ಜನರನ್ನು ಕೊಂದ ಅಮೇರಿಕಾ ತನ್ನ ಸೈನ್ಯ ಹಿಂದಕ್ಕೆ ಕರೆಸಿಕೊಳ್ಳಲು ಕೊನೆಗೂ ತೀರ್ಮಾನಿಸಿತು. ಇರಾಕಿನ ಮೇಲಿನ ಯುದ್ಧ ಯಾವ ರೀತಿ ಅಮೇರಿಕಾ, ಇಂಗ್ಲೆಂಡ್ ನಂಥ ಬಲಿಷ್ಠ ದೇಶಗಳು ಜನರ ಕಣ್ಣಿಗೆ ಬೂದಿ ಎರಚಿ ತಮ್ಮ ಸ್ವಾರ್ಥ ಸಾಧಿಸಲು ತಯಾರು ಎನ್ನುವುದಕ್ಕೆ ಇರಾಕ್ ಜ್ವಲಂತ ನಿದರ್ಶನವಾಯಿತು.

ಆಫ್ರಿಕಾ ಖಂಡದ ಸುಡಾನ್ ದೇಶದಿಂದ ದಕ್ಷಿಣ ಸುಡಾನ್ ಎನ್ನುವ ದೇಶ ಪ್ರತ್ಯೇಕಗೊಂಡು ಸ್ವಾತಂತ್ರ್ಯವಾಯಿತು. 

೨೦೧೧ ರ ನೊಬೆಲ್ ಶಾಂತಿ ಪುರಸ್ಕಾರ ಈ ಸಲ ಮೂರು ಮಹಿಳೆಯರು ಹಂಚಿಕೊಂಡರು. ಸ್ವಾತಂತ್ರ್ಯ, ಸೌಹಾರ್ದ, ಮತ್ತು ಲಿಂಗ ಬೇಧ ನಿವಾರಣೆಗೆ ಶ್ರಮಿಸಿದ ಈ ಮಹಿಳೆಯರಲ್ಲಿ ಇಬ್ಬರು ಆಫ್ರಿಕಾ ಖಂಡದ ಲೈಬೀರಿಯ ದೇಶದವರು, ಮತ್ತೊಬ್ಬರು ಅರಬ್ ಪ್ರಾಂತ್ಯದ ಯೆಮೆನ್ ದೇಶದವರು. ಸಾಂಪ್ರದಾಯಿಕ ಅರಬ್ ಮುಸ್ಲಿಂ  ಸಮಾಜದಿಂದ ಬಂದ “ತವಕ್ಕುಲ್ ಕರ್ಮಾನ್” ಯಾವ ತೊಡಕುಗಳಿಗೂ ಅಂಜದೆ ತನ್ನ ದೇಶದ ಸರ್ವಾಧಿಕಾರಿಯನ್ನು ಧೈರ್ಯವಾಗಿ ಎದುರಿಸಿ ಯಶಸ್ವಿಯಾದರು. ಮಹಿಳೆ ಧೈರ್ಯವಾಗಿ ಮುನ್ನುಗ್ಗಿದರೆ ಯಾವ ಮೂಲಭೂತವಾದಿಗಳಾಗಲೀ, ಸಮಾಜದ ಯಾವ ನಿರ್ಬಂಧಗಳೇ ಆಗಲಿ ಲೆಕ್ಕಕ್ಕೆ ಬರದು ಎಂದು ವಿಶ್ವಕ್ಕೆ ಸಾರಿದ ೩೨ ರ ಹರೆಯದ ತವಕ್ಕುಲ್ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಮುಸ್ಲಿಂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇರಾನಿನ ಶಿರೀನ ಇಬಾದಿ ನೊಬೆಲ್ (೨೦೦೩) ವಿಜೇತ ಮತ್ತೊಬ್ಬ ಮಹಿಳೆ.   

ಈ ಸಲದ ಪುರಸ್ಕಾರ ಅರಬ್ ವಿಶ್ವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಬ್ಲಾಗಿಗಳಿಗೆ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸ್ವಾತಂತ್ರ್ಯದೊಂದಿಗೆ ಸಮಾನತೆಯ ಕಹಳೆ ಮೊಳಗಿಸಿದ ಧೀರ ಮಹಿಳೆಯರ ಪಾಲಾಯಿತು ನೊಬೆಲ್.  

ಕಾಲನ ಕರೆಗೆ ವಿಧೇಯರಾಗಿ ಓಗೊಟ್ಟು ಕಣ್ಮರೆಯಾದವರು

ವಿವಾದಾಸ್ಪದ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ನಿಧನ. ಹುಸೇನರ ಕುಂಚಗಳು ತನ್ನ canvas ಗಡಿ ಮೀರಿ ಜನರ ನಂಬಿಕೆಗಳ ಮೇಲೆ ಹರಿದಾಡ ತೊಡಗಿಡಾಗ ಗಡೀ ಪಾರಾಗಬೇಕಾಯಿತು. ಕತಾರ್ ದೇಶದ ಪೌರತ್ವ ಪಡೆದರೂ ಮಾತೃ ಭೂಮಿಗಾಗಿ ಮಿಡಿಯಿತು ಹುಸೇನ್ ಮನ. ಹುಸೇನ್ ಅಂತ್ಯ ಲಂಡನ್ನಿನಲ್ಲಿ. ಹುಸೇನ್ ಮರಣಕ್ಕೆ ಪ್ರಧಾನಿ, ರಾಷ್ಟ್ರಪತಿ ಶೋಕ. ಹುಸೇನ್ ಸಾವು ರಾಷ್ಟ್ರೀಯ ನಷ್ಟ ಎಂದು ಪ್ರಧಾನಿ ಹೇಳಿದರೆ, ರಾಷ್ಟ್ರಪತಿ ಗಳು ಹೇಳಿದ್ದು ಹುಸೇನ್ ಇಲ್ಲದ ಕಲೆ ಶೂನ್ಯ ಎಂದು.

ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾದೆನ್. ಅಮೆರಿಕೆಯ to do list ನಲ್ಲಿ ಆಗ್ರ ಪಂಕ್ತಿಯಲ್ಲಿದ್ದ ಲಾದೆನ್ ನ ಅವಸಾನ ಕೊನೆಗೂ ಕೈಗೂಡಿತು. ಪಾಕ್ ರಾಜಧಾನಿಯ ಸಮೀಪದ ಅಬೋಟ್ಟಾ ಬಾದ್ ನಲ್ಲಿ ಅಡಗಿ ಕೂತಿದ್ದ ಬಿನ್ ಲಾದೆನ್ ನನ್ನು ಅಮೆರಿಕೆಯ ಅತಿ ಪ್ರತಿಷ್ಠಿತ ಕಮಾಂಡೋ ಪಡೆ “ಸೀಲ್” ಬೇಟೆಯಾಡಿ ಅಮೇರಿಕಾ ನಿರಾಳ ಭಾವ ಅನುಭವಿಸುವಂತೆ ಮಾಡಿತು. ಬಿನ್ ಲಾದೆನ್ ಸಾವಿನ ಸುದ್ದಿ ವಿಶ್ವ ಪುರಾವೆ ಬಯಸಿದಾಗ ಅಮೇರಿಕಾ ಹೇಳಿದ್ದು, ಪ್ರದರ್ಶಿಸಲು ಪಾರಿತೋಷಕ ಅಲ್ಲ ನಮಗೆ ಸಿಕ್ಕಿದ್ದು, ನಾವು ಹೇಳಿದ್ದನ್ನು ನಂಬಿ ಎಂದು. ಸಾವಿರಾರು ಜನರ ಭವಿಷ್ಯವನ್ನು ಭೂ ಸಮಾಧಿ ಮಾಡಿದ್ದ ಬಿನ್ ಲಾದೆನ್ ಗೆ ಸತ್ತಾಗ ಸಿಕ್ಕಿದ್ದು ಜಲಸಮಾಧಿ.  

ಕಂಪ್ಯೂಟರ್ ಎಂದರೆ ಆಕರ್ಷಣೆ ಇಲ್ಲದ ಒಂದು bland ಉಪಕರಣ ಅಲ್ಲ, ಅದು ಒಂದು ಮೋಜನ್ನು, ನೀಡುವ ಆಕರ್ಷಕ ಉಪಕರಣ ಎಂದು ಜಗತ್ತಿಗೆ ತೋರಿಸಿದ “ಆಪಲ್” ನ ಒಡೆಯ ಸ್ಟೀವ್ ಜಾಬ್ಸ್  ಯಕೃತ್ತಿನ ಕ್ಯಾನ್ಸರ್ ಗೆ ಬಲಿಯಾದ. ತಂತ್ರಜ್ಞಾನ ಬಡವಾಯಿತು ಎಂದು ಶೋಕಿಸಿದರು ಟೆಕ್ಕಿಗಳು.

ಭಾರತೀಯ ಕ್ರಿಕೆಟ್ ನ ಗತಕಾಲದ ಹೀರೋ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನದಿಂದ ಕ್ರಿಕೆಟ್ ಆಟ ತನ್ನ ಹೊಳಪನ್ನು ಕಳೆದು ಕೊಂಡಿತು. ಟೈಗರ್ ಎಂದು ಕರೆಯಲ್ಪಡುತ್ತಿದ್ದ ಈ ಸ್ಫುರದ್ರೂಪಿ “ಪಟೌಡಿ” ಪ್ರಾಂತ್ಯದ “ನವಾಬ್’ ಭಾರತದ ಯಶಸ್ವೀ ನಾಯಕರಲ್ಲೊಬ್ಬರು. ಅಂದಿನ ಪ್ರಸಿದ್ಧ ನಟಿ ಶರ್ಮಿಳಾ ಟಾಗೋರ್ ರನ್ನು ವರಿಸಿದ ಪಟೌಡಿ ಕ್ರಿಕೆಟ್ ಆಟಕ್ಕೆ ಗ್ಲಾಮರ್ ತಂದು ಕೊಟ್ಟವರು. ಪಟೌಡಿ ನಿಧನರಾದಾಗ ವಯಸ್ಸು ೭೦.

ಭೀಂ ಸೇನ್ ಜೋಶಿ, ಭಜನ್ ಲಾಲ್, ಭೂಪೇನ್ ಹಜಾರಿಕಾ, ಅಂಬಿಕಾ ಚೌಧುರಿ, ಚಿತ್ರನಟ ದೇವ್ ಆನಂದ್, ಶಮ್ಮಿ ಕಪೂರ್, ಸತ್ಯಸಾಯಿ ಬಾಬ, ಅರ್ಜುನ್ ಸಿಂಗ್ ಇತರೆ ಗಣ್ಯರು ಅಗಲಿದವರು.  

ನಮ್ಮ ರಾಜ್ಯದ ವರ್ಣರಂಜಿತ ವ್ಯಕ್ತಿತ್ವ ಕಣ್ಮರೆ. ಎಸ್, ಬಂಗಾರಪ್ಪ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ ರಾಜಕೀಯ ಕ್ಷೇತ್ರದಲ್ಲಿ ದುಡಿದವರು. ಒಂದು ಕಾಲದಲ್ಲಿ ನಾನು ಅವರ ಅಭಿಮಾನಿ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಅಭಿಮಾನಿಗಳಿಗೆ ಇರುಸು ಮುರುಸು ಕಸಿವಿಸಿ ತರುತ್ತಿದ್ದ ಬಂಗಾರಪ್ಪ ಟೆನ್ನಿಸ್ ಮತ್ತು ಯೋಗ ಪ್ರೇಮಿ. ತಂದೆಯ ಹೆಸರು ಎಷ್ಟಿ ಆಕರ್ಷಕ, ಜನಪ್ರಿಯ  ಎಂದರೆ ಅವರ ಮಗನಿಗೆ ಸ್ವಂತದ ಹೆಸರಿನ ಅವಶ್ಯಕತೆಯೇ ಬರಲಿಲ್ಲ. ಕುಮಾರ್ ಬಂಗಾರಪ್ಪ ಎಂದು ಪ್ರಸಿದ್ಧನಾದ. 

ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಬರಲಿರುವ ಹೊಸ ವರುಷ ಉಲ್ಲಾಸ, ಹರ್ಷ, ಯಶಸ್ಸನ್ನು ತರಲಿ ಎಂದು ಹಾರೈಸುತ್ತಾ…….

ನಿಮ್ಮ ಅಬ್ದುಲ್

ಇನ್ನೂರು ರೂಪಾಯಿಗೆ ಒಂದು ವರ್ಷ

ಇನ್ನೂರು ರೂಪಾಯಿ ಕದ್ದ ಆರೋಪಕ್ಕೆ ಹದಿ ಹರೆಯದ ಹುಡುಗನಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ ಒಂದು ವರ್ಷದ ಕಾರಾಗೃಹ ವಾಸ. ಸಾವಿರಾರು ಕೋಟಿ ನುಂಗಿದ, ತೆರಿಗೆ ಪಾವತಿಸದೆ ಮೆರ್ಸಿ ಡೀಸ್, BMW ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುವ ಕಳ್ಳರಿಗೆ ಹೋದಲ್ಲೆಲ್ಲಾ ಮಣೆ, ಆದರ, ಅಭಿಮಾನ, ಸನ್ಮಾನ. ಭಾರತ ಕೇವಲ ಶ್ರೀಮಂತರ, ಲೂಟಿಕೋರರ, ಬಾಲಿವುಡ್, ಕ್ರಿಕೆಟ್ ತಾರೆಯರ, ಅಧಿಕಾರವಿರುವವರ ಉಲ್ಲಾಸಕ್ಕಾಗಿ ಇರುವ  ನಾಡೇ? ಹುಡುಗ ಜೈಲಿನಿಂದ ಹೊರ ಹೋಗುವಾಗ ಇಂಥಾ ಕೆಲಸ ಇನ್ನೊಮ್ಮೆ ಮಾಡಬೇಡ ಎಂದು ಪೋಲೀಸಪ್ಪನೊಬ್ಬ ಹೇಳುತ್ತಾನಂತೆ. ಈ ಮಾತನ್ನು ಕಿನ್ನಿಮೋಳಿಗೋ, ಕಲ್ಮಾಡಿಗೋ, ರಾಜಾಗೋ ಹೇಳಲು ಪೇದೆಯೊಬ್ಬನಿಂದ  ಸಾಧ್ಯವೇ?

ಸಮಾಜದ ಗಣ್ಯ ವ್ಯಕ್ತಿಗಳು ಮಾಡಿದ ಪಾಪಗಳು ಸೆಷನ್ಸ್ ಕೋರ್ಟು, ಹೈ ಕೋರ್ಟು, ಸುಪ್ರೀಂ ಕೋರ್ಟು, ಸುಳ್ಳು ಸುಳ್ಳೇ ಮಾತನಾಡುವ ಕರಿ ಕೋಟುಗಳನ್ನೆಲ್ಲಾ ಸುತ್ತಿ ಸುತ್ತಿ ಬಸವಳಿದು ಕೊನೆಗೆ ಮರೆಯಾಗಿ ಹೋಗುತ್ತವೆಯೇ ವಿನಃ ಮಹನೀಯರುಗಳು ಅನುಭವಿಸಿದ ಜೈಲು ಶಿಕ್ಷೆ ಬಗ್ಗೆ ಓದಿದ ನೆನಪಿದೆಯೇ?      

 

ತೇರೆ ಬಿನ್ ಲಾದೆನ್…

ಲಾದೆನ್, ನೀನಿಲ್ಲದೆ… ಸಿನೆಮಾ ದೊಡ್ಡ ಸುದ್ದಿ ಮಾಡಿತು ನಮ್ಮ ದೇಶದಲ್ಲಿ. ಲಾದೆನ್ ಬಗೆಗೆ ಅಮೆರಿಕೆಯ ಅತಿ ಆಸಕ್ತಿಯ ಕುರಿತು ರಚಿಸಿದ ಈ ಚಿತ್ರ ವೀಕ್ಷಕರನ್ನು ರಂಜಿಸಿತು. ಲಾದೆನ್ ನ         enigma ರಾಜಕಾರಣಿ, ಸುದ್ದಿ ಪಂಡಿತರನ್ನು ಮಾತ್ರವಲ್ಲ ಚಿತ್ರರಂಗವನ್ನೂ ಬಾಧಿಸಿತು. ಹತ್ತು ಹಲವು ವರ್ಷಗಳಿಂದ ಒಂದೇ ಸಮನೆ ಅಮೇರಿಕಾ ಲಾದೆನ್ ಗಾಗಿ ಪ್ರಪಂಚ ಜಾಲಾಡಿದರೂ ಸಿಗದೇ ಹತಾಶವಾಗಿದ್ದಾಗ ಇದ್ದಕ್ಕಿದ್ದಂತೆ, ಯಾವ ಸುಳಿವೂ, ಮುನ್ಸೂಚನೆಯೂ ಇಲ್ಲದೆ justice is done, Laden is gone ಎಂದು ಬೆಳ್ಳಂ ಬೆಳಗ್ಗೆ  ಕೇಳಿ ತಬ್ಬಿಬ್ಬಾದ ನಮಗೆ ಲಾದೆನ್ ಸಾವು ಸಿನಿಮೀಯ ರೀತಿ ಎಂದು ಅನ್ನಿಸಿದರೆ ತಪ್ಪಾಗಲಾರದು. ಹತ್ತು ವರ್ಷಗಳಿಂದ ಅತ್ಯಾಧುನಿಕ ಉಪಗ್ರಹಗಳಿಂದ ಹಿಡಿದು ಅಮೇರಿಕನ್ ಸೈನಿಕರ high tech binocular ಗಳಿಗೂ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಬಿನ್ ಲಾದೆನ್ ದಿಢೀರನೆ ಕೊಲ್ಲಲ್ಪಟ್ಟ ಎಂದರೆ ಒಂದು ರೀತಿಯ ಸಿನಿಮೀಯ ತಾನೇ?  

ಲಾದೆನ್ ಬರೀ ಅಮೆರಿಕೆಗೆ ಮಾತ್ರವಲ್ಲ, ನಮ್ಮ ದೇಶದಲ್ಲೂ ಕುತೂಹಲ, ಭಯ, ಆಕ್ರೋಶ ಬರಿಸಿದ ಹೆಸರು. ಅಮೆರಿಕೆಯ ಮೇಲೆ ಮತ್ತು ವಿಶ್ವದ ಇತರೆ ನಗರಗಳಲ್ಲಿ ತನ್ನ ಸಾವಿನ ಏಜೆಂಟರನ್ನು ಹರಿಬಿಟ್ಟ ಲಾದೆನ್ ಕೊನೆಗೂ ಸೆಣೆಸುತ್ತಾ  ಉರುಳಿ ಬಿದ್ದ ಅಮೆರಿಕೆಯ ನಾವಿಕ ದಳದ ಯೋಧರ ಗುಂಡುಗಳಿಗೆ,  ಪಾಕಿಸ್ತಾನದ “ಅಬೋಟ್ಟಾಬಾದ್” ನಗರದಲ್ಲಿ.

ಅಬೋಟ್ಟಾಬಾದ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ೩೫ ಮೈಲು ದೂರ ಇರುವ, ಪ್ರತಿಷ್ಠಿತ ಸೈನಿಕ ತರಬೇತಿ ಕಾಲೇಜು ಹೊಂದಿದ ಈ ನಗರದಲ್ಲಿ ಬಿನ್ ಲಾದೆನ್ ಸುಮಾರು ಐದು ವರ್ಷಗಳಿಗೂ ಹೆಚ್ಚು ಕಾಲ ಅವಿತು ಕೊಂಡಿದ್ದ ಎಂದರೆ ಯಾರೂ ದಂಗಾಗುವರು. ಅಮೆರಿಕೆಯಂತೂ ಮೂರ್ಛೆ ಬೀಳುವುದೊಂದು ಬಾಕಿ. ಭಯೋತ್ಪಾದನೆ ತಡೆಯಲು, ಲಾದೆನ್ ಕ್ರುತ್ಯಗಳನ್ನು ತಡೆಯಲು ಪಾಕಿಸ್ತಾನದ ಬೆಂಬಲ ಪಡೆದಿದ್ದ ಅಮೇರಿಕಾ ಈ ಸಹಾಯಕ್ಕೆ ಕೊಡುತ್ತಿದ್ದ ಫೀಸು ವರ್ಷಕ್ಕೆ ೩ ಬಿಲ್ಲಿಯನ್ ಡಾಲರ್. ಯಾಚಕ ದೇಶ. ಇಂಥದ್ದೇ ಮತ್ತೊಂದು ಯಾಚಕ ದೇಶ ಇಸ್ರೇಲ್. ಬಿನ್ ಲಾದೆನ್ ನನ್ನು ಹುಡುಕುತ್ತಿದ್ದೇವೆ, ತಾಲಿಬಾನಿ ಗಳನ್ನು ಸದೆ ಬಡಿಯುತ್ತಿದ್ದೇವೆ ಎಂದು ಸುಳ್ಳು ಸುಳ್ಳೇ ಭರವಸೆ ನೀಡುತ್ತಾ ಅಮೆರಿಕೆಯ ಡಾಲರುಗಳ ಲಂಚವನ್ನು ಲಜ್ಜೆಯಿಲ್ಲದೆ ಸ್ವೀಕರಿಸಿದ ಪಾಕ್ ಅಮೆರಿಕೆಗೆ ಮೋಸ ಮಾಡಿತೆಂದೇ ವಿಶ್ವದ, ಅಮೆರಿಕನ್ನರ ನಂಬಿಕೆ. ಈ ರೀತಿ ಪುಕ್ಕಟೆ ಯಾಗಿ ಸಿಗುತ್ತಿದ್ದ ಸಂಪತ್ತನ್ನು ನುಂಗುತ್ತಿದ್ದ ಪಾಕಿಗೆ ಲಾದೆನ್ ಚಿನ್ನದ ತತ್ತಿ ಇಡುವ ಕೋಳಿ. main source of income. ಪಾಪ, ಲಾದೆನ್ ಸಾವಿನಿಂದ ದೊಡ್ಡ, ಭರಿಸಲಾರದ ನಷ್ಟ ಪಾಕಿಗೆ.  

ಪಾಕಿಸ್ತಾನ ಮಾತ್ರ ತನಗೆ ಲಾದೆನ್ ನ ಇರುವಿನ ಬಗ್ಗೆ ಗೊತ್ತೇ ಇಲ್ಲ ಎಂದು ಆಣೆ ಹಾಕಿ ಹೇಳಿದರೂ circumstantial evidence ಇದಕ್ಕೆ ವ್ಯತಿರಿಕ್ತ. ಈ ವಿವಾದದಲ್ಲಿ ಮತ್ತೊಂದು ಸಮಸ್ಯೆ ಇದೆ. ಅಮೇರಿಕಾ ಮತ್ತು ಪಾಕಿಸ್ತಾನ chronic liars. ಶುದ್ಧ ಸುಳ್ಳರು. ಈ ಇಬ್ಬರ ತಗಾದೆ ಬಗೆಹರಿಸಲು ಇಲ್ಲಿದೆ ಲಿಟ್ಮಸ್ ಟೆಸ್ಟ್. ಲಾದೆನ್ ಎಲ್ಲಿದ್ದಾನೆ ಎನ್ನುವುದು ಪಾಕಿಗೆ ತಿಳಿದಿತ್ತೆ? ಪಾಕಿನ ಸಹಾಯವಿಲ್ಲದೆ ಅಮೆರಿಕೆಯ ಬ್ಲಾಕ್ ಹಾಕ ಹೆಲಿಕಾಪ್ಟರ್ ಗಳು ಹೇಗೆ ತಾನೇ ಲಾದೆನ್ ಇರುವಲ್ಲಿಗೆ ಬರಲು ಸಾಧ್ಯ? ಅಲ್ಕೈದಾ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನುವ ಭೀತಿ ಪಾಕಿಗೆ ತಾನು ಈ ಸಾಹಸದಲ್ಲಿ ಪಾಲು ಗೊಂಡಿಲ್ಲ ಎಂದು ಹೇಳಲು ಪ್ರೇರೇಪಿಸುತ್ತಿರಬಹುದೇ? ಪಾಕಿಸ್ತಾನದ ಪರಿಸ್ಥತಿ ಅಡಕ್ಕೊತ್ತರಿ ಯಲ್ಲಿ ಸಿಕ್ಕ ಅಡಿಕೆಯಂತೆ. ಲಾದೆನ್ ಇರುವ ಸ್ಥಳ ತೋರಿಸಿ ಅಮೆರಿಕೆಗೆ ಸಹಕಾರ ನೀಡಿದೆ ಎಂದರೆ ಅಲ್ ಕೈದಾ ಬಿಡೋಲ್ಲ, ಲಾದೆನ್ ಎಲ್ಲಿದ್ದಾನೆ ಎಂದು ತನಗೆ ತಿಳಿದಿಲ್ಲ ಎಂದರೆ ಅಮೇರಿಕಾ ಬಿಡೋಲ್ಲ. ಸುಮಾರು  ಐದು ವರ್ಷಗಳ ಕಾಲ ದೊಡ್ಡ ಪಾಕಿಸ್ತಾನದ ರಾಜಧಾನಿಯ ಹಿತ್ತಲಿನಲ್ಲಿ,  ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದ ಲಾದೆನ್ ಬಗ್ಗೆ ಪಾಕ್ ಸೈನ್ಯಕ್ಕೆ, ಸರಕಾರಕ್ಕೆ ತಿಳಿದಿಲ್ಲ ಎಂದರೆ ದೊಡ್ಡ ಆಶ್ಚರ್ಯವೇ. ಒಂದು ವೇಳೆ ಪಾಕಿಗೆ ಲಾದೆನ್ ಪಾಕಿನಲ್ಲಿ ಇರುವ ಅರಿವು ಇಲ್ಲದಿದ್ದರೆ ಅಮೇರಿಕಾ ತಾನು ನೀಡುವ ಉದಾರ ಧನ ಸಹಾಯ ಮುಂದುವರೆಸಬಹುದು. ಅಥವಾ ಲಾದೆನ್ ಪಾಕಿಸ್ತಾನದಲ್ಲಿ ಇರುವುದನ್ನು ಅಮೆರಿಕೆಗೆ ತಿಳಿಸದೇ ಡಬಲ್ ಗೇಂ ಆಡಿದ್ದರೆ ಪಾಕಿಸ್ತಾನವನ್ನು ದಾರಿಗೆ ತರುವ ಕೆಲಸ ಅಮೇರಿಕಾ ಶೀಘ್ರ ಶುರು ಮಾಡಬೇಕು. ಇದೇ ಟೆಸ್ಟು. Litmus ಟೆಸ್ಟು.    

ಬಿನ್ ಲಾದೆನ್ ಇಲ್ಲದೆ ಪಾಕ್ ಹೇಗೆ ತಾನೇ ಜೀವಿಸೀತು ಎನ್ನುವುದೀಗ ಆಸಕ್ತಿಕರ ಪ್ರಶ್ನೆ. ಪ್ರೀತೀ,  ನೀನಿಲ್ಲದೆ ನಾ ಹೇಗಿರಲಿ… ಎಂದು ಶೋಕ ಗೀತೆ ಹಾಡುತ್ತಿರಬಹುದೇ ಪಾಕಿಗಳು?

೨೦೦೧ ರ ಅಮೆರಿಕೆಯ ವಿರುದ್ಧದ ಧಾಳಿಗೆ ಬಿನ್ ಲಾದೆನ್ ನನ್ನು ನೇರ ಹೊಣೆಯಾಗಿರಿಸಿದ ಜಾರ್ಜ್ ಬುಶ್, ಬಿನ್ ಲಾದೆನ್ wanted, dead or alive ಎಂದು ಘೋಷಿಸಿದ. ಅಮೆರಿಕೆಯ ಮೇಲೆ ನಿರ್ದಯೀ, ಭೀಕರ ಧಾಳಿ ಮಾಡಿ ತಾನು ಒಂದು ದಿನ ಪೂರ್ತಿ ರಹಸ್ಯ ಅಡಗು ತಾಣವೊಂದರಲ್ಲಿ ದಿನ ಕಳೆಯುವಂತೆ ಮಾಡಿದ ಬಿನ್ ಲಾದೆನ್ ನ ತಲೆಗೆ ೨೫ ಮಿಲ್ಲಿಯನ್ ಡಾಲರ್ ಮೊತ್ತದ ಬೆಲೆಯನ್ನೂ ಕಟ್ಟಿದ ಬುಶ್.  ಹೊಗೆಯುಗುಳುತ್ತಾ ನೆಲಕ್ಕುರುಳಿದ ನ್ಯೂಯಾರ್ಕ್ ನ ಗಗನ ಚುಂಬಿ ಕಟ್ಟಡಗಳು ಅಮೆರಿಕನ್ನರ ಚಿತ್ತ ಕಲಕಿದವು. ಕ್ರುದ್ಧ ಅಮೇರಿಕಾ ಬಿನ್ ಲಾದೆನ್ ಅಡಗಿದ್ದ ಆಫ್ಘಾನಿಸ್ತಾನ ವನ್ನು ಆಕ್ರಮಣ ಮಾಡಿತು. ಬಿನ್ ಲಾದೆನ್ ಎಲ್ಲಿದ್ದರೂ ಹೊಗೆ ಹಾಕಿ ಹೊರತೆಗೆಯುತ್ತೇನೆ ಎಂದು ಘರ್ಜಿಸಿದ ಬುಶ್ ಆಫ್ಘಾನಿಸ್ತಾನದ ಗುಡ್ಡಗಾಡು ಗಳನ್ನು ಮಾತ್ರವಲ್ಲ ಅಲ್ಲಿನ ತೋರಾ ಬೋರಾ ಗವಿ ಸಮುಚ್ಛಯಗಳನ್ನು ಜಾಲಾಡಿದ. ಸೋವಿಯೆಟ್ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಸ್ವತಃ ಅಮೆರಿಕನ್ನರಿಂದಲೇ ತರಬೇತಿ ಪಡೆದ, ಸ್ವಾತಂತ್ರ್ಯ ಹೋರಾಟಗಾರ ಎಂದು ರೋನಾಲ್ಡ್ ರೇಗನ್ನರಿಂದ ಹೊಗಳಿಸಿಕೊಂಡಿದ್ದ  ಬಿನ್ ಲಾದೆನ್ ರಂಗೋಲಿ ಕೆಳಗೆ ತೂರಿಕೊಳ್ಳುವುದನ್ನು ಕರಗತ ಮಾಡಿಕೊಂಡ.  

ಬಿನ್ ಲಾದೆನ್,  wanted, dead or alive ಎಂದ ಅಮೇರಿಕಾ ಲಾದೆನ್ ಇರುವ ಮನೆಯ ಮೇಲೆ ಧಾಳಿ ಮಾಡಿ, ೪೦ ನಿಮಿಷಗಳ ಕಾಳಗದಲ್ಲಿ ಎರಡು ಗುಂಡುಗಳನ್ನು ಲಾದೆನ್ ತಲೆಗೆ ಸಿಡಿಸಿ ಕೊಂದಿದ್ದಾರೂ ಏಕೆ? ಅವನನ್ನು ಜೀವಂತ ಸೆರೆ ಹಿಡಿದು, ಅಮೆರಿಕೆಯ USS COLE , ಆಫ್ರಿಕಾದ ದಾರುಸ್ಸಲಾಮ್, ಸ್ಪೇನ್ ನ MADRID, ಲಂಡನ್, ಸೌದಿ ಅರೇಬಿಯಾದ ದಹರಾನ್, ಇರಾಕ್, ಸೋಮಾಲಿಯಾ, ಇಂಡೋನೇಷ್ಯಾದ ಬಾಲಿ ಮುಂತಾದ ನಗರಗಳ ಮೇಲೆ ಧಾಳಿ ಮಾಡಿದ ಈತನನ್ನು ವಿಚಾರಣೆ ಮಾಡಬಹುದಿತ್ತಲ್ಲ. ಅಮೆರಿಕೆಯ ಕಾರ್ಯ ವೈಖರಿ ಆ ದೇಶದಷ್ಟೇ ನಿಗೂಢ. ಕ್ರಿಸ್ಟಫರ್ ಕೊಲಂಬಸ್ ಕಂಡು ಹಿಡಿಯುವವರೆಗೂ ನಿಗೂಢವಾಗಿದ್ದ ದೇಶವಲ್ಲವೇ ಅಮೇರಿಕಾ? ಈತನನ್ನು ಸೆರೆ ಹಿಡಿದು ಅಮೇರಿಕಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿ ಕೊಳ್ಳಲು ಇಷ್ಟ ಪಡಲಿಲ್ಲ. ವಿಚಾರಣೆ ವೇಳೆ ಬಿನ್ ಲಾದೆನ್ ಬಾಯಿ ಬಿಟ್ಟರೆ ತಾವು ಕೇಳಲು ಇಚ್ಛಿಸುವುದಕ್ಕಿಂತ ಸ್ವಲ್ಪ ಹೆಚ್ಚನ್ನೇ ಬಡಬಡಿಸಬಹುದು. ಈ ಕಸಿವಿಸಿಯಿಂದ ಪಾರಾಗಲು ಇರುವ ಒಂದೇ ದಾರಿ ಎಂದರೆ ನೇರ ಆಕ್ರಮಣ. ಈ ಆಕ್ರಮಣದಲ್ಲಿ ಅಮೇರಿಕಾ ಯಶಸ್ಸನ್ನು ಕಂಡಿತು.         

ತಾನು ಕರಿಯನಾದ ಒಂದೇ ಕಾರಣಕ್ಕೆ ದಿನವೂ ಬಿಳಿ ಅಮೆರಿಕನ್ನರ ಕುಹಕಕ್ಕೆ, ಅವಹೇಳನಕ್ಕೆ  ಗುರಿಯಾಗುತ್ತಿದ್ದ ಒಬಾಮ ಕೊನೆಗೆ ತನ್ನ ಜೀವನದ ಅತಿ ದೊಡ್ಡ ಅವಮಾನವನ್ನು ಎದುರಿಸಬೇಕಾಯಿತು. ಒಬಾಮಾರ ಜನನ ಪ್ರಮಾಣ ಪತ್ರವನ್ನು ಬಲ ಪಂಥೀಯ ರಿಪಬ್ಲಿಕನ್ ಪಕ್ಷ ಕೇಳಿತು. ಒಬಾಮಾ ತನ್ನ ಜನನ ಪ್ರಮಾಣ ಪತ್ರದ ಜೊತೆ ಜೊತೆಗೇ ಅಮೆರಿಕನ್ನರ ಸಿಂಹಸ್ವಪ್ನನಾಗಿದ್ದ ಲಾದೆನ್ ನ ಸಾವಿನ ಪ್ರಮಾಣ ಪತ್ರವನ್ನೂ ಅಮೆರಿಕನ್ನರಿಗೆ ನೀಡಿ ತಾನು ಕಾರ್ಯಕ್ಷಮತೆಯಲ್ಲಿ ಯಾವ ಬಿಳಿ ಅಧ್ಯಕ್ಷನಿಗೂ ಕಡಿಮೆಯಲ್ಲ ಎನ್ನುವುದನ್ನು ತೋರಿಸಿ ಕೊಟ್ಟರು.   

ಒಸಾಮಾ ಬಿನ್ ಮುಹಮ್ಮದ್ ಬಿನ್ ಅವಾದ್ ಬಿನ್ ಲಾದೆನ್.  ೫೪ ವರ್ಷ ಪ್ರಾಯದ, ಆರಡಿ ಮೂರಿಂಚು ಎತ್ತರದ ಸ್ಫುರದ್ರೂಪಿ ಮತ್ತು ಆಗರ್ಭ ಶ್ರೀಮಂತ ಆಫ್ಘನ್ ಗುಡ್ಡ ಗಾಡಿನ ಜನರ ವಿಶ್ವಾಸ, ಪ್ರೀತಿ, ಅಭಿಮಾನ ಗಳಿಸಲು ಕಾರಣವಾಗಿದ್ದಾದರೂ ಏನು? ಜನರೊಂದಿಗೆ ಸುಲಭವಾಗಿ, ಆತ್ಮೀಯತೆಯಿಂದ ಬೆರೆಯುತ್ತಿದ್ದ ಈತ ಸೌಮ್ಯ ಮಾತುಗಾರಿಕೆಯಿಂದ, ತನ್ನ ಉದಾರ ಸ್ವಭಾವದಿಂದ ಅಲ್ಲಿನ ಯುವಜನರ ಮನ ಗೆದ್ದಿದ್ದ. ಕೋಟ್ಯಾಧೀಶ ಮನೆತನದಿಂದ ಬಂದ ಈತ ಐಶಾರಾಮದ ಬದುಕನ್ನು ಬಿಟ್ಟು ಆಫ್ಘನ್ ಗುಡ್ಡಗಾಡಿನಲ್ಲಿ ಒಣಗಿದ ಚಪಾತಿ ತಿನ್ನುತ್ತಾ ತಮ್ಮೊಂದಿಗೆ ಇರುತಿದ್ದ ಈತನನ್ನು ಕಂಡು ಜನ ಮಾರುಹೋದರು. ಸೋವಿಯೆಟ್ ಸೈನ್ಯದೊಂದಿಗೆ ಹೋರಾಡಿದ ಈತ ಓರ್ವ ಸೈನಿಕನೊಂದಿಗೆ hand to hand combat ನಲ್ಲಿ ಸೈನಿಕನ್ನು ಕೊಂದು ಅವನ kalashnikov ಬಂದೂಕನ್ನು ವಶಪಡಿಸಿ ಕೊಂಡಿದ್ದ. ಈ ಬಂದೂಕು ಅವನ ಅಭಿಮಾನದ ಸ್ವತ್ತಾಗಿತ್ತು.

ಈತ ಆರಂಭಿಸಿದ ಅಲ್ ಕೈದಾ ಒಂದು ಸಂಘಟನೆಯೋ ಆಗಿರದೆ ಒಂದು ತೆರನಾದ ideology ಆಗಿತ್ತು. ಸದಸ್ಯ ಶುಲ್ಕವಾಗಲೀ, ಯಾವುದೇ formal induction ಆಗಲಿ ಬೇಕಿಲ್ಲದ ಈ ವಿಚಾರಧಾರೆಗೆ ಮೂರು ಅಂಶಗಳೇ ಉರುವಲಾಗಿ ಕೆಲಸ ಮಾಡುತ್ತಿದ್ದವು. ಆಕ್ರೋಶ, ನಿರಾಶೆ, ನಿಸ್ಸಹಾಯಕತೆ (anger, frustration, desperation).  ಒಂದು ಕಡೆ ಮುಸ್ಲಿಂ ದೇಶಗಳಲ್ಲಿನ ಆಳುವವರ ಭ್ರಷ್ಟಾಚಾರ ಸಾಲದು ಎಂಬಂತೆ ಅಮೆರಿಕೆಯ ಮೇಲಿನ ವಿಪರೀತ ಅವಲಂಬನೆ ಮತ್ತು ಅರಬ್ಬರ ಸಂಪತ್ತನ್ನು ಲೂಟಿ ಹೊಡೆಯುತ್ತಾ ಇಸ್ರೇಲ್ ದೇಶವನ್ನು ಸಾಕುತ್ತಿದ್ದ ಅಮೆರಿಕೆಯ ಆಟ ಈತನಲ್ಲಿ ಆಕ್ರೋಶ ಹುಟ್ಟಿಸಿತ್ತು. ಸೌದಿ ದೊರೆಗಳ ವಿರುದ್ಧವೂ ಈತ ಸಮರ ಸಾರಿದ ನಂತರ ಇವನ ವಿರೋಧಿಗಳ ಪಟ್ಟಿ ದೊಡ್ಡದಾಗುತ್ತಾ ಹೋಯಿತು. ಈತನ ನೂರಾರು ಹಿಂಬಾಲಕರಲ್ಲಿ ಹಲವರನ್ನು ಕೊಂದು, ನೂರಾರು ಜನರನ್ನು ಜೈಲಿಗೆ ತಳ್ಳಿ ಅಲ್ ಕೈದಾ ಪಿಡುಗನ್ನು ಕೊನೆಗಾಣಿಸಿದ ಸೌದಿ ಸರಕಾರ ಭಯೋತ್ಪಾದನೆ ತಡೆಯುವಲ್ಲಿ ಯಾವ ಕ್ರಮ ತೆಗೆದು ಕೊಳ್ಳುವುದಕ್ಕೂ ತಾನು ಹೇಸುವುದಿಲ್ಲ ಎಂದು ವಿಶ್ವಕ್ಕೆ ತೋರಿಸಿ ಕೊಟ್ಟಿತು.   

ಯಹೂದಿಗಳ ಕೈಯ್ಯಲ್ಲೂ, ಅಮೆರಿಕೆಯ ಕೈಯ್ಯಲ್ಲೂ ಮುಸ್ಲಿಮರ ಮಾರಣ ಹೋಮ ನೋಡಿದ ಬಿನ್ ಲಾದೆನ್ ಪ್ರತಿಕ್ರಯಿಸಿದ್ದು ಹಿಂಸಾ ಮಾರ್ಗದಿಂದ. ಸುಮಾರು ೧೫೦೦ ವರ್ಷಗಳ ಚರಿತ್ರೆ ಇರುವ ಇಸ್ಲಾಂ ಧರ್ಮಕ್ಕೆ ಬಹುಶಃ ಸ್ವತಃ ಮುಸ್ಲಿಂ ಆದ ಬಿನ್ ಲಾದೆನ್ ಮಾಡಿದಷ್ಟು ಅಪಕಾರ ಬೇರಾರೂ ಮಾಡಿರಲಾರ ರೇನೋ? ತನ್ನ ಕುಕೃತ್ಯಗಳಿಂದ ಎರಡು ಯುದ್ಧಗಳಿಗೆ ಕಾರಣನಾದ, ಎರಡು ದಶಲಕ್ಷಕ್ಕೂ ಅಧಿಕ ಮುಸ್ಲಿಮರ ಸಾವಿಗೆ ಸಾಕ್ಷಿ ನಿಂತ ಬಿನ್ ಲಾದೆನ್ ಅದ್ಯಾವ ರೀತಿ ತಾನು ನಂಬಿದ ಧರ್ಮದ ಸೇವೆ ಮಾಡಿದನೋ ಅವನೇ ಬಲ್ಲ.  ವಿಶ್ವದ ಡಜನ್ ಗಟ್ಟಲೆ ಹೆಚ್ಚು ನಗರಗಳಲ್ಲಿ ಸಾವು ನೋವನ್ನು ತಂದು ನಿಲ್ಲಿಸಿದ ಬಿನ್ ಲಾದೆನ್ ಕೊನೆಗೂ ಹಿಂಸೆಯ ಮೂಲಕವೇ ತನ್ನ ಜೀವ ಕಳೆದುಕೊಂಡ. ಇಂಡೋನೇಷ್ಯಾದ “ಬಾಲಿ” ಯಿಂದ ಹಿಡಿದು ಆಫ್ರಿಕಾದ  ನೈರೋಬಿ ವರೆಗೆ ಸಾವು ನೋವಿನ ಕರಾಳ ಕಂಬಳಿಯನ್ನು ಹರಡಿದ ಬಿನ್ ಲಾದೆನ್ “ವಿನಾಕಾರಣ ಒಬ್ಬನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆ” ಎಂದ ಹೇಳಿದ ತನ್ನ ಭಗವಂತನ ಮುಂದೆ ನಿಂತು ಯಾವ ಸಮಜಾಯಿಷಿ ನೀಡುವನೋ?

ಬಿನ್ ಲಾದೆನ್ ನಿರ್ಗಮನದಿಂದ ನಮ್ಮೀ ವಿಶ್ವ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗೆ ಕಾಲಗರ್ಭದಲ್ಲಿ ಅಡಗಿದೆ  ಉತ್ತರ.

ಟ್ವಿಟ್ಟರ್ ನಲ್ಲಿ ಸಿಕ್ಕಿದ್ದು:

Kentucky Fried Chicken ಶುರು ಮಾಡಿದ “ಕರ್ನಲ್ ಸ್ಯಾಂಡರ್ಸ್” ನ ನಿಧನದೊಂದಿಗೆ KFC ಯ franchising ನಿಲ್ಲಲಿಲ್ಲ. ಅದೇ ರೀತಿ ಅಲ್ ಕೈದಾ ಸ್ಥಾಪಕನ ಸಾವಿನಿಂದ ಅಲ್ ಕೈದಾ ಸಹ ಮುಗಿಯೋದಿಲ್ಲ.  ಆದರೆ ಇದೇ ವೇಳೆ, ಅಂತರಾಷ್ಟ್ರೀಯ ಖ್ಯಾತಿಯ, ಸಂಪಾದಕ ಭಾರತೀಯ ಮೂಲದ ಫರೀದ್ ಜಕರಿಯಾ ಹೇಳಿದ್ದು, loss of a symbol can end a movement.  

ವಿ. ಸೂ: ನನ್ನ ಈ ಲೇಖನ ಬಿನ್ ಲಾದೆನ್ ನ ಅವಸಾನ ಮತ್ತು ಅವಸಾನದ ಕ್ಷಣಗಳನ್ನು ಅಮೆರಿಕೆಯ ವೃತ್ತಾಂತವನ್ನು ಆಧರಿಸಿದ್ದು. ಯಾವುದೇ independent confirmation ಯಾರಿಗೂ ಲಭ್ಯವಾಗಿಲ್ಲ.      

 

Switzerland. ಭೂಮಿಯ ಮೇಲಿನ ಸ್ವರ್ಗ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ  ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  

ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   

ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein (ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  

ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  

ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು  ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.

ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  

ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?

ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   

ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 

 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.

ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.

ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.

child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   

“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?

ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ…

ಭಾರತ ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳಲ್ಲೊಂದು. ಹೇಗಿದೆ, ನಮ್ಮ ಕೀರ್ತಿಯ ಪತಾಕೆ. ಬಹು ಎತ್ತರಕ್ಕೆ ಹಾರುತ್ತಿದೆ ಅಲ್ಲವೇ? ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ… ಅಂತರರಾಷ್ಟ್ರೀಯ ಪಾರದರ್ಶಕ ಸಂಸ್ಥೆ ಈ ಬಹುಮಾನವನ್ನು ಭಾರತಕ್ಕೂ ಮತ್ತು ಇತರ ರಾಷ್ಟ್ರಗಳಿಗೂ ದಯಪಾಲಿಸಿತು. ಸಮಾಧಾನ ಏನೆಂದರೆ ನಮ್ಮೊಂದಿಗೆ ಒಂದಿಷ್ಟು ಸಂಗಾತಿಗಳೂ ಇರುವುದು; ಸೋಮಾಲಿಯ, ಆಫ್ಘಾನಿಸ್ತಾನ, ಮಯನ್ಮಾರ್, ಸುಡಾನ್ ಮತ್ತು ಇರಾಕ್. ವಾಹ್! ಸ್ನೇಹಿತರ ಪ್ರೊಫೈಲ್ ಒಮ್ಮೆ ಸ್ವಲ್ಪ ನೋಡಿ. ೧೮೦ ರಾಷ್ಟ್ರಗಳ ಪೈಕಿ ನಮ್ಮ ರಾಂಕಿಂಗ್ ೮೪. ಲಂಚ ಎಂದ ಕೂಡಲೇ ಹೆಣವೂ ಬಾಯಿ ಬಿಡುತ್ತಂತೆ. ಬಿಟ್ಟಿ ದುಡ್ಡು ನೋಡಿ.. ದುಡಿಮೆ ಬೇಡ, ಬೆವರಿನ ಅಗತ್ಯವಿಲ್ಲ… ಮಾಡಲೇಬೇಕಾದ ಕೆಲಸವನ್ನು ಮಾಡಿ ಕೊಡಲಾರೆ ಎಂದು ೧೦೧ ಕಾರಣಗಳನ್ನು ನೀಡಿ ನಂತರ ಸ್ವಲ್ಪ ಕೊಳಕಾದ ಹಲ್ಲುಗಳನ್ನು ಪ್ರದರ್ಶಿಸಿದರೆ ಬಂದು ಬೀಳುತ್ತದೆ ಕಾಂಚಾಣ. ಕಾಂಚಾಣಂ ಕಾರ್ಯ ಸಿದ್ಧಿ. ಮತ್ತೆ ಧಾರ್ಮಿಕತೆಯನ್ನು ಪ್ರದರ್ಶಿಸಿ ಮುಖವಾದ ಹಾಕಿಕೊಂಡು ಓಡಾಡೋದು? ಅದಕ್ಕೇನು ದಾರಿಯಲ್ಲಿ ಸಿಗುವ ದೇವರ ಹುಂಡಿಗಳಿಗೋ ನಮ್ಮ ಇಷ್ಟದೇವರುಗಳ ಮಠಗಳಿಗೋ ಒಂದಿಷ್ಟು ಸುರಿದು ಬಂದರಾತು. ಲಂಚ ತೆಗೆದುಕೊಳ್ಳಬೇಡಿ ಎಂದು ಯಾವ ಧರ್ಮಭೀರುವಿನ ಬಾಯಿಂದಲೂ ಬರುವುದಿಲ್ಲ ನೋಡಿ, ಏಕೆಂದರೆ ಆ ಮೂಲದ ಮೂಲಕವೇ ಅಲ್ಲವೇ ಅವರ ಹೊಟ್ಟೆಪಾಡು ಸಾಗುವುದು? ಯಾರಾದರೂ ಕೊಡಲಿಯನ್ನು ತಮ್ಮ ಕಾಲ ಮೇಲೆಯೇ ಹಾಕಿಕೊಳ್ಳುತ್ತಾರ? ಇಂಥ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸುವತ್ತ ಗಮನ ಹರಿಸುವುದನ್ನು ಬಿಟ್ಟು ರಾಷ್ಟ್ರ ಭಾಷೆ ಯಾವುದಾಗಬೇಕು, ರಾಷ್ಟ್ರ ಗೀತೆ ಇದಾದರೇನು ಅಥವಾ ಇನ್ನಾವುದಾದರೂ ಹೊಸ ಸಮಸ್ಯೆಯನ್ನು ingenuity ಉಪಯೋಗಿಸಿ ಹುಟ್ಟುಹಾಕಿ ಜನರ ಪೀಡಿಸುವುದು, ಈ ತೆರನಾದ ವ್ಯರ್ಥ ಕಾರ್ಯಗಳಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡು ವಿಶ್ವದ ಎದುರಿಗೆ ನಮ್ಮ ಮಾನ ನಾವೇ ಹರಾಜಿಗೆ ಹಾಕಿಕೊಳ್ಳುತ್ತೇವೆ.