ಮೋದಿಗೆ ಸಿಕ್ಕಿತು ಟ್ರಾವಲ್ ಪರ್ಮಿಟ್

ಗುಜರಾತ್ ನಲ್ಲಿ ನಡೆದ ನರಮೇಧಕ್ಕೆ ನರೇಂದ್ರ ಮೋದಿ ಕಾರಣ ಎಂದು ಭಾರತೀಯರೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಭಾವನೆಗೆ ಪೂರಕವಾಗಿ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳು ಮೋದಿ ತಮ್ಮ ದೇಶಕ್ಕೆ ಕಾಲಿಡಲು ಅನುಮತಿ ನಿರಾಕರಿಸಿದ್ದವು. ಭಾರತದ ಒಳಗೂ ಈ ನಿಲುವಿಗೆ ಸಹಮತ ಸಹ ವ್ಯಕ್ತವಾಗಿತ್ತು. ಕಳೆದ ಬಿಹಾರದ ಚುನಾವಣೆಯ ಸಮಯ ಭಾಜಪದ ಪರವಾಗಿ ನರೇಂದ್ರ ಮೋದಿ ಬಿಹಾರಕ್ಕೆ ಬರುವ ವಿಷಯ ತಿಳಿದ ಅಲ್ಲಿನ ಮುಖ್ಯಮಂತ್ರಿ ನೀತೀಶ್ ಕುಮಾರ್ ತಮ್ಮ ರಾಜ್ಯಕ್ಕೆ ಆತ ಕಾಲಿಡ ಕೂಡದು ಎಂದು ತಾಕೀತು ಮಾಡಿ ವಿವಾದಕ್ಕೆ ಒಳಗಾಗಿದ್ದರು. ಮೋದಿ ಇಲ್ಲದೆಯೇ ಅಲ್ಲಿನ ಚುನಾವಣೆಯನ್ನ ಭಾಜಪ – ನಿತೀಶ್ ಪಕ್ಷದ ಒಕ್ಕೂಟ ಜಯಿಸಿತ್ತು. ಹೊರದೇಶಗಳಲ್ಲೂ, ಸ್ವದೇಶದಲ್ಲೂ ಈ ತೆರನಾದ ಅಭಿಪ್ರಾಯ ನರೇಂದ್ರ ಮೋದಿ  ಬಗ್ಗೆ ಇರುವಾಗ ಮೋದಿಯಾಗಲೀ ಭಾಜಪ ವಾಗಲೀ ಆತ್ಮಾವಲೋಕನ ಏಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಒಂದು ಒಗಟು.  ಸುಖಾಸುಮ್ಮನೆ ಯಾರನ್ನೂ ನಮ್ಮ ಮನೆ ಕಡೆ ತಲೆ ಹಾಕಬೇಡ ಎಂದು ಯಾರೂ  ತಾಕೀತು ಮಾಡೋಲ್ಲ. ನಮ್ಮ ದೇಶದ ಚರಿತ್ರೆಯಲ್ಲಿ ಈ ರೀತಿಯ ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಗೆ ಒಳಗಾದ ಒಬ್ಬನೇ ಒಬ್ಬ  ರಾಜಕಾರಣಿಯ ಹೆಸರು ನಮ್ಮ ನೆನಪಿಗೆ ಬರುವುದೇ?

ಗುಜರಾತ್ ರಾಜ್ಯದ ಹೆಸರು ಕೇಳಿದ ಕೂಡಲೇ ನಮ್ಮ ಕಣ್ಣಿಗೆ ಎದುರಾಗೋದು ಮುಗ್ಧರ ಹತ್ಯೆ ಮತ್ತು ಆಕ್ರಂದನ. ಗುಜರಾತ್ ನ ಮೇಲಿನ ಈ ಕಳಂಕ ವನ್ನು ತೊಡೆದು ಹಾಕಲು ಮೋದಿಯ ಅಂತರ್ಜಾಲ ಅಭಿಮಾನೀ ಸಮುದಾಯ ಹಗಲೂ ರಾತ್ರಿ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದ್ದೇ. ಗುಜರಾತ್ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ, ಅಂಥ ರಾಜ್ಯ ಈ ದೇಶದಲ್ಲೆಂದೂ ಉದಯಿಸಿಲ್ಲ ಎಂದು ಟಾಮ್ ಟಾಮ್ ಮಾಡಿದ್ದೆ ಮಾಡಿದ್ದು. ಇದು ಪೊಳ್ಳು ಮತ್ತು ಸುಳ್ಳುಗಳ propaganda ಎಂದು ಭಾರತೀಯರಿಗೆ ಮನವರಿಕೆ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಗುಜರಾತ್ ನ ಅಭಿವೃದ್ಧಿ ಒಂದು myth ಎಂದು ಈಗ ವೇದ್ಯವಾಯಿತು. ಗುಜರಾತ್ ಗಿಂತ ಅಭಿವೃದ್ಧಿಯ ಪಥದಲ್ಲಿ ಬಿಹಾರ ದಾಪುಗಾಲು ಹಾಕುತ್ತಿದೆ. 

ನರೇಂದ್ರ ಮೋದಿ ಯನ್ನು ಯಾವ ಕಾರಣಕ್ಕೆ ಮತ್ತು ಉದ್ದೇಶಕ್ಕೆ  ಹೊಗಳಲಾಗುತ್ತಿದೆ, ಪ್ರಧಾನಿ ಹುದ್ದೆಗೆ ನಾಮಕರಣ ಮಾಡಲು ಉತ್ಸುಕತೆ, ಉತ್ಸಾಹ ತೋರಿ ಬರುತ್ತಿದೆ ಎಂದು ತಿಳಿಯದಷ್ಟು ಮೂಢ ನಲ್ಲ ಭಾರತೀಯ. ಗುಜರಾತ್ ಮು. ಮಂತ್ರಿಯ ಮೇಲಿನ ಪ್ರಯಾಣದ ನಿರ್ಬಂಧವನ್ನು ತೆಗೆದ ಇಂಗ್ಲೆಂಡ್ ದೇಶದ ಈ ಕ್ರಮ ಎಷ್ಟು ವಿವೇಚನಾಪೂರ್ಣ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ವ್ಯಾಪಾರದ ಹಿತದೃಷ್ಟಿಯ ಮುಂದೆ ಮಾನವೀಯ ಮೌಲ್ಯಗಳು ಗೌಣ ಎಂದು ಇಂಗ್ಲೆಂಡ್ ದೇಶಕ್ಕೆ ಅನ್ನಿಸಿದರೆ ಅದು ಅವರಿಗೆ ಬಿಟ್ಟ ಆಯ್ಕೆ. ಅವರ ಹಿತ್ತಲಿನಲ್ಲೇ ನಡೆದ ಯಹೂದ್ಯರ ವಿರುದ್ಧ ನಡೆದ ಸಾಮೂಹಿಕ ನರಸಂಹಾರದ ಅನುಭವ ಇರುವ ದೇಶ ಇಂಗ್ಲೆಂಡ್. ಅವರಿಗೆ ನಾವು ಪಾಠ ಹೇಳುವ ಅಗತ್ಯ ಇಲ್ಲ. ನರೇಂದ್ರ ಮೋದಿಯನ್ನು ಗುಜರಾತ್ ನ ಮುಸ್ಲಿಮರು ಕ್ಷಮಿಸಿದ್ದಾರೆ. ಉತ್ತರ ಪ್ರದೇಶದ ‘ದೇವೋ ಬಂದ್’ ಇಸ್ಲಾಮೀ ಸಂಸ್ಥೆಯ ‘ಮೌಲಾನ ವಾಸ್ತಾನ್ವಿ’ ಕೂಡಾ ಹಳತನ್ನು ಮರೆತು ಮುನ್ನಡೆಯುವ ಮಾತನ್ನಾಡಿದ್ದಾರೆ. ಆದರೂ ಮನುಷ್ಯ ನಿರ್ದೋಷಿ ಯಾಗಿದ್ದರೆ ತನ್ನ ಹೆಸರಿಗೆ ಅಂಟಿದ ಕಳಂಕವನ್ನು ತೊಡೆಯುವ ಶತಾಯ ಗತಾಯ ಪ್ರಯತ್ನಿಸ ಬೇಕು, ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕು. ಈ ನಿಟ್ಟಿನಲ್ಲಿ ಗುಜರಾತಿನ ಮುಖ್ಯಮಂತ್ರಿ ತೊಡಗಿಸಿಕೊಂಡರೆ ‘feeling of closure’ ನ ಅವಕಾಶ ಭಾರತೀಯರಿಗೆ ಆತ ಕೊಟ್ಟಂತಾಗುತ್ತದೆ. ಆ ಕಾಲ ನಿಜಕ್ಕೂ ಬರಬಹುದೇ?            

ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ…

ಮೂಢ ನಂಬಿಕೆಗಳು ಪ್ರತೀ ಸಮಾಜದಲ್ಲೂ ಬೇರೂರಿವೆ. ಅದು ಪಾಶ್ಚಾತ್ಯವಿರಬಹುದು, ಅಥವಾ ದೇಸೀ ಇರಬಹದು. ಈ ನಂಬಿಕೆಗಳು ತಮ್ಮದೇ ಆದ ವೈವಿಧ್ಯ, ವೈಶಿಷ್ಟ್ಯವನ್ನ ಹೊಂದಿರುತ್ತವೆ. ಕಳೆದ ಜೂನ್ ತಿಂಗಳಿನಲ್ಲಿ ಭಾರತದಲ್ಲಿದ್ದಾಗ ನಮ್ಮ ಹಿತ್ತಲಿನ ಮರವೊಂದು ಇದೇ ನಂಬಿಕೆಯೊಂದಿಗೆ ತನ್ನ ಪಾಡಿಗೆ ತಾನು ಬೆಳೆಯುತ್ತಿತ್ತು. ನಮ್ಮ ಮನೆಯ ಹಿತ್ತಲಿನಲ್ಲಿ ಸುಮಾರು ೫,೦೦೦ ಚದರ ಅಡಿ ಖಾಲಿ ಸ್ಥಳವಿದೆ. ಅದರಲ್ಲಿ ಅಪ್ಪ ತೆಂಗು, ಮಾವು, ಗೋಡಂಬಿ, ಚಿಕ್ಕು, ಪೇರಳೆ, ಕಿತ್ತಳೆ, ಬಾಳೆ, ನೆಲ್ಲಿಕಾಯಿ, ಹಲಸು, ತೇಗ, ಮುಂತಾದ ಮರಗಳನ್ನ ನೆಟ್ಟಿದ್ದಾರೆ. ಒಂದು ಪುಟ್ಟ ಕಾಡು. ಈ ಸ್ಥಳ ನನ್ನ ನೆಚ್ಚಿನ ಅಡಗು ತಾಣ. ಉಯ್ಯಾಲೆಯಲ್ಲಿ ಕೂತು ಚಹಾ ಸೇವಿಸುತ್ತಾ, ಅಪ್ಪ ಅಮ್ಮ ಮರಗಳ ಪೋಷಣೆ ಮಾಡುವುದನ್ನು ನೋಡುತ್ತಾ   ಪತ್ರಿಕೆ ಓದುವುದು ವಾಡಿಕೆ. ಒಂದು ದಿನ ಹೀಗೇ ಕಣ್ಣಾಡಿಸುತ್ತಾ ಇದ್ದಾಗ ನಾನು ಗಮನಿಸದೆ ಇದ್ದ ಮರ ಕಣ್ಣಿಗೆ ಬಿತ್ತು. ಅಲ್ಲೇ ಇದ್ದ ಅಮ್ಮನನ್ನು ಇದೆಂಥ ಮರ ಎಂದು ಕೇಳಿದಾಗ ಅಮ್ಮ ಅದನ್ನು ‘ದೀಗುಜ್ಜೆ’ ಎಂದು ಕರೆಯುತ್ತಾರೆ ಎಂದರು. “ದ್ವೀಪದ ಹಲಸು” ಎಂದೂ ಹೇಳುತ್ತಾರಂತೆ. ಪಕ್ಕದಲ್ಲೇ ಇದ್ದ ಲ್ಯಾಪ್ ಟಾಪ್ ತೆರೆದು ಆಂಗ್ಲ ಭಾಷೆಯಲ್ಲಿ ಇದಕ್ಕೆ ಏನನ್ನುತ್ತಾರೆ ಎಂದು  ಗೂಗ್ಲಿಸಿದಾಗ ಸಿಕ್ಕಿತು ಉತ್ತರ, ‘bread fruit’. ಈ ‘ಬ್ರೆಡ್ ಫ್ರೂಟ್’ ಪದ ಸಹ ನನ್ನ ಕುತೂಹಲ ಕೆರಳಿಸಿತು, ಅದರ ಬಗ್ಗೆ ನಂತರ ರಿಸರ್ಚ್ ಮಾಡೋಣ ಎಂದು ಯಾವಾಗ ಈ ದೀಗುಜ್ಜೆ ಯನ್ನು ನೆಟ್ಟಿದ್ದು ಎಂದು ಅಮ್ಮನನ್ನು ಕೇಳಿದಾಗ ನಾಲ್ಕೈದು ವರ್ಷ ಆಯಿತು, ಕಳೆದ ಸಲ ಬಂದಾಗಲೂ ನೀನು ಕೇಳಿದ್ದೆ ಎಂದು ನನ್ನ ಮರೆವಿಗೆ ನಯವಾಗಿ ಗದರಿದರು. ಮುಂದುವರೆದು, ಈ ಮರ ನೆಟ್ಟವರು ಬೇಗನೆ ಸಾಯುತ್ತಾರಂತೆ, ಹಾಗಂತ ಜನ ಹೇಳುತ್ತಾರೆ ಎಂದು ಅಮ್ಮ ಹೇಳಿದಾಗ ಹೌಹಾರಿದ ನಾನು ಅಪ್ಪನೋ, ಅಮ್ಮನೋ ನೆಟ್ಟಿರಲಿಕ್ಕಿಲ್ಲವಲ್ಲ ಎಂದು   ಕೂಡಲೇ ಕೇಳಿದೆ ಸರಿ, ಈ ಮರವನ್ನ ನೆಟ್ಟವರಾರು ಎನ್ನುವ  ನನ್ನ ಪ್ರಶ್ನೆಗೆ ನಮ್ಮಲ್ಲಿಗೆ ಕೆಲಸಕ್ಕೆ ಬರುವ ರಮೇಶ್ ನೆಟ್ಟಿದ್ದು ಎಂದು ಉತ್ತರ ಬಂತು. ಮರ ನೆಟ್ಟು ನಾಲ್ಕೈದು ವರ್ಷ ಆಯಿತು, ಮರ ಚೆನ್ನಾಗಿ ಬೆಳೆಯುತ್ತಿದೆ, ನಾಲ್ಕಾರು ದೀಗುಜ್ಜೆ ಕಾಯಿಗಳನ್ನೂ ಬಿಟ್ಟಿದೆ. ರಮೇಶನೂ ಯಾವುದೇ ತೊಂದರೆಯಿಲ್ಲದೆ ತನ್ನ ಪಾಡಿಗೆ ತಾನು ದುಡಿದು, ಕುಡಿದು ಬದುಕುತ್ತಿದ್ದಾನೆ, ಸಾಕಷ್ಟು ಗಟ್ಟಿಮುಟ್ಟಾಗಿಯೂ ಇದ್ದಾನೆ, ಚೇಷ್ಟೆಗೋ, ಬೇರಾವುದೋ ಕಾರಣಕ್ಕೋ ಹೇಳಿರಬಹುದಾದ ಮಾತಿಗೆ ವಿನಾಕಾರಣ ಗಾಭರಿ ಪಟ್ಟೆನಲ್ಲಾ ಎಂದು ಮನದಲ್ಲೇ ಬೈದುಕೊಂಡೆ.

ಕಳೆದ ವರ್ಷ ಅಮೆರಿಕೆಗೆ ಹೋಗುವ ಅವಕಾಶ ಸಿಕ್ಕಿತು. ಪ್ರತೀ ವರ್ಷ ಮಾರಾಟ ಇಲಾಖೆಯಿಂದ ಸಮ್ಮೇಳನಕ್ಕೆ ಎಂದು ಕಂಪೆನಿಯಿಂದ  ಇಬ್ಬರು ಹೋಗುತ್ತಿದ್ದರು. ಈ ಸಲ ಲೆಕ್ಕಪತ್ರ ಇಲಾಖೆಯಿಂದ ಒಬ್ಬರನ್ನು ಕಳಿಸೋಣ ಎಂದು ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದರು. ಅಮೆರಿಕೆಗೆ ಹೋಗುವ ಮುನ್ನ ವಿಸಾ ಸಿಗುವ, ಸಾಹಸಿಕ ಆದರೂ ಸ್ವಾರಸ್ಯಕರ ಪ್ರಕ್ರಿಯೆ ಬಗ್ಗೆ, ಮತ್ತು ಪ್ರವಾಸದ ಬಗ್ಗೆ ಸಂಪದಕ್ಕೆ ಬರೆಯಲು ಆಗಲೇ ಇಲ್ಲ. ಸಮ್ಮೇಳನ ಇದ್ದಿದ್ದು ಅಮೆರಿಕೆಯ ‘ನಾರ್ತ್ ವೆಸ್ಟ್’ ಪ್ರಾಂತ್ಯದ ” ಓರಿಗನ್ ” ರಾಜ್ಯದಲ್ಲಿ. “ರೆಡ್ಮಂಡ್” ಒಂದು ಚಿಕ್ಕ ಪಟ್ಟಣ, ಅಲ್ಲಿಂದ ಅರ್ಧ ಘಂಟೆ ಪ್ರಯಾಣ ಮಾಡಿದರೆ “ಸನ್ ರಿವರ್ ರೆಸಾರ್ಟ್”. ೭,೦೦೦ ಎಕರೆ (ಹೌದು, ಏಳು ಸಾವಿರ ಎಕರೆ) ವಿಸ್ತೀರ್ಣದ ಈ ರೆಸಾರ್ಟ್ ನಲ್ಲಿ ನದಿಯೂ ಹರಿಯುತ್ತದೆ. ಒಂದು ದಿನ, ಸಮ್ಮೇಳನ ಮುಗಿದ ನಂತರ ಹೀಗೇ ಅಡ್ಡಾಡುತ್ತಾ ಇದ್ದಾಗ ಅಮೇರಿಕನ್ ಮಹಿಳೆಯೊಬ್ಬಳು ತನ್ನ ಕೈ ಮೇಲೆ ಒಂದ ದೊಡ್ಡ ಗಾತ್ರದ ಪಕ್ಷಿ ಕೂರಿಸಿ ಕೊಂಡು ಹೋಗುತ್ತಿದ್ದದ್ದು ನೋಡಿ ಮಾತನಾಡಿಸಿದೆ. ನೋಡಿದರೆ ಆ ಪಕ್ಷಿ ಬೇರೇನೂ ಅಲ್ಲ,  ಗೂಬೆ. ಅದರ ಕಾಲಿಗೆ ಬ್ಯಾಂಡೇಜ್ ಸಹ ಕಟ್ಟಿತ್ತು. ವಿಚಾರಿಸಿದಾಗ ಆಕೆ ಹೇಳಿದ್ದು, ನನ್ನ ಮನೆಯ ಹಿತ್ತಿಲಿನಲ್ಲಿ ಈ ಗೂಬೆ ಕಾಲಿಗೆ ಏಟು ಮಾಡಿಕೊಂಡು ಬಿದ್ದಿತ್ತು, ಅದನ್ನು ತಂದು ಶುಶ್ರೂಷೆ ಮಾಡಿ ಬ್ಯಾಂಡೇಜ್ ಕಟ್ಟಿದ್ದೇನೆ, ಆರಾಮವಾದ ಕೂಡಲೇ ಅದನ್ನು ಕಾಡಿಗೆ ಬಿಡುತ್ತೇನೆ ಎಂದು ಗೂಬೆಯನ್ನು ಅಕ್ಕರೆಯಿಂದ ನೋಡುತ್ತಾ ಹೇಳಿದಾಗ ನನಗೆ ಆಶ್ಚರ್ಯ. ನನಗೆ ತಿಳಿದಂತೆ ಯಾರದಾದರೂ ಮನೆಯ ಮೇಲೆ ಗೂಬೆ ಕೂತರೆ ಆ ಮನೆಯಲ್ಲಿ ಸಾವು ಸಂಭವಿಸುತ್ತದೆ, ಇಲ್ಲಿ ಇದಕ್ಕೆ ಅಮೇರಿಕನ್ ಮಹಿಳೆಯಿಂದ  ವರೋಪಚಾರ ಎಂದು ಮನದಲ್ಲೇ ನಗುತ್ತಾ ಇದರ ಹೆಸರೇನು ಎಂದು ಕೇಳಿದೆ. it is ‘great horned owl’ ಎಂದು ಹೇಳುತ್ತಾ ಅದರ ತಲೆಯ ಮೇಲೆ ಇದ್ದ ಎರಡು ಪುಟ್ಟ ಜುಟ್ಟನ್ನು ತೋರಿಸಿದಳು.  ಅಲ್ಲಲ್ಲ, ಅದಕ್ಕೆ ನೀನೇನೆಂದು ಕರೆಯುತ್ತೀಯಾ ಎಂದಾಗ ಆಕೆ ಹೇಳಿದ್ದು. “ನಾವು ಕಾಡಿನ ಪ್ರಾಣಿಗಳಿಗೆ ಹೆಸರಿಡುವುದಿಲ್ಲ, ಏಕೆಂದರೆ ಹೆಸರಿಟ್ಟ ಕೂಡಲೇ ಅದು ಸಾಕು ಪ್ರಾಣಿ (pet animal) ಯಾಗಿ ಬಿಡುತ್ತೆ” ಎಂದು ಹೇಳುತ್ತಾ, “ನನಗೆ ಈ ಗೂಬೆಯನ್ನ ಸಾಕು ಪ್ರಾಣಿಯನ್ನಾಗಿ ಇಟ್ಟು ಕೊಳ್ಳುವ ಇರಾದೆ ಇಲ್ಲ, he will be fine in the woods” ಎಂದು ಹೇಳಿ ತನ್ನ ದಾರಿ ಹಿಡಿದಳು. ಈ ಗೂಬೆ  ಅನುಭವ ಅಮೆರಿಕೆಯ ಬದುಕಿನ ತುಣುಕೊಂದನ್ನು ಸ್ಮೃತಿ ಪಟಲಕ್ಕೆ ಸಿಕ್ಕಿಸಿ ಕೊಳ್ಳುವ ಅವಕಾಶ ನನಗೆ ಕಲ್ಪಿಸಿತು.

ಆಂಗ್ಲ ಸಾಹಿತ್ಯದಲ್ಲಿ ನನಗೆ ಆಸಕ್ತಿ ಹುಟ್ಟಿಸಿದ್ದು ನನ್ನ ಮೂರು ಜನ ಸ್ನೇಹಿತರು. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅವರು ಕಲಿಯುತ್ತಿದ್ದರು. Somerset Maugham, Daphne Du Maurier, Thomas Hardy, jane Austen ಮತ್ತು D.H. Lawrence ಮುಂತಾದವರು ನನಗೆ ಇಷ್ಟ. ‘ಥಾಮಸ್ ಹಾರ್ಡಿ’ ನಿಸರ್ಗವನ್ನು ಚೆನ್ನಾಗಿ ವರ್ಣಿಸಿ ಬರೆದರೆ ಡೀ.ಎಚ್. ಲಾರೆನ್ಸ್ ತನ್ನ Lady Chatterley’s Lover ಪುಸ್ತಕದಲ್ಲಿ  ಲೈಂಗಿಕತೆಯನ್ನು ಚೆನ್ನಾಗಿ ವರ್ಣಿಸಿ ಬರೆದು ಅಂದಿನ ಮಡಿವಂತ ಸಮಾಜದಿಂದ ತಿರಸ್ಕಾರಕ್ಕೆ ಒಳಗಾದ ಲೇಖಕ. ಮೇಲಂತಸ್ತಿನ ವಿವಾಹಿತ ಮಹಿಳೆ ಮತ್ತು ಕೆಳ ಅಂತಸ್ತಿನ ಸೇವಕನೊಂದಿಗಿನ  ಚಕ್ಕಂದ ಈ ಪುಸ್ತಕದ ಕಥಾ ವಸ್ತು. ಈ ತೆರನಾದ ಚಕ್ಕಂದ ಈಗಿನ ಕಾಲದಲ್ಲಿ ನಮಗೂ, ಪಾಶ್ಚಾತ್ಯರಿಗೂ ಹೊಸತಲ್ಲದಿದ್ದರೂ, ೨೦ ನೇ ಶತಮಾನದ ಆದಿ ಭಾಗದಲ್ಲಿ ಇದು ಅಪರೂಪ.  taboo. ಬಿಸಿಯೇರಿಸುವ  ಸನ್ನಿವೇಶವೊಂದರಲ್ಲಿ ಕಥಾ ನಾಯಕಿ ಮತ್ತು ನಾಯಕ ತಲೆ ಒರೆಸಿ ಕೊಳ್ಳಲು ಟವೆಲ್ ಇಲ್ಲದಿದ್ದರಿಂದ ಬೆಡ್ ಶೀಟ್ ಉಪಯೋಗಿಸುತ್ತಾರೆ. ಒಂದೇ ಟವೆಲ್ ನಲ್ಲಿ ಇಬ್ಬರೂ ಒರೆಸಿಕೊಂಡರೆ ಜಗಳ ಆಗು ತ್ತಂತೆ ಎಂದು ಆಕೆ ಹೇಳಿದಾಗ ನಾಯಕ ಹೇಳುತ್ತಾನೆ, ಇರಬಹುದು, ಗೊತ್ತಿಲ್ಲ, ಆದರೆ ಇದು ಟವೆಲ್ ಅಲ್ಲವಲ್ಲಾ, ಬೆಡ್ ಶೀಟ್ ತಾನೇ ಎಂದು ಸಮಾಧಾನ ಮಾಡುತ್ತಾನೆ. ನಾವು ಕೇಳಿದ್ದೇವೆಯೇ ಈ ವಿಷಯವನ್ನು? ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ ಆಗಬಹುದಾದ ಜಗಳದ ಬಗ್ಗೆ?

 

ಈಗ ಮಹಿಳೆ ಗಾಲ್ಫ್ ಆಡಬಹುದು

ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಬಹು ಸುಂದರವಾಗಿ, ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾಳೆ. ಕೆಲವೊಮ್ಮೆ ಎಡರು ತೊಡರುಗಳು ಬಂದರೂ ಅವುಗಳನ್ನ ಸಾಮರ್ಥ್ಯದಿಂದ ಎದುರಿಸಿ ಆ ಎಡರು ತೊಡರುಗಳನ್ನ ‘ಲಾಂಚ್ ಪ್ಯಾಡ್’ ಆಗಿ ಪರಿವರ್ತಿಸಿಕೊಂಡು ತನ್ನ ಗುರಿ ಸಾಧಿಸುತ್ತಿದ್ದಾಳೆ. ಆದರೂ ಅಲ್ಲಿ ಇಲ್ಲಿ ಎಂದು ತಾರತಮ್ಯ ಇಲ್ಲದಿಲ್ಲ. ಉದಾಹರಣೆಗೆ ಸೌದಿ ಅರೇಬಿಯಾದಲ್ಲಿ ಮಹಿಳೆ ವಾಹನ ಚಲಾಯಿಸುವಂತಿಲ್ಲ. ಈ ನಿರ್ಬಂಧ ಸೌದಿ ಗೆ ಮಾತ್ರ ಸೀಮಿತ. ಇತರೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಈ ನಿರ್ಬಂಧನೆ ಇಲ್ಲ. ಸೌದಿಗಳ ಪ್ರಕಾರ ಅವರ ಸಮಾಜ ಇನ್ನೂ ಆ ಮಟ್ಟಕ್ಕೆ ಇವಾಲ್ವ್ ಆಗಿಲ್ಲವಂತೆ. ಅಲ್ಲಿನ ದೊರೆ ಅಬ್ದುಲ್ಲಾ ಈ ವಿಷಯದಲ್ಲಿ ಸಕಾರಾತ್ಮಕ ಮನೋಭಾವ ತೋರಿದರೂ ಸಮಾಜ ತೋರಿಸುತ್ತಿಲ್ಲ ರಿಯಾಯಿತಿಯನ್ನು. ಕಳೆದರಡು ವರ್ಷಗಳಲ್ಲಿ ಸೌದಿ ಮಹಿಳೆ ಕಾರನ್ನು ಚಲಾಯಿಸಿ ವ್ಯವಸ್ಥೆಗೆ ಸೆಡ್ಡು ಹೊಡೆದರೂ ಅದು ಸೆಡ್ಡಿನ ಸದ್ದಿಗೆ ಮಾತ್ರ ಸೀಮಿತಗೊಂಡಿತು. ಇರಲಿ ಕಾಲ ಶೀಘ್ರವೇ ಬರಲಿದೆ. ಇದು ಕಟ್ಟಾ ಸಂಪ್ರದಾಯವಾದಿ ಸೌದಿ ಸಮಾಜದ ಕಥೆಯಾದರೆ ವಿಶ್ವದ ಅತಿ ಮುಂದುವರೆದ, ಮಹಿಳಾ ಸ್ವಾತಂತ್ಯ್ರ್ಯದ ಕಹಳೆ ಮೊಳಗಿಸಿದ ಅಮೇರಿಕಾ ಕಥೆ ಕೇಳಿ.

ಮಾಸ್ಟರ್ಸ್ ಗಾಲ್ಫ್ ಟೂರ್ನಮೆಂಟ್ ನ ತವರೂರಾದ   “ಆಗಸ್ಟ ನ್ಯಾಷನಲ್ ಗಾಲ್ಫ್ ಕ್ಲಬ್” ಗೆ ಮಹಿಳೆಯರಿಗೆ ಸದಸ್ಯತ್ವ ಇಲ್ಲ. ಏಕಿಲ್ಲ, ಅನ್ನೋದು ಗೊತ್ತಿಲ್ಲ. ಈ ವಿಷಯದಲ್ಲಿ ಅವರು ಸೌದಿಗಳ ಥರ ಇನ್ನೂ ಇವಾಲ್ವ್ ಆಗಿಲ್ಲ ಎಂದು ಕಾಣುತ್ತೆ. ಮೊನ್ನೆ ಮೊನ್ನೆಯವರೆಗೂ ಇರಲಿಲ್ಲ. ಎಲ್ಲದಕ್ಕೂ ಸಮಯ ಅನ್ನೋದು ಬರಬೇಕಲ್ಲ.  ಎಂಭತ್ತು ವರ್ಷಗಳ ಇತಿಹಾಸ ಇರೋ ಈ ಗಾಲ್ಫ್ ಕ್ಲಬ್ ಮಹಿಳೆಯರಿಗೆ ಸದಸ್ಯತ್ವ ಕೊಡಲು ನಿರ್ಧರಿಸಿ ಜಾರ್ಜ್ ಬುಶ್ ಸಂಪುಟದಲ್ಲಿದ್ದ ಮಾಜಿ ಕಾರ್ಯದರ್ಶಿ ‘ಕೊಂಡೊಲೀಜಾ ರೈಸ್’, ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ ‘ಡಾರ್ಲಾ ಮೂರ್’ ಇವರೀರ್ವರಿಗೆ ಸದಸ್ಯತ್ವ ನೀಡಲು ತೀರ್ಮಾನಿಸಿತು. ಈ ವಿಷಯದಲ್ಲಿ ಅಲ್ಲಿನ ಅಧ್ಯಕ್ಷ ಒಬಾಮಾ ಸಹ ಆಸಕ್ತಿ ತೋರಿಸಿದ್ದರು. ರಾಷ್ಟ್ರೀಯ ಮಹಿಳಾ ಸಂಘಟನೆಗಳಿಗೆ ಸೇರಿದ ಮಾರ್ಥ ಬರ್ಕ್ ಹಲವು ಸಲ ಪ್ರತಿಭಟನೆ ಸಲ್ಲಿಸಿದರೂ ಜಪ್ಪಯ್ಯ ಎಂದಿರಲಿಲ್ಲ ಈ ಸಂಸ್ಥೆ. ಪ್ರತಿಭಟನೆ ಜೋರಾದ ಸಮಯ ಅಂದಿನ ಅಧ್ಯಕ್ಷ ಜಾನ್ಸನ್ ಹೇಳಿದ್ದು, ಮಹಿಳೆಯರು ನಮ್ಮ ಸಂಸ್ಥೆಯ ಸದಸ್ಯರಾಗುವ ಸಮಯ ಭವಿಷ್ಯದಲ್ಲಿ ಬರಬಹುದು, ಅದರ ಆಗಮನದ ವೇಳಾ ಪಟ್ಟಿ ನಾವು ನಿರ್ಧರಿಸಿದಾಗ ಮಾತ್ರ, ಬಲವಂತದಿಂದಲೋ, ಬಂದೂಕಿನ ತುದಿಯಿಂದ ಅಲ್ಲ ಎಂದು ಗುಡುಗಿದ್ದರು. ಈಗ ಆ ಗುಡುಗು ಭರವಸೆಯ ‘ಮಳೆ’ ಯಾಗಿ ಮಾರ್ಪಟ್ಟಿದೆ ಮಹಿಳೆಯರಿಗೆ.

ಈ ಲೇಖನವನ್ನ ೩೫೦೦೨ ಅಡಿ ಎತ್ತರದಲ್ಲಿ ವಿಮಾನದಲ್ಲಿ ಕೂತು ಕಂಪೋಸ್ ಮಾಡಿದ್ದು. ಜೆಡ್ಡಾ ದಿಂದ ದುಬೈ ಗೆ ಹೋಗುವ ಹಾದಿಯಲ್ಲಿ. ಮೊದಲಿನ ಥರ ಲೇಖನಗಳನ್ನ ಹೆಣೆಯಲಿಕ್ಕೆ ಆಗ್ತಾ ಇಲ್ಲ. ಸಮಯದ ಕೊರತೆ ಮತ್ತು ಸೋಮಾರಿತನದ ಕಾರಣ; deadly duo. ಭೂಮಿಯ ಮೇಲಿದ್ದ lethargy ಕೆಳಕ್ಕೊಗೆದು ಮೋಡಗಳ ಮೇಲೆ ಸವಾರಿ ಮಾಡುತ್ತಾ ಬರೆದೆ ಈ ಲೇಖನವನ್ನು.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ಪ್ರಳಯವಂತೆ, ಇದೇ ತಿಂಗಳಂತೆ, ಸತ್ಯವಾಗ್ಲೂ ಅಂತೆ

ಪ್ರಳಯದ ಬಗ್ಗೆ ಆಗಾಗ ನಾವು ಓದುತ್ತಲೇ ಇರುತ್ತೇವೆ, ಓದಿ ಗಾಭರಿಯಾಗಿ ಸಿಕ್ಕ ಸಿಕ್ಕವರನ್ನು ವಿಚಾರಿಸುತ್ತೇವೆ. ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮೂಲದ ಖ್ಯಾತ ವಾರಪತ್ರಿಕೆ ಪ್ರಳಯದ ಬಗ್ಗೆ ಒಂದು ಲೇಖನ ಹಾಕಿ ಅದು ಎಷ್ಟು ಜನಪ್ರಿಯ ಆಯಿತು ಎಂದರೆ ಆ ಲೇಖನದ ಪುಸ್ತಿಕೆ ಸಹ ಮಾರಾಟಕ್ಕೆ ಬಂದು ಲಕ್ಷ ಗಟ್ಟಲೆ ಜನ ಕೊಂಡು ಓದಿದರು. ಇಂಥ ಜನರಲ್ಲಿ, ಗಾಭರಿ, ಭಯ, ಹುಟ್ಟಿಸಿ ಹಣ ಮಾಡಿಕೊಳ್ಳುವ ದಂಧೆ ಬಹಳ ಹಳತು. ಈಗ ಅಮೆರಿಕೆಯ ಕ್ಯಾಲಿಫೋರ್ನಿಯಾದ ಧರ್ಮ ಬೋಧಕ ಹೆರಾಲ್ಡ್ ಕ್ಯಾಂಪಿಂಗ್  ಗುಲ್ಲೆಬ್ಬಿಸಿದ್ದಾನೆ ಇದೇ ತಿಂಗಳು ೨೧ ಕ್ಕೆ ಅದೂ ಆರು ಘಂಟೆಗೆ ಸರಿಯಾಗಿ ಪ್ರಳಯವಾಗಲಿದೆ ಅಂತ. ಪವಿತ್ರ ಬೈಬಲ್ ಗ್ರಂಥವನ್ನು ಅವನೂ ಅವನ ಮಿತ್ರರೂ decipher ಮಾಡಿದ್ದಾರಂತೆ. 89 ವರ್ಷ ಪ್ರಾಯದ ಈ ವ್ಯಕ್ತಿ ೭೦ ವರ್ಷಗಳ ಅವಿರತ ಬೈಬಲ್ ಅಧ್ಯಯನದಿಂದ ಪ್ರಳಯದ ಬಗ್ಗೆ ಪವಿತ್ರ ಗ್ರಂಥದಲ್ಲಿರುವುದನ್ನು ಜಗತ್ತಿಗೆ ಸಾರುತ್ತಿದ್ದಾನೆ. ಅದರಲ್ಲಿ ಪ್ರಳಯದ ವಿಷಯ ಸಿಕ್ಕಿತಂತೆ. ದೇವ ವಾಣಿ ಇರುವುದು ಮನುಷ್ಯರಿಗೆ ದಾರಿ ದೀಪವಾಗಿ. ಅದರ ಸಂದೇಶ ನೇರವಾದ ಭಾಷೆಯಲ್ಲಿ ಇರಬೇಕು.  ಯಾವುದೇ ಒಂದು ಉಪಕರಣ ಕೊಂಡಾಗ ಅದರೊಂದಿಗೆ ಬರುವ catalogue  ರೀತಿ. ಅದನ್ನು decipher ಮಾಡೋ ಅವಶ್ಯಕತೆ ಬರಕೂಡದು. ಏಕೆಂದರೆ decipher ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತಾ ಹೋಗುತ್ತದೆ. ಅದರೊಂದಿಗೆ decipher ಮಾಡಲ್ಪಟ್ಟ ಸಂದೇಶವೂ ಕೂಡಾ. ಅವರವರ ಬುದ್ಧಿ ಮತ್ತೆಗೆ ಅನುಸಾರ decipher ಕೆಲಸ ನಡೆಯುತ್ತದೆ.

ಹಿಂದೂ ಶಾಸ್ತ್ರಗಳಲ್ಲಿ ಪ್ರಳಯದ ಬಗ್ಗೆ ಉಲ್ಲೇಖ ಇರುವುದನ್ನು ಕಾಣಬಹುದು. ಕಲಿಯುಗದ ಅವಸಾನದಲ್ಲಿ ಪ್ರಳಯ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಅದೇ ರೀತಿ “ಏಕದೇವೋಪಾಸನೆ” ಗೆ ಒತ್ತು ನೀಡುವ ಅಬ್ರಾಹಾಮಿಕ್ ಧರ್ಮಗಳಾದ ಯಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲೂ ಇದರ ಪ್ರಸ್ತಾಪ ಇದೆ. ಇಸ್ಲಾಂ ಧರ್ಮದಲ್ಲಿ ಪ್ರಳಯವನ್ನು “ಯೌಮ್ ಅಲ್ ಕಿಯಾಮ” (ಅಂತ್ಯ ದಿನ) ಎಂದು ಕರೆಯುತ್ತಾರೆ.

ಇಸ್ಲಾಮಿನಲ್ಲಿ ಪ್ರಳಯದ ದಿನದ ಬಗ್ಗೆ ಉಲ್ಲೇಖ ಕೆಲವೊಂದು ದೃಷ್ಟಾಂತ ಗಳೊಂದಿಗೆ ಕೊಡಲಾಗಿದೆ. ಏಕಾ ಏಕಿ ಪ್ರಳಯ ಆರಂಭ ಆಗೋಲ್ಲ. ತಂದೆ ಮಗನನ್ನು ಕೊಲ್ಲುವುದು, ತಾಯಿ ಮಗನ, ತಂದೆ ಮಗಳ ನಡುವಿನ ಲೈಂಗಿಕ ಸಂಬಂಧ, ಅನ್ಯಾಯಗಳು, ಬಡ್ಡಿ, ಮೋಸ, ವಂಚನೆ, ಕೊಲೆ ಸುಲಿಗೆ, ಕುಡಿತ,  ದಿನನಿತ್ಯದ ಪ್ರತಿಯೊಬ್ಬರ ಧಂಧೆಯಾಗಿ, ಜೀವನ ರೀತಿಯಾಗಿ ಮಾರ್ಪಟ್ಟು ಇಂಥ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರು ಇದನ್ನು ಸ್ವಾಭಾವಿಕ ಎಂದು ಪರಿಗಣಿಸಿ ಉಡಾಫೆಯಿಂದ ಬದುಕುವುದು. ಆಳುವವರು ಅತಿ ಕ್ರೂರಿಗಳಾಗಿ ಮಾರ್ಪಡುವುದು. ಬಡವರಿಗೆ ಸಲ್ಲಬೇಕಾದ ಪಾಲನ್ನು ಕೊಡದೆ ಸ್ವತಃ ಸ್ವಾಹಾ ಮಾಡುವುದು. ಹೀಗೆ ಅನ್ಯಾಯ, ಅಕ್ರಮ, ಕ್ರೌರ್ಯಗಳು ಮುಗಿಲು ಮುಟ್ಟಿದಾಗ ಇನ್ನೂ ಗಂಭೀರವಾದ ಕೆಲವು ಘಟನೆಗಳು ಜರುಗುವುದು ಪ್ರಳಯಕ್ಕೆ ಮುನ್ನ.

ಪ್ರಥಮವಾಗಿ ಪವಿತ್ರ ಮಕ್ಕಾ ನಗರದಲ್ಲಿರುವ ಕಪ್ಪು ಚೌಕಾಕಾರದ “ಕಾಬಾ” ಭವನ ವನ್ನು ನಾಶ ಮಾಡ ಲಾಗುವುದು.

ಒಂದು ವಿಚಿತ್ರ, ಭೀಕರ ಜಂತುವಿನ ದರ್ಶನ ವಿಶ್ವಕ್ಕೆ ಆಗುವುದು.

ಭಯಂಕರ ಚಂಡಮಾರುತ ಬೀಸಿ ಬೆಟ್ಟ ಗುಡ್ಡಗಳು, ಪರ್ವತಗಳು ಹತ್ತಿಯ ಉಂಡೆಗಳಾಗಿ ಹಾರುವುವು.

ಅಂತಿಮವಾಗಿ, ಪೂರ್ವ ದಿಕ್ಕಿನಲ್ಲಿ ಹುಟ್ಟುವ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುವನು. ಈ ಬೆಳವಣಿಗೆಯೊಂದಿಗೆ ಮನುಷ್ಯನ ಎಲ್ಲಾ ಲೆಕ್ಕಾಚಾರಗಳ ಕಡತವನ್ನು ಮುಚ್ಚಲಾಗುವುದು.( end of year accounting ಥರ).

ಮೇಲೆ ಹೇಳಿದ ವರ್ಣನೆ ಇಸ್ಲಾಂ ಗ್ರಂಥ ಗಳಲ್ಲಿರುವ ನೂರಾರು ದೃಷ್ಟಾಂತ ಗಳಿಂದ ಆರಿಸಿದ್ದು.         

ಪ್ರಳಯದ ಬಗ್ಗೆ ಕನ್ನಡದ ನ್ಯೂಸ್ ಚಾನಲ್ ನವರು ದುಗುಡ, ಭಯ ಮಿಶ್ರಿತ ಧ್ವನಿಯಲ್ಲಿ ವಿವರಣೆ, ವರ್ಣನೆ ನೀಡುವುದನ್ನು ಕೇಳಿದವರು ಕಂಪಿಸುವುದರಲ್ಲಿ ಅನುಮಾನವಿಲ್ಲ. ಒಂದು ಆಂಗ್ಲ ಚಿತ್ರದ ತುಣುಕೊಂದನ್ನು ತೋರಿಸುತ್ತಾ ಪ್ರಳಯವಂತೆ, ಹಾಗಾಗುತಂತೆ, ಹೀಗಾಗುತ್ತಂತೆ ಎಂದು ಅಂತೆ ಕಂತೆಗಳನ್ನು ಪುಂಖಾನು ಪುಂಖವಾಗಿ ಬಿಡುತ್ತಾ ಜನರಲ್ಲಿ ಗಾಭರಿ ಹುಟ್ಟಿಸುವ ಇವರ ನಡವಳಿಕೆಗೆ ಏನನ್ನಬೇಕೋ? ಈ ವರದಿಗಳನ್ನು ನೋಡಿದ ಜನ ಗಾಭರಿಯಾಗೋ ಬದಲು ಆ ಚಾನಲ್ ಗಳಿಗೆ ಇ –ಮೇಲ್ ಮೂಲಕ ಛೀಮಾರಿ ಹಾಕಿ ಇಂಥ ಬೊಗಳೆ ಗಳನ್ನು ಜನ ಸಹಿಸರು ಎನ್ನುವ ಸಂದೇಶವನ್ನು ಕೊಡಬೇಕು.

ಅವರು ಹಾಗೆ, ನಾವ್ಯಾಕೆ ಹೀಗೆ?

ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ ಒಬಾಮಾರದು. “ನನ್ನ” ನಿರ್ದೇಶನದ ಮೇರೆಗೆ “ನಾವಿಕ ಸೀಲ್ – ೬” ರ ವಿಶೇಷ ಪಡೆಗಳು ಒಸಾಮಾನನ್ನು ಬಲಿ ಹಾಕಿ ಜಲಸಮಾಧಿ ಮಾಡಿದರು ಎನ್ನುವ ಮಾತಿನಲ್ಲಿ “ನನ್ನ” ಎನ್ನುವ narcissistic ಮಾತೊಂದು ಬಿಟ್ಟರೆ ಒಬಾಮಾ ಬೇರಾವುದೇ ಶೌರ್ಯ ಪ್ರದರ್ಶನ ಮಾಡಲಿಲ್ಲ. ಒಸಾಮಾನನ್ನು ಬಲಿ ಹಾಕಿದ ಕೂಡಲೇ ಜಾರ್ಜ್ ಬುಶ್ ರಿಗೆ ಫೋನಾಯಿಸಿ ಇನ್ನು ಈ ಭೂಮಿಯ ಮೇಲೆ ಒಸಾಮಾ ನಡೆಯುವುದನ್ನು ನೋಡಲಾರಿರಿ ಎನ್ನುವ  ಸಂದೇಶ ನೀಡಿದರು ಅಧ್ಯಕ್ಷ ಒಬಾಮ. ದೇಶಕ್ಕೆ, ವಿಶ್ವಕ್ಕೆ ಈ ವಿಷಯವನ್ನ ಹೊರಗೆಡಹುವ ಮೊದಲೇ ತನ್ನ ಪಕ್ಷದವನಲ್ಲದ ರಿಪಬ್ಲಿಕನ್ ಪಕ್ಷದ ಹಿಂದಿನ ಅಧ್ಯಕ್ಷ ಬುಶ್ ನಿಗೆ ಈ ಸಂದೇಶ ರವಾನೆ ಮಾಡಿದ್ದು ಏಕೆ? ಈ ರಾಜಕಾರಣಕ್ಕೆ ನಿಷ್ಕೃಷ್ಟವಾಗಿ  bipartisan politics ಎಂದು ಕರೆಯುತ್ತಾರೆ ಅಮೆರಿಕೆಯಲ್ಲಿ. ದೇಶದ ಭದ್ರತೆ, ಸಮಗ್ರತೆ, ಮುಂತಾದ ಗಂಭೀರ ವಿಚಾರಗಳು ಬಂದಾಗ ಅಮೆರಿಕೆಯಲ್ಲಿ ಎಲ್ಲಾ ಪಕ್ಷಗಳೂ ಒಂದು. ಅವರೆಲ್ಲರ ಪಕ್ಷ ಒಂದೇ. ಅದುವೇ ಅಮೇರಿಕನ್. put america first, ಅಮೆರಿಕೆಯ ರಾಜಕಾರಣಿಗಳ ಧ್ಯೇಯ ವಾಕ್ಯ. ಅವರುಗಳ ಏಕೋದ್ದೇಶ. ದೇಶ ಉರಿಯುವಾಗ ಬಾಣಲೆ ಎತ್ತಿ ಕೊಂಡು ಬಂದು ಕಜ್ಜಾಯ ಹುರಿಯಲು ಮುಂದಾಗೋಲ್ಲ ಅಲ್ಲಿನ ರಾಜಕಾರಣಿಗಳು. ಹಾಗೇನಾದರೂ ಮಾಡಿದರೆ ಇ- ಮೇಲ್ ಮೂಲಕ ಬರುತ್ತವೆ ಎಕ್ಕಡಗಳು. ಮುಂದಿನ ಬಾರಿ ಆರಿಸಿ ಬರುವ ಆಸೆ ಕನಸಾಗುತ್ತದೆ.       

ಈಗ ಬನ್ನಿ ಭಾರತಕ್ಕೆ. “ನಿನ್ನ ತಲೆ ಹೋದರೂ ಪರವಾಗಿಲ್ಲ ನನ್ನ ತಲೆಯ ಮೇಲಿನ ಪೇಟ intact ಆಗಿದ್ದರೆ ಸಾಕು” ಎನ್ನುವ ರಾಜಕಾರಣಕ್ಕೆ ಸುಸ್ವಾಗತ. ೨೦೦೮ ನವೆಂಬರ್ ೨೬ ಕ್ಕೆ ವಿಶ್ವವನ್ನೇ ನಡುಗಿಸಿದ, ಪಾಕಿಸ್ತಾನದ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಮಾರಣ ಹೋಮ ಎರಡೂ ದೇಶಗಳು ಯುದ್ಧ ತಯಾರಿ ನಡೆಸುವಷ್ಟು ತೀವ್ರ ಪರಿಣಾಮ ಬೀರಿತು. ಮೂರು ದಿನಗಳ ಕಾಲ ಮುಂಬೈ ನಗರವನ್ನು ಒತ್ತೆಯಾಗಿರಿಸಿಕೊಂಡಿದ್ದ ಕೊಲೆಗಡುಕರು ನಮ್ಮ ಯೋಧರ ಗುಂಡುಗಳಿಗೆ ಒಬ್ಬೊಬ್ಬರಾಗಿ ಉರುಳಿದರು. ಎಲ್ಲಾ ಭಯೋತ್ಪಾದಕರೂ ಹತರಾಗಿ ಮುಂಬೈ ಮತ್ತೊಮೆ ಸುರಕ್ಷಿತ ಸ್ಥಿತಿಗೆ ಮರಳಿದಾಗ ನಮ್ಮ ಪ್ರಧಾನಿಗಳೂ, ವಿರೋಧ ಪಕ್ಷದ ನಾಯಕರೂ ಮುಂಬೈಗೆ ಧಾವಿಸಿ ಬಂದರು. ಬಂದಿದ್ದು ದೊಡ್ಡ ವಿಷಯವಲ್ಲ. ಅವರು ಬಂದ ರೀತಿ ಮಾತ್ರ ವಿಶೇಷವಾದದ್ದು. ಇಡೀ ವಿಶ್ವಕ್ಕೆ ನಾವು ಯಾವ ಪಕ್ಷಗಳಿಗೆ ಸೇರಿದ್ದರೂ ನಾವು ಭಾರತೀಯರು ಒಂದು ಎಂದು ತೋರಿಸಲು ಈ ಮಹನೀಯರುಗಳು ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿದರು. ಈ ಇಬ್ಬರೂ ನಾಯಕರು ತಮ್ಮ ಹೇಳಿಕೆಗಳಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾರಿದರೂ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಬೃಹದಾಕಾರವಾಗಿ ಗೋಚರಿಸುತ್ತವೆ. ಮುಂಬೈ ಮಾರಣ ಹೋಮಕ್ಕೆ ಮೊದಲು ಕಂದಹಾರಕ್ಕೆ ಅಪಹರಿಸಿಕೊಂಡು ಹೋದ ನಮ್ಮ ವಿಮಾನ, ಸಂಸತ್ ಭವನದ ಮೇಲೆ ನಡೆದ ಧಾಳಿ ಹೀಗೆ ಹಲವು ಯಾತನಾಮಯ ಸಂದರ್ಭಗಳಲ್ಲಿ ನಮ್ಮ ಒಗ್ಗಟು ಸಾಕಾಗಲಿಲ್ಲವೇನೋ ಎನ್ನುವಷ್ಟು ಐಕ್ಯತೆಯಿಂದ ಕೂಡಿರಲಿಲ್ಲ.

ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ, ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು.           

 

 

ತೇರೆ ಬಿನ್ ಲಾದೆನ್…

ಲಾದೆನ್, ನೀನಿಲ್ಲದೆ… ಸಿನೆಮಾ ದೊಡ್ಡ ಸುದ್ದಿ ಮಾಡಿತು ನಮ್ಮ ದೇಶದಲ್ಲಿ. ಲಾದೆನ್ ಬಗೆಗೆ ಅಮೆರಿಕೆಯ ಅತಿ ಆಸಕ್ತಿಯ ಕುರಿತು ರಚಿಸಿದ ಈ ಚಿತ್ರ ವೀಕ್ಷಕರನ್ನು ರಂಜಿಸಿತು. ಲಾದೆನ್ ನ         enigma ರಾಜಕಾರಣಿ, ಸುದ್ದಿ ಪಂಡಿತರನ್ನು ಮಾತ್ರವಲ್ಲ ಚಿತ್ರರಂಗವನ್ನೂ ಬಾಧಿಸಿತು. ಹತ್ತು ಹಲವು ವರ್ಷಗಳಿಂದ ಒಂದೇ ಸಮನೆ ಅಮೇರಿಕಾ ಲಾದೆನ್ ಗಾಗಿ ಪ್ರಪಂಚ ಜಾಲಾಡಿದರೂ ಸಿಗದೇ ಹತಾಶವಾಗಿದ್ದಾಗ ಇದ್ದಕ್ಕಿದ್ದಂತೆ, ಯಾವ ಸುಳಿವೂ, ಮುನ್ಸೂಚನೆಯೂ ಇಲ್ಲದೆ justice is done, Laden is gone ಎಂದು ಬೆಳ್ಳಂ ಬೆಳಗ್ಗೆ  ಕೇಳಿ ತಬ್ಬಿಬ್ಬಾದ ನಮಗೆ ಲಾದೆನ್ ಸಾವು ಸಿನಿಮೀಯ ರೀತಿ ಎಂದು ಅನ್ನಿಸಿದರೆ ತಪ್ಪಾಗಲಾರದು. ಹತ್ತು ವರ್ಷಗಳಿಂದ ಅತ್ಯಾಧುನಿಕ ಉಪಗ್ರಹಗಳಿಂದ ಹಿಡಿದು ಅಮೇರಿಕನ್ ಸೈನಿಕರ high tech binocular ಗಳಿಗೂ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಬಿನ್ ಲಾದೆನ್ ದಿಢೀರನೆ ಕೊಲ್ಲಲ್ಪಟ್ಟ ಎಂದರೆ ಒಂದು ರೀತಿಯ ಸಿನಿಮೀಯ ತಾನೇ?  

ಲಾದೆನ್ ಬರೀ ಅಮೆರಿಕೆಗೆ ಮಾತ್ರವಲ್ಲ, ನಮ್ಮ ದೇಶದಲ್ಲೂ ಕುತೂಹಲ, ಭಯ, ಆಕ್ರೋಶ ಬರಿಸಿದ ಹೆಸರು. ಅಮೆರಿಕೆಯ ಮೇಲೆ ಮತ್ತು ವಿಶ್ವದ ಇತರೆ ನಗರಗಳಲ್ಲಿ ತನ್ನ ಸಾವಿನ ಏಜೆಂಟರನ್ನು ಹರಿಬಿಟ್ಟ ಲಾದೆನ್ ಕೊನೆಗೂ ಸೆಣೆಸುತ್ತಾ  ಉರುಳಿ ಬಿದ್ದ ಅಮೆರಿಕೆಯ ನಾವಿಕ ದಳದ ಯೋಧರ ಗುಂಡುಗಳಿಗೆ,  ಪಾಕಿಸ್ತಾನದ “ಅಬೋಟ್ಟಾಬಾದ್” ನಗರದಲ್ಲಿ.

ಅಬೋಟ್ಟಾಬಾದ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ೩೫ ಮೈಲು ದೂರ ಇರುವ, ಪ್ರತಿಷ್ಠಿತ ಸೈನಿಕ ತರಬೇತಿ ಕಾಲೇಜು ಹೊಂದಿದ ಈ ನಗರದಲ್ಲಿ ಬಿನ್ ಲಾದೆನ್ ಸುಮಾರು ಐದು ವರ್ಷಗಳಿಗೂ ಹೆಚ್ಚು ಕಾಲ ಅವಿತು ಕೊಂಡಿದ್ದ ಎಂದರೆ ಯಾರೂ ದಂಗಾಗುವರು. ಅಮೆರಿಕೆಯಂತೂ ಮೂರ್ಛೆ ಬೀಳುವುದೊಂದು ಬಾಕಿ. ಭಯೋತ್ಪಾದನೆ ತಡೆಯಲು, ಲಾದೆನ್ ಕ್ರುತ್ಯಗಳನ್ನು ತಡೆಯಲು ಪಾಕಿಸ್ತಾನದ ಬೆಂಬಲ ಪಡೆದಿದ್ದ ಅಮೇರಿಕಾ ಈ ಸಹಾಯಕ್ಕೆ ಕೊಡುತ್ತಿದ್ದ ಫೀಸು ವರ್ಷಕ್ಕೆ ೩ ಬಿಲ್ಲಿಯನ್ ಡಾಲರ್. ಯಾಚಕ ದೇಶ. ಇಂಥದ್ದೇ ಮತ್ತೊಂದು ಯಾಚಕ ದೇಶ ಇಸ್ರೇಲ್. ಬಿನ್ ಲಾದೆನ್ ನನ್ನು ಹುಡುಕುತ್ತಿದ್ದೇವೆ, ತಾಲಿಬಾನಿ ಗಳನ್ನು ಸದೆ ಬಡಿಯುತ್ತಿದ್ದೇವೆ ಎಂದು ಸುಳ್ಳು ಸುಳ್ಳೇ ಭರವಸೆ ನೀಡುತ್ತಾ ಅಮೆರಿಕೆಯ ಡಾಲರುಗಳ ಲಂಚವನ್ನು ಲಜ್ಜೆಯಿಲ್ಲದೆ ಸ್ವೀಕರಿಸಿದ ಪಾಕ್ ಅಮೆರಿಕೆಗೆ ಮೋಸ ಮಾಡಿತೆಂದೇ ವಿಶ್ವದ, ಅಮೆರಿಕನ್ನರ ನಂಬಿಕೆ. ಈ ರೀತಿ ಪುಕ್ಕಟೆ ಯಾಗಿ ಸಿಗುತ್ತಿದ್ದ ಸಂಪತ್ತನ್ನು ನುಂಗುತ್ತಿದ್ದ ಪಾಕಿಗೆ ಲಾದೆನ್ ಚಿನ್ನದ ತತ್ತಿ ಇಡುವ ಕೋಳಿ. main source of income. ಪಾಪ, ಲಾದೆನ್ ಸಾವಿನಿಂದ ದೊಡ್ಡ, ಭರಿಸಲಾರದ ನಷ್ಟ ಪಾಕಿಗೆ.  

ಪಾಕಿಸ್ತಾನ ಮಾತ್ರ ತನಗೆ ಲಾದೆನ್ ನ ಇರುವಿನ ಬಗ್ಗೆ ಗೊತ್ತೇ ಇಲ್ಲ ಎಂದು ಆಣೆ ಹಾಕಿ ಹೇಳಿದರೂ circumstantial evidence ಇದಕ್ಕೆ ವ್ಯತಿರಿಕ್ತ. ಈ ವಿವಾದದಲ್ಲಿ ಮತ್ತೊಂದು ಸಮಸ್ಯೆ ಇದೆ. ಅಮೇರಿಕಾ ಮತ್ತು ಪಾಕಿಸ್ತಾನ chronic liars. ಶುದ್ಧ ಸುಳ್ಳರು. ಈ ಇಬ್ಬರ ತಗಾದೆ ಬಗೆಹರಿಸಲು ಇಲ್ಲಿದೆ ಲಿಟ್ಮಸ್ ಟೆಸ್ಟ್. ಲಾದೆನ್ ಎಲ್ಲಿದ್ದಾನೆ ಎನ್ನುವುದು ಪಾಕಿಗೆ ತಿಳಿದಿತ್ತೆ? ಪಾಕಿನ ಸಹಾಯವಿಲ್ಲದೆ ಅಮೆರಿಕೆಯ ಬ್ಲಾಕ್ ಹಾಕ ಹೆಲಿಕಾಪ್ಟರ್ ಗಳು ಹೇಗೆ ತಾನೇ ಲಾದೆನ್ ಇರುವಲ್ಲಿಗೆ ಬರಲು ಸಾಧ್ಯ? ಅಲ್ಕೈದಾ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನುವ ಭೀತಿ ಪಾಕಿಗೆ ತಾನು ಈ ಸಾಹಸದಲ್ಲಿ ಪಾಲು ಗೊಂಡಿಲ್ಲ ಎಂದು ಹೇಳಲು ಪ್ರೇರೇಪಿಸುತ್ತಿರಬಹುದೇ? ಪಾಕಿಸ್ತಾನದ ಪರಿಸ್ಥತಿ ಅಡಕ್ಕೊತ್ತರಿ ಯಲ್ಲಿ ಸಿಕ್ಕ ಅಡಿಕೆಯಂತೆ. ಲಾದೆನ್ ಇರುವ ಸ್ಥಳ ತೋರಿಸಿ ಅಮೆರಿಕೆಗೆ ಸಹಕಾರ ನೀಡಿದೆ ಎಂದರೆ ಅಲ್ ಕೈದಾ ಬಿಡೋಲ್ಲ, ಲಾದೆನ್ ಎಲ್ಲಿದ್ದಾನೆ ಎಂದು ತನಗೆ ತಿಳಿದಿಲ್ಲ ಎಂದರೆ ಅಮೇರಿಕಾ ಬಿಡೋಲ್ಲ. ಸುಮಾರು  ಐದು ವರ್ಷಗಳ ಕಾಲ ದೊಡ್ಡ ಪಾಕಿಸ್ತಾನದ ರಾಜಧಾನಿಯ ಹಿತ್ತಲಿನಲ್ಲಿ,  ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದ ಲಾದೆನ್ ಬಗ್ಗೆ ಪಾಕ್ ಸೈನ್ಯಕ್ಕೆ, ಸರಕಾರಕ್ಕೆ ತಿಳಿದಿಲ್ಲ ಎಂದರೆ ದೊಡ್ಡ ಆಶ್ಚರ್ಯವೇ. ಒಂದು ವೇಳೆ ಪಾಕಿಗೆ ಲಾದೆನ್ ಪಾಕಿನಲ್ಲಿ ಇರುವ ಅರಿವು ಇಲ್ಲದಿದ್ದರೆ ಅಮೇರಿಕಾ ತಾನು ನೀಡುವ ಉದಾರ ಧನ ಸಹಾಯ ಮುಂದುವರೆಸಬಹುದು. ಅಥವಾ ಲಾದೆನ್ ಪಾಕಿಸ್ತಾನದಲ್ಲಿ ಇರುವುದನ್ನು ಅಮೆರಿಕೆಗೆ ತಿಳಿಸದೇ ಡಬಲ್ ಗೇಂ ಆಡಿದ್ದರೆ ಪಾಕಿಸ್ತಾನವನ್ನು ದಾರಿಗೆ ತರುವ ಕೆಲಸ ಅಮೇರಿಕಾ ಶೀಘ್ರ ಶುರು ಮಾಡಬೇಕು. ಇದೇ ಟೆಸ್ಟು. Litmus ಟೆಸ್ಟು.    

ಬಿನ್ ಲಾದೆನ್ ಇಲ್ಲದೆ ಪಾಕ್ ಹೇಗೆ ತಾನೇ ಜೀವಿಸೀತು ಎನ್ನುವುದೀಗ ಆಸಕ್ತಿಕರ ಪ್ರಶ್ನೆ. ಪ್ರೀತೀ,  ನೀನಿಲ್ಲದೆ ನಾ ಹೇಗಿರಲಿ… ಎಂದು ಶೋಕ ಗೀತೆ ಹಾಡುತ್ತಿರಬಹುದೇ ಪಾಕಿಗಳು?

೨೦೦೧ ರ ಅಮೆರಿಕೆಯ ವಿರುದ್ಧದ ಧಾಳಿಗೆ ಬಿನ್ ಲಾದೆನ್ ನನ್ನು ನೇರ ಹೊಣೆಯಾಗಿರಿಸಿದ ಜಾರ್ಜ್ ಬುಶ್, ಬಿನ್ ಲಾದೆನ್ wanted, dead or alive ಎಂದು ಘೋಷಿಸಿದ. ಅಮೆರಿಕೆಯ ಮೇಲೆ ನಿರ್ದಯೀ, ಭೀಕರ ಧಾಳಿ ಮಾಡಿ ತಾನು ಒಂದು ದಿನ ಪೂರ್ತಿ ರಹಸ್ಯ ಅಡಗು ತಾಣವೊಂದರಲ್ಲಿ ದಿನ ಕಳೆಯುವಂತೆ ಮಾಡಿದ ಬಿನ್ ಲಾದೆನ್ ನ ತಲೆಗೆ ೨೫ ಮಿಲ್ಲಿಯನ್ ಡಾಲರ್ ಮೊತ್ತದ ಬೆಲೆಯನ್ನೂ ಕಟ್ಟಿದ ಬುಶ್.  ಹೊಗೆಯುಗುಳುತ್ತಾ ನೆಲಕ್ಕುರುಳಿದ ನ್ಯೂಯಾರ್ಕ್ ನ ಗಗನ ಚುಂಬಿ ಕಟ್ಟಡಗಳು ಅಮೆರಿಕನ್ನರ ಚಿತ್ತ ಕಲಕಿದವು. ಕ್ರುದ್ಧ ಅಮೇರಿಕಾ ಬಿನ್ ಲಾದೆನ್ ಅಡಗಿದ್ದ ಆಫ್ಘಾನಿಸ್ತಾನ ವನ್ನು ಆಕ್ರಮಣ ಮಾಡಿತು. ಬಿನ್ ಲಾದೆನ್ ಎಲ್ಲಿದ್ದರೂ ಹೊಗೆ ಹಾಕಿ ಹೊರತೆಗೆಯುತ್ತೇನೆ ಎಂದು ಘರ್ಜಿಸಿದ ಬುಶ್ ಆಫ್ಘಾನಿಸ್ತಾನದ ಗುಡ್ಡಗಾಡು ಗಳನ್ನು ಮಾತ್ರವಲ್ಲ ಅಲ್ಲಿನ ತೋರಾ ಬೋರಾ ಗವಿ ಸಮುಚ್ಛಯಗಳನ್ನು ಜಾಲಾಡಿದ. ಸೋವಿಯೆಟ್ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ್ದ, ಸ್ವತಃ ಅಮೆರಿಕನ್ನರಿಂದಲೇ ತರಬೇತಿ ಪಡೆದ, ಸ್ವಾತಂತ್ರ್ಯ ಹೋರಾಟಗಾರ ಎಂದು ರೋನಾಲ್ಡ್ ರೇಗನ್ನರಿಂದ ಹೊಗಳಿಸಿಕೊಂಡಿದ್ದ  ಬಿನ್ ಲಾದೆನ್ ರಂಗೋಲಿ ಕೆಳಗೆ ತೂರಿಕೊಳ್ಳುವುದನ್ನು ಕರಗತ ಮಾಡಿಕೊಂಡ.  

ಬಿನ್ ಲಾದೆನ್,  wanted, dead or alive ಎಂದ ಅಮೇರಿಕಾ ಲಾದೆನ್ ಇರುವ ಮನೆಯ ಮೇಲೆ ಧಾಳಿ ಮಾಡಿ, ೪೦ ನಿಮಿಷಗಳ ಕಾಳಗದಲ್ಲಿ ಎರಡು ಗುಂಡುಗಳನ್ನು ಲಾದೆನ್ ತಲೆಗೆ ಸಿಡಿಸಿ ಕೊಂದಿದ್ದಾರೂ ಏಕೆ? ಅವನನ್ನು ಜೀವಂತ ಸೆರೆ ಹಿಡಿದು, ಅಮೆರಿಕೆಯ USS COLE , ಆಫ್ರಿಕಾದ ದಾರುಸ್ಸಲಾಮ್, ಸ್ಪೇನ್ ನ MADRID, ಲಂಡನ್, ಸೌದಿ ಅರೇಬಿಯಾದ ದಹರಾನ್, ಇರಾಕ್, ಸೋಮಾಲಿಯಾ, ಇಂಡೋನೇಷ್ಯಾದ ಬಾಲಿ ಮುಂತಾದ ನಗರಗಳ ಮೇಲೆ ಧಾಳಿ ಮಾಡಿದ ಈತನನ್ನು ವಿಚಾರಣೆ ಮಾಡಬಹುದಿತ್ತಲ್ಲ. ಅಮೆರಿಕೆಯ ಕಾರ್ಯ ವೈಖರಿ ಆ ದೇಶದಷ್ಟೇ ನಿಗೂಢ. ಕ್ರಿಸ್ಟಫರ್ ಕೊಲಂಬಸ್ ಕಂಡು ಹಿಡಿಯುವವರೆಗೂ ನಿಗೂಢವಾಗಿದ್ದ ದೇಶವಲ್ಲವೇ ಅಮೇರಿಕಾ? ಈತನನ್ನು ಸೆರೆ ಹಿಡಿದು ಅಮೇರಿಕಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿ ಕೊಳ್ಳಲು ಇಷ್ಟ ಪಡಲಿಲ್ಲ. ವಿಚಾರಣೆ ವೇಳೆ ಬಿನ್ ಲಾದೆನ್ ಬಾಯಿ ಬಿಟ್ಟರೆ ತಾವು ಕೇಳಲು ಇಚ್ಛಿಸುವುದಕ್ಕಿಂತ ಸ್ವಲ್ಪ ಹೆಚ್ಚನ್ನೇ ಬಡಬಡಿಸಬಹುದು. ಈ ಕಸಿವಿಸಿಯಿಂದ ಪಾರಾಗಲು ಇರುವ ಒಂದೇ ದಾರಿ ಎಂದರೆ ನೇರ ಆಕ್ರಮಣ. ಈ ಆಕ್ರಮಣದಲ್ಲಿ ಅಮೇರಿಕಾ ಯಶಸ್ಸನ್ನು ಕಂಡಿತು.         

ತಾನು ಕರಿಯನಾದ ಒಂದೇ ಕಾರಣಕ್ಕೆ ದಿನವೂ ಬಿಳಿ ಅಮೆರಿಕನ್ನರ ಕುಹಕಕ್ಕೆ, ಅವಹೇಳನಕ್ಕೆ  ಗುರಿಯಾಗುತ್ತಿದ್ದ ಒಬಾಮ ಕೊನೆಗೆ ತನ್ನ ಜೀವನದ ಅತಿ ದೊಡ್ಡ ಅವಮಾನವನ್ನು ಎದುರಿಸಬೇಕಾಯಿತು. ಒಬಾಮಾರ ಜನನ ಪ್ರಮಾಣ ಪತ್ರವನ್ನು ಬಲ ಪಂಥೀಯ ರಿಪಬ್ಲಿಕನ್ ಪಕ್ಷ ಕೇಳಿತು. ಒಬಾಮಾ ತನ್ನ ಜನನ ಪ್ರಮಾಣ ಪತ್ರದ ಜೊತೆ ಜೊತೆಗೇ ಅಮೆರಿಕನ್ನರ ಸಿಂಹಸ್ವಪ್ನನಾಗಿದ್ದ ಲಾದೆನ್ ನ ಸಾವಿನ ಪ್ರಮಾಣ ಪತ್ರವನ್ನೂ ಅಮೆರಿಕನ್ನರಿಗೆ ನೀಡಿ ತಾನು ಕಾರ್ಯಕ್ಷಮತೆಯಲ್ಲಿ ಯಾವ ಬಿಳಿ ಅಧ್ಯಕ್ಷನಿಗೂ ಕಡಿಮೆಯಲ್ಲ ಎನ್ನುವುದನ್ನು ತೋರಿಸಿ ಕೊಟ್ಟರು.   

ಒಸಾಮಾ ಬಿನ್ ಮುಹಮ್ಮದ್ ಬಿನ್ ಅವಾದ್ ಬಿನ್ ಲಾದೆನ್.  ೫೪ ವರ್ಷ ಪ್ರಾಯದ, ಆರಡಿ ಮೂರಿಂಚು ಎತ್ತರದ ಸ್ಫುರದ್ರೂಪಿ ಮತ್ತು ಆಗರ್ಭ ಶ್ರೀಮಂತ ಆಫ್ಘನ್ ಗುಡ್ಡ ಗಾಡಿನ ಜನರ ವಿಶ್ವಾಸ, ಪ್ರೀತಿ, ಅಭಿಮಾನ ಗಳಿಸಲು ಕಾರಣವಾಗಿದ್ದಾದರೂ ಏನು? ಜನರೊಂದಿಗೆ ಸುಲಭವಾಗಿ, ಆತ್ಮೀಯತೆಯಿಂದ ಬೆರೆಯುತ್ತಿದ್ದ ಈತ ಸೌಮ್ಯ ಮಾತುಗಾರಿಕೆಯಿಂದ, ತನ್ನ ಉದಾರ ಸ್ವಭಾವದಿಂದ ಅಲ್ಲಿನ ಯುವಜನರ ಮನ ಗೆದ್ದಿದ್ದ. ಕೋಟ್ಯಾಧೀಶ ಮನೆತನದಿಂದ ಬಂದ ಈತ ಐಶಾರಾಮದ ಬದುಕನ್ನು ಬಿಟ್ಟು ಆಫ್ಘನ್ ಗುಡ್ಡಗಾಡಿನಲ್ಲಿ ಒಣಗಿದ ಚಪಾತಿ ತಿನ್ನುತ್ತಾ ತಮ್ಮೊಂದಿಗೆ ಇರುತಿದ್ದ ಈತನನ್ನು ಕಂಡು ಜನ ಮಾರುಹೋದರು. ಸೋವಿಯೆಟ್ ಸೈನ್ಯದೊಂದಿಗೆ ಹೋರಾಡಿದ ಈತ ಓರ್ವ ಸೈನಿಕನೊಂದಿಗೆ hand to hand combat ನಲ್ಲಿ ಸೈನಿಕನ್ನು ಕೊಂದು ಅವನ kalashnikov ಬಂದೂಕನ್ನು ವಶಪಡಿಸಿ ಕೊಂಡಿದ್ದ. ಈ ಬಂದೂಕು ಅವನ ಅಭಿಮಾನದ ಸ್ವತ್ತಾಗಿತ್ತು.

ಈತ ಆರಂಭಿಸಿದ ಅಲ್ ಕೈದಾ ಒಂದು ಸಂಘಟನೆಯೋ ಆಗಿರದೆ ಒಂದು ತೆರನಾದ ideology ಆಗಿತ್ತು. ಸದಸ್ಯ ಶುಲ್ಕವಾಗಲೀ, ಯಾವುದೇ formal induction ಆಗಲಿ ಬೇಕಿಲ್ಲದ ಈ ವಿಚಾರಧಾರೆಗೆ ಮೂರು ಅಂಶಗಳೇ ಉರುವಲಾಗಿ ಕೆಲಸ ಮಾಡುತ್ತಿದ್ದವು. ಆಕ್ರೋಶ, ನಿರಾಶೆ, ನಿಸ್ಸಹಾಯಕತೆ (anger, frustration, desperation).  ಒಂದು ಕಡೆ ಮುಸ್ಲಿಂ ದೇಶಗಳಲ್ಲಿನ ಆಳುವವರ ಭ್ರಷ್ಟಾಚಾರ ಸಾಲದು ಎಂಬಂತೆ ಅಮೆರಿಕೆಯ ಮೇಲಿನ ವಿಪರೀತ ಅವಲಂಬನೆ ಮತ್ತು ಅರಬ್ಬರ ಸಂಪತ್ತನ್ನು ಲೂಟಿ ಹೊಡೆಯುತ್ತಾ ಇಸ್ರೇಲ್ ದೇಶವನ್ನು ಸಾಕುತ್ತಿದ್ದ ಅಮೆರಿಕೆಯ ಆಟ ಈತನಲ್ಲಿ ಆಕ್ರೋಶ ಹುಟ್ಟಿಸಿತ್ತು. ಸೌದಿ ದೊರೆಗಳ ವಿರುದ್ಧವೂ ಈತ ಸಮರ ಸಾರಿದ ನಂತರ ಇವನ ವಿರೋಧಿಗಳ ಪಟ್ಟಿ ದೊಡ್ಡದಾಗುತ್ತಾ ಹೋಯಿತು. ಈತನ ನೂರಾರು ಹಿಂಬಾಲಕರಲ್ಲಿ ಹಲವರನ್ನು ಕೊಂದು, ನೂರಾರು ಜನರನ್ನು ಜೈಲಿಗೆ ತಳ್ಳಿ ಅಲ್ ಕೈದಾ ಪಿಡುಗನ್ನು ಕೊನೆಗಾಣಿಸಿದ ಸೌದಿ ಸರಕಾರ ಭಯೋತ್ಪಾದನೆ ತಡೆಯುವಲ್ಲಿ ಯಾವ ಕ್ರಮ ತೆಗೆದು ಕೊಳ್ಳುವುದಕ್ಕೂ ತಾನು ಹೇಸುವುದಿಲ್ಲ ಎಂದು ವಿಶ್ವಕ್ಕೆ ತೋರಿಸಿ ಕೊಟ್ಟಿತು.   

ಯಹೂದಿಗಳ ಕೈಯ್ಯಲ್ಲೂ, ಅಮೆರಿಕೆಯ ಕೈಯ್ಯಲ್ಲೂ ಮುಸ್ಲಿಮರ ಮಾರಣ ಹೋಮ ನೋಡಿದ ಬಿನ್ ಲಾದೆನ್ ಪ್ರತಿಕ್ರಯಿಸಿದ್ದು ಹಿಂಸಾ ಮಾರ್ಗದಿಂದ. ಸುಮಾರು ೧೫೦೦ ವರ್ಷಗಳ ಚರಿತ್ರೆ ಇರುವ ಇಸ್ಲಾಂ ಧರ್ಮಕ್ಕೆ ಬಹುಶಃ ಸ್ವತಃ ಮುಸ್ಲಿಂ ಆದ ಬಿನ್ ಲಾದೆನ್ ಮಾಡಿದಷ್ಟು ಅಪಕಾರ ಬೇರಾರೂ ಮಾಡಿರಲಾರ ರೇನೋ? ತನ್ನ ಕುಕೃತ್ಯಗಳಿಂದ ಎರಡು ಯುದ್ಧಗಳಿಗೆ ಕಾರಣನಾದ, ಎರಡು ದಶಲಕ್ಷಕ್ಕೂ ಅಧಿಕ ಮುಸ್ಲಿಮರ ಸಾವಿಗೆ ಸಾಕ್ಷಿ ನಿಂತ ಬಿನ್ ಲಾದೆನ್ ಅದ್ಯಾವ ರೀತಿ ತಾನು ನಂಬಿದ ಧರ್ಮದ ಸೇವೆ ಮಾಡಿದನೋ ಅವನೇ ಬಲ್ಲ.  ವಿಶ್ವದ ಡಜನ್ ಗಟ್ಟಲೆ ಹೆಚ್ಚು ನಗರಗಳಲ್ಲಿ ಸಾವು ನೋವನ್ನು ತಂದು ನಿಲ್ಲಿಸಿದ ಬಿನ್ ಲಾದೆನ್ ಕೊನೆಗೂ ಹಿಂಸೆಯ ಮೂಲಕವೇ ತನ್ನ ಜೀವ ಕಳೆದುಕೊಂಡ. ಇಂಡೋನೇಷ್ಯಾದ “ಬಾಲಿ” ಯಿಂದ ಹಿಡಿದು ಆಫ್ರಿಕಾದ  ನೈರೋಬಿ ವರೆಗೆ ಸಾವು ನೋವಿನ ಕರಾಳ ಕಂಬಳಿಯನ್ನು ಹರಡಿದ ಬಿನ್ ಲಾದೆನ್ “ವಿನಾಕಾರಣ ಒಬ್ಬನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆ” ಎಂದ ಹೇಳಿದ ತನ್ನ ಭಗವಂತನ ಮುಂದೆ ನಿಂತು ಯಾವ ಸಮಜಾಯಿಷಿ ನೀಡುವನೋ?

ಬಿನ್ ಲಾದೆನ್ ನಿರ್ಗಮನದಿಂದ ನಮ್ಮೀ ವಿಶ್ವ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗೆ ಕಾಲಗರ್ಭದಲ್ಲಿ ಅಡಗಿದೆ  ಉತ್ತರ.

ಟ್ವಿಟ್ಟರ್ ನಲ್ಲಿ ಸಿಕ್ಕಿದ್ದು:

Kentucky Fried Chicken ಶುರು ಮಾಡಿದ “ಕರ್ನಲ್ ಸ್ಯಾಂಡರ್ಸ್” ನ ನಿಧನದೊಂದಿಗೆ KFC ಯ franchising ನಿಲ್ಲಲಿಲ್ಲ. ಅದೇ ರೀತಿ ಅಲ್ ಕೈದಾ ಸ್ಥಾಪಕನ ಸಾವಿನಿಂದ ಅಲ್ ಕೈದಾ ಸಹ ಮುಗಿಯೋದಿಲ್ಲ.  ಆದರೆ ಇದೇ ವೇಳೆ, ಅಂತರಾಷ್ಟ್ರೀಯ ಖ್ಯಾತಿಯ, ಸಂಪಾದಕ ಭಾರತೀಯ ಮೂಲದ ಫರೀದ್ ಜಕರಿಯಾ ಹೇಳಿದ್ದು, loss of a symbol can end a movement.  

ವಿ. ಸೂ: ನನ್ನ ಈ ಲೇಖನ ಬಿನ್ ಲಾದೆನ್ ನ ಅವಸಾನ ಮತ್ತು ಅವಸಾನದ ಕ್ಷಣಗಳನ್ನು ಅಮೆರಿಕೆಯ ವೃತ್ತಾಂತವನ್ನು ಆಧರಿಸಿದ್ದು. ಯಾವುದೇ independent confirmation ಯಾರಿಗೂ ಲಭ್ಯವಾಗಿಲ್ಲ.      

 

ಜಪಾನ್ ದುರಂತ ಮತ್ತು ಹಾಸ್ಯ

ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತಮ್ಮ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ  ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೀಳು ಅಭಿರುಚಿಯ ಜೋಕುಗಳನ್ನು ಸಿಡಿಸುತ್ತಿದ್ದಾರೆ ಕೆಲವರು.

ಅಮೆರಿಕೆಯ ಚಿತ್ರ ಸಾಹಿತ್ಯ ಲೇಖಕನೊಬ್ಬ ಜಪಾನ್ ದುರಂತದ ಬಗ್ಗೆ ಟ್ವೀಟಿಸಿದ್ದು ಹೀಗೆ; “ಜಪಾನಿನ ಭೂಕಂಪನದ ಬಗ್ಗೆ ಒಳ್ಳೆಯ ಭಾವನೆ ಬರಬೇಕಾದರೆ ಪರ್ಲ್ ಹಾರ್ಬರ್ ಸಾವಿನ ಸಂಖ್ಯೆ ಬಗ್ಗೆ ಗೂಗ್ಲಿಸಿ ನೋಡಿ”

೧೯೪೧ ರಲ್ಲಿ ಜಪಾನೀ ನಾವಿಕ ಪಡೆ ಅಮೆರಿಕೆಯ ಹವಾಯಿ ದ್ವೀಪದ ಪರ್ಲ್ ಹಾರ್ಬರ್ ಮೇಲೆ ನಡೆಸಿದ ಅಚ್ಚರಿದಾಯಕ ಆಕ್ರಮಣದಲ್ಲಿ ೨೦೦೦ ಸಾವಿರಕ್ಕೂ ಹೆಚ್ಚು ಜನ ಸತಿದ್ದರು. ಅದಕ್ಕೂ ಹೆಚ್ಚಾಗಿ ಈ ಆಕ್ರಮಣ ಅಮೆರಿಕೆಯ ಸೇನಾ ಪ್ರತಿಷ್ಠೆಗೆ ಭಾರೀ ಪೆಟ್ಟನ್ನೂ ನೀಡಿತ್ತು. ಈ ಆಕ್ರಮಣವನ್ನು ಗಮನದಲ್ಲಿಟ್ಟು ಕೊಂಡು ಪ್ರಸಕ್ತ ನೈಸರ್ಗಿಕ ವಿಕೋಪ ಕಾರಣ ಜಪಾನಿನಲ್ಲಿ ಸಂಭವಿಸಿದ ಅಗಾಧ ಸಾವು ನೋವಿಗೆ ಈತನ ಮನಸ್ಸು ಪ್ರತಿಸ್ಪಂದಿಸಲು ವಿಫಲವಾಯಿತು. ರಾಜಕೀಯ ಕಾರಣಗಳಿಗಾಗಿ ನಡೆದ ಆಕ್ರಮಣಕ್ಕೆ ಸೇಡು ಎನ್ನುವಂತೆ ಟ್ವೀಟಿಸುವ ಈತನಿಗೆ ಸಂದು ಹೋದ ಚರಿತ್ರೆ ಬಗ್ಗೆ ಮರುಗುವುದು ಹುಂಬತನ ಎನ್ನುವುದು ತಿಳಿಯದೆ ಹೋಯಿತು. ಇಂದು ಜಪಾನಿನ ಮೇಲೆ ಎರಗಿದ ನಿಸರ್ಗ ನಾಳೆ ತನ್ನ ದೇಶದ ಮೇಲೂ ಎರಗಬಾರದು ಎನ್ನುವ ಖಾತರಿ ಇಲ್ಲ ಎನ್ನ್ವುಉದು ಈ ಸಾಹಿತಿಗೆ ಅರಿಯದೆ ಹೋಯಿತು.   

ಮೇಲೆ ಹೇಳಿದ ಚಿತ್ರಸಾಹಿತಿಯ ಟ್ವೀಟ್ ಬಗ್ಗೆ ಗುಲ್ಲೆದ್ದು, ಪ್ರತಿಭಟನೆ ಬಂದಾಗ ಅವನು ಹೇಳಿದ್ದು, ನಾನು ಟ್ವೀಟಿ ಸುವಾಗ ೨೦೦ ಜನ ಮಾತ್ರ ಸತ್ತಿದ್ದರು, ಈಗ ೧೦ ಸಾವಿರಕ್ಕೆ ಮುಟ್ಟಿದೆ ಸಾವಿನ ಸಂಖ್ಯೆ, ನನ್ನ ಸಂವೇದನಾ ರಹಿತ ಕಾಮೆಂಟ್ ಗಳಿಗೆ ಕ್ಷಮೆಯಿರಲಿ”. ೨೦೦ ಜನ ಸತ್ತರೆ ಈತನಿಗೆ ದೊಡ್ಡ ವಿಷಯವಲ್ಲ. ಅದು ಗಂಭೀರವೂ ಅಲ್ಲ. ಅಮೆರಿಕೆಯ ದಿವಂಗತ ಸೆನಟರ್ ಟೆಡ್ ಕೆನಡಿಯ ಸಾಕು ನಾಯಿ “ಸ್ಪ್ಲಾಶ್” ಇತ್ತೀಚೆಗೆ ಸತ್ತಾಗ ಅದು ದೊಡ್ಡ ಸುದ್ದಿ. ಭೂಕಂಪದಲ್ಲಿ ಸತ್ತ ಜನರಿಗೆ ತಮಾಷೆಯ ಟ್ವೀಟ್. ಇದು ಸಂಸ್ಕಾರ.

ಈಗ ಮತ್ತೊಬ್ಬ ಹಾಸ್ಯನಟನ ಹಾಸ್ಯದ ಟ್ವೀಟ್ ನೋಡಿ; “ಜಪಾನೀಯರು ತುಂಬಾ ಮುಂದುವರಿದವರು, ಅವರು ಸಮುದ್ರ ತೀರಕ್ಕೆ ಹೋಗುವುದಿಲ್ಲ, ಬದಲಿಗೆ ತೀರವೇ ಅವರಿದ್ದಲ್ಲಿಗೆ ಬರುತ್ತದೆ”. ದೈತ್ಯಾಕಾರದ ಸುನಾಮಿ ಅಲೆಗಳು ೨೦೦ ರಿಂದ ೫೦೦ ಕಿಲೋ ಮೀಟರ್ ವೇಗದಲ್ಲಿ ಸೆನ್ಡಾಯ್ ನಗರದ ಮೇಲೆ ಅಪ್ಪಳಿಸಿ ಹತ್ತಾರು ಸಾವಿರ ಜನ ಸತ್ತಾಗ ಬಂದ ಶೋಕತಪ್ತ ಟ್ವೀಟ್ ಇದು. ಇದು ಬಿಳಿಯರಿಗೆ ಹಾಸ್ಯ. ಅಭಿವ್ಯಕ್ತಿ ಸ್ವಾಂತ್ರ್ಯ. ಬಿಳಿಯರಲ್ಲದ ಜನರ ಮೇಲೆ ಅವರಿಗಿರುವ ಅನುತಾಪ ಅಷ್ಟಕ್ಕಷ್ಟೇ. ಜಪಾನೀಯರನ್ನೂ, ಚೀನೀಯರನ್ನೂ ಹಳದಿ ಚರ್ಮದವರು ಎಂದು ತಮಾಷೆ ಮಾಡುತ್ತಾರಂತೆ ಪಾಶ್ಚಾತ್ಯರು.

ಆಧುನಿಕ ಬದುಕಿನ blackberry ಸಂಸ್ಕೃತಿ ಕಾರಣ ಮನುಷ್ಯ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಲು, ಅನುಕಂಪ ತೋರಲು ಸೋಲುತ್ತಿದ್ದಾನೆ ಎಂದರೆ ಉತ್ಪ್ರೇಕ್ಷೆ ಆಗಬಹುದೇ?       

ಭೂತ ಕಾಲದ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಒಬ್ಬ ಮಹನೀಯ ಹೇಳಿದ್ದು;

the past is a foreign country; they do things differently there

ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.

ನಲವತ್ತು ಸಂವತ್ಸರಗಳು, ಒಂದು ವಿಚ್ಛೇದನ

ನಲವತ್ತು ವಸಂತಗಳು, ಎಂಥ ಮೊಂಡು ಮರವನ್ನೂ ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊಸ ಅನುಭೂತಿಯನ್ನು ತರುತ್ತದೆ ಮನುಷ್ಯನಲ್ಲಿ. ನಲವತ್ತು ವರುಷಗಳ ಅನುಭವ ಮನುಷ್ಯನನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಾಲ್ಕು ದಶಕಗಳು….ಅವುಗಳ ಬಗ್ಗೆ ಊಹಿಸುವುದೂ ಕಷ್ಟ.

ನಲವತ್ತು ವರುಷಗಳ ಕಾಲ ತೀರಾ ಹತ್ತಿರವಾಗಿದ್ದವರು, ಸಾವಿರಾರು ಹಗಲನ್ನೂ, ಇರುಳನ್ನೂ ಕಂಡವರು ಏಕಾಏಕಿ ದೂರವಾದರು, ಅಮೆರಿಕೆಯಲ್ಲಿ.  

ಅಮೆರಿಕೆಯ ಮಾಜಿ ಅಧ್ಯಕ್ಷ ಅಲ್-ಗೋರ್ ತಮ್ಮ ಪತ್ನಿ ಮೇರಿ ಎಲಿಜಬೆತ್ ಟಿಪ್ಪರ್ ರಿಂದ  ವಿಚ್ಚೇದಿತರಾಗುತ್ತಿದ್ದಾರೆ.   ನಲವತ್ತು ವರ್ಷಗಳ ಬಾಳ ಸಂಗಾತಿಯನ್ನು ತೊರೆದು ನಿಸರ್ಗದ ಏಕಾಂತದ ಅನುಭವಕ್ಕಾಗೋ ಏನೋ. ವಿವಾಹ ಮತ್ತು ವಿಚ್ಚೇದನ ಜನರಿಗೆ ಅತಿ ವೈಯಕ್ತಿಕ ವಿಷಯ. ಅದರ ಚರ್ಚೆ ನಮಗೇಕೆ ಎಂದು ನಿಮಗೆ ಅನ್ನಿಸಬಹುದು. ಆದರೆ ಇಲ್ಲಿ ಕಾಣ ಸಿಕ್ಕಿರುವ ಪಾತ್ರಗಳು ಸಾರ್ವಜನಿಕ ಬದುಕಿನಲ್ಲಿರುವವರು. ಇಂಥವರ ಬೇರೆಲ್ಲಾ ಲೀಲೆಗಳನ್ನೂ ಚರ್ಚಿಸುವ ನಾವು ಅವರ ಸಂಕಷ್ಟಗಳ ಬಗ್ಗೆಯೂ ಯೋಚಿಸಿ ಅದರಲ್ಲಿ ನಮಗೇನಿದೆ ಕಲಿಯಲು ಎಂದು ಸೂಕ್ಷ್ಮವಾಗಿ ನೋಡಿದಾಗ ಅರಿವಾಗುತ್ತದೆ ಈ ವಿಷಯ ನಮಗೆ ಪ್ರಸ್ತುತ ಎಂದು.     

“Everyone you meet is fighting some kind of battle.” – ಎಷ್ಟು ಸತ್ಯ ನೋಡಿ ಈ ಮಾತು. “ನಾವು ಭೆಟ್ಟಿಯಾಗುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದ ಸೆಣಸಿನಲ್ಲಿರುತ್ತಾರೆ”- ಹೌದು ಒಂದಲ್ಲ ಒಂದು ರೀತಿಯ ಹೋರಾಟ ಪ್ರತಿಯೊಬ್ಬರದೂ. ನಲವತ್ತು ವರುಷಗಳ ಸಂಬಂಧ ಈ ರೀತಿ ಕಳಚಿ ಕೊಂಡು ಬಿದ್ದರೆ ಅನಂತತೆಯ ಮಾತು ದೂರ ಉಳಿಯಿತು. ಹಾಗಾದರೆ ವಿವಾಹ ಸಂಬಂಧ ನಿರಂತರ, ಶಾಶ್ವತ (ಸಾವನ್ನು ಬಿಟ್ಟು) ವಾಗಿರಿಸಲು ಸಾಧ್ಯವಿಲ್ಲವೇ? ಕೆಲವರು ಹೇಳ್ತಾರೆ time is a great healer ಅಂತ. ಆದರೆ ಇಲ್ಲಿ ಆ ಹೀಲಿಂಗ್ ಕಾಣ್ತಾ ಇಲ್ಲ. ಇಲ್ಲಿ ಕಾಣ್ತಾ ಇರೋದು drifting. ಅಬ್ಬರದ ಅಲೆಗೆ ನಲುಗುವ ದೋಣಿಯಂತೆ. ವೈಯಕ್ತಿಕ ಬದುಕಿನ ಚರ್ಚೆ ನಮಗೆ ಬೇಡವೆಂದರೂ ಈ ತೆರನಾದ ಸುದ್ದಿಗಳು ನಮ್ಮನ್ನು ಖಂಡಿತ ಗಲಿಬಿಲಿಗೊಳಿಸುತ್ತವೆ. ವಿಶ್ವದ ತಾಪ ಮಾನ ಹೆಚ್ಚಳದ ಬಗ್ಗೆ ಪುಸ್ತಕ ಬರೆದು, ನೊಬೆಲ್ ಗಿಟ್ಟಿಸಿಕೊಂಡ ವ್ಯಕ್ತಿ ತನ್ನ ಮಗ್ಗುಲಲ್ಲೇ ಇದ್ದ ವ್ಯಕ್ತಿಯನ್ನು ಅರಿಯದಾದನೆ? ಹವಾಮಾನ ಬಿಕ್ಕಟ್ಟು (climate crisis), ಅಲ್-ಗೋರ್ ಅವರ ಧ್ಯೇಯ, ಆದರೆ ಮನೆಯೊಳಗಿನ ಹವಾಮಾನ ತಣ್ಣಗೆ ಕೈ ಕೊಡುತ್ತಿದ್ದನ್ನು ಕಾಣದೆ ಎಡವಿದರು ಅಮೆರಿಕೆಯ  ಮಾಜಿ ಉಪಾಧ್ಯಕ್ಷರು. ಹವಾಮಾನದ ಏರು ಪೇರಿನ ಮೇಲೆ ಬಹಳಷ್ಟು ಅಧ್ಯಯನ ನಡೆಸಿದ್ದ ಅಲ್-ಗೋರ್ ಒಂದು ಪುಸ್ತಕ ಸಹ ಬರೆದಿದ್ದರು. ಅದರ ಹೆಸರು An Inconvenient Truth. ಈ ಶೀರ್ಷಿಕೆ ಹವಾಮಾನಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿಗೂ ಅನ್ವಯಿಸಬಹುದು ಎಂದು ಬಹುಶಃ ಅವರಿಗೆ ತಿಳಿದಿರಲಿಲ್ಲವೇನೋ? ಅವರ ಇತ್ತೀಚಿನ ಪುಸ್ತಕದ ಹೆಸರು The Assault on Reason. ಶೀರ್ಷಿಕೆಗಳನ್ನು ಗಮನಿಸಿದಿರಿ ತಾನೇ?    

Familiarity breeds contempt ಎನ್ನುತ್ತಾರೆ. ಆದರೆ ಈ ವಿವಾಹದ ಸಲುಗೆಯ ಬೆಸುಗೆ ಸಡಿಲವಾಗಿ ಕಳಚಿ ಬೀಳಲು ತೆಗೆದುಕೊಂಡವು ಪೂರ್ತಿ ನಲವತ್ತು ವರ್ಷಗಳು. ಅಷ್ಟಕ್ಕೂ ವಿವಾಹದಲ್ಲಿ ಇರಬಾರದ ಸಲುಗೆ ಬೇರೆಲ್ಲಿ ಸಿಗಬಹುದು ಹೇಳಿ? all is fair in love and war ಅಲ್ವಾ? ಒಂದು ಜೋಡಿ ಗೃಹಸ್ಥಾಶ್ರಮಕ್ಕೆ ಮಧುರ ಭಾವನೆಗಳನ್ನು, ಹೊಂಗನಸುಗಳನ್ನು ಇಟ್ಟುಕೊಂಡು ಪ್ರವೇಶಿಸುತ್ತದೆ. ತನ್ನ ಹಿರಿಯರು, ಪೂರ್ವಜರು ಆರಿಸಿಕೊಂಡ ದಾರಿಯನ್ನೇ ಕ್ರಮಿಸಲು ಹೊರಡುವ ಜೋಡಿಗೆ ಆರಂಭದ ಪ್ರೇಮದ ಹುಚ್ಚು ಹೊಳೆ ಈಜಿ ದಡ ಸೇರಿದ ನಂತರ ಒಂದೊಂದೇ ಮುಳ್ಳುಗಳು ಕಾಣಲು, ಪೀಡಿಸಲು ತೊಡಗುತ್ತವೆ. ಆದರೆ ತಮ್ಮ ಪೂರ್ವಜರ ನಿರೀಕ್ಷೆ, ಮಿತಿ ಅರಿತು ಕೊಂಡ, ಜೋಡಿ ಅವನ್ನು ಹೇಗೆ ತನ್ನ ಪೂರ್ವಜರು ನಿಭಾಯಿಸಿದರು ಕಂಡುಕೊಂಡ ಜೋಡಿಗೆ ಸಂಕಷ್ಟಗಳು ತೋರದು. ತೋರಿದರೂ ಅದೂ ಬದುಕಿನ ಅವಿಭಾಜ್ಯ ಅಂಗ ಎಂದು ಕೊಂಡು ತಮ್ಮ ಅಪ್ಪುಗೆಯಲ್ಲಿ ತೊಡಕುಗಳನ್ನೂ ಸೇರಿಸಿಕೊಂಡು ಮುನ್ನಡೆಯುತ್ತಾರೆ. ಅದರಲ್ಲೂ ಆ ವೈವಾಹಿಕ ಬದುಕು ಒಂದೆರಡು, ಮೂರು ಮೊಗ್ಗುಗಳನ್ನು ನೀಡಿದರಂತೂ ಅವರ ಲಾಲನೆ ಪಾಲನೆಯಲ್ಲೂ, ತಮಗಾಗಿ ಅಲ್ಲದಿದ್ದರೂ ತಮ್ಮ ಮಕ್ಕಳಿ ಗಾಗಿಯಾದರೂ ಸಂಬಂಧವನ್ನೂ ಖಾಯಂ ಆಗಿ ಇರಿಸಲು ಪಣ ತೊಡುತ್ತಾರೆ.      

ಅಲ್-ಗೋರ್ ಅವರದು ವಿಶಿಷ್ಟ ವ್ಯಕ್ತಿತ್ವ. ಅಲ್-ಗೋರ್ ಅವರಿಗೆ ಹಿನ್ನಡೆ ಮತ್ತು ಪೆಟ್ಟುಗಳು ಹೊಸತಲ್ಲ. ಇಂಥ ಮತ್ತೊಂದು ಮರ್ಮಾಘಾತ ಅವರಿಗೆ ರಾಜಕೀಯ ಜೀವನದಲ್ಲಿ ಸಿಕ್ಕಿತ್ತು. ೨೦೦೧, ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ. ಜಾರ್ಜ್ ಬುಶ್ ಎದುರಿಗೆ ಸೆಣಸಲು ಡೆಮೊಕ್ರಾಟಿಕ್ ಪಕ್ಷ ಅಲ್-ಗೋರ್ ಅವರನ್ನು ಆರಿಸಿತು. ಪರಸ್ಪರ ಕೆಸರೆರೆಚಾಟ ಜೋರಾಗಿ ನಡೆದು ಅಲ್-ಗೋರ್ ಗೆಲ್ಲಬಹುದು ಎಂದು ಅಮೇರಿಕಾ ಮತ್ತು ವಿಶ್ವ ಭಾವಿಸಿತು. ಮತಗಣನೆ ಪೂರ್ತಿಯಾದ ಕೂಡಲೇ ನಾನು ಸೋತೆ, ಅಭಿನಂದನೆಗಳು ಎಂದು ಬುಶ್ ತನ್ನ ಪ್ರತಿಸ್ಪರ್ದಿ ಗೋರ್ ಅವರಿಗೆ ಫೋನಾಯಿಸಿ ಶುಭ ಕೋರುತ್ತಾರೆ. ಆದರೆ ಮಾರನೆ ದಿನ ಎಣಿಕೆಯಲ್ಲಿ ಎಡವತ್ತಾಗಿದ್ದನ್ನು ಅರಿತ ಬುಶ್ ಪ್ಲೇಟ್ ಬದಲಿಸಿ ಮರು ಎಣಿಕೆ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಸಾಂವಿಧಾನಿಕ ಬಿಕ್ಕಟ್ಟು ಅಮೆರಿಕೆಯನ್ನು ಆವರಿಸುತ್ತದೆ ಸುಮಾರು ಆರು ವಾರಗಳ ನಂತರ ಸರ್ವೋಚ್ಚ ನ್ಯಾಯಾಲಯದ ಸಹಾಯದಿಂದ ಬುಶ್ ಗದ್ದುಗೆಗೆ ಏರುತ್ತಾರೆ ತನ್ನ ಕಪಟ ತಂತ್ರ ತೋರಿಸಿ. Bush stole the election ಎಂದು ಹಲವರು ಬೊಬ್ಬೆ ಇಟ್ಟರೂ ಏನೂ ಫಲಿಸುವುದಿಲ್ಲ. ಈ ಆಘಾತದಿಂದ ಚೇತರಿಸಿಕೊಂಡ ಅಲ್-ಗೋರ್ ಗೆ ಸಾಂತ್ವನ ನೀಡಿ ತನ್ನ ಪರವಾಗಿ ಹೋರಾಡುವಂತೆ ಕೋರಿತು ನಿಸರ್ಗ ಅಲ್-ಗೋರ್ ಅವರಲ್ಲಿ.

ಅಲ್-ಗೋರ್ ಅಂತರ್ಜಾಲ ತಂತ್ರಜ್ಞಾನ ಅಮೆರಿಕೆಯ ಮೂಲೆ ಮೂಲೆ ತಲುಪುವಂತೆ ಮಾಡಿದ ವ್ಯಕ್ತಿ. ಹವಾಮಾನ, ನಿಸರ್ಗಕ್ಕಾಗಿ ಹೋರಾಡಿದ ಅಲ್-ಗೋರ್ ನೊಬೆಲ್ ಪ್ರಶಸ್ತಿ ವಿಜೇತರು. ಈ ವೈವಾಹಿಕ ಸಂಕಷ್ಟದಲ್ಲಿ ಸಿಲುಕಿರುವ ಈ ಲವಲವಿಕೆಯ ಜೋಡಿಗೆ ತಾವು ಆರಿಸಿಕೊಂಡ ದಾರಿ ಸುಗಮವಾಗಲೆಂದು ಹಾರೈಸೋಣವೇ?

ಒಬ್ಬ ಒಳ್ಳೆಯ, ಮನಸ್ಸಿಗೆ ಒಪ್ಪುವ ವ್ಯಕ್ತಿಯನ್ನು ನಾವು ಸ್ಮರಿಸಬೇಕಾದರೆ ಅವನು ಸಾಯಬೇಕು, ಅಥವಾ ಗೋರ್ ರೀತಿಯಲ್ಲಿ ಬದುಕಿನಲ್ಲಿ ದೊಡ್ಡ ಏಟನ್ನು ಅನುಭವಿಸಬೇಕು. ಅವರ ವ್ಯಕ್ತಿತ್ವದ ಬಗ್ಗೆ ಅರಿಯಲು ನಮಗೆ ತೋಚಿದ ಸಮಯ ಅವರು ನ್ಯಾಯಾಲಯದ ಮೆಟ್ಟಿಲು ಹತ್ತುವ ಸಮಯ, ತನ್ನ ವೈವಾಹಿಕ ಬದುಕನ್ನು (ವಿವಾಹಗಳು ಸ್ವರ್ಗದಲ್ಲಿ ಏರ್ಪಡುತ್ತವೆ, ಬಾಕಿ ಕಾರ್ಯಗಳು ಕೋರ್ಟ್ ಗಳಲ್ಲಿ ) dissolve  ಮಾಡಲು ನ್ಯಾಮೂರ್ತಿಯನ್ನು ಕೇಳುವ ಸಮಯ. ಸ್ವರ್ಗದಲ್ಲಿ ಶುಭ್ರ, ಶ್ವೇತ ದೇವದೂತರ ಸಮ್ಮುಖದಲ್ಲಿ ಜರುಗುವ ಮದುವೆ ಕಪ್ಪು ಕೋಟುಗಳನ್ನು ತೊಟ್ಟ ವಕೀಲರ ಮಧ್ಯೆ ಪರ್ಯವಸಾನ.   

ದಶಕಗಳ ಹಿಂದೆ ನನ್ನ ಶಾಲಾ ಮೇಷ್ಟರೊಬ್ಬರು ಹೇಳಿದ ಮಾತು. ವಿಚ್ಚೇದನ ಸರ್ವೇ ಸಾಮಾನ್ಯ ಪಾಶ್ಚಾತ್ಯರಲ್ಲಿ. ಒಬ್ಬಾಕೆ ತನ್ನ ಗಂಡನನ್ನು ತೊರೆದು ಇನ್ನೊಬ್ಬ ನನ್ನು ಮದುವೆಯಾಗುತ್ತಾಳೆ. ಆತನೂ ವಿಚ್ಛೇದಿತ. ಇಬ್ಬರಿಗೂ ತಮ್ಮ ಮಾಜಿ ಸಂಗಾತಿಗಳಿಂದ ಮಕ್ಕಳಿರುತ್ತವೆ. ಇವರು ಮದುವೆಯಾದ ನಂತರ ಇವರಿಗೂ ಮಕ್ಕಳಾಗುತ್ತವೆ. ಆಗ ಮಕ್ಕಳು ಜಗಳವಾಡುವಾಗ ಹೆಂಡತಿ ತನ್ನ ಗಂಡನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ ” honey, my children and your children are fighting with “OUR” children” ಅಂತ.