ರಾಜಧಾನಿಯಲ್ಲಿ ನಡೆದ ಅತ್ಯಾಚಾರಕ್ಕೆ ಕಾರಣ ಯಾರು?

rape womenundersiegeprojectdotorg

ನವದೆಹಲಿಯಲ್ಲಿ ನಡೆದ ಅಮಾನುಷ ಅತ್ಯಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ರೀತಿಯಲ್ಲಿ ಪ್ರತಿಭಟನೆಗಳು ನಡೆದವು, ಮಹಿಳೆಯರು ಮಾನವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾದುದಕ್ಕೆ ನ್ಯಾಯಾಲಯಗಳನ್ನೂ, ರಾಜಕಾರಣಿ, ಪೊಲೀಸರನ್ನು ನೇರವಾಗಿ ದೂರಿದ ಜನ ಅತ್ಯಾಚಾರಿಗಳಿಗೆ ಗಲ್ಲಿನ ಶಿಕ್ಷೆ ಕೊಡಲು ಆಗ್ರಹಿಸಿದರು. ಕಾಮಪಿಪಾಸು ಪಶುಗಳ ಕೈಗೆ ಸಿಕ್ಕು ಜರ್ಜರಿತಳಾದ ಯುವತಿ ಸಾವಿನೊಂದಿಗೆ ವ್ಯರ್ಥವಾಗಿ ಸೆಣಸಿ ಕೊನೆಯುಸಿರೆಳೆದಳು.

ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಲೇಖನ (why Indian men rape – Anand Soondas) ಓದಲು ಸಿಕ್ಕಿತು. ‘ಭಾರತೀಯ ಗಂಡು ಅತ್ಯಾಚಾರವನ್ನೇಕೆ ಎಸಗುತ್ತಾನೆ?’ ರೈಲಿನಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ಅಸ್ಸಾಮಿನಲ್ಲಿ ನಡೆದ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ದೌರ್ಜನ್ಯದ ಕುರಿತ ನಡೆದ ವಿದ್ಯಾವಂತರ ಚರ್ಚೆಯಲ್ಲಿ ಒಬ್ಬ ಹೆಣ್ಣಿನ ಕುರಿತು ಹಗುರವಾಗಿ ಮಾತನಾಡಿದ ಬಗ್ಗೆ ಬರೆದಿದ್ದರು ಲೇಖಕರು. ಹಲ್ಲೆಯ ಬಗ್ಗೆ ಮಾತನಾಡುತ್ತಾ ವಾಯು ಸೇನೆಯ ಅಧಿಕಾರಿ ಕೇಳಿದ್ದು ಆಕೆಗೆ ರಾತ್ರಿಯಲ್ಲಿ ಹೊರಗೇನು ಕೆಲಸ ಎಂದು. ಆ ಯುವತಿ ಮದ್ಯ ಸೇವಿಸುತ್ತಿದಳು ಮತ್ತು ಕೆಲವು ಪುರುಷರೊಂದಿಗೆ ಆಕೆ ಚೆಲ್ಲಾಟ ವಾಡುತ್ತಿದ್ದಳು, ಅದಕೆ ತಕ್ಕ ಶಾಸ್ತಿ ಯಾಯಿತು ಎಂದು ಆತ ಹೇಳಿದಾಗ ಕ್ರುದ್ಧನಾದ ಸಹ ಪ್ರಯಾಣಿಕ ಅಧಿಕಾರಿಯನ್ನು ಉದ್ದೇಶಿಸಿ. ಮುಂದಿನ ಸಲ ನಿನ್ನ ಸೋದರಿಯ ಪೃಷ್ಠಗಳನ್ನು ಯಾರಾದರೂ ಹಿಂಡಿದಾಗ ನಿನ್ನ ಸೋದರಿ ಎಷ್ಟು ಮರ್ಯಾದಸ್ಥಳು ಎನ್ನುವುದರ ಬಗ್ಗೆ ಮೊದಲು ಪೊಲೀಸರು ತನಿಖೆ ನಡೆಸಲಿ ಎಂದು ಹೇಳಿದನಂತೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳ ಬಗೆಗಿನ ಆ ಅಧಿಕಾರಿಯ ಅಭಿಪ್ರಾಯ ನೋಡಿದಿರಲ್ಲ, ಇದು ವಿದ್ಯಾವಂತರ ಕಥೆ.

ಸಮಾಜವನ್ನು, ದೇಶವನ್ನು ಕಂಗೆಡಿಸುವ ಅತ್ಯಾಚಾರದಂಥ ಘಟನೆಗಳನ್ನು ತಡೆಯಲು ಸಮಾಜ ತನ್ನ ಯುವಜನರ ನೈತಿಕ ಮೌಲ್ಯಗಳು ಪತನಗೊಳ್ಳುತ್ತಿರುವ ಕಡೆ ಗಮನ ನೀಡಬೇಕು. ಗತಿಸಿಹೋದ ವೈಭವದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದರಿಂದಲೋ, ಉತ್ಸವಗಳನ್ನು ಆಚರಸುವುದರಿಂದಲೋ ಸಮಾಜದ ಏಳಿಗೆ ಅಥವಾ ಸುರಕ್ಷತೆ ಅಸಾಧ್ಯ. ನವ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ನಮ್ಮ ದೇಶದಲ್ಲಿ ಅತ್ಯಚಾರದ ಕುರಿತು ಬಹು ದೊಡ್ಡ ಚರ್ಚೆಯನ್ನೇ ಆರಂಭಿಸಿದೆ. “ನಿರ್ಭಯ” ಎನ್ನುವ ಯುವತಿಯ ದಾರುಣ ಅಂತ್ಯದ ನಂತರ ಸಮಾಜ ಎಚ್ಚೆತ್ತು ಕೊಳ್ಳಲು ಆರಂಭಿಸುತ್ತಿದೆ. ಅದರ ನಡುವೆಯೇ ಮಹಿಳೆ ಲಕ್ಷ್ಮಣ ರೇಖೆಯನ್ನು ದಾಟಬಾರದ, ದಾಟಿದರೆ ಆಗುವ ದುಷ್ಪರಿಣಾಮಗಳ ಕುರಿತ ಬೋಧನೆಗಳು (ಮಧ್ಯ ಪ್ರದೇಶದ ಮಂತ್ರಿ ಮಹೋದಯ ಹೇಳಿದ್ದು) ಕೇಳಿ ಬರುತ್ತಿವೆ. ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಮಹಿಳೆಯನ್ನು ಹೊಣೆಗಾರಳನ್ನಾಗಿಸುವ ಮಾತುಗಳೂ ಕೇಳಿ ಬರುತ್ತಿವೆ.

ರಾಜಧಾನಿಯಲ್ಲಿ ಅಮಾಯಕ ಯುವತಿಯ ಮೇಲಿನ ಅತ್ಯಾಚಾರ ನಡೆದ ನಂತರ ಅತ್ಯಾಚಾರಕ್ಕೆ ಕಾರಣವಾಗುವ ಅಂಶಗಳನ್ನು ಚರ್ಚಿಸ ತೊಡಗಿದ ದೇಶಕ್ಕೆ ಮತ್ತೊಂದು ರೀತಿಯ ಆಘಾತ ರಾಜಕಾರಣಿಗಳ ಮಾತಿನಿಂದ. ಹಿಂದುತ್ವ ರಾಷ್ಟ್ರವಾದೀ ಸಂಘಟನೆ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಈ ಚರ್ಚೆಗೆ ಮತ್ತಷ್ಟು ಬಿಸಿ ಹೆಚ್ಚಿಸಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ. ಪತಿ ಮತ್ತು ಪತ್ನಿ ಸಾಮಾಜಿಕ ಕರಾರಿನ ಕಟ್ಟುಪಾಡಿನ ಒಳಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಪತಿ ಹೊರಗೆ ದುಡಿದರೆ ಮಹಿಳೆ ಮನೆಯೊಳಗಿದ್ದು ತನ್ನ ಜವಾಬ್ದಾರಿ ಪೂರೈಸಬೇಕು. ಈ ಜವಾಬ್ದಾರಿಗಳು ಅದಲು ಬದಲಾದಾಗ ಅಥವಾ ಮಹಿಳೆ ತನ್ನ ಜವಾದ್ಬಾರಿ ಮರೆತು ಮನೆಯ ಹೊರಗಿನ ಚಟುವಟಿಕೆಗಳಲ್ಲಿ ನಿರತಳಾದಾಗ ಆಗುವ ಪರಿಣಾಮಗಳನ್ನು ವಿಶ್ಲೇಷಿಸಿ ವಿವಾದದ ಸೃಷ್ಟಿಗೆ ಕಾರಣರಾದರು. ಅತ್ಯಾಚಾರ ನಡೆಯುತ್ತಿರುವುದು ವಿದೇಶೀ ಸಂಸ್ಕಾರ ಪ್ರೇರಿತ ‘ಇಂಡಿಯಾ’ ದಲ್ಲಿ, ಸಂಪ್ರದಾಯಸ್ಥ ‘ಭಾರತ’ದಲ್ಲಿ ಅಲ್ಲ ಎನ್ನುವ ಮಾತಿನೊಂದಿಗೆ ದೇಶದೊಳಗೇ ಮತ್ತೊಂದು ದೇಶವನ್ನು ಕಾಣುವ ವ್ಯರ್ಥ ಪ್ರಯತ್ನ ಸಹ ಮಾಡಿದರು ಭಾಗವತ್. ಮಾಧ್ಯಗಳು, ಸಾಮಾಜಿಕ ವೆಬ್ ತಾಣಗಳ ಮೂಲಕ ನಗರಗಳಲ್ಲಿ ನಡೆಯುತ್ತಿರುವ ಅತ್ಯಾಚಾರದ ವರದಿಯಾದರೂ ಓದಲಿಕ್ಕೆ ಸಿಗುತ್ತಿದೆ. ವರದಿಯಾಗದ, ಬೆಳಕಿಗೆ ಬಾರದ ಕಾರಣಕ್ಕಾಗಿ ಗ್ರಾಮಾಂತರ ಪ್ರದೇಶಗಳು ಸುರಕ್ಷಿತ ಎನ್ನುವ ಭಾವನೆ ಒಂದು ಭ್ರಮೆ ಅಷ್ಟೇ.

ಸಾಹಿತ್ಯ, ಕವಿತೆಗಳಲ್ಲಿ, ಸಿನಿಮಾಗಳಲ್ಲಿ ಮುಕ್ತತೆಯನ್ನು ಬಯಸುವ ನಾವು ನಮ್ಮ ಯುವಜನರ ನಡತೆಗೆ ಏಕೆ ಕಡಿವಾಣ ತೊಡಿಸಬೇಕು? ಕಥೆ ಕಾದಂಬರಿ, ಜಾಹೀರಾತು, ಸಿನೆಮಾಗಳಲ್ಲಿ ಎಗ್ಗಿಲ್ಲದೆ ಲೈಂಗಿಕತೆ ತುರುಕಿ ಮಜಾ ಕಾಣುವ ಜನ ಅತ್ಯಾಚಾರದಂತಹ ಘಟನೆಗಳು ಸಂಭವಿಸಿದಾಗ ಹೈರಾಣಾಗುವುದಾದರೂ ಏಕೆ ಎನ್ನುವುದೇ ಅರ್ಥವಾಗುವುದಿಲ್ಲ. ಎಲ್ಲೇ ಕಣ್ಣಾಡಿಸಿದರೂ ಲೈಗಿಕತೆ, ನಗ್ನತೆಯ ದರ್ಶನ ವಾದಾಗ ಆಗುವ ಅನಾಹುತಕ್ಕೆ ಸಮಾಜ ಹೊಣೆ ಹೊರಬೇಕು. ಅಥವಾ ಮುಕ್ತತೆ, ಕ್ರಿಯಾಶೀಲತೆ ಹೆಸರಿನಲ್ಲಿ ನಗ್ನತೆ, ಅಶ್ಲೀಲತೆ ಸೆಕ್ಸ್ ಅನ್ನು ವೈಭವೀಕರಿಸುವುದಾದರೆ ಅಂಥ ಚಿತ್ರ ಗಳನ್ನು ನೋಡಿದ ನಂತರ ಉಂಟಾಗುವ ಉದ್ದೀಪನಕ್ಕೂ ಒಂದು ಔಟ್ ಲೆಟ್ ಸಮಾಜ ನಿರ್ಮಿಸಬೇಕು. ನಮ್ಮ ಚಿತ್ರಗಳಲ್ಲಿ ಕಾಣ ಸಿಗುವ ನರ್ತನ ವನ್ನಾದರೂ ನೋಡಿ, ವಾತ್ಸಾಯನನ ಎಲ್ಲಾ ಭಂಗಿಗಳೂ ಒಂದೆರಡು ಹಾಡುಗಳಲ್ಲಿ ಕಾಣಲು ಲಭ್ಯ. ಗಂಡಿನ ಒಳ ಉಡುಪಿನಿಂದ ಹಿಡಿದು ಕಾರಿನ ಟೈರ್ ಗಳ ಜಾಹೀರಾತಿಗೂ ಬೇಕು ಹೆಣ್ಣು. ಒಂದು ಕಡೆ ನಗ್ನತೆಯ ನಗ್ನ ಪ್ರದರ್ಶನ ಮತ್ತೊಂದು ಕಡೆ ಹುಡಗರು ಹುಡುಗಿಯರು ದಾರಿ ತಪ್ಪ ಬಾರದು ಎನ್ನುವ ಕಡಿವಾಣ, ಹೆಣ್ಣಿನ ಕನ್ಯತ್ವ ಕಾಪಾಡಿಕೊಳ್ಳಬೇಕಾದ ಕುರಿತು ವಿಪರೀತ ಕಾಳಜಿ. ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾತ್ರ ಕಾಣಲು ಸಮಾಜ ಉತ್ಸುಕತೆ ತೋರಿಸಿದರೆ ನವ ದೆಹಲಿಯಲ್ಲಿ ನಡೆದಂಥ ಅಮಾನುಷ, ದುರದೃಷ್ಟಕರ ಘಟನೆಗಳಿಗೂ ಸಾಕ್ಷಿ ನಿಲ್ಲಬೇಕಾಗುತ್ತದೆ.

ಸಮಾಜ ಗಂಡಿನ ಪ್ರಾಮುಖ್ಯತೆ ಬಗ್ಗೆ ಅತೀವ ಗಮನ ನೀಡುತ್ತಿರುವುದೂ ಸಹ ಮಹಿಳೆಯ ದಾರುಣ ಅವಸ್ಥೆಗೆ ಮತ್ತೊಂದು ಕಾರಣ. ಹುಟ್ಟುವ ಮಗು ಹೆಣ್ಣು ಎಂದು ಖಾತ್ರಿಯಾದ ಕೂಡಲೇ ಭ್ರೂಣ ಹತ್ಯೆ ಮೂಲಕ ಹೆಣ್ಣು ಮಗಳನ್ನು ಕೊಲೆಗೈಯ್ಯಲು ಹೇಸದ ಸಮಾಜದಿಂದ ಒಳ್ಳೆಯತನವನ್ನು ನಿರೀಕ್ಷಿಸುವುದು ಕಷ್ಟಕರವಾದ ಕೆಲಸವೇ. ಇನ್ನು ಭ್ರೂಣಾವಸ್ಥೆಯಿಂದ ಭಡ್ತಿ ಪಡೆದು ಧರಿತ್ರಿ ಮುಟ್ಟಿದ ಕೂಡಲೇ ತನ್ನ ಹುಟ್ಟನ್ನು ಪ್ರಪಂಚಕ್ಕೆ ತಿಳಿಸಲು ತಂದೆ ತಾಯಿಗಳಿಗೂ, ಆ ಶುಭ ವಾರ್ತೆಯನ್ನು ಕೇಳುವ ಜನರಿಗೂ ಒಂದು ತೆರನಾದ ಸಂಕಟ… ಅಯ್ಯೋ, ಹೆಣ್ಣಾ? ಹೆಣ್ಣು ಅಬಲೆ, ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಮುಂತಾದ ಮಾತುಗಳನ್ನು ಕೇಳುತ್ತಾ ಬೆಳೆಯುವ ಗಂಡು ಮಕ್ಕಳಿಗೆ ಹೆಣ್ಣಿನ ಮೇಲೆ ಗೌರವ ತೋರುವುದಾದರೂ ಹೇಗೆ? ಹೆಣ್ಣಿನ ಬುದ್ಧಿ ಮೊಳ ಕಾಲ ಕೆಳಗೆ, ಮುಂತಾದ ಮಾತುಗಳ ಮೂಲಕ ಹೆಣ್ಣಿನ ಅಸ್ತಿತ್ವದ ಕುರಿತು ಕೀಳರಿಮೆ ಬರುವಂಥ ನಡತೆಗಳೂ ಸಹ ಕಾರಣ ಮಹಿಳೆಯ ವಿರುದ್ಧ ನಡೆಯುತ್ತಿರುವ ಹಿಂಸೆ, ಅತ್ಯಾಚಾರ. ಹೆಣ್ಣನ್ನು ದೇವಿ, ‘ಮಾತಾ ಶ್ರೀ’ ಎಂದು ಪೂಜಿಸುವ, ಆದರಿಸುವ ಸಮಾಜವೇ ಸಂದರ್ಭ ಬಂದಾಗ ಮಹಿಳೆ ವಿರುದ್ಧ ಹೇಸಿಗೆ ಹುಟ್ಟಿಸುವ ಕೆಲಸಕ್ಕೂ ಮುಂದಾಗುವುದು ಅರ್ಥವಾಗದ ಒಗಟು. ಮಹಿಳೆಯರ ಮೇಲಿನ ದೌರ್ಜನ್ಯ ಕಂಡು ಬೇಸತ್ತ ಒಬ್ಬ ಮಹಿಳೆ ಹೇಳುವುದು, “ಹೆಣ್ಣು ಮಕ್ಕಳನ್ನು, ಸಂಗೀತ ಕಲಿಯಲಿಕ್ಕೋ, ನೃತ್ಯ ಕಲಿಯಲಿಕ್ಕೋ ಕಳಿಸಬೇಡಿ, ಬದಲಿಗೆ ಕರಾಟೆ, ಜೂಡೋ ಕಲಿಯಲು ಪ್ರೋತ್ಸಾಹಿಸಿ” ಇಂಥ ಮಾತು ಓರ್ವ ಹೆಣ್ಣು ಮಗಳ ಬಾಯಿಂದ ಬರಬೇಕಾದರೆ ಗಂಡಿನ ಕುರಿತ ಆಕೆಯ ಅಪನಂಬಿಕೆ ನಮಗೆ ವೇದ್ಯವಾಗುತ್ತದೆ.

ಬಹುಶಃ ವಿಶ್ವದಲ್ಲೇ ಅತೀ ಹೆಚ್ಚು ಪ್ರಭಾವೀ ಮಹಿಳಾ ರಾಜಕಾರಣಿಗಳು ಇರುವ ದೇಶ ನಮ್ಮದು. ಸರಕಾರವನ್ನು ಮುನ್ನಡೆಸುತ್ತಿರುವ ಮಹಿಳೆಯಿಂದ ಹಿಡಿದು, ವಿರೋಧ ಪಕ್ಷದ ನಾಯಕಿ. ಮುಖ್ಯ ಮಂತ್ರಿ, ಉನ್ನತ ಮಂತ್ರಿ ಪದವಿಗಳನ್ನು ಅಲಂಕರಿಸಿ ಕೂತ ಮಹಿಳೆಯರಿಗೆ ಅವರದೇ ಸಮಸ್ಯೆಗಳ ಅರಿವು ಇಲ್ಲದಿರುವುದು ಆಶ್ಚರ್ಯಕರ. ಇಷ್ಟೊಂದು ಮಹಿಳಾ ರಾಜಕಾರಣಿಗಳು ವಿಜ್ರಂಭಿಸುವ ದೇಶದಲ್ಲೇ ಹೆಣ್ಣಿನ ಪರಿಸ್ಥಿತಿ ಹೀಗಾದರೆ?

ಮಹಿಳೆಯರ ವಿರುದ್ಧ ನಡೆಯುವ ಯಾವುದೇ ಹಿಂಸೆ ಅತ್ಯಚಾರ ಗಳನ್ನು ವ್ಯವಸ್ಥೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಕ ಶಿಕ್ಷೆ ಯನ್ನು ಫಾಸ್ಟ್ ಟ್ರಾಕ್ ಕೋರ್ಟ್ ಗಳ ಮೂಲಕ ಕೊಡ ಮಾಡಿಸಬೇಕು. ಅತ್ಯಾಚಾರವೆಸಗುವ ಗಂಡಿನ ವಯಸ್ಸಿನ ಮಿತಿಯನ್ನು ಹದಿನೆಂಟರಿಂದ ಹದಿನೈದಕ್ಕೆ ಇಳಿಸಬೇಕು. ನವ ದೆಹಲಿಯಲ್ಲಿ ಅತ್ಯಾಚಾರವೆಸಗಿದ ಪುರುಷರ ಪೈಕಿ ಹದಿನೇಳು ವಯಸ್ಸಿನ ಹುಡುಗನ ಪಾತ್ರ ಅತ್ಯಂತ ಕ್ರೂರವಂತೆ. ಚಿಕ್ಕ ವಯಸ್ಸಿನಲ್ಲೇ ಹಡಬೆ ಕೆಲಸಕ್ಕೆ ಕೈ ಹಚ್ಚುತ್ತಿರುವ ಸಮೂಹಕ್ಕೆ ಶಿಕ್ಷೆಗೆ ಅವಶ್ಯವಾದ ಪರಿಮಿತಿಯನ್ನು ಕೆಳಕ್ಕಿಳಿಸಿದಾಗಲೇ ಇತರರಿಗೆ ಎಚ್ಚರಿಕೆಯ ಘಂಟೆ. ಅತ್ಯಾಚಾರಿಗೆ ನೇಣಿನ ಶಿಕ್ಷೆಯನ್ನಲ್ಲದೆ ಬೇರಾವುದೇ ಶಿಕ್ಷೆಗೂ ಒಳಪಡಿಸಬಾರದು. ಏಕೆಂದರೆ, ಮಹಿಳೆಯ ವಿರುದ್ಧ ನಡೆಯುವ ಅತ್ಯಾಚಾರ ಒಂದು ರೀತಿಯ crime against humanity.

pic courtesy: http://www.womenundersiege.org

 

ಈಗ ಮಹಿಳೆ ಗಾಲ್ಫ್ ಆಡಬಹುದು

ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಬಹು ಸುಂದರವಾಗಿ, ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾಳೆ. ಕೆಲವೊಮ್ಮೆ ಎಡರು ತೊಡರುಗಳು ಬಂದರೂ ಅವುಗಳನ್ನ ಸಾಮರ್ಥ್ಯದಿಂದ ಎದುರಿಸಿ ಆ ಎಡರು ತೊಡರುಗಳನ್ನ ‘ಲಾಂಚ್ ಪ್ಯಾಡ್’ ಆಗಿ ಪರಿವರ್ತಿಸಿಕೊಂಡು ತನ್ನ ಗುರಿ ಸಾಧಿಸುತ್ತಿದ್ದಾಳೆ. ಆದರೂ ಅಲ್ಲಿ ಇಲ್ಲಿ ಎಂದು ತಾರತಮ್ಯ ಇಲ್ಲದಿಲ್ಲ. ಉದಾಹರಣೆಗೆ ಸೌದಿ ಅರೇಬಿಯಾದಲ್ಲಿ ಮಹಿಳೆ ವಾಹನ ಚಲಾಯಿಸುವಂತಿಲ್ಲ. ಈ ನಿರ್ಬಂಧ ಸೌದಿ ಗೆ ಮಾತ್ರ ಸೀಮಿತ. ಇತರೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಈ ನಿರ್ಬಂಧನೆ ಇಲ್ಲ. ಸೌದಿಗಳ ಪ್ರಕಾರ ಅವರ ಸಮಾಜ ಇನ್ನೂ ಆ ಮಟ್ಟಕ್ಕೆ ಇವಾಲ್ವ್ ಆಗಿಲ್ಲವಂತೆ. ಅಲ್ಲಿನ ದೊರೆ ಅಬ್ದುಲ್ಲಾ ಈ ವಿಷಯದಲ್ಲಿ ಸಕಾರಾತ್ಮಕ ಮನೋಭಾವ ತೋರಿದರೂ ಸಮಾಜ ತೋರಿಸುತ್ತಿಲ್ಲ ರಿಯಾಯಿತಿಯನ್ನು. ಕಳೆದರಡು ವರ್ಷಗಳಲ್ಲಿ ಸೌದಿ ಮಹಿಳೆ ಕಾರನ್ನು ಚಲಾಯಿಸಿ ವ್ಯವಸ್ಥೆಗೆ ಸೆಡ್ಡು ಹೊಡೆದರೂ ಅದು ಸೆಡ್ಡಿನ ಸದ್ದಿಗೆ ಮಾತ್ರ ಸೀಮಿತಗೊಂಡಿತು. ಇರಲಿ ಕಾಲ ಶೀಘ್ರವೇ ಬರಲಿದೆ. ಇದು ಕಟ್ಟಾ ಸಂಪ್ರದಾಯವಾದಿ ಸೌದಿ ಸಮಾಜದ ಕಥೆಯಾದರೆ ವಿಶ್ವದ ಅತಿ ಮುಂದುವರೆದ, ಮಹಿಳಾ ಸ್ವಾತಂತ್ಯ್ರ್ಯದ ಕಹಳೆ ಮೊಳಗಿಸಿದ ಅಮೇರಿಕಾ ಕಥೆ ಕೇಳಿ.

ಮಾಸ್ಟರ್ಸ್ ಗಾಲ್ಫ್ ಟೂರ್ನಮೆಂಟ್ ನ ತವರೂರಾದ   “ಆಗಸ್ಟ ನ್ಯಾಷನಲ್ ಗಾಲ್ಫ್ ಕ್ಲಬ್” ಗೆ ಮಹಿಳೆಯರಿಗೆ ಸದಸ್ಯತ್ವ ಇಲ್ಲ. ಏಕಿಲ್ಲ, ಅನ್ನೋದು ಗೊತ್ತಿಲ್ಲ. ಈ ವಿಷಯದಲ್ಲಿ ಅವರು ಸೌದಿಗಳ ಥರ ಇನ್ನೂ ಇವಾಲ್ವ್ ಆಗಿಲ್ಲ ಎಂದು ಕಾಣುತ್ತೆ. ಮೊನ್ನೆ ಮೊನ್ನೆಯವರೆಗೂ ಇರಲಿಲ್ಲ. ಎಲ್ಲದಕ್ಕೂ ಸಮಯ ಅನ್ನೋದು ಬರಬೇಕಲ್ಲ.  ಎಂಭತ್ತು ವರ್ಷಗಳ ಇತಿಹಾಸ ಇರೋ ಈ ಗಾಲ್ಫ್ ಕ್ಲಬ್ ಮಹಿಳೆಯರಿಗೆ ಸದಸ್ಯತ್ವ ಕೊಡಲು ನಿರ್ಧರಿಸಿ ಜಾರ್ಜ್ ಬುಶ್ ಸಂಪುಟದಲ್ಲಿದ್ದ ಮಾಜಿ ಕಾರ್ಯದರ್ಶಿ ‘ಕೊಂಡೊಲೀಜಾ ರೈಸ್’, ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ ‘ಡಾರ್ಲಾ ಮೂರ್’ ಇವರೀರ್ವರಿಗೆ ಸದಸ್ಯತ್ವ ನೀಡಲು ತೀರ್ಮಾನಿಸಿತು. ಈ ವಿಷಯದಲ್ಲಿ ಅಲ್ಲಿನ ಅಧ್ಯಕ್ಷ ಒಬಾಮಾ ಸಹ ಆಸಕ್ತಿ ತೋರಿಸಿದ್ದರು. ರಾಷ್ಟ್ರೀಯ ಮಹಿಳಾ ಸಂಘಟನೆಗಳಿಗೆ ಸೇರಿದ ಮಾರ್ಥ ಬರ್ಕ್ ಹಲವು ಸಲ ಪ್ರತಿಭಟನೆ ಸಲ್ಲಿಸಿದರೂ ಜಪ್ಪಯ್ಯ ಎಂದಿರಲಿಲ್ಲ ಈ ಸಂಸ್ಥೆ. ಪ್ರತಿಭಟನೆ ಜೋರಾದ ಸಮಯ ಅಂದಿನ ಅಧ್ಯಕ್ಷ ಜಾನ್ಸನ್ ಹೇಳಿದ್ದು, ಮಹಿಳೆಯರು ನಮ್ಮ ಸಂಸ್ಥೆಯ ಸದಸ್ಯರಾಗುವ ಸಮಯ ಭವಿಷ್ಯದಲ್ಲಿ ಬರಬಹುದು, ಅದರ ಆಗಮನದ ವೇಳಾ ಪಟ್ಟಿ ನಾವು ನಿರ್ಧರಿಸಿದಾಗ ಮಾತ್ರ, ಬಲವಂತದಿಂದಲೋ, ಬಂದೂಕಿನ ತುದಿಯಿಂದ ಅಲ್ಲ ಎಂದು ಗುಡುಗಿದ್ದರು. ಈಗ ಆ ಗುಡುಗು ಭರವಸೆಯ ‘ಮಳೆ’ ಯಾಗಿ ಮಾರ್ಪಟ್ಟಿದೆ ಮಹಿಳೆಯರಿಗೆ.

ಈ ಲೇಖನವನ್ನ ೩೫೦೦೨ ಅಡಿ ಎತ್ತರದಲ್ಲಿ ವಿಮಾನದಲ್ಲಿ ಕೂತು ಕಂಪೋಸ್ ಮಾಡಿದ್ದು. ಜೆಡ್ಡಾ ದಿಂದ ದುಬೈ ಗೆ ಹೋಗುವ ಹಾದಿಯಲ್ಲಿ. ಮೊದಲಿನ ಥರ ಲೇಖನಗಳನ್ನ ಹೆಣೆಯಲಿಕ್ಕೆ ಆಗ್ತಾ ಇಲ್ಲ. ಸಮಯದ ಕೊರತೆ ಮತ್ತು ಸೋಮಾರಿತನದ ಕಾರಣ; deadly duo. ಭೂಮಿಯ ಮೇಲಿದ್ದ lethargy ಕೆಳಕ್ಕೊಗೆದು ಮೋಡಗಳ ಮೇಲೆ ಸವಾರಿ ಮಾಡುತ್ತಾ ಬರೆದೆ ಈ ಲೇಖನವನ್ನು.

ಹಾಕಿರಣ್ಣ, ಈಕೆಗೊಂದು ಸೆಲ್ಯೂಟ್

ಅಂತಾರಾಷ್ಟ್ರೀಯ ಮಹಿಳಾ ದಿನ. ಹೆಣ್ಣುಮಗಳ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ದಿನಗಳ ಆಚರಣೆ ಅರ್ಥಹೀನ ನಾವು ಅದರ ಹಿಂದಿನ ಅರ್ಥ ಹುಡುಕಿ ಮಹಿಳೆಗಾಗಿ ಸಮಾನತೆಯ ಪ್ರಬಂಧ ಸೃಷ್ಟಿಸಲು ಅಸಮರ್ಥರಾದಾಗ. ಆಧುನಿಕ ಯುಗದಲಿ ಮಹಿಳೆ ಬಹಳಷ್ಟನ್ನು ಸಾಧಿಸಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಈಗಲೂ ಆಕೆ ಕಗ್ಗತ್ತಿಲಿನಲ್ಲಿ ತಡಕಾಡುತ್ತಿದ್ದಾಳೆ. ಬಿರುದು ಬಾವಲಿ, ಸಮ್ಮಾನ ಸಂಪತ್ತಿಗಾಗಿ ಅಲ್ಲ, ದೇವರು ಹೆಣ್ಣು ಗಂಡು ಎನ್ನುವ ಬೇಧವಿಲ್ಲದೆ ಕೊಡಮಾಡಿದ ಸ್ವಾತಂತ್ರ್ಯಕ್ಕಾಗಿ.

ಮಹಿಳೆಯ ಹುಟ್ಟು ಈಗಲೂ ಕೆಲವು ಸಮಾಜಗಳಲ್ಲಿ ಅಸಮಾಧಾನ, ಅತೃಪ್ತಿ ತರುತ್ತದೆ. ಗಂಡು ಮಗುವನ್ನ ಹೆರುವುದು ಹೆಣ್ಣಿಗೆ ಪ್ರತಿಷ್ಠೆ ತಂದು ಕೊಡುತ್ತದೆ. ಗಂಡು ಮಗುವಿನ ಜನ್ಮ ಕುಟುಂಬದಲ್ಲಿ, ನೆಂಟರಿಷ್ಟರಲ್ಲಿ ಸಂತಸವನ್ನು ಹರಡುತ್ತದೆ. ಒಂದೆರಡು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ತಾಯಿಗೆ ನಿನ್ನ ಹೊಟ್ಟೆಯಲ್ಲಿ ದೇವರು ಗಂಡು ಮಗುವನ್ನ ಹಾಕಿಲ್ಲವೆ ಎಂದು ಮೂದಲಿಕೆ ಕೇಳಿ ಬರುತ್ತದೆ. ಗಂಡು ಸಂತಾನಕ್ಕೆ ಇರುವ ಬೇಡಿಕೆ ಕಂಡ ವೈದ್ಯಕೀಯ ಸಮೂಹ ಕೂಡಾ ಅಲ್ಟ್ರಾ ಸೌಂಡ್, ಅಬಾರ್ಶನ್ ಮೂಲಕ ಹೆಣ್ಣಿನ ಹುಟ್ಟನ್ನು ಕೊನೆಗೊಳಿಸುವ ನೀಚ ಪ್ರವೃತ್ತಿಗೆ ಸಾಕ್ಷಿ ಯಾಗುತ್ತಿದೆ.  ಗುಜರಾತಿನಲ್ಲಿ ಗಂಡು ಮಕ್ಕಳನ್ನು ಸೃಷ್ಟಿಸುವ ಕ್ಲಿನಿಕ್ ಕಾರ್ಯಾಚರಣೆಯ ಆಘಾತಕಾರಿ ಸುದ್ದಿಯ ಬಗ್ಗೆ ಇತ್ತೀಚೆಗೆ ತಾನೇ ಓದಿದ್ದೇವೆ. ಹೆಣ್ಣು ಮಗುವಿನ ಸಂತಾನ ಇಲ್ಲದಂತೆ ಮಾಡುವ ಇನ್ನೂ ಯಾವ ಯಾವ ತೆರನಾದ ಟ್ರಿಕ್ಕು ಗಳು ಅವಿತು ಕೊಂಡಿವೆಯೋ ಕುಬುದ್ಧಿ ತಲೆಗಳಲ್ಲಿ. ಅರೇಬಿಯದಲ್ಲಿ ಹುಟ್ಟುವ ಮೊದಲ ಮಗು ಹೆಣ್ಣಾದರೆ ಜೀವಂತ ಹೂಳುತ್ತಿದ್ದರಂತೆ. ಹುಟ್ಟಿದ ಹೆಣ್ಣುಮಗುವಿನ ಬಾಯೊಳಗೆ ಬೂಸಾ ಹಾಕಿ ಕೊಲ್ಲುತ್ತಿದ್ದರು ತಮಿಳು ನಾಡಿನಲ್ಲಿ. ಅರೇಬಿಯಾದ ಅನಿಷ್ಟ ಅಮಾನವೀಯ ಪದ್ಧತಿಗೆ ಪ್ರವಾದಿ ಮುಹಮ್ಮದರು ಅಂತ್ಯ ಹಾಡಿದರು. ಯಾವ ತಪ್ಪೂ ಮಾಡದ ಹೆಣ್ಣು ಹಸುಳೆ ಯನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಎಂದು ಸಮಜಾಯಿಷಿ ಕೇಳಲಾಗುವುದು ಎಂದು ದೇವರು ಪವಿತ್ರ ಕುರಾನ್ ನಲ್ಲಿ ಕಟ್ಟೆಚ್ಚರ ನೀಡುತ್ತಾನೆ. ಯಾರು ತಮಗೆ ಹೆಣ್ಣು ಮಕ್ಕಳನ್ನು ತಾರತಮ್ಯ ತೋರಿಸದೆ ಅವರ ಲಾಲನೆ ಪೋಷಣೆ ಮಾಡಿ ಸಂರಕ್ಷಿಸುವರೋ ಅವರು ಮತ್ತು ನಾನು ಸ್ವರ್ಗ ಲೋಕದಲ್ಲಿ ಇಷ್ಟು ಸಮೀಪ ಇರುತ್ತೇವೆ ಎಂದು ಪ್ರವಾದಿಗಳು ತಮ್ಮ ತೋರುಬೆರಳನ್ನು ಮತ್ತು ಮಧ್ಯದ ಬೆರಳನ್ನು ತೋರಿಸಿ ಹೇಳುತ್ತಾರೆ. ಆಸ್ತಿಯಲ್ಲಿ ಹಕ್ಕು, ವಿಚ್ಛೇದನದಲ್ಲಿ ಹಕ್ಕು, ವಿಧವೆಗೆ ಮರು ವಿವಾಹದ ಹಕ್ಕು, ವೇದ ಪಾರಾಯಣದಲ್ಲಿ ಹಕ್ಕು ಹೀಗೆ ಎಲ್ಲ ರೀತಿಯ ಹಕ್ಕುಗಳಿಗೆ ಮಹಿಳೆಯನ್ನು ಅರ್ಹಳನ್ನಾಗಿಸಿದ ಪ್ರವಾದಿಗಳು ಮಹಿಳೆಯನ್ನು ಯಾವ ರೀತಿ ನಡೆಸಿ ಕೊಳ್ಳಬೇಕು ಎಂದು ಜಗತ್ತಿಗೆ ತೋರಿಸಿ  ಒಂದು ಮಹಾ ಪರಂಪರೆಯನ್ನೇ ಹುಟ್ಟು ಹಾಕಿದರು. ದುರದೃಷ್ಟವಶಾತ್ ಈ ಹಕ್ಕುಗಳನ್ನ ಕೊಡ ಮಾಡಲು ಮುಸ್ಲಿಂ ಸಮಾಜ ಚೌಕಾಸಿ ಮಾಡುತ್ತಿರುವುದು ಖಂಡನೀಯ.

ಮದುವೆ ವಿಷಯದ ತಕರಾರಿಗೆ ಮಹಿಳೆಯೊಬ್ಬಳನ್ನು ನಗ್ನವಾಗಿ ಪರೇಡ್ ಮಾಡಲಾಯಿತು ಲಾಹೋರ್ ನಗರದಲ್ಲಿ. ಈ ತೆರನಾದ ಮಹಿಳೆ ವಿರುದ್ಧದ ಹಿಂಸೆ ನಮಗೆ ಎಲ್ಲೆಲ್ಲೂ ಕಾಣಲು ಸಿಗುತ್ತದೆ. ಈ ವಿಷಯದಲ್ಲಿ ಅತಿ ಮುಂದುವರಿದ, ಅತಿ ಹಿಂದುಳಿದ ದೇಶಗಳು ಸಮಾನತೆಯನ್ನು ಸಾಧಿಸಿವೆ. ಇಂಗ್ಲೆಂಡ್ ನಲ್ಲಿ ಪ್ರತೀ ಮೂವರು ಹೆಣ್ಣುಮಕ್ಕಳಿಗೆ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಂತೆ. ಸೂರ್ಯ ಮುಳುಗದ ಸಾಮ್ರಾಜ್ಯದ ಕಥೆ ಇದು. ಕುಡಿತ, ಜೂಜು ಮುಂತಾದ ಅನಿಷ್ಟಗಳಿಗೆ ಗುಲಾಮನಾದ ಗಂಡು ಮಹಿಳೆಯ ಮೇಲೆ ದೌರ್ಜನ್ವ ಎಸಗುತ್ತಾನೆ. ವರವ ನೀಡು ತಾಯೆ ಕುಡುಕನಲ್ಲದ ಗಂಡನ. ಈ ಮಾತಿನ ಹಿಂದೆ ಹೆಣ್ಣು ನೆಮ್ಮದಿಯ ಬದುಕು ಬಯಸುವುದು ವ್ಯಕ್ತ ವಾಗುತ್ತದೆ. ಕಾರು ಬಂಗಲೆ ಕೇಳುತ್ತಿಲ್ಲ ಆಕೆ. ಕೇವಲ ನೆಮ್ಮದಿಯ ಬದುಕು ಆಕೆಯ ಆಸೆ. 

ಗರ್ಭ ನಿರೋಧಕ ಸೌಲಭ್ಯ ಕೇಳಿದ ವಿಶ್ವ ವಿದ್ಯಾಲಯದ ಹೆಣ್ಣು ಮಗಳೊಬ್ಬಳನ್ನು ಅಮೆರಿಕೆಯ ರೇಡಿಯೋ ಬಾತ್ಮೀದಾರ “ರಷ್ ಲಿಂಬಾ” (rush limbaugh) ವೇಶ್ಯೆ ಎಂದು ಜರೆದ. ಕಾಮ ತೀಟೆ ತೀರಿಸಿ ಕೊಳ್ಳಲು ಸರಕಾರ ಭರಿಸಬೇಕಂತೆ ವೆಚ್ಚ ಎಂದು ಕೀಳು ಮಟ್ಟದ ವಾಗ್ದಾಳಿ ಮಾಡಿದ ಈ ಬಲಪಂಥೀಯ ವರದಿಗಾರ. ಇದು ಅತ್ಯಂತ ಮುಂದುವರೆದ ದೇಶವೊಂದರ ಕಥೆ. ಇಂಥ ಮಾತುಗಳನ್ನು ತಲೆ ಕೆಟ್ಟ ತಾಲಿಬಾನಿಯೂ ಆಡಿರಲಿಕ್ಕಿಲ್ಲ. ಗುಹೆಗೆಳಲ್ಲಿ ಅಡಗಿ ಕೂತು ಮಹಿಳೆಗೆ ಸ್ವಾತಂತ್ರ್ಯ ಕೊಡಲು ಒಪ್ಪದ ತಾಲಿಬಾನಿ ಬಾಯಿಂದ ಇಂಥ ಮಾತುಗಳು ಹೊರಡಲಿಲ್ಲ. ಗಗನಚುಂಬಿ ಕಟ್ಟಡಗಳ ನಾಡಿನಿಂದ ಬಂದವು ಈ ಮಾತುಗಳು. ಅದ್ಯಾವ ನಿಗೂಢ ಕಾರಣಕ್ಕೆ ಮಹಿಳೆಯನ್ನು ಗಂಡು ಶತ್ರು ಎಂದು ಪರಿಗಣಿಸುತ್ತಾನೋ ಅರ್ಥವಾಗುತ್ತಿಲ್ಲ. ಈಡನ್ ಉದ್ಯಾನವನದಲ್ಲಿ ದೇವರು  ನಿಷಿದ್ಧ ಗೊಳಿಸಿದ ಸೇಬನ್ನು ತಿನ್ನಲು ಆಡಂ ನಿಗೆ ಈವ್ ಉತ್ತೇಜಿಸಿದ ಕಾರಣ ದೇವರು ಮಹಿಳೆಗೆ ಪ್ರಸವ ವೇದನೆ ನೀಡಿದ ಎನ್ನುವ ಮತಿಹೀನರೂ ಇದ್ದಾರೆ. ಅಂದರೆ ಈ ಮಹಿಳೆ ವಿರುದ್ಧದ ಭಾವನೆಗೆ, ನಡವಳಿಕೆಗೆ ಕಾರಣ ಸಿಗುತ್ತದೆ.

ಮಹಿಳೆಯನ್ನು ಹಾಯ್, ಸೆಕ್ಸಿ ಎಂದು ಕರೆದರೆ ಸಿಕ್ಸಿಸ್ಟ್ ಆಗಬಹುದೋ ಅಥವಾ ಅದು ಒಂದು complimentary ಯೋ ಎಂದು ಒಂದು ಪತ್ರಿಕೆ ಕೇಳುತ್ತದೆ. ಮಾಧ್ಯಮಗಳು ಹೆಣ್ಣಿನ ಸೌಂದರ್ಯಕ್ಕೆ ಕೊಡುತ್ತಿರುವ ಅತೀವ ಮಹತ್ವ ಆಕೆ ತನಗರಿವಿಲ್ಲದೆಯೇ ಕೀಳರಿಮೆ ಬೆಳೆಸಿಕೊಂಡು ತೊಳಲಾಡುವಂತೆ ಮಾಡುತ್ತಿದೆ. ಅಂತರಂಗದ ಸೌಂದರ್ಯಕ್ಕೆ ಮಹತ್ವ ಮನ್ನಣೆ ಬರುವವರೆಗೆ ಈ ಕೀಳರಿಮೆಯ ಬವಣೆ ಹೆಣ್ಣಿಗೆ ತಪ್ಪದು. ಮಾಧ್ಯಮಗಳ, ಸೌಂದರ್ಯ ಪ್ರಸಾಧನ ಉತ್ಪಾದಿಸುವ ಕಂಪೆನಿಗಳ ಈ ನಡವಳಿಕೆಗೆ ದಾರಿ ಬೇರೆ ಕಾಣದೇ ತನಗರಿವಿಲ್ಲದಂತೆಯೇ ಭಾಗವಹಿಸುತ್ತಿರುವುದು ಖೇದಕರ. ಮಹಿಳೆಗೆ ಹೆಚ್ಚು ಮೈ ಪ್ರದರ್ಶನ ಮಾಡಲು ಕೊಟ್ಟ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ ಎಂದು ಬಗೆದ ಆಧುನಿಕ ವಿಶ್ವ ಮಹಿಳೆಯನ್ನು ಎಲ್ಲ ರೀತಿಯ ಅಪಮಾನಗಳಿಗೆ ಎಗ್ಗಿಲ್ಲದೆ ಉಪಯೋಗಿಸಿ ಕೊಂಡಿತು. ಕನಿಷ್ಠ ಉಡುಗೆ ತೊಟ್ಟು cat walk ಮಹಿಳೆಯ ಸೌಂದರ್ಯಕ್ಕೆ ಆಶ್ಚರ್ಯದಿಂದ ಹುಬ್ಬೇರಿಸಿ ಕರತಾಡನ ಮಾಡುವ ಜನ ಆಕೆ ವೇತನದಲ್ಲಿ ಸಮಾನತೆ ಬೇಡಿದಾಗ ಹುಬ್ಬು ಗಂಟಿಕ್ಕುತ್ತಾರೆ. ಹೆರಿಗೆ ವೇಳೆ ಅವಳಿಗೆ ಬೇಕಾದ ಸೌಲಭ್ಯ ಕೊಡಲು ತಕರಾರು ಮಾಡುತ್ತಾರೆ. ಗಂಡಿನಂತೆಯೇ ದುಡಿದರೂ ಅವಳ ಶ್ರಮಕ್ಕೆ ಬೆಲೆಯಿಲ್ಲ. ಹೊಲ ಗದ್ದೆಗಳಲ್ಲಿ ಕೆಲಸಮಾಡುವ, ಮನೆಗೆಲಸ ಮಾಡುವ, ತಮ್ಮದೇ ವ್ಯಾಪಾರ ಧಂಧೆ ನಡೆಸುವ, ಚಿಕ್ಕ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೂ ಇಲ್ಲ, ಭದ್ರತೆಯೂ ಇಲ್ಲ. 

ಇಷ್ಟೆಲ್ಲಾ ಅಡೆ ತಡೆಗಳ ನಡುವೆಯೂ, ದೌರ್ಜನ್ಯ ಅಪಮಾನಗಳ ಮಧ್ಯೆಯೂ ಹೆಣ್ಣು ಸಾಧನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಳೆ. ನನಗೆ ಪರಿಚಯದ ವ್ಯಕ್ತಿಯೊಬ್ಬರ ಅವಳಿ ಹೆಣ್ಣುಮಕ್ಕಳು ಗಣಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವೀಧರೆಯರಾದರು. ಡಿಗ್ರೀ ಪಡೆದು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಒಳ್ಳೆಯ ಸಂಸ್ಥೆಯಲ್ಲಿ ಕೆಲಸವೂ ಸಿಕ್ಕಿತು. ಗ್ರಾಮ ಪ್ರದೇಶದಿಂದ, ಮುಸ್ಲಿಂ ಕುಟುಂಬದಿಂದ ಬಂದ ಈ ಹೆಣ್ಣು ಮಕ್ಕಳು ಸುತ್ತ ಮುತ್ತಲಿನವರ ಅಸಮ್ಮತಿಗೆ ಸೊಪ್ಪು ಹಾಕದೆ, ತನ್ನ ಪಾಲಕರ ಪ್ರೋತ್ಸಾಹದಿಂದ ತಮ್ಮ ಶಿಕ್ಷಣದ ಉದ್ದಕ್ಕೂ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾ ತಮ್ಮ ಕನಸನ್ನು ನನಸಾಗಿಸಿಕೊಂಡರು.

ಹೀಗೆ ಸಮಾಜದ ಕೆಂಗಣ್ಣಿಗೆ, ಕುಹಕಕ್ಕೆ ತಲೆ ಬಾಗದೆ ಮುನ್ನಡೆಯ ದೃಢವಾದ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.

ಚಿತ್ರ ಕೃಪೆ: http://www.nationalgeographic.com

ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಋತು ಗಾನ

ಋತು ಚಕ್ರ ಒಂದು ರೀತಿಯ ರಾಕೆಟ್ ಸೈನ್ಸ್ ಕೆಲವರಿಗೆ. ಒಬ್ಬ ಗಂಡು ಋತು ಚಕ್ರದ ಬಗ್ಗೆ ಬರೆದಾಗ ಸಹಜವಾಗಿಯೇ ಹುಬ್ಬುಗಳು ಮೇಲೇರುತ್ತವೆ. ಏಕೆಂದರೆ ಇದು ಪುರುಷರ domain ಅಲ್ಲ. writer’s block ನಿಂದ ಹೊರಬರಲು ವಿಷಯವೊಂದನ್ನು ಹುಡುಕುತ್ತಿದ್ದಾಗ ಹೊಳೆಯಿತೀ ವಿಷಯ, ಹಳೇ ಲಾಪ್ ಟಾಪ್ ಬದಲಿಸಿ ಮೊನ್ನೆ ತಾನೇ ಕೊಂಡ ಹೊಸ ಅತಿ ತೆಳುವಾದ “ಅಲ್ಟ್ರಾ ಬುಕ್’ ಲಾಪ್ ಟಾಪ್ ನಿಂದ ಹೊರಹೊಮ್ಮಿದ ಲೇಖನ ಓದಿ.

ನಾನು ಬೆಂಗಳೂರಿನಲ್ಲಿ ಮೆಡಿಕಲ್ ಟ್ರಾನ್ಸ್ ಕ್ರಿಪ್ಶನ್ ಮಾಡುತ್ತಿರುವಾಗ ಟ್ರೈನರ್ ಒಬ್ಬರು ಅಮೇರಿಕನ್ ಮಹಿಳೆ. ಆಕೆ human anatomy ವಿಷಯ ಕಲಿಸುವಾಗ ಋತು ಚಕ್ರದ ವಿಷಯ ಬಂತು. ಕೆಣಕಲೆಂದೇ ಏನೋ ಹುಡುಗರನ್ನು ಒಬ್ಬೊಬ್ಬರಾಗಿ ಎಬ್ಬಿಸಿ you know how long menstruation lasts ಎಂದು ಕೇಳಿದಾಗ ಇಡೀ ತರಗತಿಯೇ ನಗೆಗಡಲಲ್ಲಿ ಮುಳುಗುವ ಉತ್ತರ ಬರುತ್ತಿತ್ತು. ಒಬ್ಬ ಹತ್ತು ದಿನ ಎಂದರೆ, ಮತ್ತೊಬ್ಬ ಇನ್ನೂ ಮುಂದಕ್ಕೆ ಹೋಗಿ ಆರು ತಿಂಗಳು ಎಂದು ಬಿಟ್ಟ. ಆಕೆ ನಗುತ್ತಾ ಮಹಿಳೆಯರ ಈ ಮಾಸಿಕ ವಿದ್ಯಮಾನವನ್ನು ವಿವರಿಸಿ knives fly in the kitchen and this is the time guys have to leave town ಎಂದು ಹೇಳಿದಾಗ ಹೆಣ್ಣು ಮಕ್ಕಳು ಗಹಗಹಿಸಿ ನಕ್ಕಿದ್ದರು.

ನಾನು ಚಿಕ್ಕವನಿದ್ದಾಗ ಕೆಲವರು ಹೇಳಿದ್ದು ಕೇಳಿದ್ದೇನೆ, ಅವಳು ದೊಡ್ಡವಳಾದಳು ಎಂದು. ನಿನ್ನೆ ನಾನು ಹೇಗೆ ನೋಡಿದ್ದೇನೋ ಹಾಗೆಯೇ ಇದ್ದಾಳಲ್ಲಾ ಇವಳು, ಮತ್ತೆ ದೊಡ್ಡವಳಾದಳು ಎಂದರೆ ಏನರ್ಥ ಎನ್ನುವ ನನ್ನ ಹುಡುಗು ಜಿಜ್ಞಾಸೆಗೆ ಉತ್ತರ ಸಿಕ್ಕಿರಲಿಲ್ಲ. ಈಗಿನ ಥರ ಉತ್ತರ ಕೊಡುವಷ್ಟು ಬೆಳೆದಿರಲಿಲ್ಲ ಸಮಾಜ ಆಗ.

ಸೌದಿ ಅರೇಬಿಯಕ್ಕೆ ಬಂದಾಗ ಇಲ್ಲಿ ಕಾಣುವುದೆಲ್ಲಾ ಹೊಸತು ನನಗೆ. ಒಮ್ಮೆ ಒಂದು ಮನೆಯ ಮೇಲೆ ಸೌದಿ ದೇಶದ ಧ್ವಜ ಹಾರಿದ್ದನ್ನು ಕಂಡೆ. ನಮ್ಮ ದೇಶದಲ್ಲಿ ಮನೆಗಳ ಮೇಲೆ, ಅಲ್ಲಿ ಇಲ್ಲಿ ಎಂದು ಬಾವುಟ ಹಾರಿಸುವ ಹಾಗಿಲ್ಲವಲ್ಲ. ಹಾಗಾಗಿ ಕುತೂಹಲದಿಂದ ಒಬ್ಬ ಶ್ರೀಲಂಕೆಯ ವ್ಯಕ್ತಿಯ ಹತ್ತಿರ ಕೇಳಿದಾಗ ಆತ ಹೇಳಿದ ಆ ಮನೆಯ ಹುಡುಗಿ ವಯಸ್ಸಿಗೆ ಬಂದಿದ್ದಾಳೆ, ಅದನ್ನು ತಿಳಿಸುವುವ ಉದ್ದೇಶದಿಂದ ಬಾವುಟ ಹಾರಿಸುತ್ತಾರೆ ಎಂದಿದ್ದ ಕುಚೋದ್ಯಭರಿತ ಹಾಸ್ಯದ ಯಾವುದೇ ಸುಳಿವನ್ನೂ ಕೊಡದೆ. ನಮ್ಮ ದೇಶದಲ್ಲಿ ಕೆಲವರು ಮನೆಯ ಜಗುಲಿಯ ಸುತ್ತ ಒಂದು ಬೆಡ್ ಶೀಟ್ ಮರೆ ಮಾಡಿ ಅಲ್ಲಿ ಹುಡಗಿಯನ್ನು ಕೂರಿಸುವುದನ್ನು ನಾನು ನೋಡಿದ್ದೇನೆ. ಇನ್ನೂ ಒಂದು ಸಮುದಾಯದವರು ಚಪ್ಪರ ಹಾಕಿ ಹುಡುಗಿ ಸಿಂಗರಿಸಿ ಯನ್ನು ಕೂರಿಸುತ್ತಾರೆ. ಈಗ ಇದೆಲ್ಲಾ ಬದಲಾಗಿರಬೇಕು. ಇದು ಬದಲಾಗಿದೆಯೇ, ಇಲ್ಲವೇ ಎಂದು ಗಮನಿಸಲೇ ಬೇಕಾದ, ಕುತೂಹಲ ಭರಿತ ವಿಷಯವೂ ಅಲ್ಲ ಅನ್ನಿ ಇದು.

ಏನೇ ಇರಲಿ, ಮಹಿಳೆಯರಿಗೆ ಆಗುವ ಈ ಜೈವಿಕ ಬದಲಾವಣೆ ವಿವಿಧ ಸಮಾಜಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಿಸುತ್ತದೆ. ಕ್ರೈಸ್ತರ ಹಳೆ ಒಡಂಬಡಿಕೆ ಪ್ರಕಾರ ಋತು ಚಕ್ರ ಅರ್ಧ ಸಾವಿನಂತೆ. ಪವಿತ್ರ ವಾದುದನ್ನು ಅಪವಿತ್ರ ಗೊಳಿಸುತ್ತದೆ ಋತು ಚಕ್ರ ಎನ್ನುವ ಅಭಿಪ್ರಾಯದೊಂದಿಗೆ ಅದು ಒಂದು ಶಾಪ ಎನ್ನುವ ಅಭಿಪ್ರಾಯ ಹಳೆ ಒಡಂಬಡಿಕೆ ಕಾಲದ ಜನರದ್ದಾಗಿತ್ತು. ಇಥಿಯೋಪಿಯಾ ದೇಶದಲ್ಲಿ ಈ ಅವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಅದಕ್ಕೆಂದೇ ನಿರ್ಮಿಸಲಾಗಿದ್ದ ಗುಡಿಸಿಲಿಗೆ ಹೋಗಿ ವಾಸವಾಗುವ ಪದ್ಧತಿ ಇದೆಯಂತೆ. ದೇವತೆಯರನ್ನು ಆರಾಧಿಸುವ ಪ್ರಾಚೀನ ಸಮಾಜಗಳಲ್ಲಿ ಋತು ಚಕ್ರ ಒಂದು ಪವಿತ್ರ ಕ್ರಿಯೆ. ಹಾಗೂ ತಿಂಗಳಿನ ಆ ಅವಧಿಯಲ್ಲಿ ಮಹಿಳೆ ಹೆಚ್ಚು ಬಲಶಾಲೀ ಎನ್ನುವ ಅಭಿಪ್ರಾಯವೂ ಇತ್ತು. ಅಷ್ಟೇ ಅಲ್ಲ ಈ ಅವಧಿಯಲ್ಲಿ ಮಹಿಳೆ ಗದ್ದೆ ಹೊಲದಲ್ಲಿ ಓಡಾಡಿದರೆ ಬೆಳೆ ಚೆನ್ನಾಗಿ ಆಗುವ ನಂಬಿಕೆ ಇತ್ತಂತೆ.

 ಇಸ್ಲಾಮಿನಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ, ಈ ಸಮಯದಲ್ಲಿ ಮಹಿಳೆ ನಮಾಜ್ ನಿರ್ವಹಿಸುವಂತಿಲ್ಲ , ಪವಿತ್ರ ಕುರಾನ್ ಪಠಿಸುವಂತಿಲ್ಲ, ವೃತಾಚಾರಣೆ ಪಾಲಿಸುವಂತಿಲ್ಲ. ಒಮ್ಮೆ ಪ್ರವಾದಿಗಳು ತಮ್ಮ ಪತ್ನಿಗೆ ನೀರು ಕೊಡೆಂದು ಕೇಳಿದಾಗ, ನಾನು ಋತುಮತಿ ಯಾಗಿದ್ದೇನೆ ಎನ್ನುವ ಉತ್ತರ ಬಂತು. ಆಗ ಪ್ರವಾದಿಗಳು ಕೇಳಿದರು, ಅದರಲ್ಲೇನು ತಪ್ಪು? ಋತು ಚಕ್ರ ಆಗೋದು ಬಿಡೋದು ನಿನ್ನ ಕೈಯಲ್ಲಿಲ್ಲವಲ್ಲ ಎಂದು ಉತ್ತರಿಸಿದ್ದರು. ಅಂದರೆ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ದೈನಂದಿನ ಚಟುವಟಿಕೆ ಸಾಂಗವಾಗಿ ನಡೆಸಬಹುದು ಎಂದಾಗಿತ್ತು ಪ್ರವಾದಿಗಳ ಅಭಿಪ್ರಾಯ.

ಸ್ಟೀವ್ ಜಾಬ್ಸ್ ರವರ ಆಪಲ್ ಕಂಪೆನಿ ಮೊದಲ ಬಾರಿಗೆ i pad ತಯಾರಿಸಿ ಅದಕ್ಕೆ ಹೆಸರೇನೆಂದು ಇಡಬೇಕು ಎಂದು i pad ಒಳಗೊಂಡು ಒಂದೆರಡು ಹೆಸರುಗಳನ್ನು ಕೊಟ್ಟು ಜನರ ಅಭಿಪ್ರಾಯ ನೋಡಿದಾಗ ಬಹಳ ಜನ ಹೇಳಿದ್ದು i pad ಹೆಸರು ಬೇಡ, ಇದು ಸ್ತ್ರೀಯರ ಋತುಚಕ್ರವನ್ನು ನೆನಪಿಸುತ್ತದೆ, kotex pad, ‘always ‘ pad ಗಳ ತೆರನಾದ ಹೆಸರು ಬೇಡ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೂ ಆಪಲ್ ಸಂಸ್ಥೆ ಇವುಗಳನ್ನು ಕಿವಿಗೆ ಹಾಕಿ ಕೊಳ್ಳದೆ ವಿಶ್ವಕ್ಕೆ ನೀಡಿದರು i pad . ಎಲ್ಲರೊಳಗೊಂದಾಗು ಎನ್ನುವ ಮಾತಿನಲ್ಲಿ ಆಪಲ್ ಗೆ ನಂಬಿಕೆಯಿಲ್ಲ. ಸ್ವಲ್ಪ ಸರಿದು ನಿಂತು ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಕಾಲಿಡುತ್ತಾರೆ ಆಪಲ್ ಜನ. ಹಾಗಾಗಿ ಅಷ್ಟೊಂದು ಯಶಸ್ವಿ ಈ ಕಂಪೆನಿ.

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಬಂದು ಕೇಳಿದಳು, ಬೆಳಗ್ಗಿನಿಂದ ಲಾಪ್ ಟಾಪ್ ಅನ್ನ ಅಂಟಿಸಿ ಕೊಂಡು ಕೂತಿದ್ದೀರಾ (ಶುಕ್ರವಾರ ರಜೆ ಯಾದ್ದರಿಂದ), ಸಾಕು ಏಳಿ ಈಗ ಎಂದಾಗ ನಾನು, ತಡಿಯೇ ಋತು ಚಕ್ರದ ಬಗ್ಗೆ ಬರೆಯುತ್ತಿದ್ದೇನೆ ಎಂದಿದ್ದೇ ತಡ, ಓಹೋ, ನಿಮಗೂ ಶುರು ಆಗ್ಬಿಡ್ತಾ ಅದು… ಅಲ್ಲಾ ಮತ್ತೆ… ಎಂದು ಸಿಡುಕಿ ಮರೆಯಾದಳು.

ಕನಿಷ್ಠ ಉಡುಗೆ, ಗರಿಷ್ಠ ಅಪಾಯ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆ ತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರ ಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು ನಮ್ಮ ಸನ್ಮಾನ್ಯ ಗೃಹ ಮಂತ್ರಿಗಳು. ಈ ಹೇಳಿಕೆ ಸರಿಯಲ್ಲ, ಕಾಕ್ಟೇಲ್ ಪಾರ್ಟಿ ಗೆ ಹೋಗುವ ಮಹಿಳೆ ಬಿಕಿನಿಯಲ್ಲಿ ಹೋಗಲಾರಳು, ಸಂದರ್ಭಕ್ಕೆ ಅನುಸಾರವಾಗಿ ಆಕೆ ಬಟ್ಟೆ ತೊಡುವಳು ಎಂದು ಬಡಬಡಿಸಿದರು.

ಗೃಹ ಮಂತ್ರಿಗಳಿಗಿಂತ ಚೆನ್ನಾಗಿ ಸಮಾಜ ಕಾಯುವ ಪೊಲೀಸರಿಗೆ ತಾನೇ ಗೊತ್ತಿರೋದು ಸಮಾಜದ ಆಗುಹೋಗುಗಳು? ಕನಿಷ್ಠ ಬಟ್ಟೆ ತೊಟ್ಟ ಹುಡುಗಿ ಅಥವಾ ಮಹಿಳೆ ಯಾವುದೇ ಕಾರಣದಿಂದಲೂ ಒಳ್ಳೆಯ ಭಾವನೆ ತರಲಾರರು. ನಮ್ಮಲ್ಲಿ ಬರುವ ವಿದೇಶೀ ಮಹಿಳೆಯರನ್ನು ಗಂಡಸರು ನೋಡುವ ರೀತಿ ನೀವು ಗಮನಿಸಿರಲೇಬೇಕಲ್ಲ, ಅದಕ್ಕೆ ಕಾರಣ ಏನು, ಆಕೆಯ ಅಂಗ ಸೌಷ್ಠವದ ಪ್ರದರ್ಶನ. ಮೈ ಪ್ರದರ್ಶನ ನಡೆಸೋ ಮಹಿಳೆಯರು loose character ನವರು ಎಂದು ಬಹಳ ಜನ ತಪ್ಪಾಗಿ ತಿಳಿಯುತ್ತಾರೆ. ನಮಗೇಕೆ ವಿದೇಶೀ  ಜನರ ಉಡುಗೆ ತೊಡುಗೆ ಮೇಲೆ ವ್ಯಾಮೋಹ? ಅವರು ಕನಿಷ್ಠ ಉಡುಗೆ ತೊದಲು ಕಾರಣ ಯಾವಾಗಲೂ ಗಡಿ ಬಿಡಿ ಯಾಗಿರುವ ಅವರ ಚಟುವಟಿಕೆ ಯಾಗಿರಬಹುದು. ನಮ್ಮ ಮಹಿಳೆಯರ ಥರ ಉದ್ದದ ಕೂದಲನ್ನೂ ಸಹ ಬೆಳೆಸೋಲ್ಲ ಅವರು. ಸ್ನಾನದ ನಂತರ ಒಣಗಲು ನಂತರ  ಬಾಚಲು ಸಿಗದ ಸಮಯದ ಕಾರಣ. ಮಹಿಳೆಯರು ಅಂತರಂಗದ ಸೌಂದರ್ಯಕ್ಕೆ  ಪ್ರಾಶಸ್ತ್ಯ ಕೊಟ್ಟರಾಗದೆ? ಈ ವರದಿ ಆಂಗ್ಲ ಪತ್ರಿಕೆಯಲ್ಲಿ ಬಂದಿದ್ದೆ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಬಹುತೇಕ ಓದುಗರು ದಿನೇಶ್ ರೆಡ್ಡಿಯವರ ಮಾತಿಗೆ ಸಹಮತ ವ್ಯಕಪಡಿಸಿದರು. ದಿನೇಶ ರೆಡ್ಡಿಯವರ ಪ್ರಕಾರ ಗ್ರಾಮಾಂತರ ಪ್ರದೇಶಗಳಿಗೂ ಅಂಟಿಕೊಂಡಿದೆ ಈ ಪಿಡುಗು. ಪೊಲೀಸ್ ಮುಖ್ಯಸ್ಥರ ಹೇಳಿಕೆಗೆ ಮಹಿಳಾ ಸಂಘಟನೆಗಳು ರೆಡ್ಡಿಯವರನ್ನು chauvinist ಎಂದು ಮೂದಲಿಸಿದವು.

ನಮ್ಮ ಸಂಸ್ಕೃತಿ ಪಾಶ್ಚಾತ್ಯರಿಗಿಂತ ವಿಭಿನ್ನ, ಹಾಗೆಯೇ ಅಂಥಾ ಮಾಡರ್ನ್ ಸಂಸ್ಕಾರಕ್ಕೆ ನಮ್ಮ ಸಮಾಜ ಇನ್ನೂ ತಯಾರಾಗಿಲ್ಲ, ತಯಾರಾಗುವವರೆಗೆ ನಮ್ಮ ಸಂಸ್ಕೃತಿಗೆ ತಕ್ಕುದಾದ ಉಡುಗೆ ಧರಿಸುವುದು ಒಳಿತು.

ಹೀಗೊಂದು ಕಾನೂನಿನ ಲೈಂಗಿ’ಕಥೆ’

ಜೂಲಿಯಾನ್ ಅಸಾಂಜ್ ಹೆಸರು ಸಾಮಾನ್ಯ ವಿದ್ಯಾವಂತರು ಕೇಳಿರಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕು ಮುಂತಾದ ಹಕ್ಕುಗಳ ಪ್ರತಿಪಾದಕ ಅಸಾಂಜ್. ಈತ ವಿಶ್ವದ ಸರಕಾರಗಳು ತೆರೆಮರೆಯಲ್ಲಿ ನಡೆಸಿ ಮಗುಮ್ಮಾಗಿ ಇದ್ದು ಬಿಡುವ ವಿಷಯಗಳ ಬಗ್ಗೆ ವಿಶ್ವಕ್ಕೆ ಡಂಗುರ ಬಾರಿಸಿ ಹೇಳುತ್ತಿದ್ದ ತನ್ನದೇ ಆದ ವೆಬ್ ತಾಣ “ವಿಕಿಲೀಕ್” ಮೂಲಕ. ಈ ವಿಕಿಲೀಕ್ ಎನ್ನುವ ನಲ್ಲಿ ತೊಟ ತೊಟ ತೊಟ ತೊಟ ಎಂದು ಉದುರಿಸ ಬೇಕಾದ್ದನ್ನೂ, ಉದುರಿಸಬಾರದ್ದನ್ನೂ ಉದುರಿಸಿ ಸರಕಾರಗಳ ಕೆಂಗಣ್ಣಿಗೆ ಕಾರಣವಾಯಿತು. ಈ ನಲ್ಲಿಯ ಬಾಯಿ ಮುಚ್ಚಿಸಲು ಸರಕಾರಗಳು ಎಲ್ಲಾ ಕಸರತ್ತುಗಳನ್ನೂ ಮಾಡಿದವು. ಅದರಲ್ಲಿನ ಒಂದು ಕಸರತ್ತು ಲೈಂಗಿಕ ದೌರ್ಜನ್ಯದ ಅಥವಾ ಅತ್ಯಾಚಾರದ ಆರೋಪ ಜೂಲಿಯಾನ್ ಅಸಾಂಜ್ ವಿರುದ್ಧ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಜೂಲಿಯಾನ್ ಅಸಾಂಜ್ ನಿಗೆ ಇಬ್ಬರು ಮಹಿಳೆಯರ ಪರಿಚಯ ವಾಯಿತು; ಆನ್ನಾ ಆರ್ಡಿನ್ ಮತ್ತು ಸೋಫಿಯಾ ವಿಲೆನ್ ಇವರೇ ಆ ಮಹಿಳೆಯರು.

ಈ ಮಹಿಳೆಯರು ಯಾರು, ಅವರು ಹೇಗೆ ಜೂಲಿಯಾನ್ ಅಸಾಂಜ್ ನಿಗೆ ಹತ್ತಿರವಾದರು ಎನ್ನುವುದು ದೊಡ್ಡ ಕತೆ. ಆನ್ನಾ ಆರ್ಡಿನ್ ಜೂಲಿಯಾನ್ ಒಂದಿಗೆ ಲೈಂಗಿಕ ಚಟುವಟಿಕೆ ನಡೆಸುವಾಗ ಅರ್ಧ ದಾರಿಯಲ್ಲಿ ಕಾಂಡೋಂ ಹರಿದು ಹೋಯಿತು. ಈಗ ಆನ್ನಾ ಗೆ ಶಂಕೆ ತನಗೆ ಲೈಂಗಿಕ ರೋಗ ತಗುಲಿರಬಹುದೋ ಅಥವಾ ಗರ್ಭಧಾರಣೆಯಾಗಿರಬಹುದೋ ಎಂದು. ಆದರೆ ಆಕೆ ಪೊಲೀಸರಿಗೆ ದೂರು ನೀಡಿದ್ದು ಅಸಾಂಜ್ ಉದ್ದೇಶಪೂರ್ವಕ ಕಾಂಡೋಂ ಹರಿದ ಎಂದು.

ಈಗ ಎರಡನೇ ಪಾತ್ರದ ಆಗಮನ, ಸೋಫಿಯಾ ವಿಲೆನ್. ಈಕೆ ಸಹ ಒಂದೆರಡು ದಿನಗಳ ನಂತರ ಅಸಾಂಜ್ ನೊಂದಿಗೆ ಕೂಡಿದಳು. ಮೊದಲ ಸಲ ಕೂಡುವಾಗ ಅಸಾಂಜ್ ಕಾಂಡೋಂ ಧರಿಸಿದ್ದ, ಮರುದಿನ ಬೆಳಿಗ್ಗೆ ಮತ್ತೊಮ್ಮೆ ಕೂಡುವಾಗ ಅಸಾಂಜ್ ಕಾಂಡೋಂ ಅನ್ನು ಧರಿಸಿರಲಿಲ್ಲ ಎಂದು ಸೋಫಿಯಾ ಪೊಲೀಸ್ ಠಾಣೆ ಗೆ ಹೋದಳು ದೂರಲು. ಇಬ್ಬರೂ ಸಮ್ಮತಿಯುಕ್ತ ಸಂಭೋಗಕ್ಕೆ ಒಪ್ಪಿಗೆ ನೀಡಿದ್ದರು ಎಂದು ಅಸಾಂಜ್ ಹೇಳಿದರೆ ಈ ಮಹಿಳೆಯರ ದೂರು ಬೇರೆಯೇ. ಸಮ್ಮತಿ ನೀಡಿದ್ದು ಕಾಂಡೋಂ ರಹಿತ ಸೆಕ್ಸ್ ಗಾಗಿ ಅಲ್ಲ ಎಂದು. ಈಗ ಆಗಮನ ಸೆಕ ನಷ್ಟೇ ರೋಮಾಂಚನ ಕೊಡುವ ಸ್ವಿಸ್ ಕಾನೂನಿಗೆ.

ಸುಸ್ವಾಗತ ಸ್ವಿಟ್ಸರ್ಲೆಂಡ್. ಈ ದೇಶದಲ್ಲಿ ಕಾನೂನು ಸ್ವಿಸ್ ವಾಚಿನಷ್ಟೇ ಸಂಕೀರ್ಣ. ಸುಲಭವಾಗಿ ಅರ್ಥವಾಗೋಲ್ಲ. ಇಲ್ಲಿನ ಕಾನೂನಿನಲ್ಲಿ “ಸರ್ಪ್ರೈಸ್ ಸೆಕ್ಸ್” ಎನ್ನುವ ಕಾಯಿದೆ ಇದೆ. ಈ ನಿಯಮದಡಿ ಲೈಂಗಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಮಹಿಳೆ ಸಾಕು ಎಂದರೂ ಕೇಳದೆ ಮುಂದುವರಿದರೆ ಅದು ಅತ್ಯಾಚಾರ. ಸಂಭೋಗ ನಿರತರಾಗಿರುವಾಗಲೇ ಮಹಿಳೆ ಸಮ್ಮತಿಯನ್ನು ಹಿಂದಕ್ಕೆ ಪಡೆಯಬಹುದಂತೆ. ಸಮ್ಮಿಶ್ರ ಸರಕಾರ ಉರುಳಿಸಲು ಪಕ್ಷವೊಂದು ಸರಕಾರಕ್ಕೆ ಬೆಂಬಲ ಹಿಂದಕ್ಕೆ ಪಡೆಯುವ ಹಾಗೆ. ಹಾಗೇನಾದರೂ ಸಮ್ಮತಿಯನ್ನು ಹಿಂದಕ್ಕೆ ಪಡೆದೂ ಗಂಡು ಮುಂದುವರಿದರೆ ಅದು ಅತ್ಯಾಚಾರ. (ಒಂದು ಸಂಶಯ; ಸಂಭೋಗ ನಿರತ ಗಂಡು ಕಿವುಡನಾದರೆ?) ಕಿವುಡನಾದರೆ ಸಂವಿಧಾನಕ್ಕೆ ತರುವ ತಿದ್ದುಪಡಿ ಯಂತೆ ಈ ಹಾಸ್ಯಾಸ್ಪದ ಸ್ವಿಸ್ law (lessness) ಗೂ ತರಬೇಕು ತಿದ್ದು ಪಡಿಯೊಂದ. ಮಹಿಳೆ ಉಪಯೋಗಿಸುವ withdrawal method ಇದು. withdrawal method ಏನು ಎಂದು ವಿವರಿಸಲು ಇದು ಸೆಕ್ಸ್ ಲೇಖನ ಅಲ್ಲ.

ಮೇಲಿನ ಈ ಕಾನೂನಿನ ಅಡಿ ಅಸಾಂಜ್ ನನ್ನು ಕಟಕಟೆಯಲ್ಲಿ ನಿಲ್ಲಿಸುವ, ತದನಂತರ ಜೈಲಿಗೆ ಅಟ್ಟುವ ಪ್ರಯತ್ನ ಸ್ವಿಸ್ ಸರಕಾರದ್ದು.

ಮೂರನೆಯ ಶಕ್ತಿ

ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು ಇದು? ನಾರಿ ಮುನಿದರೆ ಮಾರಿ ಅಂತ ನಮ್ಮ ಪೂರ್ವಜರು ಹೆಣ್ಣಿನ ಸಹವಾಸ ಮಾಡಿ ಸೋತು ಸುಣ್ಣವಾದಾಗ ಕಂಡುಕೊಂಡಾಗಿದೆ ಈ ಹಸಿ ಸತ್ಯವನ್ನು. ದೇವರು ಸೃಷ್ಟಿಸುವಾಗ ಒಂದೇ ಸಮಯದಲ್ಲಿ, ಸರಿಸಮನಾಗಿ ಪುರುಷನೊಂದಿಗೆ ಸ್ತ್ರೀಯನ್ನೂ ಸೃಷ್ಟಿಸಿದ. ಇಬ್ಬರಿಗೂ ಅವವರದೇ ಆದ ಜವಾಬ್ದಾರಿ ಗಳನ್ನೂ ಕೊಟ್ಟು ಒಬ್ಬರನ್ನೊಬ್ಬರು ಆಸರೆಯಾಗಿ, ಒತ್ತಾಸೆಯಾಗಿ ಬದುಕುವ ಕಿವಿಮಾತನ್ನು ಹೇಳಿ ಭೂಲೋಕಕ್ಕೆ ಕಳಿಸಿದ. ಹೆಣ್ಣು ಗಂಡು ಜಾತಿಗಳಲಿ ಹೆಚ್ಚು ಕುಯುಕ್ತಿ ಪ್ರದರ್ಶಿಸುವ ಗಂಡು ಆಗಾಗ ಹೆಣ್ಣಿನ ಅಧಿಕಾರ ವ್ಯಾಪ್ತಿಯನ್ನು ಎನ್ಕ್ರೋಚ್ (encroach) ಮಾಡಿ ತನ್ನ ವರ್ಚಸ್ಸನ್ನು ಹೆಚ್ಚು ಮಾಡಿ ಕೊಂಡಾಗೆಲ್ಲಾ ಹೆಣ್ಣು ಮುನಿದು ತಿರುಗೇಟು ಕೊಡುತ್ತಾಳೆ. ಹಾಗೆ ತಿರುಗೇಟು ತಿಂದಾಗ ಕಂಡು ಕೊಂಡ ಸತ್ಯ ಈ “ಹೆಣ್ಣು ಒಲಿದರೆ ವಯ್ಯಾರಿ, ಮುನಿದರೆ ಮಾರಿ” ಎನ್ನುವ ಕಟು ಸತ್ಯ.

ಹೆಣ್ಣು ಗಂಡಿನ ಪುರಾತನ ಜಂಜಾಟದ ಪುರಾಣ ಬಿಟ್ಟು ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರಾರು ಎನ್ನುವ ನಿಮ್ಮ ಪ್ರಶ್ನೆಗೆ ಅಡಗಿದೆ ಉತ್ತರ ನೀವು ಕನಸಿನಲ್ಲಿಯೂ ನೆನೆಸಿರದ, ಊಹಿಸಿರದ ಸ್ಥಳದಲ್ಲಿ.

ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರು ಬೇರಾರೂ ಅಲ್ಲ, ಪಾಕಿಸ್ತಾನದ ಹುಟ್ಟಿಗೆ “ಕಾರಣೀ ‘ಭೂತ’ ” ನಾದ ಮುಹಮ್ಮದ್ ಅಲಿ ಜಿನ್ನಾ. ಇದೇ ಮೂರನೇ ಶಕ್ತಿ ತನ್ನ ದೇಶದ ಪ್ರಧಾನಿಯಾಗಿ ಮತಾಂಧರ ಆಕ್ರಮಣಕ್ಕೆ ಸಿಕ್ಕು ಸತ್ತಾಗ ಈ ಮಾತನ್ನು ಹೇಳಿದ ಜಿನ್ನಾ ತನ್ನ ಸಮಾಧಿಯಲ್ಲಿ ನೋವಿನಿಂದ ಖಂಡಿತ ಹೊರಳಾಡಿರಬಹುದು.

ಒಂದ್ನಿಮ್ಷ, ಹೋಗ್ಬೇಡಿ. ಮತ್ತೊಂದು ಶಕ್ತಿ ಇದೇರೀ. ಈ ಹೆಣ್ಣನ್ನು ಒಲಿಸಿಕೊಳ್ಳೋ ಗಲಾಟೆಯಲ್ಲಿ ಮರೆತೇ ಬಿಟ್ಟೆ. ಅದೇ ರೀ ಇಚ್ಛಾ ಶಕ್ತಿ. ಇದೊಂದಿದ್ದರೆ ಮೇಲೆ ಹೇಳಿದ ಮೂರೂ ಶಕ್ತಿಗಳೂ ನಮಗೆ ಶರಣು ಶರಣು ಎನ್ನುತ್ತವೆ.

ಈಗ ಆದುವಲ್ಲ ಎಲ್ಲಾ ಶಕ್ತಿಗಳೂ ಸೇರಿ ಚತುರ್ಶಕ್ತಿ ಗಳು? ಈಗ ಬೇರಿನ್ನೇನು ಬೇಕು ಹೇಳಿ ಈ ಜಗತ್ತನ್ನು ಜಯಿಸಲು?

ಈ ಅಕ್ಷರ ಚಿತ್ರ ನೋಡಿ

ಜೇಡ ಜಾಲದಲ್ಲಿ ಸಿಕ್ಕು ಹೊರಬರಲು ಹವಣಿಸುವಾಗ ಎಡವಿದ ಚಿತ್ರವಿದು. ಮುಸ್ಲಿಂ ಮಹಿಳೆಯೊಬ್ಬರ ಬ್ಲಾಗ್ನಲ್ಲಿದ್ದ  ಮನಸ್ಸಿಗೆ ಮುದ ನೀಡುವ, ಪುಟ್ಟ ಪುಟ್ಟ ನಲ್ನುಡಿಗಳಿಂದ ತುಂಬಿದ ಚಿತ್ರವನ್ನ ತಮ್ಮೊಂದಿಗೆ ಹಂಚಿಕೊಳ್ಳುವ ಬಯಕೆಯಿಂದ ನನ್ನ ಹಳೇ ಸೇತುವೆ ಮೇಲೆ ತೂಗು ಹಾಕಿದ್ದೇನೆ. ಎಂಜಾಯ್, ವಿಲ್ ಯೂ?  

ಚಿತ್ರ ಕೃಪೆ: http://journeyofamuslimah.tumblr.com/post/7083966046/imgfave-discovered-on-imgfave-com-social

ನಗ್ನ ಪ್ರದರ್ಶನ

ಓರ್ವ ಮಹಿಳೆಯನ್ನು ನಗ್ನಳನ್ನಾಗಿಸಿ ಮರಕ್ಕೆ ಕಟ್ಟಿ ಹಾಕಿದ ದೃಶ್ಯ ನೋಡಿ ದಂಗಾದ ವ್ಯಕ್ತಿಯೊಬ್ಬ ಕೂಡಲೇ 911 ಕ್ಕೆ ಫೋನಾಯಿಸಿ ಪೊಲೀಸರನ್ನು ಕರೆಸುತ್ತಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲೇ ಅಡ್ಡಾಡುತ್ತಿದ್ದ ಒಬ್ಬ ವ್ಯಕ್ತಿ ಕಾಣಲು ಸಿಗುತ್ತಾನೆ. ಅವನನ್ನೂ, ಮರಕ್ಕೆ ಕಟ್ಟಿ ಹಾಕಲ್ಪಟ್ಟ ನಿಸ್ಸಹಾಯಕ ನೀರೆಯನ್ನೂ ಪ್ರಶ್ನಿಸಿದಾಗ ಕೃತ್ಯ ಬಯಲಿಗೆ ಬರುತ್ತದೆ. ಇಬ್ಬರೂ ಹೇಳಿದ್ದು ಪರಸ್ಪರರ ಅನುಮತಿಯೊಂದಿಗೆ (consensual rendezvous) ನಗ್ನತೆಯ ಸರ್ಕಸ್ ಏರ್ಪಟ್ಟಿದ್ದು ಎಂದು. ಯಾರನ್ನೂ ಬಂಧಿಸದೆ ಪೊಲೀಸರು ಮರಳಿದರು ನಗ್ನ ಮಹಿಳೆಯ ಅಂಗಸೌಷ್ಟವನ್ನು ಕಣ್ಣಿನಲ್ಲಿ ತುಂಬಿಸಿಕೊಂಡು. ಇದು ನಡೆದಿದ್ದು ಅಮೆರಿಕೆಯ ವಾಷಿಂಗ್ಟನ್ ರಾಜ್ಯದ ಟಕೋಮ ನಗರದ ಒವೆನ್ ಬೀಚ್ ಏರಿಯಾದಲ್ಲಿ. ಅಮೇರಿಕಾ land of opportunities ಮಾತ್ರವಲ್ಲ land of whimsical ideas ಕೂಡಾ ಎಂದು ಮೇಲಿನ ಘಟನೆ ನಮಗೆ ತಿಳಿಸುತ್ತದೆ. ನಮ್ಮಲ್ಲಿ ಈ ತೆರನಾದ ಘಟನೆ ನಡೆದಿದ್ದರೆ ? ಈ ದೃಶ್ಯವನ್ನು ಕಂಡವ ಪೊಲೀಸರಿಗೆ ಫೋನಾಯಿಸುವ ಬದಲು ಅಲ್ಲೇ ಅಡ್ಡಾಡುತ್ತಿದ್ದ ಆಕೆಯ ಪ್ರಿಯಕರನನ್ನು ಮತ್ತೊಂದು ಕಂಬಕ್ಕೆ ಕಟ್ಟಿ ಹಾಕಿ “ಕನ್ಸೆನ್ಸುವಲ್ ರಾನ್ಡೇವೂ” ಸಾಹಸದ ನೈಜ ಪಾಠ ಹೇಳುತ್ತಿದ್ದನೋ ಏನೋ?