ಮೋದಿಗೆ ಸಿಕ್ಕಿತು ಟ್ರಾವಲ್ ಪರ್ಮಿಟ್

ಗುಜರಾತ್ ನಲ್ಲಿ ನಡೆದ ನರಮೇಧಕ್ಕೆ ನರೇಂದ್ರ ಮೋದಿ ಕಾರಣ ಎಂದು ಭಾರತೀಯರೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಭಾವನೆಗೆ ಪೂರಕವಾಗಿ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳು ಮೋದಿ ತಮ್ಮ ದೇಶಕ್ಕೆ ಕಾಲಿಡಲು ಅನುಮತಿ ನಿರಾಕರಿಸಿದ್ದವು. ಭಾರತದ ಒಳಗೂ ಈ ನಿಲುವಿಗೆ ಸಹಮತ ಸಹ ವ್ಯಕ್ತವಾಗಿತ್ತು. ಕಳೆದ ಬಿಹಾರದ ಚುನಾವಣೆಯ ಸಮಯ ಭಾಜಪದ ಪರವಾಗಿ ನರೇಂದ್ರ ಮೋದಿ ಬಿಹಾರಕ್ಕೆ ಬರುವ ವಿಷಯ ತಿಳಿದ ಅಲ್ಲಿನ ಮುಖ್ಯಮಂತ್ರಿ ನೀತೀಶ್ ಕುಮಾರ್ ತಮ್ಮ ರಾಜ್ಯಕ್ಕೆ ಆತ ಕಾಲಿಡ ಕೂಡದು ಎಂದು ತಾಕೀತು ಮಾಡಿ ವಿವಾದಕ್ಕೆ ಒಳಗಾಗಿದ್ದರು. ಮೋದಿ ಇಲ್ಲದೆಯೇ ಅಲ್ಲಿನ ಚುನಾವಣೆಯನ್ನ ಭಾಜಪ – ನಿತೀಶ್ ಪಕ್ಷದ ಒಕ್ಕೂಟ ಜಯಿಸಿತ್ತು. ಹೊರದೇಶಗಳಲ್ಲೂ, ಸ್ವದೇಶದಲ್ಲೂ ಈ ತೆರನಾದ ಅಭಿಪ್ರಾಯ ನರೇಂದ್ರ ಮೋದಿ  ಬಗ್ಗೆ ಇರುವಾಗ ಮೋದಿಯಾಗಲೀ ಭಾಜಪ ವಾಗಲೀ ಆತ್ಮಾವಲೋಕನ ಏಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಒಂದು ಒಗಟು.  ಸುಖಾಸುಮ್ಮನೆ ಯಾರನ್ನೂ ನಮ್ಮ ಮನೆ ಕಡೆ ತಲೆ ಹಾಕಬೇಡ ಎಂದು ಯಾರೂ  ತಾಕೀತು ಮಾಡೋಲ್ಲ. ನಮ್ಮ ದೇಶದ ಚರಿತ್ರೆಯಲ್ಲಿ ಈ ರೀತಿಯ ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಗೆ ಒಳಗಾದ ಒಬ್ಬನೇ ಒಬ್ಬ  ರಾಜಕಾರಣಿಯ ಹೆಸರು ನಮ್ಮ ನೆನಪಿಗೆ ಬರುವುದೇ?

ಗುಜರಾತ್ ರಾಜ್ಯದ ಹೆಸರು ಕೇಳಿದ ಕೂಡಲೇ ನಮ್ಮ ಕಣ್ಣಿಗೆ ಎದುರಾಗೋದು ಮುಗ್ಧರ ಹತ್ಯೆ ಮತ್ತು ಆಕ್ರಂದನ. ಗುಜರಾತ್ ನ ಮೇಲಿನ ಈ ಕಳಂಕ ವನ್ನು ತೊಡೆದು ಹಾಕಲು ಮೋದಿಯ ಅಂತರ್ಜಾಲ ಅಭಿಮಾನೀ ಸಮುದಾಯ ಹಗಲೂ ರಾತ್ರಿ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದ್ದೇ. ಗುಜರಾತ್ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ, ಅಂಥ ರಾಜ್ಯ ಈ ದೇಶದಲ್ಲೆಂದೂ ಉದಯಿಸಿಲ್ಲ ಎಂದು ಟಾಮ್ ಟಾಮ್ ಮಾಡಿದ್ದೆ ಮಾಡಿದ್ದು. ಇದು ಪೊಳ್ಳು ಮತ್ತು ಸುಳ್ಳುಗಳ propaganda ಎಂದು ಭಾರತೀಯರಿಗೆ ಮನವರಿಕೆ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಗುಜರಾತ್ ನ ಅಭಿವೃದ್ಧಿ ಒಂದು myth ಎಂದು ಈಗ ವೇದ್ಯವಾಯಿತು. ಗುಜರಾತ್ ಗಿಂತ ಅಭಿವೃದ್ಧಿಯ ಪಥದಲ್ಲಿ ಬಿಹಾರ ದಾಪುಗಾಲು ಹಾಕುತ್ತಿದೆ. 

ನರೇಂದ್ರ ಮೋದಿ ಯನ್ನು ಯಾವ ಕಾರಣಕ್ಕೆ ಮತ್ತು ಉದ್ದೇಶಕ್ಕೆ  ಹೊಗಳಲಾಗುತ್ತಿದೆ, ಪ್ರಧಾನಿ ಹುದ್ದೆಗೆ ನಾಮಕರಣ ಮಾಡಲು ಉತ್ಸುಕತೆ, ಉತ್ಸಾಹ ತೋರಿ ಬರುತ್ತಿದೆ ಎಂದು ತಿಳಿಯದಷ್ಟು ಮೂಢ ನಲ್ಲ ಭಾರತೀಯ. ಗುಜರಾತ್ ಮು. ಮಂತ್ರಿಯ ಮೇಲಿನ ಪ್ರಯಾಣದ ನಿರ್ಬಂಧವನ್ನು ತೆಗೆದ ಇಂಗ್ಲೆಂಡ್ ದೇಶದ ಈ ಕ್ರಮ ಎಷ್ಟು ವಿವೇಚನಾಪೂರ್ಣ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ವ್ಯಾಪಾರದ ಹಿತದೃಷ್ಟಿಯ ಮುಂದೆ ಮಾನವೀಯ ಮೌಲ್ಯಗಳು ಗೌಣ ಎಂದು ಇಂಗ್ಲೆಂಡ್ ದೇಶಕ್ಕೆ ಅನ್ನಿಸಿದರೆ ಅದು ಅವರಿಗೆ ಬಿಟ್ಟ ಆಯ್ಕೆ. ಅವರ ಹಿತ್ತಲಿನಲ್ಲೇ ನಡೆದ ಯಹೂದ್ಯರ ವಿರುದ್ಧ ನಡೆದ ಸಾಮೂಹಿಕ ನರಸಂಹಾರದ ಅನುಭವ ಇರುವ ದೇಶ ಇಂಗ್ಲೆಂಡ್. ಅವರಿಗೆ ನಾವು ಪಾಠ ಹೇಳುವ ಅಗತ್ಯ ಇಲ್ಲ. ನರೇಂದ್ರ ಮೋದಿಯನ್ನು ಗುಜರಾತ್ ನ ಮುಸ್ಲಿಮರು ಕ್ಷಮಿಸಿದ್ದಾರೆ. ಉತ್ತರ ಪ್ರದೇಶದ ‘ದೇವೋ ಬಂದ್’ ಇಸ್ಲಾಮೀ ಸಂಸ್ಥೆಯ ‘ಮೌಲಾನ ವಾಸ್ತಾನ್ವಿ’ ಕೂಡಾ ಹಳತನ್ನು ಮರೆತು ಮುನ್ನಡೆಯುವ ಮಾತನ್ನಾಡಿದ್ದಾರೆ. ಆದರೂ ಮನುಷ್ಯ ನಿರ್ದೋಷಿ ಯಾಗಿದ್ದರೆ ತನ್ನ ಹೆಸರಿಗೆ ಅಂಟಿದ ಕಳಂಕವನ್ನು ತೊಡೆಯುವ ಶತಾಯ ಗತಾಯ ಪ್ರಯತ್ನಿಸ ಬೇಕು, ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕು. ಈ ನಿಟ್ಟಿನಲ್ಲಿ ಗುಜರಾತಿನ ಮುಖ್ಯಮಂತ್ರಿ ತೊಡಗಿಸಿಕೊಂಡರೆ ‘feeling of closure’ ನ ಅವಕಾಶ ಭಾರತೀಯರಿಗೆ ಆತ ಕೊಟ್ಟಂತಾಗುತ್ತದೆ. ಆ ಕಾಲ ನಿಜಕ್ಕೂ ಬರಬಹುದೇ?            

ಈ ಜಾತಿ ನನಗೆ ತುಂಬಾ ಇಷ್ಟ

ಯೆಡಿಯೂರಪ್ಪ ನವರು ಹೊರಹೋಗಬೇಕು ಎಂದು ಕೊನೆಗೂ ‘ಭಾಜಪ’ದ ಹೈ ಕಮಾಂಡ್ ಜಪಿಸಿತು. ಈ ಜಪಕ್ಕಾಗಿ ಕುಮಾರಪ್ಪ ಅಂಡ್ ಕಂಪೆನಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಹೊರನಡಿಯಿರಿ ಎನ್ನುವ ಆಜ್ಞೆ ಹೊರಬಿದ್ದಾಗ ಕಾಂಗ್ರೆಸ್ ನದು ಅಪಸ್ವರ, ಈ ಆಜ್ಞೆ ತುಂಬಾ ತಡವಾಗಿ ಬಂತು ಅಂತ. ಏನೇ ಇರಲಿ, ರಾಜಕಾರಣದಲ್ಲಿ ಇವೆಲ್ಲಾ ಇದ್ದಿದ್ದೆ, ಯಾರು ಅಧಿಕಾರದ ಸ್ಥಾನದಲ್ಲಿ ಕೂತಿರ್ತಾರೋ ಅವರ ಕಾಲನ್ನು ಎಳೆದು ಹಾಕಲು ಮತ್ತೊಂದು ಮಾಜಿ ಅಧಿಕಾರಸ್ಥರ ಗುಂಪು ಕಾಯುತ್ತಾ ಇರುತ್ತದೆ. ಸರಿ, ಈಗ ನಮ್ಮ ರಾಜ್ಯದ ಮುಂದಿನ ಮುಖ್ಯ ಮಂತ್ರಿಗಳು ಯಾರು ಅಂತ ಕವಡೆ ಹಾಕಿ ನೋಡಲು ಕವಡೆ ಹುಡುಕುವಾಗ ಮತ್ತೊಂದು ಶಾಕ್ ತಗುಲಿತು. ಯಾವ ಜಾತಿಯ ಮುಖ್ಯಮಂತ್ರಿ ಬೇಕು ಅಂತ. ಈ ಪ್ರಶ್ನೆ ಒಂದು ಬ್ಲಾಗ್ ಕೇಳ್ತು. ಥತ್ತೇರಿ, ಮತ್ತೊಂದು ಸಮಸ್ಯೆ ಈಗ. ಈ ಸಮಸ್ಯೆ ನಮ್ಮ ಮಧ್ಯೆ ಇಲ್ಲ ಅಂತ ಭಾವಿಸಿಕೊಂಡಿರುವಾಗಲೇ ಪಾಟೀ ಸವಾಲಿನಂತೆ ಬಂದು ಎರಗಿತು, ಯಾವ ಜಾತಿಯ ಮುಖ್ಯ ಮಂತ್ರಿ ಬೇಕು ಅಂತ. ಅಷ್ಟೆಲ್ಲಾ ರಾಜಕಾರಣ ನನಗೆ ತಿಳೀ ಒಲ್ದು, ಇಷ್ಟು ಮಾತ್ರ ಗೊತ್ತು, ನಮ್ಮ ಅಲ್ಫೋನ್ಸೋ ಜಾತಿಯ ಮಾವಿನ ಹಣ್ಣಿನಂಥ ಹಣ್ಣು ಎಲ್ಲೂ ಹುಟ್ಟಿಲ್ಲ. ಹುಟ್ಟೋದೂ ಇಲ್ಲ.

ಯಾವ ಜಾತಿಯ ವ್ಯಕ್ತಿಯ ಕೈಗೇ ಹೋಗಲಿ ಅಧಿಕಾರ ಜಾತಿ, ಮತ, ಧರ್ಮ, ಪಂಥ ಭೇಧ ಮರೆತು ನಮ್ಮ ರಾಜ್ಯದ ಅಭ್ಯುದಯವನ್ನು ಮಾತ್ರ ಗಮನದಲ್ಲಿಟ್ಟು ಕೊಂಡು ಸರಕಾರ ನಡೆಸಲಿ ಎನ್ನುವ ಸಣ್ಣ ಆಸೆ ದೂರದ ಮರಳುಗಾಡಿನಿಂದ.

ನಾರೀಮಣಿಗಳ ವಿಜೃಂಭಣೆ

ಮಿನಿ ಮಹಾ ಚುನಾವಣೆ ಎನ್ನಬಹುದಾದ ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿ ಮಹಿಳೆ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದ್ದಾಳೆ. ದಿಲ್ಲಿಯಿಂದ ಹಿಡಿದು ದಕ್ಷಿಣದ ತಮಿಳು ನಾಡಿನವರೆಗೆ ನಾರೀ ಮಣಿಗಳ ವಿಜೃಂಭಣೆ ಅಧಿಕಾರದ ಪಡಸಾಲೆಗಳಲ್ಲಿ.  ಸ್ವ ಸಾಮರ್ಥ್ಯದಿಂದ ಮಮತಾ ಬ್ಯಾನರ್ಜಿ, ಶೀಲಾ ದೀಕ್ಷಿತ್ ರಾಜಕಾರಣದಲ್ಲಿ ಮಿಂಚಿದರೆ ಸೋನಿಯಾ, ಜಯಲಲಿತಾ ಮತ್ತು ಮಾಯಾವತಿ ಪುರುಷರ ನೆರಳಿನ ಸಹಾಯದಿಂದ ಮಿಂಚಿದವರು. ಹೆಣ್ಣಿನ ಹುಟ್ಟು ಹೇಸಿಗೆ ಮತ್ತು ತಾತ್ಸಾರ ಹುಟ್ಟಿಸುವ, ಗರ್ಭದಲ್ಲೇ ಅವಳನ್ನು ಹೊಸಕಿ ಹಾಕುವ ಅತ್ಯಂತ ತ ಕಳವಳಕಾರೀ ವಿದ್ಯಮಾನಗಳನ್ನು ನಾವು ದಿನವೂ ಕಾಣುತ್ತಿರುವಾಗ ರಾಜಕೀಯದಲ್ಲಿ ಸ್ತ್ರೀಯರ ಯಶಸ್ಸು ನಿಜಕ್ಕೂ ಸಂತಸವನ್ನು ಮೂಡಿಸುತ್ತದೆ. ಈ ಮಹಿಳಾ ಮಣಿಗಳು ಮಾಡಬೇಕಾದ ಮೊದಲ ಕೆಲಸವೆಂದರೆ ಮೇಲೆ ಹೇಳಿದ ಹೆಣ್ಣಿನ ಭ್ರೂಣ ಹತ್ಯೆ ಮತ್ತು ಹೆಣ್ಣಿನ ಮೇಲೆ ನಡೆಯುವ ಅವ್ಯಾಹತ ಶೋಷಣೆಯ ವಿರುದ್ಧ ಸಮರವನ್ನೇ ಸಾರಿ ಜನರಲ್ಲಿ ಹೆಣ್ಣು ನಿಕೃಷ್ಟಳಲ್ಲ, ಪುರುಷನಷ್ಟೇ ಬಲಿಷ್ಠಳು ಎನ್ನುವ ಸತ್ಯವನ್ನು ಮನಗಾಣಿಸುವುದು.

ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.

ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ ಅದೇ, ನಿಮ್ ಹಬ್ಬ ಈದ್ ಮಿಲಾದ್ ನಾಳೆ, ಇಲ್ಲಿ ಸರಕಾರೀ ರಜೆ ಎಂದ. ಓಹೋ, ಹೌದಾ ಎಂದು ಉದ್ಗಾರ ತೆಗೆದಾಗ ಅವನಿಗೆ ಆಶ್ಚರ್ಯ. ಏನು ಅಲ್ಲಿ ಇಲ್ವಾ ರಜೆ ಎಂದ. ನಾನಂದೆ ಇಲ್ಲಿ ಸೌದಿ ಅರೇಬಿಯಾದಲ್ಲಿ ಪ್ರವಾದಿಗಳ ಜಯಂತಿಗೆ ರಜೆ ಇಲ್ಲ. ಅಂಥ ಒಂದು ದಿನ ಇದೆ ಎಂದೂ ಇಲ್ಲಿನ ಜನಕ್ಕೆ ಗೊತ್ತಿಲ್ಲ. ಪ್ರವಾದಿ ಜಯಂತಿ ಇರಲಿ, ಇಲ್ಲಿನ ರಾಜ ಸತ್ತಾಗಲೂ ರಜೆ ಕೊಡದ ದುರುಳರು ಇವರು ಎಂದು ನನ್ನ ದುಃಖವನ್ನು ವ್ಯಕ್ತಪಪಡಿಸಿದಾಗ ಅವನೂ ಸಂತಾಪ ಸೂಚಿಸಿದ ನನ್ನ ದೌರ್ಭಾಗ್ಯಕ್ಕೆ. ದೌರ್ಭಾಗ್ಯವಲ್ಲದೆ ಮತ್ತೇನು? ಭಾರತದಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಒಂದಲ್ಲ ಒಂದು ರಜೆ ವಕ್ಕರಿಸಿಕೊಳ್ಳುತ್ತಲೇ ಇರುತ್ತದೆ. ಹಾಗೇನಾದರೂ ರಜೆ ಸಿಗದೇ ಒಂದೆರಡು ವಾರಗಳಾದವು ಅನ್ನಿ, ಆಗ ಯಾವುದಾದರೂ ಒಂದು ನೆಪದಲ್ಲಿ, ನಮ್ಮ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ದಲ್ಲಿ ಬಂದೋ, ದೊಂಬಿಯೋ ನಡೆದು ರಜೆ ಸಲೀಸಾಗಿ ಸಿಗುತ್ತದೆ. ಯಡ್ಡಿ ಹತ್ತಿರ ಬಹುಮತ ಸಾಬೀತು ಪಡಿಸಿ ಎಂದರೂ ರಜೆ, ಅಯೋಧ್ಯೆಯ ವಿವಾದ ಕ್ಕೆ ನ್ಯಾಯಾಲಯ ಕೊಡುವ ತೀರ್ಪಿನಂದೂ ರಜೆ.  

ಸೌದಿ ಅರೇಬಿಯಾದ ಹಿಂದಿನ ರಾಜ ಫಹದ್ ರವರು ತೀರಿ ಕೊಂಡ ಸುದ್ದಿ ಬಂದಾಗ ನಾನು ಬ್ಯಾಂಕಿನಲ್ಲಿ ಇದ್ದೆ. ನನ್ನ ಕೆಲಸ ಬೇಗ ಬೇಗನೆ ಪೂರೈಸಿ ಹಾಗೆಯೆ ಅಲ್ಲಿನ ಕ್ಲರ್ಕ್ ಹತ್ತಿರ ಕೇಳಿದೆ, ಎಷ್ಟು ದಿನ ರಜೆ ಕೊಡ್ತಾರೆ ಅಂತ? ಅವನು ಕೇಳಿದ, ರಜೆ? ಯಾವುದಕ್ಕೆ? ನಾನು ದೊರೆಯ ಮರಣದ ವಾರ್ತೆ ಆತನಿಗೆ ಹೇಳಿದಾಗ, ಅವನು ಫಹದ್ ನ ಸಮಯ ಮುಗಿಯಿತು ಅವನು ಸೇರಿಕೊಂಡ ಭಗವಂತನ ಪಾದಚರಣಗಳಿಗೆ, ಅದಕ್ಕೇಕೆ ರಜೆ, ನಿಮ್ ದೇಶದಲ್ಲಿ ಇದಕ್ಕೂ ಕೊಡ್ತಾರ ರಜೆ ಎಂದು ಅವನು ಮರು ಪ್ರಶ್ನೆ ಹಾಕಿದಾಗ ಉತ್ತರಿಸಲಾಗದೆ ಮುಗುಳ್ನಕ್ಕು ಹೊರ ನಡೆದೆ. ಸಾವು ನೈಸರ್ಗಿಕ, ಅದನ್ನು ತಡೆಯಲಾಗಲೀ, ವಿಳಂಬಿಸಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಯಾರಾದರೂ ಸತ್ತರೂ ಅತಿಯಾಗಿ ಶೋಕ ವ್ಯಕ್ತ ಪಡಿಸಲೂ ಬಾರದು. ಹಾಗೆ ಮಾಡಿದ್ದೇ ಆದರೆ ಅವನಿಗೆ ದೇವನ ನಿರ್ಣಯ ಇಷ್ಟವಾಗಿಲ್ಲ ಎಂದು ಅರ್ಥ. ಇದು ಬಹುತೇಕ ಮುಸ್ಲಿಮರ ಅಭಿಪ್ರಾಯ. ಈಗ ಹೇಳಿ ಬಂದ್ ಕೊಡೋದಾದರೂ ಹೇಗೆ ಸಾಧ್ಯ? ಅಲ್ಲೂ ಬಾರದಂತೆ, ಬಂದ್ ಮಾತು ದೂರ ಉಳಿಯಿತು ಅಲ್ಲವೇ? ಅಲ್ಲಾ, ನಾನು ಮಾತಾಡ್ತಾ ಇದ್ದಿದ್ದು ಜಯಂತಿ ಬಗ್ಗೆ, ಇಲ್ಯಾಕೆ ಮುಖಹಾಕಿದ ಯಮ ಧರ್ಮರಾಯ? ಸಾವೆಂದರೆ ಹೀಗೆಯೇ. ಅಚಾನಕ್ ಆಗಿ ಹೊಂಚು ಹಾಕಿ ಬಿಡುತ್ತದೆ.  

ನಾನು ಹೋದ ವರ್ಷ, ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದಾಗ ವಾಲ್ಮೀಕಿ ಜಯಂತಿ. ನಾನು ನನ್ನ ಮಿತ್ರನಿಗೆ ಕೇಳಿದೆ ಇದ್ಯಾವಗಿಂದ ಆರಂಭವಾಯ್ತು ಹೊಸ ಜಯಂತಿ ಎಂದು. ಭಾಜಪ ಸರಕಾರ ಆಲ್ವಾ ಇರೋದು, ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸಲು ಈ ರಜೆ ಅಂದ. ಇಂದು ಬೆಳಿಗ್ಗೆ ಅವನೊಂದಿಗೆ ಮಾತನಾಡಿದಾಗ ಅವನು ಹೇಳಿದ ರಜೆಯ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ, ಬಸವ ಜಯಂತಿ, ಕನಕ ಜಯಂತಿ. ವಚನಗಳ ಮಹಾತ್ಮ, ವೀರಶೈವ ಪಂಗಡ ಗುರುಗಳಾದ ಬಸವಣ್ಣರಿಗೆ ಅವರು ಹುಟ್ಟಿದ ದಿನ ಜನ ರಜೆಯಲ್ಲಿ ದಿನ ಕಳೆಯೋದು ಎಷ್ಟು ಪ್ರಿಯವಾದ ವಿಷಯವೋ ನಾ ಕಾಣೆ. ಬಸವ ಜಯಂತಿ ಇವತ್ತು ಎಂದು ಸಂಭ್ರಮ ಪಡುತ್ತಿರುವವರಿಗೆ ಅವರ ಒಂದೇ ಒಂದು ವಚನವನ್ನಾದರೂ ಒದರಲು ಹೇಳಿದರೆ ಅನಾಹುತವಾಗಬಹುದೋ, politically incorrect ಆಗಬಹುದೋ?

ಕನಕ ಜಯಂತಿ ಯಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವಾನ್ ಶ್ರೀ ಕೃಷ್ಣನ ಮಂದಹಾಸವನ್ನು ನೋಡಲು ದಲಿತನಿಗೆ ದಾರಿ ಮುಕ್ತವಾಗಿ ತೆರೆದಿರಬಹುದೇ? ಇಂಥ ಪ್ರಶ್ನೆಗಳು ರಜೆಯ ದಿನ ಏಳಲೇ ಬೇಕು, ನಾವದಕ್ಕೆ ಉತ್ತರ ಕಂಡು ಕೊಳ್ಳಲೇ ಬೇಕು. ನನಗೆ ಅದಕ್ಕೆ ಸಮಯವಿಲ್ಲ, ಏಕೆಂದರೆ ನನಗೆ ಇಂಥಾ ರಜೆಗಳ ಸೌಕರ್ಯ ಇಲ್ಲ  ಅಥವಾ ಸೌಭಾಗ್ಯ ಇಲ್ಲ.

ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.

ರಾಜ್ಯದ ರಾಜಕಾರಣ

ದಿನಾ ಬೆಳಗಾದರೆ ಮುಂಬೈ ಸ್ಟಾಕ್ ನ ಬಗ್ಗೆ, dow jones index ಮತ್ತು new york ಸ್ಟಾಕ್ exchange ಗಳ ಪಾಯಿಂಟ್ಸ್ ಬಗ್ಗೆ ಕೆಲವರು ಆತಂಕ ಮತ್ತು ತವಕದಿಂದ ಕೂತರೆ, ಇನ್ನು ಕೆಲವರು ಇಂದು ಮತ್ತೆ ನಮ್ಮ ಮುಖ್ಯ ಮಂತ್ರಿಗಳು ಗಳ ಗಳ ಅತ್ತರೆ ಎಂದು ಕುತೂಹಲದಿಂದ ವೀಕ್ಷಿಸುವುದು ಒಂದು ಪರಿಪಾಠವಾಗಿದೆ. ರಾಜ್ಯದ ರಾಜಕಾರಣ ದಿನೇ ದಿನೇ ವೈವಿದ್ಯತೆ ಕಾಣುತ್ತಿದ್ದು ಈ ವೈವಿಧ್ಯತೆಗೆ ಕಾರಣ ಹೊರಗಿನ ರಾಜ್ಯದವರು ಎನ್ನುವ ಅಂಶ ಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಆಂಧ್ರ ಮೂಲದ ರೆಡ್ಡಿ ಸೋದರರ ಚದುರಂಗದಾಟಕ್ಕೆ ನಮ್ಮ ರಾಜ್ಯದ ಸೀದಾ ಸಾದಾ ಮನುಷ್ಯನ ಕಬಡ್ಡಿ ಕಸರತ್ತುಗಳು ಸೋತು ಸುಣ್ಣವಾಗುತ್ತಿದ್ದು ರಾಜ್ಯದ ಜನತೆಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದೆ.

ಸರಿ ಮು. ಮಂತ್ರಿಗಳು take the bull by its horn ತತ್ವವನ್ನು ಅಳವಡಿಸಿಕೊಂಡು ಅಧಿಕಾರ ಉಳಿಸಿಕೊಳ್ಳುವುದನ್ನು ಬಿಟ್ಟು ಆಟಿಕೆ ಕಳಕೊಂಡ ಮಗುವಿನಂತೆ ಏಕೆ ಅಳುತ್ತಿದ್ದಾರೆ ಎನ್ನುವುದು ಅರ್ಥವಾಗದ ವಿಷಯ. ರಾಜಕಾರಣಿಗಳಿಗೆ ಅಧಿಕಾರ ಎನ್ನುವುದು ಮಕ್ಕಳಿಗೆ ಆಟಿಕೆ ಇದ್ದಂತೆ. ಅದು ಕೈ ತಪ್ಪಿದಾಗ ಅಥವಾ ಯಾರಾದರೂ ಕಸಿದುಕೊಳ್ಳಲು ಹವಣಿಸಿದಾಗ ವಿಹ್ವಲರಾಗುವುದೂ ಸಹಜವೇ. ಅದರಲ್ಲೇನೂ ತಪ್ಪಿಲ್ಲ ಎನ್ನಿ. ಜೀವನ ಪೂರ್ತಿ ಜನಸೇವೆ ಮಾಡಿ ಬದುಕಿನ ಮುಸ್ಸಂಜೆಯ ಕ್ಷಣಗಳಲ್ಲಿ ಒಂದಿಷ್ಟು ಅಧಿಕಾರದ ರುಚಿ ಉಣ್ಣುವ ಎಂದರೆ ಅದಕ್ಕೂ ಒಲ್ಲೆ ಎನ್ನುವ spoil sport ಆಡಿ ಖುಷಿ ಪಡುವ ವಿರೋಧಿಗಳು. ಎಡ್ಡಿಜೀ ಮು. ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದಾಗ ನನಗನ್ನಿಸಿದ್ದು ಈ ಸಾಧಾರಣ, ಕಪಟತನ ಅರಿಯದ ವ್ಯಕ್ತಿಯನ್ನು ಘಟಾನುಘಟಿ ಗಳು ಹರಿದು ತಿನ್ನುವುದರಲ್ಲಿ ಸಂಶಯವಿಲ್ಲ ಎಂದು. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರ ಏರಿದ ಭಾಜಪಕ್ಕೂ ಅಧಿಕಾರದ nuances ಏನು ಎನ್ನುವುದು ತಿಳಿಯಲಿಲ್ಲ. ಅದು ಕಲಿಯುವ ಹೊತ್ತಿಗೆ ಕುಮಾರ ಸ್ವಾಮಿ ಅಂಡ್ ಕಂಪನಿ ಸರಕಾರದ ಚರಮಗೀತೆ ಹಾಡಿ ಚಿಯರ್ಸ್ ಎಂದು ಕುಣಿಯಬಹುದು ಮತ್ತು ಎಡ್ಡಿಜಿ ಶರಣ ಶರಣೆಯರ ನಾಡಿಗೆ ಮರಳಿ ವಚನ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬಹುದು.