ರಮದಾನ್ ಶುಭಾಶಯಗಳು

 

ನಾಳೆ ಪವಿತ್ರ ರಮದಾನ್ ನ ಪ್ರಥಮ ದಿನ ಎಂದು ಸೌದಿ ಅರೇಬಿಯಾ ಮತ್ತು ಇತರ ರಾಷ್ಟ್ರಗಳು ಘೋಷಿಸಿವೆ. ಸಾವಿರ ಮಾಸಗಳಿಗಿಂತಲೂ ಶ್ರೇಷ್ಠ ಎಂದೂ, ವ್ರತಾಚರಣೆಯ ಪವಿತ್ರ ಮಾಸ ಎಂದೂ ಅರಿಯಲ್ಪಡುವ ರಮದಾನ್ ಜಗದಾದ್ಯಂತ ಮುಸ್ಲಿಂ ಬಾಂಧವರಲ್ಲಿ ಧಾರ್ಮಿಕ ಸಂಚಲನೆ ಆರಂಭಿಸಲಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಇನ್ನೂರು ಕೋಟಿ ಮುಸ್ಲಿಂ ಬಾಂಧವರಲ್ಲಿ ಸುಮಾರು ನೂರು ಕೋಟಿಗೂ ಹೆಚ್ಚು ಜನ ದಿನ ಪೂರ್ತಿ ಉಪವಾಸ ಇದ್ದು ಪವಿತ್ರ  ಕುರಾನ್ ಪಠಣ, ನಮಾಜ್, ದಾನ, ಮುಂತಾದ ಸತ್ಕರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅತ್ಯಪೂರ್ವವಾದ ಧಾರ್ಮಿಕತೆ ವಿಶ್ವವನ್ನು ಬೆರಗುಗೊಳಿಸಲಿದೆ.

ರಮಾದಾನ್ ಮಾಸದ ಚಂದ್ರ ದರ್ಶನ ಆಗುತ್ತಲೇ ಸಮಾಜ ಬಾಂಧವರು ಪರಸ್ಪರರನ್ನು ಅಭಿನಂದಿಸುತ್ತಾ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಫೇಸ್ ಬುಕ್, ಯೂ ಟ್ಯೂಬ್ ತಾಣಗಳಲ್ಲಿ ರಮಾದಾನ್ ಸಂದೇಶಗಳು ಆಗಮಿಸುತ್ತಿವೆ.  twitter ತಾಣವಂತೂ ರಮಾದಾನ್ tweet  ಗಳ ಅಭೂತಪೂರ್ವ ಸುಗ್ಗಿಯನ್ನೇ ಕಾಣುತ್ತಿದೆ. twitter ನಲ್ಲಿ ಸಿಕ್ಕ tweet  ಹೀಗಿವೆ ನೋಡಿ….

Ramadan is the time when you reboot your soul…

I wish everyone on the planet a beautiful ramadan..

Ramadan is coming, Shaitan is leaving…

Let us reflect on the year that has passed…

ರಮದಾನ್ ಮಾಸ ಮುಸ್ಲಿಂ ಬಾಂಧವರಿಗೂ, ಹಿಂದೂ, ಕ್ರೈಸ್ತ, ಸಿಖ್, ಬುದ್ಧ, ಜೈನ, ಪಾರ್ಸಿ, ಯಹೂದ್ಯ ಮತ್ತಿತರ ಧಾರ್ಮಿಕ ಬಾಂಧವರಿಗೂ ಸಂತಸ, ಉಲ್ಲಾಸವನ್ನು ತರಲಿ, ದೇಶದಲ್ಲಿ ಸುಭಿಕ್ಷೆ ಹೆಚ್ಚಲಿ, ಕೈ ಕೊಟ್ಟು ಕೂತಿರುವ ಮಳೆರಾಯ ರಮಾದಾನ್ ತಿಂಗಳ ಪುಣ್ಯದಿಂದ ಮೋಡಗಳನ್ನು ಕರಗಿಸಿ ಭೂಮಿಗೆ ನವ ಚೇತನ ತರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಾ ,

 

ಸರ್ವರಿಗೂ ರಮಾದಾನ್ ತಿಂಗಳ ಶುಭಾಶಯಗಳು.

 

 

ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

“ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ ಇವರುಗಳು ಹೀಗೆ ಮಾತನಾಡಿದಾಗಲೇ ಚೆನ್ನ. ಅಸಹನೆಯೇ ಅವರ ಉಸಿರು, ಹಾಗಾಗಿ ಅವರ ಬಾಯಲ್ಲಿ ನೀಟ್ ಆಗಿ ಫಿಟ್ ಅಗೋ ಮಾತುಗಳು ಅವು. ಆದರೆ ಈ ಮಾತನ್ನು ಸೆಕ್ಯುಲರ್ ದೇಶ ಎಂದು ಹೆಮ್ಮೆ ಪಡುವ ಬ್ರಿಟನ್ ದೇಶದ ಪ್ರಧಾನಿ ಹೇಳಿದ್ದು ಎಂದಾದ ಮೇಲೆ ಈ ಮಾತಿನ ಕಡೆ ಸ್ವಲ್ಪ ಗಮನ ಅತ್ಯಗತ್ಯ.

“ಕಿಂಗ್ ಜೇಮ್ಸ್” ಬೈಬಲ್ ನ ೪೦೦ ವಾರ್ಷಿಕೋತ್ಸವದ ವೇಳೆ ‘ಚರ್ಚ್ ಆಫ್ ಇಂಗ್ಲೆಂಡ್’ ಗೆ ಸೇರಿದ ಪಾದ್ರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು ಡೇವಿಡ್ ಕೆಮರೂನ್. ಇದೇ ಮಾತನ್ನು ನಮ್ಮ ದೇಶದ ಪ್ರಧಾನಿ ಹೇಳಿದ್ದಿದ್ದರೆ ಆಗುತ್ತಿದ್ದ ವೈಚಾರಿಕ ಅನಾಹುತ ಏನು ಎಂದು ಊಹಿಸಲು ಅಸಾಧ್ಯ. ಆದರೆ ಇಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ ಪ್ರಧಾನಿ. “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಬೀಳಬೇಕಿಲ್ಲ… ನನ್ನನ್ನು ಅರ್ಥ ಮಾಡಿಕೊಳ್ಳಿ… ಮತ್ತೊಂದು ಧರ್ಮ ಅಥವಾ ಧರ್ಮವಿಲ್ಲದಿರುವಿಕೆಯ ವ್ಯವಸ್ಥೆ ಇರುವುದು ತಪ್ಪು ಎಂದು ನಾನು ಖಂಡಿತಾ ಹೇಳುತ್ತಿಲ್ಲ” ಇದು ಪ್ರಧಾನಿಗಳ ಪೂರ್ತಿ ಮಾತುಗಳು. ಈಗ ಸ್ವಲ್ಪ ಸಮಾಧಾನ. ಏಕೆಂದರೆ ಬ್ರಿಟನ್ ಬರೀ ಕ್ರೈಸ್ತರ ದೇಶವಲ್ಲ, ಅಲ್ಲಿ, ಹಿಂದೂಗಳೂ, ಮುಸ್ಲಿಮರೂ, ಯಹೂದಿಗಳೂ ಇನ್ನಿತರ ಹಲವು ಧರ್ಮೀಯರೂ, ಧರ್ಮವಿಲ್ಲದವರೂ ಸಾಮರಸ್ಯದಿಂದ ಬದುಕುವ ದೇಶ. ಹಾಗಾಗಿ ಎಲ್ಲರೂ, ಧರ್ಮವಿಲ್ಲದವರೂ, ತಾರತಮ್ಯವಿಲ್ಲದೆ ಸಮಾನಾವಕಾಶಗಳೊಂದಿಗೆ ಬದುಕಬಹುದು ಎನ್ನುವ ಆಶಯ ಪ್ರಧಾನಿಯದು. ಅದೇ ಅವರ ನಿರೀಕ್ಷೆಯೂ ಕೂಡಾ. ಆದರೆ ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು ಎನ್ನುವುದು ಮುಗಿಯದ ಚರ್ಚೆ. “ರಾಜಕಾರಣ ಧರ್ಮವಲ್ಲ, ಅಥವಾ ಹಾಗೇನಾದರೂ ಆಗುವುದಾದರೆ ಅದು inquisition ಅಲ್ಲದೇ ಮತ್ತೇನೂ ಅಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಾರ್ಶನಿಕ ಅಲ್ಬರ್ಟ್ ಕ್ಯಾಮು ಹೇಳುತ್ತಾರೆ ( Politics is not religion, or if it is, then it is nothing but the Inquisition – albert camus, french philosopher).

Inquisition ಎಂದ ಕೂಡಲೇ ಕಣ್ಣ ಮುಂದೆ ಬರೋದು ವ್ಯಾಟಿಕನ್ ಬೆಂಬಲಿತ ಸಾಮೂಹಿಕ ಹಿಂಸೆ, ಬರ್ಬರ ಶಿಕ್ಷೆ. ಕ್ರೈಸ್ತರಲ್ಲದವರೂ, ಕ್ಯಾಥೊಲಿಕ್ ಧರ್ಮದ ಚೌಕಟ್ಟಿಗೆ ಬರದ ಕ್ರೈಸ್ತರೂ inquisition ನ ಬರ್ಬರತೆ ಅನುಭವಿಸಿದರು. ಹಾಗಾಗಿ ರಾಜಕಾರಣದಲ್ಲಿ ಧರ್ಮ ಕೂಡದು ಎಂದು ಪಾಶ್ಚಾತ್ಯ ರಾಷ್ಟ್ರಗಳ ನಿಲುವು. ಇದು ಬರೀ ನಿಲುವು ಮಾತ್ರ, ಯಥಾಸ್ಥಿತಿ ಬೇರೆಯೇ ಎಂದು ದಿನನಿತ್ಯದ ವಿದ್ಯಮಾನಗಳು ನಮಗೆ ಹೇಳುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಲ ಪಂಥೀಯ ಇವಾನ್ಜೆಲಿಸ್ಟ್ ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿರುವ ಅಮೆರಿಕೆಯಲ್ಲಿ ಇವರ ಅಬ್ಬರ ತುಸು ಹೆಚ್ಚು. ರಾಜಕಾರಣಿಗಳ ಕೈಗೆ ಧರ್ಮ ಸಿಕ್ಕಾಗ ಅದು ಚಿನ್ನದ ಸೌಂದರ್ಯ ಕಳೆದು ಕೊಂಡು ಕಳಪೆ ಉಕ್ಕಿನ ರೂಪ ಪಡೆದು ಕೊಳ್ಳುತ್ತದೆ ಎನ್ನುತ್ತಾರೆ ಲೇಖಕಿ ಯಾಸ್ಮೀನ್ ಅಲಿ ಭಾಯಿ. ಈಕೆ ಬ್ರಿಟನ್ ದೇಶದ ಪ್ರಸಿದ್ಧ ಲೇಖಕಿ. ಆಕರ್ಷಕ ಹೆಸರುಗಳೊಂದಿಗೆ ರಾಜಕಾರಣದಲ್ಲಿ ಧರ್ಮವನ್ನು ನುಸುಳಿಸಲು ಹವಣಿಸುವವರಿಗೆ ಈ ಮಾತುಗಳು ಬಹುಶಃ ಪಥ್ಯವಾಗಲಾರದು.

ಧರ್ಮದ ಸಾರವನ್ನು, ಸತ್ವವನ್ನು ಸಂಪೂರ್ಣವಾಗಿ ಅರಿತ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧಮೀಯರಿಂದ ಯಾವುದೇ ತೊಂದರೆಯಿಲ್ಲ, ಆದರೆ ಅರೆಬರೆ ಕಲಿತು ‘ಪಾರ್ಟ್ ಟೈಂ’ ಧರ್ಮಾನುಯಾಯಿಗಳಿಂದ ಗಂಡಾಂತರ ಹೆಚ್ಚು ಎಂದು ಚಾರಿತ್ರಿಕ ಘಟನೆಗಳು ಸಾಕ್ಷಿಯಾಗಿವೆ. ಧರ್ಮವನ್ನು ‘ಆಫೀಮ್’ ಎಂದು ಕಡೆಗಣಿಸುವುದಾಗಲೀ, ತನ್ನ ಧರ್ಮವೇ ಶ್ರೇಷ್ಠ ಎಂದು ಇತರರ ಬದುಕನ್ನು ದುರ್ಭರಗೊಳಿಸುವುದಾಗಲೀ ಕೂಡದು ಎನ್ನುವ ವಿವೇಚನೆಯಿದ್ದರೆ ಸಾತ್ವಿಕ ಬದುಕು ಸರಾಗ, ವೈಯಕ್ತಿಕ ಬದುಕಿನಲ್ಲೂ, ರಾಜಕೀಯ ಕ್ಷೇತ್ರದಲ್ಲೂ.

ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ಪ್ರಳಯವಂತೆ, ಇದೇ ತಿಂಗಳಂತೆ, ಸತ್ಯವಾಗ್ಲೂ ಅಂತೆ

ಪ್ರಳಯದ ಬಗ್ಗೆ ಆಗಾಗ ನಾವು ಓದುತ್ತಲೇ ಇರುತ್ತೇವೆ, ಓದಿ ಗಾಭರಿಯಾಗಿ ಸಿಕ್ಕ ಸಿಕ್ಕವರನ್ನು ವಿಚಾರಿಸುತ್ತೇವೆ. ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮೂಲದ ಖ್ಯಾತ ವಾರಪತ್ರಿಕೆ ಪ್ರಳಯದ ಬಗ್ಗೆ ಒಂದು ಲೇಖನ ಹಾಕಿ ಅದು ಎಷ್ಟು ಜನಪ್ರಿಯ ಆಯಿತು ಎಂದರೆ ಆ ಲೇಖನದ ಪುಸ್ತಿಕೆ ಸಹ ಮಾರಾಟಕ್ಕೆ ಬಂದು ಲಕ್ಷ ಗಟ್ಟಲೆ ಜನ ಕೊಂಡು ಓದಿದರು. ಇಂಥ ಜನರಲ್ಲಿ, ಗಾಭರಿ, ಭಯ, ಹುಟ್ಟಿಸಿ ಹಣ ಮಾಡಿಕೊಳ್ಳುವ ದಂಧೆ ಬಹಳ ಹಳತು. ಈಗ ಅಮೆರಿಕೆಯ ಕ್ಯಾಲಿಫೋರ್ನಿಯಾದ ಧರ್ಮ ಬೋಧಕ ಹೆರಾಲ್ಡ್ ಕ್ಯಾಂಪಿಂಗ್  ಗುಲ್ಲೆಬ್ಬಿಸಿದ್ದಾನೆ ಇದೇ ತಿಂಗಳು ೨೧ ಕ್ಕೆ ಅದೂ ಆರು ಘಂಟೆಗೆ ಸರಿಯಾಗಿ ಪ್ರಳಯವಾಗಲಿದೆ ಅಂತ. ಪವಿತ್ರ ಬೈಬಲ್ ಗ್ರಂಥವನ್ನು ಅವನೂ ಅವನ ಮಿತ್ರರೂ decipher ಮಾಡಿದ್ದಾರಂತೆ. 89 ವರ್ಷ ಪ್ರಾಯದ ಈ ವ್ಯಕ್ತಿ ೭೦ ವರ್ಷಗಳ ಅವಿರತ ಬೈಬಲ್ ಅಧ್ಯಯನದಿಂದ ಪ್ರಳಯದ ಬಗ್ಗೆ ಪವಿತ್ರ ಗ್ರಂಥದಲ್ಲಿರುವುದನ್ನು ಜಗತ್ತಿಗೆ ಸಾರುತ್ತಿದ್ದಾನೆ. ಅದರಲ್ಲಿ ಪ್ರಳಯದ ವಿಷಯ ಸಿಕ್ಕಿತಂತೆ. ದೇವ ವಾಣಿ ಇರುವುದು ಮನುಷ್ಯರಿಗೆ ದಾರಿ ದೀಪವಾಗಿ. ಅದರ ಸಂದೇಶ ನೇರವಾದ ಭಾಷೆಯಲ್ಲಿ ಇರಬೇಕು.  ಯಾವುದೇ ಒಂದು ಉಪಕರಣ ಕೊಂಡಾಗ ಅದರೊಂದಿಗೆ ಬರುವ catalogue  ರೀತಿ. ಅದನ್ನು decipher ಮಾಡೋ ಅವಶ್ಯಕತೆ ಬರಕೂಡದು. ಏಕೆಂದರೆ decipher ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತಾ ಹೋಗುತ್ತದೆ. ಅದರೊಂದಿಗೆ decipher ಮಾಡಲ್ಪಟ್ಟ ಸಂದೇಶವೂ ಕೂಡಾ. ಅವರವರ ಬುದ್ಧಿ ಮತ್ತೆಗೆ ಅನುಸಾರ decipher ಕೆಲಸ ನಡೆಯುತ್ತದೆ.

ಹಿಂದೂ ಶಾಸ್ತ್ರಗಳಲ್ಲಿ ಪ್ರಳಯದ ಬಗ್ಗೆ ಉಲ್ಲೇಖ ಇರುವುದನ್ನು ಕಾಣಬಹುದು. ಕಲಿಯುಗದ ಅವಸಾನದಲ್ಲಿ ಪ್ರಳಯ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಅದೇ ರೀತಿ “ಏಕದೇವೋಪಾಸನೆ” ಗೆ ಒತ್ತು ನೀಡುವ ಅಬ್ರಾಹಾಮಿಕ್ ಧರ್ಮಗಳಾದ ಯಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲೂ ಇದರ ಪ್ರಸ್ತಾಪ ಇದೆ. ಇಸ್ಲಾಂ ಧರ್ಮದಲ್ಲಿ ಪ್ರಳಯವನ್ನು “ಯೌಮ್ ಅಲ್ ಕಿಯಾಮ” (ಅಂತ್ಯ ದಿನ) ಎಂದು ಕರೆಯುತ್ತಾರೆ.

ಇಸ್ಲಾಮಿನಲ್ಲಿ ಪ್ರಳಯದ ದಿನದ ಬಗ್ಗೆ ಉಲ್ಲೇಖ ಕೆಲವೊಂದು ದೃಷ್ಟಾಂತ ಗಳೊಂದಿಗೆ ಕೊಡಲಾಗಿದೆ. ಏಕಾ ಏಕಿ ಪ್ರಳಯ ಆರಂಭ ಆಗೋಲ್ಲ. ತಂದೆ ಮಗನನ್ನು ಕೊಲ್ಲುವುದು, ತಾಯಿ ಮಗನ, ತಂದೆ ಮಗಳ ನಡುವಿನ ಲೈಂಗಿಕ ಸಂಬಂಧ, ಅನ್ಯಾಯಗಳು, ಬಡ್ಡಿ, ಮೋಸ, ವಂಚನೆ, ಕೊಲೆ ಸುಲಿಗೆ, ಕುಡಿತ,  ದಿನನಿತ್ಯದ ಪ್ರತಿಯೊಬ್ಬರ ಧಂಧೆಯಾಗಿ, ಜೀವನ ರೀತಿಯಾಗಿ ಮಾರ್ಪಟ್ಟು ಇಂಥ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರು ಇದನ್ನು ಸ್ವಾಭಾವಿಕ ಎಂದು ಪರಿಗಣಿಸಿ ಉಡಾಫೆಯಿಂದ ಬದುಕುವುದು. ಆಳುವವರು ಅತಿ ಕ್ರೂರಿಗಳಾಗಿ ಮಾರ್ಪಡುವುದು. ಬಡವರಿಗೆ ಸಲ್ಲಬೇಕಾದ ಪಾಲನ್ನು ಕೊಡದೆ ಸ್ವತಃ ಸ್ವಾಹಾ ಮಾಡುವುದು. ಹೀಗೆ ಅನ್ಯಾಯ, ಅಕ್ರಮ, ಕ್ರೌರ್ಯಗಳು ಮುಗಿಲು ಮುಟ್ಟಿದಾಗ ಇನ್ನೂ ಗಂಭೀರವಾದ ಕೆಲವು ಘಟನೆಗಳು ಜರುಗುವುದು ಪ್ರಳಯಕ್ಕೆ ಮುನ್ನ.

ಪ್ರಥಮವಾಗಿ ಪವಿತ್ರ ಮಕ್ಕಾ ನಗರದಲ್ಲಿರುವ ಕಪ್ಪು ಚೌಕಾಕಾರದ “ಕಾಬಾ” ಭವನ ವನ್ನು ನಾಶ ಮಾಡ ಲಾಗುವುದು.

ಒಂದು ವಿಚಿತ್ರ, ಭೀಕರ ಜಂತುವಿನ ದರ್ಶನ ವಿಶ್ವಕ್ಕೆ ಆಗುವುದು.

ಭಯಂಕರ ಚಂಡಮಾರುತ ಬೀಸಿ ಬೆಟ್ಟ ಗುಡ್ಡಗಳು, ಪರ್ವತಗಳು ಹತ್ತಿಯ ಉಂಡೆಗಳಾಗಿ ಹಾರುವುವು.

ಅಂತಿಮವಾಗಿ, ಪೂರ್ವ ದಿಕ್ಕಿನಲ್ಲಿ ಹುಟ್ಟುವ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುವನು. ಈ ಬೆಳವಣಿಗೆಯೊಂದಿಗೆ ಮನುಷ್ಯನ ಎಲ್ಲಾ ಲೆಕ್ಕಾಚಾರಗಳ ಕಡತವನ್ನು ಮುಚ್ಚಲಾಗುವುದು.( end of year accounting ಥರ).

ಮೇಲೆ ಹೇಳಿದ ವರ್ಣನೆ ಇಸ್ಲಾಂ ಗ್ರಂಥ ಗಳಲ್ಲಿರುವ ನೂರಾರು ದೃಷ್ಟಾಂತ ಗಳಿಂದ ಆರಿಸಿದ್ದು.         

ಪ್ರಳಯದ ಬಗ್ಗೆ ಕನ್ನಡದ ನ್ಯೂಸ್ ಚಾನಲ್ ನವರು ದುಗುಡ, ಭಯ ಮಿಶ್ರಿತ ಧ್ವನಿಯಲ್ಲಿ ವಿವರಣೆ, ವರ್ಣನೆ ನೀಡುವುದನ್ನು ಕೇಳಿದವರು ಕಂಪಿಸುವುದರಲ್ಲಿ ಅನುಮಾನವಿಲ್ಲ. ಒಂದು ಆಂಗ್ಲ ಚಿತ್ರದ ತುಣುಕೊಂದನ್ನು ತೋರಿಸುತ್ತಾ ಪ್ರಳಯವಂತೆ, ಹಾಗಾಗುತಂತೆ, ಹೀಗಾಗುತ್ತಂತೆ ಎಂದು ಅಂತೆ ಕಂತೆಗಳನ್ನು ಪುಂಖಾನು ಪುಂಖವಾಗಿ ಬಿಡುತ್ತಾ ಜನರಲ್ಲಿ ಗಾಭರಿ ಹುಟ್ಟಿಸುವ ಇವರ ನಡವಳಿಕೆಗೆ ಏನನ್ನಬೇಕೋ? ಈ ವರದಿಗಳನ್ನು ನೋಡಿದ ಜನ ಗಾಭರಿಯಾಗೋ ಬದಲು ಆ ಚಾನಲ್ ಗಳಿಗೆ ಇ –ಮೇಲ್ ಮೂಲಕ ಛೀಮಾರಿ ಹಾಕಿ ಇಂಥ ಬೊಗಳೆ ಗಳನ್ನು ಜನ ಸಹಿಸರು ಎನ್ನುವ ಸಂದೇಶವನ್ನು ಕೊಡಬೇಕು.

ಧರ್ಮ ಮತ್ತು ಹಿಂಸೆ

“ಜಗತ್ತಿನಲ್ಲಿನ ಜಿಹಾದ್ ಮೂಲಕ “ಕಾಷಿರ್”(ಸುಳ್ಳು ದೇವರ ಆರಾಧಕರು ಅಥವಾ false religion worshipers) ಜನರನ್ನು ಕೊಂದು ನಮ್ಮ ಸತ್ಯ ಮತ್ತು ಏಕೈಕ ದೇವರ ಸಾಮ್ರಾಜ್ಯವನ್ನು ಸ್ಥಾಪಿಸಬೇಕು ಎಂದು ನಂಬುತ್ತದೆ” ಎಂದು ಅಂತರ್ಜಾಲದ ಮಾಧ್ಯಮವೊಂದರಲ್ಲಿ ಒಬ್ಬರ ಅಭಿಪ್ರಾಯ. ಮೇಲಿನ ಹೇಳಿಕೆ ನನ್ನ ಪ್ರಕಾರ ಬಾಲಿಶ. ಭಯೋತ್ಪಾದನೆ ಇಸ್ಲಾಂ ಧರ್ಮ ವಿರೋಧಿ ಎಂದು ಭಾರತದ ಮಾತ್ರವಲ್ಲ ಜಗತ್ತಿನ ಎಲ್ಲಾ ಮುಸ್ಲಿಮ ಧರ್ಮಗುರುಗಳು (ಉಲೇಮ) ಹೇಳಿಕೆ ನೀಡಿದ್ದಾರೆ. “ಕಾಫಿರ್” ಅನ್ನುವ ಪದದ ಬಗ್ಗೆ ಬಹಳಷ್ಟು ವಿವಾದಗಳಿವೆ. ಮುಸ್ಲಿಮೇತರರನ್ನು ಕಾಫಿರರೆಂದು ತೆಗಳಬಾರದು ಮತ್ತು ಸಂಬೋಧಿಸಬಾರದೆಂದು ಮುಸ್ಲಿಂ ಪಂಡಿತರ ಅಭಿಪ್ರಾಯ. ಅಷ್ಟಕ್ಕೂ ಕಾಫಿರ್ ಅನ್ನುವ ಪದಕ್ಕೆ ಹಲವು ಅರ್ಥಗಳಿವೆ. ಕಾಫಿರ್ ಅಂದರೆ “ವಿರೋಧಿಸುವವ” ಮತ್ತು “ಮರೆಮಾಚುವವ” ಎಂದೂ ಅರ್ಥೈಸುತ್ತಾರೆ. ಹೊಲದಲ್ಲಿ ರೈತ ಬೀಜ ಬಿತ್ತುವುದಕ್ಕೆ “ಕುಫ್ರ್” (ಕಾಫಿರ್ ನ ಮೂಲ ಪದ “ಕುಫ್ರ್”) ಎನ್ನುತ್ತಾರೆ, ಅಂದರೆ ಆತ ಬೀಜವನ್ನು ಬಿತ್ತಿ ಮಣ್ಣಿನಿಂದ ಮುಚ್ಚುತ್ತಾನೆ ಎಂದು ಅರ್ಥ. ನಿತ್ಯ ಜೀವನದಲ್ಲಿ ಮುಸ್ಲಿಮರನ್ನು ಧ್ವೇಷದಿಂದ ನಾವು ಸಾಬ, ತುರ್ಕ, ಮುಸಲ, “ಹಲಾಲ್ ಖೋರ್” (ಸಂಪದದಲ್ಲಿ ಕೇಳಿದ್ದು) ಹೀಗೆ ವಿವಿಧ ನಾಮಾವಳಿಗಳಿಂದ ಕರೆದು ಹಿಗ್ಗುವುದು ಒಂದು ಪರಿಪಾಠವಾದಾಗ ಹಾಗೆ ಕರೆಯುವವರನ್ನು ಬಹುಶಃ ಮುಸ್ಲಿಮರು ಬೇಸರದಿಂದ ಕಾಫಿರರೆಂದು ಕರೆಯುತ್ತಾರೇನೋ. ಆದರೂ ಬಹುಪಾಲು ಮುಸ್ಲಿಮರು ಹಿಂದೂಗಳನ್ನು ಹಾಗೆ ಕರೆಯುವುದನ್ನು ನಾನು ಕೇಳಿಲ್ಲ. (personally, any amount of provocation will not entice or induce me to label people as kafirs) ಒಬ್ಬನ ಮನಸ್ಸನ್ನು ನೋಯಿಸುವುದು, ಘಾಸಿಗೊಳಿಸುವುದು ಒಂದು ಮಸೀದಿಯನ್ನು ಕೆಡವಿದಂತೆ ಎಂದು ಹಿರಿಯರು ಹೇಳುತ್ತಾರೆ. ಅಂಥ ಉನ್ನತ ಸಂಸ್ಕಾರದಲ್ಲಿ ಮಿಂದ ಒಬ್ಬ ವ್ಯಕ್ತಿ ಯಾರ ಮನಸ್ಸನ್ನೂ ನೋಯಿಸುವುದಿಲ್ಲ.

“ಸೆಮೆಟಿಕ್” ಧರ್ಮಗಳು ಎಂದರೆ ಪ್ರವಾದಿ ಅಬ್ರಹಾಮರ ಧರ್ಮವನ್ನು ನಂಬಿ ನಡೆಯುವವರು ಎಂದು ಸಾಮಾನ್ಯ ತಿಳಿವಳಿಕೆ. ಸೆಮೆಟಿಕ್ ಪದಕ್ಕೆ ಬಹು ದೊಡ್ಡ ವ್ಯಾಖ್ಯಾನವಿದೆ. ಯಹೂದ್ಯ, ಕ್ರೈಸ್ತ, ಇಸ್ಲಾಂ ಧರ್ಮಗಳು ಸೆಮೆಟಿಕ್. ಆದರೂ ಸಹ ಕ್ರೈಸ್ತರು ಮತ್ತು ಯಹೂದ್ಯರು ಇಸ್ಲಾಮ್ ಧರ್ಮವನ್ನ ಸೆಮೆಟಿಕ್ ಎಂದು ಭಾವಿಸುವುದಿಲ್ಲ. ಇಸ್ಲಾಂ ಯಹೂದ್ಯರ “ಮೋಸೆಸ್”, ಮತ್ತು ಕ್ರೈಸ್ತರ “ಏಸು” ಇವರುಗಳನ್ನು ದೇವನ ಸಂದೇಶವಾಹಕರು ಎಂದು ನಂಬಿ ಗೌರವಿಸುತ್ತಾರೆ. ಅವರುಗಳನ್ನು ಏಕ ವಚನದಲ್ಲೂ ಸಂಬೋಧಿಸುವುದಿಲ್ಲ. ಅವರ ಹೆಸರುಗಳನ್ನು ತಮ್ಮ ಮಕ್ಕಳಿಗೆ ನಾಮಕರಣವನ್ನೂ ಮಾಡುತ್ತಾರೆ.(ನನ್ನ ಮಗಳ ಹೆಸರು “ಇಸ್ರಾ ಮರ್ಯಮ್”. ಮರ್ಯಮ್, ಯೇಸು ಮಾತೆ) ಪ್ರವಾದಿಗಳು ಯಹೂದ್ಯರನ್ನು ಮತ್ತು ಕ್ರೈಸ್ತರನ್ನು “ಒಡಂಬಡಿಕೆಗಳ ಜನ” ಎಂದು ಅವರನ್ನು ಗೌರವದಿಂದ ನಡೆಸಿ ಕೊಂಡಿದ್ದು ಮಾತ್ರವಲ್ಲ ಅವರೊಂದಿಗೆ ವ್ಯವಹಾರವನ್ನೂ ನಡೆಸುತ್ತಿದ್ದರು. ಪವಿತ್ರ ಕುರಾನಿನಲ್ಲಿ ಯಹೂದ್ಯರನ್ನು, ಕ್ರೈಸ್ತರನ್ನೂ, ಸೇಬಿಯನ್ನರನ್ನೂ “ಗ್ರಂಥಗಳ ಸಮುದಾಯ” ಎಂದು ಸಂಬೋಧಿಸಿದ್ದರಿಂದ ಅವರ ಮೇಲೆ unprovoked ಆಕ್ರಮಣ ಮಾಡುವಂತಿಲ್ಲ. ಧರ್ಮ ಯುದ್ಧ ಗಳ ಸಮಯದಲ್ಲಿ ಯಾವುದೇ ಕಾರಣಕ್ಕೂ ಇಗರ್ಜಿ, ಮತ್ತು ಕ್ರೈಸ್ತ ಸಂತರು ವಾಸಿಸುವ ನಿವಾಸಗಳ ಮೇಲೆ ಆಕ್ರಮಣ ಕೂಡದು ಎಂದು ಸ್ಪಷ್ಟವಾಗಿ ಇಸ್ಲಾಮಿನ ಪ್ರಥಮ ಖಲೀಫಾ ಅಬೂ ಬಕ್ಕರ್ ನಿರ್ದೇಶಿಸಿದ್ದರು.

ಇಸ್ಲಾಮಿನ ಎರಡನೇ ಖಲೀಫಾ ಉಮರ್ ಮುಸ್ಲಿಂ ಸೇನೆ ವಶಪಡಿಸಿಕೊಂಡ ಜೆರುಸಲೆಂ ನಗರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಇಗರ್ಜಿಗೆ ಹೋಗಿ ಧರ್ಮಗುರುಗಳನ್ನು ಭೇಟಿಯಾಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಪ್ರಾರ್ಥನೆಯ ಕರೆ ಕೇಳಿಬರುತ್ತದೆ. ಕೂಡಲೇ ಪಾದ್ರಿ ಉಮರ್ ರವರಿಗೆ ಪ್ರಾರ್ಥಿಸಲೆಂದು ಕಂಬಳಿಯನ್ನು ಇಗರ್ಜಿಯಲ್ಲೇ ಹಾಸುತ್ತಾರೆ. ಸೌಮ್ಯವಾಗಿ ನಿರಾಕರಿಸಿದ ಉಮರ್ ಇಗರ್ಜಿಯಿಂದ ಹೊರಕ್ಕೆ ಸ್ವಲ್ಪ ದೂರ ಹೋಗಿ ನಮಾಜ್ ನಿರ್ವಹಿಸುತ್ತಾರೆ. ಆಗ ಪಾದ್ರಿ ಕೇಳುತ್ತಾರೆ, ಖಲೀಫಾ ಉಮರ್, ಏಕೆ ಇಗರ್ಜಿಯಲ್ಲಿ ನಮಾಜ್ ಮಾಡಕೂಡದು ಎಂದೇನಾದರೂ ಇಸ್ಲಾಮಿನಲ್ಲಿ ಇದೆಯಾ ಎಂದು. ಆಗ ಉಮರ್ ಹೇಳುತ್ತಾರೆ, ಹಾಗೇನಿಲ್ಲ, ಆದರೆ ನಾನು ಇಗರ್ಜಿಯಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಭವಿಷ್ಯದಲ್ಲಿ ಧರ್ಮದ ತಿರುಳರಿಯದ ಮುಸ್ಲಿಂ ಮತಾಂಧರು ಈ ಇಗರ್ಜಿಯನ್ನೇ ಕೆಡವಿ ಮಸೀದಿ ನಿರ್ಮಿಸಬಹುದು ಎನ್ನುವ ಆತಂಕದಿಂದ ನಾನು ಬಯಲಿನಲ್ಲಿ ನಮಾಜ್ ಮಾಡಿದೆ ಎಂದು ಹೇಳುತ್ತಾರೆ. ಈ ಮಹಾನ್ ಚೇತನ ಆಡಿದ ಇಂಥ ಮಾತಿಗೆ ಸರಿಸಾಟಿಯಾದ ಒಂದೇ ಒಂದು ಮಾತನ್ನು ಚರಿತ್ರೆಯಿಂದ ಹೆಕ್ಕಿ ತೋರಿಸಲು ನಮಗೆ ಸಾಧ್ಯವಾಗದು.

ಸೆಮೆಟಿಕ್ ಧರ್ಮಗಳು ಹಿಂಸೆ ಯನ್ನು ಪ್ರೋತ್ಸಾಹಿಸುತ್ತವೆ ಎಂದು ಹೇಳುವುದು ಅಜ್ಞಾನದ ಕುರುಹು. ಮೇಲಿನ ಪರಧರ್ಮ ಸಹಿಷ್ಣುತೆಯ ಒಂದಲ್ಲ, ಲೆಕ್ಕವಿಲ್ಲದ ಉದಾಹರಣೆಗಳು ಇಸ್ಲಾಮೀ ಚರಿತ್ರೆಯಲ್ಲಿ ನಮಗೆ ಕಾಣಲು ಸಿಗುತ್ತವೆ. ಮುಸ್ಲಿಮರಿಗೆ ಆದರ್ಶ ವ್ಯಕ್ತಿಗಳು ಪ್ರವಾದಿಗಳು, ನಂತರ ಬಂದ ನಾಲ್ಕು ಖಲೀಫಾ ನಾಯಕರುಗಳು, ಪಾಶ್ಚಿಮಾತ್ಯರು ಈಗಲೂ ಕೊಂಡಾಡುವ ಸುಲ್ತಾನ್ ಸಲಾಹುದ್ದೀನ್ ಅಯ್ಯೂಬಿಯಂಥ ಮಹಾ ವ್ಯಕ್ತಿಗಳು. ಇವರಾರೂ ಧರ್ಮ ಬೇರೆ ಎಂದು ಹೇಳಿ ಪರಧರ್ಮೀಯರನ್ನು ನಿಕೃಷ್ಟವಾಗಿ ನಡೆಸಿಕೊಂಡಿಲ್ಲ. ಚರಿತ್ರೆಯಲ್ಲಿ ತಮ್ಮ ಸ್ವಾರ್ಥ, ಅಧಿಕಾರ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಬಂದ ದಂಡು ಕೋರರೋ, ಲೂಟಿಕೋರರೋ ಮುಸ್ಲಿಮರಿಗೆ ಆದರ್ಶ ಅಲ್ಲ ಹಾಗೂ ಧರ್ಮ ಸಮ್ಮತವಲ್ಲದ ಕೆಲಸ ಮಾಡಿದ ರಾಜರ ಬಗ್ಗೆ ಮುಸ್ಲಿಮರಿಗೆ ಹೆಮ್ಮೆಯೂ ಇಲ್ಲ.