ಪಾಕಿಸ್ತಾನದ yorker

ಪಾಕಿಸ್ತಾನದ ವಿದೇಶಾಂಗ ಸಚಿವೆ ಮಾತುಕತೆಗೆಂದು  ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಒಂದು ‘ಯಾರ್ಕರ್’ ನಮ್ಮ ಕಾಲ ಬುಡಕ್ಕೆ ಬಂದು ಬಿದ್ದಿದೆ. ಭಾರತದ ವಿದೇಶಾಂಗ ಸಚಿವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮುತ್ಸದ್ದಿಯಾಗಿದ್ದು ಪಾಕ್ ನ ಹೊಸ ವಿದೇಶಾಂಗ ಸಚಿವೆ ಅವರ ಮುಂದೆ ಏನೂ ಅಲ್ಲ ಅನುಭವದಲ್ಲಿ. ಹೀಗೆಂದು ಹೇಳಿದ್ದು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ. ಈ ಅಪರೂಪದ ಹೊಗಳಿಕೆಯ ಮಾತುಗಳು ಪಾಕಿಸ್ತಾನದ ಜಮೀಯತ್ ಉಲೇಮಾ ಪಕ್ಷದ ಫಜ್ಲುರ್ ರಹಮಾನ್ ಬಾಯಿಂದ ಬಿದ್ದಿದ್ದು. ಭಾರತದ ಕೃಷ್ಣ, ಪಾಕ್ ನ ನೂತನ ವಿದೇಶಾಂಗ ಸಚಿವೆ ‘ಹೀನಾ ಖಾರ್’ ರನ್ನು outsmart ಮಾಡುವರು ಎನ್ನುವ ಮಾತಿನ ಹಿಂದೆ ಮಾತುಕತೆಗಳ ಮುನ್ನವೇ ನಮ್ಮನ್ನು outsmart ಮಾಡೋ ಹುನ್ನಾರವೇ ಪಾಕಿಗಳದು? ಪಾಕಿಸ್ತಾನವನ್ನು ನಂಬಿ ಕೆಟ್ಟವರ “ಕ್ಯೂ” ನಮ್ಮ ಪಡಿತರ ಅಂಗಡಿಯ ಮುಂದೆ ಸಕ್ಕರೆಗಾಗಿ ಕಾದು ನಿಲ್ಲುವವರಿಗಿಂತಲೂ ದೊಡ್ಡದು. ಹಾಗಾಗಿ ಪ್ರಶಂಸೆಯ ಮಾತುಗಳೂ ಸಹ ‘ಸ್ಕ್ಯಾನರ್’  ದಾಟಿಯೇ ಹೋಗಬೇಕು. ಇಲ್ಲದಿದ್ದರೆ ಚಳ್ಳೆ ಹಣ್ಣಿನ ಆತಿಥ್ಯ ನಮ್ಮದಾಗುತ್ತದೆ.   

 ಹೀನಾ ರಬ್ಬಾನಿ ಖಾರ್. ಆಧುನಿಕ ಶಿಕ್ಷಣ ಪಡೆದ, ಈ ಮಹಿಳೆ ಪಾಕ್ ರಾಜಕೀಯ ಕ್ಷೇತ್ರ ಪ್ರವೇಶ ಪಡೆದಿದ್ದು ತನ್ನ ತಂದೆಯ ಹೆಸರಿನ ಕಾರಣ. ಸಾಮಾನ್ಯವಾಗಿ ಮಹಿಳೆಯರು ರಾಜಕೀಯಕ್ಕೆ ಪುರುಷರ ನೆರಳಿನಿಂದಲೇ ಬರುವರು ಎನ್ನುವ ಮಾತು ಕೇಳಿ ಬಂದರೂ ಸಾಕಷ್ಟು ಮಹಿಳೆಯರು ಸ್ವ ಸಾಮರ್ಥ್ಯದಿಂದ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಬ್ರಿಟನ್ ದೇಶದ ಮಾರ್ಗರೆಟ್ ಥ್ಯಾಚರ್, ತುರ್ಕಿ ದೇಶದ ಮಾಜಿ ಪ್ರಧಾನಿ ತಾಂಸು ಚಿಲ್ಲರ್, ನಮ್ಮ ಮಮತಾ ಬ್ಯಾನರ್ಜೀ ಮುಂತಾದವರು ಸ್ವ ಸಾಮರ್ಥ್ಯದಿಂದ ಜನಬೆಂಬಲ ಪಡೆದು ಕೊಂಡವರು. ಪಾಕಿಸ್ತಾನದ  ಸಂಸತ್ ಸದಸ್ಯರಾಗ ಬೇಕೆಂದರೆ ಪದವೀಧರರಾಗಿರಬೇಕು ಎನ್ನುವ ನಿಯಮವಿದೆ. ಈ ನಿಯಮದ ಕಾರಣ ಪದವೀಧರರಲ್ಲದ ರಾಜಕಾರಣಿಗಳು ತಮ್ಮ ಮಕ್ಕಳನ್ನು ಚುನಾವಣೆಯಲ್ಲಿ ಸ್ಪರ್ದಿಸಲು ಉತ್ತೇಜಿಸುತ್ತಾರೆ. ಹೀಗೆ ಮತ್ತೆ ಇನ್ನಿತರ ರೀತಿಯಲ್ಲಿ ತಮ್ಮ ತಂದೆಯರ ಪ್ರಭಾವ ಬಳಸಿ ರಾಜಕಾರಣ ಪ್ರವೇಶಿಸುವವರು ಹೆಚ್ಚು. ಈ ವ್ಯವಸ್ಥೆಯ ಮುಖಾಂತರ ಹೀನಾ ರಾಜಕಾರಣ ಪ್ರವೇಶಿಸಿದ್ದು.

 ವಿದೇಶಾಂಗ ಖಾತೆಯ ವಿಷಯದಲ್ಲಿ ಪಾಕ್ ಬಹಳ ನಾಜೂಕು, choosy. ಕಳ್ಳರು ತಮ್ಮ ಕಿತಾಪತಿಯಿಂದ ಬೇಸತ್ತ ವಿಶ್ವಕ್ಕೆ ಅವಶ್ಯವಾಗಿ ಬೇಕಾದ ಆರೈಕೆಯನ್ನು ಆಕರ್ಷಕ ವ್ಯಕ್ತಿತ್ವಗಳ ಕೈಯ್ಯಲ್ಲಿ ಮಾಡಿಸುತ್ತಾರೆ. ಪಾಕಿಸ್ತಾನದ ಅಮೆರಿಕೆಯ ರಾಯಭಾರಿ ಯಾಗಿದ್ದ ಮಲೀಹಾ ಲೋಧಿ ಶ್ವೇತ ಭವನದ ಮೇಲೆ ದೊಡ್ಡ ಪ್ರಭಾವ ಬೀರಿದ್ದರು. ಪಾಕಿಸ್ತಾನ ಕಿತಾಪತಿ ಮಾಡಿದಾಗಲೆಲ್ಲಾ ಇನ್ನೇನು ಅಮೇರಿಕಾ ಆ ದೇಶವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುತ್ತದೆ ಎನ್ನುತ್ತಿದ್ದಂತೆಯೇ ಈಕೆ ತನ್ನ ಮಾತಿನ, ನಗುವಿನ ಪ್ರಭಾವದಿಂದ ತನ್ನ ದೇಶವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಳು.  ಜುಲ್ಫಿಕಾರ್ ಅಲಿ ಭುಟ್ಟೋ ಸಹ ಪಾಕ್ ದೇಶದ ಪ್ರತಿಭಾವಂತ ವಿದೇಶಾಂಗ ಸಚಿವರಾಗಿದ್ದರು. ದೇಶದ ವರ್ಚಸ್ಸು, ಹೆಚ್ಚೆಬೇಕೆಂದರೆ ಸಾಮಾನ್ಯವಾಗಿ ವಿದೇಶಾಂಗ ಸಚಿವರುಗಳು ಮತ್ತು ದೊಡ್ಡ ದೊಡ್ಡ ಪ್ರಭಾವಶಾಲೀ ದೇಶಗಳ ರಾಯಭಾರಿಗಳು ಆಕರ್ಷಕ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಇಂಥ ಹುದ್ದೆಗಳ ಆಯ್ಕೆಯಲ್ಲಿ ಸರಕಾರಗಳು ಜಾಗರೂಕವಾಗಿರುತ್ತವೆ.  

 ಕೇವಲ ೩೪ ವರುಷ ಪ್ರಾಯದ ಪಾಕಿಸ್ತಾನದ ನವ ನಿಯುಕ್ತ ವಿದೇಶಾಂಗ ಸಚಿವೆ ಕಂಡಿದ್ದು ಕಾರ್ಗಿಲ್ ಯುದ್ಧ ಮಾತ್ರ. ೨೦೦೫ ರ ಭೂಕಂಪದ ವೇಳೆ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ದೊಡ್ಡ ವಿದೇಶೀ ಅನುಭವ ಈಕೆಯಲ್ಲಿ ಕಾಣುತ್ತಿಲ್ಲ. ೨೦೦೯ ರಲ್ಲಿ ಪಾಕಿಸ್ತಾನದ ಆಯವ್ಯಯ ಪತ್ರವನ್ನೂ ಈಕೆ ಮಂಡಿಸಿದ್ದರು. ವಯಸ್ಸು ೩೨ ಆದರೂ ಈಗಾಗಲೇ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.  

ಹಾಗಾಗಿ ಸಾಕಷ್ಟು ಅನುಭವ ಇಲ್ಲದ ಈ ಮಹಿಳೆ ಭಾರತದಲ್ಲಿ ಬಂದು ಯಾವ ರೀತಿಯ ಪ್ರದರ್ಶನ ನೀಡುವರೋ ಎನ್ನುವುದು ಕುತೂಹಲಕರ ಸಂಗತಿ. ಆಕೆಯ ರಾಜಕೀಯ, ಕೌಟುಂಬಿಕ, ಅನುಭವದ ಹಿನ್ನೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ನಾವು ಹೇಳಬೇಕಾದ್ದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬೇಕು. ಅತಿಥಿ ಎಳೆ ಪ್ರಾಯದವಳು, ಅನುಭವ ಇಲ್ಲದಾಕೆ, ಅತಿಥಿ ಸತ್ಕಾರ, ಹಾಗೆ ಹೀಗೆ ಎಂದು ಸಲೀಸಾಗಿ ನಡೆಸಿಕೊಳ್ಳದೆ ನಮ್ಮ ಹಿತಾಸಕ್ತಿಯನ್ನು ಎಂದಿಗಿಂತ ಸ್ವಲ್ಪ ಜೋರಾಗಿಯೇ ಕಾಯ್ದು ಕೊಂಡರೆ ನಮಗೇ ಹಿತ. ಅಷ್ಟು ಮಾತ್ರ ಅಲ್ಲ, ಇಲ್ಲೊಂದು ‘caveat emptor’ ಸಹ ಇದೆ. ಪಾಕ್ ನ ಈ ವಿದೇಶಾಂಗ ಸಚಿವೆ ಪದವಿ ಪಡೆದಿದ್ದು ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ, ಅದೂ ಅಮೆರಿಕೆಯ ವಿಶ್ವ ವಿದ್ಯಾಲಯದಿಂದ. deadly double. ಈ ಪದವಿ ಪಡೆದವರು ಯಾವಾಗಲೂ ಮುಗುಳ್ನಗುವನ್ನೇ ಧರಿಸಿರುತ್ತಾರೆ, ಒಳ್ಳೆಯ, ಸಿಹಿಯಾದ, ಸತ್ಕಾರದ ಮಾತುಗಳನ್ನೇ ಆಡುತ್ತಾರೆ ಎಂಥ ಸಂದರ್ಭಗಳಲ್ಲೂ. ಹಳಸಿದ ಪುಳಿಯೋಗರೆ ಯನ್ನು ಇದು ತುಂಬಾ delicious ಎಂದು ನಮ್ಮ ಒಲ್ಲದ ಬಾಯಿಗೆ ತುರುಕುವ ಜನ ಈ hospitality management ಗಳಿಸಿದವರು.

ಒಂದು ಕಡೆ ಹಿಲರಿ ಕ್ಲಿಂಟನ್, ಮತ್ತೊಂದು ಕಡೆ ಹೀನಾ ರಬ್ಬಾನಿ, ಇವರಿಬ್ಬರ ನಡುವೆ ನಮ್ಮ ಮುದ್ದು ಕೃಷ್ಣಾ, ಊಹಿಸಿ ನೋಡಿ. ಅಂತಾರಾಷ್ಟ್ರೀಯ ರಾಜಕಾರಣ ಮುಗುಳ್ನಗುವಿನ, ಫೋಟೋ ಶಾಟ್ ಗಳಿಂದ ತುಂಬಿದ ಪಿಕ್ನಿಕ್ ಅಲ್ಲ. ನಲ್ನುಡಿಗಳ land mine ಗಳು ತುಂಬಿರುತ್ತವೆ ಹಾದಿ ಯುದ್ದಕ್ಕೂ. ಇವನ್ನು  ಗುರುತಿಸಿ ನಮ್ಮ ಹಿತಾಸಕ್ತಿ ಕಾಯ್ದು ಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ. ಈ ಸಾಹಸದಲ್ಲಿ ನಮ್ಮ ಕೃಷ್ಣ ವಿಜಯಿಯಾಗಲಿ.  

 ಚಿತ್ರ ಕೃಪೆ: ibtimes.com

ಎರಡು ಘಟನೆಗಳು, ಎರಡು ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ. ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ.   

ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.

ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ?

ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ…………ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.

ಪುಟಾಣಿ ಪಾಠ

ಪುಟ್ಟ ಮಕ್ಕಳು ನಮ್ಮ ಶಿಕ್ಷಕರೂ ಆಗುತ್ತಾರೆ. ಮಕ್ಕಳಿಂದ ಕಲಿಯುವುದು ಬೇಕಷ್ಟು ಇದೆ ಎಂದು ನಮಗೆ ತಿಳಿದಿದ್ದರೂ ಅದರ ಕಡೆ ಗಮನ ಕೊಡದೆ, ಅವರನ್ನು ನಿಗ್ರಹಿಸುವುದರಲ್ಲಿ, ಯಜಮಾನಿಕೆ ಮಾಡುವುದರಲ್ಲಿ ನಿರತರಾಗಿ ಬಿಡುತ್ತೇವೆ. ಪುಟಾಣಿಗಳು ನಮಗೆ ಈ ಮೂರು ಗುಣಗಳನ್ನು ಹೇಳಿಕೊಡುತ್ತವಂತೆ;

೧. ಯಾವುದೇ ವಿಶೇಷ ಕಾರಣವಿಲ್ಲದೆ ಸಂತೋಷದಿಂದಿರುವುದು.

೨. ಯಾವಾಗಲೂ ಏನನ್ನಾದರೂ ಮಾಡುತ್ತಾ ಬ್ಯುಸಿ ಆಗಿರುವುದು, ಮತ್ತು

೩. ತಮಗೆ ಬೇಕಾದ್ದನ್ನು, ಇಷ್ಟವಾದ್ದನ್ನು ಹೇಗೆ ಪಡೆಯಬೇಕು ಎನ್ನುವುದರ ಸ್ಪಷ್ಟ ಕಲ್ಪನೆ ಇಟ್ಟು ಕೊಂಡಿರುವುದು.

ಮೇಲಿನ ಮಾತುಗಳು ವಿಶ್ವ ಪ್ರಸಿದ್ಧ, ಬ್ರೆಜಿಲ್ ಮೂಲದ ಬರಹಗಾರ “ಪವ್ಲು ಕುವೆಲ್ಯು” (paulo coelho) ಅವರದು.

ಈ ಬರಹಗಾರನ ಹೆಸರನ್ನು ಹೇಗೆ ಉಚ್ಛರಿಸುವುದು ಎಂದು ಹಲವು ವೆಬ್ ತಾಣಗಳನ್ನು ನೋಡಿದ ನಂತರ ಬರೆದಿದ್ದೇನೆ.

ನಮ್ಮ ರಾಜ್ಯದ ರಾಜಕಾರಣ

ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).

ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ ಮಕ್ಕಳು ಮುಂದು ಎಂದರೆ ನಮ್ಮ “ಗುರು ದೇವೋಭವಃ” ಸಮುದಾಯ ಹಗಲು ರಾತ್ರಿ ಸಂಶೋಧನೆ ಮಾಡಿ ಹೊಸತನ್ನೇನಾದರೂ ಕಂಡು ಹಿಡಿದಿರಬೇಕು ಗಣಿತ ವನ್ನು amusing ಮಾಡಲು ಮತ್ತು ಜಾಗ್ರಫಿ ಯನ್ನು interesting ಆಗಿಸಲು. ಬಿಡ್ತು ಅನ್ನಿ, ಹಾಗೇನಿಲ್ಲ. ಸರಕಾರ ವಿದ್ಯೆ ಕೊಡುವ ಸಮುದಾಯಕ್ಕೆ ಕೊಡುವ ಸಂಬಳದ ಚೆಂದ ನೋಡಿದರೆ ಅಂಥ ಕಾಲ ಇನ್ನೂ ಬಹು ದೂರ. ಕಲಿಕೆಯಲ್ಲಿ innovation ತರುವ ಮಾತಿರಲಿ, ಬಾರುಕೋಲಿನ ಪ್ರಯೋಗ ಇಲ್ಲದೆ ಪಾಠ ಹೇಳಿದ್ದರೆ ಸಾಕಿತ್ತು ಶಿಕ್ಷಕರು. ಗಣಿತದಲ್ಲೂ, ಭೂಗೋಳದಲ್ಲೂ ನಮ್ಮ ಮಕ್ಕಳು ಮುಂದೆ ಎಂದ ಮಾತಿನಲ್ಲಿ ರಾಜಕಾರಣ ಅಡಗಿದೆ. ಪ್ರತಿಯೊಂದರಲ್ಲೂ ರಾಜಕಾರಣ ಕಾಣುವ ಸಮಾಜ ತಾನೆ ನಮ್ಮದು?

ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ, ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ. ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ, ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ. ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ, ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು. ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು. ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ, ಥೇಟ್ ನಮ್ಮ BSE Index ಥರ. ಸ್ಟಾಕ್ ಎಕ್ಸ್ಚೇಂಜ್ ರೀತಿ. ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ. ಅಥವಾ “ವೈಸೀ ವರ್ಸಾ”. ಹೀಗೆ ದಿನವೂ ಕೂಡುತ್ತಾ, ಕಳೆಯುತ್ತಾ ಏರುಪೇರಾಗುವ, ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು, ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು. ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ. ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ. ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು. ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ.

ಒಂದು ಡೇರೆಯಿಂದ ಮತ್ತೊಂದು ಡೇರೆ ಗೆ ಕೆಲವು ಶಾಸಕರು ಜಿಗಿದರೆ ಯಾರು ಮು. ಮಂತ್ರಿ ಆಗಬಹುದು ಎನ್ನುವ ಸಂಭವನೀಯತೆ. ಸಂಭವನೀಯತೆಯಲ್ಲಿ ನಾಣ್ಯ ಚಿಮ್ಮುವ ಉದಾಹರಣೆ ಕೊಟ್ಟರೆ ರಾಜಕಾರಣದ ಸಂಭವನೀಯತೆಯಲ್ಲಿ ಡೇರೆ ಜಿಗಿಯುವ ಉದಾಹರಣೆ. ಅತೃಪ್ತ ಸದಸ್ಯರನ್ನು round the world, ಕ್ಷಮಿಸಿ, round the state ಟೂರಿಗೋ, ಅಥವಾ across the sate sojourn ಗೋ ಕಳಿಸಿದಾಗ ಜಾಗ್ರಫಿ ಸಹ ಮೂಡಿ ಬಂತು ತೆರೆಯ ಮೇಲೆ. ಯಾವ ಯಾವ ರೆಸಾರ್ಟ್ ಎಲ್ಲಿದೆ, ಅಡಗುತಾಣಗಳ ವಿಳಾಸ ಇವೆಲ್ಲವನ್ನೂ ತಿಳಿದಾಗ ಜಾಗ್ರಫಿ ಸಹ ಕರಗತವಾಗದೆ ಇದ್ದೀತೆ? ಅಷ್ಟೇ ಅಲ್ಲ, ಟೂರ್ ಹೊಡೆಸಿ, ಆಳಲು ಬೇಕಾದ ಮಾಂತ್ರಿಕ ಸಂಖ್ಯೆಯನ್ನು ಹೊಂದಿಸಿ, ನಂತರ ನಮ್ಮ ದೇಶದ ಅಧ್ಯಕ್ಷೆ ಯವರ ಹತ್ತಿರ ಪರೇಡ್ ಸಹ ಮಾಡಿಸಬೇಕು. ಅದಕ್ಕೆ ದಿಲ್ಲಿಗೆ ಹೋಗಬೇಕು. ಜಾಗ್ರಫಿ ಜ್ಞಾನ ವಿಸ್ತಾರ ಆಯಿತು ನೋಡಿ. ಆ ಪರೇಡ್ ಸಮಯ ಬರೀ ಮು. ಮಂತ್ರಿಗಳೂ, ಶಾಸಕ ಮಹೋದಯರೂ ಇದ್ದರೆ ಸಾಲದು, ಅವರನ್ನು ಕಾಯಲು ಪಕ್ಷದ ವತಿಯಿಂದ ವರಿಷ್ಠ ರೂ ಬರಬೇಕು, ವಿರೋಧೀ ಪಾಳಯ ದೂರದಲ್ಲಿ ನಿಂತು ಗೋವಾದ ಗೋಲ್ದನ್ ಬೀಚ್ ನ ಚಿತ್ರವನ್ನೋ, ನಾನ್ ಸ್ಟಾಪ್ ಅಂಕೆಗಳಿರುವ ಚೆಕ್ ನ ಫೋಟೋ ಕಾಪಿಯನ್ನೋ ತೋರಿಸಿ ಈಚೆ ಕಡೆ ಎಳೆದುಕೊಂಡು ಬಿಟ್ಟರೆ? ಪರೇಡ್ ಒಂದು ರೀತಿಯ ಮುಜುಗರ ತರುವ ಕಪ್ಪೆ ತೂಕವಾಗಿ ಪರಿವರ್ತನೆ ಆಗಬಾರದು ನೋಡಿ.

ನಮ್ಮ ಈ ರಾಜಕೀಯ ಅವ್ಯವಸ್ಥೆಗೆ ಪ್ರಜಾಪ್ರಭುತ್ವ ಎನ್ನುವ ಹೆಸರೇ ಒಂದು ‘misnomer’. ಅಪಪ್ರಯೋಗ. ಈ ವ್ಯವಸ್ಥೆಯಲ್ಲಿ ಪ್ರಜೆ ಪ್ರಭುವಾಗೋದು ಮತದಾನ ಕೇಂದ್ರದ ಕಡೆಗಿನ ನಡಿಗೆ ವೇಳೆ ಮಾತ್ರ. ಅವನನ್ನು ಕಳ್ಳ ನಗೆಯಿಂದ, ಓಲೈಸಲು ಡಜನ್ ಗಟ್ಟಲೆ ಜನ. ಮತದಾನವಾಯಿತೋ, ಆ ಕೂಡಲೇ ಅವನು ಹತಾಶ ಏಕಾಂಗಿ, ಮುಂದೆ ಅನಾವರಣಗೊಳ್ಳಲಿರುವ ನಾಟಕದ ಪರದೆ ಮುಂದೆ.

ಇಂಥ ಮಾತುಗಳನ್ನು ಎಂದಾದರೂ ಕೇಳಿದ್ದೀರಾ?

ಆರು ವರ್ಷ ಪ್ರಾಯದ ಮುಬೀನ ನನ್ನ ಸೋದರಿಯ ಮಗಳು. ಅವಳು ಮಾತನಾಡಲು ಶುರು ಮಾಡಿದಂದಿನಿಂದ ನಮ್ಮನ್ನು ದಂಗು ಬಡಿಸುವ ಮಾತುಗಳನ್ನೇ ಆಡುತ್ತಿದ್ದುದು. ಅರಳು ಹುರಿದಂತೆ ಮಾತನ್ನಾಡುತ್ತಿದ್ದ ಮುಬೀನಾ ಳನ್ನು ನನ್ನ ತಂದೆ ತಾಯಿ ತುಂಬಾ ಪ್ರೀತಿಸುತ್ತಿದ್ದರು. ಒಂದೆರಡು ದಿನಗಳ ರಜೆ ಸಿಕ್ಕರೂ ಅಪ್ಪ ಅವಳಿರುವಲ್ಲಿಗೆ ತಾವೇ ಹೋಗಿ ಕರೆದು ಕೊಂಡು ಬರುತ್ತಿದ್ದರು. ಒಂದೆರಡು ದಿನ ಇದ್ದು ಅವಳ ಮನೆಗೆ ಅವಳು ಮರಳಿದರೆ ಮಣೆ ಬಿಕೋ ಎನ್ನುತ್ತಿರುತ್ತದೆ. ಕೆಲವೊಮ್ಮೆ ತನ್ನ ಅಮ್ಮನನ್ನು ಬಿಟ್ಟು ಅವಳ ಅಜ್ಜಿಯ ಮನೆಯಲ್ಲಿ ಇರುತ್ತಿದ್ದ ಸಮಯದಲ್ಲಿ ನಿನ್ನ ಅಜ್ಜಿ ಚೆನ್ನಾಗಿ ನೋಡಿ ಕೊಳ್ಳುತ್ತಾರಾ ಎಂದು ಮನೆಯಲ್ಲಿ ಕೇಳುತ್ತಿದ್ದರು. ಯಾವಾಗಲೂ ಏನಾದರೊಂದು ಕಂಪ್ಲೇಂಟ್ ಇದ್ದೇ ಇರುತ್ತಿತ್ತು ಅವಳ ಹತ್ತಿರ. ಅಜ್ಜಿ ಹಾರ್ಲಿಕ್ಸ್ ಕೊಡೋಲ್ಲ, ಐಸ್ ಕ್ರೀಂ ಕೊಡೋಲ್ಲ ಎನ್ನುವಂಥವು .

ಮೊನ್ನೆ ನಮ್ಮ ಮನೆಯಲ್ಲಿ ಅವಳನ್ನು ಕೇಳಿದರು ನಿನ್ನ ಅಜ್ಜಿ (ಅವಳ ತಂದೆಯ ತಾಯಿ) ನಿನ್ನನ್ನು ಹೇಗೆ ನೋಡಿಕೊಳ್ಳುತ್ತಾರೆ ಅಂತ. ಆಗ ಅವಳು ಹೇಳಿದ್ದು, ನಾವು ಹೋಂ ವರ್ಕ್ ಮಾಡುವಾಗ ಮೊದಮೊದಲು ಚೆನ್ನಾಗಿ ತಪ್ಪಿಲ್ಲದೆ ಗುಂಡು ಗುಂಡಾಗಿ ಬರೆಯುತ್ತೇವೆ, ಸ್ವಲ್ಪ ಬರೆದಾದ ಮೇಲೆ ಬೇಕಾಬಿಟ್ಟಿ ಬರೆಯುತ್ತೆವಲ್ಲಾ ಹಾಗೆ ಅಜ್ಜಿಯೂ ಕೂಡಾ. ಮೊದ ಮೊದಲು ಚೆನ್ನಾಗಿ ನೋಡಿ ಕೊಳ್ಳುತ್ತಾರೆ, ಆಮೇಲೆ ಏನೂ ಕೊಡೋಲ್ಲಾ, ಎಂದು ಹೇಳಿ ಎಲ್ಲರನ್ನೂ ಬೇಸ್ತು ಬೀಳಿಸಿದಳು. ಅವಳ camparison ನೋಡಿ.

ಮುಬೀನಾ ಶಾಲೆಗೆ ಹೋಗುತ್ತಿದ್ದ ಆರಂಭದ ದಿನಗಳು. ವ್ಯಾನ್ ಡ್ರೈವರ್ ಮಕ್ಕಳನ್ನು ಉಸಿರುಗಟ್ಟುವ ರೀತಿಯಲ್ಲಿ ತುಂಬುತ್ತಿದ್ದ. ಇದನ್ನು ಕಂಡು ರೋಸಿದ ಅವಳು ಡ್ರೈವರ್ನನ್ನು ಕೇಳಿದಳು, ಏಯ್, ನಾವೇನು ಕೋಳಿ ಮರಿಗಳಾ ಈ ಥರಾ ತುಂಬಲು ಎಂದು. ಮಕ್ಕಳಿಗೆ ಮಾತುಗಳ ಟ್ರೈನಿಂಗ್ ಸಾಮಾನ್ಯವಾಗಿ ದೊಡ್ಡವರಿಂದ ಬಂದರೂ ಕೆಲವೊಮ್ಮೆ ನಾವು ಹೇಳಿರದಂಥ ಮಾತುಗಳನ್ನು ಹೇಳಿ ಬೆಚ್ಚಿ ಬೀಳಿಸುತ್ತಾರೆ ನಮ್ಮನ್ನು.

Switzerland. ಭೂಮಿಯ ಮೇಲಿನ ಸ್ವರ್ಗ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ  ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  

ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   

ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein (ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  

ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  

ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು  ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.

ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  

ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?

ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   

ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 

 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.

ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.

ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.

child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   

“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?

ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.

paracetamol ರಾಮ ಬಾಣ ಅಲ್ಲ

ಜ್ವರ ಅಥವಾ ನೋವು ಕಾಣಿಸಿ ಕೊಂಡ ಕೂಡಲೇ ನಾವು ಮೊರೆ ಹೋಗುವುದು paracetamol ಇರುವ ಔಷಧಿ ಕಡೆಗೆ. ವಿಶೇಷವಾಗಿ ಮಕ್ಕಳಿಗೆ ಕಾಣಿಸಿಕೊಳ್ಳುವ ಜ್ವರಕ್ಕೆ paracetamol ರಾಮ ಬಾಣ ಎಂದು ನಮ್ಮೆಲ್ಲರ ಗ್ರಹಿಕೆ. ಆದರೆ ಈ ಗ್ರಹಿಕೆಗೆ ಒಂದು ಕೊಡಲಿಯೇಟು ಬಿದ್ದಿದೆ; paracetamol ಒಳಗೊಂಡ ಔಷಧಿ ಮಕ್ಕಳಲ್ಲಿ ಅಸ್ತಮಾ ರೋಗವನ್ನು ಬರಿಸುತ್ತದೆ. ಗರ್ಭಿಣಿಯರು paracetamol ಹೆಚ್ಚು ತೆಗೆದು ಕೊಂಡಷ್ಟೂ ಹುಟ್ಟುವ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಳ್ಳಲು ಕಾರಣವಾಗುತ್ತದಂತೆ. ಈ ಔಷಧಿಯನ್ನು ಆಂಗ್ಲ ಭಾಷೆ ಮಾತನಾಡುವ ರಾಷ್ಟ್ರಗಳ ಜನ ಹೆಚ್ಚು ತೆಗೆದು ಕೊಳ್ಳುತ್ತಿದ್ದು ಅಲ್ಲಿನ ಮಕ್ಕಳ ಆರೋಗ್ಯದ ಅಧ್ಯಯನ ನಡೆಸಿದ ಮೇಲೆ ಈ ವಿದ್ಯಮಾನ ಬೆಳಕಿಗೆ ಬಂತು. ಆದರೆ ಕಂಪೆನಿಗಳು ಈ ಅಧ್ಯಯನವನ್ನು ಒಪ್ಪುತ್ತಿಲ್ಲ. ಅಸ್ತಮಾದ ಬಗೆಗಿನ ಅಧ್ಯಯನ ಗಮನಾರ್ಹವಲ್ಲದಿದ್ದರೆ medical journal “Lancet” ಪತ್ರಿಕೆಯಲ್ಲಿ ಇದು ಬೆಳಕನ್ನು ಕಾಣುತ್ತಿರಲಿಲ್ಲ.ಮಕ್ಕಳಲ್ಲಿ ಕಫ ತುಂಬಿ ಉಬ್ಬಸ ತೋರಿದಾಗ ಕೊಡುವ paracetamol ಕ್ರಮೇಣ ಮಕ್ಕಳಲ್ಲಿ ಅಸ್ತಮಾ ರೋಗಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ. ಹಾಗಾದರೆ ಮಕ್ಕಳಿಗೆ ಜ್ವರ ಬಂದಾಗ ಕೊಡಬೇಕಾದದ್ದಾದರೂ ಏನು? ಕೆಲವು ವೈದ್ಯರ ಪ್ರಕಾರ ಜ್ವರ ಬಂದಾಗ ಯಾವ ಔಷಧಿಯನ್ನೂ ಕೊಡುವ ಅಗತ್ಯವಿಲ್ಲವಂತೆ. ಏಕೆಂದರೆ ಶರೀರಕ್ಕೆ ತಗಲುವ ಸೋಂಕಿಗೆ ನೈಸರ್ಗಿಕ ಪ್ರತಿರೋಧವಾಗಿ ಜ್ವರ ಬರುತ್ತದಂತೆ. ಆದರೆ ನಾವೀಗ ಕಾಣುತ್ತಿರುವ ಇಲಿ ಜ್ವರ, ಹಂದಿ ಜ್ವರ ಮುಂತಾದ “zoo” ಜ್ವರಗಳ ಬಗ್ಗೆ ಮಾತ್ರ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ.

ಬೇಡವಾದೆವಾ ನಾವು ನೊಣಗಳಿಗೂ?

ಕಾಲವೊಂದಿತ್ತು, ಮಾವಿನ ಹಣ್ಣು, ದ್ರಾಕ್ಷಿ ಹೀಗೆ ತರಾವರಿ ಹಣ್ಣು ಹಂಪಲುಗಳ ಮೇಲೆ ನೊಣಗಳು ಮುತ್ತಿಗೆ ಹಾಕುತ್ತಿದವು. ಪುಷ್ಪದ ಮೇಲೆ ಹಾರುವ ಭ್ರಮರಗಳ ಹಾಗೆ. ಆದರೆ ಈಗ ನೊಣಗಳು ಹಣ್ಣುಗಳ ಮೂಸಿ ನೋಡಲೂ ತಯಾರಿಲ್ಲ, ಅವು ಮಣ್ಣಿನ ಮೇಲಾದರೂ ಕೂತಾವು ಆದರೆ ಹಣ್ಣುಗಳ ಮೇಲಲ್ಲ. ಕಾರಣ?ಬಹುಶಃ ನೊಣಗಳಿಗೂ ಸುಳಿವು ಸಿಕ್ಕಿರಬೇಕು ಈ ಹಣ್ಣುಗಳು ಸತ್ವವಿಲ್ಲದವು, ರಾಸಾಯನಿಕಗಳ ಸಹವಾಸದಿಂದ ತನ್ನತನವನ್ನು ಕಳೆದುಕೊಂಡವು ಎಂದು. ಮನುಷ್ಯನ ಅತಿಯಾಸೆ, ದುರ್ಬುದ್ಧಿಯ ಸುಳಿವು ನೊಣ ಗಳಿಗೂ ಅರಿವಾಯಿತು. ಆದರೆ ಲಜ್ಜೆಯಿಲ್ಲದ ಮನುಷ್ಯನಿಗೆ ನೊಣಗಳ ಬಹಿಷ್ಕಾರದಿಂದ ಆಗುವ ನಷ್ಟವಾದರೂ ಏನು?

ಮಾರುಕಟ್ಟೆಯಲ್ಲಿ ಕಾಣಸಿಗುವ ನಾನಾ, ತರಾವರಿ ಹಣ್ಣು ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಗಳಿಗೆ ಸಿಂಪಡಿಸುವ “ಕೀಟನಾಶಕ” ಗಳಿವೆ ಎಂದು ವರದಿ. ೨೮ ನಮೂನೆಯ ಅಪಾಯಕಾರೀ ಕೀಟ ನಾಶಕಗಳಿದ್ದು ಒಂದೊಂದು ಹಣ್ಣಿನ ಮೇಲೂ ಕನಿಷ್ಠ ಐದು ನಮೂನೆಯ ಕೀಟ ನಾಶಕಗಳ ಬಳಕೆಯಾಗುತ್ತದಂತೆ. ಐರೋಪ್ಯ ಸಂಸತ್ತು ಈ ವಿಷಯವನ್ನೂ ಬಯಲುಮಾಡಿತು. ಈ ೨೮ ನಮೂನೆಯ ಕೀಟನಾಶಕಗಳಲ್ಲಿ ೧೦ ಕ್ಯಾನ್ಸರ್ ರೋಗಕ್ಕೂ, ೩ ನರ ದೌರ್ಬಲ್ಯಗಳಂಥ ಕಾಯಿಲೆಗೂ ಕಾರಣವಂತೆ.   

ಈ ರೀತಿ “ಕೀಟನಾಶಕ” ಗ್ರಸ್ಥ ಹಣ್ಣು ಗಳನ್ನೂ, ತರಕಾರಿಗಳನ್ನೂ ಚೆನ್ನಾಗಿ ತೊಳೆದರೂ ಸಹ ಅವಕ್ಕೆ ಅಂಟಿದ ವಿಷ ರಾಸಾಯನಿಕಗಳು ಸಂಪೂರ್ಣವಾಗಿ ಹೋಗುವುದಿಲ್ಲವಂತೆ. ಅಂಥ ಆಹಾರ ಪದಾರ್ಥಗಳು ಕೆಳಗಿನವು:

Celery, Cherries, Peaches, Strawberries, Apples, Domestic blueberries, Nectarines, Sweet bell peppers, Spinach, Kale and collard greens,Potatoes, Imported grapes, Lettuce

ರಸಾಯನಿಕಗಳು ಕೆಳಗೆ ತೋರಿಸಿದ ಕೆಲವು ಹಣ್ಣುಗಳ ಮೇಲೆ ಮತ್ತು ತರಕಾರಿಗಳ ಮೇಲೆ ಇದ್ದರೂ ತೊಳೆದರೆ ಮಾಯವಾಗುವಂಥವು. ಅವುಗಳು ಕೆಳಗಿನಂತಿವೆ,

Onions, Avocados, Sweet corn, Pineapples, Mango,Sweet peas, Asparagus, Kiwi fruit, Cabbage, Eggplant (ಬದನೆ), Cantaloupe, Watermelon, Grapefruit, Sweet potatoes,Sweet onions 

ಹೀಗೆ ನಾವು, ನಮ್ಮ ಪುಟ್ಟ ಮಕ್ಕಳು ಸೇವಿಸುವ ಆಹಾರಕ್ಕೆ ರಾಸಾಯನಿಕಗಳು ಹಾಕಿದ ಲಗ್ಗೆ ಸಾಲದೆಂಬಂತೆ ಈ ವಿಷ ಪದಾರ್ಥಗಳನ್ನು ನಿರ್ಮೂಲನ ಮಾಡಲು ಮತ್ತೊಂದು ರಾಸಾಯನಿಕ. ಅದೇ ಲಿಕ್ವಿಡ್ ಸೋಪು. ಈ ಸೋಪಿನಿಂದ ಆಹಾರವನ್ನೂ ತೊಳೆದರೆ ರಾಸಾಯನಿಕ ಮುಕ್ತವಾಗುತ್ತದಂತೆ ನಮ್ಮ ಆಹಾರ. ಈ ಸೋಪಿನ ಮೇಲೆ ಎಷ್ಟು ಪದರಗಳ ರಾಸಾಯನಿಕಗಳು, ಕೀಟ ನಾಶಕಗಳು ಕುಳಿತಿವೆ ಎಂದು ಮಾತ್ರ ಕೇಳಬೇಡಿ.

ತರಕಾರಿ ಮತ್ತು ಹಣ್ಣು ಗಳನ್ನು ಹೇಗೆ ತೊಳೆಯ ಬೇಕೆಂಬುದರ ಬಗ್ಗೆ ತಿಳಿಯಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ.

http://www.associatedcontent.com/article/1183252/the_safe_way_to_clean_fresh_fruits.html?cat=6

ಅಮ್ಮಾ, ನಾನ್ಹೇಗೆ ಹುಟ್ಟಿದೆ?

ಮಕ್ಕಳ ಹತ್ತು ಹಲವು ಕುತೂಹಲಗಳಲ್ಲಿ ಒಂದು ಮಕ್ಕಳು ಹೇಗೆ ಹುಟ್ಟುತ್ತವೆ ಎಂದು.  ನಾನ್ಹೇಗೆ ಬಂಡೆ ಎನ್ನುವ ಈ ಮಕ್ಕಳ ಪ್ರಶ್ನೆ ನಮ್ಮನ್ನು ತಬ್ಬಿಬ್ಬು ಮಾಡುವುದು ಸಹಜವೇ. ಐದನೇ ಕ್ಲಾಸಿನಲ್ಲಿದ್ದಾಗ ನನ್ನ ಪೋಲಿ ಗೆಳೆಯನೊಬ್ಬ ವಿವರವಾಗಿ ತಿಳಿಸಿ ಹೇಳಿದರೂ ತಂದೆ ತಾಯಿ ಬಗೆಗಿನ ಅಪಾರವಾದ ಗೌರವ ಅವನ ಕಥೆಯನ್ನೂ ನಂಬದಂತೆ ತಡೆದಿತ್ತು. ನಾನು ಅಂದು ಕೊಂಡಿದ್ದು ಮಕ್ಕಳು ಬೇಕೆಂದಾಗ ತಂದೆ ತಾಯಿಗಳು ದೇವರಲ್ಲಿ ಕೇಳಿ ಕೊಳ್ಳುತ್ತಾರೆ ಮತ್ತು ಆ ಕರುಣಾಮಯನಾದ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂದು, ಆದರೆ ಮೇಲೆ ಹೇಳಿದಂಥ ಪೋಲಿ ಪೋಕರಿಗಳು ವಕ್ಕರಿಸಿ ಹಾಗಲ್ಲ ಕಣೋ ಬೆಪ್ಪೆ ಹೀಗೆ ಎಂದು ಸವಿವರವಾಗಿ ಹೇಳಿದಾಗ ಅಪ್ಪ ಅಮ್ಮನ ನನ್ನು ಸಂಶಯ ದಿಂದ ನೋಡುವಂತಾಗುತ್ತಿತ್ತು.

ಈ ಚಿತ್ರ ನೋಡಿ. ಜರ್ಮನಿ ದೇಶದಲ್ಲಿ ಮಕ್ಕಳು ಹೇಗೆ ಬರುತ್ತಾರೆ ಎಂದು ಮಕ್ಕಳಿಗೆ ತಿಳಿ ಹೇಳಲು ಪುಸ್ತಿಕೆಗಳು. ಅದರಲ್ಲಿನ ಒಂದು ದೃಶ್ಯ ನೀವೀಗ ನೋಡುತ್ತಿರುವುದು.

ಒಂದು ಎರಡು ಬಾಳೆಲೆ ಹರಡು..

ನನ್ನ ಮಗಳು “ಇಸ್ರಾ” ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು. ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ “ಅಹ್ಮದ್” ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ ” ಅಯ್ಮನ್” ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು… ಡಮ್ಮರೆ ಡಮ್ಮಮ್ಮ,

ಮನೆ ಸುಟ್ಟೋಯ್ತು

ಯಾರ ಮಾನೆ

ಪೂಜಾರಿ ಮಾನೆ

ಯಾವ ಪೂಜಾರಿ

ಜುಟ್ಟು ಪೂಜಾರಿ

ಯಾವ ಜುಟ್ಟು

ಕೋಳಿ ಜುಟ್ಟು

ಯಾವ ಕೋಳಿ

ಬಾತು ಕೋಳಿ

ಯಾವ ಬಾತು

ಕೇಸರಿ ಬಾತು

ಯಾವ ಕೇಸರಿ

ತಿನ್ನೋ ಕೇಸರಿ

ಯಾವ ತಿನ್ನೋದು

ಹೊಡ್ತ ತಿನ್ನೋದು…. ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ.

ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, ” ನಿಧಾನಮು ಪ್ರಧಾನಮು” ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ? ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ… ಕೃಪೆ ನನ್ನ ಮುದ್ದಿನ ಮಗಳು.