ನಿರಂಕುಶ ರಾಜಪ್ರಭುತ್ವ ಇರುವ, democracy ಎಂದರೆ ಡೈನೋಸಾರಾ ಎಂದು ಗಾಭರಿಯಲ್ಲಿ ಕೇಳುವ ಅರೇಬಿಯಾದಲ್ಲಿ ಎಂಥ ಬಂದ್ ಎಂದಿರಾ? ನಮ್ಮಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಥವಾ ವಿರೋಧಪಕ್ಷಗಳವರ ಜೀವ ಸುಟ್ಟು ತಿನ್ನಲು ನೀಡುವ ಕರೆಗೆ ಸ್ವಲ್ಪ ಭಿನ್ನ ಅರೇಬಿಯಾದ ಬಂದ್. ಎಷ್ಟೇ ಗಡಿಬಿಡಿ ಇದ್ದರೂ ನಮ್ಮನ್ನು ಸೃಷ್ಟಿಸಿ ಈ ಭೂಲೋಕಕ್ಕೆ ತಂದ ಆ ದೇವನನ್ನು ಆರಾಧಿಸಲು ಅಂಗಡಿ ಮುಂಗಟ್ಟುಗಳು ಬಂದ್ ಆಚರಿಸುತ್ತವೆ. ಬಹುತೇಕವಾಗಿ ಭಗವಂತನಿಗಾಗಿರುವ ಈ ಬಂದ್ ಸ್ವ-ಪ್ರೇರಣೆಯಿಂದ ನಡೆಯುತ್ತದೆ. ಕೆಲವೊಮ್ಮೆ “promotion of virtue and prevention of vice” department ಗೆ ಸೇರಿದ ಪೊಲೀಸರು (ಇವರನ್ನು “ಹಯ್ಯ” ಎಂತಲೂ ಕರೆಯುತ್ತಾರೆ) ಈ ಕಾನೂನನ್ನು ಜಾರಿ ಗೊಳಿಸುತ್ತಾರೆ. ಇವರ ಕೆಲಸವೇ ಜನರು ಪ್ರಾರ್ಥನೆಗೆ ಹೋಗುವಂತೆ ಮಾಡುವುದು.
ಪ್ರಥಮವಾಗಿ ಸೌದಿ ಅರೇಬಿಯಾಕ್ಕೆ ಬರುವವರಿಗೆ ಇದೊಂದು ವಿಚಿತ್ರ ವಿದ್ಯಮಾನವಾಗಿ ಕಾಣುತ್ತದೆ. ಪ್ರಪಂಚದಲ್ಲಿ ಬೇರಾವುದೇ ಮುಸ್ಲಿಂ ರಾಷ್ಟ್ರಗಳಲ್ಲೂ ಈ ರೀತಿಯ ವ್ಯವಸ್ಥೆಯಿಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ತೋರಿದರೂ ಬಹಳಷ್ಟು ಜನರಿಗೆ ಒಂಥರಾ ಕಿರಿಕಿರಿ. ಯಾವುದಾದರೂ ಕೆಲಕ್ಕೆಂದು ಹೊರಟರೆ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. ಅದರಲ್ಲೋ ಚಳಿ ಗಾಳದಲ್ಲಿ ಸಂಜೆಯ ಮತ್ತು ರಾತ್ರಿಯ ಪ್ರಾರ್ಥನೆಗಳ ಮಧ್ಯೆ ಕೇವಲ ಒಂದು ಘಂಟೆಯ ಅಂತರ. ಅಂಥ ಸಮಯದಲ್ಲಿ ರಾತ್ರಿಯ ಪ್ರಾರ್ಥನೆ ಮುಗಿದ ನಂತರವೇ ಶಾಪಿಂಗ್ ಹೋಗುವುದು ಲೇಸು. ಜೆಡ್ಡಾ ರಾತ್ರಿ ಬದುಕಿಗೆ ಖ್ಯಾತ. ಬಹುತೇಕ ಅಂಗಡಿಗಳು ಮಧ್ಯ ರಾತ್ರಿ ವರೆಗೆ ತೆರೆದಿರುತ್ತವೆ, ಕೆಲವೊಂದು ಸೂಪರ್ ಮಾರ್ಕೆಟ್ ಗಳು ೨೪ ಘಂಟೆಯೂ ತೆರೆದಿರುತ್ತವೆ. ಹೀಗೆ ಪ್ರಾರ್ಥನೆಗೆಂದು ಅಂಗಡಿ ಮುಂಗಟ್ಟುಗಳು ಮುಚ್ಚುವ ಪರಿಪಾಠ ಕೆಲವರಿಗೆ ಬೇಸರ, ಕೋಪ ತರಿಸುತ್ತದೆ. any time is prayer time here ಎಂದು ಒಬ್ಬ ಬಿಳಿಯ ಅಸಹನೆಯಿಂದ ನನ್ನಲ್ಲಿ ಹೇಳಿದ. ಅವನೇಕೆ ನನ್ನ ಆರು ವರ್ಷದ ಮಗನೂ ಮೊನ್ನೆ ಇದೇ ರೀತಿಯ ಮಾತನ್ನಾಡಿದ. ಜರೀರ್ ಪುಸ್ತಕದಂಗಡಿ ನೋಡಿದಾಗೆಲ್ಲಾ ಅಪ್ಪ, ಜರೀರ್ ಗೆ ಹೋಗೋಣ ಬಾ (ಜರೀರ್ ಇಲ್ಲಿನ ಸುಪ್ರಸಿದ್ಧ ಪುಸ್ತಕ ಮಳಿಗೆ) ಎಂದು ಗೋಗರೆದಾಗ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. i dont like salah, every day is salah time ಎಂದು ತನ್ನ ತನ್ನ ಹರುಕು ಮುರುಕು ಆಂಗ್ಲ ಭಾಷೆಯಲ್ಲಿ ಸಿಡಿದೇಳುತ್ತಾನೆ. ನನಗೆ “ಸಲಾ” ಇಷ್ಟವಿಲ್ಲ, ಯಾವಾಗ ನೋಡಿದರೂ ಸಲಾ ಸಮಯ ಎಂದು ಅವನು ಹೇಳುವ ರೀತಿ ಇದು.
“ಸಲಾ” ಎಂದರೆ ಅರಬಿ ಭಾಷೆಯಲ್ಲಿ “ಆರಾಧನೆ”. ನಾವು ನಮಾಜ್ ಎಂದು ಹೇಳುತ್ತೆವಲ್ಲ, ಅದು. ಸಲಾ ಎನ್ನುವ ಪದ “ಸಿಲ್” ಎನ್ನುವ ಪದದಿಂದ ಬಂದಿದ್ದು ಮತ್ತು “ಸಿಲ್” ಎಂದರೆ ಸಂಪರ್ಕ ಅಂತ. ವಾಹ್, ನಮ್ಮನ್ನು ಮಣ್ಣಿನಿಂದ ಸೃಷ್ಟಿಸಿ, ದೇವದೂತರಿಂದ ನಮಗೆ ಸಾಷ್ಟಾಂಗ ಮಾಡಿಸಿ ಅವನ ಉತ್ತಾರಾಧಿಕಾರಿಯಾಗಿ ಭೂಲೋಕ ಆಳಲು ಕಳಿಸಿದ ಪರಮಾತ್ಮನೊಂದಿಗೆ ಸಂಪರ್ಕ. ನೇರ ಸಂಪರ್ಕ. ಯಾರ ಮಧ್ಯಸ್ಥಿಕೆಯೂ ಇಲ್ಲದ ನೇರ ಒಡನಾಟ.ಇಂಥ ಪರಮಾತ್ಮನಿಗೆ ಸಾಷ್ಟಾಂಗ ಎರಗಲು ಸಮಯ ನಿಗದಿ ಪಡಿಸಿದರೆ ನಮ್ಮ ಶಾಪ್ಪಿಂಗ್ ತೆವಲಿಗೆ ಇದು ಅಡ್ಡ ಎಂದು ಅದರ ವಿರುದ್ಧ ನಮ್ಮ ತಗಾದೆ.
ನೀವು ಶಾಪಿಂಗ್ ಮಾಡುತ್ತಿರುವಾಗ ನಮಾಜಿನ ಕರೆ ಮೊಳಗಿದರೂ ನಿಮ್ಮನ್ನು ಹೊರಗಟ್ಟುತ್ತಾರೆ. ನೀವು ಗೋಣಿ ಚೀಲ ಭರ್ತಿ ರೊಕ್ಕ ಇಟ್ಟುಕೊಂಡು ಹೋಗಿದ್ದರೂ ಆ ಹಣ ಅಂಗಡಿಯವನಿಗೆ ಬೇಡ. ಮೊದಲು ಪ್ರಾರ್ಥನೆ ನಂತರ ನಿನ್ನ ವ್ಯಾಪಾರ ಎನ್ನುತ್ತಾರೆ. ಅಷ್ಟೊಂದು ಭಯ ಕಾನೂನಿನದು. ಪೊಲೀಸರು ಬಂದರೆ ಸರಿಯಾದ ದಂಡ ವಿಧಿಸುತ್ತಾರೆ ಎಂದು ಭಯ. ಕೆಲವೊಮ್ಮೆ ನನಗೂ ಅನ್ನಿಸುವುದುಂಟು. ಭಗವಂತನ ಆರಾಧನೆಗೆ ಮೂರನೆಯವರ ಬಲವಂತ ಏಕೆ ಎಂದು.
ಜೆಡ್ಡಾದಲ್ಲಿ ಸಾರಿಗೆ ತಡೆ ಸಿಕ್ಕಾಪಟ್ಟೆ. ಎಲ್ಲರ ಹತ್ತಿರವೂ ಕಾರು. ಇಲ್ಲದೆ ಏನು, ಪೆಟ್ರೋಲ್ ಒಂದು ಲೀಟರ್ ಗೆ ಇಲ್ಲಿನ ೪೫ ಪೈಸ (ಭಾರತದ ಐದು ರೂಪಾಯಿಗಿಂತ ಕಡಿಮೆ). ಕಾರನೂ ಸಾಕುವುದು ಸುಲಭ ತಾನೇ. ಹೀಗೆ ಈ ಟ್ರಾಫಿಕ್ ಅನ್ನು ದಾಟಿಕೊಂಡು ಅಂಗಡಿ ಸೇರಿದೆವು ಅನ್ನುವಷ್ಟರಲ್ಲಿ ಸಲಾ ಟೈಂ. ಕೆಲವೊಮ್ಮೆ ಶಾಪಿಂಗ್ ಮಧ್ಯೆ ನಮಾಜಿನ ಸಮಯವಾದರೂ ನಿರ್ದಾಕ್ಷಿಣ್ಯದಿಂದ ಹೊರಗಟ್ಟುತ್ತಾರೆ. ಆದರೆ ಎಲ್ಲಾ ಮಾಲುಗಳಲ್ಲೂ, ಇನ್ನಿತರ ಸ್ಥಳಗಳಲ್ಲೂ ಆರಾಧನೆಗೆ ವಿಶೇಷ ಸೌಲಭ್ಯವಿದೆ. ಏನಿಲ್ಲವೆಂದರೂ ಪ್ರತಿಯೊಬ್ಬರ ಕಾರಿನಲ್ಲಿ ಚಿಕ್ಕ ಕಂಬಳಿ (prayer rug) ಇರುತ್ತದೆ. ಎಲ್ಲಿ ನಿಂತಿರುತ್ತಾರೋ ಅಲ್ಲೇ ಹಾಸಿ ಭಗವಂತನ ಸ್ತುತಿ ಮಾಡುತ್ತಾರೆ.
ಒಮ್ಮೆ ನಾನು ನನ್ನ ಸೋದರಿಯ ಟಿವಿ ರೆಪೇರಿ ಮಾಡಿಸಲೆಂದು “ಬಲದ್” ಎಂದು ಕರೆಯಲ್ಪಡುವ ಜೆಡ್ಡಾ ನಗರದ ಪ್ರಮುಖ ಆಕರ್ಷಣೆಯ ವಲಯಕ್ಕೆ ಹೋದೆ. ಆಗ ತಾನೇ ಸೂರ್ಯ ಅಸ್ತಮಿಸುತ್ತಿದ್ದ. ಸೂರ್ಯಾಸ್ತಮಾನದ ಪ್ರಾಥನೆಯ ಸಮಯ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಶುರು ಆಗುವುದರಲ್ಲಿತ್ತು. ಅಷ್ಟರಲ್ಲೇ ಅಂಗಡಿ ತಲುಪಿದ ನಾನು ಅಂಗಡಿಯವನಿಗೆ ಟಿವಿ ಒಪ್ಪಿಸಿ ಬೇಕಾದ ಕಾಗದ ಅವನಿಂದ ಪಡೆದು ಅಂಗಡಿ ಹೊರಗೆ ಕಾಲಿಡುವಷ್ಟರಲ್ಲಿ ಬಂದರು ಪೊಲೀಸರು. ಅಂಗಡಿಯ ಮುಂದೆ ಜೀಪ್ ನಿಲ್ಲಿಸಿದ್ದೆ, ಧಡ ಧಡ ಇಳಿದು ನನ್ನನ್ನೂ, ಅಂಗಡಿಯ ಬಾಗಿಲು ಹಾಕುತ್ತಿದ್ದವನನ್ನೂ, ಇನ್ನಿಬ್ಬರನ್ನೂ ಜೀಪ್ ಹತ್ತಿಸಿದರು. ನಾವು ಪ್ರಾಥನೆಗೆ ಹೋಗಲೇ ಹೊರಟಿದ್ದು ಎಂದು ಹೇಳಿದರೂ ಕೇಳದೆ ನಮ್ಮಿಂದ ನಮ್ಮ ಗುರುತು ಚೀಟಿ ಪಡೆದುಕೊಂಡು ಓಡಿಸಿದರು ಜೀಪನ್ನು ಹತ್ತಿರದಲ್ಲೇ ಇದ್ದ ಮಸೀದಿಗೆ. ನನ್ನೊಂದಿಗೆ ಇದ್ದ ನಮ್ಮ ಆಫೀಸಿನ ಹುಡುಗನೊಬ್ಬ ಹೆದರಿ ಈಗೇನಾಗಬಹುದು ಎಂದು ಕಣ್ ಸನ್ನೆಯಿಂದ ಕೇಳುತ್ತಿದ್ದ. ಪಾಪ ಅವನು ಭಾರತದಿಂದ ಬಂದ ಹೊಸತು. ಎಂಥ ಸ್ವಾಗತ ಸಿಕ್ಕಿದೆ ಇವನಿಗೆ ಎಂದು ನನಗೆ ಒಂದು ಕಡೆ ನಗು, ಮತ್ತೊಂದು ಕಡೆ ಕನಿಕರ. ನನಗಂತೂ ಇಂಥವನ್ನು ಕೇಳಿ, ಓದಿ ಸಾಕಷ್ಟು ಪರಿಚಯವಿತ್ತು. ನಾವೇನೂ ಕಳ್ಳ ಕಾಕರಲ್ಲವಲ್ಲ. ಭಯ ಏಕೆ ಎಂದು ಅವರು ತಂದು ಬಿಟ್ಟ ಮಸೀದಿಯ ಬಳಿ ಇಳಿದೆ. ಪೊಲೀಸ್ ಜೀಪಿನಿಂದ ಇಳಿದ ನಮ್ಮನ್ನು ನೋಡಲು ಜನರಿಗೆ ಒಂಥರಾ ಮೋಜು. ಆಹಾ, ನಮಾಜ್ ಮಾಡದೆ ಅಡ್ಡಾಡುತ್ತೀರಾ ಎಂದು ತುಂಟತನದಿಂದ ನಮ್ಮೆಡೆ ನೋಟ ಬೀರಿ ನಗುತ್ತಿದ್ದರು. ಒಂದು ರೀತಿಯ ಅವಮಾನ ತಾನೇ? ನಮಾಜಿನ ಸಮಯದಲ್ಲಿ ನಮಾಜ್ ಮಾಡುವುದು ಬಿಟ್ಟು ಟಿವಿ ರೆಪೇರಿ, ಮತ್ತೇನೋ ಕೆಲಸ. ಸರಿ ನಾವು ಓಡಿ ಹೋಗದಂತೆ ನಮ್ಮ ಗುರುತಿನ ಚೀಟಿ ಜಪ್ತಿ ಆಗಿದೆಯಲ್ಲ. ನಾವು ನಮಾಜ್ ಮಾಡಿ ಜೀಪಿನ ಹತ್ತಿರ ಬಂದು ಪೊಲೀಸರೊಂದಿಗೆ ನಮ್ಮ ಯಾತ್ರೆ ಠಾಣೆಯ ಕಡೆ. ನಮಾಜ್ ಮಾಡಿಸಿ ಸುಮ್ಮನೆ ತಾಂಬೂಲ ಕೊಟ್ಟು ಕಳಿಸುವುದಿಲ್ಲ. ಠಾಣೆಗೆ ಹೋಗಬೇಕು. ಸರಿ ಠಾಣೆ ತಲುಪಿದೆವು. ಅಲ್ಲಿದ್ದ ಅಧಿಕಾರಿ ಸೌಮ್ಯವಾದ ಸ್ವರದಲ್ಲಿ ಕೇಳಿದ ನಮಾಜ್ ಮಾಡಲು ಎಂದು ಧಾಡಿ ಎಂದು. ನಾವು ನಮ್ಮ ಕಾರಣವನ್ನು ಹೇಳುತ್ತಿದ್ದಂತೆ ಅದೇನನ್ನೋ ಅರಬ್ಬೀ ಭಾಷೆಯಲ್ಲಿ ಬರೆದು ಸಹಿ, ಹೆಬ್ಬಟ್ಟು ಒತ್ತಿಸಿಕೊಂಡು ಬಿಟ್ಟರು. ಯಾರೋ ಹೇಳಿದರು ಈ ರೀತಿ ಮೂರು ಬಾರಿ ನಮ್ಮ ಹೆಸರು ದಾಖಲಾದರೆ ಗಡೀಪಾರಂತೆ. ನಮ್ಮ ಕಾರಿನಿಂದ ಬಹು ದೂರ ಬಂದಿದ್ದೆವು. ಅವರೇನು ನಮ್ಮನ್ನು ಕರೆತಂದ ಸ್ಥಳಕ್ಕೆ ಬಿಡಲು ಅವರ ಬೀಗರೇ ನಾವು? ಟ್ಯಾಕ್ಸಿ ಹಿಡಿದು ನನ್ನ ಕಾರಿರುವ ಸ್ಥಳಕ್ಕೆ ಬಂದೆ. ಇಷ್ಟು ಸುಲಭವಾಗಿ ಸಮಸ್ಯೆ ಪರಿಹಾರವಾಗಿದ್ದು ನಮ್ಮ ಪುಣ್ಯವೆಂದೇ ಹೇಳಬೇಕು. ಮತ್ತೇನು ನೇಣು ಹಾಕುತ್ತಿದ್ದರಾ ಎಂದು ಕೇಳಬೇಡಿ. ನಮಾಜ್ ಮಾಡಿಸಿ, ಠಾಣೆಗೆ ತಂದ ನಂತರ ಕೆಲವು ತಲೆ ಕೆಟ್ಟ ಪೊಲೀಸರು ಅವರದೇ ಆದ ರೀತಿಯಲ್ಲಿ ರಾಟೆ ಏರಿಸುತ್ತಾರೆ. ಅಂದರೆ ನಿಮಗೆ ನಮಾಜ್ ಗೊತ್ತಲ್ಲ. ನಿಲ್ಲುವುದು, ಬಾಗುವುದು, ಸಾಷ್ಟಾಂಗ ಎರಗುವುದು, ನಂತರ ಮಗುದೊಮ್ಮೆ ನೇರವಾಗಿ ನಿಲ್ಲುವುದು. ಒಂದು ರೀತಿಯ ಶಾಸ್ತ್ರೀಯ ನೃತ್ಯ, ಕ್ಷಮಿಸಿ ಶಾಸ್ತ್ರೀಯ ಭಸ್ಕಿ. ಹೀಗೆ ಮೂರು ಸಲ ಆವರ್ತಿಸಿದಾಗ ಸೂರ್ಯಾಸ್ತಮಾನದ ನಮಾಜ್ ಮುಗಿದಂತೆ. ಈ ರೀತಿಯ ಬಾಗುವುದು, ಏಳುವುದು ಈ ಸರ್ಕಸ್ಸನ್ನು ಸುಮಾರು ಐವತ್ತೋ, ನೂರೋ ಸಲ ಮಾಡಿಸಿ ಬಿಡುತ್ತಾರೆ. ಅದಾದ ಮೇಲೆ ಆಗುವ ಗತಿ ಗೊತ್ತೇ ಇದೆಯಲ್ಲ, ಅನುಭವ ಚಿತ್ರದಲ್ಲಿ ಕಾಶೀನಾಥ್ ಹುಡುಗಿಯರನ್ನು ಪಟಾಯಿಸಲು ಬಾಡಿ ಬಿಲ್ಡ್ ಎಂದು ಭಸ್ಕಿ ಜೋರಾಗಿ ಹೊಡೆದು ನಡೆದ ಶೈಲಿ. ಆ ಗತಿ ನಮಾಜ್ ಮಾಡದವನಿಗೆ. ದೇವರಾದರೂ ಕನಿಕರ ತೋರಿಸಿಯಾನು, ಪೊಲೀಸರು ತೋರಿಸುವುದಿಲ್ಲ.
ಜನರಿಂದ ನಮಾಜ್ ಮಾಡಿಸಿದ ಈ ಪೊಲೀಸರು ಬಿಡುವಿದ್ದರೆ ಮಾಲ್ ಗಳಿಗೆ ಹೋಗುತ್ತಾರೆ ಚೇಷ್ಟೆಗೆಂದು ಬರುವ ಪಡ್ಡೆ ಹುಡುಗ ಹುಡುಗಿಯರಿಗಾಗಿ. ಸ್ವಲ್ಪ ಅನುಮಾನ ಕಂಡರೂ ಸಾಕು ಅವರನ್ನು ಕರೆದು ತಾಕೀತು ಮಾಡುತ್ತಾರೆ, ಇಲ್ಲಾ ಭಸ್ಕಿ ಹೊಡೆಸಿ ಗೋಳು ಹೊಯ್ದುಕೊಳ್ಳುವ ಪೋಲೀಸರಾದರೆ ಅಪ್ಪಂದಿರನ್ನು ಕರೆಸುತ್ತಾರೆ ಠಾಣೆಗೆ. ಜನ್ಮ ಕೊಟ್ಟರೆ ಸಾಲದು, ಸರಿಯಾಗಿ ಸಾಕಬೇಕು ಎಂದು ಬುದ್ಧಿ ಹೇಳಲು. ಇವರ ವಿರುದ್ಧ ಯಾರೂ ಸೊಲ್ಲೆತ್ತುವುದಿಲ್ಲ, ಏಕೆಂದರೆ ಇವರ ವಿರುದ್ಧ ನೀವು ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಪ್ರಯೋಜನವಿಲ್ಲ, ನ್ಯಾಯ ಹೇಳುವವನೂ ಇವರ ವರ್ಗಕ್ಕೇ ಸೇರಿದವನು.
ಒಮ್ಮೆ ನಗರದ ಮಧ್ಯ ಭಾಗದಲ್ಲಿರುವ ಹಿರಾ ಮಾಲ್ನಲ್ಲಿ ಅಡ್ಡಾಡುತ್ತಾ ಇರುವಾಗ ಕಂಡಿದ್ದು. ನಾಲ್ಕು ಜನ ಹುಡುಗರು ಬೆರ್ಮುಡ, ಉದ್ದದ ಕೂದಲು, ಕೊರಳಿಗೆ ಸರ, ಕೈಗೆ ಕಡಗ ಹೀಗೆ ಒಂದು ಥರಾ ಜಿಪ್ಸಿ ಗಳ ಥರಾ ನಡೆಯುತ್ತಿದ್ದರು. ಆಗಮನವಾಯಿತು ಈ ಪೊಲೀಸರದು. ಸಮಾಜದಲ್ಲಿ ನೈತಿಕತೆ ಕಾಪಾಡಲು ನಿಯಮಿಸಲ್ಪಟ್ಟ “ಮುತಾವಾ”ಗಳು. ಆ ಹುಡುಗರನ್ನು ನಿಲ್ಲಿಸಿ ಶುರು ಮಾಡಿದರು ಪ್ರಶ್ನೆಗಳನ್ನು. ಕೂದಲು ಹೀಗೇಕೆ ಬಿಟ್ಟಿದ್ದೀಯ, ಇದೇನು ನಿನ್ನ ಅವತಾರ, ನೀವೆಲ್ಲಿ ವಾಸವಾಗಿದ್ದೀರಾ….. ಹುಡುಗರು ಭಯದಿಂದ ಕೇಳಿದ ಪ್ರಶ್ನೆಗಳಿಗೆ ತಡಬಡಿಸಿ ಉತ್ತರಿಸಿ ಇನ್ನು ಈ ವೇಷದಲ್ಲಿ ನಾವು ಅಡ್ಡಾಡುವುದಿಲ್ಲ ಎಂದು ಹೇಳಿ ಅವರ ಕೈಗಳಿಂದ ತಪ್ಪಿಸಿಕೊಂಡರು. ಕೆಲವೊಮ್ಮೆ ಇಷ್ಟರಲ್ಲೇ ನಿಲ್ಲುತ್ತದೆ ಈ ವಿಚಾರಣೆ, ಒಂದಿಷ್ಟು ಕೌನ್ಸೆಲಿಂಗ್ನೊಂದಿಗೆ. ಒಂದು ದಿನ ನಾನು ನನ್ನ ಶ್ರೀಮತಿ ಮಕ್ಕಾದ ಮಸೀಯಿಂದ ಹೊರ ನಡೆಯುತ್ತಿದ್ದಾಗ ಬಂದ ಇಂಥದ್ದೇ ಒಬ್ಬ ಪೋಲೀಸಪ್ಪ. ನನ್ನನ್ನು ತಡೆದು ನಿನ್ನ ಪತ್ನಿಯೇಕೆ perfume ಧರಿಸಿದ್ದಾಳೆ ಎಂದು. ನೀನೆಕಪ್ಪ ನನ್ನ ಹೆಂಡತಿಗೆ ಮೂಗು ತಾಗಿಸಿದ್ದು ಎಂದು ಕೇಳಲು ಮನಸ್ಸಾದರೂ ನಿನ್ನ ಮೂಗಿಗೆ ಬಡಿದಿದ್ದು ನನ್ನ Mont Blanc ಪರ್ಫ್ಯೂಂ ಎಂದು ಹೇಳಿ ಮುಂದೆ ನಡೆದೆ. ಸ್ತ್ರೀಯರು ಸುಗಂಧ ದ್ರವ್ಯ ಹಚ್ಚಿಕೊಳ್ಳಬಾರದು, ಅದು ಪರ ಪುರುಷರಿಗೆ open invitation.
ಕೆಲವೊಮ್ಮೆ ನವಿರಾಗಿ ವರ್ತಿಸುವ “ಮುತಾವಾ” ಎಂದೂ ಕರೆಯಲ್ಪಡುವ ಈ ಸಮಾಜ ಸುಧಾರಕರಿಂದ ಸಮಾಜಕ್ಕೇನೋ ಒಳ್ಳೆಯದೇ. ಇಲ್ಲಿನ ನಿಯಮಿತ ಸ್ವಾತಂತ್ರ್ಯದ ಚೌಕಟ್ಟಿನೊಳಗೆ ಅನಿಯಮಿತವಾಗಿ ವರ್ತಿಸುವ ಯುವ ವರ್ಗಕ್ಕೆ, ಯೌವ್ವನದ ಎಗ್ಗಿಲ್ಲದ ರಭಸಕ್ಕೆ ತಡೆ ಒಡ್ಡುವ ಇಂಥ road hump ಗಳು ಅವಶ್ಯಕ.
ಸೌದಿ ಅರೇಬಿಯಾದಲ್ಲಿ ಆಗುವ ಭಗವಂತನ ನಾಮ ಸ್ಮರಣೆ ಬೇರಾವ ದೇಶದಲ್ಲೂ ಆಗಲಿಕ್ಕಿಲ್ಲವೇನೋ. ರಸ್ತೆ ಬದಿಯಲ್ಲಿ, ಬ್ಯಾಂಕಿನಲ್ಲಿ ಸರತಿಯಲ್ಲಿ ನಿಂತಾಗ, ಜಾಹೀರಾತಿನ ಮಧ್ಯೆ ಹೀಗೆ ಎಲ್ಲೆಡೆ ದೇವರನ್ನು ಸ್ಮರಿಸಲು, ಕೊಂಡಾಡಲು ಕರೆ. ಹೀಗೆ ಸದಾ ದೇವನಾಮ ಸ್ಮರಣೆ ಮಾಡುವ ಸಮಾಜ ಅದೇ ದೇವನ ಆದೇಶವನ್ನು ಕಡೆಗಣಿಸುವುದರಲ್ಲೂ ಮುಂದು ಎಂದರೆ ನಿಮಗೆ ಅಚ್ಚರಿ ಆಗಬಹುದು. ಈ ದ್ವಂದ್ವ ನಮಗೆ ಹೇರಳವಾಗಿ ಈ ಮರಳುಗಾಡಿನಲ್ಲಿ ಕಾಣಲು ಸಿಗುತ್ತದೆ.