ಬನ್ನಿ ನೋಡಿ ವಿಯೆಟ್ನಾಮ

 

 

ವಿಯೆಟ್ ನಾಮ್ ಎಂದ ಕೂಡಲೇ ಮನಃ ಪಟಲದಲ್ಲಿ ಮೂಡೋದು ಅಮೇರಿಕ. ಈ ರೀತಿ ಒಂದು ದೇಶವನ್ನು ಕಲ್ಪಿಸಿ ಕೊಂಡಾಗ ಮತ್ತೊಂದು ದೇಶ “ಬಯ್ ವನ್ ಗೆಟ್ ವನ್” ಥರ ತೇಲಿ ಬರೋದು ಬಹುಶಃ ವಿಯೆಟ್ ನಾಮ್-ಅಮೇರಿಕಾ ಜೋಡಿ ಮಾತ್ರ ಇರಬೇಕು.

“ವಿಯೆಟ್ ಕಾಂಗೋ” ಬಂಡು ಕೋರರ ಸದ್ದಡಗಿಸುತ್ತೇವೆ ಎಂದು ಬಂದ ಅಮೆರಿಕೆಗೆ ಅಲ್ಲಿ ಸಿಕ್ಕಿದ್ದು ಸಾವು, ಸೋಲು. ದಶಕಗಳಿಗೂ ಹೆಚ್ಚು ಕಾಲ ನಡೆದ ಈ ಕದನದಲ್ಲಿ ಅಮೆರಿಕೆಯ ೫೬,೦೦೦ ಸೈನಿಕರು ಹತರಾದರು. ಈ ಯುದ್ಧದಿಂದ ಅಮೇರಿಕಾ ಅದ್ಯಾವ ಪಾಠ ಕಲಿಯಿತು ಅಥವಾ ಕಲಿತಿಲ್ಲ ಎಂದು ನೋಡುವ ಕೆಲಸ ಅಲ್ಲ ಈ ನನ್ನ ಬ್ಲಾಗ್ ಬರಹ ಮಾಡುತ್ತಿರುವುದು. ‘ವರ್ಡ್ ಪ್ರೆಸ್’ ತಾಣದಲ್ಲಿ ‘ಫ್ರೆಶ್ಲಿ ಪ್ರೆಸ್ಡ್’ ಪುಟದಲ್ಲಿ ವಿಯೆಟ್ ನಾಮ್ ನ ಚಿತ್ರ ರೂಪದ ಪ್ರವಾಸ ಕಥನ ಬಂದಿತ್ತು. ಅದರಲ್ಲಿದ್ದ ಹಲವು ಚಿತ್ರಗಳಲ್ಲಿ ಮೂರು ಚಿತ್ರಗಳು (ಗ)ಮನ ಸೆಳೆದವು. ಅವನ್ನು ನಿಮ್ಮೊಂದಿಗೆ ಹಂಚಿ ಕೊಳ್ಳೋಣ ಎಂದು ತಂದಿದ್ದೇನೆ, ನೋಡಿ ಆನಂದಿಸಿ.

ಮೊದಲನೆಯ ಚಿತ್ರ, ಹಾನೋಯ್ ನಗರದಲ್ಲಿ ವ್ಯಾಯಾಮ ನಿರತ ಜನರದು. ವ್ಯಾಯಾಮ ಮುಗಿದ ನಂತರ ನಮ್ಮ ಬೆಂಗಳೂರಿನವರ ಥರ ಯಾವುದಾದರೂ ದರ್ಶಿನಿಗೆ ನುಗ್ಗಿ ಮತ್ತಷ್ಟು ಕೊಬ್ಬನ್ನು ದಯಪಾಲಿಸೋ ಉದ್ದಿನವಡೆ, ಮಸಾಲೆ ದೋಸೆ ಅಲ್ಲಿನ ಜನ ಮೆಲ್ಲುತ್ತಾರೋ ಗೊತ್ತಿಲ್ಲ.

ಎರಡನೇ ಚಿತ್ರ, ನಮ್ಮ ಬೆಂಗಳೂರಿನ ಬಡಾವಣೆ ಕಣ್ಣ ಮುಂದೆ ತರುವುದಿಲ್ಲವೇ? ಸ್ವಚ್ಛತೆ ಹೊರತು ಪಡಿಸಿ?

ಮೂರನೇ ಚಿತ್ರ, ಒಬ್ಬ ಪೋರಿಯದು. ತನ್ನ ದೇಶವನ್ನು ಆಕ್ರಮಿಸಿ, ತನ್ನ ತಾತ ಮುತ್ತಾತಂದಿರ ಬದುಕನ್ನು ನರಕವಾಗಿಸಿದರೇನು, ನನಗೆ ಅಮೆರಿಕೆಯ ಪ್ರಿನ್ಗ್ಲ್ಸ್ ಪೊಟೆಟೋ ಚಿಪ್ಸ್ ಇಷ್ಟ ಎನ್ನುವ ಫೋಸ್ ಕೊಡುತ್ತಿಲ್ಲವೇ ಈ ಪುಟ್ಟ ಹೆಣ್ಣು ಮಗು? ಈ ಚಿತ್ರವನ್ನು ನೋಡಿದ ಆಕೆಯ ತಾತ ಮುತ್ತಾತಂದಿರು ತಮ್ಮ ಸಮಾಧಿಗಳಲ್ಲಿ ನೋವಿನಿಂದ ಹೊರಳಾಡದೆ ಇರಲಾರರೇನೋ?

ಚಿತ್ರ ಕೃಪೆ: http://stoltzproject.com/

ವಾಕರಿಕೆ ತರಿಸುವಂತೆ ಕಾಣುತ್ತೀರಿ…

ನೀವು, ಗಂಡೋ, ಹೆಣ್ಣೋ, ತುಂಬಾ ಮುತುವರ್ಜಿಯಿಂದ ಸುಂದರ ಸೊಗಸಾದ ಉಡುಗೆ, ಒಪ್ಪುವ ಮೇಕಪ್ ತೊಟ್ಟುಕೊಂಡುದುದನ್ನು ನೋಡಿ ಯಾರಾದರೂ ಆಹ್, ತುಂಬಾ ವಾಕರಿಕೆ (sick) ಬರುವಂತೆ ಕಾಣುತ್ತಿದ್ದೀರಿ ಎಂದರೆ ಏನು ಮಾಡುತ್ತೀರಿ? ಎಲ್ಲೋ ಹುಚ್ಚಾಸ್ಪತ್ರೆ ಕಡೆ ತಿಳಿಯದೆ ಬಂದು ಬಿಟ್ಟೆ ಎಂದು ಕಾಲು ಕೀಳುತ್ತೀರೋ ಅಥವಾ ಅವನ/ಳ ನ್ನು ಕೊಲ್ಲುವಂತೆ ನೋಡುತ್ತೀರೋ? ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಆತ ಅಥವಾ ಆಕೆ you look sick ಅಂತ ಹೇಳಿದ್ದು ಮಾತ್ರ ಕಟು ಮಾತಲ್ಲ. ಹೀಗಂತ ನಾನಲ್ಲ ಆಂಗ್ಲ ಭಾಷೆ ಹೇಳುತ್ತದೆ.

sick ಅನ್ನೋ ಪದವನ್ನು ಗುಣವಾಚಕ ಅಥವಾ ವಿಶೇಷಣವಾಗಿ cool ಎನ್ನೋ ಪದಕ್ಕೆ ಸರಿ ಸಮಾನವಾಗಿ ಉಪಯೋಗಿಸುತ್ತಾರೆ. you look cool, or ‘cool’ ಎಂದು ಉಲಿಯುವುದನ್ನು ಕೇಳಿಯೇ ಇರುತ್ತೀರಿ ಅಲ್ಲವೇ? ಹದಿನೆಂಟನೆ ಶತಮಾನದಲ್ಲೇ ಅಮೆರಿಕೆಯಲ್ಲಿ ಬಳಕೆ ಯಲ್ಲಿದ್ದ ಈ ಉಪಯೋಗ ಬ್ರಿಟಿಶ್ ತೀರಕ್ಕೆ ಅಪ್ಪಳಿಸಿದ್ದು ತೀರಾ ಇತ್ತೀಚೆಗೆ.

ಈಗ ಇದನ್ನು ಓದಿ ಜ್ಞಾನ ಪ್ರದರ್ಶನಕ್ಕೆಂದು ಮದುವೆ ಮನೆಯಲ್ಲಿ ಭಾರೀ ಜರತಾರಿ ಸೀರೆ, ಅದಕ್ಕಿಂತ ಭಾರೀ ಮೇಕಪ್ ಮಾಡಿಕೊಂಡು ಬಂದ ಸುರಾಂಗನೆಯ ಮೇಲೆ ಈ ಪದ ಪ್ರಯೋಗ ಮಾಡಿ ರಾದ್ಧಾಂತ ಕ್ಕೆ ಎಡೆ ಮಾಡಿಕೊಡಬೇಡಿ. ಏಕೆಂದರೆ ನಮ್ಮ ಸಮಾಜ ಇನ್ನೂ “ಶೈ “ಶವಾ” ವಸ್ಥೆಯಲ್ಲೇ ಇದೆ ತುಂಬಾ ವಿಷಯಗಳಲ್ಲಿ. ಮೇಲಿನ ರೀತಿಯ ಮತ್ತು ಇನ್ನೂ ತರಾವರಿ ರೀತಿಯ ವಿಷಯ ಮತ್ತು ಕೀಟಲೆಗಳಿಗೆ ನನ್ನ ‘ಗುಬ್ಬಚ್ಚಿ’ ಗೂಡಿಗೆ ಭೇಟಿ ಕೊಡಿ.

http://www.twitter.com/bhadravathi

ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ…

…”ವಿಶ್ವ ತಂಬಾಕು ರಹಿತ” ದಿನ.

ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ ನೋಡಿ ಯಾವನೂ ಸಿಗರೇಟ್, ಬೀಡಿ ಸಹವಾಸ ಬೇಡ ಎಂದು ಹೇಳಿದ್ದನ್ನು ನಾನಂತೂ ಕೇಳಿಲ್ಲ. ಧೂಮಪಾನ ಮಾಡಬಾರದು ಎಂದು ಬಾಲ್ಯದಲ್ಲಿ ಪಾಲಕರೂ, ಯೌವನದಲ್ಲಿ ಅರ್ಧಾಂಗಿನಿಯರೂ ಹೇಳುವುದನ್ನು ಕವಡೆ ಕಾಸಿಗೆ ಬೆಲೆ ಕಲ್ಪಿಸದೆ ಸೇದುವವರ ಸಂಖ್ಯೆಯೇ ಅಧಿಕ. ಇನ್ನು ಈ ನಡವಳಿಕೆಯಲ್ಲಿ ಏನಾದರೂ ಪರಿವರ್ತನೆ ಬರಬೇಕೆಂದರೆ ಡಿಸೆಂಬರ್ ೩೧ ಅಥವಾ ಜನವರಿ ೧, ಹೊಸವರ್ಷದ ನಿರ್ಣಯವಾಗಿ ಆಶ್ವಾಸನೆ, ನಾನಿನ್ನು ಸಿಗರೇಟ್ ಸೇದೊದಿಲ್ಲ ಎಂದು. ಈ ನಿರ್ಣಯದ ಆಯುಷ್ಯ ಹೆಚ್ಚು ಎಂದರೆ ೭೨ ಘಂಟೆಗಳು. ಮೂರು ದಿನ.     

Smokers are beggars ಅಂತಾರೆ. ಒಂದು ‘ಕಡ್ಡಿ’ ಇದ್ಯೇನಣ್ಣ? lighter please.. ಪರಿಚಯದ ಅವಶ್ಯಕತೆಯಿಲ್ಲ, instant beggars. ಅವರುಗಳ ನಡುವಿನ camaraderi ಅಂಥದ್ದು. ಸ್ಮೋಕರ್ ಗಳು humble ಅಂತೆ, ಏಕೆಂದರೆ ಅವರು ಸ್ಮೋಕಿಸಲೆಂದು ಬೀಡಿ ಸಿಗರೇಟಿಗೆ ಕಿಡಿ ಹೊತ್ತಿಸುವಾಗ ಸ್ವಲ್ಪ ನಾಜೂಕಾಗಿ ಬಗ್ಗಿ ತಾನೇ ಹಚ್ಚೋದು? ಹಾಗೆಯೇ ಒಂದು “ಕಡ್ಡಿ” ಕೊಡಣ್ಣ ಎಂದು ಗಿಂಜುತ್ತಾ ಕೇಳುವುದರಲ್ಲೂ ತುಂಬಿದೆ “ಹಂಬಲ್” ನೆಸ್, ಅಲ್ವೇ?

 ಧೂಮಪಾನಿಗಳು ಯಾವುದೇ ವಿಷಯದಲ್ಲೂ ಕಂಜೂಸ್ ಗಳಾದರೂ ತಮ್ಮ ಪ್ರೀತಿಯ ಧೂಮಪಾನದ ಖರ್ಜಿಗೆ ಮಾತ್ರ ಹಿಂದೆ ಮುಂದೆ ನೋಡರು. ಚಟವೇ ಹಾಗೆ ನೋಡಿ. ಮೊದಲು ತಮಾಷೆಗೆ, ಮೋಜಿಗೆ ಎಂದು ಆರಂಭವಾದ ಚಟ ನಮ್ಮನ್ನು ಗುಲಾಮರನ್ನಾಗಿಸುತ್ತದೆ. ಕೆಲವೊಮ್ಮೆ ಈ ಚಟ ಬಹುಬೇಗನೆ ಚಟ್ಟ ಏರಲೂ ನೆರವಾಗುತ್ತದೆ. ಅನೇಕ ರೀತಿಯ ಕ್ಯಾನ್ಸರ್ ಗಳಿಗೆ ಕಾರಣ ಧೂಮಪಾನ. ಧೂಮಪಾನ ಯಾವಾಗ ಬಿಡ್ತೀಯ ಎಂದು ಅವಿವಾಹಿತನನ್ನು ಕೇಳಿದರೆ ತನ್ನ ತುಟಿಗಳಿಗೆ ಪರ್ಯಾಯವಾದದ್ದು ಸಿಕ್ಕ ನಂತರ ಎನ್ನುತ್ತಾನೆ. ಅಂದ್ರೆ ಅವನಿಗೊಂದು ಚೆಂದುಳ್ಳಿ ಹೆಣ್ಣನ್ನು ಹೊಂದಿಸಿ ಕೊಟ್ಟ ಕೂಡಲೇ ತನ್ನ ಚಟವನ್ನು ಬಿಡುತ್ತಾನೆ ಎನ್ನುವ ಖಾತರಿಯಿಲ್ಲ. “ಪರ್ಯಾಯ” ವಾಗಿ ಸಿಕ್ಕಿದ್ದು boredom ಆಗಿ ಕಾಣುತ್ತಿದ್ದಂತೆಯೇ ವಾಪಸ್ ಹಳೇ ಧಂಧೆಗೆ.  

ಸಿಗರೇಟ್ ಸೇದುವವರ ಮಧ್ಯೆ ಸಿಕ್ಕಿ ಕೊಂಡ ನಮ್ಮ ಪಾಡು ಸ್ವಲ್ಪ ನೋಡಿ. ಸೇದುವವನೇನೋ ಸುಖವಾಗಿ, ತನ್ನ ಚಟದ ಮಜಾ ತೆಗೆದು ಕೊಳ್ಳುತ್ತಾ, ಸುರುಳಿಯಾಗಿಯೂ, ಕೊಳವೆಯಾಗಿಯೂ, ತರಾವರಿ ರೀತಿಯ ಹೊಗೆಯನ್ನು ಬಿಡುತ್ತಾ, ಹೊಗೆ ಬಿಡುವ ತನ್ನ creativity ಗೆ ತನಗೆ ತಾನೇ ತಲೆದೂಗುತ್ತಾ ಮತ್ತಿನಲ್ಲಿರುತ್ತಾನೆ. ಆದರೆ ನಾವು? ನಮಗೇನು ಸಿಗುತ್ತದೆ ಅದರಿಂದ ಆನಂದ? ಅವನ ಸಿಗರೇಟ್ ನ ತುದಿಯಿಂದ ಹೊರ ಬರುವ ಹೊಗೆ, ಅವನ ಬಾಯಿಂದ ಬರುವ ಹೊಗೆ, ಅವನ ಮೂಗಿನಿಂದ ಬರುವ ಹೊಗೆ, ಅವನ ಕವಿ ಕಣ್ಣುಗಳಿಂದ ಬರುವ ಹೊಗೆ, ಹೀಗೆ ನಾನಾ ರೀತಿಯಲ್ಲಿ, ಅವನ ಶರೀರದ ಎಲ್ಲಾ ರಂಧ್ರಗಳಿಂದಲೂ ‘ಫಿಲ್ಟರ್’ ಆಗಿ ಬರುವ ಹೊಗೆಯನ್ನು ನಾವು ಸೇವಿಸಬೇಕು. ಪ್ರತಿಭಟಿಸಿದಿರೋ, ಮೇಲೆ ಹೇಳಿದ ಹಂಬಲ್ ನೆಸ್ ಎಲ್ಲಾ ಮಾಯಾ. ನಿಮ್ಮ ಕಡೆ ಕೆಕ್ಕರಿಸಿ ಒಂದು ನೋಟ, ದಮ್ಮು ಸೇರಿಸಿ ಜೋರಾಗಿ ಮತ್ತೊಂದು ದಮ್ಮು. ಹೀಗೆ ಸಿಗರೆಟ್ ಸೇದದೆಯೂ ಅದರ ಎಲ್ಲಾ ಬ್ಯಾನೆಗಳನ್ನು ಅಂಟಿಸಿ ಕೊಳ್ಳುವ ಸೆಕೆಂಡರಿ ಸ್ಮೋಕರ್ ಗಳಾದ ನಮಗೆ ಯಾವ ರಕ್ಷಣೆಯೂ ಇಲ್ಲ. secondary smoking, ವೈದ್ಯಕೀಯ ಅಧ್ಯಯನದ ಪ್ರಕಾರ, active smoking ಗಿಂತ ಅಪಾಯಕಾರಿ ಅಂತೆ. ಕೆಲವು ವರ್ಷಗಳ ಹಿಂದೆ ಹೀಗೆ ಸೆಕೆಂಡರಿ ಸ್ಮೋಕಿಂಗ್ ಕಾರಣ ಕ್ಯಾನ್ಸರ್ ತಗುಲಿಸಿಕೊಂಡ ಕೊಂಡ ಓರ್ವ ಪಾಶ್ಚಾತ್ಯ ಮಹಿಳೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಳು ಪರಿಹಾರ ಕೇಳಿ ಎಂದು ಓದಿದ ನೆನಪು. ಪರಿಹಾರ ಸಿಕ್ಕಿತೋ ಇಲ್ವೋ ಗೊತ್ತಿಲ್ಲ. ‘ಫಿಲಿಪ್ ಮೋರಿಸ್’ ನಂಥ ಕಂಪೆನಿಗಳಿಂದ ಹಣ ಕೇಳೋದು ಒಂದೇ, ಹೋದ ಪ್ರಾಣ ವಾಪಸ್ಸು ಕೊಡು ಎಂದು ಯಮನ ಹಿಂದೆ ಬೀಳೋದು ಒಂದೇ.

ಮುಂದುವರಿದ ದೇಶಗಳಲ್ಲಿ ಧೂಮಪಾನಿಗಳಿಗೆ ಎಲ್ಲೂ ಧೂಮಪಾನ ಮಾಡಲು ಸ್ಥಳವಿಲ್ಲದಂತೆ ಮಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದರ ಮೇಲೆ ಜನ ಜಾಗೃತಿ, ಅಭಿಯಾನ ಬೇರೆ. ಹಾಗಾದರೆ ಮುಂದುವರಿದ ದೇಶಗಳಲ್ಲೇ ಹುಟ್ಟಿದ, ಅವರೇ ನಡೆಸುವ ಸಿಗರೆಟ್ ಕಂಪೆನಿಗಳ ಕಥೆ ? ಅಲ್ಲಿನ ಜನರು ಧೂಮಪಾನ ಕಂಪೆನಿಗಳನ್ನು “ಮುಂದಕ್ಕೆ ಹೋಗಪ್ಪಾ” ಎಂದು ಅಟ್ಟಿದರೆ, ಇವರುಗಳು ಮುಂದು ಮುಂದಕ್ಕೆ ಬಂದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ, ಹೊಂದದ ದೇಶಗಳಿಗೆ ತಮ್ಮ ಸರಕುಗಳನ್ನು ಇಳಿಸಿದರು. ಸುಲಭ ಬೆಲೆಗೆ ಮಾರಲು ಶುರು ಮಾಡಿದರು. ಇಲ್ಲಿ ಸೌದಿ ಅರೇಬಿಯಾದಲ್ಲಿ ಯುವಜನರ ಫೇವರಿಟ್ ಆದ marlboro ಸಿಗರೇಟ್  ಒಂದು ಪ್ಯಾಕ್ ಗೆ ೫.೫೦ ರಿಯಾಲ್  ( ೭೦.೦೦ ರೂ) ಆದರೆ marlboro ಕಂಪೆನಿಯ ತವರೂರು ಅಮೆರಿಕೆಯಲ್ಲಿ ಈ ಸಿಗರೆಟ್ ಗೆ ಬೆಲೆ ನಾಲ್ಕು ಪಟ್ಟು ಹೆಚ್ಚು. ಸೇದಬಾರದು ಎಂದು ಎಟುಕದ ಬೆಲೆ. ನೋಡಿ, ಸ್ವದೇಶೀಯರನ್ನು ಎಷ್ಟು ಚೊಕ್ಕವಾಗಿ ಇಟ್ಟುಕೊಳ್ಳುತ್ತಾರೆ ಅಮೆರಿಕನ್ನರು.

ಧೂಮಪಾನವನ್ನು ದೊಡ್ಡ ಹವ್ಯಾಸವಾಗಿ ತೆಗೆದು ಕೊಳ್ಳುತ್ತಿರುವ ಮತ್ತೊಂದು ದೇಶ ಎಂದರೆ ಇಂಡೋನೇಶಿಯ. ಈ ದೇಶದಲ್ಲಿ ಎರಡು ಕೋಟಿ ಗೂ ಹೆಚ್ಚು “ಬಾಲ ಧೂಮಪಾನಿ” ಗಳಿದ್ದಾರಂತೆ. ನಮ್ಮಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಥರ. ನೈಜೀರಿಯ, ಯುಕ್ರೇನ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಸಿಗರೆಟ್ ಕಂಪೆನಿಗಳು ಬರೀ ಕ್ರೀಡೆಗಳನ್ನು ಮಾತ್ರವಲ್ಲ ರಾತ್ರಿ ಕ್ಲಬ್ಬುಗಳನ್ನೂ ಪ್ರಾಯೋಜಿಸುತ್ತಿದ್ದಾರಂತೆ. ಕುಡಿದು, ಸೇದಿ, ಮಸ್ತ್ ಮಜಾ ಮಾಡಿ ಎಂದು. Life is short, you see?  ರಷ್ಯಾದಲ್ಲಿ ಮಹಿಳೆಯರನ್ನು ಸ್ಮೋಕಿಂಗ್ ಚಟಕ್ಕೆ ಎಳೆಯಲು ಸಿಗರೆಟ್ ಪ್ಯಾಕೆಟ್ ಗಳನ್ನು ವಜ್ರ ಲೇಪನದ ಸುಗಂಧ್ಯ ದ್ರವ್ಯದ ಬಾಟಲಿನಂತೆ ರೂಪಿಸಿದ್ದಾರಂತೆ. ನೋಡಿದಿರಾ, ಜನರನ್ನು ಕೊಲ್ಲಲು ಅನುಸರಿಸುವ ವಿಧಿ ವಿಧಾನಗಳನ್ನು? ಆದರೂ ಇವರು ಪಾಶ್ಚಾತ್ಯರು, ಸುಸಂಸ್ಕೃತರು. ಇವರು ಮಾಡುವಕ್ಕೆದೆಲ್ಲಾ free trade ಎನ್ನುವ ಹಣೆಪಟ್ಟಿ.      

ಕ್ಯಾನ್ಸರ್ ತಜ್ಞ ನೂ (oncologist) ಆದ ಉರುಗ್ವೆ ದೇಶದ ಅಧ್ಯಕ್ಷ ಧೂಮಪಾನದ ಮೇಲೆ ನಿಗ್ರಹ ಹೇರಿದ್ದಕ್ಕೆ ವಿಶ್ವ ವಿಖ್ಯಾತ ಸಿಗರೆಟ್ ಕಂಪೆನಿ ‘ಫಿಲಿಪ್ ಮೋರಿಸ್’ ಅಲ್ಲಿನ ಸರಕಾರವನ್ನು ನ್ಯಾಯಾಲಯಕ್ಕೆ ಎಳೆದಿದೆ. ಈ ವ್ಯಾಜ್ಯದಲ್ಲಿ ಒಂದು ವೇಳೆ ಗ್ರಹಚಾರಕ್ಕೇನಾದರೂ ಉರುಗ್ವೆ ಸೋತರೆ ಸುಮಾರು ೯,೦೦೦ ಸಾವಿರ ಕೋಟಿ ರೂಪಾಯಿ ಈ ಕಂಪೆನಿಗೆ ಪಾವತಿಸಬೇಕಂತೆ. ಪಾಪ ಟೋಬಾಕೋ ಕಂಪೆನಿಗಳ ಈ ನಿಲುವಿಗೆ ಹೆದರಿ ಮಧ್ಯ ಅಮೆರಿಕೆಯ ಇತರ ಬಡ ರಾಷ್ಟ್ರಗಳು ಸೊಕ್ಕಿದ ಫಿಲಿಪ್ ಮೋರಿಸ್ ನಂಥ ಕಂಪೆನಿಗಳ ಸಹವಾಸಕ್ಕೆ ಹೋಗುತ್ತಿಲ್ಲವಂತೆ. ಉರುಗ್ವೆ ವಿರುದ್ಧದ ಈ ವ್ಯಾಜ್ಯದಲ್ಲಿ ಫಿಲಿಪ್ ಮೋರಿಸ್ ಗೆದ್ದರೆ ಗೊತ್ತೇ ಇದೆಯಲ್ಲಾ, ಇನ್ನಷ್ಟು ರಂಗು ರಂಜಿತ ಪ್ಯಾಕೆಟ್ ಗಳು ಮಾರಾಟಕ್ಕೆ ಬರುತ್ತವೆ. ಧೂಮ ಪಾನ ಪ್ರೊಮೋಟ್ ಮಾಡಲು ಮತ್ತಷ್ಟು ಬೆಡಗಿಯರನ್ನು hire ಮಾಡುತ್ತಾರೆ. ಒಂದು ಕಡೆ ಇವರುಗಳು ಉತ್ಪಾದಿಸುವ ಸಿಗರೆಟ್ ಸೇದೀ ಸೇದೀ ಯುವಜನರು ರೋಗಗಳನ್ನು ಅಂಟಿಸಿ ಕೊಂಡು ಸಾಯುತ್ತಿದ್ದರೆ, ಮತ್ತೊಂದು ಕಡೆ ಸಾವಿನ ಅಂಗಡಿ ತೆರೆದು ಕೂತಿರುವ ಸಿಗರೆಟ್ ಕಂಪೆನಿಗಳ CEO ಗಳು, ಉನ್ನತ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಬೋನಸ್ ಆಗಿ ಪಡೆದು “SMOKE FREE” ವಲಯಗಳಲ್ಲಿ, ರೆಸಾರ್ಟ್ ಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಶ್ ಶ್ ಶ್, the world is still a fair place.

ಎಲ್ಲ ದಿನಗಳ ರೀತಿ ಸೂರ್ಯ ಮುಳುಗುವುದರೊಂದಿಗೆ ತಂಬಾಕು ರಹಿತ ದಿನವೂ ಮಾಯಾವಾಗುತ್ತದೆ. ಅದರೊಂದಿಗೆ ಸಾವಿರಾರು ಬಡ ಜೀವಗಳೂ ಸಹ.

 

ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ

ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬ ಕಮಾಂಡೋಗಳನ್ನು ಕಳಿಸಿ ಬಲಿ ಹಾಕಿತು. ತನಗೆ ತಿಳಿಸದೆ ತನ್ನ ದೇಶದೊಳಕ್ಕೆ ನುಗ್ಗಿ ಲಾದೆನ್ ಹತ್ಯೆಗೈದ ಅಮೇರಿಕೆಯ ಬಗ್ಗೆ ಪಾಕ್ ಕ್ರೋಧ ವ್ಯಕ್ತಪಡಿಸಿತು. ಪಾಕಿಸ್ತಾನದ ಅರಿವಿಗೆ ಬರದೆ ಬಿನ್ ಲಾದೆನ್ ಬದುಕುತ್ತಿದ್ದ ಅದೂ ಪಾಕ್ ರಾಜಧಾನಿಯ ಹತ್ತಿರ, ಅದೂ ಮಿಲಿಟರಿ ಅಕಾಡೆಮಿ ಯೊಂದರ ಸಮೀಪ ಎಂದರೆ ದೊಡ್ಡ ಆಶ್ಚರ್ಯವೇ. ಕೆಲವರ ಪ್ರಕಾರ ಪಾಕ್ ನೀಡಿದ ಸುಳಿವಿನ ಆಧಾರದ ಮೇಲೆಯೇ ಅಮೇರಿಕಾ ಬಿನ್ ಲಾದೆನ್ ನನ್ನು ಕೊಂದಿದ್ದು ಮತ್ತು ಪಾಕಿಸ್ತಾನದಲ್ಲಿರುವ ತಾಲಿಬಾನಿಗಳ ಆಕ್ರೋಶ ಎದುರಿಸಲು ಆಗದ ಪಾಕ್ ತನಗೆ ಈ ಕಾರ್ಯಾಚರಣೆ ಗೊತ್ತೇ ಇಲ್ಲ ಎಂದು ನಾಟಕ ಮಾಡಿ ಕೈ ತೊಳೆದು ಕೊಂಡಿತು ಎನ್ನುವ ಅಭಿಪ್ರಾಯದೊಂದಿಗೆ ಈ ಮಿಲಿಟರಿ ಕಾರ್ಯಾಚರಣೆ ಒಂದು ನಿಗೂಢ ರಹಸ್ಯವಾಗಿ ಜನರ ಊಹಾ, ಕಲ್ಪನೆಗಳಿಗೆ ಇನ್ನಷ್ಟು ಕಾಲ ಮೇವನ್ನು ಒದಗಿಸಲು ಕಾರಣವಾಯಿತು.

ಸೀಲ್ ಗಳು ನಡೆಸಿದ ಕಾರ್ಯಾಚರಣೆ ಪಾಕಿಗೆ ಗೊತ್ತೇ ಇರಲಿಲ್ಲ ಎನ್ನುವ ಮಾತಿಗೆ ಮನ್ನಣೆ ನೀಡುವುದಾದರೆ ರಹಸ್ಯ ಕಾರ್ಯಾಚರಣೆ ಪಾಕ್ ಮತ್ತು ಅಮೇರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಡಿವೋರ್ಸ್ ಅಂಚಿಗೆ ತಂದು ನಿಲ್ಲಿಸಿದೆ ಎನ್ನಬಹುದು. ಡಿವೋರ್ಸ್ ಸಹ ಅಷ್ಟು ಸುಲಭದ್ದಲ್ಲ. ಅದು acrimonious ಆಗಿ ತೀರುತ್ತದೆ. ಏಕೆಂದರೆ ಅಮೇರಿಕಾ ಪಾಕ್ ಸುಮಧುರ ಸಂಬಂಧ ಮಕ್ಕಳು ಮರಿಗಳನ್ನು ಹುಟ್ಟಿಸಿದೆ ತಾನೇ? ತಾಲಿಬಾನ್, ಅಲ್ಕೈದಾ, ಆಫ್ಘಾನಿಸ್ತಾನ್, ಮುಲ್ಲಾ ಉಮರ್, ಭಯೋತ್ಪಾದನೆ ಇತ್ಯಾದಿ.. ಹೀಗೆ ಮುಂದುವರಿಯುವ ಸಂತಾನಗಳ ಲಾಲನೆ ಪಾಲನೆ ಹೇಗೆ? ಈ ಸಂತಾನಗಳು ಯಾರ ಜವಾಬ್ದಾರಿ? ಹೀಗೆ ಒಂದು ರೀತಿಯ ವಿಶ್ವದ ನೆಮ್ಮದಿ ಕೆಡಿಸುವ ‘ಡಿವೋರ್ಸ್ ಅಂಡ್ ಕಸ್ಟೋಡಿಯಲ್ ಪ್ರೊಸೀಡಿಂಗ್ಸ್’ ಯಾವ ಹಂತಕ್ಕೆ ಬಂದು ಮುಟ್ಟುತ್ತದೋ ಎಂದು ವಿಶ್ವ ಕೈ ಹೊಸಕಿಕೊಳ್ಳುತ್ತಾ ಆತಂಕಿತವಾಗಿದ್ದರೆ ಇದೋ ಬಂತು ಅಮೇರಿಕೆಯಿಂದ ವಿಶೇಷ ವಿಮಾನವೊಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯನ್ನು ಹೊತ್ತು. ಹಿಲರಿ ಕ್ಲಿಂಟನ್ ಬಂದರು ಫಸ್ಟ್ ಏಡ್ ಕಿಟ್ ನೊಂದಿಗೆ. ನೊಂದ ಪ್ರಿಯತಮ/ಮೆ ಮನಕ್ಕೆ ಕೂಲಿಂಗ್, ಹೀಲಿಂಗ್ ಬಾಮ್ ನೊಂದಿಗೆ ಬಂದ ಹಿಲರಿ ಅದೇ characteristic smile ನೊಂದಿಗೆ ಪಾಕಿಸ್ತಾನ ಈಗಲೂ “ಒಳ್ಳೆಯ ಸಹಭಾಗಿ” – ಎ, ಗುಡ್ ಪಾರ್ಟ್ನರ್ ಎಂದು ಹೇಳಿ ಮಲಾಮಿನ ಲೇಪನ ಶುರು ಮಾಡಿದರು. ಈ ಮಾತಿನೊಂದಿಗೆ ಈ ಶನಿ ಸಂಬಂಧ ಇನ್ನೆಂಥ ಮಕ್ಕಳನ್ನು ಹುಟ್ಟಿಸುವ ತರಾತುರಿಯಲ್ಲಿದೆಯೋ ಎಂದು ನಮಗನ್ನಿಸಿದರೆ ಅದರಲ್ಲೇನೂ ತಪ್ಪಿಲ್ಲ.

ಯಾರೊಂದಿಗಿನ ಸ್ನೇಹದಲ್ಲೂ, ಶತ್ರುತ್ವದಲ್ಲೂ ಅಮೇರಿಕಾ ಎಂದಿಗೂ ಸಕಾರಾತ್ಮಕ beneficiary ಆಗಿಯೇ ಉಳಿಯುತ್ತದೆ. ಅದಕ್ಕೆ ಇತರರ ಇರುಸು ಮುರುಸು, ಕಷ್ಟ ಕಾರ್ಪಣ್ಯ ಇವೆಲ್ಲಾ ನಗಣ್ಯ. ಪಾಕಿಸ್ತಾನದೊಂದಿಗಿನ ನಮ್ಮ ಗಡಿ ಬದಲಿಸಿ ಕೊಳ್ಳಲು ಆಗದೆ ಬೆರಳುಗಳ ನಟಿಕೆ ಮುರಿಯುತ್ತಾ ಹಲ್ಲು ಮಸೆಯುವ ನಮಗೆ ಇವರೀರ್ವರ ಸಂಬಂಧ ತಲೆ ಬೇನೆಯೇ. ಇವರಿಬ್ಬರ ಸಂಬಂಧ ಚೆನ್ನಾಗಿದ್ದರೂ, ಹಳಸಿದರೂ ನಮಗೆ ಮಾತ್ರ ಗದ್ದಲ ಕಟ್ಟಿಟ್ಟ ಬುತ್ತಿ.

ನಾಸ್ತಿಕನ ಬಾಯಲ್ಲಿ ದೇವರು

 

೮೦ ನೆ ಜನ್ಮ ದಿನವನ್ನು ಆಚರಿಸುತ್ತಿರುವ ಮಿಖಾಯಿಲ್ ಗೋರ್ಬಚೋಫ್ ಸೋವಿಎಟ್ ಒಕ್ಕೊಟವನ್ನು ಛಿದ್ರಗೊಳಿಸಿದ ಕೀರ್ತಿಗೆ ಭಾಜನರು. ಒಕ್ಕೂಟ ಮುರಿದು ಬೀಳುವವರೆಗೆ ಅಮೆರಿಕೆಗೆ ಕಮ್ಯುನಿಸ್ಟ್ ರಷ್ಯಾ ಎಂದರೆ ಒಂದು ರೀತಿಯ ನಡುಕ, ಭಯ. ೮೦ ರ ದಶಕದಲ್ಲಿ ಬಿರುಸಾಗಿ ನಡೆದ ಅಂತಾ ರಾಷ್ಟ್ರೀಯ ವಿದ್ಯಮಾನದಲ್ಲಿ ಅಮೇರಿಕಾ ಬರ್ಲಿನ್ ಗೋಡೆಗೂ ಒಂದು ಗತಿ ಕಾಣಿಸಿ ಸೋವಿಎಟ್ ಮೂರಾಬಟ್ಟೆ ಆಗಿಸುವಲ್ಲಿ ಯಶಸ್ಸನ್ನು ಕಂಡಿತು. ಈ ಯಶಸ್ಸಿಗೆ ಅಮೆರಿಕೆಯ ಕಪಟತನ ಕ್ಕಿಂತ ಒಂಚೂರು ಗೋರ್ಬಚೋಫ್ ಮತ್ತೊಂಚೂರು ಸಾಕ್ಷಾತ್ ಪರಮಾತ್ಮನೇ ಕಾರಣೀಕರ್ತರಾದರು. ದೇವರು ಯಾಕೆ ಬಂದ ಇಲ್ಲಿ ಎನ್ನುತ್ತೀರೋ? ಅಲ್ಲ, ಈ ವಿಶ್ವವನ್ನು, ಅಗಾಧ ಆಗಸವನ್ನು, ಗ್ರಹ, ಧೂಮಕೇತಾದಿಗಳನ್ನು, ನಂತರ ಇವುಗಳೆಲ್ಲವಕ್ಕೆ viceroy ಆಗಿ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿದ ತಪ್ಪಿಗೆ ರಷ್ಯಾದವರು ದೇವ ಸ್ಮರಣೆಯೇ ಬೇಡ ಎಂದರೆ  ಅವನಾದರೂ ಏಕೆ ಸುಮ್ಮನಿರಬೇಕು? ಗೋರ್ಬಚೋಫ್ ನನ್ನು ದಾಳವಾಗಿ ಉಪಯೋಗಿಸಿ ವಿಶ್ವದ ಮಹಾ ಶಕ್ತಿ ರಶ್ಯಾವನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟ ದೇವರು ಈಗಲಾದರೂ ನನ್ನ ಜಪ ಮಾಡುತ್ತಾ ಬಿದ್ದಿರಿ ಎಂದು.

ಆಫ್ಘಾನಿಸ್ತಾನದ ಯುದ್ಧದಲ್ಲಿ ತಲ್ಲೀನವಾದ ಅಮೆರಿಕೆಗೆ ಚಾರಿತ್ರಿಕ ಮತ್ತು ರಾಜತಾಂತ್ರಿಕ ತಿರುಗೇಟಾಗಿ ಪರಿಣಮಿಸಿದೆ ಆಫ್ಘನ್ ಯುದ್ಧ ಎಂದು ಗೋರ್ಬಚೋಫ್ ವಾದ. ಆಫ್ಘಾನಿಸ್ತಾನದಲ್ಲಿ ರಷ್ಯಾ ಬೆಂಬಲಿತ ಸರಕಾರವನ್ನು ಉರುಳಿಸಲು ಮುಜಾಹಿದೀನ್ಗಳನ್ನು ಹರಿಬಿಟ್ಟ ಅಮೆರಿಕೆಗೆ ಈಗ ಅದೇ ಮುಜಾಹಿದೀನ್ ಗಳೇ ಸವಾಲಾಗಿ ಪರಿಣಮಿಸಿರುವುದು ಒಂದು ರೀತಿಯ ಕಾಕತಾಳೀಯ ಬೆಳವಣಿಗೆ.” ನನ್ನ ಪ್ರಕಾರ ದೇವರು ತಪ್ಪು ಮಾಡುವವರನ್ನು ಶಿಕ್ಷಿಸಲು ತನ್ನದೇ ಆದ mechanism ಅನ್ನು ಬಳಸುತ್ತಾನೆ ಎಂದು ಗೋರ್ಬಚೋಫ್ ನುಡಿಯುತ್ತಾರೆ. ಕಮ್ಯುನಿಸ್ಟರೆಂದರೆ ನಮ್ಮ ಪ್ರಕಾರ ನಿರೀಶ್ವರವಾದಿಗಳು, ಗೋರ್ಬಚೋಫ್ ಒಬ್ಬ ಕಮ್ಯುನಿಸ್ಟ್. ಇವರ ಬಾಯಲ್ಲಿ ದೇವರ ಪ್ರಸ್ತಾಪವೇ? ಅಥವಾ ನಿರೀಶ್ವರವಾದಿಯಾಗಿದ್ದ ಗೋರ್ಬಚೋಫ್ ರ ಕೊರಳಿಗೆ ಅವರ ಮಿತ್ರ ಅಮೆರಿಕೆಯ ಅಧ್ಯಕ್ಷ ರೊನಾಲ್ಡ್ ರೇಗನ್ ಶಿಲುಬೆ ಕಟ್ಟಿಬಿಟ್ಟರೆ? ಏನೇ ಆದರೂ ಆಫ್ಘಾನಿಸ್ತಾನ ಮಾತ್ರ ಅಮೆರಿಕೆ ಮಟ್ಟಿಗೆ ನೀನೆ ಸಾಕಿದಾ ಗಿಳಿ, ನಿನ್ನಾ ಮುದ್ದಿನ ಗಿಳೀ, ಹದ್ದಾಗಿ ಕುಕ್ಕಿತಲ್ಲೋ….. ಆಗಿದ್ದಂತೂ ಗುನುಗಿಸಲೇಬೇಕಾದ ಬೇಕಾದ ಸತ್ಯವೇ.

ಚಿತ್ರ ಸೌಜನ್ಯ: independent ಪತ್ರಿಕೆ (UK)

ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed state, ಪಾಕಿಸ್ತಾನದ ಈ degenaration ನೋಡಿ ಕನಿಕರ ಪಡುತ್ತಿದ್ದ ನಮಗೆ ಒಂದು ವಿಚಿತ್ರ ಆದರೆ  ಆಘಾತಕಾರಿಯಾದ ಬೆಳವಣಿಗೆ ಕಾಣಲು ಸಿಕ್ಕಿದೆ. ಒಂದು ಬೆಳಿಗ್ಗೆ ಅಮೆರಿಕೆಯ ದೂತಾವಾಸದ ಸಿಬ್ಬಂದಿಯೊಬ್ಬ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ ಬಂದು ನಿಲ್ಲುತ್ತದೆ, ಗುಂಡಿನ ಚಕಮಕಿ ನಡೆಯುತ್ತದೆ, ಬೈಕ್ ಸವಾರರಲ್ಲಿ ಇಬ್ಬರು ಸಾಯುತ್ತಾರೆ ಅಮೆರಿಕೆಯವನನ್ನು ಪೊಲೀಸರು ಬಂಧಿಸುತ್ತಾರೆ. ಪಾಕ್ ಬೀದಿಗಳಲ್ಲಿ  ಬೈಕ್ ನಲ್ಲಿ ಬರುವುದೂ, ಬಂದ ಕೂಡಲೇ ಗುಂಡಿನ ಕಾಳಗ ನಡೆಯುವುದೂ ಸಾಮಾನ್ಯವೇ. ನಾವು ನಮ್ಮ ಚಿತ್ರಗಳಲ್ಲಿ ಕಾಣುವುದನ್ನು ಅಲ್ಲಿ ನಿಜ ಜೀವನದಲ್ಲಿ ಆಡಿ ತೋರಿಸುತ್ತಾರೆ. ಆದರೆ ವಿಷಯದ ಗಾಂಭೀರ್ಯ ಇರುವುದು ಅಮೆರಿಕೆಯವ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದು. ಅದೂ ಸಾಧಾರಣ ಅಮೆರಿಕೆಯ ನಾಗರೀಕನಲ್ಲ. ದೂತಾವಾಸದ ಸಿಬ್ಬಂದಿ. ಅವನಿಗೆ ಇದ್ದೇ ಇರುತ್ತದೆ diplomatic immunity. ತನ್ನ ದೇಶದವರು ಸಿಕ್ಕಿಬಿದ್ದಾಗ ಸಹಜವಾಗಿಯೇ ಅಮೆರಿಕನ್ನರು ಕಿಡಿ ಕಿಡಿ ಯಾಗುತ್ತಾರೆ. ಈ ವಿಷಯದಲ್ಲೂ ಸಹ ಅಸಮಾಧಾನ ಗೊಂಡರು. ಮಾಮೂಲಿ ಪ್ರತಿಭಟನೆ ಕೆಲಸ ಮಾಡದಾದಾಗ ಅಮೆರಿಕೆಯಲ್ಲಿನ ಪಾಕ ರಾಜತಾಂತ್ರಿಕ ನನ್ನು ಕರೆಸಿ ನಮ್ಮ ಪ್ರಜೆಯನ್ನು ವಿಮುಕ್ತಿಗೊಳಿಸದಿದ್ದರೆ ನಿನ್ನನ್ನು ಒದ್ದೋಡಿಸುತ್ತೇವೆ ಎಂದು ಧಮಕಿ ಹಾಕಿದರು. ಧಮಕಿ ಕೇಳಿ ಮರಳಿದ ಆತ ನನಗೆ ಅಂಥ ಎಚ್ಹರಿಕೆಯನ್ನೇನೂ ಅಮೇರಿಕಾ ನೀಡಿಲ್ಲ ಎಂದು ಟ್ವೀಟಿಸಿ ಸುಮ್ಮನಾದ. ಆದರೆ ಅಮೇರಿಕ ನೇರವಾಗಿ ಅಲ್ಲಿನ ಸರಕಾರದ ಮೇಲೆ ಪ್ರಭಾವ ತೋರಿಸಲು ತೊಡಗಿತು. ಅಲ್ಲಿನ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಇವನು ದೂತಾವಾಸದ ಅಧಿಕಾರಿ ಅಲ್ಲ, ಬದಲಿಗೆ ಒಬ್ಬ ಗೂಢಚಾರ ಎಂದು ಕರೆದು ಅವನ ಬಳಿಯಿದ್ದ ಆಧುನಿಕ ಉಪಕರಣಗಳ ಹೆಸರುಗಳನ್ನೂ ಪಟ್ಟಿ ಮಾಡಿ ಬಹಿರಂಗಗೊಳಿಸಿದರು, charge sheet ಹಾಕಿ ಅತ್ತೆ ಮನೆಗೂ ಸಹ ಅಟ್ಟಿದರು. ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ? ಪಾಕಿಸ್ತಾನದ ಗಾಯಕ ಕೋಟ್ಯಂತರ ರೂಪಾಯಿ ಅನಧಿಕೃತವಾಗಿ  ತಂದ ಎಂದು ಬಂಧಿಸಿದ ಕೂಡಲೇ ಅವನನ್ನು ಬಿಡುಗಡೆ ಗೊಳಿಸಲು ಆದೇಶ.   

ಪ್ರಥಮ ಕೊಲ್ಲಿ ಯುದ್ಧದ ವೇಳೆ ಅಮೆರಿಕೆಯ ಯುದ್ಧ ವಿಮಾನಗಳಿಗೆ ಇಂಧನ ಹಾಕಬಾರದು ಎಂದು ನಿರ್ಣಯಿಸಿದ್ದ ನಮ್ಮ  ಸರಕಾರ ಕೊನೆಗೆ ಸದ್ದಿಲ್ಲದೇ ಇಂಧನ ತುಂಬಿಸಿ ಕೊಟ್ಟಿತು. ಬಿಳಿ ನಗು ನಮ್ಮ ಮೇಲೆ ಚೆನ್ನಾಗಿ ಪ್ರಭಾವ ಬೀರುತ್ತದೆ. ಈ ಪಾಠವನ್ನು ಅಮೆರಿಕನ್ನರಿಗೆ ನೀಡಿದ್ದು ನಮ್ಮನ್ನು ೨೦೦ ವರ್ಷ ಗಳ ಕಾಲ ಆಳಿದ ಬ್ರಿಟಿಷರು. ಇರಾನ್ ನಮ್ಮ ದೇಶದ ಆಪ್ತ ಮಿತ್ರ. ಆದರೆ ಇರಾನ ವಿರುದ್ಧದ ಭದ್ರತಾ ಮಂಡಳಿಯ ನಿರ್ಣಯಕ್ಕೆ ಪರವಾಗಿ ನಾವು ಮತ ಚಲಾಯಿಸಿ ಮಧ್ಯ ಪ್ರಾಚ್ಯದಲ್ಲಿನ ಒಂದು ದೇಶದ ಬೆಂಬಲವನ್ನು ಕಳೆದು ಕೊಂಡೆವು.

ಕೇಂದ್ರ ಸರಕಾರದಲ್ಲಿ ಕೆಲಸ ಮಾಡದ ಅಥವಾ ಮಾಡಲು ಬಾರದ ಒಂದು ಇಲಾಖೆ ಇದ್ದರೆ ಅದೇ ವಿದೇಶಾಂಗ ಇಲಾಖೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಎಂದರೆ ಗರಿ ಗರಿಯಾದ ಸೂಟು, ಅಥವಾ ರೇಶಿಮೆ ಸೀರೆ ಉಟ್ಟು ದೇಶ ಸುತ್ತುವುದು ಎನ್ನುವ ತಪ್ಪು ಕಲ್ಪನೆ ಮನೆ ಮಾಡಿದೆ. ನೆಹರೂ ಕಾಲಾದ outdated ರಾಜನೀತಿಯ ನಿಯಮಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವ ಭಾವನೆ ಬೇರೆ. ನಾವು ಯಾರ ಪರವೂ ಅಲ್ಲ, ಎಲ್ಲರ ಸವಾರಿ ನಮ್ಮ ಮೇಲೆ ನಡೆಯಲಿ ಎನ್ನುವ ನಿರ್ಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ. ಆ ನೀತಿಗೆ ಒಂದೇ ಒಂದು ಬದಲಾವಣೆಯಂತೂ ಕಾಣಲು ಸಿಕ್ಕಿದೆ. ಅದೇ ಅಮೇರಿಕಾ ಪರ ನೀತಿ. ಹಿಂದೆ ರಷ್ಯಾ ಪರ, ಈಗ ಅಮೇರಿಕಾ ಪರ. ನಮಗೇಕೆ ಸ್ವಂತಿಕೆ ಇಲ್ಲ ಅಥವಾ ಇರಕೂಡದು? ವಿನಾಕಾರಣ ಕಾರ್ಗಿಲ್ ಅನ್ನು ಆಕ್ರಮಿಸಿ ನಮ್ಮ ಸಾವಿರಾರು ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಸದೆ ಬಡಿಯುವ ಸುಂದರ, ಬಹುಶಃ ಇನ್ನೆಂದೂ ಬರದ ಅವಕಾಶವನ್ನು ನಾವು ಕಳೆದು ಕೊಂಡೆವು. ಇದಕ್ಕೆ ಕಾರಣ ನಮಗೆ ಅಮೇರಿಕೆಯಿಂದ ಬಂದ ಮನವಿ. ಅವರಿಗೆ ಬೇಕಾದಾಗ ಮನವಿ, ಅಥವಾ ಬೆದರಿಕೆ. ಈ ಎರಡರಲ್ಲಿ ಒಂದನ್ನು ಕೊಟ್ಟು ಅಮೇರಿಕಾ ತನ್ನ ಕೆಲಸವನ್ನೂ ಸಾಧಿಸಿ ಕೊಳ್ಳುತ್ತದೆ.

೨೦೦೧ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕೆಯ ಮೇಲೆ ನಡೆದ ಧಾಳಿಗೆ ತತ್ತರಿಸಿ ಪ್ರಪಂಚದ ಎಲ್ಲ ದೇಶಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿತು ಅಮೇರಿಕಾ. ಭಯೋತ್ಪಾದಕರು, ಅದಕ್ಕೆ ಧನ ಸಹಾಯ ನೀಡುವವರು ಯಾರದೇ ನೆಲದ ಮೇಲೆ ಇದ್ದರೋ ಅಮೆರಿಕೆಯ ಸುಪರ್ದಿಗೆ ಒಪ್ಪಿಸತಕ್ಕದ್ದು ಎನ್ನುವುದು ಮುಚ್ಚಳಿಕೆ. ವಿಧೇಯರಾಗಿ ಎಲ್ಲಾ ದೇಶಗಳೂ ತಲೆ ಬಾಗಿದವು. ನಮ್ಮ ದೇಶದ ಗಡಿ ನುಗ್ಗಿ ಒಂದು ನಗರವನ್ನು ತನ್ನ ಹಿಂಸೆಯಿಂದ ತತ್ತರಿಸುವಂತೆ ಮಾಡಿದ ಪಾಕ ಬಗ್ಗೆ ಮಾತ್ರ ಬೇರೆಯೇ ತೆರನಾದ ನಿಲುವು. ಉಗ್ರವಾಗಿ ಪ್ರತಿಭಟಿಸಿದಾಗ ಅಲ್ಲಿಂದ ಧಾವಿಸಿ ಬಂದ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಒಂದ್ರೆಅದು ಮೊಂಬತ್ತಿ ಗಳನ್ನು ಹಚ್ಚಿ, ಎರಡು ನಿಮಿಷ ಮೌನ ಆಚರಿಸಿ ಸಮಾಧಾನ ಮಾಡಿ ಹೋದರು. ಮುಂಬೈ ಮೇಲಿನ ಆಕ್ರಮಣದ ವೇಳೆಯೂ ಭಾರತಕ್ಕೆ ಒಂದು ಸುವರ್ಣಾವಕಾಶ ಇತ್ತು ಪಾಕಿಗೆ ಒಂದು “ಝಟ್ಕಾ” ನೀಡಲು. ಅಲ್ಲೂ ಬಿಳಿ ನಗೆ ನಮ್ಮ priority ಮರೆಯುವಂತೆ ಮಾಡಿತು. ಬಿಳಿ ನಗುವಿನ ಮಾಯೆ ಅಂಥದ್ದು.     

ನಮ್ಮ ರಕ್ಷಣಾ ಸಚಿವ (ಜಾರ್ಜ್ ಫೆರ್ನಾಂಡಿಸ್) ರನ್ನು ಬೆತ್ತಲೆ ಮಾಡಿ ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅದು ದೊಡ್ಡ ವಿಷಯವಲ್ಲ ನಂಗೆ. ಮೆಚ್ಚುಗೆ, ಅಬ್ಬಾ, ಎಂಥ ಭದ್ರತಾ ವ್ಯವಸ್ಥೆ ಅವರದು. ನಮ್ಮ ರಾಷ್ಟ್ರಪತಿ ಕಲಾಂ ರನ್ನು ವಿಮಾನ ನಿಲ್ದಾಣ ದಲ್ಲಿ ಅನುಚಿತವಾಗಿ ವರ್ತಿಸಿದಾಗಲೂ ನಿರ್ಲಿಪ್ತತೆ. ನಮ್ಮ ವಿದ್ಯಾರ್ಥಿಗಳನ್ನು ಅಲ್ಲಿನ ವಿದ್ಯಾಲಯವೊಂದು ಮೋಸ ಮಾಡಿ ನಂತರ ವಿದ್ಯಾರ್ಥಿಗಳು ಓಡಿ ಹೋಗದಂತೆ electronic tag ಅವರ ಕಾಲಿಗೆ ಕಟ್ಟಿ ಅವರ ಮೇಲೆ ನಿರಂತರ ನಿಗಾ ಇಟ್ಟಾಗಲೂ ನಮಗೆ ಅಮೆರಿಕೆಯ ನಡವಳಿಕೆ ಅಸಹನೀಯವಾಗಿ ತೋರುವುದಿಲ್ಲ. ಇನ್ನು ನಮಗೆ ತಿಳಿಯದ ಇನ್ಯಾವ್ಯಾವ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆಯೋ ದೇವರೇ ಬಲ್ಲ. ನಮ್ಮ ಸರಕಾರ ಗಳನ್ನು ನಡೆಸಲು ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲಾ ಅರವತ್ತು, ಎಪ್ಪತ್ತು ವಯಸ್ಸು ದಾಟಲೇ ಬೇಕು. ಒಂದೆರಡು ಅಪವಾದಗಳನ್ನು ಬಿಟ್ಟರೆ ವಯೋವೃದ್ಧರ ಕಾರುಬಾರು. ಅವರಿಗೆ ರೋಷ ಎಲ್ಲಿಂದ ತಾನೇ ಬರಬೇಕು.   

ಈಗಿನ ವಿಶ್ವ bi-polar ಆಗಬೇಕಿಲ್ಲ. ಪ್ರಪಂಚದ ತುಂಬಾ ದೊಡ್ಡದು. ಹಳೇ ಕಾಲದ ರೀತಿಯ ರಾಜಕಾರಣವನ್ನು ಅಲ್ಲ ನಾವು ಕಾಣುತ್ತಿರುವುದು. ಪಕ್ಕದ ಚೀನಾ ಅತ್ಯಾಧುನಿಕ ಆಯುಧಗಳನ್ನು ಶೇಖರಿಸುತ್ತಿದೆ ಎಂದು ನಮ್ಮ ಗೃಹ ಮಂತ್ರಿ ಕಳವಳ ವ್ಯಕ್ತ ಪಡಿಸಿದರು. ಅವರ ಮನೆಯೊಳಗೇ ಕೂತು ಅವರೇನಾದರೂ ಮಾಡಿಕೊಳ್ಳಲಿ. ನಮಗೇಕೆ ಅವರ ಉಸಾಬರಿ? 3G ಸ್ಕ್ಯಾಮು ಮತ್ತು ಸ್ವಿಸ್ ಮತ್ತು ಇತರೆ ಬ್ಯಾಂಕುಗಳಲ್ಲಿ ನಮ್ಮ ಜನ ಹುಗಿದಿಟ್ಟಿರುವ ಸಂಪತ್ತನ್ನು ಉಪಯೋಗಿಸಿ ನಮ್ಮ ಸೈನ್ಯವನ್ನೂ ಬಲ ಗೊಳಿಸಲಿ. ಭಾರತದ ನೇತೃತ್ವದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಧ್ರುವೀಕರಣ ನಡೆಯಲಿ. ನಮ್ಮೊಂದಿಗೆ ಹೆಜ್ಜೆ ಹಾಕಲು ಲ್ಯಾಟಿನ್ ಅಮೆರಿಕೆಯಲ್ಲೂ, ಮಧ್ಯ ಪ್ರಾಚ್ಯದೇಶ ಗಳಲ್ಲೂ, ಆಫ್ಫ್ರಿಕಾ ಖಂಡದಲ್ಲೂ ದೇಶಗಳಿವೆ.

ನಗ್ನ ಪ್ರದರ್ಶನ

ಓರ್ವ ಮಹಿಳೆಯನ್ನು ನಗ್ನಳನ್ನಾಗಿಸಿ ಮರಕ್ಕೆ ಕಟ್ಟಿ ಹಾಕಿದ ದೃಶ್ಯ ನೋಡಿ ದಂಗಾದ ವ್ಯಕ್ತಿಯೊಬ್ಬ ಕೂಡಲೇ 911 ಕ್ಕೆ ಫೋನಾಯಿಸಿ ಪೊಲೀಸರನ್ನು ಕರೆಸುತ್ತಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲೇ ಅಡ್ಡಾಡುತ್ತಿದ್ದ ಒಬ್ಬ ವ್ಯಕ್ತಿ ಕಾಣಲು ಸಿಗುತ್ತಾನೆ. ಅವನನ್ನೂ, ಮರಕ್ಕೆ ಕಟ್ಟಿ ಹಾಕಲ್ಪಟ್ಟ ನಿಸ್ಸಹಾಯಕ ನೀರೆಯನ್ನೂ ಪ್ರಶ್ನಿಸಿದಾಗ ಕೃತ್ಯ ಬಯಲಿಗೆ ಬರುತ್ತದೆ. ಇಬ್ಬರೂ ಹೇಳಿದ್ದು ಪರಸ್ಪರರ ಅನುಮತಿಯೊಂದಿಗೆ (consensual rendezvous) ನಗ್ನತೆಯ ಸರ್ಕಸ್ ಏರ್ಪಟ್ಟಿದ್ದು ಎಂದು. ಯಾರನ್ನೂ ಬಂಧಿಸದೆ ಪೊಲೀಸರು ಮರಳಿದರು ನಗ್ನ ಮಹಿಳೆಯ ಅಂಗಸೌಷ್ಟವನ್ನು ಕಣ್ಣಿನಲ್ಲಿ ತುಂಬಿಸಿಕೊಂಡು. ಇದು ನಡೆದಿದ್ದು ಅಮೆರಿಕೆಯ ವಾಷಿಂಗ್ಟನ್ ರಾಜ್ಯದ ಟಕೋಮ ನಗರದ ಒವೆನ್ ಬೀಚ್ ಏರಿಯಾದಲ್ಲಿ. ಅಮೇರಿಕಾ land of opportunities ಮಾತ್ರವಲ್ಲ land of whimsical ideas ಕೂಡಾ ಎಂದು ಮೇಲಿನ ಘಟನೆ ನಮಗೆ ತಿಳಿಸುತ್ತದೆ. ನಮ್ಮಲ್ಲಿ ಈ ತೆರನಾದ ಘಟನೆ ನಡೆದಿದ್ದರೆ ? ಈ ದೃಶ್ಯವನ್ನು ಕಂಡವ ಪೊಲೀಸರಿಗೆ ಫೋನಾಯಿಸುವ ಬದಲು ಅಲ್ಲೇ ಅಡ್ಡಾಡುತ್ತಿದ್ದ ಆಕೆಯ ಪ್ರಿಯಕರನನ್ನು ಮತ್ತೊಂದು ಕಂಬಕ್ಕೆ ಕಟ್ಟಿ ಹಾಕಿ “ಕನ್ಸೆನ್ಸುವಲ್ ರಾನ್ಡೇವೂ” ಸಾಹಸದ ನೈಜ ಪಾಠ ಹೇಳುತ್ತಿದ್ದನೋ ಏನೋ?

‘ವಿಕಿಲೀಕ್’ ಅವಾಂತರ

ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ರಾಜಕಾರಣ ಎಂದರೆ ಗರಿ ಗರಿ ಕಪ್ಪು ಸೂಟು, ಮುಗುಳ್ನಗುವಿನೊಂದಿಗೆ ಹಸ್ತಲಾಘವ, ನಂತರ ಮೃಷ್ಟಾನ್ನ ಭೋಜನ ಎಂದು ತಿಳಿದಿದ್ದ ನಮಗೆ ಹೊಸತೊಂದು ವಿಶ್ವದ ಪರಿಚಯ ಮಾಡಿಕೊಟ್ಟಿತು ವಿಕಿಲೀಕ್. ‘ವಿಕಿಪೀಡಿಯ’ ಗೊತ್ತು, ಇದೇನೀ ‘ವಿಕಿಲೀಕ್’ ಎಂದಿರಾ? ವಿಕಿಪೀಡಿಯ ನಮಗೆ ತಿಳಿಯಬೇಕಾದ ವಿಷಯಗಳನ್ನು ಸರಾಗವಾಗಿ, ಕ್ಷಣ ಮಾತ್ರದಲ್ಲಿ ತಿಳಿಸಿಕೊಡುವ ತಾಣವಾದರೆ, ವಿಕಿಲೀಕ್ ಮಾತ್ರ ಸ್ವಲ್ಪ ಸರಿದು ನಿಂತು ನಾವೆಂದಿಗೂ ‘ಕೇಳಬಾರದ, ಆಡಬಾರದ, ನೋಡಬಾರದ’, ವಿಷಯಗಳನ್ನು ನಮಗೆ ತಲುಪಿಸಿ ಮಗುಮ್ಮಾಗಿ ಇದ್ದುಬಿಡುವ whistle blower. ಸ್ವಲ್ಪ ಮಟ್ಟಿಗೆ ನಮ್ಮ ಅಚ್ಚು ಮೆಚ್ಚಿನ ‘ತೆಹೆಲ್ಕಾ’ ರೀತಿಯದು. ಈ ವೆಬ್ ತಾಣದ ಸಾರಥಿ ಆಸ್ಟ್ರೇಲಿಯಾದ 39 ರ ಪ್ರಾಯದ ಜೂಲಿಯಾನ್ ಅಸಾಂಜ್. ಈಗ ಈತ ಕಂಬಿ ಎಣಿಸಲು ಅಥವಾ ತನ್ನ ತಲೆ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಲಂಡನ್ನಿನ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾನೆ.

ಅಭಿವ್ಯಕ್ತಿ ಸ್ವಾತಂತ್ರ್ಯ. ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ತಮ್ಮದೇ ಆದ ಧೋರಣೆ. ಆ ಧೋರಣೆ ಹಿಂಸಾರೂಪ ತಾಳಿದರೂ ಯಾರಿಗೂ ಅದರ ಪರಿವೆ ಇಲ್ಲ. ಸೂಟು ಬೂಟು, ಬಿಳಿಚರ್ಮ ಹೊತ್ತವರು ಏನೇ ಹೇಳಿದರೂ ಎಲ್ಲಾ ಓಕೆ. ಗಡ್ಡ ಮಾತ್ರ ಇರಬಾರದು ಈ ರೀತಿಯ ಮಾತನ್ನಾಡಲು. ಆಗ ಪದಪ್ರಯೋಗದ ಸಮೀಕರಣ ಬದಲಾಗಿ ಬಿಡುತ್ತದೆ. ಕೆನಡಾದ ಪ್ರಧಾನಿಯ ಮಾಜಿ ಸಲಹೆಗಾರ stephen ‘Harper’ ನ ಪ್ರಕಾರ ವಿಕಿ ಲೀಕ ನ ಅಸಾಂಜ್ ನನ್ನು ಕೊಲ್ಲಬೇಕು. ನೋಡಿ ಎಂಥ ಅಸಂಬದ್ಧ, harping ಈತನದು. ಹೆಸರಿಗೆ ತಕ್ಕಂತೆ ನಡತೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಂದು ಕೊಡುವ ಕಚಗುಳಿ ಎಂಥದ್ದು ಎಂದು ತಡವಾಗಿ ತಿಳಿಯಿತು ಅಮೆರಿಕೆಗೆ ಮತ್ತು ಅದರ ಹಿಂಬಾಲಕರಿಗೆ.

ರಾಜನಿಂದ ಹಿಡಿದು ರಾಜತಾಂತ್ರಿಕನವರೆಗೆ ಯಾರು ಏನು ಹೇಳಿದರು ಎಂದು ಸವಿಸ್ತಾರವಾಗಿ ಪ್ರಕಟಿಸಿದ ವಿಕಿಲೀಕ್ ಅಂತಾರಾಷ್ಟ್ರೀಯ ರಾಜಕಾರಣ ಯಾವ ರೀತಿಯ ‘ಡಬಲ್ ಗೇಂ’ ಎಂದು ನಮಗೆ ಮನವರಿಕೆ ಮಾಡಿಕೊಡುತ್ತಿದೆ. ನಮ್ಮ ದೇಶಕ್ಕೆ ಬಂದು ನಮ್ಮೆಲ್ಲರನ್ನೂ ಮರುಳು ಮಾಡಿ, ನಮಗೆ ಬಾಲಿವುಡ್ ಮೇಲೆ ಇರುವ ವ್ಯಾಮೋಹಕ್ಕೆ ತಕ್ಕಂತೆ ಒಂದಿಷ್ಟು ಡ್ಯಾನ್ಸ್ ಮಾಡಿ ಕೊನೆಗೆ ತಮ್ಮ ಊರು ತಲುಪಿದ ನಂತರ ಬೇರೆಯದೇ ಆದ ಸನ್ನೆ ಕಳಿಸುವುದು. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕಾಗಿರುವ ನಮ್ಮ ಆಸೆಯನ್ನೂ, ಅದಕ್ಕಾಗಿ ನಾವು ಹೆಣಗುತ್ತಿರುವುದನ್ನು ಅರಿತ ಅಮೇರಿಕಾದ ಅಧ್ಯಕ್ಷ ನಮ್ಮಲ್ಲಿಗೆ ಬಂದು ಭಾರತ ಈ ಸ್ಥಾನಕ್ಕೆ ಅತ್ಯಂತ ಅರ್ಹ ರಾಷ್ಟ್ರ, ನಮ್ಮ ಬೆಂಬಲ ಅದಕ್ಕಿದೆ ಎಂದು ನಮ್ಮನ್ನು ಪುಳಕಿತರಾಗಿಸಿ ಹೋದರು. ಈ ಮಾತು ಕೇಳಿ ನಮಗೆ ಆನಂದದ ಮಂಪರು. ಅತ್ತ ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಅಭಿಪ್ರಾಯ ಬೇರೆಯೇ. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ “ಸ್ವಯಂ ನೇಮಿತ” ಆಕಾಂಕ್ಷಿ ಎಂದು ಬಿರುದು ನೀಡಿದರು. “self appointed frontrunners” ಅಂತೆ. ಬೇಸರಿಸಬೇಡಿ, ಈ ಸ್ವಯಂ ನೇಮಿತ ಕ್ಲಬ್ಬಿನಲ್ಲಿ ಜಪಾನ್, ಬ್ರೆಜಿಲ್ ಮತ್ತು ಜರ್ಮನಿ ಸಹ ಸೇರಿವೆ. ಆಹ್, ಈಗ ಸ್ವಲ್ಪ ಸಮಾಧಾನ ನೋಡಿ. ನಮ್ಮೊಂದಿಗೆ ಇತರರನ್ನೂ ಸೇರಿಸಿ ಅಪಹಾಸ್ಯ ಮಾಡಿದರೆ ಭಾರ ಸಹಜವಾಗಿಯೇ ಸ್ವಲ್ಪ ಕಡಿಮೆ ಆಗುತ್ತದೆ. ಈ ಭಾವನೆಯೇ ಇರಬೇಕು ನಮ್ಮ ಮಾಧ್ಯಮಗಳು ಇದನ್ನು ಒಂದು ‘slight’ ಎಂದು ಪರಿಗಣಿಸಲು ಸೋತಿದ್ದು. ನೀವು ಅನುಮತಿಸಿದರೆ ನನ್ನದೊಂದು ಸಂಶಯ. ಅಮೇರಿಕಾ ನಮ್ಮನ್ನು ಇನ್ಯಾವ ರೀತಿಯಲ್ಲಿ ನಡೆಸಿ ಕೊಂಡಾಗ ನಾವು ಎಚ್ಚೆತ್ತು ಕೊಂಡು ‘ thanks for everything, yank. bye bye’ ಎಂದು ವಿನಯದಿಂದ ಹೇಳೋದು? ಅಮೆರಿಕೆಯ ಸಹವಾಸ ಮಾಡಿದವರು ಉದ್ಧಾರವಾದ ಕುರಿತು ಕೈಲಾಸದಲ್ಲಿ ಮನೆ ಮಾಡಿರುವವನಿಗೆ ಬಹುಶಃ ಗೊತ್ತಿರಬಹುದು. ಬೇರಾರಿಗೂ ಗೊತ್ತಿರುವ ಬಗ್ಗೆ ವರದಿಯಿಲ್ಲ. ಸದ್ದಾಮ್ ಕಾಲಾವಧಿ ನಂತರದ ಇರಾಕಿನ ತೈಲ ಸಚಿವನಾಗಿದ್ದ ‘ಅಹಮದ್ ಶಲಾಬಿ’ ಹೇಳಿದ್ದು america betrays its friends. it sets them up and betrays them. I’d rather be america’s enemy. ನಿನ್ನ ಮೈತ್ರಿಗಿಂತ ನಿನ್ನ ಶತ್ರುತ್ವವೇ ಬಲು ಚೆಂದ ಎಂದು. ವಿಷಕನ್ಯೆಗೆ ಹೇಳಬಹುದಾದ ಸವಿ ಮಾತುಗಳು ಇವು, ಅಲ್ಲವೇ? ಅಮೆರಿಕೆಯ ಸಹಾಯದಿಂದ ಅಧಿಕಾರದ ಗದ್ದುಗೆಗೆ ಏರಿದ ವ್ಯಕ್ತಿಯೊಬ್ಬ ಈ ಮಾತನ್ನು ಹೇಳಬೇಕೆಂದರೆ ಅವನಿಗೆ ಎಂಥ ರಾಜೋಪಚಾರ ಸಿಕ್ಕಿರಬೇಕು?

ಈಗ ಈ ಬರಹದಲ್ಲಿ anti americanism ಧೋರಣೆಯನ್ನು ದಯಮಾಡಿ ಕಾಣಬೇಡಿ. ಅಮೆರಿಕೆಯವೇ ಆದ “Levis” ಜೀನ್ಸ್, ‘papa johns’ pizza, ಮತ್ತು ಕಡಿಮೆ ಸ್ಪೆಲ್ಲಿಂಗ್ ಇರುವ ‘ಅಮೇರಿಕನ್ ಇಂಗ್ಲಿಶ್’ ನನಗೆ ತುಂಬಾ ಇಷ್ಟ. ನನ್ನ ನಿಲುವು ಇಷ್ಟೇ. ನಮ್ಮ ರಾಜಕಾರಣ ಮತ್ತು ಅವರ ರಾಜಕಾರಣ ಸ್ವಲ್ಪ ‘ಡಿಫ್ಫ್ರೆಂಟು’. ಆದರೆ ನಮಗೆ ಈ ‘ಡಿಫ್ಫ್ರೆನ್ಸು’ ಅರಗಿಸಿಕೊಳ್ಳಲಾಗದಂಥ ‘depression’ ತಂದೊಡ್ಡುತ್ತದೆ. ಹಾಗಾಗಿ ಸಂಚಾರಿ ನಿಯಮದ ಥರ ‘ನಡುವೆ ಅಂತರವಿರಲಿ’ ರೀತಿಯ ಅಂತರ ಕಾಯ್ದು ಕೊಳ್ಳಲು ನನ್ನ ಹಂಬಲ. ಗುಮಾನಿ ಪಡಬೇಕಾದ ulterior motive ಇಲ್ಲ.

ಬನ್ನಿ ನಾನಿರುವ ಕೊಲ್ಲಿ ಪ್ರದೇಶಕ್ಕೆ. ಇಲ್ಲೊಂದು ಸ್ವಾರಸ್ಯ. ನೋಡಿ, ನಾನು ಕೊಲ್ಲಿ ಎಂದು ಟೈಪ್ ಮಾಡಿದಾಗ “ಕೊಳ್ಳಿ” ಅಂತ ತೋರಿಸಿತು ಗೂಗಲ್. ಒಂದು ರೀತಿಯ “ಕೊಳ್ಳಿ” ಎಂದೇ ಕರೆಯಬಹುದು ಈ ಪ್ರಾಂತ್ಯವನ್ನು. ಸೌದಿ ಅರೇಬಿಯಾದ ದೊರೆ ‘ಅಬ್ದುಲ್ಲಾ ಇಬ್ನ್ ಅಬ್ದುಲ್ ಅಜೀಜ್ ಅಲ್-ಸೌದ್’ ವಿಶ್ವದ ಮುಸ್ಲಿಮರು ಗೌರವಿಸುವ ವ್ಯಕ್ತಿತ್ವ. ಏಕೆಂದರೆ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನ ಇರುವುದು ಸೌದಿ ಅರೇಬಿಯಾದಲ್ಲಿ. ಇಲ್ಲಿನ ದೊರೆ ಹೆಮ್ಮೆಯಿಂದ ತನ್ನನ್ನು ತಾನು ಕರೆದುಕೊಳ್ಳುವುದು ಎರಡು ಪವಿತ್ರ ಕ್ಷೇತ್ರಗಳ ಸಂರಕ್ಷಕ ಎಂದು. ಸಾವಿರಾರು ಕೋಟಿ ಖರ್ಚು ಮಾಡಿ ಎರಡು ಪವಿತ್ರ ಕ್ಷೆತ್ರಗಳನ್ನು ಇನ್ನಷ್ಟು ವಿಸ್ತರಿಸಿದ ಖ್ಯಾತಿ ಈ ದೊರೆಗೆ. ಹಾಗಾಗಿ ವಿಶ್ವದ ಮುಸ್ಲಿಮರಿಗೆ ಇವರ ಮೇಲೆ ಆದರ, ಗೌರವ. ಹಾವಿನ ತಲೆ ಕಡಿಯುವಂತೆ ಕಡಿಯಬೇಕು ಎಂದು ಇರಾನಿನ ಕುರಿತು ಅಮೆರಿಕೆಗೆ ಶಿಫಾರಸು ಮಾಡಿದರು ದೊರೆ ಅಬ್ದುಲ್ಲಾ ಎಂದು ವಿಕಿಲೀಕ್ ಎಲ್ಲರನ್ನೂ ತಲ್ಲಣಗೊಳಿಸಿತು. ಒಬ್ಬ ಮುಸ್ಲಿಮ್ ರಾಷ್ಟ್ರದ ದೊರೆ ಮತ್ತೊಂದು ಸೋದರ ದೇಶದ ವಿರುದ್ಧ ಈ ರೀತಿ ಮಾತನಾಡಿದ್ದು ಅಚ್ಚರಿ ತರಿಸಿತು ಪಾಶ್ಚಾತ್ಯ ದೇಶಗಳಿಗೆ. ಇವರಿಬ್ಬರ ನಡುವಿನ ಸ್ನೇಹದ “ಆಳ” ಎಲ್ಲರಿಗೂ ಗೊತ್ತಿದ್ದರೂ ತಲೆ ಕಡಿಯಲು ಶಿಫಾರಸ್ಸು ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಇರಾನ್ ಶಿಯಾ ಬಾಹುಳ್ಯದ ರಾಷ್ಟ್ರ ಮತ್ತು ಸೌದಿ, ಸುನ್ನಿ ರಾಷ್ಟ್ರ. ಚಾರಿತ್ರಿಕವಾಗಿ ಶಿಯಾ – ಸುನ್ನಿ ಪಂಗಡಗಳ ನಡುವಿನ ಜಟಾಪಟಿ ತುಂಬಾ ಹಳತು. ideological difference ಅಲ್ಲದಿದ್ದರೂ ವ್ಯಕ್ತಿ (ಪ್ರವಾದಿ ಮುಹಮ್ಮದ್ ಮತ್ತು ‘ಹಜರತ್ ಅಲಿ’ ವಿಷಯದಲ್ಲಿ) ನಿಷ್ಠೆಯಲ್ಲಿ ಸುನ್ನಿ ಮತ್ತು ಶಿಯಾ ಜನರಲ್ಲಿ ಒಡಕಿದೆ. ಸೌದಿ ದೊರೆಯ ಈ ಬೆಚ್ಚಿ ಬೀಳಿಸುವಂಥ ಮಾತನ್ನು ಕೇಳಿದ ಇರಾನ್ ಸೌದಿಯನ್ನು ಇನ್ನು ಯಾವ ರೀತಿ ನಡೆಸಿಕೊಳ್ಳಬಹುದು ಎಂದು ಕಾದು ನೋಡಬೇಕು.

ಈ ತೆರನಾದ ಸುದ್ದಿಗಳನ್ನು ಚಿಕ್ಕಾಸಿನ ಅಪೇಕ್ಷೆಯೂ ಇಲ್ಲದೆ ಬಟಾಬಯಲು ಮಾಡುತ್ತಿರುವ ವಿಕಿಲೀಕ್ ಮೇಲೆ ಅಮೇರಿಕ ಮುಂತಾದ ರಾಷ್ಟ್ರಗಳ ಕೆಂಗಣ್ಣು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯೋದು ಲೋಕ ರೂಢಿಯೇ ತಾನೇ? ಅಮೇರಿಕಾ ಏಕೆ ಅದಕ್ಕೆ ಹೊರತಾಗಬೇಕು? ವಿಕಿಲೀಕ್ ವೆಬ್ ತಾಣ ಬೇರಾವುದಾದರೂ ಒಂದು ದೇಶ ಅಮೆರಿಕೆಯ ವಿರುದ್ಧ ಹೇಳಿದ್ದನ್ನು ಲೀಕ್ ಮಾಡಿದ್ದಿದ್ದರೆ ಅಮೇರಿಕ ಕುಣಿದು ಕುಪ್ಪಳಿಸುತ್ತಿತ್ತು. ಆದರೆ ‘ವಿಕಿಲೀಕ್’ ನ ಕೊಡಲಿ ತನ್ನ ಬುಡದ ಕಡೆಗೆ ಪ್ರಯಾಣ ಬೆಳೆಸಿದಾಗ ಮಾತ್ರ ಅಮೇರಿಕಾ ಹೌಹಾರಿತು. ಹೌಹಾರದೆ ಏನು? ಬೇಲಿಯೂ ತಾನೇ, ಮೇಯುವವನೂ ತಾನೇ. ಇದು ಅಮೆರಿಕೆಯ ವಿದೇಶಾಂಗ ನೀತಿ. ಹಾಗಾಗಿ ವಿಕಿಲೀಕ್ ಸ್ಥಾಪಕ ‘ಅಸಾಂಜ್’ ನನ್ನು ದೇಶದ್ರೋಹಿ ಎಂದು ಹಣೆ ಪಟ್ಟಿ ಲಗತ್ತಿಸಿದ್ದಲ್ಲದೆ ಅವನನ್ನು ವಧಿಸುವ ತನಕ ಅಮೆರಿಕೆಯ ಆಕ್ರೋಶ ಆವರಿಸಿತು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಅಸಾಂಜ್ ತನ್ನ ಕೆಲಸ ಇನ್ನೂ ಮುಂದುವರಿಸುವುದಾಗಿ ಅವನ ಬೆಂಬಲಿಗರಿಗೆ ಭರವಸೆ ನೀಡಿದ. ಈಗ ಆತನ ಕಣ್ಣು ಅಮೆರಿಕೆಯ ಅತಿ ದೊಡ್ಡ ಬ್ಯಾಂಕುಗಳ ಅವ್ಯವಹಾರ ಮತ್ತು ಕಾರ್ಯವೈಖರಿಯ ಕಡೆ. ಅಸಾಂಜ್ ನ ಮಾತು ಸಿಡಿಲಿನಂತೆ ಎರಗಿತು ಬ್ಯಾಂಕಿಂಗ್ ವಲಯಗಳ ಮೇಲೆ. ಇವನ್ನೆಲ್ಲಾ ಕೇಳುತ್ತಿರುವ, ನೋಡುತ್ತಿರುವ ನಮಗೆ ಅಮೇರಿಕಾ ಪ್ರಪಂಚದ ಎಲ್ಲಾ ಪಾಪಗಳ, ಕೃತ್ರಿಮಗಳ ಉಗಮಸ್ಥಾನವೋ ಎಂದು ತೋರುವುದು ಅಸಹಜವೇನಲ್ಲ. ಹಾಲಿವುಡ್ ಅಂದ್ರೆ ಒಂದಿಷ್ಟು ಸೆಕ್ಸ್ ಇರಲೇಬೇಕು, ಏನಂತೀರಾ? ಹಾಗೆಯೇ ಅಂತಾರಾಷ್ಟ್ರೀಯ ರಾಜಕಾರಣದಲ್ಲೂ ಒಂದಿಷ್ಟು ಶೃಂಗಾರ ನುಸುಳುವುದಿದೆ ಎಂದು ವಿಕಿಲೀಕ್ ಬಯಲು ಮಾಡಿತು. ಲಿಬ್ಯಾ ದೇಶದ charismatic ಅಧ್ಯಕ್ಷ ‘ಮುಅಮ್ಮರ್ ಗದ್ದಾಫಿ’ ಜೊತೆ ಯಾವಾಗಲೂ ಮೋಹಕ ಅಂಗಸೌಷ್ಟವ ಹೊಂದಿದ ಯುಕ್ರೇನ್ ದೇಶದ ನರ್ಸ್ ಇರುತ್ತಾಳೆ ಎಂದು ಒಬ್ಬ ರಾಜತಾಂತ್ರಿಕ ಅಸೂಯೆಯಿಂದ ಜೊಳ್ಳು ಸುರಿಸಿದ. ಅಂದ್ರೆ ಬರೀ ಬೋರ್ ಹೊಡೆಸುವ global warming ರಾಜಕಾರಣ ಮಾತ್ರ ಅಲ್ಲ ಮಹೋದಯರ ಆಸಕ್ತಿ ಎಂದು ಇದರಿಂದ ಸ್ಪಷ್ಟವಾಯಿತು. ಕಂಪ್ಯೂಟರ್ ಬದಿಗೆ ಸರಿಸಿ ಹೀಗೇ ಮೋಜಿಗಾಗಿ ಸ್ವಲ್ಪ ಊಹಿಸಿ. ವಿಕಿಲೀಕ್ ತೆರನಾದ ಒಂದು ವ್ಯವಸ್ಥೆ ನಮ್ಮ ದೇಶದಲ್ಲಿಯೂ ಇದ್ದಿದ್ದರೆ 2G, 3G ಕಾಂಡಗಳು, ಆದರ್ಶ್ ಸೊಸೈಟಿ, ಸೈನಿಕರ ಶವ ಪೆಟ್ಟಿಗೆ ಗಳಂಥ ಹಗರಣ ಗಳು, ನಾವು ಕಂಡ ಬಗೆ ಬಗೆಯ ವರ್ಣರಂಜಿತ ಧಂಧೆಗಳು, ಇವೆಲ್ಲಾ ಪಿಕ್ನಿಕ್ ಥರ ಕಾಣುತ್ತಿದ್ದವು. ಈ ಮೇಲೆ ಹೇಳಿದ ಹಗರಣಗಳನ್ನೂ ಮೀರಿಸುವ ದೈತ್ಯಾಕಾರದ ತಿಮಿಂಗಿಲಗಳು ವಿಕಿಲೀಕ್ ಬಲೆಗೆ ಸಿಕ್ಕು ವಿಲವಿಲ ಎನ್ನುತ್ತಿದ್ದವೋ ಏನೋ.

ಜೂಲಿಯನ್ ಅಸಾಂಜ್ ನ ವಿಕಿಲೀಕ್ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಅದರ ಸುಡುವ ಲಾವಾರಸ ಜಗತ್ತಿನ ನಾಲ್ಕೂ ಕಡೆ ಹರಿಯುತ್ತಿದೆ. ಹರಿಯುವ ನಾಲಗೆಗಳಿಗೆ ಇನ್ನಷ್ಟು ಫಲವತ್ತನ್ನು ಒದಗಿಸುತ್ತಿದೆ. ಇದಕ್ಕೆಲ್ಲಾ ಕಾರಣೀಭೂತನಾದ ಜೂಲಿಯಾನ್ ಅಸಾಂಜ್ ನನ್ನು ಹೇಗೆ ಗತಿ ಕಾಣಿಸಬೇಕೆಂದು ಬಲಿಷ್ಠ ರಾಷ್ಟ್ರಗಳು ಲೆಕ್ಕ ಹಾಕುತ್ತಿವೆ. ಅಮೇರಿಕಾ ವಿರೋಧಿಯಾದ ಅಸಾಂಜ್ ಒಬ್ಬ ಸಾಮಾನ್ಯ ಆಸ್ಟ್ರೇಲಿಯನ್ ಪ್ರಜೆ. ಆತನದು ಠಿಕಾಣಿ ಯಿಲ್ಲದ ವಾಸ. ಒಂದೇ ಸ್ಥಳದಲ್ಲಿ ಎರಡು ರಾತ್ರಿಗಳನ್ನು ಕಳೆಯದ ಅಲೆಮಾರಿ. ವಿಶ್ವದ ಮೇಲಿನ ಅಮೆರಿಕೆಯ ಕಪಿ ಮುಷ್ಠಿ ಅವನಿಗೆ ಇಷ್ಟವಿಲ್ಲ. ಪ್ರಪಂಚದಲ್ಲಿ ನಡೆಯುವ ಅನ್ಯಾಯಗಳು ಜನರಿಗೆ ತಲುಪಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಂಬಿರುವ ಈತ, ಮಾಡುತ್ತಿರುವುದು ಒಳ್ಳೆಯ ಕೆಲಸವೋ ಅಥವಾ ಕೆಲಸವಿಲ್ಲದ ಬಡಗಿಯ ಬೇಡದ ಉಸಾಬರಿಯೋ ಎಂದು ವಿಶ್ವವೇ ಹೇಳಬೇಕು. ಆದರೆ ಆತನ ತಾಯಿ ಮಾತ್ರ ಹೇಳುತ್ತಿರುವುದು “ನನಗೆ ನನ್ನ ಮಗನ ಪರಿಸ್ಥಿತಿಯ ಬಗ್ಗೆ ಆತಂಕವಾಗುತ್ತಿದೆ, ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಎಷ್ಟಿದ್ದರೂ ನನ್ನ ಮಗನೇ. ನನ್ನ ಮತ್ತು ನನ್ನ ಮಗನ ಬಗ್ಗೆ ಅವರು ಹೇಳುತ್ತಿರುವುದೆಲ್ಲಾ ನಿಜವಲ್ಲ’ ಎಂದು ಆಕೆ ತನ್ನ ಮಗನ ಸುರಕ್ಷೆಗಾಗಿ ಹಂಬಲಿಸುತ್ತಾಳೆ, ಎಲ್ಲಾ ಹೆತ್ತಬ್ಬೆಯರು ಚಡಪಡಿಸುವ ರೀತಿಯಲ್ಲಿ.

ಗೊತ್ತಿಲ್ಲದವರಿಗೆ: ‘ವಿಕಿ’ ಎಂದರೆ, ‘ಹವಾಯಿ’ ಭಾಷೆಯಲ್ಲಿ ವೇಗ, ಕ್ಷಿಪ್ರ ‘fast’ ಅಂತ. ಮತ್ತು ಲೀಕ್ ಎಂದರೆ ಅದೇ ಆರ್ಡಿನರಿ ಲೀಕು, ನಮ್ಮಗಳ ಅಡುಗೆ ಮನೆಯಲ್ಲಿನ ‘ನಲ್ಲಿ’ ತೊಟ ತೊಟ ಎಂದು ಹನಿಯುದುರಿಸುತ್ತಾ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸೋರಿಕೆ. ಈ ಕ್ಷಿಪ್ರ ಮತ್ತು ಸೋರಿಕೆ ಇವೆರಡೂ ಸೇರಿಕೊಂಡಾಗ ಆಗುವುದು ants in the pant ಪರಿಸ್ಥಿತಿ. ಮೇಲೆ ವಿವರಿಸಿದ ಪರಿಸ್ಥಿತಿ.

pic courtesy: independent, UK

ಯೋಗಾಸನ ಪೈಶಾಚಿಕವಂತೆ

ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.

“ಪೆರು” ವಿಗೆ ಈ ವರುಷದ ನೊಬೆಲ್ ಸಾಹಿತ್ಯ ಪ್ರಶಸ್ತಿ



 

ಸಾಹಿತ್ಯದಲ್ಲಿ ಈ ವರ್ಷ ನೊಬೆಲ್ ಗಿಟ್ಟಿಸಿದ ಲ್ಯಾಟಿನ್ ಅಮೇರಿಕೆಯ “ಪೆರು” ದೇಶದ ಮಾರಿಯೋ ವರ್ಗಾಸ್ ಲೌಸ  ಕಾಗದ ಪುಸ್ತಕ ಪ್ರಿಯರು. “ಇ” ಪುಸ್ತಕಗಳು ಮತ್ತು ಇವನ್ನ ಓದಲು ಅನುಕೂಲ ಮಾಡಿಕೊಡುವ ಇಲೆಕ್ಟ್ರೋನಿಕ್ ಗೆಜೀಟ್ ಗಳು ಎಬ್ಬಿಸುತ್ತಿರುವ ಬಿರುಗಾಳಿಗೆ ಶತಮಾನಗಳ ನಮ್ಮ ಮಿತ್ರ “ಬಡಪಾಯಿ ಕಾಗದ” ತೂರಿ ಹೋಗುವುದು ಅವರಿಗೆ ಇಷ್ಟವಲ್ಲ.

ಮಾರಿಯೋ ವರ್ಗಾಸ್ ಅವರ ಪ್ರಥಮ ಪುಸ್ತಕ ೧೯೬೪ ರಲ್ಲಿ ಪ್ರಕಟ. ಬರಹದ ೪೬ ವರುಷಗಳ ಕಾಲದಲ್ಲಿ ವಿಶ್ವದ ಅತ್ಯುನ್ನತ ಪ್ರಶಸ್ತಿಗೆ ಭಾಜನರು ಈ ಲೇಖಕರು. ಶುಭ ಮುಂಜಾನೆ ಎನ್ನುವ ಸಂದೇಶದ ಬೆನ್ನಲ್ಲೇ ತಮಗೆ ನೊಬೆಲ್ ಸಿಕ್ಕಿತು ಎನ್ನುವ ಸುದ್ದಿಯೂ ಬಂದಿತು. ಇವರ ಆಸಕ್ತಿ ಬರೀ ಸಾಹಿತ್ಯ ಕೃಷಿಗೆ ಮಾತ್ರ ಸೀಮಿತವಲ್ಲ, ಅನ್ಯಾಯದ ವಿರುದ್ಧದ ಜನರ ಹೋರಾಟದಲ್ಲೂ ಭಾಗಿಯಾಗಿ (ನಮ್ಮ ಅರುಂಧತಿ ರಾಯ್ ರೀತಿ) ಹಲವು ಸಂಕಷ್ಟಗಳನ್ನು ಅನುಭವಿಸಿದ ಸಾಮಾಜಿಕ ಲೇಖಕ. ತನ್ನ ಹುಟ್ಟೂರಿನಲ್ಲಿ ಆಳುವವರ ದಬ್ಬಾಳಿಕೆ ಅತಿಯಾಗಿ ಅಲ್ಲಿನ ಸೇನಾಧಿಕಾರಿ ಮಾರಿಯೋ ಲೌಸ ಅವರ ಪೌರತ್ವ ಪೆರುವಿನ “ಭೌಗೋಳಿಕ ಆಕಸ್ಮಿಕ” (geographical accident) ಆಗಿದ್ದು ದೇಶದ ಪೌರತ್ವವನ್ನು ರದ್ದು ಗೊಳಿಸ ಬೇಕೆಂದು ಸರಕಾರಕ್ಕೆ ಶಿಫಾರಸ್ಸು ಮಾಡಿದಾಗ ಅಪಾಯ ಮನಗಂಡ ಈ ಲೇಖಕ ಸ್ಪೇನ್ ದೇಶದ ಪೌರತ್ವ ಪಡೆದು ಅದರ ಜೊತೆಗೆ ಪೆರುವಿನ ಪುರತ್ವವನ್ನೂ ಉಳಿಸಿಕೊಂಡರು. ಪ್ರಬಂಧಗಳು, ನಾಟಕ, ಸಾಹಿತ್ಯ ಮತ್ತು ರಾಜಕೀಯ ಹೊರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಈ ಲೇಖಕ ಅಮೆರಿಕೆಯ ಮತ್ತು ಅಇರೋಪ್ಯ ದೇಶಗಳ ವಿಶ್ವ ವಿದ್ಯಾಲಯಗಳಿಗೆ ಅತಿಥಿ ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿಯ ಹಲವು ದೇಶಗಳ ಬಿಡುವಿಲ್ಲದ  ಪರ್ಯಟನದಿಂದ ಬರವಣಿಗೆಗೆ ತೊಡಕಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ  “ವಾಸ್ತವವಾಗಿ ವಿವಿಧ ಭಾಷೆ ಗಳೊಂದಿಗಿನ ತಮ್ಮ ಬದುಕು ತಮ್ಮ ಅರಿವನ್ನು ಹೆಚ್ಚಿಸಿದ್ದು, ಒಂದೇ ಭಾವನೆಯನ್ನು ಹೇಗೆ ವಿವಿಧ ಭಾಷೆಗಳು ವ್ಯಕ್ತಪಡಿಸುತ್ತವೆ ಎನ್ನುವ ಸೂಕ್ಷ್ಮತೆ ಸಹ ತನಗೆ ಕಾಣಲು ಸಿಗುತ್ತದೆ, ಹಾಗೆಯೇ ಮಾತೃ ಭಾಷೆಯೊಂದಿಗಿನ ನನ್ನ ನಂಟು ಇತರೆ ಭಾಷೆ ಗಳೊಂದಿಗಿನ ಒಡನಾಟದಿಂದ ಇನ್ನಷ್ಟು ಶ್ರೀಮಂತ ಗೊಂಡಿದೆ” ಎಂದು ಹೇಳಿದರು. ಸಂದರ್ಶನದ ವೇಳೆ ಹೇಳಿದ ಈ ಮಾತುಗಳು ಗಡಿಬಿಡಿಯ ಅಂತಾರಾಷ್ಟ್ರೀಯ ಬದುಕು ಈ ಲೇಖಕನ ಸಂಸ್ಕಾರವನ್ನು ಹೇಗೆ ಶ್ರೀಮಂತ ಗೊಳಿಸಿತು ಎನ್ನುವ ಸತ್ಯವನ್ನು ನಮಗೆ ತೋರಿಸುತ್ತದೆ.

ಲ್ಯಾಟಿನ್ ಅಮೆರಿಕಾದ ದೇಶಗಳು ಕಿತ್ತು ತಿನ್ನುವ ಬಡತನದೊಂದಿಗೆ ಮಾದಕ ದ್ರವ್ಯಗಳ ಮಾರಾಟ ಮತ್ತು ದಂಧೆಯನ್ನು ನಡೆಸುವ ಭೂಗತ ದೊರೆಗಳ ದಬ್ಬಾಳಿಕೆ ಯಿಂದಲೂ ತತ್ತರಿಸುತ್ತಿದೆ. ಈ ಹಾವಳಿಯನ್ನ ತಡೆಯಲು ಸರಕಾರಗಳು ಕೋಟ್ಯಂತರ ಡಾಲರುಗಳನ್ನು ಇವರ ವಿರುದ್ಧ ದ ಹೋರಾಟಕ್ಕೆ ವ್ಯಯಿಸಿದರೂ ಆ ಹಣ ಲಂಚಕೋರ ಸೇನಾಧಿಕಾರಿಗಳ, ರಾಜಕಾರಣಿಗಳ ಪಾಲಾಗುವುದನ್ನು ಕಂಡ ಈ ಲೇಖಕ ಸರಕಾರದ ಈ ನೀತಿಯನ್ನು ವಿರೋಧಿಸಿ ಹಣವನ್ನ ಶಸ್ತ್ರಗಳನ್ನು ಖರೀದಿಸಲು ವ್ಯಯಿಸದೆ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಭಿಯಾನವನ್ನು ಆರಂಭಿಸಲು ಮತ್ತು ಮಾದಕ ದ್ರವ್ಯವ್ಯಸನಿಗಳ ಚಿಕಿತ್ಸೆಗೆ ಖರ್ಚು ಮಾಡಲು ಕರೆ ನೀಡಿದರು. ಸೇನಾಧಿಕಾರಿಗಳ ಮತ್ತು ರಾಜಕಾರಣಿಗಳ ವಿಷವರ್ತುಲ ಇವರ ಮಾತುಗಳನ್ನು ಕೇಳುವ ಗೋಜಿಗೆ ಹೋಗಲಿಲ್ಲ.

ಲೇಖಕರೂ ಸಹ ಸಾಮಾನ್ಯ ಜನರಂತೆ ಪೌರರಾಗಿದ್ದು ಜನರ ಹೋರಾಟ ಮತ್ತು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ನೈತಿಕ ಹೊಣೆ ಅವರ ಮೇಲೆ ಇರಬೇಕು ಎಂದು ನೊಬೆಲ್ ಪ್ರಶಸ್ತಿ ಪಡೆಯುವ ಮುನ್ನ ನಡೆದ ಚರ್ಚೆಯಲ್ಲಿ ಹೇಳಿದ್ದರು ಲೌಸ. ೧೯೯೦ ರಲ್ಲಿ ಆಲ್ಬರ್ಟೋ ಫುಜಿಮೋರಿ ವಿರುದ್ಧ ಸೋತ ಈ ಲೇಖಕ ಮತ್ತೆ ರಾಜಕೀಯದ ಕಡೆ ತಲೆಹಾಕದೆ ಪೂರ್ಣ ಸಮಯ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸರ್ವಾಧಿಕಾರಿಗಳನ್ನು ಚುನಾವಣೆಯಲ್ಲಿ ಬಗ್ಗು ಬಡಿಯದಿದ್ದರೇನಂತೆ ತಮ್ಮ ಪ್ರಖರ ಬರಹವನ್ನೇ ಅಸ್ತ್ರವನ್ನಾಗಿ ಉಪಯೋಗಿಸಿ ಲೇಖನಿಯೂ ಓಟು ಗಳಷ್ಟೇ ಪರಿಣಾಮಕಾರಿ ಎಂದು ತೋರಿಸಿದರು. “ಪದಗಳೇ ಕೃತ್ಯಗಳು…. ಬರಹದ ಮೂಲಕ ಚರಿತ್ರೆಯನ್ನು ಬದಲಿಸಲು ಸಾಧ್ಯ” ಎಂದು ಬಲವಾಗಿ ನಂಬಿದವರು. ಲ್ಯಾಟಿನ್ ಅಮೆರಿಕಾದಲ್ಲಿ ಎಲ್ಲೇ ಶೋಷಣೆ ಅನ್ಯಾಯ ನಡೆದರೂ ಅಲ್ಲಿಗೆ ಧಾವಿಸುವ ಈ ಲೇಖಕ ತಾವು ಕಂಡಿದ್ದನ್ನು ಬರೆದು ನೀಚ ಕೃತ್ಯಗಳನ್ನು ಬಯಲಿಗೆಳೆಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕ್ರೌರ್ಯ ಸಹ ಇವರ ಲೇಖನಿಯ ಮೊನಚಿಗು ಸಿಕ್ಕು ಸಮಾಜದ ಕಣ್ಣು ತೆರೆಸುವಂತೆ ಮಾಡುತ್ತದೆ ಇವರ ಬರಹಗಳು. ಇಂಥದ್ದೇ ಒಂದು ಘಟನೆ ಮತ್ತೊಂದು “ಡೊಮಿನಿಕನ್ ರೆಪಬ್ಲಿಕ್”. ಅಲ್ಲಿನ ಸರ್ವಾಧಿಕಾರಿ ರಾಫೆಲ್ ಟ್ರೂಜಿಲೋ ೧೯೩೦ ರಿಂದ ೧೯೬೧ ರವರೆಗಿನ ತನ್ನ ಆಳ್ವಿಕೆಯಲ್ಲಿ ತನ್ನ ಮಗಂದಿರೊಂದಿಗೆ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯವನ್ನು ಪ್ರತಿರೋಧವಿಲ್ಲದೆ ನಡೆಸುತ್ತಿದ್ದ. ಎಷ್ಟೋ ಜನ ತಮ್ಮ ಹೆಣ್ಣು ಮಕ್ಕಳನ್ನು ಈ ಸರ್ವಾಧಿಕಾರಿ ಮತ್ತು ಮಗಂದಿ ರಿಗೆ “ಉಡುಗೊರೆ” ಯಾಗಿ ಕೊಡುತ್ತಿದ್ದರಂತೆ ಭಯ ಬಿದ್ದು. (ಉತ್ತರ ಭಾರತದ ಠಾಕೂರ ಜಮೀನ್ದಾರರಿಗೆ ಹೆದರಿ ಬಡ ರೈತರು ಬದುಕಿದಂತೆ).  ರಾಫೆಲೋ ನ ದೌರ್ಜನ್ಯವನ್ನು “the feast of the goat” ಪುಸ್ತಕದಲ್ಲಿ ಸವಿವರವಾಗಿ ವರ್ಣಿಸಿದ್ದಾರೆ ಈ ಲೇಖಕ. ಇದೇ ತೆರನಾದ ಮಹಿಳೆಯರ ಮೇಲಿನ ದೌರ್ಜನ್ಯ ಇರಾಕಿನ ಸದ್ದಾಮ್ ಹುಸೇನರ ಮಕ್ಕಳೂ ಬೀದಿಯಲ್ಲಿ ಕಂಡ ಸುಂದರ ಹೆಣ್ಣುಮಕ್ಕಳನ್ನು ಎಗರಿಸಿಕೊಂಡು ಹೋಗುತ್ತಿದ್ದರು ಎಂದು ಈ ಲೇಖಕರು ಹೇಳಿದರೂ  ( ಅಮೇರಿಕ ನಿಯಂತ್ರಿತ ಮಾಧ್ಯಮಗಳ ಅಪಪ್ರಚಾರವೂ ಆಗಿರಲಿಕ್ಕೆ ಸಾಕು ) “ಕ್ರೌರ್ಯ ಯಾವುದೇ ಸರ್ವಾಧಿಕಾರಿಗಳ ಆಡಳಿತದಲ್ಲೂ ಸಮನಾಗಿರುತ್ತದೆ” ಎನ್ನುವ ಅಭಿಪ್ರಾಯ “ಮಾರಿಯೋ ವರ್ಗಾಸ್ ಲೌಸ” ಅವರದು. ಕೊನೆಯದಾಗಿ ಸಾಹಿತ್ಯದ ಬಗ್ಗೆ ವರ್ಗಾಸ್ ಅವರ, ವಿಶೇಷವಾಗಿ ನಮಗೆ ಅನ್ವಯವಾಗುವ,   ಮುತ್ತಿನಂಥ ಮಾತುಗಳು…

“I think that literature has the important effect of creating free, independent, critical citizens who cannot be manipulated.”