ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.

ಬಹುಪತ್ನಿತ್ವ ಮತ್ತು popular perception

ಬಹುಪತ್ನಿತ್ವ ಎಂದ ಕೂಡಲೇ popular perception ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆ ಯಾಗುವವರು ಎಂದು. ಈ ತಪ್ಪು ತಿಳಿವಳಿಕೆಗೆ ಜನರ ತಿಳಿಗೇಡಿತನಕ್ಕಿಂತ ಮಾಧ್ಯಮಗಳ ಮತ್ತು ಹಗೆ ವರ್ತಕ ರಾಜಕಾರಣಿಗಳ ಕುಚೋದ್ಯದ ಅಪಪ್ರಚಾರ ಕಾರಣ ಎನ್ನಬಹುದು. ಹೌದು ಇಸ್ಲಾಂ ಬಹುಪತ್ನಿತ್ವ ವನ್ನು ಅನುಮತಿಸುತ್ತದೆ ಷರತ್ತುಗಳೊಂದಿಗೆ. ಈ ಶರತ್ತುಗಳೇ ನನ್ನಂಥ ಮತ್ತು ಶೇಕಡಾ 90 ಕ್ಕಿಂತ ಹೆಚ್ಚು ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದಲು ಇಷ್ಟ ಪಡದೆ ಇರುವುದು. ದೇವ ವಾಣಿ “ಪವಿತ್ರ ಕುರ್’ ಆನ್” ನಲ್ಲಿ ವಿಶ್ವಾಸ ಇಡುವ ಮುಸ್ಲಿಮನೊಬ್ಬ ದೇವರು ವಿಧಿಸಿದ ಶರತ್ತುಗಳನ್ನು ಅವಗಣಿಸಿ ತನ್ನ ಶಾರೀರಿಕ ತೃಷೆಗಾಗಿ ಪಾಪವನ್ನು ತನ್ನ ಮೇಲೆ ಹೇರಿಕೊಳ್ಳಲಾರ. ಹಾಗೆಯೇ ಬಹುಪತ್ನಿತ್ವ ಇಸ್ಲಾಮಿನ prerogative ಮಾತ್ರ ಅಲ್ಲ ಎಂದು ಈ ಕುರಿತು ನಡೆದ ಅಧ್ಯಯನಗಳು ಸ್ಥಿರೀಕರಿಸುತ್ತವೆ.

ಹಿಂದೂ ಧರ್ಮೀಯರ ಬೌಧಾಯನ ಧರ್ಮಶಾಸ್ತ್ರದಲ್ಲಿ ಬ್ರಾಹ್ಮಣರು ನಾಲ್ಕು ಹೆಂಡಿರನ್ನೂ, ಕ್ಷತ್ರಿಯ ಮೂರು, ವೈಶ್ಯ ಎರಡು ಮತ್ತು ಶೂದ್ರ ಒಂದು ಹೆಣ್ಣನ್ನು ಮದುವೆಯಾಗಬಹುದು. ಭಗವಾನ್ ಶ್ರೀ ಕೃಷ್ಣನೂ, ಮತ್ತು ಪಾಂಡವರೂ ಬಹುಪತ್ನಿತ್ವವನ್ನು ಆಚರಿಸಿದವರು.      

ಕನ್ನಡದ ಸುಪ್ರಸಿದ್ಧ ವೆಬ್ ತಾಣವೊಂದರಲ್ಲಿ ಒಬ್ಬರು “ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!” ಶೀರ್ಷಿಕೆಯಡಿ ಮೈಸೂರಿನ ರಾಜ ಮನೆತನ ಬಹುಪತ್ನಿತ್ವವನ್ನು ಆಚರಿಸುತ್ತಿತ್ತು ಎಂದು ಬರೆದಿದ್ದರು. . ಅದರ ತುಣುಕೊಂದನ್ನು ಕೆಳಗೆ ನೀಡಿದ್ದೇನೆ.

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ “ಎಫಿಗ್ರಾಫಿಯಾ ಕರ್ನಾಟಿಕ” ಸಂಪುಟ ೫ ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ಈ ಚೂರ್ಣಿಕೆಯನ್ನು ಸಿದ್ಧ ಪಡಿಸಿದ ಕಲಾವಿದ ತಿಪ್ಪಣ್ಣ ಎನ್ನುವ ವ್ಯಕ್ತಿ.

ಮೈಸೂರು ರಾಜರುಗಳು ಮತ್ತು ಅವರ ಸಂಸಾರ:

ದೊಡ್ಡ ದೇವರಾಜ ವೊಡೆಯರ್ – 53 ಹೆಂಡಿರು 11 ಮಕ್ಕಳು

ಚಿಕ್ಕ ದೇವರಾಜ ವೊಡೆಯರ್ – 22 ಹೆಂಡಿರು, 2 ಮಕ್ಕಳು

ಕಂತೀರವ ಮಹಾರಾಜ ವೊಡೆಯರ್ – 3 ಹೆಂಡಿರು, 5 ಮಕ್ಕಳು

ವಮ್ಮಡಿ ದೊಡ್ಡ ಕೃಷ್ಣ ರಾಜ ವೊಡೆಯರ್ – 45 ಹೆಂಡಿರು, 2 ಮಕ್ಕಳು

ವಮ್ಮಡಿ ಚಾಮರಾಜ ವೊಡೆಯರ್ – 3 ಹೆಂಡಿರು, ಮಕ್ಕಳಿಲ್ಲ

ಇಮ್ಮಡಿ ಕೃಷ್ಣರಾಜ ವೊಡೆಯರ್ – 8 ಹೆಂಡಿರು, 9 ಮಕ್ಕಳು

ಮುಮ್ಮಡಿ ಖಾಸಾ ಚಾಮರಾಜ ವೊಡೆಯರ್ – 10 ಹೆಂಡಿರು ಮತ್ತು 4 ಮಕ್ಕಳು

ಮುಮ್ಮಡಿ ಶ್ರೀ ಕೃಷ್ಣ ರಾಜ ವೊಡೆಯರ್ ಬಹಾದುರ್ – 20 ಹೆಂಡಿರು

ಚಾಮರಾಜ ವೊಡೆಯರ್ – 65 ಹೆಂಡಿರು

ಬೆಟ್ಟ ಚಾಮರಾಜ ವೊಡೆಯರ್ – 13 ಹೆಂಡಿರು, 6 ಮಕ್ಕಳು

ರಾಜ ವೊಡೆಯರ್  – 8 ಹೆಂಡಿರು, 6 ಮಕ್ಕಳು

ಇಮ್ಮಡಿ ರಾಜ ವೊಡೆಯರ್ – 19 ಹೆಂಡಿರು.

ಮೇಲೆ ಹೇಳಿದ ಅರಸರು ವಿವಿಧ ಕಾರಣಗಳಿಗಾಗಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಇಟ್ಟು ಕೊಂಡಿರಬಹುದು ಮತ್ತು ಅವರುಗಳು ಬದುಕಿದ ಕಾಲದಲ್ಲಿ ಹಾಗೆ ಬಹುಪತ್ನೀ ವೃತಸ್ಥರಾಗುವುದು ರೂಢಿಯೂ ಇದ್ದಿರಬೇಕು. ಅರಸರು ಈ ರೀತಿ ಮಾಡಿದಾಗ ಸಮಾಜದ ಪ್ರತಿಷ್ಟಿತ ಗಣ್ಯರೂ ಸಹ 20, 30 ಅಲ್ಲದಿದ್ದರೂ 2, 3 ಪತ್ನಿಯರನ್ನಾದರೂ ಹೊಂದಿರುವ ಸಾಧ್ಯತೆ ಹೆಚ್ಚು ಎಂದೇ ಹೇಳಬಹುದು. ಹಾಗಾಗಿ ಬಹುಪತ್ನಿತ್ವ ಆಗಿನ ಕಾಲದಲ್ಲಿ ubiquitous ಎನ್ನಬಹುದು.  

ಆಫ್ರಿಕಾದ swaziland ದೇಶದ ರಾಜ ಪ್ರತೀ ವರ್ಷವೂ ಸುರ ಸುಂದರ ಕನ್ಯೆಯರ ಮೇಳ ಏರ್ಪಡಿಸಿ ತನಗೆ ಚೆಂದುಳ್ಳಿಯಾಗಿ ಕಂಡ ಚಕೋರಿ ಯನ್ನು ಮದುವೆಯಾಗಿ ತನ್ನ ಚಂದ್ರಮಂಚದ ಸಂಗಾತಿಯರ ಸಾಲಿಗೆ ಸೇರಿ ಕೊಳ್ಳುತ್ತಾನಂತೆ. ಅವನ ಅದೃಷ್ಟಕ್ಕೆ ನಾವು ಹಲುಬಿ ಕರುಬಿ ಫಲವಿಲ್ಲ ಎನ್ನಿ, ಏಕೆಂದರೆ ಇರುವ ಒಬ್ಬ ಹೆಂಡತಿಯ ಆಸೆ, ಅಭಿಲಾಷೆ, ಬೇಕು ಬೇಡಗಳನ್ನು ಪೂರೈಸುವತ್ತ ನಾವು ನಡೆಸುವ ಕುಸ್ತಿ ಕಸರತ್ತೇ ಸಾಕು ಬೇಕಾಗಿರುವಾಗ  ಮತ್ತೊಂದು, ಮಗುದೊಂದು, ಇನ್ನೊಂದು ….ಹೀಗೆ ಹೆಂಡತಿಯರನ್ನು ನಮ್ಮ ಗೋಣಿನ ಸುತ್ತಾ ಪೋಣಿಸುತ್ತಾ ಹೋದರೆ  ಒಂದು ದಿನ ಅದೇ ನಮಗೆ ಉರುಳಾಗಿ ನಮ್ಮ ಅವಸಾನಕ್ಕೆ ಕಾರಣವಾಗಬಹುದು ಎನ್ನುವುದರಲ್ಲಿ ಸಂಶಯ ಬೇಡ, ಏನಂತೀರ?

ಮಾಡಲೇಬೇಕಾದ ಕೆಲಸವನ್ನ ಮಾಡದೆ ವೃಥಾ ಮುಂದೂಡುವುದು

ಬರೆಯಲು ಸಾಕಷ್ಟು ಟಾಪಿಕ್ ಗಳಿದ್ದರೂ ಒಂದು ಕಡೆ ಅಂಡನ್ನು ಆಳವಾಗಿ ಊರಿ ಬರೆಯಲು ಸೋಮಾರಿತನ, lethargy. ಈ lethargy ಗೆ ಸಂಗಾತಿಯಾಗಿ procrastination ಸಿಕ್ಕಿದರಂತೂ ಕೇಳೋದೇ ಬೇಡ ಅನ್ನಿ. ಈ procrastinate ಅನ್ನೋ ಖಾಯಿಲೆಯನ್ನ ನೊಬೆಲ್ ಪ್ರಶಸ್ತಿ ವಿಜೇತರೂ ಅಂಟಿಸಿ ಕೊಂಡಿದ್ದಾರಂತೆ. ದಾರ್ಶನಿಕ ಸಾಮ್ಯುಎಲ್ ಜಾನ್ಸನ್ ಸಹ ಈ ಪಿಡುಗಿಗೆ ಬಲಿಯಾಗಿರಬೇಕಾದರೆ ನೀವೇ ಊಹಿಸಿ. ಖ್ಯಾತ ಸಾಹಿತಿ ವಿಕ್ಟರ್ ಹ್ಯೂಗೋ ತಾನುಟ್ಟ ಬಟ್ಟೆ ಬಿಚ್ಚಿ, ಸೇವಕನಿಗೆ ಒಪ್ಪಿಸಿ, ಅಡಗಿಸಿಡಲು ಹೇಳಿ ನಗ್ನನಾಗಿ ಕೂತು ಬರೆಯುತ್ತಿದ್ದನಂತೆ ತಾನು ಬರೆಯುವುದನ್ನು ನಿಲ್ಲಿಸಿ ಹೊರಕ್ಕೆ ಹೋಗಬಾರದು ಎಂದು. ನೋಡಿದಿರಾ ತನ್ನ ಮೇಲೆ ತಾನೇ ಯಾವ ರೀತಿಯ “ನಗ್ನ” ನಿರ್ಬಂಧವನ್ನು ಹೇರಿಕೊಂಡ ಈ ಪ್ರತಿಭಾವಂತ ಸಾಹಿತಿ procrastination ಎನ್ನುವ ಪೆಡಂಭೂತಕ್ಕೆ ಹೆದರಿ? procrastination ಪದ ಲ್ಯಾಟಿನ್ ಮೂಲದ್ದು ಮತ್ತು ಆಂಗ್ಲ ಭಾಷೆಗೆ ಆಮದಾಗಿದ್ದು ಸುಮಾರು ೧೬ ನೆ ಶತಮಾನದಲ್ಲಿ.

ಒಂದು ತಮಾಷೆಯ ಸಂಜೆ

ತಂಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದರಿಂದ ಅವಳ ಮನೆಯಲ್ಲೂ, ನನ್ನ ಮನೆಯಲ್ಲೂ ವಾಸ. ಮಧ್ಯಾಹ್ನ  ನಾಲ್ಕು ಘಂಟೆಗೆ ಚಹಾ ಮುಗಿಸಿ ಹೊರಟಾಗ ನನ್ನ ಪತ್ನಿ ಹೇಳಿದಳು ನಮ್ಮನ್ನೂ ಮನೆಗೆ ಬಿಡಿ ಎಂದಳು. ಮಗ ಓಡಿ ಬಂದು ಮುಂದಿನ ಸೀಟಿನಲ್ಲೂ, ಮಗಳು ಹಿಂದಿನ ಸೀಟಿನಲ್ಲೂ ಕೂತರು. ಮಡದಿ ಕೆಲವು ಸಾಮಾನುಗಳನ್ನು ಡಿಕ್ಕಿಯಲ್ಲೂ, ಹಿಂದಿನ ಸೀಟಿನಲ್ಲೂ ಇಡುತ್ತಿದ್ದಳು. ಹಿಂದಿನ ಡೋರ್ ಹಾಕಿದ ಸದ್ದು ಕೇಳುತ್ತಿದ್ದಂತೆ ನಾನು ಕಾರನ್ನು ಚಲಾಯಿಸಿದೆ. ಗಾಡಿ ಚಲಾಯಿಸುತ್ತಾ ಆಫೀಸಿನಲ್ಲಿ ನಡೆದ ತಮಾಷೆಯ ಪ್ರಸಂಗವನ್ನು ಹೇಳುತ್ತಾ ಹೊರಟೆ. ಹಾಂ, ಹೂಂ ಏನೂ ಇಲ್ಲದ್ದನ್ನು ಗಮನಿಸದೆ ನನ್ನ ಪಾಡಿಗೆ ನಾನು ಮಾತನ್ನಾಡುತ್ತಿರುವಾಗ ಫೋನ್ ರಿಂಗ್ ಆಯಿತು, ನೋಡಿದರೆ ನನ್ನ ಹೆಂಡತಿಯ ನಂಬರ್, ಯಾಕ್ ಕಾಲ್  ಮಾಡ್ತಾ ಇದ್ದೀಯ ನನಗೆ ಎನ್ನುತ್ತಾ ಕನ್ನಡಿಯ ಮೂಲಕ ಹಿಂದಕ್ಕೆ ನೋಡಿದರೆ ಗಾಡಿಯಲ್ಲಿ ಅವಳಿಲ್ಲ. ಅರ್ರೇ, ಇದೇನಿದು, ಅವಳು ಕೂತೆ ಇಲ್ಲ, ನಾನು ಗಾಡಿ ಚಲಾಯಿಸುತ್ತಾ ಬಂದೆನಲ್ಲಾ, ಈ ಪುಟಾಣಿಗಳಾದರೂ ಹೇಳಬಾರದೆ ಅಮ್ಮ ಗಾಡಿಯಲ್ಲಿಲ್ಲ ಎಂದು ನನಗೆ ನಾನೇ ಹೊಟ್ಟೆ ತುಂಬಾ ನಗುತ್ತಾ ಹೆಂಡತಿಯನ್ನ ಪಿಕ್ ಮಾಡಲು ಹೋದರೆ ಮುಖ ಕೆಂಪಗೆ ಮಾಡಿಕೊಂಡು ನಿಂತಿದ್ದಳು ನನ್ನನ್ನು ಶಪಿಸುತ್ತಾ. ಅಲ್ಲಾ ಇದೇ ಥರಾ ನನ್ನನ್ನು ಎಲ್ಲಾದರೂ ಡೆಸರ್ಟ್ ನಲ್ಲೋ ಮತ್ತೆಲ್ಲೋ ಬಿಟ್ಟು ಹೋದರೆ ಹೇಗ್ರೀ ಎಂದು ಗದರಿಸುತ್ತಾ ಹತ್ತಿದಳು ಕಾರನ್ನು.   

ನಲವತ್ತು ಸಂವತ್ಸರಗಳು, ಒಂದು ವಿಚ್ಛೇದನ

ನಲವತ್ತು ವಸಂತಗಳು, ಎಂಥ ಮೊಂಡು ಮರವನ್ನೂ ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊಸ ಅನುಭೂತಿಯನ್ನು ತರುತ್ತದೆ ಮನುಷ್ಯನಲ್ಲಿ. ನಲವತ್ತು ವರುಷಗಳ ಅನುಭವ ಮನುಷ್ಯನನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಾಲ್ಕು ದಶಕಗಳು….ಅವುಗಳ ಬಗ್ಗೆ ಊಹಿಸುವುದೂ ಕಷ್ಟ.

ನಲವತ್ತು ವರುಷಗಳ ಕಾಲ ತೀರಾ ಹತ್ತಿರವಾಗಿದ್ದವರು, ಸಾವಿರಾರು ಹಗಲನ್ನೂ, ಇರುಳನ್ನೂ ಕಂಡವರು ಏಕಾಏಕಿ ದೂರವಾದರು, ಅಮೆರಿಕೆಯಲ್ಲಿ.  

ಅಮೆರಿಕೆಯ ಮಾಜಿ ಅಧ್ಯಕ್ಷ ಅಲ್-ಗೋರ್ ತಮ್ಮ ಪತ್ನಿ ಮೇರಿ ಎಲಿಜಬೆತ್ ಟಿಪ್ಪರ್ ರಿಂದ  ವಿಚ್ಚೇದಿತರಾಗುತ್ತಿದ್ದಾರೆ.   ನಲವತ್ತು ವರ್ಷಗಳ ಬಾಳ ಸಂಗಾತಿಯನ್ನು ತೊರೆದು ನಿಸರ್ಗದ ಏಕಾಂತದ ಅನುಭವಕ್ಕಾಗೋ ಏನೋ. ವಿವಾಹ ಮತ್ತು ವಿಚ್ಚೇದನ ಜನರಿಗೆ ಅತಿ ವೈಯಕ್ತಿಕ ವಿಷಯ. ಅದರ ಚರ್ಚೆ ನಮಗೇಕೆ ಎಂದು ನಿಮಗೆ ಅನ್ನಿಸಬಹುದು. ಆದರೆ ಇಲ್ಲಿ ಕಾಣ ಸಿಕ್ಕಿರುವ ಪಾತ್ರಗಳು ಸಾರ್ವಜನಿಕ ಬದುಕಿನಲ್ಲಿರುವವರು. ಇಂಥವರ ಬೇರೆಲ್ಲಾ ಲೀಲೆಗಳನ್ನೂ ಚರ್ಚಿಸುವ ನಾವು ಅವರ ಸಂಕಷ್ಟಗಳ ಬಗ್ಗೆಯೂ ಯೋಚಿಸಿ ಅದರಲ್ಲಿ ನಮಗೇನಿದೆ ಕಲಿಯಲು ಎಂದು ಸೂಕ್ಷ್ಮವಾಗಿ ನೋಡಿದಾಗ ಅರಿವಾಗುತ್ತದೆ ಈ ವಿಷಯ ನಮಗೆ ಪ್ರಸ್ತುತ ಎಂದು.     

“Everyone you meet is fighting some kind of battle.” – ಎಷ್ಟು ಸತ್ಯ ನೋಡಿ ಈ ಮಾತು. “ನಾವು ಭೆಟ್ಟಿಯಾಗುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದ ಸೆಣಸಿನಲ್ಲಿರುತ್ತಾರೆ”- ಹೌದು ಒಂದಲ್ಲ ಒಂದು ರೀತಿಯ ಹೋರಾಟ ಪ್ರತಿಯೊಬ್ಬರದೂ. ನಲವತ್ತು ವರುಷಗಳ ಸಂಬಂಧ ಈ ರೀತಿ ಕಳಚಿ ಕೊಂಡು ಬಿದ್ದರೆ ಅನಂತತೆಯ ಮಾತು ದೂರ ಉಳಿಯಿತು. ಹಾಗಾದರೆ ವಿವಾಹ ಸಂಬಂಧ ನಿರಂತರ, ಶಾಶ್ವತ (ಸಾವನ್ನು ಬಿಟ್ಟು) ವಾಗಿರಿಸಲು ಸಾಧ್ಯವಿಲ್ಲವೇ? ಕೆಲವರು ಹೇಳ್ತಾರೆ time is a great healer ಅಂತ. ಆದರೆ ಇಲ್ಲಿ ಆ ಹೀಲಿಂಗ್ ಕಾಣ್ತಾ ಇಲ್ಲ. ಇಲ್ಲಿ ಕಾಣ್ತಾ ಇರೋದು drifting. ಅಬ್ಬರದ ಅಲೆಗೆ ನಲುಗುವ ದೋಣಿಯಂತೆ. ವೈಯಕ್ತಿಕ ಬದುಕಿನ ಚರ್ಚೆ ನಮಗೆ ಬೇಡವೆಂದರೂ ಈ ತೆರನಾದ ಸುದ್ದಿಗಳು ನಮ್ಮನ್ನು ಖಂಡಿತ ಗಲಿಬಿಲಿಗೊಳಿಸುತ್ತವೆ. ವಿಶ್ವದ ತಾಪ ಮಾನ ಹೆಚ್ಚಳದ ಬಗ್ಗೆ ಪುಸ್ತಕ ಬರೆದು, ನೊಬೆಲ್ ಗಿಟ್ಟಿಸಿಕೊಂಡ ವ್ಯಕ್ತಿ ತನ್ನ ಮಗ್ಗುಲಲ್ಲೇ ಇದ್ದ ವ್ಯಕ್ತಿಯನ್ನು ಅರಿಯದಾದನೆ? ಹವಾಮಾನ ಬಿಕ್ಕಟ್ಟು (climate crisis), ಅಲ್-ಗೋರ್ ಅವರ ಧ್ಯೇಯ, ಆದರೆ ಮನೆಯೊಳಗಿನ ಹವಾಮಾನ ತಣ್ಣಗೆ ಕೈ ಕೊಡುತ್ತಿದ್ದನ್ನು ಕಾಣದೆ ಎಡವಿದರು ಅಮೆರಿಕೆಯ  ಮಾಜಿ ಉಪಾಧ್ಯಕ್ಷರು. ಹವಾಮಾನದ ಏರು ಪೇರಿನ ಮೇಲೆ ಬಹಳಷ್ಟು ಅಧ್ಯಯನ ನಡೆಸಿದ್ದ ಅಲ್-ಗೋರ್ ಒಂದು ಪುಸ್ತಕ ಸಹ ಬರೆದಿದ್ದರು. ಅದರ ಹೆಸರು An Inconvenient Truth. ಈ ಶೀರ್ಷಿಕೆ ಹವಾಮಾನಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿಗೂ ಅನ್ವಯಿಸಬಹುದು ಎಂದು ಬಹುಶಃ ಅವರಿಗೆ ತಿಳಿದಿರಲಿಲ್ಲವೇನೋ? ಅವರ ಇತ್ತೀಚಿನ ಪುಸ್ತಕದ ಹೆಸರು The Assault on Reason. ಶೀರ್ಷಿಕೆಗಳನ್ನು ಗಮನಿಸಿದಿರಿ ತಾನೇ?    

Familiarity breeds contempt ಎನ್ನುತ್ತಾರೆ. ಆದರೆ ಈ ವಿವಾಹದ ಸಲುಗೆಯ ಬೆಸುಗೆ ಸಡಿಲವಾಗಿ ಕಳಚಿ ಬೀಳಲು ತೆಗೆದುಕೊಂಡವು ಪೂರ್ತಿ ನಲವತ್ತು ವರ್ಷಗಳು. ಅಷ್ಟಕ್ಕೂ ವಿವಾಹದಲ್ಲಿ ಇರಬಾರದ ಸಲುಗೆ ಬೇರೆಲ್ಲಿ ಸಿಗಬಹುದು ಹೇಳಿ? all is fair in love and war ಅಲ್ವಾ? ಒಂದು ಜೋಡಿ ಗೃಹಸ್ಥಾಶ್ರಮಕ್ಕೆ ಮಧುರ ಭಾವನೆಗಳನ್ನು, ಹೊಂಗನಸುಗಳನ್ನು ಇಟ್ಟುಕೊಂಡು ಪ್ರವೇಶಿಸುತ್ತದೆ. ತನ್ನ ಹಿರಿಯರು, ಪೂರ್ವಜರು ಆರಿಸಿಕೊಂಡ ದಾರಿಯನ್ನೇ ಕ್ರಮಿಸಲು ಹೊರಡುವ ಜೋಡಿಗೆ ಆರಂಭದ ಪ್ರೇಮದ ಹುಚ್ಚು ಹೊಳೆ ಈಜಿ ದಡ ಸೇರಿದ ನಂತರ ಒಂದೊಂದೇ ಮುಳ್ಳುಗಳು ಕಾಣಲು, ಪೀಡಿಸಲು ತೊಡಗುತ್ತವೆ. ಆದರೆ ತಮ್ಮ ಪೂರ್ವಜರ ನಿರೀಕ್ಷೆ, ಮಿತಿ ಅರಿತು ಕೊಂಡ, ಜೋಡಿ ಅವನ್ನು ಹೇಗೆ ತನ್ನ ಪೂರ್ವಜರು ನಿಭಾಯಿಸಿದರು ಕಂಡುಕೊಂಡ ಜೋಡಿಗೆ ಸಂಕಷ್ಟಗಳು ತೋರದು. ತೋರಿದರೂ ಅದೂ ಬದುಕಿನ ಅವಿಭಾಜ್ಯ ಅಂಗ ಎಂದು ಕೊಂಡು ತಮ್ಮ ಅಪ್ಪುಗೆಯಲ್ಲಿ ತೊಡಕುಗಳನ್ನೂ ಸೇರಿಸಿಕೊಂಡು ಮುನ್ನಡೆಯುತ್ತಾರೆ. ಅದರಲ್ಲೂ ಆ ವೈವಾಹಿಕ ಬದುಕು ಒಂದೆರಡು, ಮೂರು ಮೊಗ್ಗುಗಳನ್ನು ನೀಡಿದರಂತೂ ಅವರ ಲಾಲನೆ ಪಾಲನೆಯಲ್ಲೂ, ತಮಗಾಗಿ ಅಲ್ಲದಿದ್ದರೂ ತಮ್ಮ ಮಕ್ಕಳಿ ಗಾಗಿಯಾದರೂ ಸಂಬಂಧವನ್ನೂ ಖಾಯಂ ಆಗಿ ಇರಿಸಲು ಪಣ ತೊಡುತ್ತಾರೆ.      

ಅಲ್-ಗೋರ್ ಅವರದು ವಿಶಿಷ್ಟ ವ್ಯಕ್ತಿತ್ವ. ಅಲ್-ಗೋರ್ ಅವರಿಗೆ ಹಿನ್ನಡೆ ಮತ್ತು ಪೆಟ್ಟುಗಳು ಹೊಸತಲ್ಲ. ಇಂಥ ಮತ್ತೊಂದು ಮರ್ಮಾಘಾತ ಅವರಿಗೆ ರಾಜಕೀಯ ಜೀವನದಲ್ಲಿ ಸಿಕ್ಕಿತ್ತು. ೨೦೦೧, ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ. ಜಾರ್ಜ್ ಬುಶ್ ಎದುರಿಗೆ ಸೆಣಸಲು ಡೆಮೊಕ್ರಾಟಿಕ್ ಪಕ್ಷ ಅಲ್-ಗೋರ್ ಅವರನ್ನು ಆರಿಸಿತು. ಪರಸ್ಪರ ಕೆಸರೆರೆಚಾಟ ಜೋರಾಗಿ ನಡೆದು ಅಲ್-ಗೋರ್ ಗೆಲ್ಲಬಹುದು ಎಂದು ಅಮೇರಿಕಾ ಮತ್ತು ವಿಶ್ವ ಭಾವಿಸಿತು. ಮತಗಣನೆ ಪೂರ್ತಿಯಾದ ಕೂಡಲೇ ನಾನು ಸೋತೆ, ಅಭಿನಂದನೆಗಳು ಎಂದು ಬುಶ್ ತನ್ನ ಪ್ರತಿಸ್ಪರ್ದಿ ಗೋರ್ ಅವರಿಗೆ ಫೋನಾಯಿಸಿ ಶುಭ ಕೋರುತ್ತಾರೆ. ಆದರೆ ಮಾರನೆ ದಿನ ಎಣಿಕೆಯಲ್ಲಿ ಎಡವತ್ತಾಗಿದ್ದನ್ನು ಅರಿತ ಬುಶ್ ಪ್ಲೇಟ್ ಬದಲಿಸಿ ಮರು ಎಣಿಕೆ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಸಾಂವಿಧಾನಿಕ ಬಿಕ್ಕಟ್ಟು ಅಮೆರಿಕೆಯನ್ನು ಆವರಿಸುತ್ತದೆ ಸುಮಾರು ಆರು ವಾರಗಳ ನಂತರ ಸರ್ವೋಚ್ಚ ನ್ಯಾಯಾಲಯದ ಸಹಾಯದಿಂದ ಬುಶ್ ಗದ್ದುಗೆಗೆ ಏರುತ್ತಾರೆ ತನ್ನ ಕಪಟ ತಂತ್ರ ತೋರಿಸಿ. Bush stole the election ಎಂದು ಹಲವರು ಬೊಬ್ಬೆ ಇಟ್ಟರೂ ಏನೂ ಫಲಿಸುವುದಿಲ್ಲ. ಈ ಆಘಾತದಿಂದ ಚೇತರಿಸಿಕೊಂಡ ಅಲ್-ಗೋರ್ ಗೆ ಸಾಂತ್ವನ ನೀಡಿ ತನ್ನ ಪರವಾಗಿ ಹೋರಾಡುವಂತೆ ಕೋರಿತು ನಿಸರ್ಗ ಅಲ್-ಗೋರ್ ಅವರಲ್ಲಿ.

ಅಲ್-ಗೋರ್ ಅಂತರ್ಜಾಲ ತಂತ್ರಜ್ಞಾನ ಅಮೆರಿಕೆಯ ಮೂಲೆ ಮೂಲೆ ತಲುಪುವಂತೆ ಮಾಡಿದ ವ್ಯಕ್ತಿ. ಹವಾಮಾನ, ನಿಸರ್ಗಕ್ಕಾಗಿ ಹೋರಾಡಿದ ಅಲ್-ಗೋರ್ ನೊಬೆಲ್ ಪ್ರಶಸ್ತಿ ವಿಜೇತರು. ಈ ವೈವಾಹಿಕ ಸಂಕಷ್ಟದಲ್ಲಿ ಸಿಲುಕಿರುವ ಈ ಲವಲವಿಕೆಯ ಜೋಡಿಗೆ ತಾವು ಆರಿಸಿಕೊಂಡ ದಾರಿ ಸುಗಮವಾಗಲೆಂದು ಹಾರೈಸೋಣವೇ?

ಒಬ್ಬ ಒಳ್ಳೆಯ, ಮನಸ್ಸಿಗೆ ಒಪ್ಪುವ ವ್ಯಕ್ತಿಯನ್ನು ನಾವು ಸ್ಮರಿಸಬೇಕಾದರೆ ಅವನು ಸಾಯಬೇಕು, ಅಥವಾ ಗೋರ್ ರೀತಿಯಲ್ಲಿ ಬದುಕಿನಲ್ಲಿ ದೊಡ್ಡ ಏಟನ್ನು ಅನುಭವಿಸಬೇಕು. ಅವರ ವ್ಯಕ್ತಿತ್ವದ ಬಗ್ಗೆ ಅರಿಯಲು ನಮಗೆ ತೋಚಿದ ಸಮಯ ಅವರು ನ್ಯಾಯಾಲಯದ ಮೆಟ್ಟಿಲು ಹತ್ತುವ ಸಮಯ, ತನ್ನ ವೈವಾಹಿಕ ಬದುಕನ್ನು (ವಿವಾಹಗಳು ಸ್ವರ್ಗದಲ್ಲಿ ಏರ್ಪಡುತ್ತವೆ, ಬಾಕಿ ಕಾರ್ಯಗಳು ಕೋರ್ಟ್ ಗಳಲ್ಲಿ ) dissolve  ಮಾಡಲು ನ್ಯಾಮೂರ್ತಿಯನ್ನು ಕೇಳುವ ಸಮಯ. ಸ್ವರ್ಗದಲ್ಲಿ ಶುಭ್ರ, ಶ್ವೇತ ದೇವದೂತರ ಸಮ್ಮುಖದಲ್ಲಿ ಜರುಗುವ ಮದುವೆ ಕಪ್ಪು ಕೋಟುಗಳನ್ನು ತೊಟ್ಟ ವಕೀಲರ ಮಧ್ಯೆ ಪರ್ಯವಸಾನ.   

ದಶಕಗಳ ಹಿಂದೆ ನನ್ನ ಶಾಲಾ ಮೇಷ್ಟರೊಬ್ಬರು ಹೇಳಿದ ಮಾತು. ವಿಚ್ಚೇದನ ಸರ್ವೇ ಸಾಮಾನ್ಯ ಪಾಶ್ಚಾತ್ಯರಲ್ಲಿ. ಒಬ್ಬಾಕೆ ತನ್ನ ಗಂಡನನ್ನು ತೊರೆದು ಇನ್ನೊಬ್ಬ ನನ್ನು ಮದುವೆಯಾಗುತ್ತಾಳೆ. ಆತನೂ ವಿಚ್ಛೇದಿತ. ಇಬ್ಬರಿಗೂ ತಮ್ಮ ಮಾಜಿ ಸಂಗಾತಿಗಳಿಂದ ಮಕ್ಕಳಿರುತ್ತವೆ. ಇವರು ಮದುವೆಯಾದ ನಂತರ ಇವರಿಗೂ ಮಕ್ಕಳಾಗುತ್ತವೆ. ಆಗ ಮಕ್ಕಳು ಜಗಳವಾಡುವಾಗ ಹೆಂಡತಿ ತನ್ನ ಗಂಡನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ ” honey, my children and your children are fighting with “OUR” children” ಅಂತ.