ಯೋಗಾಸನ ಪೈಶಾಚಿಕವಂತೆ

ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.

ಮಾವಿನ ಮರದಲ್ಲಿ ತೆಂಗು

ಈಗಿನ ಕಾಲದ ಹುಡುಗ ರಿಗೆ concentration ಕಡಿಮೆ ಎಂದು ಹೇಳ್ತಾರೆ. ಏನೇ ಹೇಳಿದರೂ ಒಂದೋ, ತಲೆಗೆ ಹೋಗೋದಿಲ್ಲ, ಇಲ್ಲಾ, ಎಲ್ಲಾ ಕೇಳಿ ನನಗೆ ಅರ್ಥವಾಯಿತು ಅಂತ ಗೋಣಾಡಿಸಿ ಮರೆತು ಬಿಡೋದು, ಇದು ಈಗಿನ ಪೀಳಿಗೆಯ ವೈಶಿಷ್ಟ್ಯ. ಕಳೆದ ವಾರ ಹಾನಗಲ್ಲಕ್ಕೆ ಹೋಗುತ್ತಾ ನನ್ನ ಸೋದರ ಮಾವನ ಮಗನಿಗೆ ದಾರಿಯಿಂದ ಫೋನ್ ಮಾಡಿ ಹೊಳೆ (ಭದ್ರಾವತಿ) ಸಾಲಿನಿಂದ (ಮರದಿಂದ ಬಿದ್ದಿದ್ದರೆ) ಒಂದು ಹಕ್ಕಿ ಗೂಡನ್ನು ತೆಗೆದು ಕೊಂಡು ಬರಲು ನಿನ್ನ ಅಣ್ಣನಿಗೆ ಹೇಳು ಎನ್ನುವ ಸಂದೇಶ ನೀಡಿ ಅರ್ಥ ಆಯಿತು ಎಂದು ಖಾತ್ರಿ ಪಡಿಸಿ ಕೊಂಡ ನಂತರ  ಫೋನ್ ಇಟ್ಟೆ. ರಾತ್ರಿ ಮನೆಗೆ ವಾಪಸಾದ ನಂತರ ಹೋಂ ವರ್ಕ್ ಮಾಡುತ್ತಾ ಕೂತವನಿಗೆ ಕೇಳಿದೆ ನನ್ನ ಬೆಳಗ್ಗಿನ ಸಂಭಾಷಣೆಯ ಬಗ್ಗೆ. ಏನೂ ಗೊತ್ತಿಲ್ಲದವನಂತೆ ನಾಟಕ ವಾಡಿದ. ಹತಾಶನಾಗಿ, ಅಲ್ಲಾ ಕಣೋ ನಿನಿಗ್ ನಾನ್ ಫೋನ್ ಮಾಡಿ ಏನ್ ಹೇಳ್ದೆ ಎಂದಾಗ, ಫೋನಾ? ಯಾವಾಗ? ಎಂದು ಇಷ್ಟಗಲ ಬಾಯ್ತೆರೆದ. ನಿನ್ನ ಅಣ್ಣನಿಗೆ ಏನ್ ಮೆಸೇಜ್ ಕೊಡಲು ನಾನ್ ಹೇಳ್ದೆ, ಎಂದು ಸಿಡುಕಿ ಕೇಳಿದಾಗ  ಮೆಸೇಜಾ, ಊಂ, ಹಾಂ… ತಲೆ ಕೆರೆದುಕೊಳ್ಳುತ್ತಾ, ಹಾಂ…. ಈಗ ಜ್ಞಾಪಕ ಬಂತು ಎಂದ. ಸರಿ ಜ್ಞಾಪಕ ಬಂದಿದ್ದು ಏನಂತ ಹೇಳು ನೋಡೋಣ ಅಂದಾಗ, ಅದೇ…. ಅಟ್ಟದ ಮೇಲಿನಿಂದ ಕೊಬ್ಬರಿ ತೆಗೆಯೋದಕ್ಕೆ ಆಲ್ವಾ ನೀವು ಹೇಳಿದ್ದು ಎಂದಾಗ ನನ್ನ ಸಹನೆಯ ಕಟ್ಟೆ ಒಡೆಯದಿದ್ದರೂ ಸಂಭಾಳಿಸಿಕೊಂಡು ಹೇಳಿದೆ, ಅಲ್ಲಾ ಕಣೋ ಪೆದ್ದೆ, ನಾನು ಹೇಳಿದ್ದು ಅಟ್ಟದ ಮೇಲಿಂದ ಕೊಬ್ಬರಿ ಇಳಿಸೋದಕ್ಕಲ್ಲ, ಹೊರಗಿರುವ ಮಾವಿನ ಮರದಲ್ಲಿ ತೆಂಗು ಬಿಟ್ಟಿದೆ ಅದನ್ನು ಕೀಳು ಎಂದು ಹೇಳಿದ್ದು ಎಂದು  ಹಲ್ಲು ಮಸೆಯುತ್ತಾ ಜಾಗ ಬಿಟ್ಟೆ. ಈ ಬೆಳವಣಿಗೆ growing years ನ ಮತ್ತೊಂದು ಪ್ರಾರಬ್ದ ಅಂತ ಬಿಟ್ಹಾಕೋದೋ, ಇಲ್ಲ, ಇದೂ (lack of concentration) ಒಂದು ರೀತಿಯ ರೋಗ ಎಂದು ಚಿಕಿತ್ಸೆ ಕಡೆ ಗಮನ ಹರಿಸೋದೋ ತಿಳಿಯುತ್ತಿಲ್ಲ.

ಶುಂಠಿ, ನೊಬೆಲ್, “ಸಪ್ಲೈ ಮತ್ತು ಡಿಮಾಂಡ್”

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿಸ್ಸಾರಿಡ್ಸ್, ಪ್ರಶಸ್ತಿ ಯನ್ನು ಮೂರು ಪಾಲು ಮಾಡಿಕೊಂಡ ಅರ್ಥಶಾಸ್ತ್ರಜ್ಞರು ತಮ್ಮ ಪ್ರತಿಭೆಯ ಆಧಾರದ ಮೇಲೆ. ಏಕೆ ಸಿಕ್ಕಿತು ಈ ತ್ರಿಮೂರ್ತಿಗಳಿಗೆ ನೊಬೆಲ್? ಪೂರೈಕೆ ಮತ್ತು ಬೇಡಿಕೆ – supply and demand – ಮೇಲಿನ ಅಧ್ಯಯನಕ್ಕೆ ಲಭಿಸಿತು ಇವರುಗಳಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್. ೧೯೭೦ ರ ದಶಕದಲ್ಲಿ ಮುಂದುವರಿದ ರಾಷ್ಟ್ರಗಳಿಗೆ “ತೈಲ ಸಂಕಷ್ಟ” ದ ನಂತರ ಎದುರಾದ ಮತ್ತೊಂದು ಸಮಸ್ಯೆ ನಿರುದ್ಯೋಗ. ನಿರುದ್ಯೋಗ, ಉದ್ಯೋಗದ ಲಭಿಕೆ ಮತ್ತು ವೇತನ, ಈ ಮೂರು ಅಂಶಗಳು ಒಂದಕ್ಕೊಂದು ತಳುಕು ಹಾಕಿಕೊಂಡು ವಿಶ್ವದ ಸರಕಾರಗಳಿಗೆ ಒಂದು ಸವಾಲಾಗಿತ್ತು. ಈ ಸಮಸ್ಯೆ ಹೇಗೆಂದರೆ ಕೆಲಸ ಕೊಡುವ ಧಣಿಗೆ ಕೆಲಸಗಾರರು ಸಿಗುವುದಿಲ್ಲ, ಕೆಲಸಗಾರಿಗೆ ಕೆಲಸ ಕೊಡುವ ಧಣಿ ಸಿಗುವುದಿಲ್ಲ. ಒಂದು ರೀತಿಯ catch 22 ಪರಿಸ್ಥಿತಿ. ಈ ಪರಿಸ್ಥಿತಿಯಿಂದ ಹೇಗೆ ಹೊರಬರಬಹುದು ಎಂದು ತೋರಿಸಿ ಕೊಟ್ಟರು ಈ ತ್ರಿಮೂರ್ತಿ ವಿಧ್ವಾಂಸರುಗಳು. “ಉದ್ಯೋಗಗಳಿದ್ದೂ ನಿರೋದ್ಯೋಗ” ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ನಡೆಸಿದ ಇವರುಗಳ ಅಧ್ಯಯನ ಮತ್ತು ಪರಿಹಾರ ವಿಶ್ವ ಸರಕಾರಗಳಿಗೆ ನೆರವಾಗುತ್ತದಂತೆ.

“ಸಪ್ಲೈ ಮತ್ತು ಡಿಮಾಂಡ್”ಎಂದರೇನು? ಬಹುತೇಕ ಜನರಿಗೆ ತಿಳಿದದ್ದೇ ಇದು, ಆದರೂ ದಿನ ನಿತ್ಯ ನಮಗೆ ಕಾಣ ಸಿಗುವ ಉದಾಹರಣೆಗಳ ಮೂಲಕ ಅರ್ಥೈಸಿ ಕೊಳ್ಳೋಣ ಈ phenomenon ಅನ್ನು. ಮೇಲೆ ಹೇಳಿದ “ಉದ್ಯೋಗಗಳಿದ್ದೂ ನಿರೋದ್ಯೋಗ” ಗೆ ಸಂಬಂಧಿಸಿದ ಅನುಭವವಲ್ಲ ಕೆಳಗಿನದು. ಇದು ೧೯೮೪ ರ ಮಾತು.

ಒಮ್ಮೆ ತರಕಾರಿಗೆಂದು ಭದ್ರಾವತಿಯ ಪುರಸಭೆ ಒಡೆತನದ (ನಿಜವಾದ ಒಡೆಯ ರೈಲ್ವೆ ಅಂತೆ, ಈಗ ಅದನ್ನು ನೆಲಸಮಗೊಳಿಸಿದ್ದಾರೆ ರಸ್ತೆ ಅಗಲೀಕರಣದ ಕಾರಣ ಒಡ್ಡಿ ) ಮಾರುಕಟ್ಟೆಗೆ ಹೋಗಿದ್ದೆ. ಪರಿಚಯದ ಕೇರಳ ಮೂಲದ ಅಂಗಡಿಯವ ಹೇಳಿದ ಹೇ, ಶುಂಠಿ ತಗೊಂಡು ಹೋಗು, ಈ ಶುಂಠಿ ಮಾರಿಯೇ ನಿನ್ನ ಮಾವನಿಗೆ ವರದಕ್ಷಿಣೆ ಕೊಟ್ಟಿದ್ದು ಹೆಣ್ಣಿನ ಕಡೆಯವರು ಎಂದು. ನನಗೆ ಅರ್ಥವಾಗಲಿಲ್ಲ, ಆತ ಬಿಡಿಸಿ ಹೇಳಿದ. ಆ ಸಮಯದಲ್ಲಿ ರಾಜ್ಯದಲ್ಲಿ ಶುಂಠಿಗೆ ಬಂತು ಬರ, ಶುಂಠಿ ಬೆಳೆದು ಗುಡ್ಡ ಹಾಕಿದವನೇ ಶ್ರೀಮಂತ. ಲಾಟರಿ ಹೊಡೆದಂತೆ. ನನ್ನ ಅತ್ತೆಯ ಮನೆಯವರು ಜಮೀನ್ದಾರರು. ಅವರ ಲಕ್ ಖುಲಾಯಿಸಿದ್ದರಿಂದ ಎಲ್ಲಾ ಬಿಟ್ಟು ಅಂಕು ಡೊಂಕಾಗಿ ತರಕಾರಿಯಲ್ಲಿ ಶುದ್ಧ ಕುರೂಪಿಯಾದ ಶುಂಠಿಯನ್ನು ಬೆಳೆದರು ತಮ್ಮ ಹೊಲದ ತುಂಬಾ. ಬಂತು ಒಳ್ಳೆ ಬೆಲೆ, ಮಾರಿದ್ದೇ ಮಾರಿದ್ದು. ಶುಂಠಿ ಇಲ್ಲದ ಮಾರುಕಟ್ಟೆಯಲ್ಲಿ ಶುಂಠಿ ಇಟ್ಟುಕೊಂಡವನೇ “ಶಾಣ”. ಶುಂಠಿ ಬೆಳೆದವ ವಿಜಯದ ನಗೆ ಬೀರಿದ. ಜೇಬು ತುಂಬಿಸಿಕೊಂಡ. ಈಗಲೂ ನೋಡಿ, ಆ ಪಕ್ಷದಿಂದ ಈ ಪಕ್ಷ ಎಂದು ನೆಗೆಯುವ ನಾಚಿಕೆಗೆಟ್ಟ ಶಾಸಕ, ರಾಜಕಾರಣಿಯಂತೆ ನಮ್ಮ ರೈತರೂ ಒಲಾಡುತ್ತಾರೆ, ಒಮ್ಮೆ ಕಬ್ಬು ಎಂದರೆ, ಮತ್ತೊಮ್ಮೆ ಅಡಿಕೆ, ಮಗುದೊಮ್ಮೆ ರೇಶಿಮೆ, ಬಾಳೆ ಹೀಗೇ. ಯಾವುದಕ್ಕೆ ಮಾರುಕಟ್ಟೆಯಲ್ಲಿ ಕ್ಷಾಮವಿರುತ್ತದೋ ಅದನ್ನು ಪೂರೈಸಿದಾಗ ಸಿಗುವ ಲಾಭದ ಮೇಲೆ ಕಣ್ಣಿಟ್ಟು ಬೆಳೆಯುತ್ತಾರೆ ಉತ್ಪನ್ನಗಳನ್ನು.

ಇದು ನಾನು ಅರ್ಥೈಸಿ ಕೊಂಡ supply demand story.

“ಪೆರು” ವಿಗೆ ಈ ವರುಷದ ನೊಬೆಲ್ ಸಾಹಿತ್ಯ ಪ್ರಶಸ್ತಿ



 

ಸಾಹಿತ್ಯದಲ್ಲಿ ಈ ವರ್ಷ ನೊಬೆಲ್ ಗಿಟ್ಟಿಸಿದ ಲ್ಯಾಟಿನ್ ಅಮೇರಿಕೆಯ “ಪೆರು” ದೇಶದ ಮಾರಿಯೋ ವರ್ಗಾಸ್ ಲೌಸ  ಕಾಗದ ಪುಸ್ತಕ ಪ್ರಿಯರು. “ಇ” ಪುಸ್ತಕಗಳು ಮತ್ತು ಇವನ್ನ ಓದಲು ಅನುಕೂಲ ಮಾಡಿಕೊಡುವ ಇಲೆಕ್ಟ್ರೋನಿಕ್ ಗೆಜೀಟ್ ಗಳು ಎಬ್ಬಿಸುತ್ತಿರುವ ಬಿರುಗಾಳಿಗೆ ಶತಮಾನಗಳ ನಮ್ಮ ಮಿತ್ರ “ಬಡಪಾಯಿ ಕಾಗದ” ತೂರಿ ಹೋಗುವುದು ಅವರಿಗೆ ಇಷ್ಟವಲ್ಲ.

ಮಾರಿಯೋ ವರ್ಗಾಸ್ ಅವರ ಪ್ರಥಮ ಪುಸ್ತಕ ೧೯೬೪ ರಲ್ಲಿ ಪ್ರಕಟ. ಬರಹದ ೪೬ ವರುಷಗಳ ಕಾಲದಲ್ಲಿ ವಿಶ್ವದ ಅತ್ಯುನ್ನತ ಪ್ರಶಸ್ತಿಗೆ ಭಾಜನರು ಈ ಲೇಖಕರು. ಶುಭ ಮುಂಜಾನೆ ಎನ್ನುವ ಸಂದೇಶದ ಬೆನ್ನಲ್ಲೇ ತಮಗೆ ನೊಬೆಲ್ ಸಿಕ್ಕಿತು ಎನ್ನುವ ಸುದ್ದಿಯೂ ಬಂದಿತು. ಇವರ ಆಸಕ್ತಿ ಬರೀ ಸಾಹಿತ್ಯ ಕೃಷಿಗೆ ಮಾತ್ರ ಸೀಮಿತವಲ್ಲ, ಅನ್ಯಾಯದ ವಿರುದ್ಧದ ಜನರ ಹೋರಾಟದಲ್ಲೂ ಭಾಗಿಯಾಗಿ (ನಮ್ಮ ಅರುಂಧತಿ ರಾಯ್ ರೀತಿ) ಹಲವು ಸಂಕಷ್ಟಗಳನ್ನು ಅನುಭವಿಸಿದ ಸಾಮಾಜಿಕ ಲೇಖಕ. ತನ್ನ ಹುಟ್ಟೂರಿನಲ್ಲಿ ಆಳುವವರ ದಬ್ಬಾಳಿಕೆ ಅತಿಯಾಗಿ ಅಲ್ಲಿನ ಸೇನಾಧಿಕಾರಿ ಮಾರಿಯೋ ಲೌಸ ಅವರ ಪೌರತ್ವ ಪೆರುವಿನ “ಭೌಗೋಳಿಕ ಆಕಸ್ಮಿಕ” (geographical accident) ಆಗಿದ್ದು ದೇಶದ ಪೌರತ್ವವನ್ನು ರದ್ದು ಗೊಳಿಸ ಬೇಕೆಂದು ಸರಕಾರಕ್ಕೆ ಶಿಫಾರಸ್ಸು ಮಾಡಿದಾಗ ಅಪಾಯ ಮನಗಂಡ ಈ ಲೇಖಕ ಸ್ಪೇನ್ ದೇಶದ ಪೌರತ್ವ ಪಡೆದು ಅದರ ಜೊತೆಗೆ ಪೆರುವಿನ ಪುರತ್ವವನ್ನೂ ಉಳಿಸಿಕೊಂಡರು. ಪ್ರಬಂಧಗಳು, ನಾಟಕ, ಸಾಹಿತ್ಯ ಮತ್ತು ರಾಜಕೀಯ ಹೊರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಈ ಲೇಖಕ ಅಮೆರಿಕೆಯ ಮತ್ತು ಅಇರೋಪ್ಯ ದೇಶಗಳ ವಿಶ್ವ ವಿದ್ಯಾಲಯಗಳಿಗೆ ಅತಿಥಿ ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿಯ ಹಲವು ದೇಶಗಳ ಬಿಡುವಿಲ್ಲದ  ಪರ್ಯಟನದಿಂದ ಬರವಣಿಗೆಗೆ ತೊಡಕಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ  “ವಾಸ್ತವವಾಗಿ ವಿವಿಧ ಭಾಷೆ ಗಳೊಂದಿಗಿನ ತಮ್ಮ ಬದುಕು ತಮ್ಮ ಅರಿವನ್ನು ಹೆಚ್ಚಿಸಿದ್ದು, ಒಂದೇ ಭಾವನೆಯನ್ನು ಹೇಗೆ ವಿವಿಧ ಭಾಷೆಗಳು ವ್ಯಕ್ತಪಡಿಸುತ್ತವೆ ಎನ್ನುವ ಸೂಕ್ಷ್ಮತೆ ಸಹ ತನಗೆ ಕಾಣಲು ಸಿಗುತ್ತದೆ, ಹಾಗೆಯೇ ಮಾತೃ ಭಾಷೆಯೊಂದಿಗಿನ ನನ್ನ ನಂಟು ಇತರೆ ಭಾಷೆ ಗಳೊಂದಿಗಿನ ಒಡನಾಟದಿಂದ ಇನ್ನಷ್ಟು ಶ್ರೀಮಂತ ಗೊಂಡಿದೆ” ಎಂದು ಹೇಳಿದರು. ಸಂದರ್ಶನದ ವೇಳೆ ಹೇಳಿದ ಈ ಮಾತುಗಳು ಗಡಿಬಿಡಿಯ ಅಂತಾರಾಷ್ಟ್ರೀಯ ಬದುಕು ಈ ಲೇಖಕನ ಸಂಸ್ಕಾರವನ್ನು ಹೇಗೆ ಶ್ರೀಮಂತ ಗೊಳಿಸಿತು ಎನ್ನುವ ಸತ್ಯವನ್ನು ನಮಗೆ ತೋರಿಸುತ್ತದೆ.

ಲ್ಯಾಟಿನ್ ಅಮೆರಿಕಾದ ದೇಶಗಳು ಕಿತ್ತು ತಿನ್ನುವ ಬಡತನದೊಂದಿಗೆ ಮಾದಕ ದ್ರವ್ಯಗಳ ಮಾರಾಟ ಮತ್ತು ದಂಧೆಯನ್ನು ನಡೆಸುವ ಭೂಗತ ದೊರೆಗಳ ದಬ್ಬಾಳಿಕೆ ಯಿಂದಲೂ ತತ್ತರಿಸುತ್ತಿದೆ. ಈ ಹಾವಳಿಯನ್ನ ತಡೆಯಲು ಸರಕಾರಗಳು ಕೋಟ್ಯಂತರ ಡಾಲರುಗಳನ್ನು ಇವರ ವಿರುದ್ಧ ದ ಹೋರಾಟಕ್ಕೆ ವ್ಯಯಿಸಿದರೂ ಆ ಹಣ ಲಂಚಕೋರ ಸೇನಾಧಿಕಾರಿಗಳ, ರಾಜಕಾರಣಿಗಳ ಪಾಲಾಗುವುದನ್ನು ಕಂಡ ಈ ಲೇಖಕ ಸರಕಾರದ ಈ ನೀತಿಯನ್ನು ವಿರೋಧಿಸಿ ಹಣವನ್ನ ಶಸ್ತ್ರಗಳನ್ನು ಖರೀದಿಸಲು ವ್ಯಯಿಸದೆ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಭಿಯಾನವನ್ನು ಆರಂಭಿಸಲು ಮತ್ತು ಮಾದಕ ದ್ರವ್ಯವ್ಯಸನಿಗಳ ಚಿಕಿತ್ಸೆಗೆ ಖರ್ಚು ಮಾಡಲು ಕರೆ ನೀಡಿದರು. ಸೇನಾಧಿಕಾರಿಗಳ ಮತ್ತು ರಾಜಕಾರಣಿಗಳ ವಿಷವರ್ತುಲ ಇವರ ಮಾತುಗಳನ್ನು ಕೇಳುವ ಗೋಜಿಗೆ ಹೋಗಲಿಲ್ಲ.

ಲೇಖಕರೂ ಸಹ ಸಾಮಾನ್ಯ ಜನರಂತೆ ಪೌರರಾಗಿದ್ದು ಜನರ ಹೋರಾಟ ಮತ್ತು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ನೈತಿಕ ಹೊಣೆ ಅವರ ಮೇಲೆ ಇರಬೇಕು ಎಂದು ನೊಬೆಲ್ ಪ್ರಶಸ್ತಿ ಪಡೆಯುವ ಮುನ್ನ ನಡೆದ ಚರ್ಚೆಯಲ್ಲಿ ಹೇಳಿದ್ದರು ಲೌಸ. ೧೯೯೦ ರಲ್ಲಿ ಆಲ್ಬರ್ಟೋ ಫುಜಿಮೋರಿ ವಿರುದ್ಧ ಸೋತ ಈ ಲೇಖಕ ಮತ್ತೆ ರಾಜಕೀಯದ ಕಡೆ ತಲೆಹಾಕದೆ ಪೂರ್ಣ ಸಮಯ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸರ್ವಾಧಿಕಾರಿಗಳನ್ನು ಚುನಾವಣೆಯಲ್ಲಿ ಬಗ್ಗು ಬಡಿಯದಿದ್ದರೇನಂತೆ ತಮ್ಮ ಪ್ರಖರ ಬರಹವನ್ನೇ ಅಸ್ತ್ರವನ್ನಾಗಿ ಉಪಯೋಗಿಸಿ ಲೇಖನಿಯೂ ಓಟು ಗಳಷ್ಟೇ ಪರಿಣಾಮಕಾರಿ ಎಂದು ತೋರಿಸಿದರು. “ಪದಗಳೇ ಕೃತ್ಯಗಳು…. ಬರಹದ ಮೂಲಕ ಚರಿತ್ರೆಯನ್ನು ಬದಲಿಸಲು ಸಾಧ್ಯ” ಎಂದು ಬಲವಾಗಿ ನಂಬಿದವರು. ಲ್ಯಾಟಿನ್ ಅಮೆರಿಕಾದಲ್ಲಿ ಎಲ್ಲೇ ಶೋಷಣೆ ಅನ್ಯಾಯ ನಡೆದರೂ ಅಲ್ಲಿಗೆ ಧಾವಿಸುವ ಈ ಲೇಖಕ ತಾವು ಕಂಡಿದ್ದನ್ನು ಬರೆದು ನೀಚ ಕೃತ್ಯಗಳನ್ನು ಬಯಲಿಗೆಳೆಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕ್ರೌರ್ಯ ಸಹ ಇವರ ಲೇಖನಿಯ ಮೊನಚಿಗು ಸಿಕ್ಕು ಸಮಾಜದ ಕಣ್ಣು ತೆರೆಸುವಂತೆ ಮಾಡುತ್ತದೆ ಇವರ ಬರಹಗಳು. ಇಂಥದ್ದೇ ಒಂದು ಘಟನೆ ಮತ್ತೊಂದು “ಡೊಮಿನಿಕನ್ ರೆಪಬ್ಲಿಕ್”. ಅಲ್ಲಿನ ಸರ್ವಾಧಿಕಾರಿ ರಾಫೆಲ್ ಟ್ರೂಜಿಲೋ ೧೯೩೦ ರಿಂದ ೧೯೬೧ ರವರೆಗಿನ ತನ್ನ ಆಳ್ವಿಕೆಯಲ್ಲಿ ತನ್ನ ಮಗಂದಿರೊಂದಿಗೆ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯವನ್ನು ಪ್ರತಿರೋಧವಿಲ್ಲದೆ ನಡೆಸುತ್ತಿದ್ದ. ಎಷ್ಟೋ ಜನ ತಮ್ಮ ಹೆಣ್ಣು ಮಕ್ಕಳನ್ನು ಈ ಸರ್ವಾಧಿಕಾರಿ ಮತ್ತು ಮಗಂದಿ ರಿಗೆ “ಉಡುಗೊರೆ” ಯಾಗಿ ಕೊಡುತ್ತಿದ್ದರಂತೆ ಭಯ ಬಿದ್ದು. (ಉತ್ತರ ಭಾರತದ ಠಾಕೂರ ಜಮೀನ್ದಾರರಿಗೆ ಹೆದರಿ ಬಡ ರೈತರು ಬದುಕಿದಂತೆ).  ರಾಫೆಲೋ ನ ದೌರ್ಜನ್ಯವನ್ನು “the feast of the goat” ಪುಸ್ತಕದಲ್ಲಿ ಸವಿವರವಾಗಿ ವರ್ಣಿಸಿದ್ದಾರೆ ಈ ಲೇಖಕ. ಇದೇ ತೆರನಾದ ಮಹಿಳೆಯರ ಮೇಲಿನ ದೌರ್ಜನ್ಯ ಇರಾಕಿನ ಸದ್ದಾಮ್ ಹುಸೇನರ ಮಕ್ಕಳೂ ಬೀದಿಯಲ್ಲಿ ಕಂಡ ಸುಂದರ ಹೆಣ್ಣುಮಕ್ಕಳನ್ನು ಎಗರಿಸಿಕೊಂಡು ಹೋಗುತ್ತಿದ್ದರು ಎಂದು ಈ ಲೇಖಕರು ಹೇಳಿದರೂ  ( ಅಮೇರಿಕ ನಿಯಂತ್ರಿತ ಮಾಧ್ಯಮಗಳ ಅಪಪ್ರಚಾರವೂ ಆಗಿರಲಿಕ್ಕೆ ಸಾಕು ) “ಕ್ರೌರ್ಯ ಯಾವುದೇ ಸರ್ವಾಧಿಕಾರಿಗಳ ಆಡಳಿತದಲ್ಲೂ ಸಮನಾಗಿರುತ್ತದೆ” ಎನ್ನುವ ಅಭಿಪ್ರಾಯ “ಮಾರಿಯೋ ವರ್ಗಾಸ್ ಲೌಸ” ಅವರದು. ಕೊನೆಯದಾಗಿ ಸಾಹಿತ್ಯದ ಬಗ್ಗೆ ವರ್ಗಾಸ್ ಅವರ, ವಿಶೇಷವಾಗಿ ನಮಗೆ ಅನ್ವಯವಾಗುವ,   ಮುತ್ತಿನಂಥ ಮಾತುಗಳು…

“I think that literature has the important effect of creating free, independent, critical citizens who cannot be manipulated.”

 

 

ಜೋಕೆ, ಅಂಡು ಕಂಡಲ್ಲಿ ಗುಂಡು

ಕಿತಾಪತಿ ಜಾಸ್ತಿ ಆದಾಗ ಕಿಡಿಗೇಡಿಗಳ ವಿರುದ್ಧ  ಪೊಲೀಸರು ಕಂಡಲ್ಲಿ ಗುಂಡು ಪ್ರಯೋಗಿಸುವುದುಂಟು. ಅಮೆರಿಕೆಯ ನಗರವೊಂದರಲ್ಲಿ ಬೇರೆಯದೇ ಆದ ಘಟನೆ. ಇಲ್ಲಿ ಅಂಡಿಗೆ ಗುಂಡು. ಅಂಡುಗಳ ಪ್ರದರ್ಶನದಿಂದ ರೋಸಿ ಹೋದ ನನಗೆ ಈ ರೋಚಕ ಸುದ್ದಿ ಓದಿ ಒಂದು ರೀತಿಯ ಆನಂದ. ಗುಂಡು ಗಳನ್ನು ಹಾರಿಸಿ ತನ್ನ ಹತಾಶೆ ಹೊರ ಹಾಕಿದ “ಕೆನ್ನೆತ್ ಬಾಂಡ್ಸ್” ಕೊನೆಗೂ ಆದ ಜೇಮ್ಸ್ ಬಾಂಡ್. ಅಂಡುಗಳ ವಿರುದ್ಧ ತನ್ನದೇ ಆದ ಶೈಲಿಯಲ್ಲಿ ಸಮರ ಸಾರಿದ. ಗುಂಡೇಟು ತಿಂದ ಬಡಪಾಯಿ ಹುಡುಗರು ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ. ೧೬, ೧೭ ರ ಪ್ರಾಯದ ಹುಡಗರೊಂದಿಗೆ ತಮ್ಮ ಪ್ಯಾಂಟ್ ಸರಿಯಾಗಿ ತೊಟ್ಟು ಕೊಳ್ಳಲು ವಿನತಿಸಿದ ೪೫ ರ ಪ್ರಾಯದ  ಬಾಂಡ್ಸ್. ಮಾಗಿದ ಹದಿಹರೆಯ, ಅದರ ಮೇಲೆ ಮೊಂಡು ಕಿವುಡು ಬೇರೆ. ಹುಡಗರು ಸೊಪ್ಪು ಹಾಕಲಿಲ್ಲ. ಸಿಟ್ಟಿಗೆದ್ದ ಬಾಂಡ್ಸ್ ತನ್ನ ಜೇಬಿನಲ್ಲಿದ್ದ ಆಟೋ ಮ್ಯಾಟಿಕ್ ಗನ್ ಹೊರತೆಗೆದು ನೆಟ್ಟೆ ಬಿಟ್ಟ ಗುರಿಯ, ಚಡ್ಡಿಯೊಳಗಿಂದ ಇಣುಕುತ್ತಿದ್ದ ಗಿರಿಗಳ ಮೇಲೆ. ಎದ್ನೆಪೋ, ಸತ್ನೆಪೋ ಎನ್ನುತ್ತಾ ಹುಡುಗರು ಮೇಲೇರಿಸಿಕೊಳ್ಳಲಾರದ ಪ್ಯಾಂಟು ಗಳನ್ನು ಮೇಲೇರಿಸಿಕೊಳ್ಳಲು ಹೆಣಗುತ್ತಾ. ಬಾಂಡ್ಸ್ ಮತ್ತಷ್ಟು ಗುಂಡುಗಳನ್ನು ಹಾರಿಸಿದ. ನಮಗೆ ಬಾಂಡ್ಸ್ ನ ಈ ಕೃತ್ಯ ಸ್ವಲ್ಪ ಅತಿಯಾಗೇ ತೋರಿದರೂ ಕೆಲವೊಮ್ಮೆ ಅಸಹನೆ ಮೇಲುಗೈ ಸಾಧಿಸುತ್ತದೆ ಅಸಹ್ಯ ಹುಟ್ಟುವ ಫ್ಯಾಶನ್ ಅಂಡನ್ನು ತೋರಿಸುವ ಮಟ್ಟಕ್ಕಿಳಿದಾಗ.  ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಲೆಂದೇ ಈ ಹುಡುಗರು ತೊಡುತ್ತಾರೋ ಏನೋ ಪ್ಯಾಂಟುಗಳನ್ನು. precarious ಆಗಿ ಹಿಂಬದಿಯಿಂದ ನೇತಾಡುವ ಪ್ಯಾಂಟು ಯಾವುದೇ ಕ್ಷಣದಲ್ಲೂ , ನಿಮಿಷದಲ್ಲೂ ಧರೆಗೆ ಶರಣಾಗುವುದು ಎಂದು ತೋರುತ್ತದೆ ನೋಡುಗರ ಕಣ್ಣುಗಳಿಗೆ.      

ನನ್ನ ತಂಗಿಯರ ಇಬ್ಬರು ಗಂಡು ಮಕ್ಕಳು ಮತ್ತು ಸೋದರ ಮಾವನ ಮಗನೊಬ್ಬ ಈ ರೀತಿಯ ಅಂಡುಗಳ ಪ್ರದರ್ಶನಕ್ಕೆ ಶರಣಾದ ಯುವ ಸಮೂಹ. ಯಾಕ್ರೋ ಈ ರೀತಿಯ ಹೊಲಸು, ಕಳಪೆ ಫ್ಯಾಶನ್ ಗೆ ಮಾರು ಹೋಗುತ್ತೀರಾ ಎಂದು ಸಿಡುಕಿದಾಗ ಬಹಳ ಕಷ್ಟ ಪಟ್ಟು ಮೇಲೆ ಎಳೆಯಲು ವ್ಯರ್ಥ ಪ್ರಯತ್ನ ನಡೆಸುತ್ತಾರೆ. ಪರಿಚಯಸ್ಥರೊಬ್ಬರು ಹೇಳಿದರು, ಬೈದಾಗ ಪ್ಯಾಂಟ್ ಮೇಲೆರಿಸುವಂತೆ ಅವರು ನಾಟಕ ಮಾತ್ರ ಮಾಡೋದು, ತುದಿಗಾಲಿನಲ್ಲಿ ನಿಂತು ಪ್ಯಾಂಟ್ ಏರಿಸುವಂತೆ ನಮಗೆ ತೋರುತ್ತದೆಯೇ ಹೊರತು ಮೇಲೆ ಏರಿದ್ದು ಅವರ ತುದಿಗಾಲು ಮಾತ್ರ, ಪ್ಯಾಂಟ್ ಅಲ್ಲ ಎಂದು ಉರಿಯುತ್ತಾ ನುಡಿದರು. 

ಹೆಣ್ಣು ಮೈ ತೋರಿಸಿ ಕಾರಿನ ಟಯರು ಗಳನ್ನೂ, ಪುರುಷರ ಒಳ ಉಡುಪುಗಳನ್ನೂ ಪ್ರೊಮೋಟ್ ಮಾಡಲು ತಯಾರಿರುವಾಗ, ಅದನ್ನು ಮೆಚ್ಚಿ ಚಪ್ಪಾಳೆ ತಟ್ಟುವ ಸಮೂಹವೂ ಇರುವಾಗ ನಮ್ಮ ಹಿಂಬದಿಯ ಪ್ರದರ್ಶನದಿಂದ ಆಗುವ ನಷ್ಟವಾದರೂ ಏನು ಎಂದು ಇವರಿಗೆ ಅನ್ನಿಸಿರಲಿಕ್ಕೂ  ಸಾಕು.    

ನಾನು ಫ್ಯಾಶನ್ ವಿರೋಧಿಯಲ್ಲ. ಆದರೆ ಎಲ್ಲಕ್ಕೂ ಒಂದು ಮಿತಿ ಇದ್ದೇ ಇರುತ್ತದೆ. . ಒಂದು ಕಡೆ ಹದಿಹರೆಯದ ಹುಡುಗರ ಕಿರಿಕ್ ಅನ್ನಿಸುವ “ಪಿರ್ರೆ” ಗಳ ಪ್ರದರ್ಶನ, ಮತ್ತೊಂದೆಡೆ “ಚಿಯರ್ ಗರ್ಲ್ಸ್” ಗಳ ಗರಿಷ್ಟ ಅಂಗ ಸೌಷ್ಠವ ಗಳ ಅರೆನಗ್ನ ಪ್ರದರ್ಶನ. ಇವೆರಡರ ಮತ್ತು ಇಂಥವೇ unsolicited ಮೈಮಾಂಸ ತೋರಿಸುವ ಫ್ಯಾಶನ್ ಕಾರಣ ಉಲ್ಲಾಸೀ ಅಥವಾ ದಾಂಪತ್ಯ ಬದುಕಿಗೆ ಬೇಕಾದ ಶೃಂಗಾರ ಭಾವನೆ ಎಲ್ಲಿ ಮಾಯಾವಾಗಿ ಬಿಡುತ್ತೋ ಅನ್ನೋ ಚಿಂತೆ ನಮ್ಮನ್ನು ಕಾಡಿದರೆ ಆ ಚಿಂತೆ well founded.

ಅಡಗಿ ಕೂತಿದ್ದ ಭಾಷೆ

Ethnologue ಎನ್ನುವ ಭಾಷೆಗಳ ಅಧ್ಯಯನಕ್ಕಾಗೇ ಇರುವ ಪತ್ರಿಕೆ ಪ್ರಕಾರ ಇದುವರೆಗೂ ನಮಗೆ ಗೊತ್ತಿರುವ ವಿಶ್ವದ ಭಾಷೆಗಳು ೬೯೦೯. ಈಗ ಭಾರತದಿಂದಲೇ ಮತ್ತೊಂದು ಭಾಷೆಯ ಪ್ರವೇಶವಾಗಿದೆ ಅರುಣಾಚಲ ಪ್ರದೇಶದಿಂದ. National Geographic’s Enduring Voices ನವರು ನಡೆಸಿದ ಅಧ್ಯಯನದಿಂದ ಈ ರೋಚಕ ಸಂಗತಿ ತಿಳಿದು ಬಂತು. “ಕೋರೋ” ಎಂದು ಕರೆಯಲ್ಪಡುವ ಈ ಭಾಷೆಯನ್ನು ಕೇವಲ ೮೦೦ ರಿಂದ ೧೨೦೦ ಜನ ಮಾತನ್ನಾಡುತ್ತಾರಂತೆ. ಇಂಥದ್ದೇ ಮತ್ತೊಂದು ಅಪರೂಪದ “ಬೊ” ಎನ್ನುವ ಅಂಡಮಾನ್ ದ್ವೀಪದ ಭಾಷೆ ಆ ಭಾಷೆಯನ್ನಾಡುವ  ಕೊನೆಯ ವ್ಯಕ್ತಿ ಕಳೆದ ವರ್ಷ ಸಾಯುವುದರೊಂದಿಗೆ ಅವನೊಂದಿಗೇ ಸ್ವರ್ಗ ಸೇರಿಕೊಂಡಿತು. ಧಾರ್ಮಿಕವಾಗಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತವೂ ಅದೇ ದಾರಿ ಹಿಡಿಯಬಹುದು ಎನ್ನುವ ಆತಂಕವಿತ್ತು ಮೊದಲು. 

ಕೋರೋ ಭಾಷೆ ಆಡುವ ಯುವಜನರು ಕ್ರಮೇಣ ಹಿಂದಿ ಮತ್ತು ಆಂಗ್ಲ ಭಾಷೆಗಳ ಕಡೆ ಒಲವನ್ನು ತೋರಿಸಲು ತೊಡಗಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅದೂ ಸಹ  “ಬೊ” ಭಾಷೆಯ ದಾರಿ ಹಿಡಿದರೆ ಅಚ್ಚರಿ ಪಡಬೇಕಿಲ್ಲ. ಮೇಲೆ ಹೇಳಿದ ಭಾಷೆ ಯೊಂದಿಗೆ ಅರುಣಾಚಲ ಪ್ರದೇಶದಲ್ಲಿ ಸುಮಾರು ೧೨೦ ಭಾಷೆಗಳಿವೆಯಂತೆ. “ಕೋರೋ” ಭಾಷೆ “ಅಕಾ” ಎನ್ನುವ ಮತ್ತೊಂದು ಅರುಣಾಚಲದ ಭಾಷೆಯ ರೂಪವೆಂದೇ ಮೊದಲಿಗೆ ಊಹಿಸಲಾಗಿತ್ತು. ಏಕೆಂದರೆ ಕೋರೋ ಮತ್ತು  ಭಾಷೆಯನ್ನಾಡುವ ಜನ ವೇಷ ಭೂಷಣ ಮತ್ತು ಅಡುಗೆ ಮುಂತಾದುವುಗಳಲ್ಲಿ ಒಂದೇ ರೀತಿಯ ಆಚರಣೆಗಳನ್ನು ಹೊಂದಿದ್ದರು ಮತ್ತು ಭಾಷೆಗಳು ಬೇರೆ ಬೇರೆಯದಾದರೂ ಅವರೊಳಗೆ (ಭಾಷಾಂತರ) ವಿವಾಹಗಳು ಏರ್ಪಡುವುದೂ ಉಂಟು. ಪ್ರೇಮಿಸಲು ಭಾಷೆಯ ಅವಶ್ಯಕತೆ ಅಲ್ಲ ಇರೋದು ಎನ್ನುವುದಕ್ಕೆ “ಕೋರೋ” ಮತ್ತು “ಬೊ” ಭಾಷಿಕರೇ ಸಾಕ್ಷಿ ನಿಲ್ಲುವರು, ಅಲ್ಲವೇ?  ಭಾಷೆಗಳು ಎಷ್ಟೊಂದು ಸ್ವಾರಸ್ಯವೆಂದರೆ ದ್ರಾವಿಡ ಭಾಷೆಗಳು ಭಾರತದಲ್ಲಿ ಮಾತ್ರ ಎಂದು ಅರಿತಿದ್ದ ನಮಗೆ ಆಫ್ಘಾನಿಸ್ತಾನದ ಪ್ರಾಂತ್ಯವೊಂದರಲ್ಲಿ ಬ್ರಾಹೂಯಿ ಎನ್ನುವ ಭಾಷೆ ದ್ರಾವಿಡ ಕುಟುಂಬಕ್ಕೆ ಸೇರಿದ್ದು ಎಂದು ತಿಳಿದಾಗ ವಿಶ್ವ ಭಾವನಾತ್ಮಕವಾಗಿ ನಿಜಕ್ಕೂ ಕುಬ್ಜ ಎಂದು ತೋರಿತು.

೬೯೦೯ ಭಾಷೆಗಳಲ್ಲಿ ಸುಮಾರು ಅರ್ಧದಷ್ಟು ಸಂಖ್ಯೆಯ ಭಾಷೆಗಳು ಕೊನೆ ಯುಸಿರೆಳೆಯುತ್ತಿವೆ ಎನ್ನುವ ಆಘಾತಕಾರಿ ಸತ್ಯವನ್ನೂ National Geographic’s Enduring Voices ಸಂಸ್ಥೆ ಹೊರಗೆಡಹಿದೆ. ಕೋರೋ ಭಾಷೆ ಲಿಪಿಯಿಲ್ಲದ ಭಾಷೆ, ಕೊಂಕಣಿ ಮತ್ತು ತುಳು ರೀತಿ.   

ಸ್ವಾರಸ್ಯ(?) ವೆಂದರೆ ಈಶಾನ್ಯ ಭಾರತದ ಅರುಣಾಚಲ ಪ್ರದೇಶಕ್ಕೆ  ಹೋಗಿ ಆ ಹೊಸ ಭಾಷೆಯ ಸೊಗಡನ್ನು ಕೇಳಿ ನೋಡಿ ಆನಂದಿಸೋಣ ಎಂದರೆ ಅಲ್ಲಿಗೆ ಹೋಗಲು “ವಿಶೇಷ ಅನುಮತಿ” permit ಬೇಕು. ನಾವೆಲ್ಲಾ ಟೀಕಿಸಲು, ದೇಶ ವಿರೋಧಿಗಳ ರಾಜ್ಯ ಎಂದು ಹಳಿಯುವ ಕಾಶ್ಮೀರಕ್ಕೆ ಹೋಗಲು ನಮಗೆ ಯಾವುದೇ ಪರವಾನಗಿ ಬೇಡ, ಕಾಶ್ಮೀರಿಗಳಂತೆಯೇ ಭಾರತೀಯರಾದರೆ ಸಾಕು. ಪರವಾನಗಿ ಪಡೆಯಬೇಕಾದ ಮತ್ತೆರಡು ರಾಜ್ಯಗಳೆಂದರೆ “ಮಿಜೋರಾಂ” ಮತ್ತು “ನಾಗಾಲ್ಯಾಂಡ್”.

ಭಾರತದ ವಿಜಯ

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ ಆರಾಧಿಸುವ ಪರಮಾತ್ಮನಿಗೆ  ಮಂದಿರವೋ ಮಸೀದಿಯೋ ಎನ್ನುವ ತಕಾರಾರಿಗೆ ಸಿಕ್ಕಿತು ಮುಕ್ತಿ. ಅದೂ ಸಂಕೀರ್ಣಮಯ ಮುಕ್ತಿ. ಸಂಕೀರ್ಣ ಸಮಸ್ಯೆಗೊಂದು ಅಷ್ಟೇ ಸಂಕೀರ್ಣವಾದ ಪರಿಹಾರ. ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳು ತಮ್ಮ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “

ವಸುಧೈವ ಕುಟುಂಬಕಂ” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ. ಬದುಕು, ಬದುಕಲು ಬಿಡು (ಜಿಯೋ ಔರ್ ಜೀನೇದೋ) ಎನ್ನುವ ಸಮೀಕರಣಕ್ಕೆ ಒಲ್ಲೆ ಎಂದು ಪಟ್ಟು ಹಿಡಿದ ವಿವಾದ. ಮೂರು ನ್ಯಾಯಾಧೀಶರುಗಳ ಪೀಠ ಕೊನೆಗೂ ಕೊಟ್ಟಿತು ತೀರ್ಪು, ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು. ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಸದ್ದಿಲ್ಲದೇ ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.

ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು ಸರಕಾರದ ಕಟ್ಟುನಿಟ್ಟಾದ ನಿರ್ದೇಶನದ ನಡುವೆಯೂ “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಹೊಟ್ಟೆ ಹೊರೆದು ಕೊಳ್ಳುವವರಿಗೆ ಯಾವ ಸಂದಿಗ್ಧ ಪರಿಸ್ಥಿತಿಯೂ ವಿಜಯೋಲ್ಲಸವೇ. ಇಂದು ಬೆಳಗ್ಗಿನ ಹಲವು ಪತ್ರಿಕೆಗಳನ್ನು ನೋಡಿದ ನನಗೆ ಅನ್ನಿಸಿದ್ದು ಈಗಲೂ ಮಾಧ್ಯಮಕ್ಕೆ ಭಾರತೀಯರ ನಡುವೆ ಕಂದಕ ತೊಡುವುದೇ ಇವರ ಕಾಯಕ ಎಂದು. ಕರಾವಳಿಯ ಗುಡ್ಡದ ಮೇಲೊಂದರಿಂದ  ಪ್ರಕಾಶಿತವಾಗುವ ಪತ್ರಿಕೆಯಾಗಲಿ, ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಘೋಷಣೆ ಹೊತ್ತ ಪತ್ರಿಕೆಯಾಗಲಿ ತಮ್ಮ screaming headlines ಮೂಲಕ ಒಂದು ಸಮಾಜಕ್ಕೆ ಸಂದ ವಿಜಯವೆಂದೇ ಪ್ರತಿಬಿಂಬಿಸಿದವು. ಈ ತೆರನಾದ, ಉದ್ರೇಕಿಸುವ ಪತ್ರಿಕೆಗಳ ತಲೆಬರಹಗಳನ್ನು ನಿರ್ಲಕ್ಷಿಸಿ ನ್ಯಾಯಾಲಯದ  ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.

ದೇಶದ ಜನಸಂಖ್ಯೆಯ ಶೇಕಡಾ ೭೭ ಭಾಗ ಇಪ್ಪತ್ತಕ್ಕೂ ಕಡಿಮೆ ರೂಪಾಯಿಯ ಆದಾಯದ ಮೇಲೆ ಕಳೆಯುತ್ತಾರಂತೆ. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುವವನಿಗೆ ತನ್ನ ಹಸಿದ ಹೊಟ್ಟೆಗೆ ಊಟ ಯಾವ ಕಡೆಯಿಂದ ಬರಬಹುದು ಎನ್ನುವ ಕಾತುರ, ನಿರೀಕ್ಷೆ.  ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಅಸಮಾನತೆ, ಹಸಿವು, ಲಂಚ, ಕೊಲೆ ಸುಲಿಗೆ ಬಗ್ಗೆ ಮೇಲಿನ ಸಮಸ್ಯೆಗಳಿಗೆ ತೋರಿಸಿದ ಕಾಳಜಿ, ಕಾತುರ ತೋರಿದ್ದಿದ್ದರೆ ಪಕ್ಕದ ಚೀನಾ ಅಥವಾ ಮಲೇಷ್ಯ ದಂಥ ದೇಶಗಳ ಪ್ರಗತಿ ಕಂಡು ಕರುಬುವ ಅವಶ್ಯಕತೆ ಇರಲಿಲ್ಲ. ಏನೇ ಆಗಲಿ ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್). ಈ ತೀರ್ಪು ದೇಶಕ್ಕೆ ಅವಶ್ಯ ಬೇಕಾದ ಶಾಂತಿ ನೆಮ್ಮದಿ ಕೊಡಿಸುವುದೋ ಎಂದು ನ್ಯಾಯ ಮೂರ್ತಿಗಳು ವಿಧಿಸಿದ ಮೂರು ತಿಂಗಳುಗಳ status quo ಉತ್ತರ ನೀಡಬಹುದು.            

ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕುತೂಹಲದಿಂದ ನೋಡುತ್ತಾ ಕೂತ ನಮಗೆ ಕಿಟಕಿಯ ಮೂಲಕ ಕಾಣಲು ಸಿಕ್ಕಿದ್ದು, ನನ್ನ ಎರದುಉವರೆ ವರ್ಷದ ಪುಟ್ಟ ಪೋರಿ ಕಾಲುದ್ದ ಮಾಡಿಕೊಂಡು ನನ್ನ ಮೇಜಿನ ಮೇಲಿನಿಂದ ಎಗರಿಸಿದ ಪುಟ್ಟ ಭಾರತದ ಧ್ವಜದಿಂದ ತನ್ನ ಮುಖಕ್ಕೆ ತಂಗಾಳಿಯನ್ನು ಬೀಸಿಕೊಳ್ಳುತ್ತಾ ಮಂದಿರ ಮಸೀದಿ ವಿವಾದ ನನಗೆ ನಗಣ್ಯ ಎನ್ನುವ ಥರ ಕೂತಿದ್ದಳು.

ಇಂದು ಬೆಳಿಗ್ಗೆ ನನ್ನ mobile ಗೆ ಬಂದ ಸಂದೇಶ; who are we Hindu or Muslim? When there is “Ali” in “Diwali” and “Ram” in “Ramadan” cant we help India to be united?

ಮುಸ್ಲಿಮರಲ್ಲಿ ಕಾಣಲು ಸಿಕ್ಕಿದ ಈ ಮೇಲಿನ ಉದಾತ್ತ, ಸಾಮರಸ್ಯದ ಭಾವನೆ ಸರ್ವರಲ್ಲೂ ಕಾಣುವಂತಾಗಲಿ ಎಂದು ಆಶಿಸುತ್ತಾ..