ಓರ್ವ ವಿಜ್ಞಾನಿ ಮತ್ತು ಉಸಿರಾಡುವ ಭೂಮಿ

ಭೂತಾಪದಲ್ಲಿ ಏರಿಕೆ ವಿಷಯ ಹಲವು ದೇಶಗಳ ರಾಜಕಾರಣಿಗಳ ತಾಪಮಾನವನ್ನು ಏರಿಸುವುದನ್ನು ಕಂಡಿದ್ದೇವೆ. ಪ್ರಗತಿಗಾಗಿ ಮಾನವ ತನ್ನೆಲ್ಲಾ ಬುದ್ಧಿ ಶಕ್ತಿಯನ್ನೂ ಹರಿಬಿಟ್ಟಂತೆಯೇ ವಾತಾವರಣ ಕೂಡ ತನ್ನ ಕೋಪ ತಾಪವನ್ನು ಮನುಜನ ಮೇಲೆ ಹರಿ ಬಿಡಲು ಆರಂಭಿಸಿತು. ಪರಿಣಾಮ? ಅಕಾಲಿಕ ಮಳೆ, ಪ್ರವಾಹ, ಸುನಾಮಿ, ಚಂಡಮಾರುತಗಳು ಭೂತಾಯಿಯ ಶಾಪಗಳಾಗಿ ನಮ್ಮನ್ನು ಕಾಡಲು ತೊಡಗಿದವು. ಆದರೆ ಈ ಗ್ಲೋಬಲ್ ವಾರ್ಮಿಂಗ್ ಎಂದು ಚಿರಪರಿಚಿತವಾಗಿರುವ ಭೂತಾಪದಲ್ಲಿನ ಏರಿಕೆಯ ಈ ವಿದ್ಯಮಾನ ಎಷ್ಟು ಜನರಿಗೆ ತಿಳಿದಿದೆ. ನಮ್ಮ ಮಾಧ್ಯಮಗಳು ಈ ಕುರಿತು ಜನರ ಗಮನ ಹರಿಸುವಲ್ಲಿ ಮತ್ತು ಅವರನ್ನು ಜಾಗೃತ ರಾಗಿಸುವಲ್ಲಿ ಎಷ್ಟುಮಟ್ಟಿಗೆ ಯಶಸ್ವಿಗಳಾಗಿದ್ದಾರೆ ಎಂದು ನೋಡಿದಾಗ ನಮಗೆ ಸಿಗುವುದು ನಿರಾಶದಾಯಕ ಬೆಳವಣಿಗೆ. ಪತ್ರಿಕೋದ್ಯಮ ಅಂತ ದೊಡ್ಡ ಗ್ಲಾಮರಸ್ ಕೆಲಸ ಅಲ್ಲ ಮಾತ್ರವಲ್ಲ ಅದರಲ್ಲಿ ಸುಗುವ ಕಾಸು ಸಹ ಅಷ್ಟಕ್ಕಷ್ಟೇ ಎನ್ನುವ ಅಭಿಪ್ರಾಯದ ಕಾರಣ ಎಲ್ಲರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳತ್ತ ಕಣ್ಣು ಹಾಕಿದರೆ ಪತ್ರಿಕೋದ್ಯಮ ಪ್ರತಿಭೆಯ ಕೊರತೆಯಿಂದ ಸೊರಗಿತು ನಮ್ಮ ದೇಶದಲ್ಲಿ. ವಿದೇಶೀ ಪತ್ರಿಕೆಗಳೊಂದಿಗೆ ನಮ್ಮ ಪತ್ರಿಕೆಗಳನ್ನು ಹೋಲಿಸಿ ನೋಡಿದಾಗ ಮನವರಿಕೆ ಆದೀತು ನಮ್ಮ ಪತ್ರಿಕೆಗಳ ಗುಣಮಟ್ಟ ಎಂಥದ್ದು ಎಂದು. ಅವಕ್ಕೆ ಕ್ಷುಲ್ಲಕ ವಿಷಯಗಳತ್ತ ಹೆಚ್ಚು ಗಮನ. liz hurley ಎಂಬ ಮಧ್ಯವಯಸ್ಕ ಬೆಡಗಿ ಭಾರತೀಯ ಸಂಜಾತ ಅರುಣ್ ನಾಯರ್ ನಿಗೆ ಕೊಕ್ ಕೊಟ್ಟು ಶೇನ್ ವಾರ್ನ್ ಜೊತೆಗಿನ ಆಕೆಯ ಚಕ್ಕಂದ ನಮ್ಮ ಮಾಧ್ಯಮಗಳಿಗೆ  ದೊಡ್ಡ ಸುದ್ದಿ.  

ನಿನ್ನೆ ಅಮೆರಿಕೆಯ newyork times ಪತ್ರಿಕೆಯಲ್ಲಿ “A Scientist, His Work and a Climate Reckoning”  ಎನ್ನುವ ತಲೆಬರಹವಿರುವ ಲೇಖನ ಪ್ರಕಟವಾಯಿತು. ಭೂತಾಪದ ಬಗ್ಗೆ ಅಮೆರಿಕೆಯ ವಿಜ್ಞಾನಿಯೋರ್ವನ ಸಂಶೋಧನೆ ಮತ್ತು ವಾತಾವರಣದ ಬಗ್ಗೆ ಐದು ಪುಟಗಳ ಲೇಖನವಿದೆ. ಕೆಳಗಿನ ಕೊಂಡಿ ಕ್ಲಿಕ್ಕಿಸಿ ಲೇಖನ ಓದಿ. http://www.nytimes.com/2010/12/22/science/earth/22carbon.html?pagewanted=1&_r=1

ನನ್ ಟೈಮ್ ಸರಿಯಿಲ್ಲ ಅಷ್ಟೇ !

ಟೈಮ್ ಸರಿಯಿಲ್ಲ, ಇದು ನಾವು ಕೇಳುವ ದೂರು . ನಮ್ಮ ಅರಿವುಗೇಡಿತನದಿಂದ ಅಥವಾ ಬೇರಾವುದಾರೂ ಕಾರಣದಿಂದ  ಬರುವ ಸಂಕಷ್ಟಗಳಿಗೆ ಸುಲಭ ಮತ್ತು ಪುಕ್ಕಟೆಯಾಗಿ ಸಮಯವನ್ನೂ ಜರೆಯುವುದು, ದೂರುವುದು ನಮ್ಮ ತಾತ ಮುತ್ತಾತಂದಿರು ನಮಗೆ ಬಳುವಳಿಯಾಗಿ ನೀಡಿದ ಜಾಯಮಾನ.  ಇಂದು ಬೆಳಿಗ್ಗೆ ನಮ್ಮ ಕಂಪೆನಿಯಲ್ಲಿ ಸೇಲ್ಸ್ ವಿಭಾಗದಲ್ಲಿ  ಕೆಲಸ ಮಾಡುವ ಒಬ್ಬರು ಬಂದು ಹೇಳಿದರು, ನಿನ್ನೆ ರಾತ್ರಿ ನನ್ನ ಲ್ಯಾಪ್ ಟಾಪ್ ಕಳುವಾಯಿತು. ಫ್ಲಾಟ್ ಹೊರಗೆ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಕಳ್ಳತನ ಮಾಡಿದರು ಎಂದು ಹೇಳಿ ಏನು ಮಾಡೋದು, ನನ್ನ ಟೈಮ್ ಸರಿಯಿಲ್ಲ ಅಷ್ಟೇ ಎಂದು ಮರುಗಿದರು. ಈ ರೀತಿಯ ಕಹಿ ಅನುಭವ ಈ ವ್ಯಕ್ತಿಗೆ ಮೊದಲನೆಯದಲ್ಲ. ಕಳೆದ ವರ್ಷ ಅವರ ಫ್ಲಾಟ್ ಒಳಕ್ಕೆ ನುಗ್ಗಿ ಪತ್ನಿಯ ಒಡವೆಗಳನ್ನು ಕದ್ದೊಯ್ದಿದ್ದರು ಕಳ್ಳರು.  ಆದರೆ ಈ ಕಳ್ಳತನದ ಬಗ್ಗೆ ಮಾತ್ರ ಅವರಿಗೆ ನಿಖರವಾದ ಮಾಹಿತಿ ಇತ್ತು. ಅವರಿಗೆ ಹೊಸತಾಗಿ ಪರಿಚಯವಾಗಿದ್ದ ವ್ಯಕ್ತಿ ಮಾಡಿದ್ದೆಂದು ಅವರಿಗೆ ಚೆನ್ನಾಗಿ ತಿಳಿದಿದ್ದರೂ ಪೊಲೀಸರಿಗೆ ದೂರು ಕೊಡಲು ಹೆದರಿದರು. ಏಕೆಂದರೆ ಇಲ್ಲಿನ ಪೊಲೀಸರು ಲಂಚ, ವಶೀಲಿ ಬಾಜಿಗೆ ಬೀಳದೆ ಮುಲಾಜಿಲ್ಲದೆ ಬಾಯಿ ಬಿಡಿಸಿ ಬಿಡುತ್ತಾರೆ. ಆ ವ್ಯಕ್ತಿಯ ವಿರುದ್ಧ ದೂರು ನೀಡಿದರೆ ನಾಳೆ ಭಾರತದಲ್ಲಿ ತನಗೆ ತೊಂದರೆ ಆಗಬಹುದು ಎಂದು ಹೆದರಿ ಪೊಲೀಸ್ ದೂರು ಕೊಡಲು ಒಪ್ಪಲಿಲ್ಲ. ಎಲ್ಲಾ ನನ್ ಟೈಮ್ ಅಷ್ಟೇ ಎಂದು ಕೈ ಚೆಲ್ಲಿ ಕೂತ ಅವರಿಗೆ ನಾನು ಹೇಳಿದೆ, ನಾವು ಟೈಮ್ ಅನ್ನು ದೂರುವುದು ಸರಿಯಲ್ಲ. ಜೀವನದಲ್ಲಿ ಅದೇನು ಸಂಭವಿಸಬೇಕೋ ಅದು ಆಗಿಯೇ ತೀರುತ್ತದೆ. ನಮ್ಮಿಂದ ಅದನ್ನು  ತಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ದೇವರ ಮೊರೆ ಹೋಗಬೇಕೆ ಹೊರತು ಸಮಯವನ್ನೂ ದೂರುವುದು ಸರಿಯಲ್ಲ ಎಂದು ನಯವಾಗಿ ಹೇಳಿದೆ. ಆದರೆ ಬೆಲೆ ಬಾಳುವ ವಸ್ತುಗಳನ್ನು ಕಳೆದು ಕೊಂಡ ಆತ ಮಾತ್ರ ‘ಸಮಯ’ ದ ಪರವಾಗಿ ನಿಂತ ನನ್ನ ನಿಲುವನ್ನು ಒಪ್ಪಿದಂತೆ ಕಾಣಲಿಲ್ಲ.

ಮೇಲೆ ಹೇಳಿದ ರೀತಿಯ ಘಟನೆಗಳನ್ನು ನಾವು ದಿನವೂ ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಒಂದರ ಹಿಂದೆ ಒಂದು ಅವಘಡಗಳು ಸಂಭವಿಸಿದರಂತೂ ಕೇಳಬೇಡಿ’ ಟೈಮ್’ ನ ಗೋಳು. ಸಮಯದ ಜನ್ಮ ಜಾಲಾಡುತ್ತಾರೆ. ಪರಿಹಾರ ಕಾಣಲೆಂದು ಜ್ಯೋತಿಷ್ಯರ,  ಮಂತ್ರವಾದಿಗಳ  ಮೊರೆಯೂ ಹೋಗುತ್ತಾರೆ. ತಂತ್ರ ಯಂತ್ರ ಕಟ್ಟಿಸಿ ಕೊಳ್ಳಲು ಎಂದು  ಮತ್ತಷ್ಟು ಕಳೆದುಕೊಳ್ಳುತ್ತಾರೆ. ಆದರೆ ನಮಗೆದುರಾಗುವ ಎಲ್ಲಾ ಪ್ರಾರಬ್ದ ಗಳಿಗೂ ನಿಜವಾಗಿಯೂ ‘ಟೈಮ್’’ ಅಥವಾ ಕೆಟ್ಟ ಘಳಿಗೆ ಕಾರಣವೇ?  

ಕಾಲವನ್ನು  ಸಂವತ್ಸರ ಎಂದು ಕರೆಯುತ್ತಾರೆ. ವತ್ಸರ ಎಂದರೆ ದೇವರು. ಅಂದರೆ ಕಾಲವೇ ದೇವರು. ಸಂವತ್ಸರ ಎಂದರೆ ವರ್ಷ ಎಂದಲ್ಲ. ಪ್ರತೀ ಕ್ಷಣ, ನಿಮಿಷ, ಘಂಟೆಗಳು ಸಂವತ್ಸರವೇ. ಏಕೆಂದರೆ ಈ ಕ್ಷಣ, ನಿಮಿಷ, ಘಂಟೆಗಳಿಂದ ದಿನಗಳು, ತಿಂಗಳುಗಳಾಗಿ ವರ್ಷ ಎಂದೆನ್ನಿಸಿ ಕೊಳ್ಳುತ್ತದೆ. ಅಂದರೆ ನಾವು ನಮಗೆ ಎದುರಾಗುವ ಕಷ್ಟ, ದುಃಖ ದುಮ್ಮಾನಗಳಿಗೆ  ಸಮಯವನ್ನು ಹಳಿದರೆ ದೇವರನ್ನು ತೆಗಳಿದಂತಾಗುತ್ತದೆ, ಅಲ್ಲವೇ?    

ತೃಣಮಪಿ ನಃ ಚಲತಿ. ದೇವನ ಅಪ್ಪಣೆಯಿಲ್ಲದೆ ಹುಲ್ಲೂ ಕೂಡ ಚಲಿಸದು ಎನ್ನುವ ಅರ್ಥದ ಈ ಮಾತು ಇಸ್ಲಾಂ ಧರ್ಮೀಯರ “ಪವಿತ್ರ ಕುರ್’ಆನ್” ನಲ್ಲಿಯೂ ಇದೆ. ಪ್ರತೀ ಕಾರ್ಯವೂ, ಪ್ರತೀ ಘಟನೆಯೂ, ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ದೇವನ ಅಪ್ಪಣೆಯಿಲ್ಲದೆ ನಡೆಯುವುದಿಲ್ಲ ಎಂದು ಆಸ್ತಿಕರು ಬಲವಾಗಿ ನಂಬುವರು. ಅದರಲ್ಲೂ ಮುಸ್ಲಿಮರಲ್ಲಿ ಈ ನಂಬಿಕೆ ಹೆಚ್ಚು. ಯಾವುದೇ ತೆರನಾದ ಅವಘಡಕ್ಕೂ ಕಾಲವನ್ನಾಗಲಿ, ದುರದೃಷ್ಟ ವನ್ನಾಗಲೀ ಟೀಕಿಸಲು, ಶಪಿಸಲು ಹೋಗದೆ ಎಲ್ಲಾ ದೈವೇಚ್ಛೆ ಎಂದು ಇರುವುದರಲ್ಲೇ ತೃಪ್ತಿ ಕಾಣುತ್ತಾರೆ. ಒಮ್ಮೆ ಪಾಶ್ಚಾತ್ಯ ದೇಶವೊಂದರ ಯಾತ್ರಿಯೊಬ್ಬ (ನೆದರ್ ಲ್ಯಾಂಡ್ಸ್ ನ van der post ಎಂದು ನನ್ನ ನೆನಪು) ಸಹರಾ ಮರುಭೂಮಿಯ ಮುಖಾಂತರ ಪ್ರಯಾಣ ಬೆಳೆಸಿದಾಗ ಮೊರಾಕ್ಕೋ ದೇಶಕ್ಕೆ ಸೇರಿದ ಮರುಭೂಮಿಯಲ್ಲಿ ಒಂದು ದೃಶ್ಯ ಕಾಣಲು ಸಿಗುತ್ತದೆ.  ಮರುಭೂಮಿಯಲ್ಲಿ ವಾಸಿಸುವ ಬೆದೂಯಿನ್ (bedouin) ಬುಡಕಟ್ಟಿನವರು ಒಂದು ಕಡೆ ತಾತ್ಕಾಲಿಕ ಡೇರೆ ಹಾಕಿದ್ದನ್ನು ಈತ ಕಾಣುತ್ತಾನೆ. ಅವರೊಂದಿಗೆ ಹರಟುತ್ತಾ ಇದ್ದಾಗ ಒಮ್ಮೆಗೆ ಈ ಬಿರುಗಾಳಿ ಅಪ್ಪಳಿಸಿ ಕುರಿ, ಕೋಳಿ, ಒಂಟೆ, ಡೇರೆ, ಸಾಮಾನು ಪಾತ್ರೆ ಪಗಡಿ ಎಲ್ಲವನ್ನೂ ಬಾಚಿಕೊಂಡು ಹೋಗಿ ಬಿಡುತ್ತದೆ. ಮರುಭೂಮಿಯ ಬಿರುಗಾಳಿ (sand storm) ಗೊತ್ತೇ ಇದೆಯಲ್ಲಾ. ತನ್ನ ಹಾದಿಗೆ ಅಡ್ಡ ಬರುವ ಯಾವುದನ್ನೂ ಬಿಡದೆ ಬಾಚಿಕೊಂಡು ಹೋಗುವ ಬಿರುಗಾಳಿ. ನಮಗೆ ಪರಿಚಯವಿರುವ ಸುಂಟರ ಗಾಳಿಯಂತೆ. ಸಾವಿರ ಸುಂಟರ ಗಾಳಿ ಕೂಡಿಕೊಂಡು ಧಾಳಿ ಮಾಡಿದರೆ ಹೇಗಿರುತ್ತೋ ಹಾಗಿರುತ್ತದೆ ಮರುಭೂಮಿಯ ಬಿರುಗಾಳಿ. ಸುಮಾರು ಹೊತ್ತಿನ ನಂತರ ಬಿರುಗಾಳಿಯ ಅಬ್ಬರ ನಿಂತ ಮೇಲೆ ಒಂದೇ ಒಂದು ಶಬ್ದವನ್ನೂ ಆಡದೆ, ತುಟಿ ಪಿಟಿಕ್ಕನ್ನದೆ ತಮ್ಮ ಕೆಟ್ಟ ಘಳಿಗೆಯನ್ನು ತೆಗಳದೆ, ಇದೊಂದು ಸಾಮಾನ್ಯ ಘಟನೆ ಎನ್ನುವ ಭಾವದಿಂದ  ಸಿಕ್ಕಿದ್ದೇ ಶಿವ ಎಂದು ಬೀಸಿದ ಬಿರುಗಾಳಿ ಅಳಿದುಳಿಸಿದ ಸಾಮಾನುಗಳನ್ನು ಅತ್ಯಂತ ಶ್ರದ್ಧೆಯಿಂದ, ಜೋಪಾನದಿಂದ, ಸಂಯಮದಿಂದ ಹೆಕ್ಕುತ್ತಿದ್ದನ್ನು ನೋಡಿದ ಈ ಪಾಶ್ಚಾತ್ಯ ದಂಗಾಗಿ ನಿಲ್ಲುತ್ತಾನೆ. ಕೆಲವೇ ಕ್ಷಣಗಳಲ್ಲಿ ತಮ್ಮ ಬದುಕನ್ನೇ ಮೂಲೋತ್ಪಾಟನೆ ಮಾಡಿದ ಬಿರುಗಾಳಿಯನ್ನು ಶಪಿಸದೇ, ಅತ್ಯಂತ ಸಮಯದಿಂದ ಸಹಿಸಿ, ಶಾಂತ ಚಿತ್ತತೆಯಿಂದ ಅಳಿದುಳಿದುದದನ್ನು ಆರಿಸಿ ಕೊಳ್ಳುತ್ತಿದ್ದ ಬೆದೂಯಿನ್ ರನ್ನು ಕಂಡು ಆತನಿಗೆ ತನ್ನ ಕಣ್ಣುಗಳ ನ್ನು ನಂಬಲಾಗಲಿಲ್ಲ. ಅಲ್ಲಿದ್ದ ಒಬ್ಬನಿಗೆ ಈ ಕುರಿತು ಕೇಳಿದಾಗ ಅವನು ಹೇಳಿದ್ದು, ನಮಗೆ ಈ ಸ್ಥಿತಿ ತಂದ ಬಿರುಗಾಳಿಯನ್ನು ನಾನು ಶಪಿಸಿ ಪಡೆಯುವುದಾದರೂ ಏನನ್ನು? ಹೋದ ಸಾಮಾನುಗಳು, ಆದ ನಷ್ಟ, ತಿರುಗಿ ಬರುತ್ತದೆಯೇ? ಹೆಚ್ಚು ವಿಳಂಬ ಮಾಡದೇ “ಅಲ್ಹಂದು ಲಿಲ್ಲಾಹ್’” (ದೇವರಿಗೆ ಸರ್ವಸ್ತುತಿ) ಎಂದು ಇರುವುದನ್ನು ಆರಿಸಿ ಕೊಂಡು ಮುಂದಿನ ದಾರಿ ನೋಡುವುದು ತಾನೇ ಜಾಣತನ ಎಂದು ಆತನಿಗೆ ಮರು ಪ್ರಶ್ನೆ ಹಾಕಿದಾಗ ಬಿಳಿಯ ಆ ಪ್ರಶ್ನೆಗೆ ಉತ್ತರ ಕಾಣದೆ ತನ್ನ ದೇಶದಲ್ಲಾಗಿದ್ದರೆ ಏನು ಮಾಡುತ್ತಿದ್ದರು ಎಂದು ಯೋಚಿಸುತ್ತಾ ತನ್ನ ದಾರಿ ಹಿಡಿಯುತ್ತಾನೆ.  

ಎಂಥದ್ದೇ ಗಂಭೀರವಾದ, ಕ್ಲಿಷ್ಟಕರವಾದ, ದಬ್ಬಾಳಿಕೆಗೆ ಒಳಗಾದಾಗ, ಮಾನಸಿಕ ಕ್ಲೇಶ, ದೈಹಿಕ ನೋವು, ಅಗಲಿಕೆ ಬಂದಾಗಲೂ ಅರಬರು ಹೇಳುವುದು “ಅಲ್ಹಂದು ಲಿಲ್ಲಾಹ್”, ಅಥವಾ “ನಿನ್ನಿಂದಲೇ ಬಂದೆವು, ನಿನ್ನಲ್ಲಿಗೇ ನಾವು ಮರಳುವೆವು, (ಇನಾ ಲಿಲ್ಲಾಹಿ ವಯಿನ್ನಾ ಇಲೈಹಿ ರಾಜಿಊನ್) ಎನ್ನುವ ಮಾತನ್ನು ಹೇಳುತ್ತಾರೆ. ವಿಶೇಷವಾಗಿ ನಿಧನದ ವಾರ್ತೆ ಕೇಳಿದಾಗ ಈ ಮಾತನ್ನು ಹೇಳಲೇ ಬೇಕು. ಅಯ್ಯೋ ಪಾಪ, ಯಾವಾಗ ಸತ್ರು, ಪಾಪ, ಎಷ್ಟು ಚೆನ್ನಾಗಿದ್ರು, ಚಿಕ್ಕ ವಯಸ್ಸು, ಸ್ವಲ್ಪ ಮೊದಲು ತಾನೇ  ಮಾತನಾಡಿಸಿದ್ದೆ…. ಎಂದೆಲ್ಲಾ ಬಡಬಡಿಸುವ ಗೋಜಿಗೆ ಅರಬರು ಹೋಗುವುದಿಲ್ಲ. ಏಕೆಂದರೆ ಎಲ್ಲವೂ ವಿಧಿಯ ಕೈಯ್ಯಲ್ಲಿ, ಆ ವಿಧಿಯನ್ನು ಕಾರ್ಯಗತ ಗೊಳಿಸುವವನೇ ಮೇಲೆ ಕೂತಿರುವ ಆ ಪರಮಾತ್ಮ. ಮತ್ತೊಂದು ಹದೀಸ್ ಸೂಕ್ತದಲ್ಲಿ “ಆದಮನ (ಆದಿ ಮಾನವ) ಮಗ ತಪ್ಪು ತಿಳಿದಿದ್ದಾನೆ. ಘಳಿಗೆಯನ್ನು ಅವನು ಶಪಿಸುತ್ತಾನೆ ಆದರೆ ನಾನೇ ಆಗಿದ್ದೇನೆ ಆ ಘಳಿಗೆ. ಒಳಿತು ಮತ್ತು ಎಲ್ಲವೂ ನನ್ನ ಕೈಗಳಿಂದಲೇ ಬರುತ್ತವೆ. ಮತ್ತು ಹಗಲನ್ನು ಹಿಂಬಾಲಿಸುವ ಇರುಳು ಸಹ ನನ್ನಿಂದಲೇ” ಎಂದು ದೇವರು ಹೇಳುತ್ತಾನೆ.       

ನಮ್ಮ ಅಜಾಕರೂಕತೆಯಿಂದ ಉಂಟಾಗುವ ಅನಾಹುತಗಳಿಗೆ ಸುಖಾ ಸುಮ್ಮನೆ ಸಮಯವನ್ನು ಶಿಲುಬೆಗೆ ಏರಿಸದೆ ಹೆಚ್ಚು ಜಾಗರೂಕರಾಗೋದೇ ಲೇಸು ಅಲ್ಲವೇ?

ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ

ಚಾಕಲೇಟ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ? where?

ಶಾಪ್ಪಿಂಗ್ ಗೆಂದು ಮೊನ್ನೆ ಹೈಪರ್ ಮಾರ್ಕೆಟ್ ಗೆ ಹೋದೆವು. ಬೇಕಾದ ಸಾಮಾನುಗಳನ್ನು ತೆಗೆದುಕೊಂಡ ನಂತರ ನನ್ನ ಮಗಳು ಚಾಕಲೇಟ್ ಸೆಕ್ಷನ್ ಕಡೆ ಓಡಿದಳು. ಅವಳನ್ನು ಹಿಂಬಾಲಿಸಿದ ನಾನು ಸುಮಾರು ೨೦೦ ಮೀಟರ್ ಉದ್ದದ ಚಾಕಲೇಟ್ ಶೆಲ್ಫ್ ಗಳಲ್ಲಿ ಇಟ್ಟಿದ್ದ ತರಾವರಿ ಚಾಕಲೇಟ್ ಗಳನ್ನು ನೋಡುತ್ತಾ ಇದ್ದಾಗ ಒಂದು ಆಫರ್ ಕಣ್ಣಿಗೆ ಬಿತ್ತು. ಆಫರ್ ಇದ್ದದ್ದು ‘ಸ್ನಿಕ್ಕರ್ಸ್’ ಚಾಕಲೇಟ್ ಮೇಲೆ. ಒಂದು ಚಾಕಲೇಟ್ ಬಾರ್ ಕೊಂಡರೆ ಒಂದು ಲೀಟರ್ ಪೆಟ್ರೋಲ್ ಫ್ರೀ. ಹತ್ತಿರ ನಿಂತಿದ್ದ ನನ್ನ ಪತ್ನಿ ಹೇಳಿದಳು ಪಾಪ, ಅಲ್ಲಿ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಸಿದ್ದಾರೆ ಎಂದು ಜನ ಸಂಕಟ ಪಡುತ್ತಿದ್ದರೆ ಇಲ್ಲಿ ಅಗ್ಗದ ಪೆಟ್ರೋಲ್ ಸಾಲದು ಎಂದು ಫ್ರೀ ಬೇರೆ ಕೊಡುತ್ತಿದ್ದಾರೆ ಎಂದು ಕನಿಕರ ಪಟ್ಟಳು. ಆದರೆ ಈ ಕೊಡುಗೆಯನ್ನ ಜನ ಉಪಯೋಗಿಸಿ ಕೊಳ್ಳಲಾರರು. ಏಕೆಂದರೆ ಇಲ್ಲಿ ಪೆಟ್ರೋಲ್ ಗೆ ಲೀಟರ್ ಒಂದಕ್ಕೆ ಇಲ್ಲಿನ ೫೦ ಪೈಸ. ಅಂದರೆ ಹೆಚ್ಚು ಕಡಿಮೆ ಆರು ರೂಪಾಯಿಗಳು. ಚಾಕಲೇಟ್ ತಿಂದ ನಂತರ ಅದರ ಕವಚವನ್ನು ಜೋಪಾನವಾಗಿ ಇಟ್ಟುಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಜಾಯಮಾನದವರಲ್ಲ ಅರಬರು. ಕವಚ ಹಿಡಿದು ಕೊಂಡು ಪೆಟ್ರೋಲ್ ಹಾಕಿಸಿ ಕೊಳ್ಳುವ ಅವಶ್ಯಕತೆ ನನಗಂತೂ ಇಲ್ಲ. ಕಂಪೆನಿಯ ಕಾರು, ಕಂಪೆನಿಯದೆ ಪೆಟ್ರೋಲು. ಯಾರದೋ ದುಡ್ಡು, ಎಲ್ಲಮನ್ ಜಾತ್ರೆ ಥರ. ಹಾಗಾಗಿ ಕವಚ ಸಲೀಸಾಗಿ ತಿಪ್ಪೆ ಸೇರುತ್ತದೆ.  

ಪೆಟ್ರೋಲ್ ಗೆ ಮೊದಲು ಒಂದು ಲೀಟರಿಗೆ ಇಲ್ಲಿನ ಒಂದು ರಿಯಾಲ್ ಇತ್ತು. ಅಂದರೆ ೧೨ ರೂಪಾಯಿ. ಕಳೆದ ವರ್ಷಗಳ ಹಿಂದೆ ದರ ಕಡಿತ ಮಾಡಿ ಆರು ರೂಪಾಯಿಗೆ ಇಳಿಸಿದರು. ಭಾರತದಲ್ಲಿ ‘ದರ ಕಡಿತ’ ಖಾದಿ ಭಂಡಾರ ಬಿಟ್ಟು ಬೇರೆಲ್ಲಾದರೂ ಕಂಡಿದ್ದೀರಾ?  

ಈಗ ಕರುಬದಿರಿ ನನ್ನ ಅದೃಷ್ಟಕ್ಕೆ. ನನ್ನ ‘ಟ್ರಾಲಿ’ ಯಲ್ಲಿರುವ ಒಂದು ಕೆಜಿ ಟೊಮೆಟೋ ಹಣ್ಣಿಗೆ ಭಾರತದ ಎಪ್ಪತ್ತು ರೂಪಾಯಿ ಪೀಕ್ತಾ ಇದ್ದೀನಿ. ಅಕ್ಕಿ ಕೆಜಿಗೆ ನಲವತ್ತಾರು ರೂಪಾಯಿ. ಸಮಾಧಾನ ಆಯಿತೆ? ಟೊಮೆಟೋ ಇಲ್ಲದೆ ಟೊಮೆಟೋ ಗೊಜ್ಜು  ಆಗುವಂತಿದ್ದರೆ? ಅಕ್ಕಿ ಇಲ್ಲದೆ ಅನ್ನ ಆಗುವಂತಿದ್ದರೆ?

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.

ಒಂದು ದಿನ ಓರ್ವ ರೈತನ ಕತ್ತೆ ಹಾಳು ಬಾವಿಯೊಳಕ್ಕೆ ಬಿದ್ದು ಬಿಡುತ್ತದೆ. ಕತ್ತೆಯ ಆಕ್ರಂದನ ಕೇಳಿ ರೈತ ಅಲ್ಲಿಗೆ ಧಾವಿಸಿ ಬಂದು ನೋಡುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿ, ಏನು ಮಾಡಬೇಕೆಂದು ಹೊಳೆಯದೆ ಹೇಗೂ ಈ ಕತ್ತೆಗೆ ವಯಸ್ಸಾಗಿ ಬಿಟ್ಟಿದೆ, ಅಲ್ಲಿಗೇ ಮಣ್ಣು ಹಾಕಿ ಸಮಾಧಿ ಮಾಡಿದರಾಯಿತು ಎಂದು ತನ್ನ ಪರಿಚಿತರನ್ನು ಕರೆಯುತ್ತಾನೆ ಸಹಾಯಕ್ಕೆಂದು. ಎಲ್ಲರೂ ಸೇರಿ ಕತ್ತೆಯ ಮೇಲೆ ಮಣ್ಣನ್ನು ಅಗೆದು ಹಾಕಲು ಆರಂಭಿಸುತ್ತಾರೆ. ಮೊದಮೊದಲಿಗೆ ಸುಮ್ಮನಿದ್ದ ಕತ್ತೆಗೆ ಕೊನೆಗೆ ಹೊಳೆಯುತ್ತದೆ ಇವರು ನನ್ನನ್ನು ಉಳಿಸಲು ಅಲ್ಲ ಬಂದಿದ್ದು, ಬದಲಿಗೆ ಜೀವಂತ ಸಮಾಧಿ ಮಾಡಲು ಎಂದು ದೈನ್ಯತೆಯಿಂದ ಅಳಲು ಆರಂಭಿಸುತ್ತದೆ. ಕತ್ತೆಯ ಅಳು ಯಾರಿಗೂ ಕೇಳಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಕತ್ತೆ ತನ್ನ ಆಕ್ರಂದನ ನಿಲ್ಲಿಸಿ ತನ್ನ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೊಡವಿ ಒಂದು ಹೆಜ್ಜೆ ಮೇಲೆ ಇಡುತ್ತದೆ. ಹೀಗೆ ಒಂದೇ ಸಮನೆ ತನ್ನ ಮೇಲೆ ಮಣ್ಣು ಬೀಳುತ್ತಿದ್ದರೂ ಕತ್ತೆ ಮಾತ್ರ ಸಾವಧಾನದಿಂದ ಮೈ ಕೊಡವುತ್ತಾ ಒಂದೊಂದೇ ಹೆಜ್ಜೆ ಗಳನ್ನು ಮೇಲಕ್ಕೆ ಇಡುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಜನರಿಗೆ ಆಶ್ಚರ್ಯ ಮತ್ತು ಸ್ವಲ್ಪ ಹೊತ್ತಿನಲ್ಲಿ ಕತ್ತೆ ಬಾವಿಯಿಂದ ಹೊರಕ್ಕೆ ಬಂದಿರುತ್ತದೆ. ಈ ವಿಸ್ಮಯದ ಬಗ್ಗೆ, ಕತ್ತೆಯ ಜಾಣ್ಮೆಯ ಬಗ್ಗ್ಗೆ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದರೆ ಕತ್ತೆ ಮಾತ್ರ ಅಳಿದುಳಿದ ಧೂಳನ್ನು ತನ್ನ ಮೈ ಮೇಲಿಂದ ಕೊಡವಿ ಗಾಂಭೀರ್ಯದಿಂದ ತನ್ನ ದಾರಿ ಹಿಡಿಯುತ್ತದೆ.

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ಗುರಿಯ ಸಾಫಲ್ಯ.

ಈ ಕತೆ ಕಲಿಸುವ ನೀತಿ ಏನೆಂದರೆ, ಬದುಕು ನಿಮ್ಮ ಮೇಲೆ ಮಣ್ಣನ್ನು ಎರಚುತ್ತಿರುತ್ತದೆ. ಎಲ್ಲಾ ರೀತಿಯ ಮಣ್ಣನ್ನು.

ಉಪಾಯವೇನೆಂದರೆ ಮೇಲೆ ಬಿದ್ದ ಮಣ್ಣನ್ನು ಕೊಡವಿ ಮೆಲಕ್ಕೆಳಲು ಶ್ರಮಿಸುವುದು.

ನಮ್ಮ ಪ್ರತೀ ಹೆಜ್ಜೆಯೂ ಉನ್ನತಿ ಕಡೆಗಿನ ಯಾತ್ರೆ. ಎಷ್ಟೇ ಆಳವಾದ ಬಾವಿಯಿಂದಲಾದರೂ ಸರಿ ನಾವು ಹೊರಕ್ಕೆ ಬರಬಹುದು ತಾಳ್ಮೆ, ಛಲವೊಂದಿದ್ದರೆ.

ಕೊಡವಿ ಮತ್ತು ಎದ್ದೇಳಿ.

ಮೇಲಿನ ನೀತಿ ಪಾಠಕ್ಕೆ ಮತ್ತೈದು ಸೂತ್ರಗಳನ್ನು ಸೇರಿಸಿಕೊಳ್ಳಿ.

ಹಗೆಯಿಂದ ದೂರವಿರಿ. ಕ್ಷಮಾಶೀಲರಾಗಿ. ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ.

ಚಿಂತೆಯಿಂದ ದೂರವಿರಿ. ನಾವು ಊಹಿಸಿಕೊಳ್ಳುವ ಬಹುತೇಕ ಚಿಂತೆಗಳು ಬಹುಮಟ್ಟಿಗೆ ಎದುರಾಗಲಾರವು.

ಸರಳವಾಗಿ ಬದುಕಿ. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ.

ನಿಮ್ಮಲ್ಲಿ ಇರುವುದರಲ್ಲಿ ಸ್ವಲ್ಪ ಇಲ್ಲದವರಿಗೂ ಕೊಡಿ. ನಿಮ್ಮಿಂದ ಪಡೆದುಕೊಂಡವನ ಮುಖದ ಮೇಲೆ ನೀವು ಕಾಣುವ ಧನ್ಯತಾ ಭಾವ ಯಾವ ಸ್ವರ್ಗಕ್ಕೂ ಕಡಿಮೆಯಲ್ಲ. ಕೊನೆಯದಾಗಿ, ಜನರಿಂದ ಅತಿ ಕಡಿಮೆಯನ್ನೇ ಬಯಸಿರಿ. ಆದರೆ ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನಿಂದ ಮಾತ್ರ ಅತಿ ಹೆಚ್ಚಿನದನ್ನು ನಿರೀಕ್ಷಿಸಿ. ಏಕೆಂದರೆ ಎಂದಿಗೂ ಬರಿದಾಗದ ಖಜಾನೆ ಅವನಲ್ಲಿದೆ.

ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.

star war

೧೯೮೧ ರಿಂದ ೧೯೮೯ ರವರೆಗೆ ಅಮೆರಿಕೆಯ ೪೦ ನೇ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅಮೆರಿಕೆಯ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲೊಬ್ಬರು. ಇವರ ಕಾಲದಲ್ಲಿಯೇ ಅಮೇರಿಕ SDI (Strategic Defence Initiative) ಕಾರ್ಯಕ್ರಮದ ಅಡಿಯಲ್ಲಿ star war ತಂತ್ರಜ್ಞಾನಕ್ಕೆ ಮುನ್ನುಡಿ ಬರೆದಿದ್ದು. ವಿಕಿಲೀಕ್ ಹಗರಣ ಈಗ ಒಂದು ರೀತಿಯ star war ರೀತಿಯ ಕದನಕ್ಕೆ ದಾರಿ ಮಾಡಿ ಕೊಡುತ್ತಿದೆ. ಅಸಾಂಜ್ ನನ್ನು ಬಂಧಿಸಿದ್ದರಿಂದ ಅವನ ಬೆಂಬಲಿಗರು ತಮ್ಮ ಸಮರವನ್ನು ನಭೋ ಮಂಡಲಕ್ಕೆ ಒಯ್ದಿದ್ದಾರೆ. ಅಂದರೆ ಪೂರ್ಣ ಪ್ರಮಾಣದ assault through web sphere. ಅಮೆರಿಕೆಯನ್ನೂ ಒಳಗೊಂಡು ವಿಶ್ವದ ಬಹುತೇಕ ರಾಷ್ಟ್ರಗಳ ರಾಜತಾಂತ್ರಿಕರ, ಆಳುವವರ ಮಧ್ಯೆ ನಡೆದ ಮಾತುಕತೆ, ರಹಸ್ಯಗಳನ್ನು ಕ್ಷಣ  ಮಾತ್ರದಲ್ಲಿ ವಿಶ್ವದೆಲ್ಲೆಡೆ ವೆಬ್ ತಂತ್ರಜ್ಞಾನದ ಮೂಲಕ ಹರಡಿದ ಕಾರಣ ಭುಗಿಲೆದ್ದ ವಿವಾದ ಮತ್ತು ಸಮರಕ್ಕೆ ನಭೋ ಮಂಡಲವೇ ಯುದ್ಧ ಭೂಮಿ. ಅದೇ ಸಮಯ ಅಸಾಂಜ್ ನಿಗೂ ಬೆಂಬಲದ ಮಹಾಪೂರ ವೆಬ್ ಟೆಕ್ಕಿಗಳಿಂದ ಮತ್ತು ಪಾರದರ್ಶಕತೆ ಯಲ್ಲಿ ವಿಶ್ವಾಸ ಇರಿಸಿದ ಆಸಕ್ತರಿಂದ. ಈಗ ಆರಂಭ mother of all battles.

mother of all battles. ಈ ನುಡಿಮುತ್ತುಗಳನ್ನು ಚಲಾವಣೆಗೆ ತಂದಿದ್ದು ಇರಾಕಿನ ಮಾಜಿ ಅಧ್ಯಕ್ಷ ಸದ್ದಾಮ್ ಹುಸೇನ್. ೧೯೯೦ ರ ಲ್ಲಿ ಕುವೈತ್ ದೇಶವನ್ನು ಆಕ್ರಮಿಸಿಕೊಂಡಾಗ ಅಮೆರಿಕೆಯೂ ಸೇರಿ ಬಲಿಷ್ಠ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದಕ್ಕೆ ಸದ್ದಾಮ್ ಗುಡುಗಿದ್ದು ನನ್ನ ತಂಟೆಗೆ ಬಂದರೆ ಕೊಲ್ಲಿ ಯುದ್ಧ mother of all battles ಗೆ ಕಾರಣವಾಗುತ್ತದೆ ಎಂದು.   

ವಿಕಿ ಲೀಕ್ ವಿರುದ್ಧದ ಕಾರ್ಯಾಚರಣೆ ಈ ರೀತಿ ಆರಂಭ. ಅಸಾಂಜ್ ತನ್ನ ವಿಕಿಲೀಕ್ ಎನ್ನುವ ಟಾಮ್ ಟಾಮ್ ಅಂಗಡಿಯನ್ನು ನಡೆಸುತ್ತಿದ್ದದ್ದು ದೇಣಿಗೆಯ ಸಹಾಯದಿಂದ. ಅದಕ್ಕೆ ಬಿತ್ತು ಮೊದಲ ಕತ್ತರಿ. ಹಣ paypal, visa, master card ನಂಥ ವ್ಯವಸ್ಥೆಗಳ ಮೂಲಕ ಬರುತ್ತಿದ್ದರಿಂದ ಅಮೆರಿಕೆಗೆ ಹೆದರಿ ಅವೂ ಸಹ ತಮ್ಮ ಗಿರಾಕಿ ಅಸಾಂಜ್ ನನ್ನು ಹೊರಗಟ್ಟಿದವು. ಹಾಗೆಯೇ ಅವನ ‘ಅಂಗಡಿ’ ಗೆ ಸ್ಥಳ ದಯಪಾಲಿಸಿದ್ದ ವೆಬ್ ಸರ್ವರ ಗಳ ಮೇಲೂ ಸರಕಾರಗಳ ಕೆಂಗಣ್ಣು. ಸರ್ವರುಗಳೂ ಅಸಾಂಜ ನ ಮುಖಕ್ಕೆ ಬಡಿದವು ಕದಗಳನ್ನು. ಅಸಾಂಜ್ ನನ್ನು ಅತ್ಯಾಚಾರದ ಆರೋಪ ಹೊರಿಸಿ ಸರಳುಗಳ ಹಿಂದಕ್ಕೆ ನೂಕಿದ ಕ್ರಮ ಪ್ರತಿಭಟಿಸಿ, ಕುಪಿತರಾದ ಆತನ ಬೆಂಬಲಿಗರು ಎಲ್ಲಾ ರೀತಿಯ ವೆಬ್ ಧಾಳಿಗಳನ್ನು ಹರಿ ಬಿಟ್ಟಿದ್ದಾರೆ ವಿರೋಧಿ ಪಾಳೆಯದ ಮೇಲೆ. ಬೆಂಬಲಿಗರು facebook , twitter ಮೂಲಕ ಸಭೆ ನಡೆಸಿದರು, ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ಇಲ್ಲಿಗೂ ಬಂತು ಕುತ್ತು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಹ ಅಸಾಂಜ್ ಗೆ ವಿರೋಧ ವ್ಯಕ್ತಪಡಿಸಿದವು. ಇಷ್ಟೆಲ್ಲಾ ರಾದ್ಧಾಂತವನ್ನು ನೋಡಿದ ನಮಗೆ ಅನ್ನಿಸದೆ ಇರುತ್ತದೆಯೇ ನಮ್ಮ ಪುರಾಣದ ಸತ್ಯ ಹರೀಶ್ ಚಂದ್ರನೂ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿರಲಿಕ್ಕಿಲ್ಲವೇನೋ ಎಂದು?

ಈ “ಹೈ ಟೆಕ್” ಸಮರ ಒಂದು ರೀತಿಯ ಸೈ ಫೈ (sci fi )  ಸಿನೆಮಾ ನೋಡಿದಂತೆ. ಮೂರನೇ ಮಹಾಯುದ್ಧಕ್ಕೆ ನಾಂದಿ ಸಹ ಹಾಡಬಹುದೇನೋ ಇದು. ಈ ಸಮರದಲ್ಲಿ apache helicopter ಗಳಿಗಾಗಲಿ, F 16, JAGUAR ಯುದ್ಧ ವಿಮಾನಗಳಿಗಾಗಲಿ, HEAT SEEKING MISSILE ಗಳಿಗಾಗಲಿ ಕೆಲಸವಿಲ್ಲ. ಇಲ್ಲಿ “ಕೀಲಿ ಮಣೆ” ಗಳದೇ ದರ್ಬಾರು. ಈ ಕೀಲಿ ಮನೆಗಳ ವಟ ಗುಟ್ಟುವಿಕೆಗೆ ಎಲ್ಲರೂ ತತ್ತರ. ಎಲ್ಲರೂ ಎಂದರೆ ಅಸಾಂಜ್ ನ ಮೇಲೆ ನಂಜು ಕಾರುವವರು. ಅಸಾಂಜ್ ನ ಬೆಂಬಲಿಗರು ಮೇಲೆ ಸರಕಾರಗಳ ಕಿರುಕುಳಗಳಿಗೆ ಉತ್ತರ ನೀಡಲು ತೀರ್ಮಾನಿಸಿದರು. ಆಪರೇಶನ್ ಪೇ ಬ್ಯಾಕ್. ಅಂದರೆ ಮರು ಪಾವತಿ ಕಾರ್ಯಾಚರಣೆ.  PAY PAL, VISA, MASTER CARD, SERVER ಇವುಗಳ ಮೇಲೆ ಮಿಂಚಿನ ಧಾಳಿ. ವೆಬ್ಸೈಟ್ ಗಳು ಒಂದೊಂದಾಗಿ ತರಗೆಲೆಗಳಂತೆ ಉದುರ ತೊಡಗಿದವು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಗಂಭೀರ ಎಚ್ಚರಿಕೆ. ಅತ್ಯಾಚಾರ ನಡೆದಿದ್ದು ಸ್ವಿಸ್ ನಲ್ಲಿ ಎಂದು ಅಲ್ಲಿನ ಸರಕಾರ ಅಸಾಂಜ್ ನ ಕಸ್ಟಡಿ ಕೇಳಿದ್ದಕ್ಕೆ ಅಲ್ಲಿನ ಸರ್ಕಾರದ ವೆಬ್ ತಾಣದ ಮೇಲೂ ಧಾಳಿ. ಸರಕಾರದ ವೆಬ್ ತಾಣದ ಮೇಲೆಯೇ ಧಾಳಿ ಮಾಡಿದ ಬೇಕೆಂದರೆ ಅಸಾಂಜ್ ನಿಗೆ ಯಾವ ರೀತಿಯ ಆರಾಧಕರಿದ್ದಾರೆ ಮತ್ತು ಅವರ ಸಾಮರ್ಥ್ಯ ಎಂಥದ್ದು ಎಂದು ಊಹಿಸಿ. ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಅಸಾಂಜ್ ಮಾತ್ರ ವಿಚಲಿತನಾಗಲಿಲ್ಲ. ಛಲ ಬಿಡದ ತ್ರಿವಿಕ್ರಮ. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವೊಂದನ್ನು ಎದುರು ಹಾಕಿಕೊಂಡಾಗ ಸಹಜವಾಗಿಯೇ ಬಂದೆರಗುವ ಆಪತ್ತುಗಳನ್ನು ಊಹಿಸಿ ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ ಎಂದು ತನ್ನ ಸಂದರ್ಶಕರಿಗೆ ಕೂಲ್ ಆಗಿ  ಹೇಳಿದ.  

ಅಸಾಂಜ್ ನ ಮೇಲೆ ಅತ್ಯಾಚಾರದ ಆರೋಪ. ಈಗ ಈ ಸಮಸ್ಯೆಗೆ ಒಂದು ರೋಮಾಂಟಿಕ್ angle ಸಹ ಇದೆ. ಘಟನೆ ನಡೆದಿದ್ದು ಸ್ವಿಸ್ ನಲ್ಲಿ. ಅದಕ್ಕೆ ಸ್ವಿಸ್ ಸರಕಾರಕ್ಕೆ ಅಸಾಂಜ್ ನ ಕಸ್ಟಡಿ ಬೇಕಿರುವುದು.  ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನಮ್ಮೊಂದಿಗೆ ಲೈಂಗಿಕವಾಗಿ ನಡೆದು ಕೊಂಡ ಎಂದು ಇಬ್ಬರು ತರುಣಿಯರ ದೂರು. ಅಸಾಂಜ್ ನ ವಿರುದ್ಧದ ಅತ್ಯಾಚಾರದ ಆರೋಪ ದ ಬಗ್ಗೆ ಸ್ವಲ್ಪ ನೋಡೋಣ. ಇಬ್ಬರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಚಟುವಟಿಕೆ ವೇಳೆ ಗರ್ಭ ನಿರೋಧಕ ಕಾಂಡೋಂ ಅಸಾಂಜ್ ಧರಿಸಿರಲಿಲ್ಲ, ಹಾಗಾಗಿ ಇದರಿಂದ ತಮಗೆ AIDS ರೋಗ ಅಥವಾ STD ಅಂಟಿ ಕೊಂಡಿತೆ ಎಂದು ಒಬ್ಬ  ಹುಡುಗಿಯ ಗಾಭರಿ. AIDS ಅಥವಾ STD (Sexually transmitted disease) ಇದೆಯೋ ಎನ್ನುವ ಗಾಭರಿ ಕೋಣೆ ಸೇರುವಾಗ ಇರಲಿಲ್ಲವೇ ಎಂದು ಬಹುಶಃ ಅಸಾಂಜ್ ನ ವಕೀಲರು ಕೇಳಬಹುದು ನ್ಯಾಯಾಲಯದಲ್ಲಿ. ಮತ್ತೊಬ್ಬಾಕೆಯ ದೂರು ಹೀಗೆ. ಲೈಂಗಿಕ ಚಟುವಟಿಕೆ ಸಮಯ ಅಸಾಂಜ್ ಧರಿಸಿದ್ದ ಗರ್ಭ ನಿರೋಧಕ ಚೀಲ ‘ದಾರಿ’ ಮಧ್ಯೆ ಹರಿದು ಹೋಯಿತು, ಉದ್ದೇಶ ಪೂರ್ವಕವಾಗಿ ಅಸಾಂಜ್ ಈ ರೀತಿ ಮಾಡಿದ ಎಂದು. ಹೇಗಿದೆ ನೋಡಿ ಸಂಸ್ಕಾರ. ಒಬ್ಬ ವ್ಯಕ್ತಿಯನ್ನು ಇಷ್ಟ ಪಟ್ಟು ಆತ ಸಂಭಾವಿತ ಎಂದು ಖಾತರಿಯಾದ ಮೇಲೆ ಅವನೊಂದಿಗೇ ಇರುಳನ್ನು ಕಳೆಯೋದು, ಬೆಳಗಾದ ಕೂಡಲೇ, ಅಮಲಿಳಿದ ನಂತರ, ಕಲ್ಪನಾ ಲಹರಿಯನ್ನು ಹರಿ ಬಿಟ್ಟು ನಲ್ಲನ ಚಾರಿತ್ರ್ಯ ವಧೆ ಮಾಡುವುದು. ವಿವಾಹದ ಹೊರಗೆ, ಕಾನೂನು ಬಾಹಿರವಾಗಿ ಈ ಕೆಲಸ ಮಾಡುವವರಿಗೆ ಚಾರಿತ್ರ್ಯ ಎಲ್ಲಿಂದ ಬಂತು ಎಂದು ಮಾತ್ರ ಕೇಳಬೇಡಿ. ಏಕೆಂದರೆ they do things differently. 

ಈ ವಿವಾದದಲ್ಲಿ ಏನೆಲ್ಲಾ ಸಂಗತಿಗಳು ಹೊರಬಂದವು ನೋಡಿ. ಸರಕಾರಗಳು ವ್ಯವಹರಿಸುವ ರೀತಿ, ರಾಷ್ಟ್ರ ರಾಷ್ಟ್ರ ಗಳ ಮಧ್ಯೆ ಮಾತುಕತೆಗಳ ಧಾಟಿ, ಮೋಸ, ವಂಚನೆ, ಇಬ್ಬಂದಿತನ.   

ಅಸಾಂಜ್ ಮತ್ತು ಸರಕಾರಗಳ ನಡುವಿನ ಜಟಾಪಟಿ ವಿಶ್ವದ ವಿಶ್ವವಿದ್ಯಾಲಯಗಳಲ್ಲಿ ಹೊಸ ಅಧ್ಯಯನ ಕೇಂದ್ರಗಳ ಸ್ಥಾಪನೆಗೂ ನಾಂದಿ ಹಾಡಬಹುದೇನೋ?  

ಮತ್ತಷ್ಟು: ವಿಕಿ ಲೀಕ್ ಮೇಲೆ ಆಗಂತುಕರು ಹಲ್ಲೆ ನಡೆಸಿದ್ದು distributed denial of service attack ಮೂಲಕ. ಅಂದರೆ ನಮಗಿಷ್ಟವಾಗದ ವೆಬ್ ಸೈಟ್ ಮೇಲೆ ನಿರಂತರವಾಗಿ, ಅವ್ಯಾಹತವಾಗಿ ಲಾಗ್ ಇನ್ ಆಗಿ ಅದನ್ನು ಅಸ್ತವ್ಯಸ್ತಗೊಳಿಸೋದು. ಒಂದು ರೀತಿಯ carpet bombing. ಉದಾಹರಣೆಗೆ ಒಂದು ಚಿಕ್ಕ ಚಾದಂಗಡಿಗೆ ಒಮ್ಮೆಲೆ ನೂರಾರು ಜನ ಗಿರಾಕಿಗಳು ಬಂದಾಗ ಆಗುವ ಅವ್ಯವಸ್ಥೆ. ಓಡಿ ಹೋಗುತ್ತಾನೆ ಅಡುಗೆ ಭಟ್ಟ. ಮಾಹಿತಿಗಾಗಿ ಎಲ್ಲರೂ ವೆಬ್ಸೈಟ್ ಮೇಲೆ ಧಾಳಿ ಮಾಡಿದಾಗ ಒತ್ತಡ ತಾಳಲಾರದೆ ಕ್ಷಣ ಕಾಲ ಮುಚ್ಚಿ ಹೋಗುತ್ತದೆ. ಕೆಲವೊಮ್ಮೆ ಟ್ವಿಟ್ಟರ್ ಗೆ ಸಹ ಈ ಪರಿಸ್ಥಿತಿ ಎದುರಾಗುವುದುಂಟು. 

pic courtesy: http://editorialcartoonists.com/cartoon/display.cfm/93568/

‘ವಿಕಿಲೀಕ್’ ಅವಾಂತರ

ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ರಾಜಕಾರಣ ಎಂದರೆ ಗರಿ ಗರಿ ಕಪ್ಪು ಸೂಟು, ಮುಗುಳ್ನಗುವಿನೊಂದಿಗೆ ಹಸ್ತಲಾಘವ, ನಂತರ ಮೃಷ್ಟಾನ್ನ ಭೋಜನ ಎಂದು ತಿಳಿದಿದ್ದ ನಮಗೆ ಹೊಸತೊಂದು ವಿಶ್ವದ ಪರಿಚಯ ಮಾಡಿಕೊಟ್ಟಿತು ವಿಕಿಲೀಕ್. ‘ವಿಕಿಪೀಡಿಯ’ ಗೊತ್ತು, ಇದೇನೀ ‘ವಿಕಿಲೀಕ್’ ಎಂದಿರಾ? ವಿಕಿಪೀಡಿಯ ನಮಗೆ ತಿಳಿಯಬೇಕಾದ ವಿಷಯಗಳನ್ನು ಸರಾಗವಾಗಿ, ಕ್ಷಣ ಮಾತ್ರದಲ್ಲಿ ತಿಳಿಸಿಕೊಡುವ ತಾಣವಾದರೆ, ವಿಕಿಲೀಕ್ ಮಾತ್ರ ಸ್ವಲ್ಪ ಸರಿದು ನಿಂತು ನಾವೆಂದಿಗೂ ‘ಕೇಳಬಾರದ, ಆಡಬಾರದ, ನೋಡಬಾರದ’, ವಿಷಯಗಳನ್ನು ನಮಗೆ ತಲುಪಿಸಿ ಮಗುಮ್ಮಾಗಿ ಇದ್ದುಬಿಡುವ whistle blower. ಸ್ವಲ್ಪ ಮಟ್ಟಿಗೆ ನಮ್ಮ ಅಚ್ಚು ಮೆಚ್ಚಿನ ‘ತೆಹೆಲ್ಕಾ’ ರೀತಿಯದು. ಈ ವೆಬ್ ತಾಣದ ಸಾರಥಿ ಆಸ್ಟ್ರೇಲಿಯಾದ 39 ರ ಪ್ರಾಯದ ಜೂಲಿಯಾನ್ ಅಸಾಂಜ್. ಈಗ ಈತ ಕಂಬಿ ಎಣಿಸಲು ಅಥವಾ ತನ್ನ ತಲೆ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಲಂಡನ್ನಿನ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾನೆ.

ಅಭಿವ್ಯಕ್ತಿ ಸ್ವಾತಂತ್ರ್ಯ. ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ತಮ್ಮದೇ ಆದ ಧೋರಣೆ. ಆ ಧೋರಣೆ ಹಿಂಸಾರೂಪ ತಾಳಿದರೂ ಯಾರಿಗೂ ಅದರ ಪರಿವೆ ಇಲ್ಲ. ಸೂಟು ಬೂಟು, ಬಿಳಿಚರ್ಮ ಹೊತ್ತವರು ಏನೇ ಹೇಳಿದರೂ ಎಲ್ಲಾ ಓಕೆ. ಗಡ್ಡ ಮಾತ್ರ ಇರಬಾರದು ಈ ರೀತಿಯ ಮಾತನ್ನಾಡಲು. ಆಗ ಪದಪ್ರಯೋಗದ ಸಮೀಕರಣ ಬದಲಾಗಿ ಬಿಡುತ್ತದೆ. ಕೆನಡಾದ ಪ್ರಧಾನಿಯ ಮಾಜಿ ಸಲಹೆಗಾರ stephen ‘Harper’ ನ ಪ್ರಕಾರ ವಿಕಿ ಲೀಕ ನ ಅಸಾಂಜ್ ನನ್ನು ಕೊಲ್ಲಬೇಕು. ನೋಡಿ ಎಂಥ ಅಸಂಬದ್ಧ, harping ಈತನದು. ಹೆಸರಿಗೆ ತಕ್ಕಂತೆ ನಡತೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಂದು ಕೊಡುವ ಕಚಗುಳಿ ಎಂಥದ್ದು ಎಂದು ತಡವಾಗಿ ತಿಳಿಯಿತು ಅಮೆರಿಕೆಗೆ ಮತ್ತು ಅದರ ಹಿಂಬಾಲಕರಿಗೆ.

ರಾಜನಿಂದ ಹಿಡಿದು ರಾಜತಾಂತ್ರಿಕನವರೆಗೆ ಯಾರು ಏನು ಹೇಳಿದರು ಎಂದು ಸವಿಸ್ತಾರವಾಗಿ ಪ್ರಕಟಿಸಿದ ವಿಕಿಲೀಕ್ ಅಂತಾರಾಷ್ಟ್ರೀಯ ರಾಜಕಾರಣ ಯಾವ ರೀತಿಯ ‘ಡಬಲ್ ಗೇಂ’ ಎಂದು ನಮಗೆ ಮನವರಿಕೆ ಮಾಡಿಕೊಡುತ್ತಿದೆ. ನಮ್ಮ ದೇಶಕ್ಕೆ ಬಂದು ನಮ್ಮೆಲ್ಲರನ್ನೂ ಮರುಳು ಮಾಡಿ, ನಮಗೆ ಬಾಲಿವುಡ್ ಮೇಲೆ ಇರುವ ವ್ಯಾಮೋಹಕ್ಕೆ ತಕ್ಕಂತೆ ಒಂದಿಷ್ಟು ಡ್ಯಾನ್ಸ್ ಮಾಡಿ ಕೊನೆಗೆ ತಮ್ಮ ಊರು ತಲುಪಿದ ನಂತರ ಬೇರೆಯದೇ ಆದ ಸನ್ನೆ ಕಳಿಸುವುದು. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕಾಗಿರುವ ನಮ್ಮ ಆಸೆಯನ್ನೂ, ಅದಕ್ಕಾಗಿ ನಾವು ಹೆಣಗುತ್ತಿರುವುದನ್ನು ಅರಿತ ಅಮೇರಿಕಾದ ಅಧ್ಯಕ್ಷ ನಮ್ಮಲ್ಲಿಗೆ ಬಂದು ಭಾರತ ಈ ಸ್ಥಾನಕ್ಕೆ ಅತ್ಯಂತ ಅರ್ಹ ರಾಷ್ಟ್ರ, ನಮ್ಮ ಬೆಂಬಲ ಅದಕ್ಕಿದೆ ಎಂದು ನಮ್ಮನ್ನು ಪುಳಕಿತರಾಗಿಸಿ ಹೋದರು. ಈ ಮಾತು ಕೇಳಿ ನಮಗೆ ಆನಂದದ ಮಂಪರು. ಅತ್ತ ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಅಭಿಪ್ರಾಯ ಬೇರೆಯೇ. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ “ಸ್ವಯಂ ನೇಮಿತ” ಆಕಾಂಕ್ಷಿ ಎಂದು ಬಿರುದು ನೀಡಿದರು. “self appointed frontrunners” ಅಂತೆ. ಬೇಸರಿಸಬೇಡಿ, ಈ ಸ್ವಯಂ ನೇಮಿತ ಕ್ಲಬ್ಬಿನಲ್ಲಿ ಜಪಾನ್, ಬ್ರೆಜಿಲ್ ಮತ್ತು ಜರ್ಮನಿ ಸಹ ಸೇರಿವೆ. ಆಹ್, ಈಗ ಸ್ವಲ್ಪ ಸಮಾಧಾನ ನೋಡಿ. ನಮ್ಮೊಂದಿಗೆ ಇತರರನ್ನೂ ಸೇರಿಸಿ ಅಪಹಾಸ್ಯ ಮಾಡಿದರೆ ಭಾರ ಸಹಜವಾಗಿಯೇ ಸ್ವಲ್ಪ ಕಡಿಮೆ ಆಗುತ್ತದೆ. ಈ ಭಾವನೆಯೇ ಇರಬೇಕು ನಮ್ಮ ಮಾಧ್ಯಮಗಳು ಇದನ್ನು ಒಂದು ‘slight’ ಎಂದು ಪರಿಗಣಿಸಲು ಸೋತಿದ್ದು. ನೀವು ಅನುಮತಿಸಿದರೆ ನನ್ನದೊಂದು ಸಂಶಯ. ಅಮೇರಿಕಾ ನಮ್ಮನ್ನು ಇನ್ಯಾವ ರೀತಿಯಲ್ಲಿ ನಡೆಸಿ ಕೊಂಡಾಗ ನಾವು ಎಚ್ಚೆತ್ತು ಕೊಂಡು ‘ thanks for everything, yank. bye bye’ ಎಂದು ವಿನಯದಿಂದ ಹೇಳೋದು? ಅಮೆರಿಕೆಯ ಸಹವಾಸ ಮಾಡಿದವರು ಉದ್ಧಾರವಾದ ಕುರಿತು ಕೈಲಾಸದಲ್ಲಿ ಮನೆ ಮಾಡಿರುವವನಿಗೆ ಬಹುಶಃ ಗೊತ್ತಿರಬಹುದು. ಬೇರಾರಿಗೂ ಗೊತ್ತಿರುವ ಬಗ್ಗೆ ವರದಿಯಿಲ್ಲ. ಸದ್ದಾಮ್ ಕಾಲಾವಧಿ ನಂತರದ ಇರಾಕಿನ ತೈಲ ಸಚಿವನಾಗಿದ್ದ ‘ಅಹಮದ್ ಶಲಾಬಿ’ ಹೇಳಿದ್ದು america betrays its friends. it sets them up and betrays them. I’d rather be america’s enemy. ನಿನ್ನ ಮೈತ್ರಿಗಿಂತ ನಿನ್ನ ಶತ್ರುತ್ವವೇ ಬಲು ಚೆಂದ ಎಂದು. ವಿಷಕನ್ಯೆಗೆ ಹೇಳಬಹುದಾದ ಸವಿ ಮಾತುಗಳು ಇವು, ಅಲ್ಲವೇ? ಅಮೆರಿಕೆಯ ಸಹಾಯದಿಂದ ಅಧಿಕಾರದ ಗದ್ದುಗೆಗೆ ಏರಿದ ವ್ಯಕ್ತಿಯೊಬ್ಬ ಈ ಮಾತನ್ನು ಹೇಳಬೇಕೆಂದರೆ ಅವನಿಗೆ ಎಂಥ ರಾಜೋಪಚಾರ ಸಿಕ್ಕಿರಬೇಕು?

ಈಗ ಈ ಬರಹದಲ್ಲಿ anti americanism ಧೋರಣೆಯನ್ನು ದಯಮಾಡಿ ಕಾಣಬೇಡಿ. ಅಮೆರಿಕೆಯವೇ ಆದ “Levis” ಜೀನ್ಸ್, ‘papa johns’ pizza, ಮತ್ತು ಕಡಿಮೆ ಸ್ಪೆಲ್ಲಿಂಗ್ ಇರುವ ‘ಅಮೇರಿಕನ್ ಇಂಗ್ಲಿಶ್’ ನನಗೆ ತುಂಬಾ ಇಷ್ಟ. ನನ್ನ ನಿಲುವು ಇಷ್ಟೇ. ನಮ್ಮ ರಾಜಕಾರಣ ಮತ್ತು ಅವರ ರಾಜಕಾರಣ ಸ್ವಲ್ಪ ‘ಡಿಫ್ಫ್ರೆಂಟು’. ಆದರೆ ನಮಗೆ ಈ ‘ಡಿಫ್ಫ್ರೆನ್ಸು’ ಅರಗಿಸಿಕೊಳ್ಳಲಾಗದಂಥ ‘depression’ ತಂದೊಡ್ಡುತ್ತದೆ. ಹಾಗಾಗಿ ಸಂಚಾರಿ ನಿಯಮದ ಥರ ‘ನಡುವೆ ಅಂತರವಿರಲಿ’ ರೀತಿಯ ಅಂತರ ಕಾಯ್ದು ಕೊಳ್ಳಲು ನನ್ನ ಹಂಬಲ. ಗುಮಾನಿ ಪಡಬೇಕಾದ ulterior motive ಇಲ್ಲ.

ಬನ್ನಿ ನಾನಿರುವ ಕೊಲ್ಲಿ ಪ್ರದೇಶಕ್ಕೆ. ಇಲ್ಲೊಂದು ಸ್ವಾರಸ್ಯ. ನೋಡಿ, ನಾನು ಕೊಲ್ಲಿ ಎಂದು ಟೈಪ್ ಮಾಡಿದಾಗ “ಕೊಳ್ಳಿ” ಅಂತ ತೋರಿಸಿತು ಗೂಗಲ್. ಒಂದು ರೀತಿಯ “ಕೊಳ್ಳಿ” ಎಂದೇ ಕರೆಯಬಹುದು ಈ ಪ್ರಾಂತ್ಯವನ್ನು. ಸೌದಿ ಅರೇಬಿಯಾದ ದೊರೆ ‘ಅಬ್ದುಲ್ಲಾ ಇಬ್ನ್ ಅಬ್ದುಲ್ ಅಜೀಜ್ ಅಲ್-ಸೌದ್’ ವಿಶ್ವದ ಮುಸ್ಲಿಮರು ಗೌರವಿಸುವ ವ್ಯಕ್ತಿತ್ವ. ಏಕೆಂದರೆ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನ ಇರುವುದು ಸೌದಿ ಅರೇಬಿಯಾದಲ್ಲಿ. ಇಲ್ಲಿನ ದೊರೆ ಹೆಮ್ಮೆಯಿಂದ ತನ್ನನ್ನು ತಾನು ಕರೆದುಕೊಳ್ಳುವುದು ಎರಡು ಪವಿತ್ರ ಕ್ಷೇತ್ರಗಳ ಸಂರಕ್ಷಕ ಎಂದು. ಸಾವಿರಾರು ಕೋಟಿ ಖರ್ಚು ಮಾಡಿ ಎರಡು ಪವಿತ್ರ ಕ್ಷೆತ್ರಗಳನ್ನು ಇನ್ನಷ್ಟು ವಿಸ್ತರಿಸಿದ ಖ್ಯಾತಿ ಈ ದೊರೆಗೆ. ಹಾಗಾಗಿ ವಿಶ್ವದ ಮುಸ್ಲಿಮರಿಗೆ ಇವರ ಮೇಲೆ ಆದರ, ಗೌರವ. ಹಾವಿನ ತಲೆ ಕಡಿಯುವಂತೆ ಕಡಿಯಬೇಕು ಎಂದು ಇರಾನಿನ ಕುರಿತು ಅಮೆರಿಕೆಗೆ ಶಿಫಾರಸು ಮಾಡಿದರು ದೊರೆ ಅಬ್ದುಲ್ಲಾ ಎಂದು ವಿಕಿಲೀಕ್ ಎಲ್ಲರನ್ನೂ ತಲ್ಲಣಗೊಳಿಸಿತು. ಒಬ್ಬ ಮುಸ್ಲಿಮ್ ರಾಷ್ಟ್ರದ ದೊರೆ ಮತ್ತೊಂದು ಸೋದರ ದೇಶದ ವಿರುದ್ಧ ಈ ರೀತಿ ಮಾತನಾಡಿದ್ದು ಅಚ್ಚರಿ ತರಿಸಿತು ಪಾಶ್ಚಾತ್ಯ ದೇಶಗಳಿಗೆ. ಇವರಿಬ್ಬರ ನಡುವಿನ ಸ್ನೇಹದ “ಆಳ” ಎಲ್ಲರಿಗೂ ಗೊತ್ತಿದ್ದರೂ ತಲೆ ಕಡಿಯಲು ಶಿಫಾರಸ್ಸು ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಇರಾನ್ ಶಿಯಾ ಬಾಹುಳ್ಯದ ರಾಷ್ಟ್ರ ಮತ್ತು ಸೌದಿ, ಸುನ್ನಿ ರಾಷ್ಟ್ರ. ಚಾರಿತ್ರಿಕವಾಗಿ ಶಿಯಾ – ಸುನ್ನಿ ಪಂಗಡಗಳ ನಡುವಿನ ಜಟಾಪಟಿ ತುಂಬಾ ಹಳತು. ideological difference ಅಲ್ಲದಿದ್ದರೂ ವ್ಯಕ್ತಿ (ಪ್ರವಾದಿ ಮುಹಮ್ಮದ್ ಮತ್ತು ‘ಹಜರತ್ ಅಲಿ’ ವಿಷಯದಲ್ಲಿ) ನಿಷ್ಠೆಯಲ್ಲಿ ಸುನ್ನಿ ಮತ್ತು ಶಿಯಾ ಜನರಲ್ಲಿ ಒಡಕಿದೆ. ಸೌದಿ ದೊರೆಯ ಈ ಬೆಚ್ಚಿ ಬೀಳಿಸುವಂಥ ಮಾತನ್ನು ಕೇಳಿದ ಇರಾನ್ ಸೌದಿಯನ್ನು ಇನ್ನು ಯಾವ ರೀತಿ ನಡೆಸಿಕೊಳ್ಳಬಹುದು ಎಂದು ಕಾದು ನೋಡಬೇಕು.

ಈ ತೆರನಾದ ಸುದ್ದಿಗಳನ್ನು ಚಿಕ್ಕಾಸಿನ ಅಪೇಕ್ಷೆಯೂ ಇಲ್ಲದೆ ಬಟಾಬಯಲು ಮಾಡುತ್ತಿರುವ ವಿಕಿಲೀಕ್ ಮೇಲೆ ಅಮೇರಿಕ ಮುಂತಾದ ರಾಷ್ಟ್ರಗಳ ಕೆಂಗಣ್ಣು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯೋದು ಲೋಕ ರೂಢಿಯೇ ತಾನೇ? ಅಮೇರಿಕಾ ಏಕೆ ಅದಕ್ಕೆ ಹೊರತಾಗಬೇಕು? ವಿಕಿಲೀಕ್ ವೆಬ್ ತಾಣ ಬೇರಾವುದಾದರೂ ಒಂದು ದೇಶ ಅಮೆರಿಕೆಯ ವಿರುದ್ಧ ಹೇಳಿದ್ದನ್ನು ಲೀಕ್ ಮಾಡಿದ್ದಿದ್ದರೆ ಅಮೇರಿಕ ಕುಣಿದು ಕುಪ್ಪಳಿಸುತ್ತಿತ್ತು. ಆದರೆ ‘ವಿಕಿಲೀಕ್’ ನ ಕೊಡಲಿ ತನ್ನ ಬುಡದ ಕಡೆಗೆ ಪ್ರಯಾಣ ಬೆಳೆಸಿದಾಗ ಮಾತ್ರ ಅಮೇರಿಕಾ ಹೌಹಾರಿತು. ಹೌಹಾರದೆ ಏನು? ಬೇಲಿಯೂ ತಾನೇ, ಮೇಯುವವನೂ ತಾನೇ. ಇದು ಅಮೆರಿಕೆಯ ವಿದೇಶಾಂಗ ನೀತಿ. ಹಾಗಾಗಿ ವಿಕಿಲೀಕ್ ಸ್ಥಾಪಕ ‘ಅಸಾಂಜ್’ ನನ್ನು ದೇಶದ್ರೋಹಿ ಎಂದು ಹಣೆ ಪಟ್ಟಿ ಲಗತ್ತಿಸಿದ್ದಲ್ಲದೆ ಅವನನ್ನು ವಧಿಸುವ ತನಕ ಅಮೆರಿಕೆಯ ಆಕ್ರೋಶ ಆವರಿಸಿತು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಅಸಾಂಜ್ ತನ್ನ ಕೆಲಸ ಇನ್ನೂ ಮುಂದುವರಿಸುವುದಾಗಿ ಅವನ ಬೆಂಬಲಿಗರಿಗೆ ಭರವಸೆ ನೀಡಿದ. ಈಗ ಆತನ ಕಣ್ಣು ಅಮೆರಿಕೆಯ ಅತಿ ದೊಡ್ಡ ಬ್ಯಾಂಕುಗಳ ಅವ್ಯವಹಾರ ಮತ್ತು ಕಾರ್ಯವೈಖರಿಯ ಕಡೆ. ಅಸಾಂಜ್ ನ ಮಾತು ಸಿಡಿಲಿನಂತೆ ಎರಗಿತು ಬ್ಯಾಂಕಿಂಗ್ ವಲಯಗಳ ಮೇಲೆ. ಇವನ್ನೆಲ್ಲಾ ಕೇಳುತ್ತಿರುವ, ನೋಡುತ್ತಿರುವ ನಮಗೆ ಅಮೇರಿಕಾ ಪ್ರಪಂಚದ ಎಲ್ಲಾ ಪಾಪಗಳ, ಕೃತ್ರಿಮಗಳ ಉಗಮಸ್ಥಾನವೋ ಎಂದು ತೋರುವುದು ಅಸಹಜವೇನಲ್ಲ. ಹಾಲಿವುಡ್ ಅಂದ್ರೆ ಒಂದಿಷ್ಟು ಸೆಕ್ಸ್ ಇರಲೇಬೇಕು, ಏನಂತೀರಾ? ಹಾಗೆಯೇ ಅಂತಾರಾಷ್ಟ್ರೀಯ ರಾಜಕಾರಣದಲ್ಲೂ ಒಂದಿಷ್ಟು ಶೃಂಗಾರ ನುಸುಳುವುದಿದೆ ಎಂದು ವಿಕಿಲೀಕ್ ಬಯಲು ಮಾಡಿತು. ಲಿಬ್ಯಾ ದೇಶದ charismatic ಅಧ್ಯಕ್ಷ ‘ಮುಅಮ್ಮರ್ ಗದ್ದಾಫಿ’ ಜೊತೆ ಯಾವಾಗಲೂ ಮೋಹಕ ಅಂಗಸೌಷ್ಟವ ಹೊಂದಿದ ಯುಕ್ರೇನ್ ದೇಶದ ನರ್ಸ್ ಇರುತ್ತಾಳೆ ಎಂದು ಒಬ್ಬ ರಾಜತಾಂತ್ರಿಕ ಅಸೂಯೆಯಿಂದ ಜೊಳ್ಳು ಸುರಿಸಿದ. ಅಂದ್ರೆ ಬರೀ ಬೋರ್ ಹೊಡೆಸುವ global warming ರಾಜಕಾರಣ ಮಾತ್ರ ಅಲ್ಲ ಮಹೋದಯರ ಆಸಕ್ತಿ ಎಂದು ಇದರಿಂದ ಸ್ಪಷ್ಟವಾಯಿತು. ಕಂಪ್ಯೂಟರ್ ಬದಿಗೆ ಸರಿಸಿ ಹೀಗೇ ಮೋಜಿಗಾಗಿ ಸ್ವಲ್ಪ ಊಹಿಸಿ. ವಿಕಿಲೀಕ್ ತೆರನಾದ ಒಂದು ವ್ಯವಸ್ಥೆ ನಮ್ಮ ದೇಶದಲ್ಲಿಯೂ ಇದ್ದಿದ್ದರೆ 2G, 3G ಕಾಂಡಗಳು, ಆದರ್ಶ್ ಸೊಸೈಟಿ, ಸೈನಿಕರ ಶವ ಪೆಟ್ಟಿಗೆ ಗಳಂಥ ಹಗರಣ ಗಳು, ನಾವು ಕಂಡ ಬಗೆ ಬಗೆಯ ವರ್ಣರಂಜಿತ ಧಂಧೆಗಳು, ಇವೆಲ್ಲಾ ಪಿಕ್ನಿಕ್ ಥರ ಕಾಣುತ್ತಿದ್ದವು. ಈ ಮೇಲೆ ಹೇಳಿದ ಹಗರಣಗಳನ್ನೂ ಮೀರಿಸುವ ದೈತ್ಯಾಕಾರದ ತಿಮಿಂಗಿಲಗಳು ವಿಕಿಲೀಕ್ ಬಲೆಗೆ ಸಿಕ್ಕು ವಿಲವಿಲ ಎನ್ನುತ್ತಿದ್ದವೋ ಏನೋ.

ಜೂಲಿಯನ್ ಅಸಾಂಜ್ ನ ವಿಕಿಲೀಕ್ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಅದರ ಸುಡುವ ಲಾವಾರಸ ಜಗತ್ತಿನ ನಾಲ್ಕೂ ಕಡೆ ಹರಿಯುತ್ತಿದೆ. ಹರಿಯುವ ನಾಲಗೆಗಳಿಗೆ ಇನ್ನಷ್ಟು ಫಲವತ್ತನ್ನು ಒದಗಿಸುತ್ತಿದೆ. ಇದಕ್ಕೆಲ್ಲಾ ಕಾರಣೀಭೂತನಾದ ಜೂಲಿಯಾನ್ ಅಸಾಂಜ್ ನನ್ನು ಹೇಗೆ ಗತಿ ಕಾಣಿಸಬೇಕೆಂದು ಬಲಿಷ್ಠ ರಾಷ್ಟ್ರಗಳು ಲೆಕ್ಕ ಹಾಕುತ್ತಿವೆ. ಅಮೇರಿಕಾ ವಿರೋಧಿಯಾದ ಅಸಾಂಜ್ ಒಬ್ಬ ಸಾಮಾನ್ಯ ಆಸ್ಟ್ರೇಲಿಯನ್ ಪ್ರಜೆ. ಆತನದು ಠಿಕಾಣಿ ಯಿಲ್ಲದ ವಾಸ. ಒಂದೇ ಸ್ಥಳದಲ್ಲಿ ಎರಡು ರಾತ್ರಿಗಳನ್ನು ಕಳೆಯದ ಅಲೆಮಾರಿ. ವಿಶ್ವದ ಮೇಲಿನ ಅಮೆರಿಕೆಯ ಕಪಿ ಮುಷ್ಠಿ ಅವನಿಗೆ ಇಷ್ಟವಿಲ್ಲ. ಪ್ರಪಂಚದಲ್ಲಿ ನಡೆಯುವ ಅನ್ಯಾಯಗಳು ಜನರಿಗೆ ತಲುಪಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಂಬಿರುವ ಈತ, ಮಾಡುತ್ತಿರುವುದು ಒಳ್ಳೆಯ ಕೆಲಸವೋ ಅಥವಾ ಕೆಲಸವಿಲ್ಲದ ಬಡಗಿಯ ಬೇಡದ ಉಸಾಬರಿಯೋ ಎಂದು ವಿಶ್ವವೇ ಹೇಳಬೇಕು. ಆದರೆ ಆತನ ತಾಯಿ ಮಾತ್ರ ಹೇಳುತ್ತಿರುವುದು “ನನಗೆ ನನ್ನ ಮಗನ ಪರಿಸ್ಥಿತಿಯ ಬಗ್ಗೆ ಆತಂಕವಾಗುತ್ತಿದೆ, ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಎಷ್ಟಿದ್ದರೂ ನನ್ನ ಮಗನೇ. ನನ್ನ ಮತ್ತು ನನ್ನ ಮಗನ ಬಗ್ಗೆ ಅವರು ಹೇಳುತ್ತಿರುವುದೆಲ್ಲಾ ನಿಜವಲ್ಲ’ ಎಂದು ಆಕೆ ತನ್ನ ಮಗನ ಸುರಕ್ಷೆಗಾಗಿ ಹಂಬಲಿಸುತ್ತಾಳೆ, ಎಲ್ಲಾ ಹೆತ್ತಬ್ಬೆಯರು ಚಡಪಡಿಸುವ ರೀತಿಯಲ್ಲಿ.

ಗೊತ್ತಿಲ್ಲದವರಿಗೆ: ‘ವಿಕಿ’ ಎಂದರೆ, ‘ಹವಾಯಿ’ ಭಾಷೆಯಲ್ಲಿ ವೇಗ, ಕ್ಷಿಪ್ರ ‘fast’ ಅಂತ. ಮತ್ತು ಲೀಕ್ ಎಂದರೆ ಅದೇ ಆರ್ಡಿನರಿ ಲೀಕು, ನಮ್ಮಗಳ ಅಡುಗೆ ಮನೆಯಲ್ಲಿನ ‘ನಲ್ಲಿ’ ತೊಟ ತೊಟ ಎಂದು ಹನಿಯುದುರಿಸುತ್ತಾ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸೋರಿಕೆ. ಈ ಕ್ಷಿಪ್ರ ಮತ್ತು ಸೋರಿಕೆ ಇವೆರಡೂ ಸೇರಿಕೊಂಡಾಗ ಆಗುವುದು ants in the pant ಪರಿಸ್ಥಿತಿ. ಮೇಲೆ ವಿವರಿಸಿದ ಪರಿಸ್ಥಿತಿ.

pic courtesy: independent, UK