ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ ಮಗು ೭೦೦ ಕೋಟಿಯದು. ಭರ್ತಿ ಏಳು ಬಿಲ್ಲಿಯನ್. ವಿರಾಮ ಖುರ್ಚಿ ಪಂಡಿತರಿಗೆ ಈ ಸುದ್ದಿ ಒಂದು ಸುಗ್ಗಿ. ತಮಟೆ ಬಾರಿಸಲು ಆರಂಭಿಸುತ್ತಾರೆ ಜನಸಂಖ್ಯೆಯ ವಿಪರೀತ ವೃದ್ಧಿ ಮತ್ತು ಅದು ತರಬಹುದಾದ ಆಪತ್ತುಗಳ, ಅನಾಹುತಗಳ ವರ್ಣನೆಯೊಂದಿಗೆ.     

ಜನಸಂಖ್ಯೆ ತಡೆಯಲು ಇರುವ ನೂರ ಒಂದು ಅಥವಾ ಸಾವಿರದ ಒಂದು ಉಪಾಯಗಳ ಜೊತೆ ಮತ್ತೊಂದು ಉಪಾಯ ಈಗ ಸೇರಿಕೊಂಡಿದೆ. ಮಹಿಳೆಯರಿಗೆ ಸಂತಾನೋತ್ಪತ್ತಿ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದರೆ ಜನಸಂಖ್ಯೆ ತಗ್ಗ ಬಹುದಂತೆ. ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಧ್ವನಿ ಜೋರಾದಾಗ ಸಂತಾನೋತ್ಪತ್ತಿ ತಂತಾನೇ ನಿಧಾನ ಆಗಬಹುದು ಅನ್ನೋ ಆಶಯ. ಜನಸಂಖ್ಯೆ ಏರಿಕೆ ಈಗ ಇರುವ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಡಿತರ ಒಂದು ಗುಂಪು ಹೇಳುತ್ತಿದ್ದರೆ ಮತ್ತೊಂದು ಗುಂಪಿಗೆ ಈ ಥಿಯರಿ ನಥಿಂಗ್ ಬಟ್ ಟ್ರಾಶ್. ಯಾರನ್ನು ನಂಬುವುದು?

 ಕ್ಷಿಪ್ರ ಗತಿಯಲ್ಲಿ ಮುಪ್ಪಾಗುತ್ತಿರುವ ಜಪಾನ್

ಒಂದು ಕಡೆ ಏರುತ್ತಿರುವ ಜನಸಂಖ್ಯೆ ವಿಶೇಷಜ್ಞರ ಆತಂಕವನ್ನು ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ತಮ್ಮ ದೇಶದ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟು, ಅದರ ಜೊತೆ ಟೈಮ್ ಆಫು ಮುಂತಾದುವುಗಳನ್ನು ಯುವಜನರ ಮುಂದೆ ಇಡುತ್ತಿರುವ ಬೆಳವಣಿಗೆ. ಈ ಬೆಳವಣಿಗೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾದರೂ ಪವಾಡಸದೃಶವಾಗಿ ಶ್ರೀಮಂತಿಕೆಯಿಂದ ಕಂಗೊಳಿಸಿದ ಜಪಾನ್ ದೇಶದ್ದು. time off ಏಕೆಂದರೆ ಮಕ್ಕಳನ್ನು ಹುಟ್ಟಿಸಲು, ದೊಡ್ಡ ಪರಿವಾರಕ್ಕಾಗಿ ಅಂಗಡಿ ಮುಂಗಟ್ಟು ಗಳು ರಿಯಾಯಿತಿಯನ್ನು ಘೋಷಿಸುತ್ತಿವೆ ಜಪಾನ್ ದೇಶದಲ್ಲಿ. ಹುಟ್ಟುವ ಪ್ರತೀ ಮಗುವಿನ ಮೇಲೂ ಹಣಕಾಸಿನ ಸಹಾಯ ಕೊಡ ಮಾಡುತ್ತಿದೆ ಅಲ್ಲಿನ ಸರಕಾರ. ಈ ಕ್ರಮಗಳ ಮೂಲಕ ಏನಾದರೂ ಮಾಡಿ, ಹೇಗಾದರೂ ಮಾಡಿ, ಜನಸಂಖ್ಯೆ ಹೆಚ್ಚಿಸಿರಯ್ಯ ಎಂದು ಅಲ್ಲಿನ ಸರಕಾರದ ವಿಜ್ಞಾಪನೆ. ನಮ್ಮ ದೇಶ one is fun ಎಂದು ಊಳಿಡುತ್ತಿದ್ದರೆ, ಜಪನೀಯರ ಆಕ್ರಂದನ more please ಎಂದು.  ಪ್ರಪಂಚ ವೈರುಧ್ಯಗಳ ಸಂತೆ, ಅಲ್ಲವೇ?

ಬಹುಪಾಲು ಜಪನೀಯರಿಗೆ ಸಂತಾನ ವೃದ್ಧಿ ಅನ್ನೋದು ‘to do list’ ನ ಕಟ್ಟಕಡೆಯ ಎಂಟ್ರಿ. ಇದನ್ನು ಟಾಪ್ ಪ್ರಯಾರಿಟಿ ಮಾಡಲು ಸರಕಾರದ ಸರ್ಕಸ್ಸು. ಯುವಜನರ ಒತ್ತು ಪ್ರೋಗ್ರೆಸ್ ಕಡೆ, ಪ್ರೊಕ್ರಿಯೇಶನ್ ಕಡೆ ಅಲ್ಲ. ಏಕೆಂದರೆ ಅಲ್ಲಿ ವಿವಾಹ ದುಬಾರಿ. ಪ್ರತೀ ವಿವಾಹಕ್ಕೆ ಸುಮಾರು ೨೦ ಲಕ್ಷ ರೂಪಾಯಿ ಖರ್ಚು. ಮದುವೆಯಾದ ಮೇಲೆ ಮಗು ಹುಟ್ಟಿದರೆ ಮಗುವಿನ ತಾಯಿಗೆ ಒಳ್ಳೆಯ ವರಮಾನ ಕೊಡುವ ಕೆಲಸ ಸಿಗೋದು ಕಷ್ಟ. ಅಮೇರಿಕಾ ಅಥವಾ ಅಇರೋಪ್ಯ ದೇಶಗಳ ಹಾಗೆ  ಮದುವೆಯಾಗದೆ ಸಂತಾನೋತ್ಪತ್ತಿ ಜಪಾನಿನಲ್ಲಿ ವಿರಳ.  ಅಷ್ಟು ಮಾತ್ರವಲ್ಲ ಜಪಾನಿನಲ್ಲಿ ದೀರ್ಘಾಯುಷಿಗಳು ಹೆಚ್ಚು. ಮೇಲಿನ ಕಾರಣಗಳನ್ನು ಕೂಡಿಸಿ ನೋಡಿದಾಗ ಜಪಾನಿನಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಅತಿ ಕಡಿಮೆ.     

ಜನಸಂಖ್ಯೆ ವೃದ್ಧಿಗೆ ಒತ್ತು ಕೊಡುತ್ತಿರುವ ಮತ್ತೊಂದು ದೇಶ ಸ್ಪೇನ್. ಸ್ಪೇನ್ ದೇಶದಲ್ಲಿ ಹುಟ್ಟುವ ಪ್ರತೀ ಮಗುವಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರ ನೀಡುತ್ತದೆ.      

ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು

ತಟ್ಟು ಚಪ್ಪಾಳೆ ಪುಟ್ಟ ಮಗು, ಇಕೋ ಕೈ, ತಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು… ಈ ಕವಿತೆಯನ್ನು ೭೦೦ ನೇ ಕೋಟಿ ಮಗುವಿಗೆ ಹಾಡಿ ಕೇಳಿಸಲು ಸಲ್ಮಾನ್ ರುಶ್ಡಿ ತಯಾರಲ್ಲ. ೭೦೦ ನೇ ಕೋಟಿ ಮಗುವಿಗೆ ನೀವು ಕೊಡುವ ಸಂದೇಶವೇನು ಎಂದು ಕೇಳಿದಾಗ ಬುಕರ್ ಪ್ರಶಸ್ತಿ ವಿಜೇತ, ವಿವಾದಾಸ್ಪದ ಲೇಖಕ ಹೇಳಿದ್ದು “(ಧರೆಯ ಮೇಲೆ) ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು” ಎಂದು. imagine no heaven.

ಸಂಪನ್ಮೂಲಗಳನ್ನು ನುಂಗಲೆಂದೇ ಹುಟ್ಟುತ್ತವೆ ಮಕ್ಕಳು ಎಂದು ನಂಬುವವರು ಇದಕ್ಕಿಂತ ಒಳ್ಳೆಯ ಮಾತನ್ನು ಆಡಲಾರರು. ಸುಮಾರು ಐದು ದಶಕಗಳಿಂದಲೂ ನಾವು ಕೇಳುತ್ತಾ ಬಂದಿದ್ದು, ಜನಸಂಖ್ಯೆ ಏರುತ್ತಿದೆ, ವಾತಾವರಣ ಬದಲಾಗುತ್ತದೆ, ತಿನ್ನಲು ಏನೂ ಇರುವುದಿಲ್ಲ, ಹಸಿವಿನಿಂದ ಜನ ಸಾಯಲಿದ್ದಾರೆ, ಬರ ಬಂದೆರಗಲಿದೆ. ಏರುತ್ತಿರುವ ಜನಸಂಖ್ಯೆ ಕಾರಣ ನಮ್ಮ ಗ್ರಹ ಇಕ್ಕಟ್ಟಾಗುತ್ತಿದೆ, ಹಾಗೇ ಹೀಗೆ…ಆದರೆ ಅಂಥ ಎಚ್ಚರಿಕೆಗಳು, ‘caveat emptor’ ಗಳು  ಪ್ರಕಟವಾದ ಕಾಗದಗಳ ಜೊತೆ ರದ್ದಿ ಸೇರಿದವೆ ವಿನಃ ಯಾವುದೇ ಕೇಡುಗಾಲ ಬಂದೆರಗಲಿಲ್ಲ.   

ಈ ಲೇಖನದ ಕರ್ತೃವಿನ ಸಂದೇಶ

ಕಂದಾ ಸುಸ್ವಾಗತ, ನಮ್ಮ ಭವ್ಯ ಧರೆಗೆ. ಶತಮಾನಗಳಿಂದ ಪೂರ್ವದಿಂದ ಹುಟ್ಟುತ್ತಿರುವ ಸೂರ್ಯ ಮತ್ತು ಪಶ್ಚಿಮದಲ್ಲಿ ಮುಳುಗುವ ಸೂರ್ಯನ ನಡಿಗೆಯ ನಿಯಮವನ್ನು ನಾವು ಬದಲಿಸಲಿಲ್ಲ. ಉಸಿರಾಡುವ ಗಾಳಿ ಎಂದಿನ ಹಾಗೇ ಈಗಲೂ ತೆರಿಗೆಯಿಂದ ಮುಕ್ತ. ಹೌದು ನಿನ್ನಿಂದ ಎರವಲು ಪಡೆದಿದ್ದ ಭೂಮಿಯ ಮೇಲೆ ನಮ್ಮ ಅಹಂ ಮತ್ತು ಸ್ವಾರ್ಥದ ಕಾರಣ ಸಾಕಷ್ಟು ಅನಾಚಾರ ಎಸಗಿದ್ದೇವೆ. ನಮ್ಮ ಮಣ್ಣನ್ನು ಮೊನ್ಸಾಂಟೊ ಕಂಪೆನಿಗೆ ಗುತ್ತಿಗೆ ಕೊಟ್ಟು ಉಸಿರುಗಟ್ಟಿಸಿದ್ದೇವೆ. ಕಾಯಿ ಹಣ್ಣಾಗಲು ನಿಸರ್ಗ ನಿಯಮ ತೆಗೆದುಕೂಳ್ಳುವ ಸಮಯಕ್ಕೆ ಕಾಯುವ ವ್ಯವಧಾನ ನಮ್ಮಲ್ಲಿಲ್ಲ, ಅದಕ್ಕೆ. ಆದರೂ, ಇವೆಲ್ಲದರ ನಡುವೆಯೂ, ಕೆಲವೊಂದು ಒಳ್ಳೆಯ ಅವಿಷ್ಕಾರಗಳನ್ನೂ ನಿನಗಾಗಿ ತಯಾರಿಸಿ ಇಟ್ಟಿದ್ದೇವೆ. ನೀನು ಜನರೊಂದಿಗೆ ಬೇರೆಯದೇ, ಯಾವುದೇ ಸಭೆ ಸಮಾರಂಭ ಗಳಿಗೂ ಹೋಗುವ ತಾಪತ್ರಯವಿಲ್ಲದೆ ಮನೆಯಲ್ಲೇ ಕೂತು ಜೇಡನ ಬಲೆಯೊಳಕ್ಕೆ ಅವಿತುಕೊಂಡು ಮೊಬೈಲ್, ಫೇಸ್ ಬುಕ್, ಟ್ವಿಟ್ಟರ್, ಎಸ್ಸೆಮ್ಮೆಸ್, ಐ-ಪ್ಯಾಡ್, ಐ-ಪಾಡ್, ಇ-ಮೇಲ್ ಮುಂತಾದ ಸಾಮಾಜಿಕ ತಾಣ, ಅನುಕೂಲಗಳ ಮೂಲಕ ಜನರೊಂದಿಗೆ ನೇರವಾಗಿ ಬೆರೆಯದೆ ವ್ಯವಹರಿಸಲು ಅನುಕೂಲ ಮಾಡಿದ್ದೇವೆ. ಜನರೊಂದಿಗೆ ಬೆರೆತಾಗ ತಾನೇ ತಾಪತ್ರಯ? ಇಂಥ ಸುಂದರ ಪ್ರಪಂಚಕ್ಕೆ ನಿನಗಿದೋ ನನ್ನ ಸ್ವಾಗತ. ನೆನಪಿರಲಿ, ವಿಶ್ವ ಸಮಾನ ಅವಕಾಶ ನೀಡುವ fair ground ಅಂತೂ ಅಲ್ಲ, ಇದು ದಗಲಬಾಜಿಗಳ, ಸುಳ್ಳರ, ಕಪಟ ಜನರ, ಪ್ರತೀ ಕಾರ್ಯಕ್ಕೂ ಕಮಿಷನ್ ವಾಸನೆಯ ಬೆನ್ನು ಹತ್ತಿ ಹೋಗುವ ಅತಿ ದೊಡ್ಡ fair (ಜಾತ್ರೆ). ಲಂಚಗುಳಿತನದ ಒಂದು ಸುಂದರ eco system ಅನ್ನು  ಹುಟ್ಟುಹಾಕಿದ್ದೇವೆ.  ಲಕ್ಷಾಂತರ ವರ್ಷಗಳ ಕಾಲ ನಿರಂತರ ಪ್ರಯಾಣ ಮಾಡಿದ ವೀರ್ಯದ ಫಲ ನೀನಾಗಿರೋದರಿಂದ ಈ ಪ್ರಪಂಚದಲ್ಲಿ ಬಾಳಿಬದುಕಲು ನಿನಗೆ ಕಷ್ಟವೇನೂ ಆಗಲಿಕ್ಕಿಲ್ಲ, you will effortlessly adapt.     

ಬೀಳ್ಕೊಡುವ ಮೊದಲು ಒಂದು ಮಾತು ನೆನಪಿರಲಿ…..ಯಾರು ತಾವು ಕಾಣುವ ಸುಂದರ ಕನಸನ್ನು ನಂಬುವರೋ ಅವರಿಗೆ ಮಾತ್ರ ಭವಿಷ್ಯ ಸೇರಿದ್ದು; “ಸ್ವರ್ಗ ಕಲ್ಪಿಸಿಕೊಳ್ಳದಿರು” ಎಂದು ಹೇಳುವ ಮತಿಹೀನರಿಗಂತೂ ಖಂಡಿತಾ ಅಲ್ಲ. ಧುಮುಕು ಧರೆಗೆ ಧೈರ್ಯವಾಗಿ.   

 ಚಿತ್ರ ಸೌಜನ್ಯ: ಇಂಗ್ಲೆಂಡಿನ “ಗಾರ್ಡಿಯನ್” ದಿನಪತ್ರಿಕೆ.

ಗರ್ಭ ಧರಿಸಬೇಕೇ? ಚೆನ್ನಾಗಿ ಹಲ್ಲುಜ್ಜಿ

ಗರ್ಭ ಧರಿಸಬೇಕೇ? ಚೆನ್ನಾಗಿ ಹಲ್ಲುಜ್ಜಿ ಪಾಶ್ಚಾತ್ಯರಲ್ಲದ ಸಂಸ್ಕೃತಿಯ ವಿವಾಹಿತ ಮಹಿಳೆಯರೆಲ್ಲರ ಬಯಕೆ ಏನೆಂದರೆ ಒಂದು ಸುಂದರ ತಮ್ಮಂತೆ ಅಥವಾ ತಮ್ಮ ಗಂಡಂದಿರನ್ನು ಹೋಲುವ ಒಂದು ಮಗುವಿಗೆ ಜನ್ಮ ಕೊಡುವುದು. ಮದುವೆಯಾಗಿ ಒಂದು ವರ್ಷದ ಒಳಗೆ ಮಗು ಆಗದಿದ್ದರೆ ಗಾಭರಿ ಆತಂಕ ಶುರುವಾಗುತ್ತೆ. ಎರಡು ವರ್ಷಗಳ ಮೇಲೂ ಮಗುವಾಗದಿದ್ದರೆ ಗುಸು ಗುಸು ಶುರು. ಗಂಡ ಹೆಂಡಿರಿಗಿಂತಲೂ, ಅವರಿಬ್ಬರ ಮನೆಯವರಿಗಿಂತಲೂ ಹೆಚ್ಚಿನ ಚಿಂತೆ ನೆರೆಹೊರೆಯವರಿಗೆ, ಹೊಟ್ಟೆ ಉಬ್ಬದಾದಾಗ. ವ್ರತ, ಹರಕೆ, ಸ್ವಾಮಿಗಳ ಭಸ್ಮ ಅದೂ ಇದೂ ಎಂದು ಓಡಾಟ. ಪರಿಚಯದ ದಂಪತಿಗಳು ‘ಆಸನ’ ಬದಲಿಸಲೂ ಸಲಹೆ ನೀಡುತ್ತಾರೆ. ಒಟ್ಟಿನಲ್ಲಿ ಒಂದು ರೀತಿಯ emergency situation ನಿರ್ಮಾಣ ಆಗುತ್ತೆ. ಆದರೆ ಇಷ್ಟೆಲ್ಲಾ ಸರ್ಕಸ್ ಏಕೆ? ಇರುವ, time tested ಆಸನವೇ ಫೈನ್, ಜಸ್ಟ್ ಬ್ರಶ್ ಎವ್ವೆರಿ ಡೇ.. ಹಾಂ? ಬ್ರಶ್? ಚೆನ್ನಾಗಿ ಹಲ್ಲುಜ್ಜಿದರೆ ಮಗು ಆಗುತ್ತಾ?

 ಹೌದು ಎನ್ನುತ್ತಾರೆ ಆಸ್ಟ್ರೇಲಿಯಾದ ಸಂಶೋಧಕರು. ಹಾಗೇ ಸುಮ್ಮನೆ ಈ ನಿರ್ಣಯಕ್ಕೆ ಬರಲಿಲ್ಲ ಈ ಮಹಾಶಯರುಗಳು. ೩೭೩೭ ಗರ್ಭಿಣಿ ಮಹಿಳೆಯರ ಮೇಲೆ ಅಧ್ಯಯನ ನಡೆಸಿ ಕಂಡು ಕೊಂಡ ಸತ್ಯ. ಬಾಯೋ ಶುಚಿತ್ವ ಇಲ್ಲದ, ಒಸಡಿನ ರೋಗ ಇರುವ, ಸರಿಯಾಗಿ ಹಲ್ಲುಜ್ಜದ ಮಹಿಳೆಯರು ಗರ್ಭ ಧರಿಸುವುದು ಕಷ್ಟ ಅಥವಾ ನಿಧಾನ ಎನ್ನುತ್ತಾರೆ ಈ ಸಂಶೋಧಕರು.

ಈಗ ಪಕ್ಕದ ಮನೆಯ ಪ್ರೀತಿ ಅಥವಾ ಪಿಂಕಿ ಒಂದೆರಡು ವರ್ಷಗಳಾದರೂ ನನಗೆ ಮಗು ಆಯಿತು ಎಂದು ಸಿಹಿ ತೆಗೆದು ಕೊಂಡು ಬರದೆ ಹೋದಾಗ ‘ಆಸನ’ ಬದಲಿಸು ಎಂದು ಕಸಿವಿಸಿ ಮಾಡೋ ಬದಲು, ಹೋಗಮ್ಮಾ ಸರಿಯಾಗಿ ಹಲ್ಲುಜ್ಜ ಬಾರದಾ ಎಂದು ಗದರಿಸಿ ಬಾತ್ ರೂಂ ಗೆ ಅಟ್ಟಿ.

paracetamol ರಾಮ ಬಾಣ ಅಲ್ಲ

ಜ್ವರ ಅಥವಾ ನೋವು ಕಾಣಿಸಿ ಕೊಂಡ ಕೂಡಲೇ ನಾವು ಮೊರೆ ಹೋಗುವುದು paracetamol ಇರುವ ಔಷಧಿ ಕಡೆಗೆ. ವಿಶೇಷವಾಗಿ ಮಕ್ಕಳಿಗೆ ಕಾಣಿಸಿಕೊಳ್ಳುವ ಜ್ವರಕ್ಕೆ paracetamol ರಾಮ ಬಾಣ ಎಂದು ನಮ್ಮೆಲ್ಲರ ಗ್ರಹಿಕೆ. ಆದರೆ ಈ ಗ್ರಹಿಕೆಗೆ ಒಂದು ಕೊಡಲಿಯೇಟು ಬಿದ್ದಿದೆ; paracetamol ಒಳಗೊಂಡ ಔಷಧಿ ಮಕ್ಕಳಲ್ಲಿ ಅಸ್ತಮಾ ರೋಗವನ್ನು ಬರಿಸುತ್ತದೆ. ಗರ್ಭಿಣಿಯರು paracetamol ಹೆಚ್ಚು ತೆಗೆದು ಕೊಂಡಷ್ಟೂ ಹುಟ್ಟುವ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಳ್ಳಲು ಕಾರಣವಾಗುತ್ತದಂತೆ. ಈ ಔಷಧಿಯನ್ನು ಆಂಗ್ಲ ಭಾಷೆ ಮಾತನಾಡುವ ರಾಷ್ಟ್ರಗಳ ಜನ ಹೆಚ್ಚು ತೆಗೆದು ಕೊಳ್ಳುತ್ತಿದ್ದು ಅಲ್ಲಿನ ಮಕ್ಕಳ ಆರೋಗ್ಯದ ಅಧ್ಯಯನ ನಡೆಸಿದ ಮೇಲೆ ಈ ವಿದ್ಯಮಾನ ಬೆಳಕಿಗೆ ಬಂತು. ಆದರೆ ಕಂಪೆನಿಗಳು ಈ ಅಧ್ಯಯನವನ್ನು ಒಪ್ಪುತ್ತಿಲ್ಲ. ಅಸ್ತಮಾದ ಬಗೆಗಿನ ಅಧ್ಯಯನ ಗಮನಾರ್ಹವಲ್ಲದಿದ್ದರೆ medical journal “Lancet” ಪತ್ರಿಕೆಯಲ್ಲಿ ಇದು ಬೆಳಕನ್ನು ಕಾಣುತ್ತಿರಲಿಲ್ಲ.ಮಕ್ಕಳಲ್ಲಿ ಕಫ ತುಂಬಿ ಉಬ್ಬಸ ತೋರಿದಾಗ ಕೊಡುವ paracetamol ಕ್ರಮೇಣ ಮಕ್ಕಳಲ್ಲಿ ಅಸ್ತಮಾ ರೋಗಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ. ಹಾಗಾದರೆ ಮಕ್ಕಳಿಗೆ ಜ್ವರ ಬಂದಾಗ ಕೊಡಬೇಕಾದದ್ದಾದರೂ ಏನು? ಕೆಲವು ವೈದ್ಯರ ಪ್ರಕಾರ ಜ್ವರ ಬಂದಾಗ ಯಾವ ಔಷಧಿಯನ್ನೂ ಕೊಡುವ ಅಗತ್ಯವಿಲ್ಲವಂತೆ. ಏಕೆಂದರೆ ಶರೀರಕ್ಕೆ ತಗಲುವ ಸೋಂಕಿಗೆ ನೈಸರ್ಗಿಕ ಪ್ರತಿರೋಧವಾಗಿ ಜ್ವರ ಬರುತ್ತದಂತೆ. ಆದರೆ ನಾವೀಗ ಕಾಣುತ್ತಿರುವ ಇಲಿ ಜ್ವರ, ಹಂದಿ ಜ್ವರ ಮುಂತಾದ “zoo” ಜ್ವರಗಳ ಬಗ್ಗೆ ಮಾತ್ರ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ.

ಒಂದು ಎರಡು ಬಾಳೆಲೆ ಹರಡು..

ನನ್ನ ಮಗಳು “ಇಸ್ರಾ” ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು. ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ “ಅಹ್ಮದ್” ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ ” ಅಯ್ಮನ್” ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು… ಡಮ್ಮರೆ ಡಮ್ಮಮ್ಮ,

ಮನೆ ಸುಟ್ಟೋಯ್ತು

ಯಾರ ಮಾನೆ

ಪೂಜಾರಿ ಮಾನೆ

ಯಾವ ಪೂಜಾರಿ

ಜುಟ್ಟು ಪೂಜಾರಿ

ಯಾವ ಜುಟ್ಟು

ಕೋಳಿ ಜುಟ್ಟು

ಯಾವ ಕೋಳಿ

ಬಾತು ಕೋಳಿ

ಯಾವ ಬಾತು

ಕೇಸರಿ ಬಾತು

ಯಾವ ಕೇಸರಿ

ತಿನ್ನೋ ಕೇಸರಿ

ಯಾವ ತಿನ್ನೋದು

ಹೊಡ್ತ ತಿನ್ನೋದು…. ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ.

ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, ” ನಿಧಾನಮು ಪ್ರಧಾನಮು” ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ? ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ… ಕೃಪೆ ನನ್ನ ಮುದ್ದಿನ ಮಗಳು.