ಆರು ಸಾರ್ವತ್ರಿಕ ಸೂತ್ರಗಳು

ಮನುಷ್ಯನಾಗಲು ಬೇಕಾದ ಆರು ಸಾರ್ವತ್ರಿಕ ಸೂತ್ರಗಳು

೧. ನಿಮಗೊಂದು ಶರೀರವನ್ನು ಕೊಡಲಾಗುತ್ತದೆ.

೨. ನಿಮಗೆ ಪಾಠ ಗಳನ್ನು ಹೇಳಿ ಕೊಡಲಾಗುತ್ತದೆ.

೩. ಬದುಕಿನಲ್ಲಿ ತಪ್ಪುಗಳಿರುವುದಿಲ್ಲ, ಬರೀ ಪಾಠ ಗಳು ಮಾತ್ರ.

೪. ಪಾಠ ಕಲಿಯದಾದಾಗ ಅವು ಮರುಕಳಿಸುತ್ತವೆ.

೫. ಮರುಕಳಿಸಿದಷ್ಟೂ ಪಾಠ ಹೆಚ್ಚು ಕಠಿಣವಾಗುತ್ತದೆ.

೬. ನೀವು ಪಾಠ ಕಲಿತಿರಿ ಎಂದು ಅರಿವಾಗುವುದು ನಿಮ್ಮ ಗುರಿ ಬದಲಿಸಿದಾಗ.

ಹೇಗನ್ನಿಸಿದವು ಮೇಲಿನ ಸೂತ್ರಗಳು? ಸುಖೀ ಸಂಸಾರಕ್ಕೆ ಹತ್ತು ಸೂತ್ರಗಳು, ಸುಖೀ ದಾಂಪತ್ಯಕ್ಕೆ ವಾತ್ಸ್ಯಾಯನನ ೬೪ ಸೂತ್ರಗಳು,

ಮನುಷ್ಯನಾಗೋಕ್ಕೆ ಕೇವಲ ಆರೇ ಆರು ಸೂತ್ರಗಳು.

ಚಿತ್ರ ಕೃಪೆ: http://media.photobucket.com/image/life%20lessons/Obiwan456/cute-puppy-pictures-life-lessons.jpg?o=27

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.

ಒಂದು ದಿನ ಓರ್ವ ರೈತನ ಕತ್ತೆ ಹಾಳು ಬಾವಿಯೊಳಕ್ಕೆ ಬಿದ್ದು ಬಿಡುತ್ತದೆ. ಕತ್ತೆಯ ಆಕ್ರಂದನ ಕೇಳಿ ರೈತ ಅಲ್ಲಿಗೆ ಧಾವಿಸಿ ಬಂದು ನೋಡುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿ, ಏನು ಮಾಡಬೇಕೆಂದು ಹೊಳೆಯದೆ ಹೇಗೂ ಈ ಕತ್ತೆಗೆ ವಯಸ್ಸಾಗಿ ಬಿಟ್ಟಿದೆ, ಅಲ್ಲಿಗೇ ಮಣ್ಣು ಹಾಕಿ ಸಮಾಧಿ ಮಾಡಿದರಾಯಿತು ಎಂದು ತನ್ನ ಪರಿಚಿತರನ್ನು ಕರೆಯುತ್ತಾನೆ ಸಹಾಯಕ್ಕೆಂದು. ಎಲ್ಲರೂ ಸೇರಿ ಕತ್ತೆಯ ಮೇಲೆ ಮಣ್ಣನ್ನು ಅಗೆದು ಹಾಕಲು ಆರಂಭಿಸುತ್ತಾರೆ. ಮೊದಮೊದಲಿಗೆ ಸುಮ್ಮನಿದ್ದ ಕತ್ತೆಗೆ ಕೊನೆಗೆ ಹೊಳೆಯುತ್ತದೆ ಇವರು ನನ್ನನ್ನು ಉಳಿಸಲು ಅಲ್ಲ ಬಂದಿದ್ದು, ಬದಲಿಗೆ ಜೀವಂತ ಸಮಾಧಿ ಮಾಡಲು ಎಂದು ದೈನ್ಯತೆಯಿಂದ ಅಳಲು ಆರಂಭಿಸುತ್ತದೆ. ಕತ್ತೆಯ ಅಳು ಯಾರಿಗೂ ಕೇಳಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಕತ್ತೆ ತನ್ನ ಆಕ್ರಂದನ ನಿಲ್ಲಿಸಿ ತನ್ನ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೊಡವಿ ಒಂದು ಹೆಜ್ಜೆ ಮೇಲೆ ಇಡುತ್ತದೆ. ಹೀಗೆ ಒಂದೇ ಸಮನೆ ತನ್ನ ಮೇಲೆ ಮಣ್ಣು ಬೀಳುತ್ತಿದ್ದರೂ ಕತ್ತೆ ಮಾತ್ರ ಸಾವಧಾನದಿಂದ ಮೈ ಕೊಡವುತ್ತಾ ಒಂದೊಂದೇ ಹೆಜ್ಜೆ ಗಳನ್ನು ಮೇಲಕ್ಕೆ ಇಡುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಜನರಿಗೆ ಆಶ್ಚರ್ಯ ಮತ್ತು ಸ್ವಲ್ಪ ಹೊತ್ತಿನಲ್ಲಿ ಕತ್ತೆ ಬಾವಿಯಿಂದ ಹೊರಕ್ಕೆ ಬಂದಿರುತ್ತದೆ. ಈ ವಿಸ್ಮಯದ ಬಗ್ಗೆ, ಕತ್ತೆಯ ಜಾಣ್ಮೆಯ ಬಗ್ಗ್ಗೆ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದರೆ ಕತ್ತೆ ಮಾತ್ರ ಅಳಿದುಳಿದ ಧೂಳನ್ನು ತನ್ನ ಮೈ ಮೇಲಿಂದ ಕೊಡವಿ ಗಾಂಭೀರ್ಯದಿಂದ ತನ್ನ ದಾರಿ ಹಿಡಿಯುತ್ತದೆ.

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ಗುರಿಯ ಸಾಫಲ್ಯ.

ಈ ಕತೆ ಕಲಿಸುವ ನೀತಿ ಏನೆಂದರೆ, ಬದುಕು ನಿಮ್ಮ ಮೇಲೆ ಮಣ್ಣನ್ನು ಎರಚುತ್ತಿರುತ್ತದೆ. ಎಲ್ಲಾ ರೀತಿಯ ಮಣ್ಣನ್ನು.

ಉಪಾಯವೇನೆಂದರೆ ಮೇಲೆ ಬಿದ್ದ ಮಣ್ಣನ್ನು ಕೊಡವಿ ಮೆಲಕ್ಕೆಳಲು ಶ್ರಮಿಸುವುದು.

ನಮ್ಮ ಪ್ರತೀ ಹೆಜ್ಜೆಯೂ ಉನ್ನತಿ ಕಡೆಗಿನ ಯಾತ್ರೆ. ಎಷ್ಟೇ ಆಳವಾದ ಬಾವಿಯಿಂದಲಾದರೂ ಸರಿ ನಾವು ಹೊರಕ್ಕೆ ಬರಬಹುದು ತಾಳ್ಮೆ, ಛಲವೊಂದಿದ್ದರೆ.

ಕೊಡವಿ ಮತ್ತು ಎದ್ದೇಳಿ.

ಮೇಲಿನ ನೀತಿ ಪಾಠಕ್ಕೆ ಮತ್ತೈದು ಸೂತ್ರಗಳನ್ನು ಸೇರಿಸಿಕೊಳ್ಳಿ.

ಹಗೆಯಿಂದ ದೂರವಿರಿ. ಕ್ಷಮಾಶೀಲರಾಗಿ. ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ.

ಚಿಂತೆಯಿಂದ ದೂರವಿರಿ. ನಾವು ಊಹಿಸಿಕೊಳ್ಳುವ ಬಹುತೇಕ ಚಿಂತೆಗಳು ಬಹುಮಟ್ಟಿಗೆ ಎದುರಾಗಲಾರವು.

ಸರಳವಾಗಿ ಬದುಕಿ. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ.

ನಿಮ್ಮಲ್ಲಿ ಇರುವುದರಲ್ಲಿ ಸ್ವಲ್ಪ ಇಲ್ಲದವರಿಗೂ ಕೊಡಿ. ನಿಮ್ಮಿಂದ ಪಡೆದುಕೊಂಡವನ ಮುಖದ ಮೇಲೆ ನೀವು ಕಾಣುವ ಧನ್ಯತಾ ಭಾವ ಯಾವ ಸ್ವರ್ಗಕ್ಕೂ ಕಡಿಮೆಯಲ್ಲ. ಕೊನೆಯದಾಗಿ, ಜನರಿಂದ ಅತಿ ಕಡಿಮೆಯನ್ನೇ ಬಯಸಿರಿ. ಆದರೆ ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನಿಂದ ಮಾತ್ರ ಅತಿ ಹೆಚ್ಚಿನದನ್ನು ನಿರೀಕ್ಷಿಸಿ. ಏಕೆಂದರೆ ಎಂದಿಗೂ ಬರಿದಾಗದ ಖಜಾನೆ ಅವನಲ್ಲಿದೆ.

ಯೇಗ್ದಾಗೆಲ್ಲಾ ಐತೆ..ಓದಲೇಬೇಕಾದ ಪುಸ್ತಕ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.  

ಮುಕುಂದನ ಹಳ್ಳಿಯ ಈ ಸ್ವಾಮೀ ಒಬ್ಬ ಸರಳ ಸನ್ಯಾಸಿ. ಕಳ್ಳ ಸನ್ಯಾಸಿ, ಭಂಗಿ, ಗಾಂಜಾ ಸೇದುವವನು, “ಭಕ್ತರ ಮನೆಯ ಮುದ್ದೆ, ಬಸವಿ ಮನೆಯ ನಿದ್ದೆ”….   ಹೀಗೇ ವಿನಾಕಾರಣ ಪುರಾವೆಗಳಿಲ್ಲದೆ ಅವರನ್ನು ಜನ ತೆಗಳಿದರೂ (ಯಾರೋ ಹೇಳಿದ್ದನ್ನು, ಹೇಳಿ ಕೊಟ್ಟಿದ್ದನ್ನು ನಂಬಿ prejudiced ಆಗೋ ವಿದ್ಯಾ?ವಂತ ಸಮೂಹ ನಮ್ಮ ನಡುವೆ ಇರುವಾಗ ಗ್ರಾಮಸ್ಥರ ವರ್ತನೆ ಬಗ್ಗೆ ಅಚ್ಚರಿ ಪಡಬೇಕಿಲ್ಲ ) ಅದ್ಯಾವುದನ್ನೂ ಕಿವಿಗೆ ಹಾಕಿ ಕೊಳ್ಳದೆ ಮೇಷ್ಟ್ರು ತಮ್ಮ ಸ್ನೇಹವನ್ನು ಅವರೊಂದಿಗೆ ಮುಂದುವರೆಸುತ್ತಾ ಬದುಕು ಒಂದು ಒಂದು ಭ್ರಮೆ ಎಂದು ಕಂಡು ಕೊಳ್ಳುತ್ತಾರೆ. 

ಮುಕುಂದನ ಹಳ್ಳಿಯ ಸ್ವಾಮಿಗಳಿಗೆ ಬದುಕಿನ ಬಗ್ಗೆ ಸರಳವಾಗಿ, ಜನರ ದೈನಂದಿನ ಬದುಕಿನೊಂದಿಗೆ ತಳುಕು ಹಾಕಿ ವಿನೋದವಾಗಿ, ಮನದಟ್ಟಾಗುವಂತೆ ಹೇಳುವ ಸಾಮರ್ಥ್ಯ ತಮ್ಮ ಅಲೆದಾಟದಷ್ಟೇ ಸುಲಭ. ಒಮ್ಮೆ  ವ್ಯಕ್ತಿಯೊಬ್ಬ ಬಂದು ಯಾರೋ ಸತ್ತು ಹೋದರು ಎನ್ನುವ ಸುದ್ದಿಯನ್ನ ಇವರಿಗೆ ತಲುಪಿಸುತ್ತಾನೆ. ಸತ್ತು ಹೋದ ಎನ್ನುವ ಪದ ಕೇಳಿದ ಕೂಡಲೇ ಹೌಹಾರಿದಂತೆ ನಟಿಸಿದ ಸ್ವಾಮಿಗಳು, ಅದ್ಹೇಗಯ್ಯಾ, ಅವನೆಲ್ಲಾದರೂ ಸತ್ತು ಹೋಗಲು ಸಾಧ್ಯವೇ ಎಂದು ಕೇಳುತ್ತಾರೆ. ಸ್ವಾಮಿಗಳ ಈ ಪ್ರಶ್ನೆಯ ಮರ್ಮ ಅರಿಯದ ಹಳ್ಳಿಗ ಮತ್ತಷ್ಟು ವಿವರಿಸುತ್ತಾನೆ. ಆದರೂ ಸ್ವಾಮಿ ಜಪ್ಪಯ್ಯ ಅನ್ನುವುದಿಲ್ಲ. ಎಲ್ಲಾದರೂ, ಯಾರಾದರೂ ಸತ್ತು ಹೋಗೋದಿದೆಯೇ? ಇಷ್ಟೆಲ್ಲಾ ವರ್ಷ ಬಾಳಿ  ಬದುಕಿದವನು ಅಷ್ಟು ಸಲೀಸಾಗಿ “ಸತ್ತು ಹೋಗು” ವನೆ? ಎಂದು ಕೇಳಿ ಅವನನ್ನು ಮತ್ತಷ್ಟು ಗಲಿಬಿಲಿಗೊಳಿಸುತ್ತಾರೆ.  “ಸತ್ತು ಹೋಗು’ ಎನ್ನುವ ಪದದ ಹಿಂದಿನ ಗೂಢಾರ್ಥವನ್ನು ಸ್ವಾಮಿಗಳಂಥ ವರಿಗೆ ಅರಿಯುವುದು ಸುಲಭ. ಉಸಿರಾಟ ನಿಂತು ಬಿಟ್ಟರೆ ಅವನು ಸತ್ತ ಎಂದು ಬಗೆಯುವ ಹಳ್ಳಿಯ ನಿರಕ್ಷರ ಕುಕ್ಷಿಗೆ ಹೇಗೆ ತಾನೇ ತಿಳಿಯಬೇಕು ಸಾವು ಮತ್ತೊಂದು ಬದುಕಿನೆಡೆಗಿನ ಪಯಣ ಎಂದು ? ಹೌದಲ್ಲವೇ? ದೀರ್ಘಾವಧಿ ಬಾಳಿ ಬದುಕಿದ  ಮಾಡಬೇಕಾದ್ದನ್ನೂ, ಮಾಡಬಾರದ್ದನ್ನೂ ಎಲ್ಲಾ ಮಾಡಿದ ಮನುಷ್ಯ ಸದ್ದಿಲ್ಲದೇ “ಸತ್ತು ಹೋಗಲು” ಹೇಗೆ  ಸಾಧ್ಯ? ಬದುಕಿನ ಮತ್ತು ಸಾವಿನ ನಿಜರೂಪವನ್ನು ಸ್ವಾಮಿಗಳು ಲೀಲಾಜಾಲವಾಗಿ ನಗುತ್ತಾ ಹಾಸ್ಯದಿಂದ ವಿವರಿಸುತ್ತಾರೆ ಸಾವಿನ ಸುದ್ದಿ ತಂದಾತನಿಗೆ.

ನದಿಯಲ್ಲಿ ನೀರಿನ ಹರಿವನ್ನು ನೋಡುತ್ತಾ, ಅದರೊಂದಿಗೆ ಹೊರಡುವ ನೀರ ಗುಳ್ಳೆಗಳೂ ಸ್ವಾಮಿಗಳ ಆಸಕ್ತಿ,  ಕಲ್ಪನೆಯನ್ನು ಹಿಡಿದಿಡುತ್ತವೆ. ಕ್ಷಣ ಮಾತ್ರ ಬದುಕುವ ಆ ಗುಳ್ಳೆಗಳ ಹಿಂದಿನ ಮರ್ಮವನ್ನೂ, ನಮ್ಮ ಬದುಕಿನ ಟೊಳ್ಳುತನ ದೊಂದಿಗೆ ಹೋಲಿಸಿ ಗಾಂಭೀರ್ಯ ಮಿಳಿತ ನಗುವಿನೊಂದಿಗೆ ಬಿಡಿಸಿ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಚೆಂದದ ಪುಟ್ಟ ಪುಸ್ತಕ.  ಒಂದು ರೀತಿಯಲ್ಲಿ reader’s digest ಓದಿದ ಹಾಗುತ್ತದೆ ಸ್ವಾಮಿಗಳ ಮಾತು, ಅನುಭವ ನೋಡಿದಾಗ. ಇಂಥ ನಿಸ್ವಾರ್ಥಿ ಸಾಧಕರಿಂದಲೇ ಇರಬೇಕು ನಮ್ಮ ಸಮಾಜ ಒಳ್ಳೆಯತನವನ್ನು ತನ್ನಲ್ಲಿ ಇನ್ನೂ ಉಳಿಸಿಕೊಂಡು ಬರುತ್ತಿದೆ. ಆದರೆ ಇವರುಗಳ ಸಂಖ್ಯೆ ಕ್ಷೀಣಿಸುತ್ತಿರುವುದೂ ಸಹ ತುಂಬು ಬದುಕು ಸಾಗಿಸಿದ ಸ್ವಾಮಿಗಳ ಮಾತುಗಳಷ್ಟೇ ಸತ್ಯ.

ಮನುಷ್ಯರೆಲ್ಲರೂ ಸಮಾನರು ಎಂದು ಸ್ವಾಮಿಗಳು ಹೇಳುವ ರೀತಿ ಇಲ್ಲಿದೆ ನೋಡಿ;

“ಊರು ಕೇರಿ, ಕುಲ ಗೋತ್ರ ಹೆಣ್ಣು ಗಂಡು ಎಲ್ಲಾ ಇಂಗಡಿಸ್ತಾರೆ. ನಾವು ಶಿವಾಚಾರ್ದೋರು, ನಾವು ದೇವಾಂಗ ದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗಂಧದೋರು, ಮುದ್ರೆರು, ಅವ್ರು ಇವ್ರು ಒಬ್ಬರನ್ನ ಕಂಡ್ರೆ ಒಬ್ರು ಮಾರು ದೂರ ಹೋಗ್ತಾರೆ. ಮಾಡಿ ಮೈಲಿಗೆ ಅಂತಾರೆ, ನಗು ಬರ್ತೈತೆ……..ಈ ಮುದ್ರೆ, ವಿಭೂತಿ ಎಲ್ಲಾ ಅಷ್ಟೇ. ಬಾರೆ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ” ಈ ಮಾತನ್ನು ಆಧುನಿಕ ಸ್ವಾಮಿಗಳಿಗೆ ಕೇಳಿಸಿದರೆ ಯಾವ ಉತ್ತರ ಸಿಗಬಹುದೋ?    

ಸ್ವಾಮಿಗಳ  ಕೆಲವೊಂದು ಸಂಗತಿಗಳು ಉತ್ಪ್ರೇಕ್ಷೆ ಎಂದು ತೋರಿದರೂ ಈ ಭಾವನೆ ಮತ್ತು ದಂತ ಕಥೆಗಳು ದೇವ ಮಾನವರಿಗೆ ಜನ ಅಂಟಿಸಿಯೇ ತೀರುತ್ತಾರೆ. ಅವನು ಕುಡುಕ, ಭಂಗಿ, ಗಾಂಜಾ ಹಾಕುವವನು ಎಂದೆಲ್ಲಾ ಜರೆಯುವ ಅದೇ ಬಾಯಿ ಅವರ ಪವಾಡಗಳ ಬಗ್ಗೆಯೂ ಭಯ ಭಕ್ತಿಯಿಂದ ಮಾತನಾಡುತ್ತಾರೆ, ಅದೇ ಸೋಜಿಗ.

ಹಳ್ಳಿಗಳಲ್ಲಿ ಈಗ ಅಪರೂಪವಾಗುತ್ತಿರುವ ಸಾಮರಸ್ಯದ ಜೀವನ ಸಹ ಈ ಮೇಷ್ಟರ ನೆನಪಿನಂಗಳದಿಂದ ಮರೆಯಾಗುವುದಿಲ್ಲ. ಮುಸ್ಲಿಮರಾದರೂ ಹಯಾತ್ ಸಾಹೇಬರು ಹಳ್ಳಿಯಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದ ಸಹಾಯ, ಗ್ರಾಮಸ್ಥರ ಮೂಢ ನಂಬಿಕೆಗಳು ಹೀಗೇ ಹತ್ತು ಹಲವು ವಿಚಾರಗಳನ್ನು ಜೋಪಾನದಿಂದ ಓದುಗರಿಗಾಗಿ ಕಾಯ್ದುಕೊಂಡು ನಮ್ಮ ಕೈಗಳಿಗರ್ಪಿಸಿದ ಕೃಷ್ಣ ಶಾಸ್ತ್ರಿಗಳು ಮಹದುಪಕಾರವನ್ನೇ ಮಾಡಿದ್ದಾರೆ ಈ ಪುಸ್ತಕ ಬರೆಯುವ ಮೂಲಕ. ಈ ಪುಸ್ತಕ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೋ ಗೊತ್ತಿಲ್ಲ. ತರ್ಜುಮೆ ಆಗದ ಪಕ್ಷದಲ್ಲಿ ಯಾರಾದರೂ ಈ ಮಹತ್ಕಾರ್ಯಕ್ಕೆ ಕೈ ಹಾಕಿದರೆ ಈ ಪುಸ್ತಕ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.   

ಒಬ್ಬ ನಿರಕ್ಷರಕುಕ್ಷಿ ಆದರೆ ಬದುಕಿನ ನಿಜವಾದ ಪಾಠದಲ್ಲಿ ಅದ್ವಿತೀಯ professor ಆದ ಸ್ವಾಮಿಯೊಬ್ಬರ ಪರಿಚಯ ನನ್ನಲ್ಲಿ ಒಂದು ಅವರ್ಣನೀಯವಾದ ಭಾವವನ್ನೇ ಸೃಷ್ಟಿಸಿತು. ರಾಜಕಾರಣಿಗಳ ಒಡನಾಟದಿಂದ ನಾಡಿನ ಸಂಪನ್ಮೂಲ ಲೂಟಿ ಮಾಡುವ ಕೆಲವು ಸ್ವಾಮಿಗಳಿಗೂ ಈ ಮುಕುಂದೂರಿನ ಸ್ವಾಮಿಗೂ ಎತ್ತಣ ಸಂಬಂಧ ಎಂದು ತೋರಿದರೂ ಆಶ್ಚರ್ಯವಿಲ್ಲ. ಒಬ್ಬ ಅಹಂಕಾರಿ, ಸ್ವಾಮಿಯೊಬ್ಬ ತನ್ನ ಮಠಕ್ಕೆ ಬಂದು ಪೊಗರು ತೋರಿಸಿದರೂ ತನ್ನ ಸಂಸ್ಕೃತಿ ಕಲಿಸಿದ ವಿನಯ ವಿಧೇಯತೆ ಯನ್ನ ಮೋಹಕವಾಗಿ ಪ್ರದರ್ಶಿಸಿ ಮನಃಪೂರ್ವಕ ಆ ಸ್ವಾಮಿಯ ಸೇವೆ ಮಾಡುವ ಇವರ ಉದಾತ್ತ ಸಂಸ್ಕಾರ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಅಹಂಕಾರಿಗೆ ಅಹಂಕಾರವೇ ಉತ್ತರ ಎನ್ನುವ ನಮಗೂ ಆ ಸ್ವಾಮಿಗೂ ಇರುವ ವ್ಯತ್ಯಾಸ ನೋಡಿ.

ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ. ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ, ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ. ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು.

ಒಮ್ಮೆ ತನ್ನ ಮೂರು ವರ್ಷದ ಮಗು ಗುಲಾಬಿ ಕೀಳಲು ಗಿಡದ ಕಡೆ ಹೋಗುತ್ತಿದ್ದನ್ನು ಕಂಡ ಮಗುವಿನ ತಾಯಿ “ಅಯ್ಯೋ, ಅಯ್ಯೋ, ಮುಳ್ಳು, ಮುಳ್ಳು, ಮುಟ್ಟಬೇಡ ಎಂದು ಮಗುವನ್ನು ತಡೆದುದನ್ನು ಕಂಡ ಸ್ವಾಮಿಗಳು ಹೇಳಿದ್ದು, ಅಮ್ಮಯ್ಯಾ, ಆ ಮಗುವಿಗೆ ಹೂವಿನ ಗಿಡದಾಗೆ ಮುಳ್ಳು ಐತೆ ಅಂತ ಹೇಳ್ಕೊಡಬ್ಯಾಡ, ಮುಳ್ಳಿನ ಗಿಡ್ಯಾಗೆ ಹೂ ಐತೆ ಅಂತ ಹೇಳ್ಕೊಡಬೇಕು ಎಂದು ನಗುತ್ತಾ ಹೇಳುತ್ತಾರೆ. ಈ ಮಾತು ನಾವು ಕಲಿತ “half glass full” ಗಿಂತ ಮನೋಹರವಾಗಿಲ್ಲವೇ?

ಕವನ ವಾಚನ

ಬದುಕೇ, ನೀನಾರೆಂದು ನನಗೆ ತಿಳಿದಿಲ್ಲ

ಇಷ್ಟು ಮಾತ್ರ ಗೊತ್ತು ನಾವು ಅಗಲಲೇಬೇಕು

ಹೇಗೆ, ಯಾವಾಗ, ಎಲ್ಲಿ ನಾವು ಭೆಟ್ಟಿಯಾದೆವು

ನನಗದು ರಹಸ್ಯವೆ ಈಗಲೂ.

ಏಳು ಬೀಳುಗಳನ್ನು ಒಟ್ಟಿಗೆ ಕಂಡೆವು ನಾವು

ನಿಜಕ್ಕೂ ಕಷ್ಟಕರ ಮಿತ್ರರು ಅಗಲುವುದು

ಅಗಲಿಕೆ ಸಮಯ ನೀನೇ ನಿಶ್ಚಯಿಸಿಕೋ

ಹೇಳಬೇಡ ವಿದಾಯವ ಎಂದಿಗೂ

ಬದಲಿಗೆ ಹಾರೈಸುವೆಯಾ 

ಶುಭ ಮುಂಜಾನೆಯ..

R . Barbauld ರವರ ಕವಿತೆಯ ಅನುವಾದ   

ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು

ಬದುಕಿನಲ್ಲಿ ಮನೆಯವರಿಂದ , ನೆಂಟರಿಂದ , ಮಿತ್ರರಿಂದ, ಸಹೋದ್ಯೋಗಿಗಳಿಂದ ಬಹಳಷ್ಟು ಕುಹಕಗಳನ್ನು, ಕಟು ಮಾತುಗಳನ್ನ ಕೇಳಿರುತ್ತೇವೆ. ನಿನ್ನ ಕೈಯ್ಯಿಂದ ಏನೇನೂ ಆಗದು, ನೀನು ದಡ್ಡ, ಮೂರ್ಖ, ಕೋಪಿಷ್ಠ, ನಿನ್ನನ್ನು ಕಂಡರೆ ಯಾರಿಗೂ ಆಗೋದಿಲ್ಲ್ಲ, ನಿನ್ನ ಮುಖ ನೋಡು, ಇನ್ನೂ ಸ್ವಲ್ಪ ಚೆನ್ನಾಗಿ, ನೋಡುವಂತಿದ್ದರೆ ಏನು ಮಾಡುತ್ತಿದ್ದೆಯೋ, ನೀನ್ಯಾಕೆ ಹೀಗೇ, ನೀನು “ಸ್ಟ್ರೇಂಜ್”,  “ವೀರ್ಡ್” ಹೀಗೇ ಸಾಗುತ್ತವೆ ಗುಣಗಾನಗಳು. ಇವನ್ನು ಒದರುವವರಿಗೆ ತಿಳಿದಿರುವುದಿಲ್ಲ ಈ ಮಾತುಗಳು ಮನಸ್ಸಿಗೆ ಮಾತ್ರವಲ್ಲ ನಮ್ಮ self worth ಮೇಲೂ ಯಾವ ಪರಿಣಾಮ ಬೀರುತ್ತವೆ ಎಂದು. ಕೆಲವರಿಗೆ ಟೀಕಿಸೋದರಲ್ಲೇ ಏನೋ ಒಂದು ಸುಖ, ನೆಮ್ಮದಿ. ಯಾರನ್ನಾದರೂ ಕಟು ಮಾತುಗಳಲ್ಲಿ ಹಳಿದ ಮೇಲೆ ಏನನ್ನೋ ಸಾಧಿಸಿದ ಹಾಗೆ. ಚೆನ್ನಾಗಿ ಉರ್ಕೊಂಡ ಎಂದು ಒಳಗೊಳಗೇ ಸಂತಸ. ಇನ್ನು ಕೆಲವರಿಗೆ ತಮ್ಮ ಕುಟುಕು ಮಾತು ಜನರಿಗೆ ನೋವುಂಟು ಮಾಡುತ್ತದೆ ಎನ್ನುವ ಪರಿವೆಯೂ ಇರುವುದಿಲ್ಲ. ಚೆನ್ನಾಗಿ ಬೊಗಳಿದ ನಂತರ ಬಾಲವನ್ನು ಕುಂಡೆ ಯಡಿಗೆ ಸೇರಿಸಿ ನಡೆಯುವ ನಾಯಿಯಂತೆ ಜಾಗ ಖಾಲಿ ಮಾಡುತ್ತಾರೆ.  

ಇಂಥ ತಿಳಿಗೇಡಿಗಳು, ಮತಿಹೀನರು, ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವುದೂ ಕೆಲವೊಮ್ಮೆ ಅಸಾಧ್ಯವೇ. ಹಾಗಾದ್ರೆ ಕೊರಗಿ ಕೊರಗಿ ಮನಸ್ಸು ಕೆಡಿಸಿಕೊಳ್ಳ ಬೇಕೋ? ಬೇಡ, ಅಂಥ ವ್ಯಕ್ತಿಗಳ ಸಹವಾಸವನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಮೊದಲನೆಯದಾಗಿ ಮಾಡಬೇಕಾದ ಕೆಲಸ. ಸ್ವತಃ ಮನೆಯವರೇ ಆದರೆ? ಅವರಿಗೆ ತಿಳಿ ಹೇಳೋದು ಕಷ್ಟವಾದರೂ ಜಾಣ್ಮೆಯಿಂದ, ನಾಜೂಕಿನಿಂದ ವಿವರಿಸಬೇಕು. ಆದರೆ ಆಗೊಮ್ಮೆ ಈಗೊಮ್ಮೆ ಸನ್ನಡತೆಯ, ಸ್ವೀಟ್ ನೇಚರ್ ನ ಜನರನ್ನೂ ನಾವು ಕಾಣುತ್ತೇವೆ. ಮುಕ್ತ ಕಂಠದಿಂದ ಹೊಗಳುವ, ಮೆಚ್ಚುಗೆ ವ್ಯಕ್ತಪಡಿಸುವ, ಒಳ್ಳೆಯ ಮಾತನ್ನಾಡುವ, ನಮ್ಮ ಮೇಲೆ ನಮಗೇ ಅಭಿಮಾನ ಮೂಡುವಂತೆ  ಮಾಡುವ ಜನರೂ ಇಲ್ಲದ್ದಿಲ್ಲ. ಅಂಥವರ ಸಹವಾಸ ಮನಸ್ಸಿಗೆ ಮುದ ನೀಡುತ್ತದೆ, ಅಂಥವರು ಆದರ್ಶ ಸಂಗಾತಿಗಳು. ಒಬ್ಬ ವ್ಯಕ್ತಿ ವ್ಯಾಯಾಮ ನಿರತನಾಗಿದ್ದಾಗ ಅವನ ಲಾಕರ್ ನಲ್ಲಿ ಅವನ ಸ್ನೇಹಿತ ಒಂದು ಚಿಕ್ಕ ಚೀಟಿಯನ್ನು ಇಟ್ಟು ಹೋಗಿರುತ್ತಾನೆ, ತೆರೆದು ನೋಡಿದಾಗ ಅದರಲ್ಲಿ ಹೀಗೇ ಬರೆದಿರುತ್ತದೆ;

“ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ, ನೀನು ಜ್ಞಾನದಲ್ಲಾಗಲಿ, ಅನುಭವದಲ್ಲಾಗಲಿ ಕಡಿಮೆಯಲ್ಲ. ನೀನು ನಿಷ್ಠುರವಾಗಿ ಮಾತನಾಡಿದರೂ ಸತ್ಯವನ್ನೇ ನುಡಿಯುವೆ, ಕ್ರಿಯಾಶೀಲತೆ ಇದೆ ನಿನ್ನಲ್ಲಿ, ನೀನು ಮಾತಿಗೆ ತಪ್ಪುವವನಲ್ಲ, ನಿನ್ನಿಂದಾದ ಸಹಾಯ ಮಾಡಲು ನೀನು ಯಾವಾಗಲೂ ತಯಾರು. ನಿನ್ನದು ನಿನಗೇ ತಿಳಿಯದಷ್ಟು ಉನ್ನತ ಮೌಲ್ಯಗಳುಳ್ಳ ವ್ಯಕ್ತಿತ್ವ, ಇಂದಲ್ಲ ನಾಳೆ ಯಶಸ್ಸು ನಿನ್ನನ್ನು ಹುಡುಕಿಕೊಂಡು ಬಂದೆ ಬರುತ್ತದೆ”. ನಾವೆಂದಾದರೂ ನೊಂದ ಆತ್ಮಗಳಿಗೆ ಇಂಥ ಸಾಂತ್ವನದ ನುಡಿಗಳನ್ನು ಹೇಳಿದ್ದೇವೆಯೇ, ಬರೆದಿದ್ದೇವೆಯೇ?

ನಿಮ್ಮ ವಯಸ್ಸೇನು?

How old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವರ ಸೆನ್ಸ್ ಆಫ್ ಫ್ಯಾಶನ್ ಮತ್ತು ಆಕರ್ಷಕ ಮೈ ಮಾಟ ತಮಗೆ ಬೇಕಾದ ಉಡುಗೆಯನ್ನು ತೊದಲು ಜನರನ್ನು ಪ್ರೇರೇರಿಪಿಸುತ್ತದೆ. ಇದೇನು ಬುರ್ಖಾದಿಂದ ಮಿನಿ ಸ್ಕರ್ಟ್ ಗೆ “ಕುಸಿಯಿತೆ”  ನಿನ್ನ ಅಭಿರುಚಿ ಎಂದು ಹುಬ್ಬೇರಿಸಬೇಡಿ. ಈ ಲೇಖನ ಯಾವುದೇ political statement ಮಾಡ್ತಾ ಇಲ್ಲ, ಬದಲಿಗೆ ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಮನುಷ್ಯ ಯಾವ ಯಾವ ರೀತಿ ಬಟ್ಟೆ ತೊಡುತ್ತಾನೆ/ಳೆ ಎನ್ನುವ ಮೇಲೊಂದು ಪಕ್ಷಿ ನೋಟ. ಬಟ್ಟೆ ಧರಿಸುವಾಗ ವಯಸ್ಸನ್ನೂ ಗಮನಕ್ಕೆ ಇಟ್ಟು ಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಅಭಿಪ್ರಾಯ. ಒಂದು ಲೆಕ್ಕದಲ್ಲಿ ಇದು ಸರಿಯೂ ಕೂಡಾ. ಮೇಲೆ ಹೇಳಿದಂತೆ ೭೦ ರ ಮಹಿಳೆ ಮಿನಿ ಸ್ಕರ್ಟ್ ತೊಟ್ಟರೆ ಒಂದು ರೀತಿಯ ಅಭಾಸವಾಗುತ್ತದೆ. ನಿಲ್ಲಿ, ನಿಲ್ಲಿ, ಅಭಾಸ ಏಕಾಗಬೇಕು? ನಿಕೃಷ್ಟ ಉಡುಗೆ ತೊಡುವುದನ್ನು ವಿರೋಧಿಸುವವರಿಗೆ ನಾವು ಹೇಳುವ ಕಿವಿ ಮಾತು ಉಟ್ಟ ಬಟ್ಟೆ ಮಾತ್ರ ನೋಡಿದರೆ ಸಾಕು, ಅದರೊಂದಿಗೇ ಬರುವ ಉಬ್ಬು ತಗ್ಗುಗಳನ್ನಲ್ಲ ಎಂದು. ಒಪ್ಪಿಕೊಂಡೆ. ಉಡುಗೆ ಬರೀ ಫ್ಯಾಶನ್ ಸೆನ್ಸ್ ನ ಮಾತ್ರ ಬಿಂಬಿಸಿದರೆ ೧೬ ರ ಪೋರಿಯ ಥರ ೭೦ ರ ಚೆಲುವೆ ಸಹ ಏಕೆ ಮಿನಿ ಸ್ಕರ್ಟ್ ಹಾಕಬಾರದು? ಒಹ್, ಎಪ್ಪತ್ತರ ಮಹಿಳೆಗೆ ೧೬ ರ ಅಂಗ ಸೌಷ್ಠವ ಇಲ್ಲ ಎಂದಿರಬೇಕು, ಹಾಗಾದರೆ ಎಲ್ಲಿ ಹೋಯಿತು ಫ್ಯಾಶನ್ ಸೆನ್ಸ್. ಇಲ್ಲಿರೋದು ಅಪ್ಪಟ ಲೈಂಗಿಕತೆ ಅಲ್ಲವೇ ನಮ್ಮ ನೋಟದಲ್ಲಿ? ವಾದ ವಿವಾದ ಬಂದಾಗ ಅಭಿರುಚಿ, ಫಾಶನ್ ಸೆನ್ಸ್, ಇಲ್ಲದಿದ್ದರೆ  ವಾರೆನೋಟ ಕನಿಷ್ಠ ಉಡುಗೆ ತೊಟ್ಟವರ ಕಡೆ. political statement ಬೇಡ ಎಂದು ಕೊಂಡರೂ ನುಸುಳಿಕೊಂಡಿತು ದರಿದ್ರ ರಾಜಕೀಯ. ವಿಷಯಕ್ಕೆ ಬರೋಣ…

ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ (೯೦ ರ ದಶಕದಲ್ಲಿ) ಅವರಿಗೆ ಪ್ರಾಯ ಹೆಚ್ಚಿರಲಿಲ್ಲ. ೪೫-೫೦ ರ ಸಮೀಪ. ಆಗಾಗ ಜೀನ್ಸ್, ಟೀ ಶರ್ಟ್ ಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದರು. ಕ್ಲಿಂಟನ್ ಅವರದು ಆಕರ್ಷಕ ವ್ಯಕ್ತಿತ್ವ. ಬರೀ ಉಡುಗೆ ಯಲ್ಲಿ ಮಾತ್ರವಲ್ಲ, ಸಂಗೀತದಲ್ಲೂ ಆಸಕ್ತಿ. “ಸಾಕ್ಸೋ ಫೋನ್” ನುಡಿಸುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ಸಾರ್ವಜನಿಕ ಸಭೆಗಳಲ್ಲಿ ನುಡಿಸುತ್ತಿದ್ದರು. ಅಧ್ಯಕ್ಷರ ಘನತೆಗೆ ಈ ವರ್ತನೆ ಕುಂದು ಎಂದು ಸಲಹೆಗಾರರು ಕಿವಿ ಮಾತನ್ನು ಹೇಳಿದಾಗ ನಿಲ್ಲಿಸಿದ್ದರು ಸಾಕ್ಸೋ ಫೋನ್ ಸಹವಾಸವನ್ನು. ಹೀಗೆ ಕ್ಲಿಂಟನ್ ಜೀನ್ಸ್ ತೊಟ್ಟಾಗ ಜನ ಹೇಳುತ್ತಿದ್ದದ್ದು ೪೦ ವಯಸ್ಸಿನ ನಂತರ ಜೀನ್ಸ್ ತೊಡುವುದಕ್ಕೆ you need to be brave ಎಂದು. ಅಂದರೆ ಜೀನ್ಸ್ ಅನ್ನು ಹದಿಹರೆಯದವರು, ಕಾಲೇಜಿಗೆ ಹೋಗುವವರು, ಹೀಗೇ ಯುವಜನರು ಮಾತ್ರ ತೊಡಬೇಕು ಎನ್ನುವ ಅಲಿಖಿತ ನಿಯಮ. ಆದರೆ ಈಗ ನೋಡಿ, ೯೦ ರ ತರುಣನೂ (ತರುಣ ಎಂದಾಗ ವ್ಯಂಗ್ಯ ಇಲ್ಲ, ಏಕೆಂದರೆ ವಯಸ್ಸು ೯೦ ಆದರೂ young at heart ಎಂದು ಕೊಳ್ಳುವ ಜನರಿದ್ದಾರೆ) ತೊಡುತ್ತಾನೆ ಜೀನ್ಸ್. ಸುಮಾರು ಐವತ್ತರ ಆಸುಪಾಸಿನ ನನಗೆ ಪರಿಚಯದ ವ್ಯಕ್ತಿಯೊಬ್ಬರು ಜೀನ್ಸ್ ಮಾತ್ರವಲ್ಲ ಕಾಲಿನ ತುಂಬಾ ಜೇಬುಗಳೇ ಇರುವ ಕಾರ್ಗೋ ಪ್ಯಾಂಟುಗಳನ್ನು ಧರಿಸುತ್ತಿದ್ದರು, ಆತ್ಮ ವಿಶ್ವಾಸದಿಂದ. ನೋಡಿ ಇಲ್ಲಿದೆ ಮಂತ್ರ. ಯಾವುದೇ ಉಡುಗೆ ತೊಡಬೇಕಾದರೂ ಆತ್ಮವಿಶ್ವಾಸ ಬೇಕು. ಅದು ನಮ್ಮ ಮುಖದ ಮೇಲೆ, ನಮ್ಮ ಮಾತು, ನಡಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇನ್ಸ್ಟಂಟ್ ಆಗಿ ಯಂಗ್ ಆಗಿ ಬಿಡುತ್ತೇವೆ, ಆತ್ಮ ವಿಶ್ವಾಸ ಇದ್ದರೆ. ನೀವು ಏನು ತೊಡಬೇಕು ಎಂದು ನಿಮಗೇ ಅರಿವಿಲ್ಲದೆ ಬರೀ ಫ್ಯಾಶನ್ ಟ್ರೆಂಡ್ ಅನ್ನು ಹಿಂಬಾಲಿಸಿದರೆ ಕರೀ ಕಾಗೆ ಚೆಂದ ಕಾಣಲು ಸುಣ್ಣದ ಮೊರೆ ಹೊಕ್ಕ ಹಾಗಾಗಬಹುದು.

ನನ್ನ ಮರೆವು ನನಗೆ ಕೆಲವೊಮ್ಮೆ ಭಾರಿಯಾಗಿ ಕಾಣುತ್ತದೆ. ಮೊನ್ನೆ ಶಾಪ್ಪಿಂಗ್ ಮಾಡಲು ಹೋಗಿ ಎಲ್ಲೋ ನನ್ನ ಸನ್ ಗ್ಲಾಸನ್ನು ಬಿಟ್ಟು ಬಂದೆ. ಮರಳುಗಾಡಿನ ಬೇಗೆಯಲ್ಲಿ ಸನ್ ಗ್ಲಾಸಿಲ್ಲದೆ ಡ್ರೈವ್ ಮಾಡೋದು ಕಷ್ಟ. ಹತ್ತಿರದ ಆಪ್ಟಿಕಲ್ ಶಾಪಿಗೆ ಹೋಗಿ ಕೆಲವೊಂದು ಕನ್ನಡಕಗಳನ್ನು ನೋಡಿದೆ. ಸನ್ ಗ್ಲಾಸ್ ಬರೀ ಸೂರ್ಯ ಕಿರಣಗಳಿಗೆ ಮಾತ್ರವಲ್ಲ, ಅದೊಂದು fashion statement ಸಹ ಅಲ್ವರ? ಅಂಗಡಿಯವ ಸೊಗಸಾದ, ನವನವೀನ ಮಾಡೆಲ್ಲು ಗಳನ್ನು ತೋರಿಸಿದ. ನನಗೆ ಅನುಮಾನ, ಇಷ್ಟೊಂದು fashionable glasses ತೊಡುವ ವಯಸ್ಸಾ ನನ್ನದು ಎಂದು. ನೀವೆಷ್ಟೇ modern outlook ನವರಾದರೂ ದರಿದ್ರ ಸಮಾಜ ಯಾವ ರೀತಿ ನಮ್ಮ ಮತಿಯೊಳಕ್ಕೆ ಬೇಡದ್ದನ್ನು ತುರುಕಿರುತ್ತೋ ಅದು ತನ್ನ ತಲೆಯನ್ನ ಆಗಾಗ ಎತ್ತುತ್ತಿರುತ್ತಲೇ ಇರುತ್ತದೆ. ನನ್ನ ಈ ವಯಸ್ಸಿನ apprehension ಅನ್ನು ನನಗೆ ಗೊತ್ತಿಲ್ಲದೇ ಸೇಲ್ಸ್ ಮ್ಯಾನ್ ಗೆ ಆಡಿಯೂ ತೋರಿಸಿಬಿಟ್ಟೆ, i am not that young to wear those glasses ಎಂದು. lack of confidence? ಕೆಲವೊಮ್ಮೆ ಈ ಲ್ಯಾಕ್ ಆಫ್ ಕಾನ್ಫಿಡೆನ್ಸ್ ಸಹ ಕೆಲಸಕ್ಕೆ ಬರುತ್ತೆ ಅನ್ನಿ.  ಸಾಕಷ್ಟು ಕನ್ನಡಕಗಳನ್ನು ನೋಡಿದ ನಂತರ  ಅಲ್ಲಿ, ಇಲ್ಲಿ ಎಂದು ಚದುರಿ ಹೋಗಿದ್ದ ಕಾನ್ಫಿಡೆನ್ಸ್ ಅನ್ನು gather ಮಾಡಿ ನನಗಿಷ್ಟವಾದ, ಸ್ವಲ್ಪ ಮಾಡರ್ನೇ ಆದ “ತಂಪು ಕನ್ನಡಕ” ಕೊಂಡು ಅಂಗಡಿಯಿಂದ ಹೊರನಡೆದೆ ಹೋಡೀ, ವಯಸ್ಸಿಗೊಂದು ಗೋಲಿ ಎನ್ನುತ್ತಾ.

ಕನಿಷ್ಠ ಶಬ್ದಗಳು, ಗರಿಷ್ಠ ಭಾವನೆಗಳು

“ಎಷ್ಟು ಸುಂದರವಾಗಿದೆ ಈ ಗುಡ್ಡ”

ನಾನಾಗಲೇ ಹೇಳಿದೆ ನಿನಗೆ” ಅವನೆಂದ ಚಹಾ ಹೀರುತ್ತಾ.

“ಹ್ಮ್ ಹ್ಮ್”

“ನಾವು ಯಾವುದಕ್ಕಾಗಿ ಬಂದಿದ್ದೆವೆಯೋ ಅದಕ್ಕೆ ಇದು ಪ್ರಶಸ್ತವಾದ ಸ್ಥಳ”  

“ಹೌದು ನಿರ್ಜನ ಪ್ರದೇಶ”

 “ಸುಂದರ ನಿಸರ್ಗ”  

“ರೋಮಾಂಟಿಕ್”

“ಆದರೆ ಈ ಸ್ಥಳ ರೋಮಾಂಟಿಕ್ ಆಗೋ ಅವಶ್ಯಕತೆ ಇರಲಿಲ್ಲ”

“ಸರಿ, ನಾವೇನು ಮಾಡೋಣ?”

ಆಕೆಯ ಪರ್ಸನ್ನು ಆಕೆಗೆ ಮರಳಿಸಿದಾಗ ಆಕೆ ಅದರ ಒಳಗೆ ನೋಡಿದಳು.

“ಇದರೊಳಗೇನೂ ಕಾಣ್ತಾ ಇಲ್ಲ ನನಗೆ”

“ಸರಿಯಾಗಿ ನೋಡು”

“ಇದ್ದರೆ ನನಗೆ ಕಾಣೋದಿಲ್ವಾ?

ಆಕೆ ಸರಿಯಾಗೇ ನೋಡಿದಳು, ಏನೂ ಕಾಣದಾದಾಗ ಬ್ಯಾಗನ್ನು ಬರಿದುಗೊಳಿಸಿದಳು, ಎಲ್ಲವನ್ನೂ ಕೆಳಕ್ಕೆ ಸುರಿದಳು  

ಇದೋ ಇಲ್ಲಿ ಎಂದು ಅವನು ಒಂದನ್ನು ಕೈಗೆತ್ತಿ ಕೊಂಡನು, ಅವಳಿಗೂ ಸಿಕ್ಕಿತು ಒಂದು.   

“ನನಗೆ ಈ “ನೀರ್ಗುಳ್ಳೆ” ಯೊಂದಿಗೆ ಆಡುವುದೆಂದರೆ ತುಂಬಾ ಇಷ್ಟ” ಎಂದಳು ಹುಬ್ಬನ್ನು ಹಾರಿಸುತ್ತಾ.

ಮೂಲ: ಆಂಗ್ಲ ಬ್ಲಾಗೊಂದರಲ್ಲಿ ಸಿಕ್ಕಿದ್ದು.

ರಾತ್ರಿ ತರಗತಿ

ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು.

ರಾಮನ್:  ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ.

ನಾರಯಣ್: ಓಹ್

ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು ನಿನಗೆ ಗೊತ್ತಾ?

ನಾರಾಯಣ್: ಇಲ್ಲ.

ರಾಮನ್: ಗ್ರಹಾಮ ಬೆಲ್ ಅಲ್ಲವೇ ೧೮೭೬ ರಲ್ಲಿ ಟೆಲಿ ಫೋನ್ ಕಂಡುಹಿಡಿದವನು? ನೀನು ರಾತ್ರಿ ತರಗತಿಗೆ ಹೋದರೆ ಇವೆಲ್ಲಾ ತಿಳಿಯುತ್ತವೆ.

ಮಾರನೆ ದಿನ…

ರಾಮನ್: ಹೋಗಲಿ ನಿನಗೆ ಅಲೆಕ್ಸಾಂಡರ್ ಡೂಮ ಯಾರೂಂತ ಗೊತ್ತಾ?

ನಾರಾಯಣ್: ಇಲ್ಲ

ರಾಮನ್: ಅವನು ಸುಪ್ರಸಿದ್ಧ ಕಾದಂಬರಿಕಾರ. ಅವನೇ three musketeers ಪುಸ್ತಕ ಬರೆದದ್ದು.

ಹೀಗೆ ಪ್ರತೀ ದಿನ ರಾಮನ್ ತನ್ನ ಜ್ಞಾನದ ಬಗ್ಗೆ ನಾರಾಯಣನಲ್ಲಿ ಕೊಚ್ಚುತ್ತಿದ್ದ. ಬೇಸತ್ತಿದ ನಾರಾಯಣ್ ಕೇಳ್ದ, ರಾಮನ್, ನಿನಗೆ ಬಾಲಕೃಷ್ಣನ್ ಕುಪ್ಪುಸ್ವಾಮಿ ಯಾರೂಂತ ಗೊತ್ತಾ?

ರಾಮನ್: ಇಲ್ಲ, ಗೊತ್ತಿಲ್ಲ.

ನಾರಾಯಣ್: ಅಯ್ಯೋ, ಅವನೇ ಇಲ್ಲವೇ ನಿನ್ನ ಹೆಂಡತಿಯ ಜೊತೆ ರಾತ್ರಿಯಲ್ಲಿ ತಿರುಗುತ್ತಾ ಇರೋದು. ನೀನು ಈ ರಾತ್ರಿ ತರಗತಿಗಳನ್ನು ನಿಲ್ಲಿಸಿದರೆ ಇದು ನಿನಗೆ ತಿಳಿಯಬಹುದು” ಎಂದು ಹೇಳಿದ.

moral of the story:

ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ

ಓಹ್, ನಿನ್ನ ಛಲವೇ

                                                      

ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ. 

ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ ಶರಣಾದವು.  ೧೩ ಶಿಖರಗಳನ್ನು ಗೆದ್ದ ಈ ಮಹಿಳೆ ಕೊನೆಯದಾದ ೨೬,೨೪೭ ಅಡಿ ಎತ್ತರದ ಅನ್ನಪೂರ್ಣ ಶಿಖರವನ್ನು ಮೊಣಕಾಲೂರಿ ಜಯಿಸಿದಳು. ಮೊಣ ಕಾಲೂರಿದ್ದು ಈ ಕೆಚ್ಚ್ಚೆದೆಯ ನಾರಿಯಾದರೂ ವಾಸ್ತವವಾಗಿ ಮೊಣಕಾಲೂರಿ ಶರಣಾಗಿದ್ದು ಅನ್ನಪೂರ್ಣೆಯೇ.

ಓಹ್. ನಮ್ಮ ತೆಂಡೂಲ್ಕರ್ ಒಂದೊಂದೇ ದಾಖಲೆಗಳನ್ನ ಬೆನ್ನತ್ತುವಂತೆ 14 ಶಿಖರಗಳ ಮಣಿಸಿದ ಈಕೆಯ ಹೆಸರು “ಓಹ್ ಯೂನ್ ಸುನ್”. ಬಹುಶಃ ಅತ್ಯುತ್ಸಾಹದ, ಚಿಮ್ಮುವ ಹದಿಹರೆಯದ ಹೆಣ್ಣೋ, ಇಪ್ಪತ್ತರ ತಾರುಣ್ಯವೋ, ಮೂವತ್ತರ ಯೌವ್ವನವೋ ಅಲ್ಲ ಈಕೆಗೆ. ೪೪ ವರ್ಷ ವಯಸ್ಸಿನ ಕೊರಿಯಾದ ಈ ಮಹಿಳೆ ಇದೆ ಆಸುಪಾಸಿನ ವಯಸ್ಸಿನ ಜನರು ನಾಚುವಂಥ ಸಾಧನೆ ಮಾಡಿದಳು. ನಮ್ಮಲ್ಲಿ ೪೦ ಅಂದರೆ ಮುಗಿಯಿತು, ಅದರಲ್ಲೂ ನಮ್ಮ ಹೆಣ್ಣು ಮಕ್ಕಳಿಗಂತೂ ಮದುವೆಯಾಗಿ ಒಂದೆರಡು ಮಕ್ಕಳಾದ ಕೂಡಲೇ ವೈರಾಗ್ಯ ಆವರಿಸಿ ಬಿಡುತ್ತದೆ. ಇನ್ನು ಏನಾದರೂ ಧೈರ್ಯ ಮಾಡಿ ಮನಸ್ಸಿನ ಆಸೆಗಳನ್ನು ಪೂರೈಸುವತ್ತ ಯಾವುದಾದರೂ ಹೊಸ ಚಟುವಟಿಕೆ  ಆರಂಭಿಸಿದರಂತೂ ನೋಡುವವರಿಗೆ ಹೆಚ್ಚು ಕನಿಕರ. ಈ ವಯಸ್ಸಿನಲ್ಲಿ ಇದೆಲ್ಲಾ ಯಾಕೆ ಎಂದು ಉತ್ಸಾಹಕ್ಕೆ ತಣ್ಣೀರೆರೆಚಿ ಮೂಲೆ ತೋರಿಸುತ್ತಾರೆ ಕೂರಲು. ಆದರೆ ಈ ಡಬ್ಬಲ್ ನಾಲ್ಕು (೪೪) ಸಂಖ್ಯೆ ಈಕೆಯ ಉತ್ಸಾಹವನ್ನು ಕುಗ್ಗಿಸುವ ಬದಲು ಎತ್ತರ ಏರಲು ಪ್ರೇರೇಪಿಸಿತು. ಎತ್ತರ ಎಂದರೆ ಸಾವಿರಾರು ಅಡಿಗಳ ಎತ್ತರ. ಹಿಮಾಲಯ ಪರ್ವತ ಶ್ರೇಣಿ ಎಂಥವರ ಎದೆಯನ್ನೂ ನಡುಗಿಸುವಂಥದ್ದು. ಸಾವಿರಾರು ಜನ ಶಿಖರ ಏರಲು ಹೋಗಿ ಪ್ರಾಣ ಕಳೆದುಕೊಂಡವರು. ಅದರ ಮೇಲೆ ಏತಿ ಇದೆ, ಗೀತಿ ಇದೆ ಎಂದು ಭಯ ಹುಟ್ಟಿಸುವವರು ಬೇರೆ. ಆದರೆ ಸಾಧಿದಬೇಕು ಎಂದು ಛಲವಿರುವವರಿಗೆ ಛಲವೇ ಅವರ ಸಂಗಾತಿ, ನೆರಳಿನಂತೆ ಹಿಂಬಾಲಿಸುತ್ತದೆ.

ಆರೋಹಣ ಮಾಡಿದ ಕೂಡಲೇ ತನ್ನ ದೇಶದ ಬಾವುಟವನ್ನು ಬೀಸಿ ಹಿಡಿದ ಈಕೆಗೆ ದಕ್ಷಿಣ ಕೊರಿಯಾದ ಅಧ್ಯಕ್ಷರು ಅಭಿನಂದಿಸುತ್ತಾ ಹೇಳಿದ್ದು,

“She is really great and I’m proud of her,”  

ಈ ಮಹಿಳೆ ೨೦೦೪ ರಲ್ಲಿ ಎವೆರೆಸ್ಟ್ ಪರ್ವತವನ್ನು ಆರೋಹಣ ಮಾಡಿದ್ದಳು.  

ಚಿತ್ರ ಕೃಪೆ: ಯಾಹೂ