ರಾಜಕಾರಣದಲ್ಲಿ ಧರ್ಮ ಎಷ್ಟಿರಲಿ?

“ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಪಡಬೇಕಿಲ್ಲ ” – ಈ ಮಾತನ್ನು ಕ್ರೈಸ್ತ ಮೂಲಭೂತವಾದಿ ಇವಾನ್ಜೆಲಿಸ್ಟ್ (ಧರ್ಮಪ್ರಚಾರಕ) ಜೆರ್ರಿ ಫಾಲ್ವೆಲ್, ಅಥವಾ ಟೆರ್ರಿ ಜೋನ್ಸ್ ರಂಥವರು ಹೇಳಿದ್ದರೆ ಚಿಂತೆ ಇರಲಿಲ್ಲ, ಏಕೆಂದರೆ ಇವರುಗಳು ಹೀಗೆ ಮಾತನಾಡಿದಾಗಲೇ ಚೆನ್ನ. ಅಸಹನೆಯೇ ಅವರ ಉಸಿರು, ಹಾಗಾಗಿ ಅವರ ಬಾಯಲ್ಲಿ ನೀಟ್ ಆಗಿ ಫಿಟ್ ಅಗೋ ಮಾತುಗಳು ಅವು. ಆದರೆ ಈ ಮಾತನ್ನು ಸೆಕ್ಯುಲರ್ ದೇಶ ಎಂದು ಹೆಮ್ಮೆ ಪಡುವ ಬ್ರಿಟನ್ ದೇಶದ ಪ್ರಧಾನಿ ಹೇಳಿದ್ದು ಎಂದಾದ ಮೇಲೆ ಈ ಮಾತಿನ ಕಡೆ ಸ್ವಲ್ಪ ಗಮನ ಅತ್ಯಗತ್ಯ.

“ಕಿಂಗ್ ಜೇಮ್ಸ್” ಬೈಬಲ್ ನ ೪೦೦ ವಾರ್ಷಿಕೋತ್ಸವದ ವೇಳೆ ‘ಚರ್ಚ್ ಆಫ್ ಇಂಗ್ಲೆಂಡ್’ ಗೆ ಸೇರಿದ ಪಾದ್ರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು ಡೇವಿಡ್ ಕೆಮರೂನ್. ಇದೇ ಮಾತನ್ನು ನಮ್ಮ ದೇಶದ ಪ್ರಧಾನಿ ಹೇಳಿದ್ದಿದ್ದರೆ ಆಗುತ್ತಿದ್ದ ವೈಚಾರಿಕ ಅನಾಹುತ ಏನು ಎಂದು ಊಹಿಸಲು ಅಸಾಧ್ಯ. ಆದರೆ ಇಷ್ಟು ಮಾತ್ರ ಹೇಳಿ ಸುಮ್ಮನಾಗಲಿಲ್ಲ ಪ್ರಧಾನಿ. “ನಾವು ಒಂದು ಕ್ರೈಸ್ತ ರಾಷ್ಟ್ರ, ಇದನ್ನು ಹೇಳಲು ನಾವು ಭಯ ಬೀಳಬೇಕಿಲ್ಲ… ನನ್ನನ್ನು ಅರ್ಥ ಮಾಡಿಕೊಳ್ಳಿ… ಮತ್ತೊಂದು ಧರ್ಮ ಅಥವಾ ಧರ್ಮವಿಲ್ಲದಿರುವಿಕೆಯ ವ್ಯವಸ್ಥೆ ಇರುವುದು ತಪ್ಪು ಎಂದು ನಾನು ಖಂಡಿತಾ ಹೇಳುತ್ತಿಲ್ಲ” ಇದು ಪ್ರಧಾನಿಗಳ ಪೂರ್ತಿ ಮಾತುಗಳು. ಈಗ ಸ್ವಲ್ಪ ಸಮಾಧಾನ. ಏಕೆಂದರೆ ಬ್ರಿಟನ್ ಬರೀ ಕ್ರೈಸ್ತರ ದೇಶವಲ್ಲ, ಅಲ್ಲಿ, ಹಿಂದೂಗಳೂ, ಮುಸ್ಲಿಮರೂ, ಯಹೂದಿಗಳೂ ಇನ್ನಿತರ ಹಲವು ಧರ್ಮೀಯರೂ, ಧರ್ಮವಿಲ್ಲದವರೂ ಸಾಮರಸ್ಯದಿಂದ ಬದುಕುವ ದೇಶ. ಹಾಗಾಗಿ ಎಲ್ಲರೂ, ಧರ್ಮವಿಲ್ಲದವರೂ, ತಾರತಮ್ಯವಿಲ್ಲದೆ ಸಮಾನಾವಕಾಶಗಳೊಂದಿಗೆ ಬದುಕಬಹುದು ಎನ್ನುವ ಆಶಯ ಪ್ರಧಾನಿಯದು. ಅದೇ ಅವರ ನಿರೀಕ್ಷೆಯೂ ಕೂಡಾ. ಆದರೆ ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು ಎನ್ನುವುದು ಮುಗಿಯದ ಚರ್ಚೆ. “ರಾಜಕಾರಣ ಧರ್ಮವಲ್ಲ, ಅಥವಾ ಹಾಗೇನಾದರೂ ಆಗುವುದಾದರೆ ಅದು inquisition ಅಲ್ಲದೇ ಮತ್ತೇನೂ ಅಲ್ಲ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಾರ್ಶನಿಕ ಅಲ್ಬರ್ಟ್ ಕ್ಯಾಮು ಹೇಳುತ್ತಾರೆ ( Politics is not religion, or if it is, then it is nothing but the Inquisition – albert camus, french philosopher).

Inquisition ಎಂದ ಕೂಡಲೇ ಕಣ್ಣ ಮುಂದೆ ಬರೋದು ವ್ಯಾಟಿಕನ್ ಬೆಂಬಲಿತ ಸಾಮೂಹಿಕ ಹಿಂಸೆ, ಬರ್ಬರ ಶಿಕ್ಷೆ. ಕ್ರೈಸ್ತರಲ್ಲದವರೂ, ಕ್ಯಾಥೊಲಿಕ್ ಧರ್ಮದ ಚೌಕಟ್ಟಿಗೆ ಬರದ ಕ್ರೈಸ್ತರೂ inquisition ನ ಬರ್ಬರತೆ ಅನುಭವಿಸಿದರು. ಹಾಗಾಗಿ ರಾಜಕಾರಣದಲ್ಲಿ ಧರ್ಮ ಕೂಡದು ಎಂದು ಪಾಶ್ಚಾತ್ಯ ರಾಷ್ಟ್ರಗಳ ನಿಲುವು. ಇದು ಬರೀ ನಿಲುವು ಮಾತ್ರ, ಯಥಾಸ್ಥಿತಿ ಬೇರೆಯೇ ಎಂದು ದಿನನಿತ್ಯದ ವಿದ್ಯಮಾನಗಳು ನಮಗೆ ಹೇಳುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಲ ಪಂಥೀಯ ಇವಾನ್ಜೆಲಿಸ್ಟ್ ಗಳು ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದಲ್ಲಿರುವ ಅಮೆರಿಕೆಯಲ್ಲಿ ಇವರ ಅಬ್ಬರ ತುಸು ಹೆಚ್ಚು. ರಾಜಕಾರಣಿಗಳ ಕೈಗೆ ಧರ್ಮ ಸಿಕ್ಕಾಗ ಅದು ಚಿನ್ನದ ಸೌಂದರ್ಯ ಕಳೆದು ಕೊಂಡು ಕಳಪೆ ಉಕ್ಕಿನ ರೂಪ ಪಡೆದು ಕೊಳ್ಳುತ್ತದೆ ಎನ್ನುತ್ತಾರೆ ಲೇಖಕಿ ಯಾಸ್ಮೀನ್ ಅಲಿ ಭಾಯಿ. ಈಕೆ ಬ್ರಿಟನ್ ದೇಶದ ಪ್ರಸಿದ್ಧ ಲೇಖಕಿ. ಆಕರ್ಷಕ ಹೆಸರುಗಳೊಂದಿಗೆ ರಾಜಕಾರಣದಲ್ಲಿ ಧರ್ಮವನ್ನು ನುಸುಳಿಸಲು ಹವಣಿಸುವವರಿಗೆ ಈ ಮಾತುಗಳು ಬಹುಶಃ ಪಥ್ಯವಾಗಲಾರದು.

ಧರ್ಮದ ಸಾರವನ್ನು, ಸತ್ವವನ್ನು ಸಂಪೂರ್ಣವಾಗಿ ಅರಿತ ಹಿಂದೂ, ಮುಸ್ಲಿಂ, ಕ್ರೈಸ್ತ ಇನ್ನಿತರ ಧಮೀಯರಿಂದ ಯಾವುದೇ ತೊಂದರೆಯಿಲ್ಲ, ಆದರೆ ಅರೆಬರೆ ಕಲಿತು ‘ಪಾರ್ಟ್ ಟೈಂ’ ಧರ್ಮಾನುಯಾಯಿಗಳಿಂದ ಗಂಡಾಂತರ ಹೆಚ್ಚು ಎಂದು ಚಾರಿತ್ರಿಕ ಘಟನೆಗಳು ಸಾಕ್ಷಿಯಾಗಿವೆ. ಧರ್ಮವನ್ನು ‘ಆಫೀಮ್’ ಎಂದು ಕಡೆಗಣಿಸುವುದಾಗಲೀ, ತನ್ನ ಧರ್ಮವೇ ಶ್ರೇಷ್ಠ ಎಂದು ಇತರರ ಬದುಕನ್ನು ದುರ್ಭರಗೊಳಿಸುವುದಾಗಲೀ ಕೂಡದು ಎನ್ನುವ ವಿವೇಚನೆಯಿದ್ದರೆ ಸಾತ್ವಿಕ ಬದುಕು ಸರಾಗ, ವೈಯಕ್ತಿಕ ಬದುಕಿನಲ್ಲೂ, ರಾಜಕೀಯ ಕ್ಷೇತ್ರದಲ್ಲೂ.

ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned

ಈ ಜಾತಿ ನನಗೆ ತುಂಬಾ ಇಷ್ಟ

ಯೆಡಿಯೂರಪ್ಪ ನವರು ಹೊರಹೋಗಬೇಕು ಎಂದು ಕೊನೆಗೂ ‘ಭಾಜಪ’ದ ಹೈ ಕಮಾಂಡ್ ಜಪಿಸಿತು. ಈ ಜಪಕ್ಕಾಗಿ ಕುಮಾರಪ್ಪ ಅಂಡ್ ಕಂಪೆನಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಹೊರನಡಿಯಿರಿ ಎನ್ನುವ ಆಜ್ಞೆ ಹೊರಬಿದ್ದಾಗ ಕಾಂಗ್ರೆಸ್ ನದು ಅಪಸ್ವರ, ಈ ಆಜ್ಞೆ ತುಂಬಾ ತಡವಾಗಿ ಬಂತು ಅಂತ. ಏನೇ ಇರಲಿ, ರಾಜಕಾರಣದಲ್ಲಿ ಇವೆಲ್ಲಾ ಇದ್ದಿದ್ದೆ, ಯಾರು ಅಧಿಕಾರದ ಸ್ಥಾನದಲ್ಲಿ ಕೂತಿರ್ತಾರೋ ಅವರ ಕಾಲನ್ನು ಎಳೆದು ಹಾಕಲು ಮತ್ತೊಂದು ಮಾಜಿ ಅಧಿಕಾರಸ್ಥರ ಗುಂಪು ಕಾಯುತ್ತಾ ಇರುತ್ತದೆ. ಸರಿ, ಈಗ ನಮ್ಮ ರಾಜ್ಯದ ಮುಂದಿನ ಮುಖ್ಯ ಮಂತ್ರಿಗಳು ಯಾರು ಅಂತ ಕವಡೆ ಹಾಕಿ ನೋಡಲು ಕವಡೆ ಹುಡುಕುವಾಗ ಮತ್ತೊಂದು ಶಾಕ್ ತಗುಲಿತು. ಯಾವ ಜಾತಿಯ ಮುಖ್ಯಮಂತ್ರಿ ಬೇಕು ಅಂತ. ಈ ಪ್ರಶ್ನೆ ಒಂದು ಬ್ಲಾಗ್ ಕೇಳ್ತು. ಥತ್ತೇರಿ, ಮತ್ತೊಂದು ಸಮಸ್ಯೆ ಈಗ. ಈ ಸಮಸ್ಯೆ ನಮ್ಮ ಮಧ್ಯೆ ಇಲ್ಲ ಅಂತ ಭಾವಿಸಿಕೊಂಡಿರುವಾಗಲೇ ಪಾಟೀ ಸವಾಲಿನಂತೆ ಬಂದು ಎರಗಿತು, ಯಾವ ಜಾತಿಯ ಮುಖ್ಯ ಮಂತ್ರಿ ಬೇಕು ಅಂತ. ಅಷ್ಟೆಲ್ಲಾ ರಾಜಕಾರಣ ನನಗೆ ತಿಳೀ ಒಲ್ದು, ಇಷ್ಟು ಮಾತ್ರ ಗೊತ್ತು, ನಮ್ಮ ಅಲ್ಫೋನ್ಸೋ ಜಾತಿಯ ಮಾವಿನ ಹಣ್ಣಿನಂಥ ಹಣ್ಣು ಎಲ್ಲೂ ಹುಟ್ಟಿಲ್ಲ. ಹುಟ್ಟೋದೂ ಇಲ್ಲ.

ಯಾವ ಜಾತಿಯ ವ್ಯಕ್ತಿಯ ಕೈಗೇ ಹೋಗಲಿ ಅಧಿಕಾರ ಜಾತಿ, ಮತ, ಧರ್ಮ, ಪಂಥ ಭೇಧ ಮರೆತು ನಮ್ಮ ರಾಜ್ಯದ ಅಭ್ಯುದಯವನ್ನು ಮಾತ್ರ ಗಮನದಲ್ಲಿಟ್ಟು ಕೊಂಡು ಸರಕಾರ ನಡೆಸಲಿ ಎನ್ನುವ ಸಣ್ಣ ಆಸೆ ದೂರದ ಮರಳುಗಾಡಿನಿಂದ.

ಎಲ್ಲರನ್ನೂ ಆದರಿಸೋಣ, ಎಲ್ಲವನ್ನೂ ಗೌರವಿಸೋಣ

ಹಿಂದೂ ದೇವರುಗಳ ಬಗ್ಗೆ ಅಸಹ್ಯವಾಗಿ, ಚಿತ್ರಿಸುವ ಚಾಳಿ ಕುರಿತು ಕನ್ನಡದ ಖ್ಯಾತ ಆನ್ ಲೈನ್ ತಾಣದಲ್ಲಿ ಒಬ್ಬರು ಖೇದ, ಆಕ್ರೋಶ ವ್ಯಕ್ತಪಡಿಸಿದ್ದರು. ಕಲೆಯ ಹೆಸರಿನಲ್ಲಿ, ಸೃಜನಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನ ಕೆರಳಿಸುವುದು, ನಮ್ಬಿಕೆಗಳನ್ನು ಘಾಸಿಗೊಳಿಸುವುದು ತರವಲ್ಲ. ಸೃಜನಶೀಲತೆ ಅಥವಾ ಬೇರಾವುದಾದರೂ ಪ್ರತಿಭೆಯನ್ನು ಸಾಕಾರಗೊಳಿಸಲು ಹತ್ತು ಹಲವು ಮಾರ್ಗಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಕಲೆ ಕುಚೋದ್ಯದಿಂದ ಕೂಡಿದ್ದು. ಈ ಕುಚೋದ್ಯ ಇಸ್ಲಾಮ್ ಧರ್ಮದ ಮೇಲೆ ಪ್ರಯೋಗವಾದಷ್ಟು ಬೇರಾವ ಧರ್ಮದ ಮೇಲೂ ಆಗಿರಲಾರದು. ಅಂಥ ಕಲೆಯನ್ನು ಮುಸ್ಲಿಮರು ಖಂಡಿಸಿದಾಗ ಅವರನ್ನು ಬೆಂಬಲಿಸಲು ಯಾರೂ ಇರಲಿಲ್ಲ. ಬದಲಿಗೆ ಮುಸ್ಲಿಮರಿಗೆ ಸಿಕ್ಕಿದ್ದು ಕಲೆಯ ಬಗ್ಗೆ, ಸೃಜನಶೀಲತೆಯ ಬಗ್ಗೆ, ಆಧುನಿಕ ಬದುಕಿನ ಬಗ್ಗೆ ಪಾಠ. ಚಿಕ್ಕತನವನ್ನು ಬಿಟ್ಟು ನೀವು ಬೆಳೆಯಬೇಕು ಎನ್ನುವ ಕಿವಿಮಾತು. ಈಗ ಅದೇ ಪಿಶಾಚಿ ತಮ್ಮ ಹೊಸ್ತಿಲಿಗೆ ಬಂದು ನಿಂತಾಗ ಜನ ಹೌಹಾರುತ್ತಿದ್ದಾರೆ. reactions strangely different.

೨೦೦೩ ರಲ್ಲಿ ಡ್ಯಾನಿಶ್ ವ್ಯಂಗ್ಯಚಿತ್ರಕಾರ “ಕ್ರಿಸ್ಟಫರ್ ಜೈಲರ್” ಯೇಸು ಕ್ರಿಸ್ತರ ಬಗೆಗಿನ ಕೆಲವು ಚಿತ್ರಗಳನ್ನ ಅಲ್ಲಿನ ಖ್ಯಾತ ಪತ್ರಿಕೆ Jyllands-Posten ಗೆ ಕಳಿಸಿದ. ಸಂಪಾದಕ ಈತನಿಗೆ ‘ಈ ಮೇಲ್’ ಕಳಿಸಿ ಈ ಚಿತ್ರಗಳನ್ನು ಕ್ರೈಸ್ತರು ನೋಡಿ ಆನಂದಿಸಲಿಕ್ಕಿಲ್ಲ ಮತ್ತು ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ವಿವರಿಸಿದ. ಇದೇ ಪತ್ರಿಕೆ ೨೦೦೫ ರಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಗಳನ್ನು ಪ್ರದರ್ಶಿಸಿ ತನ್ನ ಕೊಳಕು ‘ಡಬಲ್ ಸ್ಟ್ಯಾಂಡರ್ಡ್’ ಅನ್ನು ಸೊಗಸಾಗಿ ಪ್ರದರ್ಶಿಸಿತು.

ಧಾರ್ಮಿಕ ಕುರುಹುಗಳನ್ನು ನಮಗೆ ಬೇಕಾದ ಸ್ಥಳಗಳಲ್ಲಿ, ಬೇಕಾದ ರೀತಿಯಲ್ಲಿ ಬಳಸಿ ಕೊಂಡಾಗ ಅದರ ಬಗ್ಗೆ ಗೌರವ, ಭಕ್ತಿ ತಂತಾನೇ ಕಡಿಮೆಯಾಗುತ್ತದೆ. ಧರ್ಮ ವೈಯಕ್ತಿಕವಾಗಿರಬೇಕು. ಧಾರ್ಮಿಕ ಭಾವನೆ ಮನಸ್ಸಿನಲ್ಲಿ ನೆಲೆಯೂರಿರಬೇಕು. we should not wear our faiths on our sleeves. ಗಣೇಶನ ಮೂರ್ತಿಗಳನ್ನು ತೋಚಿದ ರೀತಿಯಲ್ಲಿ, ಬ್ಯಾಟ್ ಹಿಡಿದು ಕೊಂಡೂ ಮತ್ಯಾವುದಾದರೂ ರೀತಿಯಲ್ಲಿ ರೂಪಿಸಿದಾಗ ನಾವು ನೀಡುತ್ತಿರುವ ಸಂದೇಶವಾದರೂ ಏನು? ಈ ರೀತಿ ದೇವರ ಚಿತ್ರಗಳನ್ನು, ಇನ್ನಿತರ ಧಾರ್ಮಿಕ ಸಂಕೇತಗಳನ್ನು ಸಾರಾಸಗಟಾಗಿ ಕಲೆಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಂಡಾಗ ಯಾವುದು ಸರಿ ಯಾವುದು ತಪ್ಪು ಎನ್ನುವ ವಿಂಗಡಿಸುವ ರೇಖೆ ಮಸುಕಾಗಿ ಬಿಡುತ್ತದೆ. ಆಗ ಸಮಸ್ಯೆಗಳು ಎದುರಾಗಲು ತೊಡಗುತ್ತವೆ.

ಮುಸ್ಲಿಮರಲ್ಲಿ ಯಾವುದೇ ಕೆಲಸ ಆರಂಭಿಸುವಾಗಲೂ ಕರುಣಾಮಯನೂ, ದಯಾಮಯನೂ ಆದ ಅಲ್ಲಾಹನ ನಾಮದಿಂದ (ಬಿಸ್ಮಿಲ್ಲಾ ಅರ್ರಹ್ಮಾನ್, ಅರ್ರಹೀಂ) ಎನ್ನುವ ಕುರಾನ್ ಸೂಕ್ತ ಉಪಯೋಗಿಸುತ್ತಾರೆ. ಈ ಸೂಕ್ತವನ್ನು ಕೆಲವರು ಪತ್ರ ಬರೆಯುವಾಗಲೂ ಇನ್ನಿತರ ಸ್ಥಳಗಳಲ್ಲೂ ಬಳಸುವುದನ್ನು ನೋಡಿದ ಧರ್ಮ ಗುರುಗಳು ಆಕ್ಷೇಪ ಮಾಡಿ ನಾವು ಬರೆದ ಕಾಗದ ಅದರ ಉಪಯೋಗ ಮುಗಿದ ನಂತರ ತಿಪ್ಪೆ ಸೇರುವುದರಿಂದ ಅಂಥ ಸ್ಥಳಗಳಲ್ಲಿ ಈ ಸೂಕ್ತ ಉಪಯೋಗಿಸಕೂಡದು ಎಂದು ನಿರ್ದೇಶಿಸಿದ್ದರು. ಹಾಗೆಯೇ ಕೊರಳಿಗೆ ಹಾಕಿ ಕೊಳ್ಳುವ ಸರದ ಲಾಕೆಟ್ ಗಳ ಮೇಲೆ ‘ಅಲ್ಲಾಹ್’ ಎಂದು ಬರೆಯುವುದನ್ನು ಬಹಳ ಜನ ಒಪ್ಪುವುದಿಲ್ಲ. ಏಕೆಂದರೆ ನಮ್ಮೊಂದಿಗೆ ಸರವೂ ಶೌಚ ಗೃಹ ಪ್ರವೇಶ ಮಾಡುವುದರಿಂದ ಅಲ್ಲಾಹನ ಹೆಸರಿನ ಪಾವಿತ್ರ್ಯಕ್ಕೆ ಧಕ್ಕೆ ಆಗಬಹುದು ಎಂದು ಬಗೆದು. ಇದು ಧಾರ್ಮಿಕ ಕುರುಹುಗಳನ್ನು ಕಾಪಾಡುವ ರೀತಿ.

ನಮ್ಮ ಧರ್ಮ ವೈಯಕ್ತಿಕ. ನಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈ ಹಾಕಲು ಯಾರಿಗೂ ನಾವು ಅನುಮತಿಸುವುದಿಲ್ಲ. ಧರ್ಮಕ್ಕೂ ಅದೇ ನಿಲುವು ಅನ್ವಯವಾಗಲಿ. ಯಾರೂ ಯಾರ ಭಾವನೆಗಳನ್ನೂ ಘಾಸಿಗೊಳಿಸಲು ಹೋಗಬಾರದು. ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಆದರಿಸುತ್ತಾ ನಡೆದರೆ ಯಾವ ರೀತಿಯ ಸಮಸ್ಯೆಗಳೂ ಎದುರಾಗವು.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ಓರ್ವ ಧೀಮಂತ ಪತ್ರಕರ್ತ

ಇಂದು ಬೆಳಿಗ್ಗೆ ನನ್ನ ಮನಸ್ಸಿನ ಮೇಲೆ ವಿವಿಧ ಭಾವನೆಗಳು ಅಲೆಗಳಂತೆ ಅಪ್ಪಳಿಸುವಂತೆ ಮಾಡಿದ ವಿಚಿತ್ರ ವರದಿಯೊಂದು ಕಣ್ಣಿಗೆ ಬಿತ್ತು. ಆಘಾತ, ದಿಗ್ಭ್ರಮೆ, ಕನಿಕರ, ಹೇಸಿಗೆ ಹೀಗೆ ನಾನಾ ಭಾವನೆಗಳನ್ನು ಒಮ್ಮೆಗೇ ಹುಟ್ಟುಹಾಕಿದ ಒಂದು ವರದಿ;   ಒಬ್ಬ ಪತ್ರಕರ್ತ ತನ್ನ ಮನಃಪರಿವರ್ತನೆಯಾದ ಕಾರಣ ಪತ್ರಕರ್ತನ ಕಸುಬಿಗೆ “ಬೈ ಬೈ” ಹೇಳಿದ್ದು. ಇಂಗ್ಲೆಂಡಿನ ಟ್ಯಾಬ್ಲಾಯ್ಡ್ daily star ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ “ರಿಚರ್ಡ್ ಪೆಪ್ಪಿಯಾಟ್” ಪತ್ರಿಕೆಯ ಧಣಿಗೆ ಬರೆದ ಬಹಿರಂಗ ಪತ್ರ ಪತ್ರಿಕಾ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ, ಹಾಗೆಯೇ ತಮ್ಮ ರಹಸ್ಯ ಅಜೆಂಡಾ ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸುದ್ದಿ ಮಾಧ್ಯಮಗಳು ಎಂಥ ನೀಚ ಕೃತ್ಯಕ್ಕೂ ಇಳಿಯಲು ಸಿದ್ಧ ಎನ್ನುವುದನ್ನು ಸ್ಥಿರೀಕರಿಸಿದೆ.      

ರಿಚರ್ಡ್ ಪೆಪ್ಪಿ ಯಾಟ್ ರಾಜೀನಾಮೆ ನೀಡಲು ಕಾರಣವಾದ ವರದಿಗಳನ್ನ ನೋಡಿ.

ಇಂಗ್ಲಿಷ್ ಡಿಫೆನ್ಸ್ ಲೀಗ್ (EDL) ಎನ್ನುವ ಸಂಘಟನೆ ಇಂಗ್ಲೆಂಡಿಗೆ ವಲಸೆ ಬರುವವರ ವಿರುದ್ಧ ಹೋರಾಡುತ್ತದೆ. ಬಿಳಿಯರ ಹಕ್ಕುಗಳು ಮಾಯವಾಗುತ್ತಿವೆ ಎಂದು ಪುಕಾರು ಹಬ್ಬಿಸುತ್ತದೆ. ಇದೊಂದು ಮುಸ್ಲಿಂ ವಿರೋಧಿ, ಬಲಪಂಥೀಯ ಸಂಘಟನೆ. ಈ ಸಂಘಟನೆಗೆ ರಾಜಕೀಯ ಪಸ್ಖವಾಗುವ ಇರಾದೆ ಇಲ್ಲ. daily star ನ ಪತ್ರಕರ್ತ edl ನಾಯಕನೊಬ್ಬನ ಸಂದರ್ಶನ ದಲ್ಲಿ ರಾಜಕೀಯ ಸೇರುವ ಬಗ್ಗೆ ಕೇಳಿದಾಗ ನಾಯಕ ಅಂಥ ಉದ್ದೇಶ ಸದ್ಯಕ್ಕಿಲ್ಲ ಎನ್ನುತ್ತಾನೆ. ಆದರೆ ಪತ್ರಿಕೆ ವರದಿ ಮಾಡಿದ್ದು edl ರಾಜಕೀಯ ಸೇರಲಿದೆ ಎಂದು. ಈ ಸುದ್ದಿ ಮುಖಪುಟದಲ್ಲಿ ರಾರಾಜಿಸಿದಾಗ ಭಯಗ್ರಸ್ಥನಾದ ಪತ್ರಿಕೆ ಮಾರುವ ಮುಸ್ಲಿಂ ವ್ಯಕ್ತಿಯ ಮುಖದ ಮೇಲಿನ ದುಗುಡ ನೋಡಿ ರಿಚರ್ಡ್ ಕೆಲಸಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸುತ್ತಾನೆ.

daily star ಪತ್ರಿಕೆ ತನ್ನ ವರದಿಗಾರಿಗೆ ಕೊಡುವ brief ಏನೆಂದರೆ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುವ (islamophobia) ಲೇಖನಗಳನ್ನು ಸೃಷ್ಟಿಸಿ ಕೊಡಬೇಕು. ಈ ಕೆಲಸಕ್ಕೆ ಪತ್ರಕರ್ತರ ಮನಃಸ್ಸಾಕ್ಷಿ ಒಪ್ಪದೇ ಇದ್ದ ಪಕ್ಷದಲ್ಲಿ ನೀನಲ್ಲದಿದ್ದರೆ ಮತ್ತೊಬ್ಬ ಎನ್ನುವ ಧೋರಣೆ ಆ ಪತ್ರಿಕೆಯದು. ಕೆಲಸದಿಂದ ವಜಾ ಆಗುವ ಭಯ ದಿಂದ ಪತ್ರಕರ್ತರು ಪತ್ರಿಕೆಯ ವಿರುದ್ಧ ಹೋಗಲು ತಯಾರಿಲ್ಲ. 

ಮುಸ್ಲಿಮರಿಗಾಗಿ ಮಾತ್ರ ಇರುವ ಶೌಚಗಳನ್ನು ನಮ್ಮ ತೆರಿಗೆ ಹಣದ ಖರ್ಚಿನಲ್ಲಿ ಕಟ್ಟಲಾಗುತ್ತಿದೆ ಎನ್ನುವ ಸುಳ್ಳು ವರದಿಯನ್ನು ತಾನು ಸೃಷ್ಟಿಸಿದೆ ಎನ್ನುವ ಈತನ ಮಾತನ್ನು ಕೇಳುವಾಗ ನಮ್ಮ ವರದಿಗಾರರು ಗಿಳಿ ಪಾಠದಂತೆ ಯಾವಾಗಲೂ ಪುನರಾವರ್ತಿಸುವ ಮುಸ್ಲಿಮರಿಗೆ ಮೀಸಲಾತಿ ಎನ್ನುವ ವರದಿಗಳು ಕಣ್ಣ ಮುಂದೆ ಬರುತ್ತವೆ. ಮುಸ್ಲಿಮರಿಗೆ ಮಾತ್ರವಲ್ಲ ಮೀಸಲಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು, ಹಿಂದುಳಿದ ಜಾತಿ ಮುಂತಾದ  ಹಲವು ಸಾಮಾಜಿಕ ಗುಂಪುಗಳಿಗೂ ಇವೆ ರಿಯಾಯಿತಿ ಮತ್ತು ಮೀಸಲಾತಿ ಎನ್ನವುದು ಇವರಿಗೆ ತಿಳಿದಿದ್ದರೂ ತಿಳಿಯುವುದಿಲ್ಲ.

ಪ್ರತೀ ನಿತ್ಯವೂ ಇಸ್ಲಾಂ ಧರ್ಮೀಯರನ್ನು ಗುರಿಯಾಗಿಸಿ “ ಅವರು, ಮತ್ತ ನಾವು (us and them) “ ಎನ್ನುವ ಭಾವನೆ ಹುಟ್ಟಿಸುವ ಲೇಖನ ಬರೆಯಲೇಬೇಕು. ಒಪ್ಪದೇ ಇದ್ದರೆ ನನ್ನ ಕೆಲಸ ಹೋಗಬಹುದೋ ಎಂದು ಮಾಡುತ್ತಿದ್ದೆ. ನನ್ನ ಫೋನಿನ speed dial ನಲ್ಲಿ ಒಬ್ಬ ಮೌಲ್ವಿಯ ನಂಬರ್ ಇಟ್ಟುಕೊಂಡಿದ್ದೇನೆ. ಬೆಳಗಾದ ಕೂಡಲೇ ಈ ತಲೆ ಕೆಟ್ಟ ಮೌಲ್ವಿ ಗೆ ಫೋನಾಯಿಸಿ ಸಲಿಂಗ ಕಾಮಿಗಳಿಗೆ ಮತ್ತು ಕುಡುಕರಿಗೆ ಕಲ್ಲು ಹೊಡೆಯುವ ಶಿಕ್ಷೆ ಇದೆಯೇ ಎಂದು ಕೆಣಕಿದ ನಂತರ ಆ ಮೌಲ್ವಿ ಕೆರಳಿ ಫತ್ವ ನೀಡುವ ರೀತಿಯಲ್ಲಿ ಹೇಳುವುದನ್ನು ಭಕ್ತಿಯಿಂದ ವರದಿ ಮಾಡುತ್ತಿದ್ದೆ. 

ಓರ್ವ ನಟಿ ತಾನು ಹೊರಹೋಗುವಾಗ ಮಾಡಿಕೊಳ್ಳುವ ಸಿದ್ಧತೆ ಗೆ ತೆಗೆದುಕೊಳ್ಳುವ ಸಮಯವನ್ನೂ ಕಡಿಮೆ ಮಾಡಲು “ಸಂಮೋಹನ” (hypno therapy) ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು  ಹುಟ್ಟಿಸಿ ಕೊಂಡು ಬರೆದಿದ್ದ ಈ ಪತ್ರಕರ್ತ ಹೇಳುತ್ತಾನೆ, “ಈ ಸಂಮೋಹನ ದ ಬಗ್ಗೆ ನನಗೆ ಹೇಗೆ ತಿಳಿಯಿತು? ಸಂಜೆ ಆರರ ಸಮಯ ಖಾಲಿ ಹಾಳೆ ನೋಡುತ್ತಾ ಮಗ್ನನಾಗಿದ್ದಾಗ ನನ್ನ ಕುಂಡೆ ಯೊಳಗಿಂದ ಎಳೆದು ತಂದೆ ಈ ಕಲ್ಪನೆಯನ್ನು ಎಂದು ಹೇಳುತ್ತಾನೆ. ಆದರೆ ಈ ಕಲ್ಪನಾ ಬರಹ ನನಗೆ ೧೫೦.೦೦ ಪೌಂಡ್ ಗಳ ಧನವನ್ನೂ ಒದಗಿಸಿತು ಎಂದು ಹೇಳುತ್ತಾನೆ.

ರಿಚರ್ಡ್ ಹೇಳುತ್ತಾನೆ, ನನಗೆ ಗೊತ್ತು ಡೈಲಿ ಮೇಲ್ ಪತ್ರಿಕೆ (ನೈತಿಕತೆ ಇಲ್ಲದ) ಕುರೂಪಿಗಳ ಹಿಂಡಿನಲ್ಲಿ ಎದ್ದು ಕಾಣುವ ಮತ್ತೊಂದು ಕುರೂಪಿ ಪತ್ರಿಕೆ ಎಂದು.

ಇಂಥ ಸುಳ್ಳು ವರದಿಗಳನ್ನು ಸೃಷ್ಟಿಸುವವನು ಬರೀ ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು schizophrenic (ಭ್ರಮಾ ಲೋಕದಲ್ಲಿರುವವ) ಎಂದು ಆಸ್ಪತ್ರೆಗೆ ಅಟ್ಟಬಹುದಿತ್ತು, ಆದರೆ ಈ ಕೆಲಸವನ್ನ ಪತ್ರಿಕೆ ಮಾಡಿದಾಗ ಅದೆಲ್ಲ ಓಕೆ ಎನಿಸಿಕೊಳ್ಳುತ್ತದೆ ಎಂದು ರಿಚರ್ಡ್ ನ ಅಭಿಪ್ರಾಯ. ಪತ್ರಕರ್ತ ರಿಚರ್ಡ್ ನಿಗೆ ಅವನ ಜೀವನದ ಯಾವುದಾದರೂ ಒಂದು ಸನ್ನಿವೇಶದಲ್ಲಿ ಸಿಕ್ಕಿರಬಹುದಾದ ನೈತಿಕ ಶಿಕ್ಷಣ ತನ್ನ ಲೇಖನಿಯನ್ನು ಮಾರಿಕೊಳ್ಳುವ ಕಸುಬಿಗೆ ಎಡಗಾಲಿನಲ್ಲಿ ಒದ್ದು ಹೊರಬರಲು ಪ್ರೇರಣೆ ನೀಡಿತು.  ತಡವಾಗಿಯಾದರೂ ಬಂದ ಈ ಉನ್ನತ ಮಟ್ಟದ ನೈತಿಕತೆ ಬೇರೆ ಪತ್ರಕರ್ತರುಗಳಲ್ಲೂ ಬರಬಹುದೇ? ಆ ಸುದಿನಕ್ಕಾಗಿ ನಾವು ಕಾಯಬಹುದೇ?     

ನನಗೂ ಆಗಾಗ ಅನ್ನಿಸಿದ್ದಿದೆ. ಈ ರೀತಿ ಒಂದು ಧರ್ಮೀಯರ ಮೇಲೆ ಕಪೋಲ ಕಲ್ಪಿತ ವರದಿಗಳನ್ನು, ಊಹಾಪೋಹಗಳನ್ನು ಸೃಷ್ಟಿಸುತ್ತಾ ಸಮಾಜದಲ್ಲಿ ಗಲಭೆ, ಕ್ಷೋಭೆಗೆ ಕಾರಣವಾಗುವ ಲೇಖನಿ ಹಿಡಿದ ಈ so called journalist ಗಳಿಗೆ ಭಗವಂತನು ಆತ್ಮವೊಂದನ್ನು ಫಿಟ್ ಮಾಡಿದ್ದಿದ್ದರೆ ಅವರು ತಮ್ಮ ಕಸುಬಿಗೆ ಎಂದೋ ವಿದಾಯ ಹೇಳುತ್ತಿದ್ದರು ಎಂದು. ತಮ್ಮ ವರದಿ ಕಾರಣ ಜನರ ಸಂಶಯ ಗುಮಾನಿಗೆ ಒಳಪಟ್ಟು, ದಬ್ಬಾಳಿಕೆಗೆ ಶೋಷಣೆಗೆ ಗುರಿಯಾಗುವ ಅಮಾಯಕನನ್ನು ನೋಡಿದಾಗ ಅವರಿಗೆ ಏನೂ ಅನ್ನಿಸುವುದಿಲ್ಲವೇ? ಜೇಬು ಭರ್ತಿಯಾಗುತ್ತಿದ್ದಂತೆ ಬುದ್ಧಿ ದಿವಾಳಿತನದ ದಾರಿ ಹಿಡಿದ್ದು ಬಹುಶಃ ಅವರುಗಳಿಗೆ ಕಾಣುವುದಿಲ್ಲವೇನೋ.  

ಪತ್ರಿಕೆಗಳಲ್ಲ್ಲಿ ಯಾವುದಾದರೂ ಉತ್ಪನ್ನಗಳ ಬಗ್ಗೆ ಲೇಖನ ಬಂದರೂ ಆ ಲೇಖನದ ಹಿಂದೆ ಹಣದ ವಾಸನೆ ಬಡಿದೇ ತೀರುತ್ತದೆ. ವಿಮರ್ಶೆ ಮಾಡುವ ನೆಪದಲ್ಲಿ ಉತ್ಪಾದನೆಗಳ ಬಿಕರಿಗೆ ಕಂಪೆನಿಗಳಿಗೆ ಸಹಾಯ ಒದಗಿಸುವ ಪತ್ರಕರ್ತರಿದ್ದಾರೆಂದು ಕೇಳಿದ್ದೇನೆ. ವೈಯಕ್ತಿಕ ನಿಂದನೆ ಮತ್ತು ತೇಜೋವಧೆಯಂಥ  ಕೆಲಸವಂತೂ ಎಷ್ಟು ಸೊಗಸಾಗಿ ಮಾಡುತ್ತವೆ ಪತ್ರಿಕೆಗಳು ಎಂದು ಬೇರೆ ಹೇಳಬೇಕಿಲ್ಲ.  

ದಿನ ನಿತ್ಯದ ಆಗುಹೋಗುಗಳ ಬಗ್ಗೆ ನಿಗಾ ಇಟ್ಟುಕೊಂಡು ಕುತೂಹಲದಿಂದ ನಿರಂತರವಾಗಿ ಸುದ್ದಿಗಳೊಂದಿಗೆ ನಂಟು ಬಯಸುವ ಓದುಗ ಕೇವಲ ಸುದ್ದಿ ಮಾತ್ರವನ್ನಲ್ಲ ಅದರೊಂದಿಗೆ ಬರುವ ಹಲವು ವಿಚಾರಗಳನ್ನೂ ಅರಿಯುತ್ತಾ ಸಾಗುತ್ತಾನೆ. ಹಾಗಾಗಿ ಮಾಧ್ಯಮ ಎನ್ನವುದು ಒಂದು ರೀತಿಯ ಮುಕ್ತ ವಿಶ್ವ ವಿದ್ಯಾಲಯ. ಆದರೆ ಈ ಪವಿತ್ರ ಕಸುಬನ್ನು ಲಾಭ ಗಳಿಸುವ ಉದ್ದಿಮೆಯಾಗಿ ಮತ್ತು ತಮ್ಮ ರಾಜಕೀಯ ಚಿಂತನೆಗಳನ್ನು ಪ್ರಚುರಪಡಿಸಲು propaganda machinery ಆಗಿ ಉಪಯೋಗಿಸಿಕೊಂಡಾಗ ಆಗುವ ಅನಾಹುತವೇ ನಾವು ಇಂದು ಕಾಣುತ್ತಿರುವ ವೈಮನಸ್ಸು, ಸಂಶಯ ಮತ್ತು ಇವೆರೆಡರ ಕಾರಣ ನಡೆಯುವ ಗಲಭೆ, ಹಿಂಸೆ.

ನಾವು ಹಣ ಕೊಟ್ಟು ಕೊಳ್ಳುವ ವಸ್ತುಗಳ ಬಗ್ಗೆ ನಿಗಾ ಇಡುತ್ತೇವೆ. ವಸ್ತುವಿನ ಗುಣಮಟ್ಟ, ತಯಾರಾದ ತಾರೀಖು, ಕಂಪೆನಿ, ಅದರಲ್ಲಿರಬಹುದಾದ ingredients, ತಯಾರಿಸಿದ ಕಂಪೆನಿಯು ISO, HACCP ಮುಂತಾದ certification  ಗಳನ್ನು ಹೊಂದಿದೆಯೇ ಇತ್ಯಾದಿ. ಆದರೆ ನಾವು ಕೊಳ್ಳುವ ಪತ್ರಿಕೆಗಳ ಗುಣಮಟ್ಟದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ?ಅದರಲ್ಲಿ ಬರುವ ಕಂಟೆಂಟ್ ಗಳ ಬಗ್ಗೆಯಾಗಲೀ, ಅದರಲ್ಲಿ ಬರುವ ವಿಷಯಗಳು, ಮತ್ತು ಆ ವಿಷಯಗಳ ಹಿಂದಿನ ಕರ್ತೃಗಳ ನಾವೇಕೆ ಅಸಡ್ಡೆ ತೋರಿಸುತ್ತೇವೆ? ಬೇರೆಲ್ಲಾ PRODUCT ಗಳಿಗೆ ಇರುವಂತೆ  ಪತ್ರಿಕೆಗಳಿಗೂ ಯಾಕೆ ಒಂದು CERTIFICATION ಇರಕೂಡದು? ಪ್ರಾಥಮಿಕ ಶಾಲೆಯ ಬಾಗಿಲನ್ನೂ ಕಾಣದವನೂ ಪತ್ರಕರ್ತನಾಗಿ ತನಗೆ ತೋಚಿದ ರೀತಿಯಲ್ಲಿ ವರದಿಗಳನ್ನು, ಜನರಿಗೆ ಬಡಿಸಿದರೆ ಅದರ ಪರಿಣಾಮ ಸಮಾಜದ ಮೇಲೆ ಹೇಗಾಗಬಹುದು?  journalistic standard, ethics ಮತ್ತು ಪತ್ರಿಕೋದ್ಯಮದ ಗುಣಶ್ರೇಷ್ಠತೆ (merit) ಇವುಗಳ ಅವಶ್ಯಕತೆ ಇಲ್ಲವೇ ಪ್ರಜಾಪ್ರಭುತ್ವದ ನಾಲ್ಕನೇ ವ್ಯವಸ್ಥೆ (fourth estate) ಎಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ? ಅಥವಾ ಹಣ ಮತ್ತು ಅಜೆಂಡಾದ ಹಿಂದೆ ಬಿದ್ದು “ಫಿಫ್ತ್ ಕಾಲಂ” ಆಗಿ ಕುಸಿದು ಬಿಟ್ಟಿತೆ ಪತ್ರಿಕೋದ್ಯಮ?

ಕೊನೆಯದಾಗಿ ತನ್ನ ಧಣಿಗೆ ರಿಚರ್ಡ್ ಹೀಗೆ ಹೇಳುತ್ತಾನೆ. “ನಿನ್ನ ಪತ್ರಿಕೆಯವರು ಹೆಣೆಯುವ ಪದಗಳು, ವಿಷಯಗಳು ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವ ಜ್ಞಾನ ನಿನಗಿಲ್ಲದಿದ್ದರೆ ಒಂದು ಕಾಮ ಪ್ರಚೋದಕ (porn) ಪತ್ರಿಕೆಯನ್ನು ಶುರು ಮಾಡು. ಅಥವಾ ಅವರು ಬರೆದ ಲೇಖನಗಳು ಪರಿಣಾಮ ಬೀರುತ್ತವೆ ಎಂದು ನಿನಗನ್ನಿಸಿಯೂ ಸಹ ನಿನ್ನ ಸಂಪಾದಕರು ಅನುಮತಿಸುವ ಪ್ರಚೋದಕ ಲೇಖನಗಳನ್ನು ತಡೆಯುವ ಮನಸ್ಸು ನಿನಗೆ ಇಲ್ಲದಿದ್ದರೆ ಬ್ರಿಟನ್ ನಂಥ ಒಂದು ಮಹೋನ್ನತ ದೇಶಕ್ಕೆ ನೀನೊಬ್ಬ ಕಂಟಕಪ್ರಾಯ ಎಂದು ತಿಳಿದುಕೋ”.

ಹತಾಶೆಯ ಮತ್ತು ಕ್ರೋಧ ತುಂಬಿದ ಮೇಲಿನ ಮಾತುಗಳು daily star ನ ಧಣಿಗೆ ಮಾತ್ರ ಅನ್ವಯವಾಗದೇ ಲೇಖನಿಯ ಪಾವಿತ್ರ್ಯದ ಅರಿವಿಲ್ಲದ ಎಲ್ಲರಿಗೂ ಅನ್ವಯವಾಗುತ್ತದೆ.         

fifth column: A fifth column is a group of people who clandestinely undermine a larger group such as a nation from within.

ಸಂಪೂರ್ಣ ಲೇಖನಕ್ಕೆ ಈ ಕೊಂಡಿ ಕ್ಲಿಕ್ಕಿಸಿ.

http://www.guardian.co.uk/media/2011/mar/04/daily-star-reporter-letter-full

ಯೇಗ್ದಾಗೆಲ್ಲಾ ಐತೆ..ಓದಲೇಬೇಕಾದ ಪುಸ್ತಕ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.  

ಮುಕುಂದನ ಹಳ್ಳಿಯ ಈ ಸ್ವಾಮೀ ಒಬ್ಬ ಸರಳ ಸನ್ಯಾಸಿ. ಕಳ್ಳ ಸನ್ಯಾಸಿ, ಭಂಗಿ, ಗಾಂಜಾ ಸೇದುವವನು, “ಭಕ್ತರ ಮನೆಯ ಮುದ್ದೆ, ಬಸವಿ ಮನೆಯ ನಿದ್ದೆ”….   ಹೀಗೇ ವಿನಾಕಾರಣ ಪುರಾವೆಗಳಿಲ್ಲದೆ ಅವರನ್ನು ಜನ ತೆಗಳಿದರೂ (ಯಾರೋ ಹೇಳಿದ್ದನ್ನು, ಹೇಳಿ ಕೊಟ್ಟಿದ್ದನ್ನು ನಂಬಿ prejudiced ಆಗೋ ವಿದ್ಯಾ?ವಂತ ಸಮೂಹ ನಮ್ಮ ನಡುವೆ ಇರುವಾಗ ಗ್ರಾಮಸ್ಥರ ವರ್ತನೆ ಬಗ್ಗೆ ಅಚ್ಚರಿ ಪಡಬೇಕಿಲ್ಲ ) ಅದ್ಯಾವುದನ್ನೂ ಕಿವಿಗೆ ಹಾಕಿ ಕೊಳ್ಳದೆ ಮೇಷ್ಟ್ರು ತಮ್ಮ ಸ್ನೇಹವನ್ನು ಅವರೊಂದಿಗೆ ಮುಂದುವರೆಸುತ್ತಾ ಬದುಕು ಒಂದು ಒಂದು ಭ್ರಮೆ ಎಂದು ಕಂಡು ಕೊಳ್ಳುತ್ತಾರೆ. 

ಮುಕುಂದನ ಹಳ್ಳಿಯ ಸ್ವಾಮಿಗಳಿಗೆ ಬದುಕಿನ ಬಗ್ಗೆ ಸರಳವಾಗಿ, ಜನರ ದೈನಂದಿನ ಬದುಕಿನೊಂದಿಗೆ ತಳುಕು ಹಾಕಿ ವಿನೋದವಾಗಿ, ಮನದಟ್ಟಾಗುವಂತೆ ಹೇಳುವ ಸಾಮರ್ಥ್ಯ ತಮ್ಮ ಅಲೆದಾಟದಷ್ಟೇ ಸುಲಭ. ಒಮ್ಮೆ  ವ್ಯಕ್ತಿಯೊಬ್ಬ ಬಂದು ಯಾರೋ ಸತ್ತು ಹೋದರು ಎನ್ನುವ ಸುದ್ದಿಯನ್ನ ಇವರಿಗೆ ತಲುಪಿಸುತ್ತಾನೆ. ಸತ್ತು ಹೋದ ಎನ್ನುವ ಪದ ಕೇಳಿದ ಕೂಡಲೇ ಹೌಹಾರಿದಂತೆ ನಟಿಸಿದ ಸ್ವಾಮಿಗಳು, ಅದ್ಹೇಗಯ್ಯಾ, ಅವನೆಲ್ಲಾದರೂ ಸತ್ತು ಹೋಗಲು ಸಾಧ್ಯವೇ ಎಂದು ಕೇಳುತ್ತಾರೆ. ಸ್ವಾಮಿಗಳ ಈ ಪ್ರಶ್ನೆಯ ಮರ್ಮ ಅರಿಯದ ಹಳ್ಳಿಗ ಮತ್ತಷ್ಟು ವಿವರಿಸುತ್ತಾನೆ. ಆದರೂ ಸ್ವಾಮಿ ಜಪ್ಪಯ್ಯ ಅನ್ನುವುದಿಲ್ಲ. ಎಲ್ಲಾದರೂ, ಯಾರಾದರೂ ಸತ್ತು ಹೋಗೋದಿದೆಯೇ? ಇಷ್ಟೆಲ್ಲಾ ವರ್ಷ ಬಾಳಿ  ಬದುಕಿದವನು ಅಷ್ಟು ಸಲೀಸಾಗಿ “ಸತ್ತು ಹೋಗು” ವನೆ? ಎಂದು ಕೇಳಿ ಅವನನ್ನು ಮತ್ತಷ್ಟು ಗಲಿಬಿಲಿಗೊಳಿಸುತ್ತಾರೆ.  “ಸತ್ತು ಹೋಗು’ ಎನ್ನುವ ಪದದ ಹಿಂದಿನ ಗೂಢಾರ್ಥವನ್ನು ಸ್ವಾಮಿಗಳಂಥ ವರಿಗೆ ಅರಿಯುವುದು ಸುಲಭ. ಉಸಿರಾಟ ನಿಂತು ಬಿಟ್ಟರೆ ಅವನು ಸತ್ತ ಎಂದು ಬಗೆಯುವ ಹಳ್ಳಿಯ ನಿರಕ್ಷರ ಕುಕ್ಷಿಗೆ ಹೇಗೆ ತಾನೇ ತಿಳಿಯಬೇಕು ಸಾವು ಮತ್ತೊಂದು ಬದುಕಿನೆಡೆಗಿನ ಪಯಣ ಎಂದು ? ಹೌದಲ್ಲವೇ? ದೀರ್ಘಾವಧಿ ಬಾಳಿ ಬದುಕಿದ  ಮಾಡಬೇಕಾದ್ದನ್ನೂ, ಮಾಡಬಾರದ್ದನ್ನೂ ಎಲ್ಲಾ ಮಾಡಿದ ಮನುಷ್ಯ ಸದ್ದಿಲ್ಲದೇ “ಸತ್ತು ಹೋಗಲು” ಹೇಗೆ  ಸಾಧ್ಯ? ಬದುಕಿನ ಮತ್ತು ಸಾವಿನ ನಿಜರೂಪವನ್ನು ಸ್ವಾಮಿಗಳು ಲೀಲಾಜಾಲವಾಗಿ ನಗುತ್ತಾ ಹಾಸ್ಯದಿಂದ ವಿವರಿಸುತ್ತಾರೆ ಸಾವಿನ ಸುದ್ದಿ ತಂದಾತನಿಗೆ.

ನದಿಯಲ್ಲಿ ನೀರಿನ ಹರಿವನ್ನು ನೋಡುತ್ತಾ, ಅದರೊಂದಿಗೆ ಹೊರಡುವ ನೀರ ಗುಳ್ಳೆಗಳೂ ಸ್ವಾಮಿಗಳ ಆಸಕ್ತಿ,  ಕಲ್ಪನೆಯನ್ನು ಹಿಡಿದಿಡುತ್ತವೆ. ಕ್ಷಣ ಮಾತ್ರ ಬದುಕುವ ಆ ಗುಳ್ಳೆಗಳ ಹಿಂದಿನ ಮರ್ಮವನ್ನೂ, ನಮ್ಮ ಬದುಕಿನ ಟೊಳ್ಳುತನ ದೊಂದಿಗೆ ಹೋಲಿಸಿ ಗಾಂಭೀರ್ಯ ಮಿಳಿತ ನಗುವಿನೊಂದಿಗೆ ಬಿಡಿಸಿ ಹೇಳುತ್ತಾರೆ. ಒಟ್ಟಿನಲ್ಲಿ ಒಂದು ಚೆಂದದ ಪುಟ್ಟ ಪುಸ್ತಕ.  ಒಂದು ರೀತಿಯಲ್ಲಿ reader’s digest ಓದಿದ ಹಾಗುತ್ತದೆ ಸ್ವಾಮಿಗಳ ಮಾತು, ಅನುಭವ ನೋಡಿದಾಗ. ಇಂಥ ನಿಸ್ವಾರ್ಥಿ ಸಾಧಕರಿಂದಲೇ ಇರಬೇಕು ನಮ್ಮ ಸಮಾಜ ಒಳ್ಳೆಯತನವನ್ನು ತನ್ನಲ್ಲಿ ಇನ್ನೂ ಉಳಿಸಿಕೊಂಡು ಬರುತ್ತಿದೆ. ಆದರೆ ಇವರುಗಳ ಸಂಖ್ಯೆ ಕ್ಷೀಣಿಸುತ್ತಿರುವುದೂ ಸಹ ತುಂಬು ಬದುಕು ಸಾಗಿಸಿದ ಸ್ವಾಮಿಗಳ ಮಾತುಗಳಷ್ಟೇ ಸತ್ಯ.

ಮನುಷ್ಯರೆಲ್ಲರೂ ಸಮಾನರು ಎಂದು ಸ್ವಾಮಿಗಳು ಹೇಳುವ ರೀತಿ ಇಲ್ಲಿದೆ ನೋಡಿ;

“ಊರು ಕೇರಿ, ಕುಲ ಗೋತ್ರ ಹೆಣ್ಣು ಗಂಡು ಎಲ್ಲಾ ಇಂಗಡಿಸ್ತಾರೆ. ನಾವು ಶಿವಾಚಾರ್ದೋರು, ನಾವು ದೇವಾಂಗ ದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗಂಧದೋರು, ಮುದ್ರೆರು, ಅವ್ರು ಇವ್ರು ಒಬ್ಬರನ್ನ ಕಂಡ್ರೆ ಒಬ್ರು ಮಾರು ದೂರ ಹೋಗ್ತಾರೆ. ಮಾಡಿ ಮೈಲಿಗೆ ಅಂತಾರೆ, ನಗು ಬರ್ತೈತೆ……..ಈ ಮುದ್ರೆ, ವಿಭೂತಿ ಎಲ್ಲಾ ಅಷ್ಟೇ. ಬಾರೆ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ” ಈ ಮಾತನ್ನು ಆಧುನಿಕ ಸ್ವಾಮಿಗಳಿಗೆ ಕೇಳಿಸಿದರೆ ಯಾವ ಉತ್ತರ ಸಿಗಬಹುದೋ?    

ಸ್ವಾಮಿಗಳ  ಕೆಲವೊಂದು ಸಂಗತಿಗಳು ಉತ್ಪ್ರೇಕ್ಷೆ ಎಂದು ತೋರಿದರೂ ಈ ಭಾವನೆ ಮತ್ತು ದಂತ ಕಥೆಗಳು ದೇವ ಮಾನವರಿಗೆ ಜನ ಅಂಟಿಸಿಯೇ ತೀರುತ್ತಾರೆ. ಅವನು ಕುಡುಕ, ಭಂಗಿ, ಗಾಂಜಾ ಹಾಕುವವನು ಎಂದೆಲ್ಲಾ ಜರೆಯುವ ಅದೇ ಬಾಯಿ ಅವರ ಪವಾಡಗಳ ಬಗ್ಗೆಯೂ ಭಯ ಭಕ್ತಿಯಿಂದ ಮಾತನಾಡುತ್ತಾರೆ, ಅದೇ ಸೋಜಿಗ.

ಹಳ್ಳಿಗಳಲ್ಲಿ ಈಗ ಅಪರೂಪವಾಗುತ್ತಿರುವ ಸಾಮರಸ್ಯದ ಜೀವನ ಸಹ ಈ ಮೇಷ್ಟರ ನೆನಪಿನಂಗಳದಿಂದ ಮರೆಯಾಗುವುದಿಲ್ಲ. ಮುಸ್ಲಿಮರಾದರೂ ಹಯಾತ್ ಸಾಹೇಬರು ಹಳ್ಳಿಯಲ್ಲಿನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡುತ್ತಿದ್ದ ಸಹಾಯ, ಗ್ರಾಮಸ್ಥರ ಮೂಢ ನಂಬಿಕೆಗಳು ಹೀಗೇ ಹತ್ತು ಹಲವು ವಿಚಾರಗಳನ್ನು ಜೋಪಾನದಿಂದ ಓದುಗರಿಗಾಗಿ ಕಾಯ್ದುಕೊಂಡು ನಮ್ಮ ಕೈಗಳಿಗರ್ಪಿಸಿದ ಕೃಷ್ಣ ಶಾಸ್ತ್ರಿಗಳು ಮಹದುಪಕಾರವನ್ನೇ ಮಾಡಿದ್ದಾರೆ ಈ ಪುಸ್ತಕ ಬರೆಯುವ ಮೂಲಕ. ಈ ಪುಸ್ತಕ ಆಂಗ್ಲ ಭಾಷೆಗೆ ತರ್ಜುಮೆಗೊಂಡಿದೆಯೋ ಗೊತ್ತಿಲ್ಲ. ತರ್ಜುಮೆ ಆಗದ ಪಕ್ಷದಲ್ಲಿ ಯಾರಾದರೂ ಈ ಮಹತ್ಕಾರ್ಯಕ್ಕೆ ಕೈ ಹಾಕಿದರೆ ಈ ಪುಸ್ತಕ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.   

ಒಬ್ಬ ನಿರಕ್ಷರಕುಕ್ಷಿ ಆದರೆ ಬದುಕಿನ ನಿಜವಾದ ಪಾಠದಲ್ಲಿ ಅದ್ವಿತೀಯ professor ಆದ ಸ್ವಾಮಿಯೊಬ್ಬರ ಪರಿಚಯ ನನ್ನಲ್ಲಿ ಒಂದು ಅವರ್ಣನೀಯವಾದ ಭಾವವನ್ನೇ ಸೃಷ್ಟಿಸಿತು. ರಾಜಕಾರಣಿಗಳ ಒಡನಾಟದಿಂದ ನಾಡಿನ ಸಂಪನ್ಮೂಲ ಲೂಟಿ ಮಾಡುವ ಕೆಲವು ಸ್ವಾಮಿಗಳಿಗೂ ಈ ಮುಕುಂದೂರಿನ ಸ್ವಾಮಿಗೂ ಎತ್ತಣ ಸಂಬಂಧ ಎಂದು ತೋರಿದರೂ ಆಶ್ಚರ್ಯವಿಲ್ಲ. ಒಬ್ಬ ಅಹಂಕಾರಿ, ಸ್ವಾಮಿಯೊಬ್ಬ ತನ್ನ ಮಠಕ್ಕೆ ಬಂದು ಪೊಗರು ತೋರಿಸಿದರೂ ತನ್ನ ಸಂಸ್ಕೃತಿ ಕಲಿಸಿದ ವಿನಯ ವಿಧೇಯತೆ ಯನ್ನ ಮೋಹಕವಾಗಿ ಪ್ರದರ್ಶಿಸಿ ಮನಃಪೂರ್ವಕ ಆ ಸ್ವಾಮಿಯ ಸೇವೆ ಮಾಡುವ ಇವರ ಉದಾತ್ತ ಸಂಸ್ಕಾರ ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಅಹಂಕಾರಿಗೆ ಅಹಂಕಾರವೇ ಉತ್ತರ ಎನ್ನುವ ನಮಗೂ ಆ ಸ್ವಾಮಿಗೂ ಇರುವ ವ್ಯತ್ಯಾಸ ನೋಡಿ.

ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ. ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ, ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ. ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು.

ಒಮ್ಮೆ ತನ್ನ ಮೂರು ವರ್ಷದ ಮಗು ಗುಲಾಬಿ ಕೀಳಲು ಗಿಡದ ಕಡೆ ಹೋಗುತ್ತಿದ್ದನ್ನು ಕಂಡ ಮಗುವಿನ ತಾಯಿ “ಅಯ್ಯೋ, ಅಯ್ಯೋ, ಮುಳ್ಳು, ಮುಳ್ಳು, ಮುಟ್ಟಬೇಡ ಎಂದು ಮಗುವನ್ನು ತಡೆದುದನ್ನು ಕಂಡ ಸ್ವಾಮಿಗಳು ಹೇಳಿದ್ದು, ಅಮ್ಮಯ್ಯಾ, ಆ ಮಗುವಿಗೆ ಹೂವಿನ ಗಿಡದಾಗೆ ಮುಳ್ಳು ಐತೆ ಅಂತ ಹೇಳ್ಕೊಡಬ್ಯಾಡ, ಮುಳ್ಳಿನ ಗಿಡ್ಯಾಗೆ ಹೂ ಐತೆ ಅಂತ ಹೇಳ್ಕೊಡಬೇಕು ಎಂದು ನಗುತ್ತಾ ಹೇಳುತ್ತಾರೆ. ಈ ಮಾತು ನಾವು ಕಲಿತ “half glass full” ಗಿಂತ ಮನೋಹರವಾಗಿಲ್ಲವೇ?

ಯೋಗಾಸನ ಪೈಶಾಚಿಕವಂತೆ

ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.

ಬುರ್ಖಾ ನಿಷೇಧ

ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು ಜರಗುತ್ತಿದ್ದರೆ ಮತ್ತೊಂದು ಕಡೆ ತಾನು ಮಾನವಾಗಿ ತನ್ನ ಶರೀರವನ್ನು ಮುಚ್ಚಿಕೊಂಡು ಓಡಾಡುತ್ತೇನೆ ಎಂದು ಹೇಳುವ ಮಹಿಳೆಯರ ಮೇಲೆ ಸಮಾಜದ ದಿಗ್ಬಂಧನ, ಕಾನೂನು. ಫ್ರಾನ್ಸ್ ನ ಅಧ್ಯಕ್ಷ ಮಹಾಶಯನ ಲೈಂಗಿಕ ಚಟುವಟಿಕೆ ತಿಳಿದವರಿಗೆ ಅಲ್ಲಿನ ಸಂಸತ್ತಿನಲ್ಲಿ ಅವನಂಥ ಎಷ್ಟು ಸದಸ್ಯರು ತಮ್ಮ ಅಧ್ಯಕ್ಷನ ರೀತಿ ಹೆಣ್ಣನ್ನು ತಮ್ಮ ತೃಷೆಗಾಗಿ ಉಪಯೋಗಿಸಿಕೊಳ್ಳುತ್ತಿರಬಹುದು ಎಂದು ಯೋಚಿಸಿದರೆ ತಪ್ಪಿಲ್ಲ. ಇದೇ ನಡತೆಗೆಟ್ಟ ಗಂಡಸರು ಹೆಣ್ಣು ವಿವಸ್ತ್ರಳಾಗೋದನ್ನು ಬಯಸುತ್ತಾ ಮಾನವಾಗಿ ನಡೆಯಲಿಚ್ಚಿಸುವ ಮಹಿಳೆಯರ ಮೇಲೆ ಕಾನೂನಿನ ತೂಗುಗತ್ತಿಯನ್ನು ಇಳಿ ಬಿಡುತ್ತಾರೆ. ಇವರಿಗೆ ಮಹಿಳೆ ಮೈತುಂಬಾ ಹೊದ್ದು ಕೊಳ್ಳುವುದು ಗುಲಾಮಗಿರಿಯ ಸಂಕೇತ. ಶೋಷಣೆಯ ಹೆಗ್ಗುರುತು. ಹೆಣ್ಣು ಕನಿಷ್ಠ ಉಡುಗೆ ತೊಡುವುದು ultimate civilization.     

ಬೆತ್ತಲೆ, ಕನಿಷ್ಠ ಉಡುಗೆ ಇಷ್ಟ ಪಡುವ ವಿಶ್ವ. ದೊಡ್ಡ ಕೋಲಾಹಲವನ್ನೇ ಸೃಷ್ಟಿಸುತ್ತಿದೆ ಈ ಸುಮಾರು ಐದು ಮೀಟರು ಬಟ್ಟೆ. ಮೂರೂ ಬಿಟ್ಟು, ಕನಿಷ್ಠ ಉಡುಗೆ ತೊಟ್ಟು ತಮ್ಮ ಶರೀರ ದಾರಿಹೋಕರ ಕಣ್ಣುಗಳಿಗೆ ಎಂದು ಬಿಂಕದಿಂದ ನಡೆಯುವ ಉದಾರವಾದಿ ಮಹಿಳೆ ಮತ್ತು ಇಂಥ ಉಡುಗೆಗಳಲ್ಲಿ ಪರಸ್ತ್ರೀಯರನ್ನು ನೋಡಿ ನಾಲಗೆ ಚಪ್ಪರಿಸಿ ಸವಿಯುವ  ಪುರುಷರಿಗೆ ಈ ಬುರ್ಖಾ ಎನ್ನುವ ವಸ್ತ್ರ ಸಹ್ಯವಾದರೂ ಹೇಗಾದೀತು? ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ಹೆಣ್ಣನ್ನು ನಾನಾ ಬಗೆಯ  ಉಡುಗೆಗಳಲ್ಲಿ ಅತ್ತಿಂದಿತ್ತ ಓಡಾಡಿಸಿ ಕ್ಯಾಮೆರಾ ಕಣ್ಣುಗಳಿಂದ ಅವಳ ಉಬ್ಬು ತಗ್ಗುಗಳನ್ನು ವಿವಿಧ ಕೊನಗಳಲ್ಲಿ ಸೆರೆಹಿಡಿದು, ಅವಳ ಅಂಗ ಸೌಷ್ಟವದ ಅಳತೆ ತೆಗೆದು ತಾವು ಕಲ್ಪಿಸಿಕೊಂಡ ಮಾನ ದಂಡಕ್ಕೆ ಅವಳ ಅಳತೆಯಿದ್ದರೆ ಅವಳನ್ನು ವಿಶ್ವ ಸುಂದರಿ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ದ್ಯಾಟ್, ಮಿಸ್ ದಿಸ್ ಎಂದು ಪ್ರಶಸ್ತಿ ಕೊಟ್ಟು ನಗ್ನತೆಯನ್ನು, ಬಹಿರಂಗ ಸೌಂದರ್ಯವನ್ನು ಸನ್ಮಾನಿಸುವ, ಆದರಿಸುವ ಸಮಾಜಕ್ಕೆ ಖಂಡಿತವಾಗಿಯೂ ಪಥ್ಯವಲ್ಲ ಬುರ್ಖಾ. ಈ ರೀತಿಯ ಅಳತೆಗೆ ನಿಲುಕದ ಬಹುಪಾಲು ಮಹಿಳೆಯರು  ಕೀಳರಿಮೆಯಿಂದ ಬಳಲುತ್ತಿದ್ದರೆ ಅದೊಂದು ಸಮಸ್ಯೆ ಅಲ್ಲ ಇವರಿಗೆ. size and beauty obssessed ಸಮೂಹಕ್ಕೆ.

ಬುರ್ಖಾ ನಿಷೇಧಿಸುವಲ್ಲಿ  ಫ್ರಾನ್ಸ್ ಕಾನೂನನನ್ನು ಜಾರಿ ಗೊಳಿಸಿದಂತೆ ಇಂಗ್ಲೆಂಡ್ ಸಹಾ ಬುರ್ಖಾ ನಿಷೇಧ ಕಾನೂನನ್ನು ತರಬೇಕೆಂದು ಒತ್ತಾಯಿಸುತ್ತಿರುವ ಜನರು ಹೆಣ್ಣನ್ನು ಸೌಂದರ್ಯ  ಪ್ರಸಾಧನ ಉತ್ಪಾದಿಸುವವರ, ಕಾಮ ಪಿಪಾಸುಗಳ ಆಟಿಕೆಯಾಗಿ ಬಳಸಿಕೊಳ್ಳುತ್ತಾ ತಮ್ಮನ್ನು ತಾವು ನಾಗರೀಕರು ಎಂದು ಬೆನ್ನು ತಟ್ಟಿ ಕೊಳ್ಳುವವರ ದಾರ್ಷ್ಟ್ಯತನವನ್ನು ಮೆಚ್ಚಲೇ ಬೇಕು. ಬುರ್ಖಾ ಗುಲಾಮಗಿರಿಯ ಸಂಕೇತ, ಪುರುಷರ ಒತ್ತಾಯಕ್ಕೆ ಮಣಿದು ಮಹಿಳೆಯರು ಧರಿಸುತ್ತಾರೆ ಎಂದು ವಾದಿಸುವ ಸಮೂಹಕ್ಕೆ ಈ ಸತ್ಯದ ಅರಿವಾದದ್ದು ಯಾವಾಗಲೋ ಏನೋ? ಅವರಿಗೆ ಹೇಗೆ ಗೊತ್ತು ಇದು ಪುರುಷ ಹೇರಿದ ಕಟ್ಟಳೆ ಎಂದು? ಸ್ವಂತ ಇಷ್ಟದಿಂದ ಹಿಜಾಬ್ ಧರಿಸುವ ಮಹಿಳೆಯರನ್ನು ನಾನು ನೋಡಿದ್ದೇನೆ. ತನ್ನ ತಾಯಿ ಧರಿಸುವ ಹಿಜಾಬನ್ನು ನೋಡಿ ಪುಟ್ಟ ಮಗುವೂ ತಾಯಿಯನ್ನು ಅನುಕರಿಸಲು ನೋಡುತ್ತದೆ. ಹೊರಗೆ ಮಹಿಳೆಯರು ತಮಗಿಷ್ಟದ, ನವೀನ ಶೈಲಿಯ ಬಟ್ಟೆ ಧರಿಸಿ ಹೋಗುವುದನ್ನು ಕಂಡರೂ ಆ ಪುಟ್ಟ ಮಗುವಿಗೆ ತನ್ನ ತಾಯಿ ಧರಿಸುವ ಕಪ್ಪು ಬಣ್ಣದ ಬುರ್ಖಾ ಕರಾಳವಾಗಿ ಕಾಣೋದಿಲ್ಲ. ಇಲ್ಲಿ ಆ ಮುಗ್ಧ ಮಗು ಕಾಣೋದು ತನ್ನ ತಾಯಿಯ ನಾರ್ಮಲ್ ಉಡುಗೆ ಮಾತ್ರ. ಬುರ್ಖಾ ಪದ್ಧತಿ ಇಸ್ಲಾಮಿನ ನಿಯಮವೋ, ಕಟ್ಟಳೆಯೋ ಅಲ್ಲ. ಪವಿತ್ರ ಕುರಾನಿನಲ್ಲಿ ದೇವರು ನಿರ್ದೇಶಿಸಿದ್ದು ಹೆಣ್ಣು ಮತ್ತು ಗಂಡು ಮೈ ತುಂಬಾ ಉಡಲು. ಅಂಗ ಸೌಷ್ಟವ ಪ್ರದರ್ಶಿಸದಂತೆ ತಾಕೀತು. ಹೆಣ್ಣು ಗಂಡು ಇಬ್ಬರೂ ತಮ್ಮ ದೃಷ್ಟಿಗಳನ್ನು ಅನಾವಶ್ಯವಾಗಿ ಬೇಕೆಂದಲ್ಲಿ ಹರಿಬಿಡದೆ ನಡೆಯಲು ಅಪೇಕ್ಷೆ, ನೆಲ ನೋಡಿ ವಿನೀತರಾಗಿ ನಡೆಯಲು ಸೂಚನೆ. ಇವು ಮಾತ್ರ ಇರುವುದು ಕುರಾನಿನಲ್ಲಿ. ಬಟ್ಟೆ ಹೀಗೆ ಇರಬೇಕು, ಇಂಥ ಬಣ್ಣದ್ದೇ ಆಗಿರಬೇಕು ಎಂದು ಎಲ್ಲೂ ಹೇಳಿಲ್ಲ. ಹಾಗಿದ್ದರೆ ಬುರ್ಖಾ ಸಾರ್ವತ್ರಿಕವಾಗಿರುತ್ತಿತ್ತು. ವಿಶ್ವದ ಬಹುಪಾಲು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ದೂರದ ದೇಶಗಳ ಮಾತೇಕೆ ನಮ್ಮ ಪಕ್ಕದ ಕೇರಳದಲ್ಲೂ ಬಹುಪಾಲು ಮಹಿಳೆಯರು ಬುರ್ಖಾ ಧರಿಸುವುದಿಲ್ಲ. ಉದ್ದದ ತೋಳಿನ ರವಿಕೆ, ಮೈ ತುಂಬಾ ಸೀರೆ ಉಟ್ಟು ಕೊಳ್ಳುತ್ತಾರೆ. ಅಲ್ಲಿ ಯಾವ ಮುಲ್ಲಾ ಮಹಾಶಯರೂ ಫತ್ವಾ ಹೊರಡಿಸಲಿಲ್ಲ, ಕಪ್ಪು ಬಟ್ಟೆಯಿಂದ ಬಿಗಿದು ಕೊಳ್ಳಿ ನಿಮ್ಮ ಶರೀರವನ್ನು ಎಂದು. ಬುರ್ಖಾ ಒಂದು ಸಾಮಾಜಿಕ, ಸಾಂಸ್ಕೃತಿಕ ಉಡುಗೆ. ಸುಡಾನಿನ ಮಹಿಳೆಯರು ಸೀರೆ ಥರಾ ಕಾಣುವ  ಬಟ್ಟೆಯನ್ನು ಮೈ ತುಂಬಾ ಹೊದ್ದು ಕೊಳ್ಳುತ್ತಾರೆ. ಇರಾನಿನಲ್ಲಿ ಎಲ್ಲಾ  ಮಹಿಳೆಯರೂ ಧರಿಸುವುದಿಲ್ಲ. ಶೇಕಡಾ ೯೮ ಮುಸ್ಲಿಮರಿರುವ ತುರ್ಕಿ, ಟುನೀಸಿಯಾ ದೇಶಗಳ ಮಹಿಳೆಯರೂ ಸಹ ಬುರ್ಖಾ ಧಾರಿಗಳಲ್ಲ. ಅಲ್ಲಿ ಮುಲ್ಲಾಗಳ ಹಾವಳಿ ಇಲ್ಲ ಎಂದಲ್ಲ, ಆದರೆ ಇದೊಂದು ಧಾರ್ಮಿಕ ಉಡುಗೆ ಯಲ್ಲ ಎನ್ನುವ ಅರಿವಿರುವುದರಿಂದಲೇ ಅವರು ಅಲ್ಲಿನ ಮಹಿಳೆಯರ ಮೇಲೆ ಈ ವಸ್ತ್ರವನ್ನು ಹೇರದಿರುವುದು.

ಈ ಮೇಲಿನ ಮಾತಿಗೆ ಪುಷ್ಟಿಯಾಗಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿ ಸುತ್ತೇನೆ. ಪುರಾತನ ನಾಗರೀಕತೆಯ ತವರಾದ ಈಜಿಪ್ಟ್ ದೇಶ ಇಸ್ಲಾಂ ಧರ್ಮವನ್ನ ಅನುಸರಿಸುವ ದೇಶ. ಅಲ್ಲಿನ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯ ಅಲ್- ಅಜ್ಹರ್ ಸ್ಥಾಪಿತ ವಾಗಿದ್ದು ಕ್ರಿ. ಷ ೯೫೦ ರಲ್ಲಿ. ಅಲ್ಲಿನ “ರೆಕ್ಟರ್” ಆಗಿದ್ದ ಇತ್ತೀಚೆಗೆ ದಿವಂಗತರಾದ ಶೇಖ್ ತಂತಾವೀ. ಇವರು ಜಗದ್ವಿಖ್ಯಾತ ಮುಸ್ಲಿಂ ವಿಧ್ವಾಂಸ. ಅತ್ಯಂತ ಕ್ಲಿಷ್ಟ ಶರಿಯಾ ದ ಸಮಸ್ಯೆಗಳಿಗೆ ಮುಸ್ಲಿಂ ವಿಶ್ವ ಉತ್ತರ ಅರಸೋದು ಇವರಲ್ಲಿ. ಆರು ತಿಂಗಳ ಹಿಂದೆ ನಡೆದ ವಿಶ್ವ ವಿದ್ಯಾಲಯದ ಸಮಾರಂಭವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭಿಕರಲ್ಲಿ ಒಬ್ಬ ಹದಿ ಹರೆಯದ ಯುವತಿಯೊಬ್ಬಳು ಹಿಜಾಬ್ ಮಾತ್ರವಲ್ಲದೆ ಕಣ್ಣು ಮಾತ್ರ ಕಾಣುವಂಥ “ನಿಕಾಬ್” ಸಹ ಧರಿಸಿದ್ದಳು. ಭಾಷಣ ಮಾಡುತ್ತಿದ್ದ ತಂತಾವೀ ಯುವತಿಗೆ ಹೇಳಿದರು ಮುಖದ ಮೇಲಿನ ನಿಕಾಬ್ ತೆಗೆಯುವಂತೆ. ಆಕೆ ಒಪ್ಪಲಿಲ್ಲ. ಒತ್ತಾಯಿಸಿದಾಗ ಆಕೆ ಹೇಳಿದಳು ಇದು ನನ್ನ ಧಾರ್ಮಿಕ ಉಡುಗೆ, ನನ್ನ ಸ್ವಂತ ಇಷ್ಟದಿಂದ ಧರಿಸಿದ್ದು ಎಂದು. ಇದನ್ನು ಕೇಳಿ ಕುಪಿತರಾದ ತಂತಾವೀ ಹೇಳದರು, ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿರುವ ಈ ಸುಪ್ರಸಿದ್ಧ ವಿದ್ಯಾಲಯದ ಕುಲಪತಿಯಾದ ನನಗಿಂತ ನಿನಗೆ ಗೊತ್ತೋ ಇಸ್ಲಾಮಿನ ಉಡುಗೆ ಬಗ್ಗೆ? ನೀನು ಧರಿಸುತ್ತಿರುವ ಮುಖ ಮುಚ್ಚಿ ಕೊಳ್ಳುವ ನಿಕಾಬ್ ಇಸ್ಲಾಮಿನ ಕಾನೂನಲ್ಲ, ಅದೊಂದು ಸಾಮಾಜಿಕ ಉಡುಗೆ ಎಂದು ಹೇಳಿ ಆಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಅದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತು ಮುಸ್ಲಿಂ ಜಗತ್ತಿನಲ್ಲಿ, ವಿಶೇಷವಾಗಿ ಅರಬ್ ವಲಯಗಳಲ್ಲಿ. ಆಕೆ ಯಾರ ಬಲವಂತವೂ ಇಲ್ಲದೆ ತನ್ನ ಇಷ್ಟಾನುಸಾರ ಧರಿಸಿದ ವಸ್ತ್ರಕ್ಕೆ ಈ ವಿಧ್ವಾಂಸರ  ಆಕ್ಷೇಪವೇಕೆ ಎಂದು ಅವರನ್ನು ಟೀಕಿಸಲಾಯಿತು.

ಕುವೈತ್ ಅರಬ್ ಮುಸ್ಲಿಂ ರಾಷ್ಟ್ರ. ಅಲ್ಲಿನ ಸಂಸತ್ತಿನಲ್ಲಿ ಕೆಲವರು ಮಹಿಳಾ ಸದಸ್ಯೆಯರೂ ಇದ್ದಾರೆ. ಅವರಲ್ಲಿ ಇಬ್ಬರು ಸಂಸದೆಯರು ಹಿಜಾಬ್ ಧರಿಸುವುದಿಲ್ಲ. ಅರಬ್ ರಾಷ್ಟ್ರವಾದ ಮೇಲೆ ಧರ್ಮಗುರುಗಳ ವರ್ಚಸ್ಸು ಇಲ್ಲದ್ದಿಲ್ಲ, ಆದರೂ ಯಾವುದೇ ಧರ್ಮ ಗುರುವೂ ಇದುವರೆಗೆ ಆ ಸಂಸದೆಯರ ವಿರುದ್ಧ ಫತ್ವ ಹೊರಡಿಸಲಿಲ್ಲ.

ಮಧ್ಯ ಪ್ರಾಚ್ಯದ “ಜೋರ್ಡನ್” ದೇಶ ಪುರಾತನ ವಂಶಸ್ಥರ ರಾಜಮನೆತನ ಆಳುವ ದೇಶ. ಇಲ್ಲಿನ ರಾಜ ಅಬ್ದುಲ್ಲಾ ರ ಪತ್ನಿ “ರಾನಿಯಾ” ಹಿಜಾಬ ಧರಿಸುವುದಿಲ್ಲ. ಜೋರ್ಡನ್ ದೇಶದ ಧರ್ಮಗುರುಗಳು ಆಕೆಯ ವಿರುದ್ಧ ಫತ್ವ ಹೊರಡಿಸಲಿಲ್ಲ. ಜೋರ್ಡನ್ ದೇಶದ ರಾಣಿ ಮಾತು ದಿವಂಗತ ಬೆನಜೀರ್ ಭುಟ್ಟೋ ಹಿಜಾಬ್ ಧರಿಸದೆಯೂ ಮುಸ್ಲಿಮರಾಗಿರಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟು ಇಸ್ಲಾಂ ಯಾವ ರೀತಿ ಶಿಷ್ಟಾಚಾರ ಮತ್ತು ಆಧುನಿಕತೆಯೊಂದಿಗೆ ಹೆಜ್ಜೆ ಹಾಕಬಲ್ಲದು ಎಂದು ತೋರಿಸಿ ಕೊಟ್ಟ ಮುಸ್ಲಿಂ ಮಹಿಳೆಯರು.    

ಒಬ್ಬ ಮಹಿಳೆ ಹಿಜಾಬ್ ಧರಿಸಿದ ಮಾತ್ರಕ್ಕೆ ಪರಿಪೂರ್ಣ ಮುಸ್ಲಿಮಳಾಗುವುದಿಲ್ಲ. ಹಿಜಾಬ್ ಧರಿಸದೆಯೂ ಮುಸ್ಲಿಂ ಮಹಿಳೆ ತನ್ನ ಇಸ್ಲಾಮೀ ಸಂಸ್ಕೃತಿಯನ್ನು ಹೆಮ್ಮೆಯಿಂದ ಕೊಂಡಾಡಬಹುದು. ಆದರೆ ಆಕೆ ಏನನ್ನು ಧರಿಸಬೇಕು ಏನನ್ನು ಧರಿಸಬಾರದು ಎಂದು ನಿರ್ಧರಿಸುವ ಸಮಾಜ ಅವಳಿಗೂ ಅವಳದೇ ಆದ ಹಕ್ಕುಗಳಿವೆ, ಆ ಹಕ್ಕನ್ನು ಚಲಾಯಿಸಿಕೊಳ್ಳುವ ಅವಕಾಶವನ್ನೂ ಆಕೆಗೆ ನೀಡಬೇಕು ಎನ್ನುವುದನ್ನು ಮರೆಯಬಾರದು.    

ಇನ್ನು ಓರ್ವ ಮಹಿಳೆ ತನಗಿಷ್ಟವಾದ ಬಟ್ಟೆ ತೊಟ್ಟರೆ ಅವಳ ಸ್ವಾತಂತ್ರ್ಯಕ್ಕೆ ಹೇಗೆ ಅವಳು ಧರಿಸುವ ವಸ್ತ್ರ ಮುಳುವಾಗುತ್ತದೆ ಅನ್ನೋದೇ ಒಂದು ದೊಡ್ಡ ಒಗಟು.        

ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ತೋರಿಸುವ ಸಮಾಜ ಗಲಭೆ, ಜನಾಂಗ ಧ್ವೇಷ ಗಳಂಥ ಸಂದರ್ಭಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ರಾಜಾರೋಷ ಅತ್ಯಾಚಾರ ಕಣ್ಣಿಗೆ ಗೋಚರಿಸೋಲ್ಲ ಏಕೆಂದರೆ ತಮಗೆ ಎಲ್ಲಿ ಬೇಕು ಅಲ್ಲಿ ಮಾತ್ರ  ಕಣ್ಣುಗಳನ್ನು ತೆರೆಯುತ್ತಾರೆ, ಬೇಡದೆಡೆ ತಾತ್ಕಾಲಿಕ, ಕುರುಡನ್ನು ಪ್ರದರ್ಶಿಸುತ್ತಾರೆ.   

ಸ್ವಾತಂತ್ರ್ಯದ ಹರಣದ ಬಗ್ಗೆ ಮಾತನಾಡುವ ಜನರಿಗೆ ಈವಾನ್ ಗೊಎಥ್ ಹೇಳಿದ ಮಾತು ನೆನಪಿಗೆ ತರಬೇಕು; “ತಾವು ಎಲ್ಲರಿಗಿಂತ ಸ್ವತಂತ್ರರು ಎಂದು ಭಾವಿಸಿ ನಡೆಯುವ ಜನರಷ್ಟು ಗುಲಾಮಗಿರಿಯಲ್ಲಿ ಬಂಧಿಸಲ್ಪಟ್ಟವರು  ಬೇರಾರಿಲ್ಲ”.

“None are more hopelessly enslaved than those who falsely believe they are free.”
von Goethe

 

ಹಿಜಾಬ್ ವಿವಿಧ ಧರ್ಮಗಳಲ್ಲಿ: ಯಹೂದ್ಯರು ತಮ್ಮ ಮಹಿಳೆಯರು ಶರೀರವನ್ನು ಸಂಪೂರ್ಣವಾಗಿ ಮುಚ್ಚುವಂಥ ವಸ್ತ್ರ ಧರಿಸಲು ಉತ್ತೆಜಿಸುತ್ತಿದ್ದರು. ಕೂದಲನ್ನು ಪ್ರದರ್ಶಿಸಿ ನಡೆಯುವುದು ಅಪರಾಧ. ಉಚ್ಚ ಕುಲೀನ ಸ್ತ್ರೀಯರು ತಲೆಯ ಮೇಲೆ ಬಟ್ಟೆ ಧರಿಸುತ್ತಿದ್ದರು ಮತ್ತು ಸಮಾಜದ ಕೆಳಸ್ತರದ ಮಹಿಳೆಯರು ಪ್ರತಿಷ್ಠೆ ಗಾಗಿ ತಲೆ ಕೂದಲನ್ನು ಮುಚ್ಚುತ್ತಿದ್ದರು. ಯಹೂದ್ಯ ಸಮಾಜದಲ್ಲಿ ವೇಶ್ಯೆಯರು ತಲೆ ಕೂದಲನ್ನು ಮರೆ ಮಾಚುವಂತಿಲ್ಲ.

ಕ್ರೈಸ್ತ ಧರ್ಮದಲ್ಲಿ: ಸಂತ “ಪಾಲ್” ಹೊಸ ಒಡಂಬಡಿಕೆಯಲ್ಲಿ ಹೇಳಿದ್ದು ಹೀಗೆ: ಪ್ರತೀ ಗಂಡಿನ ತಲೆಯೂ ಕ್ರೈಸ್ತನದು ಮತ್ತು ಪ್ರತೀ ಹೆಣ್ಣಿನ ತಲೆ ಗಂಡಿನದು ಮತ್ತು ಕ್ರಿಸ್ತನ ತಲೆ ದೇವರದು. ಪ್ರತೀ ಹೆಣ್ಣು ತಲೆ ಕೂದಲನ್ನು ಮರೆ ಮಾಚಲೇ ಬೇಕು ಇಲ್ಲಾ ತಲೆ ಬೋಳಿಸಿ ಕೊಳ್ಳಬೇಕು. ಗಂಡು ತಲೆ ಕೂದಲನ್ನು ಮರೆಮಾಚೋ ಅಗತ್ಯ ಇಲ್ಲ ಏಕೆಂದರೆ ಗಂಡು ದೇವರ ಪ್ರತಿ ರೂಪ. ಆದರೆ ಹೆಣ್ಣು ಗಂಡಿನ ಗೌರವ, ಘನತೆ. ಕ್ರೈಸ್ತ ಧರ್ಮ ಗುರುಗಳ ಪ್ರಕಾರ ಹೆಣ್ಣು ತಲೆ ಕೂದಲನ್ನು ಮರೆಮಾಚುವುದು ಆಕೆ ಗಂಡಿಗೆ ಮತ್ತು ದೇವರಿಗೆ ವಿಧೇಯಳಾಗಿರಬೇಕಾದ ಕುರುಹು.  ಯಹೂದ್ಯ ಮತ್ತು ಕ್ರೈಸ್ತ ಧರ್ಮದಲ್ಲಿ ಹಿಜಾಬ್ ಗಂಡಿಗೆ ಮತ್ತು ಸಮಾಜಕ್ಕೆ ಹೆಣ್ಣು ವಿಧೇಯಳಾಗುವ ನಿಟ್ಟಿನಲ್ಲಿ ಆಗ್ರಹಿಸಿದರೆ, ಬಯಸಿದರೆ ಇಸ್ಲಾಮ್ ಹಿಜಾಬನ್ನು ಬಯಸಿದ್ದು ಹೆಣ್ಣಿನ ನಮ್ರ ನಡತೆಯನ್ನು ಉತ್ತೇಜಿಸಲು ಮತ್ತು ಪರಪುರುಷರ ಆಸಕ್ತ ಕಣ್ಣುಗಳಿಂದ ರಕ್ಷಿಸಿಕೊಳ್ಳಲು.      

 

ಕೆನಡಾದ ಕ್ವೀನ್ಸ್ ವಿಶ್ವ ವಿದ್ಯಾಲಯ ಹೊರಡಿಸಿದ ಒಂದು ಪತ್ರದಲ್ಲಿ ಈ ಆಘಾತಕಾರಿ ಅಂಶಗಳು ಒಳಗೊಂಡಿದ್ದವು.  ಪ್ರತೀ ೬ ನಿಮಿಷ ಗಳಿಗೊಮ್ಮೆ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ;

ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ.

ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಬಲಾತ್ಕಾರದ ಅಪಾಯಕ್ಕೆ ಸಿಲುಕಿರುತ್ತಾಳೆ.

ಪ್ರತೀ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಕಾಲೇಜು ವ್ಯಾಸಂಗದ ವೇಳೆ ಲೈಂಗಿಕ ಶೋಷಣೆಗೆ ಒಳಪತ್ತಿರುತ್ತಾಳೆ.

ಆಧುನಿಕ ವಿಶ್ವದಲ್ಲಿ ಆಧುನಿಕ ಮನೋಭಾವದ ವ್ಯಕ್ತಿಗಳು ತಮ್ಮ ಆಧುನಿಕತೆಗೆ ವಸ್ತ್ರ ವನ್ನು ಮಾನದಂಡ ವಾಗಿರಿಸ ಕೂಡದು. ಗಂಡು ಮುಚ್ಚಿದಷ್ಟೂ gentleman ಮತ್ತು ಹೆಣ್ಣು ತೆರೆದಷ್ಟೂ cultured lady. ಈ ಮಾನ ದಂಡವನ್ನು ಎಲ್ಲರ ಮೇಲೂ ಹೇರಕೂಡದು.

ವೈಯಕ್ತಿವಾಗಿ ನಾನು ನಿಕಾಬ್ ಅಭಿಮಾನಿಯಲ್ಲ. ಬುರ್ಖಾ ಧರಿಸದೆಯೂ ಹೆಣ್ಣು ತನ್ನ ಅಂಗ ಸೌಷ್ಠವ ಪ್ರದರ್ಶಿಸದೆ ಬದುಕಬಹುದು. ಇತ್ತೀಚೆಗೆ ವಿವಾಹಿತರಾದ ಮಹೇಂದ್ರ ಸಿಂಗ್ ಧೋನಿ ಯವರ ಪತ್ನಿ ತುಂಬು ತೋಳಿನ ( full sleeved) ಚೂಡಿದಾರ್ ಧರಿಸಿ ತಲೆಯ ಮೇಲೆ ದುಪಟ್ಟಾ ಹಾಕಿಕೊಂಡು ಅಭಿನಂದಿಸಲು ಬಂದ ಜನರನ್ನು ಸ್ವೀಕರಿಸಿದರು ಎಂದು ಯಾರೋ ಹೇಳಿದರು. ಇಲ್ಲಿ ಈ ನವವಿವಾಹಿತೆ ತನಗರಿವಿಲ್ಲದೆಯೇ ಇಸ್ಲಾಮೀ ಸಂಸ್ಕೃತಿಯ ಉಡುಗೆಗೆ ಮಾರು ಹೋಗಿರಬೇಕು.       

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಕೇಳಿದಳು ಯಾವುದರ ಬಗ್ಗೆ ಬರೆಯುತ್ತಿದ್ದೀರಿ ಎಂದು. ಯೂರೋಪಿನಲ್ಲಿ ಬುರ್ಖಾ ಬ್ಯಾನ್ ಮಾಡ್ತಾರಂತೆ, ಅದರ ಬಗ್ಗೆ ಬರೆಯುತ್ತಿದ್ದೇನೆ ಎಂದೆ. ಅರ್ಥವಾಗದೆ ಕೇಳಿದಳು, ಬುರ್ಖಾ ಬ್ಯಾನ್ ಮಾಡ್ತಾರ? ಏಕೆ? ಕಾರಣ ಏನು?

ಕಾರಣ ನನಗೂ ಗೊತ್ತಿಲ್ಲ. ಕೆಲವೊಮ್ಮೆ  ಸಿಂಪಲ್ ಪ್ರಶ್ನೆಗಳಿಗೆ ಸಿಂಪಲ್ ಉತ್ತರ not so simple.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ

ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು ದುಸ್ತರ, ದುರ್ಭರವಾದಾಗ ಯಾವ ಉಪದೇಶವೂ ಕೆಲಸಕ್ಕೆ ಬಾರದು. ಕೆಲವರು ವಿಷ ಸೇವಿಸಿ ಬದುಕಿಗೆ ಬೈ ಹೇಳಿದರೆ ಇನ್ನೂ ಕೆಲವರು ರೈಲು, ಹಗ್ಗ ಹೀಗೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಎತ್ತರದ ಬಂಡೆ ಅಥವಾ ಕಣಿವೆಯ ತುದಿಯ ಮೇಲಿನಿಂದ ಜಿಗಿದು ಪ್ರಾಣ ಕಳೆದು ಕೊಳ್ಳುತ್ತಾರೆ. ಇಂಥ “ಸಾವಿನ  ತಾಣ” ಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ನಿರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ಹತ್ತಾರು ವರ್ಷಗಳಿಂದ ದಿನ ಕಳೆಯುತ್ತಾನೆ. ಜನ ಕೆಳಕ್ಕೆ ಜಿಗಿದು ತಲೆ ಒಡೆದುಕೊಂಡು ಚೀರಿಡುತ್ತಾ ಸಾಯುವುದನ್ನು ನೋಡಿ ಆಸ್ವಾದಿಸಲು ಅಲ್ಲ. ಆತನ ಉದ್ದೇಶ ಬೇರೆಯೇ.

೮೪ ವರ್ಷ ಪ್ರಾಯದ ರಿಚೀ ಯಮನಿಗೆ ಪ್ರಿಯವಾದ ತಾಣಗಳಲ್ಲಿ ಕಾಲ ಕಳೆಯುತ್ತಾ ಯಮನ ಗಿರಾಕಿಗಳನ್ನು ತನ್ನೆಡೆ ಎಳೆದುಕೊಂಡು ಜೀವ ಉಳಿಸಿದ್ದು ಇದುವರೆಗೂ ಹೆಚ್ಚೂ ಕಡಿಮೆ ೧೬೦ ಜನರನ್ನು. ಯಮಧರ್ಮ ರಾಯನ ವ್ಯಾಪಾರ ಸಾವಾದರೆ ಈತನ ವ್ಯಾಪಾರ ಬದುಕಿನತ್ತ ಮತ್ತೊಂದು ನೋಟ ಹರಿಸಿ ಎರಡನೇ ಇನ್ನಿಂಗ್ಸ್ ಗೆ ಅವಕಾಶ ಮಾಡಿ ಕೊಡುವುದು. ಆಸ್ಟ್ರೇಲಿಯಾದ ಈ ಮಹಾತ್ಮ ತನ್ನ ೫೦ ವರ್ಷಗಳ ಈ “ಆತ್ಮ” ಸೇವೆಗೆ ತನ್ನನ್ನು ಮುಡಿಪಾಗಿರಿಸಿಕೊಂಡು ಸಮಾಜದ ಪ್ರಶಂಸೆಗೆ ಕಾರಣವಾಗಿರುವುದು ಅಚ್ಚರಿಯೇನಲ್ಲ ಅಲ್ಲವೇ? “the gap” ಎಂದು ಕರೆಯಲ್ಪಡುವ ಈ ಆತ್ಮಹತ್ಯೆಯ ಸ್ಪಾಟ್ ಇರುವುದು ಸಿಡ್ನಿ ಬಂದರು ಪ್ರದೇಶದಲ್ಲಿ. ಈ ಇಳಿ ಪ್ರಾಯದವನಿಗಾಗಿ ಯಮ ಅವನ ಮನೆ ತಡಕಾಡುತ್ತಿ ದ್ದರೆ ಈತ ಈ ದುರ್ಗಮ ಸ್ಥಳಕ್ಕೆ ಬಂದು ಜೀವನ ಶೂನ್ಯ ಎನ್ನುವವರಿಗೆ ಊರುಗೋಲಾಗಿ ನಿಲ್ಲುತ್ತಾನೆ. ಮೇಲೆ ಹೇಳಿದ ಕಣಿವೆಯ ತುದಿಗೆ ಬಂದು ಇನ್ನೇನು ಕೆಳಕ್ಕೆ ಹಾರಿ  ಪ್ರಾಣ ಕಳೆದುಕೊಳ್ಳ ಬೇಕು ಎನ್ನುವವರಿಗೆ ಇದ್ದಕ್ಕಿದ್ದಂತೆ ಅಶರೀರ ವಾಣಿಯಂತೆ ಸೌಮ್ಯವಾದ, ಸ್ನೇಹಮಯವಾದ ಸ್ವರ ಕೇಳಿಬರುತ್ತದೆ; “ಒಂದು ಲೋಟ ಚಹಾ ಗಾಗಿ ನನ್ನಲ್ಲಿಗೆ ಬರಬಾರದೇ?” ಇದೇ ಆ ವಾಣಿ. ಪಕ್ಕದ ಸಾಗರದ ಸೌಮ್ಯ ಅಲೆಗಳು ರಿಚಿ ಯ ಸೌಮ್ಯವಾದ ಮಾತುಗಳನ್ನ ಸಾಯ ಬೇಕೆನ್ನುವವರ ಕಿವಿಗಳನ್ನು ತಲುಪಿಸಿ ಒಂದು ಕ್ಷಣ ತಬ್ಬಿಬ್ಬಾಗಿಸುತ್ತದೆ.  ಸಾವಿನಂಗಡಿಯ ಹೊಸ್ತಿಲಿನಲ್ಲಿ ನಿಂತ ವ್ಯಕ್ತಿಗೆ ಮತ್ತೊಮ್ಮೆ ಇದೇ ವಾಣಿ ಕೇಳಿಬರುತ್ತದೆ. why dont you come and have a cup of tea? ಓಹ್, ಇದುವರೆಗೂ ಯಾರೂ ಕೇಳಿರಲಿಲ್ಲ ಹೀಗೆ. ರೈಲು ನಿಲ್ದಾಣಗಳಲ್ಲೂ, ಇತರೆ ಸಾರ್ವಜನಿಕ ಸ್ಥಳಗಳಲ್ಲೂ ತಲೆಯನ್ನು ಕೈಯ್ಯಲ್ಲಿ ಹೊತ್ತು ಗಳಗಳ ಅಳುತ್ತಾ ಕೂತರೂ, ವ್ಯವಹಾರದ ಮತ್ತು ಇನ್ನಿತರ ಕೆಲಸ ನಿಮಿತ್ತ ಗಡಿ ಬಿಡಿಯಲ್ಲಿ ಓಡಾಡುವ ಸಾವಿರಾರು ಜನರನ್ನು ತಾನು ದೀನ ನೋಟದಿಂದ ನೋಡಿದರೂ ಅಲಕ್ಷಿಸಿ ಮುನ್ನಡೆವ ಈ ಜಗತ್ತಿನಲ್ಲಿ ಈ ತೆರನಾದ ಕೋರಿಕೆ? why dont you come and have a cup of tea? ಒಂದು ಕಪ್ ಚಹಾಕ್ಕೆ ಯಾಕೆ ಬರಬಾರದು? ಈ ವಾಣಿ ಬಂದ ಕಡೆ ತಿರುಗಿ ನೋಡಿದಾಗ ಸ್ನೇಹಮಯಿ ನಿಂತಿದ್ದಾನೆ, ತನ್ನ ಸುಕ್ಕುಗಟ್ಟಿದ ಕೈಗಳ ತುಂಬಾ ಬದುಕಿನ ಭರವಸೆಗಳನ್ನು ಇಟ್ಟುಕೊಂಡು. ರಿಚಿಯ ನಿಷ್ಕಳಂಕ ಸುಕ್ಕಿಲ್ಲದ ನಗು ಅವರ ಕೈಗಳಿಂದ ಸಾವಿನ ಅಸ್ತ್ರ ಕಳೆದು ಕೊಳ್ಳುವಂತೆ ಮಾಡುತ್ತದೆ. ಹೌದು ಕೆಲವೊಮ್ಮೆ ಒಂದು ಸರಳ, ಸ್ವಚ್ಚ ನಗು ಮಾಂತ್ರಿಕ ಶಕ್ತಿಯನ್ನೂ ಹೊಂದಿರುತ್ತದೆ. ಎಮ್ಮೆಯ ಮೇಲೆ ಕೂತು ಮೀಸೆ ತಿರುವುತ್ತಾ ಆಸೆಗಣ್ಣುಗಳಿಂದ ಗಿರಾಕಿಯ ನಿರೀಕ್ಷೆಯಲ್ಲಿ ಜವರಾಯ ಕೂತಿದ್ದರೆ ತನ್ನ ಹಸಿರು ಬಣ್ಣದ ತೊಗಲು ಕುರ್ಚಿಯಲ್ಲಿ ರಿಚಿ ಕೂತಿರುತ್ತಾನೆ, ಗಾಳ ಹಿಡಿದು. ಬದುಕಿನ, ಭರವಸೆಯ, ನಿರೀಕ್ಷೆಗಳ, ಹೊಂಗನುಸುಗಳ ಗಾಳ ಹಿಡಿದು. ಆತ ಹೇಳುವುದು, “ಅವರನ್ನು ಉಳಿಸಲೇಬೇಕು, ಇದು ಸುಲಭ ಸಾಧ್ಯ” ಎಂದು.its pretty simple ಈತನ ಪಾಲಿಗೆ. ಅದು ನಿಜವೂ ಕೂಡಾ.

೧೮ ನೇ ಶತಮಾನದಿಂದ ಇಲ್ಲಿಗೆ ಬರುತ್ತಿದ್ದಾರಂತೆ ಜನರು ಸಾವನ್ನು ಅರಸುತ್ತಾ. ವಾರಕ್ಕೊಂದರಂತೆ ಸಾವನ್ನು ಕಾಣುತ್ತಿರುವ ಈ ಸ್ಥಳವನ್ನು ಜನರಿಂದ ದೂರ ಇಡಲು ಸರಕಾರ ದೊಡ್ಡ ಮೊತ್ತದ ಹಣವನ್ನೂ ವ್ಯಯಿಸುತ್ತಿದೆಯಂತೆ.

ಯಾರಾದರೂ ಈ ಸಾವಿನ ಕಣಿವೆಯ ತುದಿಗೆ ಬಂದು ನಿಂತರೂ ಹತ್ತಿರದಲ್ಲೇ ಇರುವ ತನ್ನ ಮನೆಯಿಂದ ಧಾವಿಸುವ ಈತ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಈತನ ನಯವಾದ ಮಾತಿಗೆ ಮರುಳಾಗಿ ತಮ್ಮ ಬದುಕಿಗೆ ಮತ್ತೊಮ್ಮೆ “ಹಾಯ್” ಹೇಳಲು ಮರಳಿದವರೂ ಇದ್ದಾರೆ. ಒಮ್ಮೆ ಊರುಗೋಲಿನ (crutches) ಸಹಾಯದಿಂದ ಬಂದ ವ್ಯಕ್ತಿ ಯೊಬ್ಬ ತುದಿಯಲ್ಲಿ ನಿಂತಿದ್ದನ್ನು ಕಂಡ ರಿಚಿ ಅಲ್ಲಿಗೆ ಧಾವಿಸುತ್ತಾನೆ, ಆದರೆ ಅವನು ಅಲ್ಲಿಗೆ ತಲುಪುವಷ್ಟರಲ್ಲಿ ಆ ವ್ಯಕ್ತಿ ತನ್ನ ಊರುಗೋಲನ್ನು ತನ್ನ ಬದುಕನ್ನು ದುಸ್ತರವಾಗಿಸಿದ ಲೋಕಕ್ಕೆ ಕಾಣಿಕೆಯಾಗಿ ಬಿಟ್ಟು ಪ್ರಪಾತಕ್ಕೆ ಜಿಗಿದಿರುತ್ತಾನೆ.        

ಈ ರೀತಿಯ ಸೇವೆ ರಿಚಿಗೆ ಇಳಿ ವಯಸ್ಸಿನಲ್ಲಿ ಸಿಕ್ಕಿದ್ದಲ್ಲ. ಯೌವ್ವನದಿಂದಲೇ ಈತ ಜನರನ್ನು ಸಾವಿನಂಚಿನಿಂದ ದೂರ ಇಡಲು ಪ್ರಯತ್ನಿಸುತ್ತಿದ್ದ. ಕೆಲವೊಮ್ಮೆ ಜನರನ್ನು ಅವರ ಅಂತ್ಯದಿಂದ ರಕ್ಷಿಸಲು ಹೋಗಿ ತನ್ನ ಜೀವವನ್ನೂ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ ಸಹ ಈ ಮಹಾತ್ಮ. ನೋವು, ಹಿಂಸೆ, ಅಸಮಾನತೆ ಕಂಡು ರೋಸಿದ ವಿಶ್ವಕ್ಕೆ ರಿಚಿ ಯಂಥ ವ್ಯಕ್ತಿಗಳು ಹೊಂಗಿರಣದಂತೆ ಕಂಗೊಳಿಸುತ್ತಾರೆ.