ಹಿಂದೂಸ್ಥಾನದ ವ್ಯಾಘ್ರ ‘ಟಿಪ್ಪು ಸುಲ್ತಾನ್’, ಒಂದು ಐತಿಹಾಸಿಕ ನೋಟ

Image

ಭಾರತ ಕಂಡ ಅತ್ಯಪೂರ್ವ ಮಾತ್ರವಲ್ಲ, ಏಕೈಕ ಸ್ವಾತಂತ್ರ್ಯ ವೀರ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬೆರಳೆಣಿಕೆಯಷ್ಟಿನ ಸೈನಿಕರನ್ನು ಕಟ್ಟಿಕೊಂಡು ಬ್ರಿಟಿಷರಿಗೆ ಶರಣಾಗದೆ ಹುತಾತ್ಮರಾದ ಅದ್ಭುತ ಚೇತನ ಟಿಪ್ಪು. ಈ ವೀರ, ರಾಜನಾದ ಮಾತ್ರಕ್ಕೆ ಇವರ ಆಡಳಿತದಲ್ಲಿ ಕೆಲವರು ಎಸಗಿರಬಹುದಾದ ಪ್ರಮಾದಗಳ ಕಾರಣ, ಭಾರತ ಮಾತೆಯನ್ನು ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡುಗಡೆ ಮಾಡಿಸಲು ಹೋರಾಡಿದ ಆ ಗುಣ ಇಂದಿನ ಜನರಿಗೆ ಬೇಡ. ಯಾವನೋ ಪರಂಗಿ ಇತಿಹಾಸಕಾರ ಟಿಪ್ಪು ಬಗ್ಗೆ ಬರೆದಿದ್ದನ್ನು ವೇದವಾಕ್ಯ ಎಂದು ನಂಬುತ್ತಾ, ಟಿಪ್ಪು ಸುಲ್ತಾನರ ಬಗ್ಗೆ ಇಲ್ಲ ಸಲ್ಲದ ಅಪವಾದ, ಅವಹೇಳನ ಮಾಡುತ್ತಾ, ಕಥೆ ಕಾದಂಬರಿ ಬರೆಯುತ್ತಾ ಜನರ ಮನಸಿನಲ್ಲಿ ಟಿಪ್ಪು ಒಬ್ಬ ಕ್ರೂರ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಖೇದಕರ. ಸ್ವಾತಂತ್ರ್ಯ ಕಲಿಗಳ ಬಗ್ಗೆ,, ಅವರ ತ್ಯಾಗದ ಬಗ್ಗೆ ಆದರ ಇಲ್ಲದಿದ್ದರೂ ಪರವಾಗಿಲ್ಲ, ಅನಾದಾರ ಬೇಡ. ಸ್ವಾತಂತ್ರ್ಯ ಕಲಿಗಳ ಸಾಹಸವನ್ನು ಅವಗಣನೆ ಮಾಡುವುದು ಸಲ್ಲದು. ಆದರೆ ಇದನ್ನು ಹೇಳುವುದಾದರೂ ಯಾರಿಗೆ? ಹೋಬಳಿ ಗಳನ್ನು ಆಳಿದ ಪಾಳೆಗಾರರ ಬಗ್ಗೆ ನಮಗೆ ಅತೀವ ಭಕ್ತಿ, ಅಭಿಮಾನ ಇದೆ. ಆದರೆ ಟಿಪ್ಪುವಿಗೆ ಮಾತ್ರ ಈ ಉಪಚಾರ ಅಲಭ್ಯ. ಟಿಪ್ಪು, ಕರುನಾಡಿನಲ್ಲಿ ಹುಟ್ಟಿದ ಕೆಚ್ಚೆದೆಯ ಕನ್ನಡಿಗ. ನಮ್ಮ, ನೆಲ, ಸಂಸ್ಕಾರ, ಜೀವನ ರೀತಿ, ಭಾಷೆ ಎಲ್ಲವನ್ನೂ ಕಲುಷಿತಗೊಳಿಸಲು ಬಂದ ಶತ್ರುವನ್ನು ಸದೆ ಬಡಿಯಲು ಟಿಪ್ಪೂ ನಡೆಸಿದ ಹರಸಾಹಸ ನಮಗೆ ಸ್ಮರಣೀಯವಾಗಬೇಕು. ಹಾಗೆ ಮಾಡದೆ ಕೃತಘ್ನ ಗುಣವನ್ನ ಮೆರೆಯೋ ನಾವು ದೇಶಪ್ರೇಮಿಗಳು.    

ಟಿಪ್ಪು ಮನಸ್ಸು ಮಾಡಿದ್ದರೆ, ಸ್ವಾರ್ಥಿಯಾಗಿದ್ದರೆ, ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡು, ಸಂಧಿ ಮಾಡಿಕೊಂಡು, ಜನ್ಮವೆತ್ತಿದ ನಾಡಿನಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತೇನೆ ಎಂದು ಬ್ರಿಟಿಷರಿಗೆ ಆಶ್ವಾಸನೆ ನೀಡಿದ್ದರೆ ಸುಲಭವಾಗಿ ಕಿರೀಟ ಉಳಿಸಿ ಕೊಳ್ಳಬಹುದಿತ್ತು . ಹಾಗೆ ಮಾಡದೆ ಸಾಧಾರಣ ಸೈನಿಕನಂತೆ ಹೋರಾಡಿ ವೀರ ಮರಣನ್ನಪ್ಪಿದ ಟಿಪ್ಪುವಿಗೆ ಅಪಮಾನ. ಬ್ರಿಟಿಷರೊಂದಿಗೆ ಸಂಬಂಧ ಬೆಳೆಸಿ ಕೊಂಡು, ಕಿರೀಟ ಸಿಕ್ಕಿಸಿಕೊಂಡು ಮೆರೆದವರಿಗೆ ಸಮ್ಮಾನ. ಅವರ ಬಗ್ಗೆ ನಮ್ಮ ನಾಡಿಗೆ ಅಭಿಮಾನ. ಟಿಪ್ಪುವಿನಂಥ ಕೆಚ್ಚೆದೆಯ ಕಲಿ ಬೇರೆ ದೇಶದಲ್ಲಿ ಬಾಳಿ ಬದುಕಿದ್ದರೆ ಆ ವ್ಯಕ್ತಿಯ ಬಗ್ಗೆ ಬರೆಯಲು, ಆ ಶೂರನನ್ನು ದಂತ ಕಥೆಯಾಗಿಸಲು ಪೈಪೋಟಿಯೇ ಏರ್ಪಡುತ್ತಿತ್ತು. ನಮ್ಮ ದೇಶದಲ್ಲೂ ನಡೆಯುತ್ತಿದೆ ಪೈಪೋಟಿ, ಟಿಪ್ಪು ಹೆಸರಿಗೆ, ಕೀರ್ತಿಗೆ ಹೇಗೆ ಕೆಸರೆರಚಿ ಹೆಸರು ಮಾಡಿಕೊಳ್ಳುವ ಪೈಪೋಟಿ.  

೧೭೫೦ ರಲ್ಲಿ ಹೈದರಲಿ – ಫಖ್ರುನ್ನಿಸ ದಂಪತಿಗಳಿಗೆ ಜನಿಸಿದ ಟಿಪ್ಪೂ ಬ್ರಿಟಿಷರ ವಿರುದ್ಧ ಹೋರಾಡಿದ ಅಮೋಘ ವೀರ, ಅಪ್ರತಿಮ ಶೂರ. ಸ್ವಾತಂತ್ರ್ಯದ ಪ್ರಪ್ರಥಮ ಕಹಳೆ ಝಳಪಿಸುವ ಟಿಪ್ಪೂ ಖಡ್ಗದ ಮೂಲಕ.  ಆರ್ಕಾಟ್ ಪ್ರದೇಶದ ಸೂಫಿ ಸಂತರ ಹೆಸರನ್ನು ತನ್ನ ಮಗನಿಗೆ ನಾಮಕರಣ ಮಾಡಿದ ಟಿಪ್ಪೂ ತಾಯಿ ತನ್ನ ಮಗನಲ್ಲಿ ಉದಾತ್ತ ಗುಣಗಳು ಮನೆಮಾಡುವಂತೆ ನೋಡಿಕೊಂಡರು. ಈ ಗುಣಗಳೇ ಟಿಪ್ಪು ತನ್ನ ಪ್ರಜೆಗಳ ಮನ್ನಣೆ, ಆದರ ಗೌರವ, ನಿಷ್ಠೆ ಗಳಿಸಿ ಕೊಳ್ಳಲು ನೆರವಾದವು.  

ತನ್ನಲ್ಲಿ ದೈವದತ್ತವಾಗಿ ಬಂದ ಸ್ಫೋಟಕ ಸ್ಥೈರ್ಯ, ಶೌರ್ಯದ ಕಾರಣ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಟಿಪ್ಪೂ, ಶತ್ರುವನ್ನು ಲೀಲಾಜಾಲವಾಗಿ ಮಣಿಸಿದ್ದರು. ಟಿಪ್ಪು ಕೇವಲ ೧೩ ನೆ ವಯಸ್ಸಿನಿಂದಲೇ ತಂದೆಯ ಗರಡಿಯಲ್ಲಿ ಪಳಗಿ ಅಪ್ರತಿಮೆ ಯೋಧ ಎನಿಸಿಕೊಂಡಿದ್ದರು. ಬೆನ್ನು ತಿರುಗಿಸಿ ಓಡಿ ಸಮಯ ಸಿಕ್ಕಾಗ ಬೇಟೆಯಾಡೋ ಕಲಿಗಳ ಪೈಕಿಯವರಾಗಿರಲಿಲ್ಲ ಟಿಪ್ಪು. ರಣರಂಗದಲ್ಲಿ ಟಿಪ್ಪು ಹೋರಾಡುವ ಪರಿ, ಅವರ ಪಾದರಸದಂಥ, ಮಿಂಚಿನ ಚಲವಲನ ಕಂಡ ಶತ್ರು ಹೇಳುತ್ತಿದ್ದು ಯಾವ ದಿಕ್ಕಿನಲ್ಲ್ಲಿ ತಿರುಗಿದರೂ ನಮಗೆ ಟಿಪ್ಪುವೇ ಕಾಣುತ್ತಿದ್ದುದು ಎಂದು. ಟಿಪ್ಪುವಿನ ಶೌರ್ಯ ಸಾಹಸ, ರಣನೀತಿಗಳಿಂದ ನಾಡಿನೊಳಗಿನ ಶತ್ರುಗಳೂ, ಲಂಡನ್ನಿನಲ್ಲಿ ಕೂತ ಪರಂಗಿಗಳೂ ಭಯದಿಂದ ಹೆಪ್ಪುಗಟ್ಟುತ್ತಿದ್ದರು.  

ಟಿಪ್ಪು ಹುತಾತ್ಮರಾಗಿ ಬಿದ್ದಿದ್ದರೂ ಅವರು ಸತ್ತಿರಲಿಕ್ಕಿಲ್ಲ ಎಂದು ಅತೀ ಸಮೀಪದಿಂದ ಮತ್ತಷ್ಟು ಗುಂಡುಹಾರಿಸಿ ಟಿಪ್ಪು ಹತರಾದರು ಎಂದು ಖಾತರಿ ಪಡಿಸಿ ಕೊಂಡ ನಂತರವೇ ಬ್ರಿಟಿಶ್ ಸೇನೆ ಅವರ ಪಾರ್ಥಿವ ಶರೀರದ ಹತ್ತಿರ ಬರಲು ಧೈರ್ಯ ತೋರಿಸಿದ್ದು. ಖಡ್ಗದ ಹಿಡಿತ ಬಿಡದೆ, ರಕ್ತದ ಮಡುವಿನಲ್ಲಿ ಟಿಪ್ಪು ಹತರಾಗಿ ಬಿದ್ದ ಆ ಸ್ಥಳಕ್ಕೆ ಧಾವಿಸಿ ಬಂದ ಬ್ರಿಟಿಶ್ ಸೈನಿಕನೊಬ್ಬ ಟಿಪ್ಪೂರವರ ಕೈಯ್ಯಲ್ಲಿದ್ದ ಭಾರೀ ಖಡ್ಗ ವನ್ನು ತನ್ನ ಕೈಯ್ಯಲ್ಲಿ ತೆಗೆದು ಕೊಂಡು ಹೇಳಿದ್ದು, ಈ ಅಪ್ರತಿಮ ವೀರನ ಖಡ್ಗ ನನ್ನ ಕೈಯಲ್ಲಿ ಸೇರಿದ್ದು ನನಗೆ ಅತೀವ ಹೆಮ್ಮೆ ತೋರುತ್ತಿದೆ, ಎಂದು ಕಣ್ಣೀರು ಹಾಕುತ್ತಾನೆ. ಟಿಪ್ಪುವಿಗೆ ಸಲ್ಲಬೇಕಾದ ಗೌರವಾರ್ಹ, ಮಿಲಿಟರಿ ಶವಸಂಸ್ಕಾರ ಬ್ರಿಟಿಶ್ ಸೇನೆ ಮಾಡುತ್ತದೆ. ಕರ್ನಲ್ ವೆಲ್ಲೆಸ್ಲಿ ಟಿಪ್ಪೂ ಸುಲ್ತಾನರ ಶೌರ್ಯಕ್ಕೆ ಮೆಚ್ಚಿ ಅವರ ಸ್ಮರಣಾಥ ಮಡಿದ ಸ್ಥಳದಲ್ಲಿ ಒಂದು ಸ್ಮಾರಕ ನಿರ್ಮಿಸುತ್ತಾನೆ. ಶತ್ರುವಿಗೆ ಇರುವ ಅಂತಃಕರಣ ದೇಶವಾಸಿಗೆ ಇಲ್ಲದೆ ಹೋಯಿತು.                

ಈ ಮಹಾನ್ ಚೇತನದ ಬಗ್ಗೆ ಬರೆಯುವ ಸುದೈವ ನನಗೆ ಒದಗಿ ಬಂದಿದ್ದನ್ನು ನೋಡಿ ಸಂತಸವಾಗುತ್ತಿದ್ದರೂ, ಬರಹದ ಉದ್ದೇಶ ಟಿಪ್ಪೂ ಬಗೆಗಿನ ಅಪವಾದ ನೀಗಿಸುವ ಅವಶ್ಯಕತ ಎನ್ನುವ ಅರಿವು ನನ್ನಲ್ಲಿ ಖೇದವನ್ನೂ ಉಂಟು ಮಾಡುತ್ತಿದ್ದೆ. ಟಿಪ್ಪು ಈ ನಾಡಿಗೆ ಸಂದ ಸೌಭಾಗ್ಯ. ಯಾವುದೇ ದೇಶವೂ ಹೆಮ್ಮೆ ಪಡಬಹುದಾದ ಒಬ್ಬ ಸ್ವಾತಂತ್ರ್ಯ ಯೋಧ. ಅಮೆರಿಕೆಯ ಜಾರ್ಜ್ ವಾಷಿಂಗ್ಟನ್, ಫ್ರಾನ್ಸ್ ನ ನೆಪೋಲಿಯನ್ ರಂಥ ಮಹನೀಯರ ಸಮಕಾಲೀನರಾಗಿದ್ದ ಟಿಪ್ಪುವಿಗೆ ಈ ಮಹನೀಯರುಗಳಿಗೆ ಅವರ ದೇಶಗಳು ತೋರಿದ ಕೃತಜ್ಞತಾ ಭಾವ ದಕ್ಕದೆ ಹೋದುದು ನಮಗೆ ನಾವೇ ಮಾಡಿ ಕೊಂಡ ಅವಮಾನ.  

ಟಿಪ್ಪು ಸುಲ್ತಾನ್ ರನ್ನು ಹಿಂದೂ ವಿರೋಧೀ ಎಂದು ಅಪಪ್ರಚಾರ ಮಾಡುವ ಜನರಿಗೆ ಶೃಂಗೇರಿ ಆಚಾರ್ಯ ರೊಂದಿಗೆ ಟಿಪ್ಪು ನಡೆಸಿದ ೩೦ ಪತ್ರಗಳ ಸಂವಾದ, ವಿವರಣೆ ಯನ್ನು ಸರಕಾರ, ಮತ್ತು ಶೃಂಗೇರಿ ಮಠ ಕೊಟ್ಟು ಟಿಪ್ಪೂ ರವರ ಬಗ್ಗೆ ಇಲ್ಲಸಲ್ಲದ ನ್ನು ಬರೆದು ದಿಢೀರ್ ಹೆಸರುವಾಸಿಯಾಗಲು ಪ್ರಯತ್ನಿಸುತ್ತಿರುವ ಇತಿಹಾಸ್ಯಕಾರರು, ಮತ್ತು ‘ಪತ್ರಕರ್ತ’ ಇತಿಹಾಸ್ಯಕಾರರ ಪ್ರಯತ್ನಗಳನ್ನು ಕೊನೆಗಾಣಿಸಬೇಕು.

ಶೃಂಗೇರಿಯ ಶಾರದ ಮಾತೆಯ ಪೀಠದ ಮೇಲೆ ಉಗ್ರ ಧಾಳಿ ನಡೆಸಿದ ಮರಾಠ ಸೇನೆ ಮತ್ತು ಅದರ ಸೇನಾ ನಾಯಕ ತೋರಿದ ಕ್ರೌರ್ಯಕ್ಕೆ ಟಿಪ್ಪು ಬೆಚ್ಚಿ ಬಿದ್ದಿದ್ದರು. ಶಾರದಾ ಮಾತೆಯ ವಿಗ್ರಹಗಳನ್ನು ಬೀದಿಗೆಸೆದು, ಅಲ್ಲಿನ ಅರ್ಚಕರನ್ನು ಕೊಂದು, ಅಟ್ಟಹಾಸಗೈದ ಮರಾಠರ ಕ್ರೌರ್ಯ ಕಂಡು ಶೃಂಗೇರಿ ನಲುಗಿತು. ಒಂದು ಪವಿತ್ರ ಕ್ಷೇತ್ರದ ಮೇಲೆ ಧಾಳಿ ಮಾಡಿದ್ದ ಮರಾಠರ ವಿರುದ್ಧ ಅಲ್ಲಿನ ಆಚಾರ್ಯು ಮೊರೆ ಹೋಗಿದ್ದು ಟಿಪ್ಪುವಿನಲ್ಲಿಗೆ. ಆಚಾರ್ಯರು ಟಿಪ್ಪುವಿನ ಸಹಾಯ ಯಾಚಿಸಿದ ಸುದ್ದಿ ತಿಳಿದ ಮರಾಠರು ಟಿಪ್ಪು ರವರ ಶಕ್ತಿ ಸಾಮರ್ಥ್ಯಕ್ಕೆ ಹೆದರಿ ಶೃಂಗೇರಿಯಿಂದ ಕಾಲು ಕೀಳುತ್ತಾರೆ. ಮರಾಠರಿಂದ ದಾಳಿಗೀಡಾದ ಮಠದ ದುರಸ್ತಿಗೆ ಟಿಪ್ಪು ಸುಲ್ತಾನ್ ಉದಾರವಾಗಿ ಧನಸಹಾಯ ಮಾಡುತ್ತಾರೆ. ಕೆಲ ಸಮಯದ ನಂತರ ಮರಾಠ ದಾಳಿಯ ನೇತೃತ್ವ ವಹಿಸಿದ್ದ ರಘುನಾಥ ರಾವ್ ಮಠದೊಂದಿಗೆ ಸಂಬಂಧ ಬೆಳೆಸಲು ತಾನಿರುವಲ್ಲಿಗೆ ಆಚಾರ್ಯರನ್ನು ಕರೆಸುತ್ತಾನೆ. ತನ್ನ ಕಡು ಶತ್ರು ಮರಾಠ ರೊಂದಿಗೆ ಸಂಬಂಧ ಬೆಳೆಸಲು ಹೋಗುವ ಆಚಾರ್ಯರಿಗೆ ಅವರು ಹೋಗುವ ಹಾದಿಯಲ್ಲಿ ಯಾವ ತೊಂದರೆಯೂ ಆಗಂತೆ ಎಲ್ಲಾ ಸಜ್ಜೀಕರಣದ ವ್ಯವಸ್ಥೆ ಮಾಡುವುದು ಮಾತ್ರವಲ್ಲದೆ ಆಚಾರ್ಯ ಹಿಂತಿರುಗಿ ಬರುವುದು ತಡವಾದಾಗ ಅದರ ಕುರಿತು ಆತಂಕಿತರಾಗಿ ವಿಚಾರಿಸುತ್ತಾರೆ ಟಿಪ್ಪು.

ಟಿಪ್ಪು ಹೇಳುತ್ತಿದ್ದುದು, ನನಗಿರುವುದು ದೇವರ ದಯೆ, ಆಚಾರ್ಯರ ಆಶೀರ್ವಾದ, ಮತ್ತು ನನ್ನ ಶಸ್ತ್ರ ಭಂಡಾರ. ಟಿಪ್ಪು ಮತ್ತು ಶಾರದಾ ಪೀಠದ ಆಚಾರ್ಯರ  ನಡುವೆ ೩೦ ಪತ್ರಗಳ ಸಂವಾದ ಸಹ ನಡೆಯುತ್ತದೆ.  

ಟಿಪ್ಪು ಸೈನ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದುದು ಹಿಂದೂಗಳು. ಟಿಪ್ಪೂ ಸುಲ್ತಾನರ ಪ್ರಧಾನಿ ಪೂರ್ಣಯ್ಯ, ಓರ್ವ ಬ್ರಾಹ್ಮಣ. ಕಂದಾಯ ಮಂತ್ರಿ ಕೃಷ್ಣ ರಾವ್, ಮತ್ತೊಬ್ಬ ಬ್ರಾಹ್ಮಣ. ಸೇನಾ ದಂಡನಾಯಕ ಶ್ರೀನಿವಾಸ ರಾವ್.  ಶ್ರೀರಂಗ ಪಟ್ಟಣದ ಶ್ರೀ ರಂಗನಾಥನ ದೇಗುಲ, ಕಲ್ಲಾಳದ ಲಕ್ಷ್ಮಿಕಾಂತ ದೇವಾಲಯ, ಮೇಲುಕೋಟೆಯ ನಾರಾಯಣ ಸ್ವಾಮೀ ಮಂದಿರಗಳನ್ನೂ  ಸೇರಿಸಿ ೧೫೦ ಕ್ಕೂ ಹೆಚ್ಚು ಹಿಂದೂ ದೇವಾಯಗಳಿಗೆ ಉದಾರ ಧನಸಹಾಯ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ‘ಹಕೀಂ ನಂಜುಂಡ’ ಎನ್ನುವ ಲಿಂಗವನ್ನು ಟಿಪ್ಪು ಕೊಟ್ಟಿದ್ದಂತೆ.

ಶ್ರೀರಂಗ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಕೆರೆ ತೊನ್ನೂರುಎನ್ನುವ ಗ್ರಾಮದಲ್ಲಿ ೧೨ ನೆ ಶತಮಾನದ ಕೆಲವು ದೇವಾಲಯಗಳಿವೆ. ಈ ದೇವಾಲಯಗಳಿಗೆ ಟಿಪ್ಪು ಭೇಟಿ ನೀಡಿದ್ದರಂತೆ.  

ಟಿಪ್ಪು ಸುಲ್ತಾನರ ಬದುಕಿನ ಧ್ಯೇಯ ತನ್ನ ನಾಡಿನ ಜನ ಸುಭಿಕ್ಷರನ್ನಾಗಿಸೋದು ಮಾತ್ರವಲ್ಲ ಅವರನ್ನು ಗುಲಾಮಗಿರಿಯ ಸಂಕೋಲೆಗಳಿಂದ ದೂರ ಇಡುವುದೇ ಆಗಿತ್ತು. ಪಟ್ಟ ಭದ್ರ ಮತ್ತು ಪುರೋಹಿತಶಾಹಿ ಶಕ್ತಿಗಳ ಕೈಗಳಿಂದ ಜಮೀನನ್ನು ನಿರ್ಗತಿಕರಿಗೆ, ಬಡವರಿಗೆ ನೀಡಿ ಸಮಾಜಿಕ ಸುಧಾರಣೆಯ ಅಡಿಗಲ್ಲನ್ನು ಹಾಕಿದರು ಟಿಪ್ಪು. ಇದನ್ನೇ ಇಂದಿರಾ ಗಾಂಧೀ ಅನುಕರಿಸಿದ್ದು ಉಳುವವನೇ ಹೊಲದೊಡೆಯ ನೀತಿಯ ಮೂಲಕ. ಬಹುಶಃ ಜಮೀನನ್ನು ಕಸಿದುಕೊಂಡು ಬಡವರಿಗೆ, ನಿರ್ಗತಿಕರಿಗೆ ಟಿಪ್ಪು ಹಂಚಿದ್ದು ನುಂಗಲಾರದ ತುತ್ತಾಗಿರಬಹುದೇ? ಫ್ರಾನ್ಸ್ ದೇಶದಿಂದ ಬಂದ ಯಾತ್ರಿಕರು ಮೈಸೂರು ಸಂಸ್ಥಾನದ ಪ್ರಗತಿ, ಬೆಳವಣಿಗೆ ಕಂಡು ವಿಸ್ಮಿತರಾಗಿದ್ದರು.  

ಟಿಪ್ಪು ಸುಲ್ತಾನರ ವಿರುದ್ಧ ಹೋರಾಡಿದ್ದ ಬ್ರಿಟಿಶ್ ಸೈನಿಕರಾದ ಕಿರ್ಕ್ ಪಾಟ್ರಿಕ್, ವಿಲ್ಕ್ಸ್ ಮುಂತಾದವರು ಯುದ್ಧ ಮುಗಿದ ಕೂಡಲೇ ಇತಿಹಾಸಕಾರರಾಗಿ ತಮಗೆ, ತಮ್ಮ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿದ್ದ ವ್ಯಕ್ತಿಯನ್ನು ತಮಗೆ ತೋಚಿದ ರೀತಿಯಲ್ಲಿ ಬಿಂಬಿಸಿ ಬರೆದರು. ಟಿಪ್ಪುವನ್ನು ಮತಾಂಧ, ಕ್ರೂರ ಎಂದು ಚಿತ್ರೀಕರಿಸಿದರು. ನಮ್ಮ ನೆಲ, ಜಲವನ್ನು, ಖನಿಜ ಸಂಪತ್ತನ್ನು ಡೊಗ್ಗು ಸಲಾಮು ಹಾಕಿ ಬ್ರಿಟಿಷರಿಗೆ ಅರ್ಪಿಸದೆ ಸವಾಲೆಸೆದು, ಅವರನ್ನು ದೇಶದಿಂದ ಹೊರಗಟ್ಟಲು ತೋರಿಸಿದ ಕೆಚ್ಚು ಇವರ ಲೆಕ್ಕಾಚಾರದಲ್ಲಿ ಟಿಪ್ಪು ತೋರಿಸಿದ ಕ್ರೌರ್ಯ.

ನರಬಲಿ, ಮದ್ಯಸೇವನೆ ನಿಷೇಧ, ಗಾಂಜಾ ಕೃಷಿಯ ಮೇಲಿನ ನಿರ್ಬಂಧ, ವೇಶ್ಯಾವಾಟಿಕೆಯ ನಿರ್ಮೂಲನ…..ಮುಂತಾದ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು ಟಿಪ್ಪು. ಊಹಿಸಿ ನೋಡಿ,, ಇಷ್ಟಲ್ಲಾ ಕಾರ್ಯಗಳನ್ನು ಮರಾಠ, ನಿಜಾಮರ ಜೊತೆಗೂಡಿ ನಮ್ಮ ನಾಡನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರ ಉಪಟಳದ ನಡುವೆ ಟಿಪ್ಪು ಹೇಗೆ ಮಾಡಿರಬಹುದು ಎಂದು. 

ಬ್ರಿಟಿಷರೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದ ಜನರ ವಿರುದ್ಧ ಹೋರಾಡಲು ಟಿಪ್ಪು ಹಿಂದೆ ಮುಂದೆ ನೋಡಲಿಲ್ಲ. ಜಾತಿ ಧರ್ಮ ನೋಡಲಿಲ್ಲ. ತನ್ನದೇ ಧರ್ಮೀಯರಾದ ಕೇರಳದ ಮಾಪಿಳ್ಳೆ, ಮತ್ತು ನಿಜಾಮರ ವಿರುದ್ಧವೂ ಟಿಪ್ಪು ಸೆಣಸಿದ್ದರು. ಕರ್ನೂಲಿನ ನಾವಾಬರನ್ನೂ ಬಿಡಲಿಲ್ಲ ಟಿಪ್ಪು. ತಮ್ಮ ಕುತಂತ್ರಗಳಿಂದ ಮರಾಠರು ಮತ್ತು ನಿಜಾಮರ ಸಹಾಯ ಟಿಪ್ಪುವಿಗೆ ಸಿಗದಂತೆ ಮಾಡಿದ ಬ್ರಿಟಿಷರು ದೇಶ ಕಬಳಿಸುವ ತಮ್ಮ ಕೆಲಸ ಸುಗಮವಾಗುವಂತೆ ನೋಡಿಕೊಂಡರು.

ಆತ್ಮಾಭಿಮಾನಿ ಟಿಪ್ಪು ನಾಡಿನೊಳಗಿನ ಜನರ ಸಹಕಾರದ ಕಾರಣ ಬ್ರಿಟಿಶ್ ಶತ್ರು ತನ್ನ ನಾಡನ್ನು ಆಕ್ರಮಿಸುವುದನ್ನ ಕಾಣಲಾರದೆ ದೂರದ ದೇಶಗಳ ಮೊರೆ, ಸಹಕಾರ ಯಾಚಿಸಬೇಕಾಯಿತು. ತುರ್ಕಿ, ಇರಾನ, ಇರಾಕ್, ಇಟಲಿ, ಫ್ರಾನ್ಸ್ ದೇಶಗಳ ಸಹಕಾರ ಬೇಡಿದ ಟಿಪ್ಪುವಿಗೆ ಈ ಸಹಾಯ ಸಿಕ್ಕಿದ್ದರೆ ಭಾರತದ ಚರಿತ್ರೆಯೇ ಬೇರೆಯಾಗುತ್ತಿತ್ತು. ಕೇವಲ ನಾಲ್ಕೈದು ಸಾವಿರ ಫ್ರೆಂಚ್ ಸೈನಿಕರ ಸಹಾಯ ಸಿಕ್ಕಿದ್ದರೂ ಬ್ರಿಟಿಶ್ ಸೂರ್ಯ ನಿರಾಯಾಸವಾಗಿ ಅಸ್ತಂಗತವಾಗಿ ಬಿಡುತ್ತಿತ್ತು. ನಾಲ್ಕನೇ ಮೈಸೂರು ಯುದ್ಧದ ಗತಿಯೇ ಬದಲಾಗುತ್ತಿತ್ತು. ಮಹಾತ್ಮಾ ಗಾಂಧಿ, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಂಥ ಸ್ವಾತಂತ್ರ್ಯ ಹೋರಾಟಗಾರರ ಅವಶ್ಯಕತೆ ಬರುತ್ತಿರಲಿಲ್ಲ ಈ ನಾಡನ್ನು ಗುಲಾಮ ಗಿರಿಯಿಂದ ಮುಕ್ತಗೊಳಿಸಲು.           

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪೂ ರೀತಿಯ ಮುಸ್ಲಿಂ ಬಾಂಧವರ ಪಾಲು ಹಿರಿದು. ಬ್ರಿಟಿಷರನ್ನು ನಾಡಿನಿಂದ ಓಡಿಸಲು ರಹಸ್ಯ ರೇಷ್ಮೆ ಪತ್ರ ಗಳ ಮೂಲಕ ಕಾರ್ಯಾಚರಣೆ ಮಾಡಿದ ದೇವೊಬಂದ್ ಮೌಲ್ವಿಗಳ ಬಗ್ಗೆ ನಮ್ಮ ದೇಶದ ಜನರಿಗೆ ಅರಿವಿಲ್ಲ. ಬ್ರಿಟಿಷರನ್ನು ನಾಡಿನಿಂದ ಓಡಿಸಲು ಟಿಪ್ಪೂ ರಂತೆಯೇ ಈ ಮೌಲ್ವಿಗಳೂ ಸಹ ಪರದೇಶಗಳ ಸಹಾಯ ಯಾಚಿಸಿದ್ದರು. ಹಾಗೆಯೇ ಭಾರತದ ತ್ರಿವರ್ಣ ಧ್ವಜವನ್ನು ರಚಿಸಿದ ಮುಸ್ಲಿಂ ಮಹಿಳೆಯ ಪರಿಚಯ ಉಂಟೆ ನಮಗೆ? ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಬಹಳಷ್ಟು ಹೊರಾಡಿದ್ದಾನೆ. ಅವನಿಗೆ ಕೀರುತಿಯ, ಮೂರುತಿಯ ಅವಶ್ಯಕತೆಯೂ ಇಲ್ಲ. ಎಲ್ಲಾದರೂ ಕೇಳಿದ್ದೀರಾ, ಮುಸ್ಲಿಮರು ತಮ್ಮ ಧರ್ಮಕ್ಕೆ ಸೇರಿದ ವೀರರ ಪ್ರತಿಮೆ ಸ್ಥಾಪಿಸಲು ಮಾಡಿದ ಮನವಿ ಬಗ್ಗೆ? ರಸ್ತೆ ಬೀದಿ ಗಳಿಗೆ ನಮ್ಮ ಮಹನೀಯರ ನಾಮಕರಣ ಮಾಡಿ ಎಂದು ಬೇಡಿಕೆ ಇಟ್ಟ ಬಗ್ಗೆ?

ನಾಡಿನ ಇತಿಹಾಸಕಾರೊಂದಿಗೆ, ನಾನೂ ಇತಿಹಾಸ್ಯಕಾರ ಎನ್ನುವ ಭ್ರಮೆಯಲ್ಲಿರುವ ಪತ್ರಕರ್ತರಲ್ಲಿ ನನ್ನ ಮನವಿ. ನಮ್ಮ ಸಂಸ್ಕಾರ, ಹಿಂದೂ ಮತ್ತು ಮುಸ್ಲಿಂ, ಜ್ಞಾನ ಮತ್ತು ಜ್ಞಾನಾರ್ಜನೆಯನ್ನು ಒಂದು ಆರಾಧನೆಯನ್ನಾಗಿ ಪರಿಗಣಿಸುತ್ತವೆ. ಅದೇ ಕಾರಣಕ್ಕಾಗಿ ಸರಸ್ವತೀ ದೇವಿಯನ್ನು ವಿದ್ಯಾ ದೇವಿಯನ್ನಾಗಿ ಕಾಣಲಾಗುತ್ತದೆ.  ನಮ್ಮಲ್ಲಿ ಮನೆ ಮಾಡಿಕೊಂಡ ಪೂರ್ವಾಗ್ರಹ ಪೀಡಿತ ವಿಚಾರಗಳು, ಹಗೆ, ಪ್ರಶಸ್ತಿಗಾಗಿ ರಾಜಕೀಯ ಪಕ್ಷಗಳನ್ನ ಸಂಪ್ರೀತಗೊಳಿಸಲು ಮುಗ್ಧ ಜನರನ್ನು ದಾರಿ ತಪ್ಪಿಸುವ ಕಾರ್ಯ, ಇವು ‘ಸರಸ್ವತೀ ಸಮ್ಮಾನ’ವಲ್ಲ. ಇದು ಸರಸ್ವತೀ ವಂದನೆ ಯಂತೂ ಖಂಡಿತಾ ಅಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವ ನಾಣ್ಣುಡಿ ಯ ಹಿಂದಿನ ಉದ್ದೇಶ ಅರ್ಥ, ಸಂಬಂಧ, ಬಾಂಧವ್ಯ ನಿರ್ಮಿಸಲು ಸುಳ್ಳನ್ನು ಬೇಕಾದರೂ ಹೇಳಬೇಕು ಎಂದು. ಆದರೆ ಸಾವಿರ ಸುಳ್ಳನ್ನು ಹೆಣೆದು ಶಾಂತಿ ಸೌಹಾರ್ದ ಹದಗೆಡಿಸುವ, ದೊಂಬಿ ಎಬ್ಬಿಸುವ ಪರಿಪಾಠ ನಮ್ಮ ಸಂಸ್ಕಾರಕ್ಕೆ ಹೇಳಿಸಿದ್ದಲ್ಲ. ಟಿಪ್ಪುವಿನೊಂದಿಗೆ ಹೋರಾಡಿದ್ದು ಮುಸ್ಲಿಂ ಸೈನಿಕರು ಮಾತ್ರವಲ್ಲ ಅದರಲ್ಲಿ ಬಹುಪಾಲು ಹಿಂದೂಗಳೂ ಇದ್ದರು. ಧರ್ಮಾಂಧತೆಯ ಸೊಂಕಿಲ್ಲದ, ಟಿಪ್ಪುವಿಗೆ ಸ್ವಾಮೀ ನಿಷ್ಠೆ ಪ್ರದರ್ಶಿಸಿದ ಈ ಯೋಧರಿಗೆ ನಾವು ಮಾಡುವ ಅವಮಾನ ಟಿಪ್ಪು ದೇಶ ಭಕ್ತಿಯನ್ನು ಪ್ರಶ್ನಿಸುವುದು.   ದೇಶ ಭಕ್ತ ಯಾವುದೇ ಧರ್ಮೀಯನಾಗಿರಲಿ ಅವನು ಭಾರತೀಯ ಎನ್ನುವುದನ್ನು ಮರೆಯದಿರಿ. ಹಿಂದೂಸ್ಥಾನವು ಎಂದೂ ಕಾಣದ, ಭಾರತ ರತ್ನ ಟಿಪ್ಪು ಮತ್ತು ಅವರಂಥ ಕಲಿಗಳಿಗೆ ಅಪಮಾನ ಎಸಗಬೇಡಿ.

“ಇನ್ನೂರು ವರ್ಷ ಕುರಿಗಳ ಥರ ಬಾಳುವುದಕ್ಕಿಂತ, ಎರಡು ದಿನಗಳ ಹುಲಿಯ ಬದುಕೇ ಶ್ರೇಷ್ಠ”.

ಟಿಪ್ಪೂ ಸುಲ್ತಾನರ ಮೇಲಿನ ನುಡಿಗಳು ನಮ್ಮ ಮನಃಪಟಲದಲ್ಲಿ ಮಾಸದೆ ಇದ್ದಿದ್ದರೆ, ಟಿಪ್ಪುವಿನಂಥ ದೇಶಭಕ್ತರನ್ನು ಆದರಿಸಿದ್ದರೆ  ದೇಶ ಇಂದು ವಿದೇಶೀಗಳ ಹಂಗಿನಲ್ಲಿ ಇರುತ್ತಿರಲಿಲ್ಲ. ಕಾಶ್ಮೀರದ ಒಂದು ತುಣುಕನ್ನು ಕಳೆದು ಕೊಂಡಿದ್ದರಿಂದ ಹಿಡಿದು, ಚೀನಾಕ್ಕೆ ೩೮ ಸಾವಿರ ಚದರ ಕಿಲೋ ಮೀಟರುಗಳ ಪವಿತ್ರ ಸ್ಥಳವನ್ನೂ ಬಿಟ್ಟು ಕೊಟ್ಟು, ಕೊನೆಗೆ ಅಮೆರಿಕೆಯಲ್ಲಿನ ನಮ್ಮ ರಾಜತಂತ್ರಜ್ಞೆ ದೇವಯಾನಿಯ ಮುಖ ಭಂಗದವರೆಗೆ, ನಮಗೆ ಕಾಣಸಿಗುವ ಕಾರಣ ನಮ್ಮಲ್ಲಿನ ಕೆಚ್ಚಿನ ಕೊರತೆ. ಅಭಿಮಾನಶೂನ್ಯತೆ.  

ಸ್ಕಾಟ್ಲೆಂಡ್ ದೇಶದ ಸುಪ್ರಸಿದ್ಧ ಕವಿ ಸರ್. ವಾಲ್ಟರ್ ಸ್ಕಾಟ್, ನೆಪೋಲಿಯನ್ ಬೋನಪಾರ್ಟೆ ಬಗ್ಗೆ ಬರೆಯುತ್ತಾ, ಹೈದರಾಲಿಯಲ್ಲಿ ಕಾಣಲು ಸಿಕ್ಕಿದ್ದ ರಾಜಕೀಯ ದೂರದೃಷ್ಟಿ ಮತ್ತು ವಿಶಾಲ ಮನೋಭಾವ ನೆಪೋಲಿಯನ್ ನಲ್ಲಿ ಇಲ್ಲದಿದ್ದರೂ, ರಣರಂಗದಲ್ಲಿ ಟಿಪ್ಪು ತೋರಿದ್ದ ಛಲ, ಮತ್ತು ಪರಾಕ್ರಮ ಮತ್ತು ಅಂತಿಮ ಹೋರಾಟದಲ್ಲಿ ನಿಜವಾದ ಗಂಡಿನಂತೆ ಕೈಯಲ್ಲಿನ ಖಡ್ಗ ವನ್ನು ಮುಷ್ಟಿಯಲ್ಲೇ ಇರಿಸಿ ಟಿಪ್ಪು ಸಾವನ್ನಪ್ಪಿದ ರೀತಿ ನೆಪೋಲಿಯನ್ ಧೈರ್ಯ ತೋರಿಸಿದ್ದ ಎಂದು ಮುಕ್ತ ಕಂಠ ದಿಂದ ಟಿಪ್ಪುವನ್ನು ಹೊಗಳುತ್ತಾನೆ. ಕನ್ನಡ ನಾಡಿನ ಇತಿಹಾಸಕಾರ ಮಾಡಬೇಕಾದ ಕೆಲಸವನ್ನ ದೂರದ ಸ್ಕಾಟ್ಲೆಂಡಿನ ಮುತ್ಸದ್ದಿಯೊಬ್ಬ ಮಾಡುತ್ತಾನೆ.

ಚಿತ್ರ ಕೃಪೆ: http://www.sacredartindia.com

 

ಜೈಪುರ ಸಾಹಿತ್ಯ ಮೇಳ

• ಜೈಪುರ ಸಾಹಿತ್ಯ ಮೇಳ ಪ್ರಸಿದ್ಧಿ ಪಡೆದ ಸಾಹಿತ್ಯಾಸಕ್ತರ ಕೂಟ. ಇಲ್ಲಿ ವಿಶ್ವಾದಾದ್ಯಂತ ಪ್ರಕಾಶಿತವಾದ ಪುಸ್ತಕಗಳ ಅಮೋಘ ಸುಗ್ಗಿ ಮತ್ತು ಹೆಸರಾಂತ ಲೇಖಕರ ಸಮ್ಮಿಲನ. ಪುಸ್ತಕಗಳ Cannes ಎಂದು ಹೇಳಬಹುದು. ಸಾಮಾನ್ಯವಾಗಿ ಇಂಥ ಪುಸ್ತಕ ಮೇಳಗಳು ನೀರಸವಾಗಿ ಶುರುವಾಗಿ ಅಷ್ಟೇ ನೀರಸವಾಗಿ ಮುಗಿದು ಬಿಡುತ್ತವೆ ಕೂಡಾ. ಯಾರೋ ಸಾಹಿತ್ಯ ಪ್ರೇಮಿಗಳು, ಡಿಸ್ಕೌಂಟ್ ಪುಸ್ತಕಕ್ಕಾಗಿ ಆಸೆಯಿಂದ ಬರುವ ಒಂದಿಷ್ಟು ಜನರನ್ನು ಬಿಟ್ಟರೆ ಈ ಉತ್ಸವದ ಮೇಲಿನ ಆಸಕ್ತಿ ಗೌಣ. ಆದರೆ ಈ ಬಾರಿಯ ಮೇಳ ಸ್ವಲ್ಪ ವಿಭಿನ್ನವಾಗಿ ಆರಂಭವಾಗಿ ವಿವಾದದ ಸುಳಿಯಲ್ಲಿ ಸಿಕ್ಕಿ ಕೊಂಡಿತು. ಕಾರಣ ವಿಶ್ವ ಪ್ರಸಿದ್ಧ ಲೇಖಕ, ಕಾದಂಬರಿಕಾರ ಸಲ್ಮಾನ್ ರುಷ್ಡಿ ಈ ಮೇಳಕ್ಕೆ ಆಗಮಿಸುವ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ರುಶ್ಡಿ ಬರಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಹೇಳಿದ್ದೆ ತಡ ರಾಜ್ಯ ಸರಕಾರಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭೂಗತ ಲೋಕದ ಬಾಡಿಗೆ ಹಂತಕರಿಂದ ರುಶ್ಡಿ ಜೀವಕ್ಕೆ ಅಪಾಯವಿದೆ ಎಂದು ರುಶ್ಡಿ ತನ್ನ ಭಾರತ ಪ್ರಯಾಣದ ಟಿಕೆಟ್ ಗಳನ್ನು ಹರಿದು ಹಾಕುವಂತೆ ಮಾಡಿದವು. ಮಾರನೆ ದಿನ ಮತ್ತೊಂದು ಸುದ್ದಿ, ಈ ವಿಷಯ ಮುಂಬೈ ಪೊಲೀಸರಿಗೆ ತಿಳಿದೇ ಇಲ್ಲ. ಎರ್ಡೆಡ್ಲೆ ನಾಕು, ಸಲ್ಮಾನ್ ರುಶ್ಡಿ ಗೆ ಮನವರಿಕೆ ಆಯಿತು ಈ ಸುದ್ದಿ ಸುಳ್ಳೆಂದು, ತನ್ನನ್ನು ಉತ್ಸವದ ಹೊರಗಿಡಲು ಸರಕಾರ ಮಾಡಿದ ಹುನ್ನಾರ ಎಂದು.

ಭಾವನೆಗಳನ್ನ ಘಾಸಿಗೊಳಿಸುವ ಅಧಿಕಾರ ಯಾವ ಲೇಖಕನಿಗೂ ಇರಕೂಡದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ವೈಚಾರಿಕ ಸ್ವೇಚ್ಚಾಚಾರಕ್ಕಿರುವ ಮುಕ್ತ ಪರವಾನಗಿ ಅಲ್ಲ. ಕ್ರಿಯಾಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಜನರನ್ನು ಕೆರಳಿಸುವ ಪರಿಪಾಠಕ್ಕೆ ನಾಗರೀಕ ಸಮಾಜ ಮಣೆ ಹಾಕಬಾರದು. ಸ್ವೇಚ್ಚಾಚಾರ ಅರಗಿಸಿಕೊಳ್ಳುವ ಗುಣ ನಮ್ಮ ಉಪಖಂಡದ ಜನತೆಗೆ ಇನ್ನೂ ಬಂದಿಲ್ಲ. ಕಾಲ ಬದಲಾದಾಗ ರುಶ್ಡಿ ಯಂಥವರಿಗೆ ಮನ್ನಣೆ ನೀಡೋಣ, ಅಲ್ಲಿಯತನಕ ಸಂಯಮದಿಂದ ಕಾಲದೊಂದಿಗೆ ಹೆಜ್ಜೆ ಹಾಕೋಣ.

ಹಾಗೆಯೇ ಸಲ್ಮಾನ್ ರುಶ್ಡಿ ಪ್ರಕರಣ ಪ್ರಪಂಚದ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.

ಕೆಳಗಿನ ಲಿಂಕ್ ಕ್ಲಿಕ್ಕಿಸಿದರೆ ಪ್ರಪಂಚದಲ್ಲಿ ಇದುವರೆಗೆ ಬಹಿಷ್ಕರಿಸಲ್ಪಟ್ಟ ಕೆಲವು ಪುಸ್ತಕಗಳ ಮಾಹಿತಿ ಇದೆ. • http://www.ala.org/advocacy/banned/frequentlychallenged/challengedclassics/reasonsbanned

೨೦೧೧… ಹೀಗಿತ್ತು !

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಸಂದು ಹೋದ ವರ್ಷ ನಮಗೆ ನೀಡಿದ ಹರ್ಷ, ಭರವಸೆ ಮತ್ತು ದುಃಖ ದುಮ್ಮಾನಗಳ ಕುರಿತು ಸ್ವಲ್ಪ ಓದಿ.

ಈ ವರ್ಷ ಸರ್ವಾಧಿಕಾರದ ಉಸಿರು ಗಟ್ಟಿಸುವ ವಾತಾವರಣದಿಂದ ಕೆಲವು ದೇಶಗಳ ಜನರಿಗೆ ಮುಕ್ತಿ ಸಿಕ್ಕಿದರೆ ತಮ್ಮ ಬದುಕಿನಲ್ಲಿ ಅಮೋಘವಾದದ್ದನ್ನು ಸಾಧಿಸಿ ಸಾರ್ಥಕ ಬದುಕು ಸಾಗಿಸಿ ಕಣ್ಮರೆಯಾದ ಚೇತನಗಳು ಹಲವು.

ಉತ್ತರ ಆಫ್ರಿಕಾದ ಪುಟ್ಟ ದೇಶ ಟುನೀಸಿಯಾದಲ್ಲಿ ಅರಬ್ ಕ್ರಾಂತಿ. “ಅರಬ್ ವಸಂತ” ಎಂದು ಬಣ್ಣಿಸಲ್ಪಟ್ಟ ಈ ಕ್ರಾಂತಿ ೨೩ ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಜೈನುಲ್ ಆಬಿದೀನ್ ರ ಕುರ್ಚಿ ಪಲ್ಲಟ ಮಾಡಿತು. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿ ಜನಸಾಮಾನ್ಯರನ್ನು ಬಾಧಿಸಿತು. ಲಂಚಗುಳಿತನದಿಂದ ಬೇಸತ್ತ ನಿರೋದ್ಯೋಗಿ ಯುವಕ “ಮುಹಮ್ಮದ್ ಬೂ ಅಜೀಜಿ” ಆತ್ಮಹತ್ಯೆ ಮಾಡಿಕೊಂಡಾಗ ಬಂತು ಸರಕಾರಕ್ಕೆ ಸಂಚಕಾರ. ಜನ ಸಿಡಿದೆದ್ದರು, ಪ್ರದರ್ಶನಗಳು ನಡೆದವು. ಅಲ್ಲಿನ ಅಧ್ಯಕ್ಷನ ಯಾವ ಸಾಂತ್ವನದ ಮಾತುಗಳೂ ಜನರ ಆಕ್ರೋಶ ತಣಿಸಲು ವಿಫಲವಾದವು. ದಾರಿಗಾಣದೆ ಆಬಿದೀನ್ ದೇಶ ಬಿಟ್ಟು ಓಡಿದ. ಟುನೀಸಿಯಾ ಸರಕಾರ ಪತನವಾಗುತ್ತಿದಂತೆಯೇ ಈಜಿಪ್ಟ್, ಲಿಬಿಯಾ, ಸಿರಿಯಾ, ಯೆಮೆನ್, ಬಹರೇನ್, ದೇಶಗಳಿಗೂ ಕಾಲಿಟ್ಟಿತು ಅರಬ್ ವಸಂತ. ಮೂರು ದಶಕಗಳ ಕಾಲ ಈಜಿಪ್ಟ್ ದೇಶವನ್ನು ಆಳಿದ ಮುಬಾರಕ್ ಕೊನೆಗೂ ಅಧಿಕಾರ ತ್ಯಜಿಸಿದ. ರಕ್ತದ ಕೊನೇ ತೊಟ್ಟಿನ ವರೆಗೂ ಹೋರಾಡುವೆ ಎಂದ ಬಲಿಷ್ಠ ಮುಅಮ್ಮರ್  ಗದ್ದಾಫಿ ಕ್ರಾಂತಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಹತನಾದ. ಲಿಬ್ಯಾ ವಸಂತದ ಸಂಭ್ರಮದ ಕುಣಿತ ಕಂಡಿತು. ಅರಬರಿಗೆ ಸ್ವಾತಂತ್ರ್ಯ ಎಂದರೇನು ಎಂದು ಗೊತ್ತಿಲ್ಲ ಎಂದು ಮೂಗು ಮುರಿಯುತ್ತಿದ್ದ ವಿಶ್ವ ಅರಬರ ಸ್ವಾತಂತ್ರ್ಯಕ್ಕಾಗಿನ ತುಡಿತ ನೋಡಿ ಮೂಗಿನ ಮೇಲೆ ಬೆರಳಿಟ್ಟು ಕೊಂಡಿತು.

ಅರಬ್ ದೇಶಗಳ ಈ ರಾಜಕೀಯ ವಿದ್ಯಮಾನಗಳಿಗೆ ಒತ್ತು ಕೊಟ್ಟ, ಕುಮ್ಮಕ್ಕು ನೀಡಿದ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್ ಗಳು ರಾರಾಜಿಸಿದವು. ಸಾಮಾನ್ಯವಾಗಿ ತಂತ್ರಜ್ಞಾನ ಉಳ್ಳವರ ಸೊತ್ತು. ಆದರೆ ಸಾಮಾಜಿಕ ತಾಣಗಳು ಈ ಅಸಮಾನತೆಯನ್ನು ಅಮೋಘವಾಗಿ ಹೋಗಲಾಡಿಸಿದವು.  ಕಂಪ್ಯೂಟರ್ ತಂತ್ರಜ್ಞಾನ ಜನರನ್ನು ದಾಸ್ಯದ ಸಂಕೋಲೆಯಿಂದ ಹೊರಬರಲು ದೊಡ್ಡ ರೀತಿಯಲ್ಲಿ ಸಹಾಯ ಮಾಡಿತು.  

ಎರಡನೇ ವಿಶ್ವ ಯುದ್ಧದಲ್ಲಿ ಅಮೆರಿಕೆಯ ಕೆಂಗಣ್ಣಿಗೆ ಸಿಕ್ಕು ನುಚ್ಚು ನೂರಾದ ಜಪಾನ್ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು ಮಾರ್ಚ್ ೨೦೧೧ ರಲ್ಲಿ. ತ್ಸುನಾಮಿ ಅಲೆಗಳು ಜಪಾನ್ ದ್ವೀಪವನ್ನು ನಿರ್ದಯವಾಗಿ ಗುಡಿಸಿ ಹಾಕಿತು. ೧೬,೦೦೦ ಕ್ಕೂ ಮಿಕ್ಕು ಜನ ಸತ್ತರು. ನಿಸರ್ಗ ತಮ್ಮ ಮೇಲೆ ಈ ರೀತಿ ಎರಗಿ ಬಂದರೂ ಧೃತಿಗೆಡದೆ, ದುರಾದೃಷ್ಟವನ್ನು ಶಪಿಸದೆ, ಜಪಾನೀಯರು ತಾಳ್ಮೆಯಿಂದ ಅಳಿದುಳಿದುದನ್ನು ಹೆಕ್ಕಿ ತಮ್ಮ ಬದುಕಿನ ಮರುನಿರ್ಮಾಣದ ಕಡೆ ಗಮನ ನೆಟ್ಟರು.   

ಮುಪ್ಪಿನೊಂದಿಗೆ ಶೃಂಗಾರ ಚಟುವಟಿಗಳು ಸಾಮಾನ್ಯವಾಗಿ ಕೊನೆಯಾಗುತ್ತವೆ ಅಥವಾ ಹಂಪ್ ಗಳನ್ನು ದಾಟುವ ವಾಹನಗಳಂತೆ ನಿಧಾನವಾಗುತ್ತವೆ. ಆದರೆ ಚಿರ ರಸಿಕ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲಸ್ಕೊನಿ ಯ ಹಾರ್ಮೋನುಗಳು ಯುವಜನರನ್ನು ನಾಚಿಸುತ್ತವೆ. ಉರುಳುವ ವರ್ಷಗಳು ಪಂಚಾಂಗಕ್ಕೆ ಮಾತ್ರ ಸೀಮಿತ, ತನ್ನ ಲೈಂಗಿಕ ಚಪಲಕ್ಕಲ್ಲ ಎಂದು ಹದಿ ಹರೆಯದ ಪೋರಿಯರೊಂದಿಗೆ ಸಲ್ಲಾಪ ಆಡಿ ಕಷ್ಟಕ್ಕೆ ಸಿಕ್ಕಿಕೊಂಡ ಪ್ರಧಾನಿ. ಲೈಂಗಿಕ ಹಗರಣಕ್ಕೆ ಬಲಿಯಾಗದೆ ಅಚ್ಚರಿದಾಯಕವಾಗಿ ಬದುಕುಳಿದ ಬೆರ್ಲೋ ಅಧಿಕಾರ ತ್ಯಜಿಸಿದ್ದು ಆರ್ಥಿಕ ಸಮಸ್ಯೆ ಕಾರಣ.

ಏಪ್ರಿಲ್ ತಿಂಗಳ ಮೊದಲ ದಿನ ಮೂರ್ಖರ ದಿನ. ಕೇಂದ್ರ ಸರಕಾರ ಭ್ರಷ್ಟಾಚಾರದ ಮೂಲಕ ಲಂಗು ಲಗಾಮಿಲ್ಲದೆ ದೇಶವನ್ನು ಒಂದು ಮೂರ್ಖರ ಸಂತೆ ರೀತಿ ನಡೆಸಿ ಕೊಳ್ಳಲು ತೊಡಗಿದಾಗ ಸಿಡಿದೆದ್ದರು “ಇಳಿ ಚೇತನ” ಅಣ್ಣಾ ಹಜಾರೆ. ತನ್ನ ಸ್ವ ಪ್ರಯತ್ನದಿಂದ ಮಹಾರಾಷ್ಟ್ರದ ಹಳ್ಳಿಯೊಂದನ್ನು ಅಭಿವೃದ್ಧಿ ಗೊಳಿಸಿದ ಈ ಸ್ವಾತಂತ್ರ್ಯ ಹೋರಾಟಗಾರ ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೂ ಆವರಿಸಿಕೊಂಡ ಲಂಚಗುಳಿತನವನ್ನು ಇಲ್ಲವಾಗಿಸಲು ಉಪವಾಸ ಸತ್ಯಾಗ್ರಹ ಶುರು ಮಾಡಿದರು. ಐದು ಸಾವಿರ ಮೈಲು ದೂರದಿಂದ ವ್ಯಾಪಾರಕ್ಕೆ ಎಂದು ಬಂದು ನಮ್ಮನ್ನು ಒದ್ದು, ದಬ್ಬಾಳಿಕೆಯಿಂದ ಆಡಳಿತ ನಡೆಸಿದ ಪರದೇಸೀ ಬ್ರಿಟಿಷರೂ ಉಪವಾಸ ಸತ್ಯಾಗ್ರಹಕ್ಕೆ ಮಣಿದರು. ಆದರೆ ನಮ್ಮ ದೇಸೀ ನಾಯಕರು ಜಪ್ಪಯ್ಯ ಎನ್ನಲಿಲ್ಲ. ಬ್ರಿಟಿಷರಿಗಿದ್ದ ನಾಚಿಕೆ, ಔದಾರ್ಯ ಇವ್ಯಾವುವೂ ನಮ್ಮ ನಾಯಕರಲ್ಲಿ ಕಾಣದಾಯಿತು. ಅಣ್ಣಾರವರ ಆಂದೋಲನವನ್ನು  ಮೊದ ಮೊದಲು ಅವಗಣನೆ ಮಾಡಿ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಭಯ ಬಿದ್ದು ಲೋಕಪಾಲ್ ಮಸೂದೆಗೆ ಒಪ್ಪುವ ನಾಟಕ ಆಡಿ ಅಣ್ಣಾ ರಿಗೆ ಸೊಗಸಾಗಿ ನಾಮ ಬಳಿದರು. ಅದೂ ಸಾಲದು ಎಂಬಂತೆ ಅಣ್ಣಾ ಜೊತೆ ವೇದಿಕೆಯಲ್ಲಿರುವವರ ಪೂರ್ವಾಪರ ಚರಿತ್ರೆ ತೆಗೆದು ಅಣ್ಣಾ ದೇಶ ಎಣಿಸಿದ ಮುಗ್ಧ ಅಣ್ಣಾ ಅಲ್ಲ, ಆರೆಸ್ಸೆಸ್ ಏಜೆಂಟ್ ಎಂದು ಪ್ರಚಾರ ಮಾಡಿ ಲಂಚದ ವಿರುದ್ಧದ ಅಂದೋಲನದ ದಿಕ್ಕನ್ನೇ ದಿಕ್ಕಾ ಪಾಲು ಮಾಡಿತು ಕೇಂದ್ರ ಸರಕಾರ. ತುನೀಸಿಯಾದ ಬೂ ಅಜೀಜಿ ಯ ಆತ್ಮ ಹತ್ಯೆ ಮತ್ತು ಜನರ ಪ್ರತಿಭಟನೆಗೆ ಅಲ್ಲಿನ ಅಧ್ಯಕ್ಷ ಲಂಚಗುಳಿಯಾದರೂ, ಮರ್ಯಾದಸ್ಥನಂತೆ ತಲೆ ಬಾಗಿ ಹೊರನಡೆದ.  ನಮ್ಮಲ್ಲಿ ಹಾಗಾಗಲಿಲ್ಲ. ನಮ್ಮ ಕೇಂದ್ರ ಸರಕಾರಕ್ಕೆ ತಲೆ ಇದ್ದರಲ್ಲವೇ ಬಾಗುವ ಪ್ರಶ್ನೆ ಏಳೋದು.          

ನಾರ್ವೆ ದೇಶದಲ್ಲಿ ನರಸಂಹಾರ: ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾದ ಅಇರೋಪ್ಯ ಖಂಡದ “ನಾರ್ವೆ” ಪುಟ್ಟ ದೇಶ. ಇಲ್ಲಿನ ಸಾಲ್ಮನ್ ಜಾತಿಯ ಮೀನು ಜಗತ್ಪ್ರಸಿದ್ಧ. ಸಾಲ್ಮನ್ ಮೀನು ಹೃದಯಕ್ಕೆ ತುಂಬಾ ಒಳ್ಳೆಯದಂತೆ. land of midnight sun ಎಂದೂ ಅರಿಯಲ್ಪಡುವ ಈ ದೇಶದಲ್ಲಿ ವರ್ಷದ ಕೆಲವೊಂದು ತಿಂಗಳು ಸೂರ್ಯ ಮಧ್ಯ ರಾತ್ರಿ ಉದಯಿಸುತ್ತಾನೆ. ೩೨ ವರ್ಷ ಪ್ರಾಯದ ಸುಂದರ ಯುವಕ ‘ಆಂಡರ್ಸ್ ಬೆಹ್ರಿಂಗ್ ಬ್ರೆವಿಕ್’ ಪ್ರಶಾಂತ ನಾರ್ವೆ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದ ತನ್ನ ನಿರ್ದಯೀ ಹಿಂಸೆಯ ಮೂಲಕ. ರಾಜಧಾನಿ ಓಸ್ಲೋ ನಗರದಲ್ಲಿ ಬಾಂಬಿಟ್ಟು ನಗರದ ಸಮೀಪದಲ್ಲೇ ಇದ್ದ ದ್ವೀಪಕ್ಕೆ ಹೋಗಿ ಅಲ್ಲಿ ನೆರೆದಿದ್ದ ನೂರಾರು ಜನರ ಮೇಲೆ ಎರ್ರಾಬಿರ್ರಿ ಗುಂಡು ಹಾರಿಸಿ ೮೦ ಕ್ಕೂ ಹೆಚ್ಚು ಜನರನ್ನು ಕೊಂದ. ಕ್ರೈಸ್ತ ಮೂಲಭೂತವಾದಿಯಾಗಿದ್ದ ಈತನ ಕ್ರೌರ್ಯಕ್ಕೆ ವಿಶ್ವ ಬೆಚ್ಚಿತು, ರಾತ್ರಿ ಉದಯಿಸುತ್ತಿದ್ದ ಸೂರ್ಯ ಹಾಡು ಹಗಲೇ ಅಸ್ತಮಿಸಿದ ಇವನ ಕ್ರೌರ್ಯಕ್ಕೆ ಬೆಚ್ಚಿ.  

ಯಾವುದೇ ಕಾರಣವಿಲ್ಲದೆ ಇರಾಕಿನ ಮೇಲೆ ಧಾಳಿ ಮಾಡಿ, ಆ ದೇಶವನ್ನು ಆಕ್ರಮಿಸಿಕೊಂಡು ಎರಡು ದಶಲಕ್ಷಕ್ಕೂ ಜನರನ್ನು ಕೊಂದ ಅಮೇರಿಕಾ ತನ್ನ ಸೈನ್ಯ ಹಿಂದಕ್ಕೆ ಕರೆಸಿಕೊಳ್ಳಲು ಕೊನೆಗೂ ತೀರ್ಮಾನಿಸಿತು. ಇರಾಕಿನ ಮೇಲಿನ ಯುದ್ಧ ಯಾವ ರೀತಿ ಅಮೇರಿಕಾ, ಇಂಗ್ಲೆಂಡ್ ನಂಥ ಬಲಿಷ್ಠ ದೇಶಗಳು ಜನರ ಕಣ್ಣಿಗೆ ಬೂದಿ ಎರಚಿ ತಮ್ಮ ಸ್ವಾರ್ಥ ಸಾಧಿಸಲು ತಯಾರು ಎನ್ನುವುದಕ್ಕೆ ಇರಾಕ್ ಜ್ವಲಂತ ನಿದರ್ಶನವಾಯಿತು.

ಆಫ್ರಿಕಾ ಖಂಡದ ಸುಡಾನ್ ದೇಶದಿಂದ ದಕ್ಷಿಣ ಸುಡಾನ್ ಎನ್ನುವ ದೇಶ ಪ್ರತ್ಯೇಕಗೊಂಡು ಸ್ವಾತಂತ್ರ್ಯವಾಯಿತು. 

೨೦೧೧ ರ ನೊಬೆಲ್ ಶಾಂತಿ ಪುರಸ್ಕಾರ ಈ ಸಲ ಮೂರು ಮಹಿಳೆಯರು ಹಂಚಿಕೊಂಡರು. ಸ್ವಾತಂತ್ರ್ಯ, ಸೌಹಾರ್ದ, ಮತ್ತು ಲಿಂಗ ಬೇಧ ನಿವಾರಣೆಗೆ ಶ್ರಮಿಸಿದ ಈ ಮಹಿಳೆಯರಲ್ಲಿ ಇಬ್ಬರು ಆಫ್ರಿಕಾ ಖಂಡದ ಲೈಬೀರಿಯ ದೇಶದವರು, ಮತ್ತೊಬ್ಬರು ಅರಬ್ ಪ್ರಾಂತ್ಯದ ಯೆಮೆನ್ ದೇಶದವರು. ಸಾಂಪ್ರದಾಯಿಕ ಅರಬ್ ಮುಸ್ಲಿಂ  ಸಮಾಜದಿಂದ ಬಂದ “ತವಕ್ಕುಲ್ ಕರ್ಮಾನ್” ಯಾವ ತೊಡಕುಗಳಿಗೂ ಅಂಜದೆ ತನ್ನ ದೇಶದ ಸರ್ವಾಧಿಕಾರಿಯನ್ನು ಧೈರ್ಯವಾಗಿ ಎದುರಿಸಿ ಯಶಸ್ವಿಯಾದರು. ಮಹಿಳೆ ಧೈರ್ಯವಾಗಿ ಮುನ್ನುಗ್ಗಿದರೆ ಯಾವ ಮೂಲಭೂತವಾದಿಗಳಾಗಲೀ, ಸಮಾಜದ ಯಾವ ನಿರ್ಬಂಧಗಳೇ ಆಗಲಿ ಲೆಕ್ಕಕ್ಕೆ ಬರದು ಎಂದು ವಿಶ್ವಕ್ಕೆ ಸಾರಿದ ೩೨ ರ ಹರೆಯದ ತವಕ್ಕುಲ್ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ಮುಸ್ಲಿಂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇರಾನಿನ ಶಿರೀನ ಇಬಾದಿ ನೊಬೆಲ್ (೨೦೦೩) ವಿಜೇತ ಮತ್ತೊಬ್ಬ ಮಹಿಳೆ.   

ಈ ಸಲದ ಪುರಸ್ಕಾರ ಅರಬ್ ವಿಶ್ವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಬ್ಲಾಗಿಗಳಿಗೆ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸ್ವಾತಂತ್ರ್ಯದೊಂದಿಗೆ ಸಮಾನತೆಯ ಕಹಳೆ ಮೊಳಗಿಸಿದ ಧೀರ ಮಹಿಳೆಯರ ಪಾಲಾಯಿತು ನೊಬೆಲ್.  

ಕಾಲನ ಕರೆಗೆ ವಿಧೇಯರಾಗಿ ಓಗೊಟ್ಟು ಕಣ್ಮರೆಯಾದವರು

ವಿವಾದಾಸ್ಪದ ಕಲಾವಿದ ಮಕ್ಬೂಲ್ ಫಿದಾ ಹುಸೇನ್ ನಿಧನ. ಹುಸೇನರ ಕುಂಚಗಳು ತನ್ನ canvas ಗಡಿ ಮೀರಿ ಜನರ ನಂಬಿಕೆಗಳ ಮೇಲೆ ಹರಿದಾಡ ತೊಡಗಿಡಾಗ ಗಡೀ ಪಾರಾಗಬೇಕಾಯಿತು. ಕತಾರ್ ದೇಶದ ಪೌರತ್ವ ಪಡೆದರೂ ಮಾತೃ ಭೂಮಿಗಾಗಿ ಮಿಡಿಯಿತು ಹುಸೇನ್ ಮನ. ಹುಸೇನ್ ಅಂತ್ಯ ಲಂಡನ್ನಿನಲ್ಲಿ. ಹುಸೇನ್ ಮರಣಕ್ಕೆ ಪ್ರಧಾನಿ, ರಾಷ್ಟ್ರಪತಿ ಶೋಕ. ಹುಸೇನ್ ಸಾವು ರಾಷ್ಟ್ರೀಯ ನಷ್ಟ ಎಂದು ಪ್ರಧಾನಿ ಹೇಳಿದರೆ, ರಾಷ್ಟ್ರಪತಿ ಗಳು ಹೇಳಿದ್ದು ಹುಸೇನ್ ಇಲ್ಲದ ಕಲೆ ಶೂನ್ಯ ಎಂದು.

ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾದೆನ್. ಅಮೆರಿಕೆಯ to do list ನಲ್ಲಿ ಆಗ್ರ ಪಂಕ್ತಿಯಲ್ಲಿದ್ದ ಲಾದೆನ್ ನ ಅವಸಾನ ಕೊನೆಗೂ ಕೈಗೂಡಿತು. ಪಾಕ್ ರಾಜಧಾನಿಯ ಸಮೀಪದ ಅಬೋಟ್ಟಾ ಬಾದ್ ನಲ್ಲಿ ಅಡಗಿ ಕೂತಿದ್ದ ಬಿನ್ ಲಾದೆನ್ ನನ್ನು ಅಮೆರಿಕೆಯ ಅತಿ ಪ್ರತಿಷ್ಠಿತ ಕಮಾಂಡೋ ಪಡೆ “ಸೀಲ್” ಬೇಟೆಯಾಡಿ ಅಮೇರಿಕಾ ನಿರಾಳ ಭಾವ ಅನುಭವಿಸುವಂತೆ ಮಾಡಿತು. ಬಿನ್ ಲಾದೆನ್ ಸಾವಿನ ಸುದ್ದಿ ವಿಶ್ವ ಪುರಾವೆ ಬಯಸಿದಾಗ ಅಮೇರಿಕಾ ಹೇಳಿದ್ದು, ಪ್ರದರ್ಶಿಸಲು ಪಾರಿತೋಷಕ ಅಲ್ಲ ನಮಗೆ ಸಿಕ್ಕಿದ್ದು, ನಾವು ಹೇಳಿದ್ದನ್ನು ನಂಬಿ ಎಂದು. ಸಾವಿರಾರು ಜನರ ಭವಿಷ್ಯವನ್ನು ಭೂ ಸಮಾಧಿ ಮಾಡಿದ್ದ ಬಿನ್ ಲಾದೆನ್ ಗೆ ಸತ್ತಾಗ ಸಿಕ್ಕಿದ್ದು ಜಲಸಮಾಧಿ.  

ಕಂಪ್ಯೂಟರ್ ಎಂದರೆ ಆಕರ್ಷಣೆ ಇಲ್ಲದ ಒಂದು bland ಉಪಕರಣ ಅಲ್ಲ, ಅದು ಒಂದು ಮೋಜನ್ನು, ನೀಡುವ ಆಕರ್ಷಕ ಉಪಕರಣ ಎಂದು ಜಗತ್ತಿಗೆ ತೋರಿಸಿದ “ಆಪಲ್” ನ ಒಡೆಯ ಸ್ಟೀವ್ ಜಾಬ್ಸ್  ಯಕೃತ್ತಿನ ಕ್ಯಾನ್ಸರ್ ಗೆ ಬಲಿಯಾದ. ತಂತ್ರಜ್ಞಾನ ಬಡವಾಯಿತು ಎಂದು ಶೋಕಿಸಿದರು ಟೆಕ್ಕಿಗಳು.

ಭಾರತೀಯ ಕ್ರಿಕೆಟ್ ನ ಗತಕಾಲದ ಹೀರೋ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನದಿಂದ ಕ್ರಿಕೆಟ್ ಆಟ ತನ್ನ ಹೊಳಪನ್ನು ಕಳೆದು ಕೊಂಡಿತು. ಟೈಗರ್ ಎಂದು ಕರೆಯಲ್ಪಡುತ್ತಿದ್ದ ಈ ಸ್ಫುರದ್ರೂಪಿ “ಪಟೌಡಿ” ಪ್ರಾಂತ್ಯದ “ನವಾಬ್’ ಭಾರತದ ಯಶಸ್ವೀ ನಾಯಕರಲ್ಲೊಬ್ಬರು. ಅಂದಿನ ಪ್ರಸಿದ್ಧ ನಟಿ ಶರ್ಮಿಳಾ ಟಾಗೋರ್ ರನ್ನು ವರಿಸಿದ ಪಟೌಡಿ ಕ್ರಿಕೆಟ್ ಆಟಕ್ಕೆ ಗ್ಲಾಮರ್ ತಂದು ಕೊಟ್ಟವರು. ಪಟೌಡಿ ನಿಧನರಾದಾಗ ವಯಸ್ಸು ೭೦.

ಭೀಂ ಸೇನ್ ಜೋಶಿ, ಭಜನ್ ಲಾಲ್, ಭೂಪೇನ್ ಹಜಾರಿಕಾ, ಅಂಬಿಕಾ ಚೌಧುರಿ, ಚಿತ್ರನಟ ದೇವ್ ಆನಂದ್, ಶಮ್ಮಿ ಕಪೂರ್, ಸತ್ಯಸಾಯಿ ಬಾಬ, ಅರ್ಜುನ್ ಸಿಂಗ್ ಇತರೆ ಗಣ್ಯರು ಅಗಲಿದವರು.  

ನಮ್ಮ ರಾಜ್ಯದ ವರ್ಣರಂಜಿತ ವ್ಯಕ್ತಿತ್ವ ಕಣ್ಮರೆ. ಎಸ್, ಬಂಗಾರಪ್ಪ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ ರಾಜಕೀಯ ಕ್ಷೇತ್ರದಲ್ಲಿ ದುಡಿದವರು. ಒಂದು ಕಾಲದಲ್ಲಿ ನಾನು ಅವರ ಅಭಿಮಾನಿ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಅಭಿಮಾನಿಗಳಿಗೆ ಇರುಸು ಮುರುಸು ಕಸಿವಿಸಿ ತರುತ್ತಿದ್ದ ಬಂಗಾರಪ್ಪ ಟೆನ್ನಿಸ್ ಮತ್ತು ಯೋಗ ಪ್ರೇಮಿ. ತಂದೆಯ ಹೆಸರು ಎಷ್ಟಿ ಆಕರ್ಷಕ, ಜನಪ್ರಿಯ  ಎಂದರೆ ಅವರ ಮಗನಿಗೆ ಸ್ವಂತದ ಹೆಸರಿನ ಅವಶ್ಯಕತೆಯೇ ಬರಲಿಲ್ಲ. ಕುಮಾರ್ ಬಂಗಾರಪ್ಪ ಎಂದು ಪ್ರಸಿದ್ಧನಾದ. 

ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಬರಲಿರುವ ಹೊಸ ವರುಷ ಉಲ್ಲಾಸ, ಹರ್ಷ, ಯಶಸ್ಸನ್ನು ತರಲಿ ಎಂದು ಹಾರೈಸುತ್ತಾ…….

ನಿಮ್ಮ ಅಬ್ದುಲ್

ಎಲ್ಲರನ್ನೂ ಆದರಿಸೋಣ, ಎಲ್ಲವನ್ನೂ ಗೌರವಿಸೋಣ

ಹಿಂದೂ ದೇವರುಗಳ ಬಗ್ಗೆ ಅಸಹ್ಯವಾಗಿ, ಚಿತ್ರಿಸುವ ಚಾಳಿ ಕುರಿತು ಕನ್ನಡದ ಖ್ಯಾತ ಆನ್ ಲೈನ್ ತಾಣದಲ್ಲಿ ಒಬ್ಬರು ಖೇದ, ಆಕ್ರೋಶ ವ್ಯಕ್ತಪಡಿಸಿದ್ದರು. ಕಲೆಯ ಹೆಸರಿನಲ್ಲಿ, ಸೃಜನಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನ ಕೆರಳಿಸುವುದು, ನಮ್ಬಿಕೆಗಳನ್ನು ಘಾಸಿಗೊಳಿಸುವುದು ತರವಲ್ಲ. ಸೃಜನಶೀಲತೆ ಅಥವಾ ಬೇರಾವುದಾದರೂ ಪ್ರತಿಭೆಯನ್ನು ಸಾಕಾರಗೊಳಿಸಲು ಹತ್ತು ಹಲವು ಮಾರ್ಗಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಕಲೆ ಕುಚೋದ್ಯದಿಂದ ಕೂಡಿದ್ದು. ಈ ಕುಚೋದ್ಯ ಇಸ್ಲಾಮ್ ಧರ್ಮದ ಮೇಲೆ ಪ್ರಯೋಗವಾದಷ್ಟು ಬೇರಾವ ಧರ್ಮದ ಮೇಲೂ ಆಗಿರಲಾರದು. ಅಂಥ ಕಲೆಯನ್ನು ಮುಸ್ಲಿಮರು ಖಂಡಿಸಿದಾಗ ಅವರನ್ನು ಬೆಂಬಲಿಸಲು ಯಾರೂ ಇರಲಿಲ್ಲ. ಬದಲಿಗೆ ಮುಸ್ಲಿಮರಿಗೆ ಸಿಕ್ಕಿದ್ದು ಕಲೆಯ ಬಗ್ಗೆ, ಸೃಜನಶೀಲತೆಯ ಬಗ್ಗೆ, ಆಧುನಿಕ ಬದುಕಿನ ಬಗ್ಗೆ ಪಾಠ. ಚಿಕ್ಕತನವನ್ನು ಬಿಟ್ಟು ನೀವು ಬೆಳೆಯಬೇಕು ಎನ್ನುವ ಕಿವಿಮಾತು. ಈಗ ಅದೇ ಪಿಶಾಚಿ ತಮ್ಮ ಹೊಸ್ತಿಲಿಗೆ ಬಂದು ನಿಂತಾಗ ಜನ ಹೌಹಾರುತ್ತಿದ್ದಾರೆ. reactions strangely different.

೨೦೦೩ ರಲ್ಲಿ ಡ್ಯಾನಿಶ್ ವ್ಯಂಗ್ಯಚಿತ್ರಕಾರ “ಕ್ರಿಸ್ಟಫರ್ ಜೈಲರ್” ಯೇಸು ಕ್ರಿಸ್ತರ ಬಗೆಗಿನ ಕೆಲವು ಚಿತ್ರಗಳನ್ನ ಅಲ್ಲಿನ ಖ್ಯಾತ ಪತ್ರಿಕೆ Jyllands-Posten ಗೆ ಕಳಿಸಿದ. ಸಂಪಾದಕ ಈತನಿಗೆ ‘ಈ ಮೇಲ್’ ಕಳಿಸಿ ಈ ಚಿತ್ರಗಳನ್ನು ಕ್ರೈಸ್ತರು ನೋಡಿ ಆನಂದಿಸಲಿಕ್ಕಿಲ್ಲ ಮತ್ತು ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ವಿವರಿಸಿದ. ಇದೇ ಪತ್ರಿಕೆ ೨೦೦೫ ರಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಗಳನ್ನು ಪ್ರದರ್ಶಿಸಿ ತನ್ನ ಕೊಳಕು ‘ಡಬಲ್ ಸ್ಟ್ಯಾಂಡರ್ಡ್’ ಅನ್ನು ಸೊಗಸಾಗಿ ಪ್ರದರ್ಶಿಸಿತು.

ಧಾರ್ಮಿಕ ಕುರುಹುಗಳನ್ನು ನಮಗೆ ಬೇಕಾದ ಸ್ಥಳಗಳಲ್ಲಿ, ಬೇಕಾದ ರೀತಿಯಲ್ಲಿ ಬಳಸಿ ಕೊಂಡಾಗ ಅದರ ಬಗ್ಗೆ ಗೌರವ, ಭಕ್ತಿ ತಂತಾನೇ ಕಡಿಮೆಯಾಗುತ್ತದೆ. ಧರ್ಮ ವೈಯಕ್ತಿಕವಾಗಿರಬೇಕು. ಧಾರ್ಮಿಕ ಭಾವನೆ ಮನಸ್ಸಿನಲ್ಲಿ ನೆಲೆಯೂರಿರಬೇಕು. we should not wear our faiths on our sleeves. ಗಣೇಶನ ಮೂರ್ತಿಗಳನ್ನು ತೋಚಿದ ರೀತಿಯಲ್ಲಿ, ಬ್ಯಾಟ್ ಹಿಡಿದು ಕೊಂಡೂ ಮತ್ಯಾವುದಾದರೂ ರೀತಿಯಲ್ಲಿ ರೂಪಿಸಿದಾಗ ನಾವು ನೀಡುತ್ತಿರುವ ಸಂದೇಶವಾದರೂ ಏನು? ಈ ರೀತಿ ದೇವರ ಚಿತ್ರಗಳನ್ನು, ಇನ್ನಿತರ ಧಾರ್ಮಿಕ ಸಂಕೇತಗಳನ್ನು ಸಾರಾಸಗಟಾಗಿ ಕಲೆಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಂಡಾಗ ಯಾವುದು ಸರಿ ಯಾವುದು ತಪ್ಪು ಎನ್ನುವ ವಿಂಗಡಿಸುವ ರೇಖೆ ಮಸುಕಾಗಿ ಬಿಡುತ್ತದೆ. ಆಗ ಸಮಸ್ಯೆಗಳು ಎದುರಾಗಲು ತೊಡಗುತ್ತವೆ.

ಮುಸ್ಲಿಮರಲ್ಲಿ ಯಾವುದೇ ಕೆಲಸ ಆರಂಭಿಸುವಾಗಲೂ ಕರುಣಾಮಯನೂ, ದಯಾಮಯನೂ ಆದ ಅಲ್ಲಾಹನ ನಾಮದಿಂದ (ಬಿಸ್ಮಿಲ್ಲಾ ಅರ್ರಹ್ಮಾನ್, ಅರ್ರಹೀಂ) ಎನ್ನುವ ಕುರಾನ್ ಸೂಕ್ತ ಉಪಯೋಗಿಸುತ್ತಾರೆ. ಈ ಸೂಕ್ತವನ್ನು ಕೆಲವರು ಪತ್ರ ಬರೆಯುವಾಗಲೂ ಇನ್ನಿತರ ಸ್ಥಳಗಳಲ್ಲೂ ಬಳಸುವುದನ್ನು ನೋಡಿದ ಧರ್ಮ ಗುರುಗಳು ಆಕ್ಷೇಪ ಮಾಡಿ ನಾವು ಬರೆದ ಕಾಗದ ಅದರ ಉಪಯೋಗ ಮುಗಿದ ನಂತರ ತಿಪ್ಪೆ ಸೇರುವುದರಿಂದ ಅಂಥ ಸ್ಥಳಗಳಲ್ಲಿ ಈ ಸೂಕ್ತ ಉಪಯೋಗಿಸಕೂಡದು ಎಂದು ನಿರ್ದೇಶಿಸಿದ್ದರು. ಹಾಗೆಯೇ ಕೊರಳಿಗೆ ಹಾಕಿ ಕೊಳ್ಳುವ ಸರದ ಲಾಕೆಟ್ ಗಳ ಮೇಲೆ ‘ಅಲ್ಲಾಹ್’ ಎಂದು ಬರೆಯುವುದನ್ನು ಬಹಳ ಜನ ಒಪ್ಪುವುದಿಲ್ಲ. ಏಕೆಂದರೆ ನಮ್ಮೊಂದಿಗೆ ಸರವೂ ಶೌಚ ಗೃಹ ಪ್ರವೇಶ ಮಾಡುವುದರಿಂದ ಅಲ್ಲಾಹನ ಹೆಸರಿನ ಪಾವಿತ್ರ್ಯಕ್ಕೆ ಧಕ್ಕೆ ಆಗಬಹುದು ಎಂದು ಬಗೆದು. ಇದು ಧಾರ್ಮಿಕ ಕುರುಹುಗಳನ್ನು ಕಾಪಾಡುವ ರೀತಿ.

ನಮ್ಮ ಧರ್ಮ ವೈಯಕ್ತಿಕ. ನಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈ ಹಾಕಲು ಯಾರಿಗೂ ನಾವು ಅನುಮತಿಸುವುದಿಲ್ಲ. ಧರ್ಮಕ್ಕೂ ಅದೇ ನಿಲುವು ಅನ್ವಯವಾಗಲಿ. ಯಾರೂ ಯಾರ ಭಾವನೆಗಳನ್ನೂ ಘಾಸಿಗೊಳಿಸಲು ಹೋಗಬಾರದು. ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಆದರಿಸುತ್ತಾ ನಡೆದರೆ ಯಾವ ರೀತಿಯ ಸಮಸ್ಯೆಗಳೂ ಎದುರಾಗವು.

ಅಪರೂಪದ ಚಿತ್ರಗಳು, ಅಪರೂಪ ಚೇತನಗಳದು

ಅಪರೂಪದ ಚಿತ್ರಗಳು, ಅಪರೂಪ ಚೇತನಗಳದು…

ಗಾಂಧೀಜಿ ಗಡಿ ನಾಡ ಗಾಂಧೀ ಖಾನ್ ಅಬ್ದುಲ್ ಗಫ್ಫಾರ್ ಖಾನರೊಂದಿಗೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಖಾನ್ ಸಾಹೇಬರು ಭಾರತದ ಬಗ್ಗೆ ಉತ್ಕಟ ಪ್ರೀತಿ ಇಟ್ಟುಕೊಂಡಿದ್ದವರು. ಭಾರತದ ವಿಭಜನೆಯನ್ನು ಶತಾಯ ಗತಾಯ ವಿರೋಧಿಸಿದ್ದ ಭಾರತ ಮಾತೆಯ ಅಪೂರ್ವ, ನೆಚ್ಚಿನ ಪುತ್ರ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಿಗೆ “ಭಾರತ ರತ್ನ” ಪ್ರಶಸ್ತಿ ನೀಡುವ ಮೂಲಕ ದೇಶ ತನ್ನ ಕೃತಜ್ಞತೆ ಅರ್ಪಿಸಿತು.      

ಗಾಂಧೀಜಿ, ನೆಹರೂ, ವಲ್ಲಬ್ಹ್ ಪಟೇಲ್ ಜೊತೆ

ಗಾಂಧೀಜಿ ರೈಲಿನಿಂದ ಇಳಿಯುತ್ತಿರುವುದು…

ಗಮನಿಸಿ, ಬೋಗಿ ಮೂರನೇ ದರ್ಜೆಯದು (third class). ಗಾಂಧೀಜಿ ಯಾವಾಗಲೂ ಈ ದರ್ಜೆಯಲ್ಲೇ ಪ್ರಯಾಣಿಸುತ್ತಿದ್ದರು. ಬೋಗಿ ಮೂರನೇ ದರ್ಜೆಯಾದರೂ ಮಹಾತ್ಮ ಹತ್ತಿದ ಕೂಡಲೇ ಮೂರನೇ ದರ್ಜೆಯ ಬೋಗಿ ಉನ್ನತ ಮಟ್ಟಕ್ಕೇರಿತು, ಅಲ್ಲವೇ?

ನೆಹರೂ ಕ್ರಿಕೆಟ್ ಮೈದಾನದಲ್ಲಿ

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು “ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ. ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ ಇನ್ನೂ ಕೆಲವರಿಗೆ ಅವರ ಆದರ್ಶ ಮತ್ತು ಆಶಯಗಳ ಬಗ್ಗೆ ತಕರಾರು. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಚರಿತ್ರೆಯ ಅಧ್ಯಾಪಕರು ಗಾಂಧೀಯವರನ್ನು ಏಕವಚನದಲ್ಲಿ ಸಂಬೋಧಿಸಿ ತಮ್ಮದೇ ಆದ ರಾಜಕೀಯ ಆಶಯಗಳ ಚರಿತ್ರೆ ಓದುತ್ತಿದ್ದಾಗ ಸಿಟ್ಟಿಗೆದ್ದಿದಿದೆ. ಮನೆಗಳಲ್ಲಿ ನಾವು ಕಲಿತಿದ್ದು ಹಿರಿಯರನ್ನು ಗೌರವಿಸಬೇಕು, ಬಹುವಚನದಲ್ಲಿ ಕರೆಯಬೇಕು ಎಂದು. ಅದರಲ್ಲೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ಚೇತನ ಎಂದರಂತೂ ಏಕವಚನ ದೂರವೇ ಉಳಿಯಿತು. ದೊಡ್ಡವನಾಗುತ್ತಾ ಗಾಂಧಿಯ ಬಗ್ಗೆ ಇನ್ನೂ ಚಿತ್ರ ವಿಚಿತ್ರ ಸಂಗತಿಗಳು ಕೇಳಲು ಸಿಕ್ಕವು. ಗಾಂಧೀ ರಾಜಕಾರಣದ ಬಗ್ಗೆ ಅವರ ಉದ್ದೇಶಗಳ ಬಗ್ಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ವಿಚಿತ್ರವೆಂದರೆ ಗಾಂಧೀ ಬಗ್ಗೆ ದೇಶದ ಒಳಗೆ ಮಾತ್ರ ವಿರೋಧವಲ್ಲ, ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆಂದು, ಮುಸ್ಲಿಂ ದೇಶವನ್ನು ಹುಟ್ಟುಹಾಕಲು ಕಾರಣಕರ್ತರಾದರೆಂದು ಅವರನ್ನು ವಧಿಸಿದ ನಾಥೂರಾಂ ಗೋಡ್ಸೆಯ ಅಭಿಪ್ರಾಯದಿಂದ ಹಿಡಿದು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವರೆಗೂ ಅವರ ಬಗ್ಗೆ ಸಂಶಯ. ಭುಟ್ಟೋ ತಾವು ಬರೆದ ಪುಸ್ತಕವೊಂದರಲ್ಲಿ ಗಾಂಧೀಜೀ ಹೀಗೆ ಹೇಳಿದ್ದರೆಂದು ಉಲ್ಲೇಖಿಸಿದ್ದರು. “ಒಂದು ವೇಳೆ ಹಿಂದೂಧರ್ಮ ಭಾರತದಿಂದ ಅಥವಾ ಏಷಿಯಾ ಖಂಡದಿಂದ ಮೂಲೋತ್ಪಾಟನೆಯಾದರೆ ಹಿಂದೂ ಧರ್ಮದ ಕತೆ ಮುಗಿದಂತೆ, ಆದರೆ ಇಸ್ಲಾಂ ಭಾರತದಿಂದ, ಯಾ ಏಶಿಯದಿಂದಲೇ ಮೂಲೋತ್ಪಾಟನೆಯಾದರೂ ಅದು ಬೇರೆಲ್ಲಾದರೂ ಚಿಗುರೊಡೆಯುತ್ತದೆ, ಬೆಳೆಯುತ್ತದೆ” ಎಂದು ಹೇಳಿದ ಗಾಂಧೀಜಿ ಮುಸ್ಲಿಮರು ಭಾರತದಿಂದ ಹೊರದಬ್ಬಲ್ಪಟ್ಟರೆ ಅದು ಸಮರ್ಥನೀಯ ಎನ್ನುವ ಅಭಿಪ್ರಾಯವ ನ್ನು ಹೊಂದಿದ್ದರು ಎಂದು ಬರೆದು ಗಾಂಧೀಜಿಯ ಇಬ್ಬಂದಿತನವನ್ನು ಟೀಕಿಸಿದ್ದರು. ಗಾಂಧಿ ಇಲ್ಲೂ ಸಲ್ಲಲಿಲ್ಲ, ಅಲ್ಲೂ ಸಲ್ಲಲಿಲ್ಲ.

ಗಾಂಧೀ ದೇಶದ ಒಳಗೆ ಮಾತ್ರವಲ್ಲ ವಿಶ್ವದೆಲ್ಲೆಡೆ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಆಫ್ರಿಕಾದ ಮಂಡೇಲಾ ರಿಂದ ಹಿಡಿದು ಅಮೆರಿಕೆಯ ಮಾರ್ಟಿನ್ ಲೂಥೆರ್ ಕಿಂಗ್ ವರೆಗೆ ಮಹನೀಯರಿಗೆ ಗಾಂಧೀ ಆದರ್ಶ ವ್ಯಕ್ತಿ. ಇಂಗ್ಲೆಂಡಿನಿಂದ ಪ್ರಕಟವಾಗುವ independent ಪತ್ರಿಕೆಯಲ್ಲಿ ಗಾಂಧಿಯವರ ಬಗ್ಗೆ ಲೇಖನ ನಿನ್ನೆ ಪ್ರಕಟವಾಯಿತು. ಸಾಧಾರಣ ರಾಜಕೀಯ ಆಶಯಗಳ ಬಗೆಗಿನ ಲೇಖನವಾಗಿದ್ದರೆ ಆಸಕ್ತಿ ಇರುತ್ತಿರಲಿಲ್ಲವೇನೋ. ಆದರೆ ಇದು ಗಾಂಧೀಯವರ ಲೈಂಗಿಕ ಬದುಕಿನ ಬಗ್ಗೆ ಬರೆದ ಲೇಖನವಾಗಿತ್ತು. ಒಂದು ರೀತಿಯ explosive material. ಇದನ್ನು ನೋಡಿ ನಾನು ಸ್ವಲ್ಪ ಹಿಮ್ಮೆಟ್ಟಿದರೂ ಪೀಯುಸೀ ಯಲ್ಲಿದ್ದಾಗ ” intimate sex lives of famous people” ಪುಸ್ತಕದಲ್ಲಿ ಹಿಟ್ಲರ್ ಮಹಾಶಯನ ಲೀಲೆಗಳಿಂದ ಹಿಡಿದು ಗಾಂಧಿಯ ತನಕ ಪ್ರಸ್ತಾಪವಿತ್ತು. ಈಗ ಮತ್ತೊಮ್ಮೆ ಈ ಪೆಡಂಭೂತ ತಲೆ ಎತ್ತಿದ್ದು ನೋಡಿ ಈ ಲೇಖನವನ್ನು ತಮ್ಮೊಂದಿಗೂ ಹಂಚಿ ಕೊಳ್ಳಲು ನಿರ್ಧರಿಸಿದೆ.

ಗಾಂಧೀಜಿ ಕೇವಲ ಒಬ್ಬ ರಾಜಕಾರಣಿ ಯಾಗಿರದೆ ಆಧ್ಯಾತ್ಮಿಕ ವ್ಯಕ್ತಿಯೂ ಆಗಿದ್ದರು. ಮುಸ್ಲಿಂ ಪರ ಎಂದು ಅವರನ್ನು ಧ್ವೇಷಿಸುತ್ತಿದ್ದ ಹಿಂದೂ ಪರ ವ್ಯಕ್ತಿಗಳಿಗಿಂತ ಹೆಚ್ಚು ಸಂಪ್ರದಾಯಸ್ಥರಾಗಿದ್ದರು ಗಾಂಧೀ. ತಮ್ಮ ಆಶ್ರಮದ ಲ್ಲಿ ಭಜನೆ, ವ್ರತ ಗಳಂಥ ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುತ್ತಿದ್ದ ಗಾಂಧೀಜಿಗೆ ಲೈಂಗಿಕ ಬದುಕಿನ ಬಗ್ಗೆ ಒಂದು ರೀತಿಯ ಪಾಪ ಭಾವನೆ ಇತ್ತು. ತಮ್ಮ ಪ್ರೀತಿಯ ತಂದೆ ಕೊನೆಯುಸಿರೆಳೆಯುತ್ತಿದ್ದರೂ ಅದರ ಮಧ್ಯೆ ಎದ್ದು ಹೋಗಿ ತಮ್ಮ ಲೈಂಗಿಕ ಚಪಲ ತೀರಿಸಿ ಕೊಳ್ಳಲು ಹೋಗಿದ್ದರು. ಆದರೆ ತಮಗೆ ಬೇಕಿದ್ದನ್ನು ಪಡೆದುಕೊಂಡ ಗಾಂಧೀ ತನ್ನ ತಂದೆಯಯನ್ನು ಕಳೆದುಕೊಂಡಿದ್ದರು. ಇಲ್ಲಿಂದ ಶುರುವಾಗಿದ್ದು ಗಾಂಧೀಜಿಯ ವೈರಾಗ್ಯ ಭಾವ. ವಿವಾಹಿತರಾದರೂ ಲೈಂಗಿಕ ಕ್ರಿಯೆ ನಡೆಸದೆ ಸನ್ಯಾಸದ ಬದುಕು ನಡೆಸಿ ಎಂದಾಗ ಬಹಳ ಷ್ಟು ಜನ ಹುಬ್ಬೇರಿಸಿದ್ದರು. ಸಹಜ ತಾನೇ. ಮನುಷ್ಯ ಮದುವೆಯಾದ ಕೂಡಲೇ ಜಿಗಿಯುವುದು ಪ್ರಸ್ಥದ ಕೋಣೆಗೆ. ಅದು ಬಿಟ್ಟು ವೃತಾಚರಿಸುತ್ತಾ “ರಘು ಪತಿ ರಾಘವ ರಾಜಾರಾಂ ಎನ್ನುತ್ತ ಇರು ಎಂದರೆ ಜನ ಹುಬ್ಬೆರಿಸದೆ ಇರುತ್ತಾರೆಯೇ, ಅದರಲ್ಲೂ ನೆಹರೂರಂಥ ರಸಿಕ ಮಹಾನರು? ಗಾಂಧೀಜಿಯ ಈ ಹೊಸ ವಾದ ಕೇಳಿದ ನೆಹರೂ ಹೇಳಿದ್ದು ” ಅಸ್ವಾಭಾವಿಕ ಮತ್ತು ವಿಕೃತ” ಎಂದು. ಗಾಂಧೀಜಿಯನ್ನು ರಾಷ್ಟ್ರ ಪಿತ ಪಟ್ಟಕ್ಕೆ ಏರಿಸಿದ್ದರಿಂದ ಬಹಳಷ್ಟು ಅಪ್ರಿಯ ವಿಷಯಗಳನ್ನ ಮುಚ್ಚಿ ಹಾಕಲಾಯಿತು. ಹೀಗೆ ಗಾಂಧೀಜಿಯ ಕೆಲವೊಂದು ವಿಷಯಗಳನ್ನು ಒಪ್ಪದವರು ಶಿಷ್ಟಾಚಾರಕ್ಕೆ ಮಣಿದು ಮೌನವಾಗಿದ್ದರೆ ಇನ್ನೂ ಕೆಲವರು ಗಾಂಧೀಜಿಯನ್ನು ” ಅತ್ಯಂತ ಅಪಾಯಕಾರಿ ಮತ್ತು ಪಾರ್ಶ್ವವಾಗಿ ಅದುಮಿಟ್ಟ ಕಾಮೋನ್ಮತ್ತ” ಎಂದು ಕರೆದರು. ಅಂದರೆ ಗಾಂಧೀಜಿಯ ಜೀವಿತ ಕಾಲದಲ್ಲೂ ಬಹಳಷ್ಟು ಟೀಕಾಕಾರರು ಅವರನ್ನು ವಿಮರ್ಶಿಸಿದ್ದರು ಎಂದು ನಮಗೆ ಅರಿವಾಗುವುದು.

ಹೀಗೆ ತಮ್ಮ ತಂದೆಯ ಸಾವಿನ ಸಂದರ್ಭದ ಘಟನೆಯಿಂದ ನೊಂದ ಗಾಂಧೀಜಿ ವೈರಾಗ್ಯದ ಕಡೆ ವಾಲ ತೊಡಗಿ ತಾವೇ ನಡೆಸುತ್ತಿದ್ದ ಪತ್ರಿಕೆಗೆ ಹೀಗೆ ಬರೆದರು. ” ವಿವಾಹಿತರಾಗದೆ ಇರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಾಗೇನಾದರೂ ಆತ ವಿವಾಹದ ವಿಷಯದಲ್ಲಿ ನಿಜಕ್ಕೂ ನಿಸ್ಸಹಾಯಕನಾದರೆ ತನ್ನ ಪತ್ನಿಯೊಂದಿಗೆ ಲೈಂಗಿಕತೆಯನ್ನು ತ್ಯಜಿಸಬೇಕು”. ಇದೊಂಥರಾ ವಿಚಿತ್ರ ನಡವಳಿಕೆಯಾಗಿ ತೋರಿತು ಜನರಿಗೆ. ಹಸಿದವನ ಮುಂದೆ ಮೃಷ್ಟಾನ್ನ ಬಡಿಸಿ ಉಪವಾಸವಿರು ಎಂದಂತೆ. ಆದರೆ ಮನುಷ್ಯನ ಈ ನೈಸರ್ಗಿಕ ಭಾವನೆಗಳನ್ನು ಅದುಮಿಡಲು ಸಾಧ್ಯವಾಗದು ಎನ್ನುವ ಸಾಮಾನ್ಯ ಜ್ಞಾನ ಗಾಂಧೀಜಿಗೆ ಹೇಗೆ ತಪ್ಪಿತೋ ಏನೋ. ಹೀಗೆ ಜನರನ್ನು ಲೈಂಗಿಕತೆಯಿಂದ ದೂರ ಎಳೆಯಲು ಪ್ರಯತ್ನಿಸಿದ ಅವರು ತಮ್ಮಲ್ಲಿ ಸುಪ್ತವಾಗಿ ಅಡಗಿದ್ದ ದಾಹವನ್ನು ಬೇರೆಯದೇ ಆದ ರೀತಿಯಲ್ಲಿ ಅದುಮಿಡಲು ದಾರಿ ಕಂಡು ಕೊಂಡರು. ತಮ್ಮ ಆಶ್ರಮದಲ್ಲಿ ಹೆಣ್ಣು ಗಂಡುಗಳು ಒಟ್ಟಿಗೆ ಸ್ನಾನ ಮತ್ತು ಮಲಗುವುದಕ್ಕೆ (ಲೈಂಗಿಕ ಚಟುವಟಿಕೆ ಖಂಡಿತಾ ಇಲ್ಲ) ಅನುಮತಿ ನೀಡಿ, ಲೈಂಗಿಕತೆ ಕೂಡಿದ ಮುಕ್ತ ಹರಟೆಗಳಿಂದ ಅವರನ್ನು ತಡೆದರು. ಅಷ್ಟೇ ಅಲ್ಲ, ಗಂಡಂದಿರು ತಮ್ಮ ಪತ್ನಿಯರೊಂದಿಗೆ ಯಾವಾಗಲೂ ಏಕಾಂತ ವಾಗಿ ಇರಕೂಡದು ಮತ್ತು ಹಾಗೇನಾದರೂ ಎಡವಟ್ಟಾಗುವ ಭಯವಿದ್ದಲ್ಲಿ ತಣ್ಣೀರಿನ ಸ್ನಾನ ಮಾಡಬೇಕೆಂದು ತಾಕೀತು ಮಾಡುವುದನ್ನು ಮರೆಯಲಿಲ್ಲ ಮಹಾತ್ಮ.

ಆದರೆ ಈ ತಾಕೀತು ತಮಗೆ ಅನ್ವಯಿಸಿಕೊಳ್ಳ ಲಿಲ್ಲ ಗಾಂಧೀಜಿ ಎಂದು ಹೇಳುತ್ತಾರೆ ಲೇಖಕ ಆಡಮ್ಸ್. ಗಾಂಧೀಜಿಯವರ ಆಪ್ತ ಸಹಾಯಕರ ಆಕರ್ಷಕ ಸೋದರಿ ಸುಶೀಲ ನಾಯರ್ (ಈಕೆ ಗಾಂಧೀಜಿಯವರ ಖಾಸಗಿ ವೈದ್ಯೆ ಸಹ) ಗಾಂಧೀಜಿ ಯೊಂದಿಗೆ ಸ್ನಾನವನ್ನೂ ಮಾಡುತ್ತಿದ್ದರು ಮತ್ತು ಒಟ್ಟಿಗೆ ಮಲಗುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಗಾಂಧೀಜಿ ಹೇಳಿದ್ದು “ಸಭ್ಯತೆ ಮೀರದಂತೆ ನಾವೀ ಕೆಲಸ ಮಾಡುತ್ತಿದ್ದದ್ದು, ಮತ್ತು ಆಕೆ ಸ್ನಾನ ಮಾಡುವಾಗ ನಾನು ಕಣ್ಣು ಮುಚ್ಚಿ ಕೊಂಡು ಇರುತ್ತಿದ್ದೆ ಮತ್ತು ಆಕೆ ವಿವಸ್ತ್ರಳಾಗಿದ್ದಳೋ ಎಂದು ನನಗೆ ತಿಳಿಯದು, ಆದರೆ ಸಾಬೂನನ್ನು ಹಚ್ಚಿಕೊಳ್ಳುತ್ತಿದ್ದ ಶಬ್ದ ಮಾತ್ರ ನನಗೆ ಕೇಳಿಸುತ್ತಿತ್ತು”. ಈ ರೀತಿಯ ಗಾಂಧೀಜಿಯ “ಪ್ರಯೋಗ” ಗಳು ಆಶ್ರಮದ ಸಹ ನಿವಾಸಿಗಳಲ್ಲಿ ಮತ್ಸರವನ್ನು ಹುಟ್ಟಿಸಿತು ಮಾತ್ರವಲ್ಲ ಇದು ಸ್ವಲ್ಪ ಅತಿಯಾಯಿತೆಂದು ಕೆಲವರಿಗೆ ತೋರಿದರೆ ಗಾಂಧೀಜಿಗೆ ಅನ್ನಿಸಿದ್ದು ” ಈ ಪ್ರಯೋಗದ ಮೂಲಕವೇ ನಿಜವಾದ ದೇಶ ಸೇವೆ ಸಾಧ್ಯ” ಎಂದು. ಈ ರೀತಿಯದಾದ ದೇಶ ಸೇವೆಯ ಮಾದರಿಯನ್ನು ಸಹಿಸದ ಕೆಲವರು ಗಾಂಧೀಜಿ ನಡೆಸುತ್ತಿದ್ದ ಪತ್ರಿಕೆಯನ್ನು ತೊರೆದರು.

ಆದರೆ ಈ ವಿಷಯಗಳೆಲ್ಲಾ ಗಾಂಧೀಜಿಯ ಸುತ್ತಮುತ್ತಲಿನವರಿಗೆ ತಿಳಿದಿದ್ದರೂ ಗಾಂಧೀಜಿ ಇದರ ಬಗ್ಗೆ ಗೌಪ್ಯತೆ ಯನ್ನು ಪಾಲಿಸಲಿಲ್ಲ. ಮತ್ತು ಇದರ ಬಗ್ಗೆ ತಮ್ಮ ಮಗನಿಗೂ ಪತ್ರದ ಮೂಲಕ ಬರೆದು ತಿಳಿಸಿದ್ದರು. ಹೀಗೆ ನಿರ್ಭಿಡೆಯಿಂದ, ಗೌಪ್ಯತೆ ಪಾಲಿಸದೆ ತನ್ನದೇ ಆದ ವಿಶ್ಲೇಷಣೆ ಗಳನ್ನು ನೀಡುತ್ತಾ ನಡೆದ ಗಾಂಧೀಜಿ ಬಹುಶಃ ಸಾಮಾನ್ಯವಾಗಿ ಸಾಧಾರಣ ಜನರಲ್ಲಿ ಕಾಣಸಿಗುವ ಲೈಂಗಿಕತೆಯಿಂದ ಮುಕ್ತರಾಗಿದ್ದರೋ ಏನೋ. ತಮ್ಮ ಮಗನಿಗೆ ತಮ್ಮ ಈ ಪ್ರಯೋಗ ಗಳ ಬಗ್ಗೆ ಬರೆಯಲು ಗಾಂಧೀಜಿ ಹೇಳಿದರೂ ಪುತ್ರ ಇದಕ್ಕೆ ಸಮ್ಮತಿಸದೆ ಸಂಬಂಧಿಸಿದವರಿಗೆ ತಾಕೀತನ್ನೂ ಮಾಡಿದರು ಬರೆಯದಂತೆ.

ಬದುಕಿಗೆ ಎದುರಾಗುವ ಸವಾಲುಗಳನ್ನು ಎದುರಿಸುವತ್ತ ಬೌಧ್ದಿಕ ದೃಢಚಿತ್ತತೆಯ ಅಗತ್ಯ ಇರುತ್ತದೆ ಮತ್ತು ಇದಕ್ಕಾಗಿ ಕಿರಿ ವಯಸ್ಸಿನ ಮಹಿಳೆಯರನ್ನು ಗಾಂಧೀಜಿ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ಜಾಡ್ ಆಡಮ್ಸ್ ಹೇಳುತ್ತಾರೆ.

ಮಹಾನ್ ವ್ಯಕ್ತಿಗಳು ತಮ್ಮ ಕಾರ್ಯ ಸಿದ್ದಿ ಗಾಗಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯ ತಂತ್ರ ರೂಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವು ನಮಗೆ ಆಭಾಸವಾಗಿ ಕಂಡರೂ ಮಹಾತ್ಮರಿಗೆ ಹಾಗೆ ತೋರುವುದಿಲ್ಲ. ಗಾಂಧೀಜಿ ತಮ್ಮಲ್ಲಿ ಆಗಾಗ ತಲೆಎತ್ತುತ್ತಿದ್ದ ಕಾಮ, ಕ್ರೋಧ, ಮದ, ಮತ್ಸರಗಳನ್ನು ಗೆಲ್ಲಲು ತಮ್ಮದೇ ಆದ ಮಾರ್ಗ ಅನುಸರಿಸಿದರು. ಉದಾಹರಣೆಗೆ, ಕೇವಲ ಉಪವಾಸ ಸತ್ಯಾಗ್ರಹದಿಂದ ತನ್ನ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟು ವಿಶ್ವವನ್ನು ದಂಗು ಬಿಡಿಸಿದ ಗಾಂಧೀಜಿಯ ಈ ಮಾರ್ಗವನ್ನು ಎಷ್ಟು ಜನ, ಎಷ್ಟು ಮಹನೀಯರು ಅನುಕರಿಸುತ್ತಿದ್ದಾರೆ? ಏಕೆಂದರೆ ಅಹಿಂಸಾತ್ಮಕ ಹೋರಾಟದಲ್ಲಿ ಗಾಂಧೀಜಿಗೆ ಬಲವಾದ ನಂಬಿಕೆ ಇತ್ತು ಮತ್ತು ಆ ನಂಬಿಕೆ ಅವರನ್ನು ಹುಸಿಗೊಳಿಸಲಿಲ್ಲ.

ಸಾವಿರಾರು ವರ್ಷಗಳಿಂದ ಮಾನವ ಸಂತತಿಯನ್ನು ಕಾಪಾಡುತ್ತಾ, ಉಳಿಸುತ್ತಾ ಬಂದಿರುವ ವೀರ್ಯದ ಶಕ್ತಿಯ ಬಗ್ಗೆ ಅಪಾರ ವಿಶ್ವಾಸವಿದ್ದ ಗಾಂಧೀಜಿ ಹೇಳಿದ್ದು, “ಗಂಡಿನಲ್ಲಿ ಹರಿಯುವ ಈ ದ್ರವವನ್ನು ಉಳಿಸಿಕೊಳ್ಳುವವರು ಅಜೇಯ ಶಕ್ತಿ ಪಡೆಯುವರು” ಎಂದು. ಗಾಂಧೀಜಿ ತಮ್ಮ ವೀರ್ಯವನ್ನು ಹಿಡಿದಿಟ್ಟು ಕಾಮವನ್ನು ಗೆಲ್ಲಲು ಯತ್ನಿಸಿ ಯಶಸ್ಸನ್ನು ಸಹ ಪಡೆದರೂ ತಮ್ಮ ಪ್ರೀತಿಯ ದೇಶ ಮಾತ್ರ ಇಬ್ಭಾಗವಾಗುವುದನ್ನು ಈ “ಪ್ರಯೋಗ” ದಿಂದ ತಡೆಗಟ್ಟಲು ಸಾಧ್ಯವಾಗದೆ ಇದ್ದದ್ದು ದೊಡ್ಡ ದುರಂತವೆಂದೇ ಹೇಳಬಹುದು.

ಚಿತ್ರ ಕೃಪೆ: ಇಂಗ್ಲೆಂಡಿನ ದಿನ ಪತ್ರಿಕೆ Independent

ಹಾರುವ ಚಪ್ಪಲಿ

ಇದೀಗ ಬಂದ ವರದಿಯ ಪ್ರಕಾರ ಓರ್ವ ವ್ಯಕ್ತಿ ಅಡ್ವಾಣಿ ಯವರ ಮೇಲೆ ಚಪ್ಪಲಿಯನ್ನು ಬೀಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ. ಅಭಿಪ್ರಾಯಗಳನ್ನು, ಕುಂದುಕೊರತೆಗಳನ್ನು ದುಃಖ ದುಮ್ಮಾನಗಳನ್ನು ವ್ಯಕ್ತಪಡಿಸಲು ಹತ್ತು ಹಲವು ಮಾರ್ಗಗಳು. ಇರಾಕಿನಲ್ಲಿ ಮುಂತಸರ್ ಜೈದಿ ಎನ್ನುವ ಪತ್ರಕರ್ತನೊಬ್ಬ ಅಮೆರಿಕೆಯ ಬುಷ್ ಮೇಲೆ ಬೂಟುಗಳನ್ನು ಎಸೆದು ಅಭಿವ್ಯಕ್ತಿ ಸ್ವಾಂತ್ರ್ಯದ expression ಗೆ ಹೊಸ ನಾಂದಿ ಹಾಡಿದ. ಲಕ್ಷಗಟ್ಟಲೆ ಇರಾಕಿಗಳನ್ನು ವಿನಾಕಾರಣ ಕೊಂದ ಬುಷ್ನ ಮೇಲೆ ಆಕ್ರಮಣ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ತನ್ನ ಕೆಲಸವನ್ನು ಸಮರ್ಥಿಸಿಕೊಂಡ ಜೈದಿ. ಬಾಗ್ದಾದಿನಿಂದ ಆರಂಭಗೊಂಡ ಈ ಫ್ಯಾಷನ್ ವಿಶ್ವದ ಹಲವು ನಗರಗಳ ಪರ್ಯಟನ ಮಾಡುತ್ತಿದೆ, cat walk ಥರ. ಅತ್ಯಂತ ವಿಧೇಯವಾಗಿ, ದೈನ್ಯತೆಯಿಂದ ನಮ್ಮ ಕಾಲಡಿ ಬದುಕನ್ನು ನಡೆಸುತ್ತಿರುವ ಬೂಟು, ಎಕ್ಕಡ ಇತ್ಯಾದಿಗಳು ನಮ್ಮ ಮೇಲೇ ಎರಗಲು ಆರಂಭಿಸಿದರೆ ಹೇಗೆ?

 

೧೯೯೪ ರಲ್ಲಿ ಅಮೇರಿಕೆಯಲ್ಲಿ “ಲೋರೆನ್ ಬಾಬ್ಬಿಟ್” ಹೆಸರಿನ ತರುಣಿಯೊಬ್ಬಳು ತನ್ನ ಪ್ರಿಯಕರ ತನ್ನನ್ನು ಬಲಾತ್ಕರಿಸಲು ಯತ್ನಿಸಿದಾಗ ಅವನ ಲಿಂಗಚ್ಚೇಧ ಮಾಡಿ ವಿಶ್ವ ಪ್ರಸಿದ್ದಿ ಪಡೆದಳು. ಅಷ್ಟೇ ಅಲ್ಲ “ಲಿಂಗಚ್ಚೇಧ” ಕ್ಕೆ ಪರ್ಯಾಯ ಪದವಾಗಿ “bobbitt” ಆಂಗ್ಲ ಶಬ್ದಕೋಶವನ್ನೂ ಸೇರಿ ಅವಳ ಹೆಸರು ಅಮರವಾಯಿತು.  

 

ಪಾಶ್ಯಾತ್ಯ ಸಂಸ್ಕೃತಿಯಲ್ಲಿ ನಾಲ್ಕೂ ಬೆರಳುಗಳನ್ನು ಮಡಚಿ ಮಧ್ಯದ ಬೆರಳನ್ನು ತೋರಿಸುವುದು ದೊಡ್ಡ ಅವಮಾನ, ತೆಗಳಿಕೆ. ಶ್ರೀಲಂಕ ದಲ್ಲಿ  ತೋರು ಬೇರನ್ನು ತೋರಿಸಿದರೆ ವಕ್ಕರಿಸಿತು ಗ್ರಹಚಾರ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಬಲಗೈಯ ಮಧ್ಯದ ಬೆರಳನ್ನು ಎಡಗೈಯ ಹಸ್ತದೊಳಕ್ಕೆ ಚುಚ್ಚಿದರೆ ದೊಡ್ಡ ರಂಪ. ಹೀಗೆ ಸಾಗುತ್ತದೆ ಅವಮಾನಿಸುವ ವೈವಿಧ್ಯಗಳ  ಸರಣಿ. 

ಎಲ್ಲಾ ಸರಿ ಭಾರತವನ್ನೇಕೆ ಬಿಟ್ಟೆ? ನಾವು ಕೈ ಸನ್ನೆ ಮಾಡೋದು ಬಸ್ಸನ್ನು ನಿಲ್ಲಿಸೋಕೆ ಮಾತ್ರ. ಅದು ಬಿಟ್ರೆ ನಾವು more verbal.