ನಾಣ್ಯಕ್ಕೆ ಮತ್ತೊಂದು ಮುಖ

ಅಮೆರಿಕೆಯ ವಿರುದ್ಧ ನಡೆದ ವೈಮಾನಿಕ ಧಾಳಿಯ ವಾರ್ಷಿ ಕ ದಂದು ಪ್ರವಾದಿ ಮುಹಮ್ಮದರ ಮೇಲೆ ಅವಹೇಳನಕಾರೀ ವೀಡಿಯೊ ‘ಯೂ ಟ್ಯೂಬ್’ ಗಳಲ್ಲಿ ರಾರಾಜಿಸಿ ದೊಡ್ಡ ಅಂತಾರಾಷ್ಟ್ರೀಯ ವಿವಾದ ಸೃಷ್ಟಿಯಾಯಿತು. ಪ್ರತಿಭಟನಾರ್ಥವಾಗಿ  ಲಿಬ್ಯಾದ ಬೆಂಗಾಜಿ ಯಲ್ಲಿ ಅಮೇರಿಕನ್ ದೂತಾವಾಸದ ಮೇಲೆ ನಡೆದ ಆಕ್ರಮಣದಲ್ಲಿ ಅಮೆರಿಕೆಯ ರಾಯಭಾರಿಯನ್ನು ಮತ್ತು ಇತರೆ ಮೂರು ಅಮೆರಿಕನ್ನರನ್ನು ರಾಕೆಟ್ ಧಾಳಿ ನಡೆಸಿ ಕೊಲ್ಲಲಾಯಿತು. ಅಮೇರಿಕನ್ ರಾಯಭಾರಿ ಮುಅಮ್ಮರ್ ಗದ್ದಾಫಿ ವಿರುದ್ಧದ ಹೋರಾಟದಲ್ಲಿ ಲಿಬ್ಯನ್ನರ ಬೆಂಬಲಕ್ಕೆ ನಿಂತಿದ್ದವರು. ವೀಡಿಯೊಗೂ ಅವರಿಗೂ ಯಾವ ಸಂಬಂಧವೂ ಇರಲಿಲ್ಲ. ಅವರ ಹತ್ಯೆಯಿಂದ ಅಮೆರಿಕೆಗೂ ಲಿಬ್ಯಾಕ್ಕೂ ತೀವ್ರ ಆಘಾತವಾಗಿ ಲಿಬ್ಯಾದ ಸರಕಾರ ಅಮೆರಿಕೆಯ ಕ್ಷಮೆ ಕೇಳಿ ಕೊಲೆಗಡುಕರನ್ನು ಶೀಘ್ರದಲ್ಲೇ ಹಿಡಿಯುವುದಾಗಿ ಭರವಸೆ ನೀಡಿತು. ಈ ಭೀಕರ ಘಟನೆ ಮತ್ತು ವೀಡಿಯೊ ವಿವಾದದ ಬಗ್ಗೆ ಅಮೆರಿಕೆಯ

NPR ರೇಡಿಯೋದಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಯಿತು. “ನೀಲ್ ಕೋನನ್” ನಡೆಸಿಕೊಡುವ ‘ಟಾಕ್ ಆಫ್  ದಿ ನೇಶನ್’ ಒಂದು ಜನಪ್ರಿಯ ಕಾರ್ಯಕ್ರಮ. ಪಂಡಿತರು, ಶ್ರೋತೃಗಳೂ ಪಾಲುಗೊಳ್ಳುವ ಈ ಚರ್ಚಾ ಕಾರ್ಯಕ್ರಮ ಸ್ವಾರಸ್ಯಕರ ವಾಗಿರುತ್ತದೆ. ವೀಡಿಯೊ  ಮತ್ತು ರಾಯಭಾರಿಯ ಹತ್ಯೆ ಯ ಮೇಲೆ ನಡೆದ ಕಾರ್ಯಕ್ರಮವನ್ನ ಆಲಿಸುತ್ತಿದ್ದ ಮಹಿಳಾ ಶ್ರೋತೃವೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು. “ಲಿಬ್ಯಾದ ಬೆನ್ಗಾಜಿಯಲ್ಲಿ ನಡೆದ ಭೀಭತ್ಸ ಘಟನೆ ಬಗ್ಗೆ ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಅತ್ಯಂತ ದಾರುಣ ಈ ಘಟನೆ. ಈ ಘಟನೆಯ ಸಮಯ ರಾಯಭಾರಿಯ ಮೇಲೆ ಧಾಳಿ ನಡೆದಾಗ ಲಿಬ್ಯಾದವರು ರಾಯಭಾರಿಯನ್ನು ರಕ್ಷಿಸಲು ಹೋರಾಡಿದರು, ಸಾವು ನೋವುಗಳೂ ಆದವು, ಆದರೆ ಇದರ ಬಗ್ಗೆ ನಾವು ಮಾತನಾಡುತ್ತಿಲ್ಲ, ಇದು ಸರಿಯಲ್ಲ, ಲಿಬ್ಯನ್ನರ ಸಹಾಯವನ್ನೂ ನಾವು ಸ್ಮರಿಸಬೇಕು” ಎಂದು ಹೇಳಿದಾಗ ನನಗೆ ಅಚ್ಚರಿಯಾಯಿತು. ತನ್ನ ದೇಶದವರ ವಿರುದ್ಧ ನಡೆದ ಧಾಳಿಯ ಸಮಯದಲ್ಲೂ ಬೇರೊಬ್ಬರ ತ್ಯಾಗ, ಧೈರ್ಯ ದ ಬಗ್ಗೆ ಮೆಚ್ಚುಗೆ ಸೂಸಲು ಕ್ಯಾಲಿಫೋರ್ನಿಯಾ ಮೂಲದ ಈ ಅಮೇರಿಕನ್ ಮಹಿಳೆ ಒತ್ತಾಯ ಮಾಡುತ್ತಿದ್ದಾಳಲ್ಲ ಎಂದು. ಈ ಮಹಿಳೆಯ ಮಾತು ಕೇಳಿದ ಬೆಂಗಾಜಿಯಿಂದ ‘ಆನ್ ಲೈನ್’ ಇದ್ದ ಬಾತ್ಮೀದಾರ ಹೇಳಿದ್ದು, ‘ಹೌದು, ಲಿಬ್ಯನ್ನರು ಬಹು ಧೈರ್ಯದಿಂದ ಹೋರಾಡಿದರು. ರಾಯಭಾರಿಯನ್ನು ಉಳಿಸುವ ಪ್ರಯತ್ನ ಮಾಡಿದರು, ಅಷ್ಟೇ ಅಲ್ಲ ಈ ಧಾಳಿಯ ವಿರುದ್ಧ ಇಂದು ಸಂಜೆ ಒಂದೆರಡು ಪ್ರತಿಭಟನಾ ಪ್ರದರ್ಶನಗಳೂ ನಡೆದವು’ ಎಂದು ವರದಿ ಮಾಡಿದ.

ಯಾವುದೇ ಘಟನೆಯ ಬಗ್ಗೆ ಓದುವಾಗ ನಾಣ್ಯಕ್ಕೆ ಮತ್ತೊಂದು ಮುಖ ಇದ್ದೇ ಇರುತ್ತದೆ ಎನ್ನುವ ಭಾವನೆ ನಮ್ಮೊಂದಿಗೆ ಇದ್ದರೆ ಆ  ಅಮೇರಿಕನ್ ಮಹಿಳೆಯ ಮನಸ್ಸಿನಲ್ಲಿ ಮೂಡಿದ ವಿಚಾರಗಳು ನಮ್ಮ ಮನಸ್ಸಿನಲ್ಲೂ ಮೂಡದೆ ಇರದು. ಎಲ್ಲದಕ್ಕೂ ಸಂಯಮ, ತಾಳ್ಮೆ, ವಿಚಾರ ಮಾಡುವ ಮನಸ್ಸು ಇದ್ದಾಗ ವಿಷಯ ಮತ್ತಷ್ಟು ತಿಳಿಯಾಗುವುದು.

ಜ್ಯೋತಿಷ್ಯ ವೈಜ್ಞಾನಿಕವೇ?

ಜ್ಯೋತಿಷ್ಯ ಶಾಸ್ತ್ರವನ್ನು “ಖೋಟಾ ಅಧ್ಯಯನ” (fake discipline) ಎಂದಿದ್ದಾರೆ ವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ವಿಜೇತರಾದ ವೆಂಕಟರಾಮನ್ ರಾಮಕೃಷ್ಣನ್ ಅವರು. ಚನ್ನೈ ನಗರದ ಭಾರತೀಯ ವಿದ್ಯಾ ಭವನದಲ್ಲಿ ಉಪನ್ಯಾಸ ನೀಡುತ್ತಿದ್ದ ಇವರು ಜ್ಯೋತಿಷ್ಯದೊಂದಿಗೆ ಹೋಮಿಯೋಪತಿ ವೈದ್ಯ ಶಾಸ್ತ್ರವನ್ನೂ ತರಾಟೆಗೆ ತೆಗೆದುಕೊಂಡರು. ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ವಂಚಿಸುವ ಪರಿಪಾಠ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಜ್ಯೋತಿಷ್ಯ ಕ್ಷೇತ್ರ multi million dollar ಉದ್ದಿಮೆ ಎಂದು ಸುಲಭವಾಗಿ ಹೇಳಬಹುದು. unsuspecting ಜನರನ್ನು ಲೀಲಾ ಜಾಲವಾಗಿ ವಂಚಿಸಿ ಹಣ ಕೊಳ್ಳೆ ಹೊಡೆಯುವ ಇವರಿಗೆ ನಿಯಮದ ಯಾವ ತೊಡಕೂ ಇಲ್ಲ. ಭಾಜಪ ಸರಕಾರದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿ ಜ್ಯೋತಿಷ್ಯವನ್ನು ವೈದಿಕ ವಿಜ್ಞಾನದ ಅಡಿಯಲ್ಲಿ ತಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಸ್ತುವನ್ನಾಗಿಸಿದ್ದರು. ಭಾರತದಲ್ಲಿ ಎಲ್ಲ ಸಮಾಜದ ಬಹಳಷ್ಟು ಜನ ನಂಬುವ ಜ್ಯೋತಿಷ್ಯದ ಬಗ್ಗೆ ಇಸ್ಲಾಮಿನ ನಿಲುವು ಅತ್ಯಂತ ಕಟುವಾದುದು. ಯಾವುದಾದರೂ ಜ್ಯೋತಿಷಿಯನ್ನು ಒಬ್ಬ ಕಂಡರೆ ಅವನ ನಲವತ್ತು ದಿನಗಳ ಕಾಲದ ಆರಾಧನೆ ನಷ್ಟ ಪಡುವುದು ಮಾತ್ರವಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಪಡೆದವನು ಪಾಪದ ಹೊರೆಯನ್ನು ಹೊರುತ್ತಾನೆ ಎನ್ನುತ್ತದೆ ಇಸ್ಲಾಂ. ಜ್ಯೋತಿಷ್ಯದ ಕುರಿತ ಪವಿತ್ರ ಕುರಾನಿನ ಹೇಳಿಕೆ ಹೀಗಿದೆ.

“With Him are the keys to the unseen and none knows it except Him”.The Holy Qur’an, Chapter 6, Verse 59

“Say: None in the heavens or earth knows the unseen except Allah.”The Holy Qur’an, Chapter 27, Verse 65

ಮತ್ತೊಂದೆಡೆ ಪ್ರವಾದಿಗಳನ್ನು ಸಂಬೋಧಿಸುತ್ತಾ ಪವಿತ್ರ ಕುರಾನ್ ಹೀಗೆ ಹೇಳುತ್ತದೆ: “ಹೇಳಿ ಪ್ರವಾದಿಗಳೇ, ನನಗೆ ಅಗೊಚರವಾದದ್ದು ಕಾಣುವಂತಾಗಿದ್ದಿದ್ದರೆ ನಾನು ಒಳ್ಳೆಯದನ್ನೇ ಬಯಸುತ್ತಿದ್ದೆ, ಆದರೆ ನಾನು ಒಬ್ಬ ಸಂದೇಶವಾಹಕ ಮತ್ತು ವಿಶಾಸಿಗಳಿಗೆ ಶುಭ ವಾರ್ತೆ ತರುವವ ಮಾತ್ರ”

ಈ ರೀತಿಯ ಹೇಳಿಕೆಗಳು ಮತ್ತು ವಿಧ್ವಾಂಸರ ಅಭಿಪ್ರಾಯಗಳು ವ್ಯತಿರಿಕ್ತ ವಾಗಿದ್ದೂ ಬಹಳಷ್ಟು ಮುಸ್ಲಿಮರು ಹಸ್ತ ಸಾಮುದ್ರಿಕೆ, ಅದೂ ಇದೂ ಎಂದು ಅಲೆಯುವುದನ್ನು ನಾನು ಕಂಡಿದ್ದೇನೆ.

ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.

ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ ಅದೇ, ನಿಮ್ ಹಬ್ಬ ಈದ್ ಮಿಲಾದ್ ನಾಳೆ, ಇಲ್ಲಿ ಸರಕಾರೀ ರಜೆ ಎಂದ. ಓಹೋ, ಹೌದಾ ಎಂದು ಉದ್ಗಾರ ತೆಗೆದಾಗ ಅವನಿಗೆ ಆಶ್ಚರ್ಯ. ಏನು ಅಲ್ಲಿ ಇಲ್ವಾ ರಜೆ ಎಂದ. ನಾನಂದೆ ಇಲ್ಲಿ ಸೌದಿ ಅರೇಬಿಯಾದಲ್ಲಿ ಪ್ರವಾದಿಗಳ ಜಯಂತಿಗೆ ರಜೆ ಇಲ್ಲ. ಅಂಥ ಒಂದು ದಿನ ಇದೆ ಎಂದೂ ಇಲ್ಲಿನ ಜನಕ್ಕೆ ಗೊತ್ತಿಲ್ಲ. ಪ್ರವಾದಿ ಜಯಂತಿ ಇರಲಿ, ಇಲ್ಲಿನ ರಾಜ ಸತ್ತಾಗಲೂ ರಜೆ ಕೊಡದ ದುರುಳರು ಇವರು ಎಂದು ನನ್ನ ದುಃಖವನ್ನು ವ್ಯಕ್ತಪಪಡಿಸಿದಾಗ ಅವನೂ ಸಂತಾಪ ಸೂಚಿಸಿದ ನನ್ನ ದೌರ್ಭಾಗ್ಯಕ್ಕೆ. ದೌರ್ಭಾಗ್ಯವಲ್ಲದೆ ಮತ್ತೇನು? ಭಾರತದಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಒಂದಲ್ಲ ಒಂದು ರಜೆ ವಕ್ಕರಿಸಿಕೊಳ್ಳುತ್ತಲೇ ಇರುತ್ತದೆ. ಹಾಗೇನಾದರೂ ರಜೆ ಸಿಗದೇ ಒಂದೆರಡು ವಾರಗಳಾದವು ಅನ್ನಿ, ಆಗ ಯಾವುದಾದರೂ ಒಂದು ನೆಪದಲ್ಲಿ, ನಮ್ಮ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ದಲ್ಲಿ ಬಂದೋ, ದೊಂಬಿಯೋ ನಡೆದು ರಜೆ ಸಲೀಸಾಗಿ ಸಿಗುತ್ತದೆ. ಯಡ್ಡಿ ಹತ್ತಿರ ಬಹುಮತ ಸಾಬೀತು ಪಡಿಸಿ ಎಂದರೂ ರಜೆ, ಅಯೋಧ್ಯೆಯ ವಿವಾದ ಕ್ಕೆ ನ್ಯಾಯಾಲಯ ಕೊಡುವ ತೀರ್ಪಿನಂದೂ ರಜೆ.  

ಸೌದಿ ಅರೇಬಿಯಾದ ಹಿಂದಿನ ರಾಜ ಫಹದ್ ರವರು ತೀರಿ ಕೊಂಡ ಸುದ್ದಿ ಬಂದಾಗ ನಾನು ಬ್ಯಾಂಕಿನಲ್ಲಿ ಇದ್ದೆ. ನನ್ನ ಕೆಲಸ ಬೇಗ ಬೇಗನೆ ಪೂರೈಸಿ ಹಾಗೆಯೆ ಅಲ್ಲಿನ ಕ್ಲರ್ಕ್ ಹತ್ತಿರ ಕೇಳಿದೆ, ಎಷ್ಟು ದಿನ ರಜೆ ಕೊಡ್ತಾರೆ ಅಂತ? ಅವನು ಕೇಳಿದ, ರಜೆ? ಯಾವುದಕ್ಕೆ? ನಾನು ದೊರೆಯ ಮರಣದ ವಾರ್ತೆ ಆತನಿಗೆ ಹೇಳಿದಾಗ, ಅವನು ಫಹದ್ ನ ಸಮಯ ಮುಗಿಯಿತು ಅವನು ಸೇರಿಕೊಂಡ ಭಗವಂತನ ಪಾದಚರಣಗಳಿಗೆ, ಅದಕ್ಕೇಕೆ ರಜೆ, ನಿಮ್ ದೇಶದಲ್ಲಿ ಇದಕ್ಕೂ ಕೊಡ್ತಾರ ರಜೆ ಎಂದು ಅವನು ಮರು ಪ್ರಶ್ನೆ ಹಾಕಿದಾಗ ಉತ್ತರಿಸಲಾಗದೆ ಮುಗುಳ್ನಕ್ಕು ಹೊರ ನಡೆದೆ. ಸಾವು ನೈಸರ್ಗಿಕ, ಅದನ್ನು ತಡೆಯಲಾಗಲೀ, ವಿಳಂಬಿಸಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಯಾರಾದರೂ ಸತ್ತರೂ ಅತಿಯಾಗಿ ಶೋಕ ವ್ಯಕ್ತ ಪಡಿಸಲೂ ಬಾರದು. ಹಾಗೆ ಮಾಡಿದ್ದೇ ಆದರೆ ಅವನಿಗೆ ದೇವನ ನಿರ್ಣಯ ಇಷ್ಟವಾಗಿಲ್ಲ ಎಂದು ಅರ್ಥ. ಇದು ಬಹುತೇಕ ಮುಸ್ಲಿಮರ ಅಭಿಪ್ರಾಯ. ಈಗ ಹೇಳಿ ಬಂದ್ ಕೊಡೋದಾದರೂ ಹೇಗೆ ಸಾಧ್ಯ? ಅಲ್ಲೂ ಬಾರದಂತೆ, ಬಂದ್ ಮಾತು ದೂರ ಉಳಿಯಿತು ಅಲ್ಲವೇ? ಅಲ್ಲಾ, ನಾನು ಮಾತಾಡ್ತಾ ಇದ್ದಿದ್ದು ಜಯಂತಿ ಬಗ್ಗೆ, ಇಲ್ಯಾಕೆ ಮುಖಹಾಕಿದ ಯಮ ಧರ್ಮರಾಯ? ಸಾವೆಂದರೆ ಹೀಗೆಯೇ. ಅಚಾನಕ್ ಆಗಿ ಹೊಂಚು ಹಾಕಿ ಬಿಡುತ್ತದೆ.  

ನಾನು ಹೋದ ವರ್ಷ, ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದಾಗ ವಾಲ್ಮೀಕಿ ಜಯಂತಿ. ನಾನು ನನ್ನ ಮಿತ್ರನಿಗೆ ಕೇಳಿದೆ ಇದ್ಯಾವಗಿಂದ ಆರಂಭವಾಯ್ತು ಹೊಸ ಜಯಂತಿ ಎಂದು. ಭಾಜಪ ಸರಕಾರ ಆಲ್ವಾ ಇರೋದು, ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸಲು ಈ ರಜೆ ಅಂದ. ಇಂದು ಬೆಳಿಗ್ಗೆ ಅವನೊಂದಿಗೆ ಮಾತನಾಡಿದಾಗ ಅವನು ಹೇಳಿದ ರಜೆಯ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ, ಬಸವ ಜಯಂತಿ, ಕನಕ ಜಯಂತಿ. ವಚನಗಳ ಮಹಾತ್ಮ, ವೀರಶೈವ ಪಂಗಡ ಗುರುಗಳಾದ ಬಸವಣ್ಣರಿಗೆ ಅವರು ಹುಟ್ಟಿದ ದಿನ ಜನ ರಜೆಯಲ್ಲಿ ದಿನ ಕಳೆಯೋದು ಎಷ್ಟು ಪ್ರಿಯವಾದ ವಿಷಯವೋ ನಾ ಕಾಣೆ. ಬಸವ ಜಯಂತಿ ಇವತ್ತು ಎಂದು ಸಂಭ್ರಮ ಪಡುತ್ತಿರುವವರಿಗೆ ಅವರ ಒಂದೇ ಒಂದು ವಚನವನ್ನಾದರೂ ಒದರಲು ಹೇಳಿದರೆ ಅನಾಹುತವಾಗಬಹುದೋ, politically incorrect ಆಗಬಹುದೋ?

ಕನಕ ಜಯಂತಿ ಯಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವಾನ್ ಶ್ರೀ ಕೃಷ್ಣನ ಮಂದಹಾಸವನ್ನು ನೋಡಲು ದಲಿತನಿಗೆ ದಾರಿ ಮುಕ್ತವಾಗಿ ತೆರೆದಿರಬಹುದೇ? ಇಂಥ ಪ್ರಶ್ನೆಗಳು ರಜೆಯ ದಿನ ಏಳಲೇ ಬೇಕು, ನಾವದಕ್ಕೆ ಉತ್ತರ ಕಂಡು ಕೊಳ್ಳಲೇ ಬೇಕು. ನನಗೆ ಅದಕ್ಕೆ ಸಮಯವಿಲ್ಲ, ಏಕೆಂದರೆ ನನಗೆ ಇಂಥಾ ರಜೆಗಳ ಸೌಕರ್ಯ ಇಲ್ಲ  ಅಥವಾ ಸೌಭಾಗ್ಯ ಇಲ್ಲ.

ನಾ ಕಂಡುಕೊಂಡ ಇಸ್ಲಾಂ

ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತೆ ಚಿತ್ರಿಸಲಾಗುತ್ತಿದೆ ಮುಸ್ಲಿಮರನ್ನು ಮತ್ತು ಅವರು ನಂಬಿಕೊಂಡು ಬಂದ ಧರ್ಮವನ್ನು. ಸೆಪ್ಟಂಬರ್ ೧೧, ೨೦೦೧ ರಲ್ಲಿ ಅಮೆರಿಕೆಯ ಗಗನಚುಂಬಿ ಕಟ್ಟಡಗಳನ್ನು ೧೯ ಜನ ಅರಬ್ ಮೂಲದ ಯುವಕರು ಕದ್ದೊಯ್ದ ವಿಮಾನಗಳನ್ನು ಕ್ಷಿಪಣಿಗಳಂತೆ ಉಪಯೋಗಿಸಿ ನೆಲಸಮಗೊಳಿಸಿದ್ದು, ಸಾವಿರಾರು ಜನರ ಸಾವು ನೋವುಗಳಿಗೆ ಕಾರಣವಾಗಿದ್ದು ಇಸ್ಲಾಮಿನ ಬಗ್ಗೆ ಭಯ ಜನರ ಮನಸ್ಸಿನಲ್ಲಿ ಬೇರೂರಲು ಸಹಾಯಮಾಡಿತು. ತಮ್ಮ ಸ್ವಾರ್ಥ, ಕ್ಷುಲ್ಲಕ, “ಅಡಗಿರಿಸಿದ ಕಾರ್ಯತಂತ್ರ” ಸಾಧಿಸುವ ನಿಟ್ಟಿನಲ್ಲಿ ಇಸ್ಲಾಂ ವಿರೋಧಿಗಳು ಮಾಧ್ಯಮಗಳ ಸಹಾಯದಿಂದ ಈ ಭಯ ಜನರ ಮನಸ್ಸಿನಲ್ಲಿ ಮತ್ತಷ್ಟು ಬೇರೂರಿಸಿ ಒಬ್ಬ ಮುಸ್ಲಿಮನ ದರ್ಶನವಾದರೂ ಮುಗಿಬೀಳುವಂತೆ ಅಥವಾ ವಿಷ ಜಂತುವನ್ನು  ಕಂಡಂತೆ ಆಡಲು ಕಾರಣಕರ್ತರಾದರು.

ಇಷ್ಟೊಂದು ನಿರ್ಭೀತಿಯಿಂದ, ಅಸಾಧಾರಣ ದೈರ್ಯದಿಂದ, ಸ್ವಂತ ಜೀವವನ್ನೂ ಲೆಕ್ಕಿಸದೆ ಆಕ್ರಮಣ ಮಾಡಿದವರ  ideology ಯಾವುದು, ಅದರ ಉದ್ದೇಶವೇನು ಹೀಗೆ ಕುತೂಹಲ ಮುಗಿಲು ಮುಟ್ಟಿ ಇಸ್ಲಾಮಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದ್ದವರೆಲ್ಲಾ ಏಕಾಏಕಿ ಇಸ್ಲಾಮಿನ ಪಂಡಿತರಾಗಿ ಪುಸ್ತಕಗಳನ್ನೂ, ಲೇಖನಗಳನ್ನೂ ಬರೆದರು. ತನಗೆ ಅರ್ಥವಾಗದ ಖಾಯಿಲೆ ತಗುಲಿ ಕೊಂಡಾಗ ಖೊಟ್ಟಿ ವೈದ್ಯರ ಮೊರೆ ಹೋಗುವ ವ್ಯಕ್ತಿಯ ಹಾಗೆ ಜನರು ಅರೆ ಬುದ್ಧಿವಂತ ಪಂಡಿತರ ಮೊರೆ ಹೋದರು ಇಸ್ಲಾಮನ್ನು ಅರಿಯಲು. ಆದರೆ ಅವರಿಗೇ ಸಿಕ್ಕಿದ್ದು ಅರೆಬೆಂದ, ಕಪೋಲಕಲ್ಪಿತ ವಿಚಾರಗಳು. ಈ ಬೆಳವಣಿಗೆ ಪಾಶ್ಚಾತ್ಯ ದೇಶಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಸಾಗರ ದಾಟಿ ನಮ್ಮ ತೀರಕ್ಕೂ ಬಂದವು ಸಂಶಯಗಳು, ಕಪೋಲಕಲ್ಪಿತ ವಿಚಾರಗಳು. ೮೦೦ ವರ್ಷಗಳಿಗೂ ಮಿಕ್ಕು ಆಳಿದ ಒಂದು ಸಂಸ್ಕೃತಿ, ತಮ್ಮ ಭಾಷೆ, ಉಡುಗೆ, ತೊಡುಗೆ, ವಾಸ್ತು ಶಿಲ್ಪಿ, ಸಂಗೀತ ಹೀಗೆ ಬದುಕಿನ ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ತನ್ನದೇ ಆದ, ಎಂದಿಗೂ ಅಳಿಸಲಾಗದ, ಛಾಪನ್ನು ಒತ್ತಿದ ಧರ್ಮವನ್ನು ಮತ್ತೊಮ್ಮೆ ನಾಡಿನವರಿಗೆ ಪರಿಚಯಮಾಡಿ ಕೊಡಬೇಕಾದ ಅವಶ್ಯಕತೆ ಬಗ್ಗೆ  ದುಃಖ ತೋರಿದರೂ ನಾನು ನಂಬಿದ ಮತ್ತು ೧೬ ಕೋಟಿಗೂ ಮಿಕ್ಕು ಭಾರತೀಯರು ಕೊಂಡಾಡುವ ಒಂದು ಸಂಸ್ಕೃತಿಯ ಬಗ್ಗೆ ಬರೆಯೋಣ ಎನ್ನಿಸಿತು. ಭಾರತವನು ಆಳಿದ ಮುಸ್ಲಿಮ ಅರಸರು, ಚಕ್ರವರ್ತಿಗಳು ಆಳಬೇಕಾದ ರೀತಿಯಲ್ಲಿ ಆಳಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರುತ್ತಿರಲಿಲ್ಲವೇನೋ. ನಾನು ಇಸ್ಲಾಂ ಪಂಡಿತನಲ್ಲ. ನನ್ನ ದೈನಂದಿನ ಬದುಕಿನ ಇಸ್ಲಾಮನ್ನು ನಿಮಗೆ ಪರಿಚಯ ಮಾಡಿಸುವತ್ತ ನನ್ನ ಪ್ರಯತ್ನ ಮಾಡುತ್ತೇನೆ. ಸಂದು ಹೋದ ಕಾಲದ, ವೈಭವದ ಬಗ್ಗೆ ಪ್ರಲಾಪಿಸದೆ, ಹಲುಬದೆ, ನನ್ನ ಸಂಸ್ಕೃತಿ ಮಾತ್ರ ಮೇಲು ಎನ್ನುವ ಉಡಾಫೆತನ ತೋರಿಸದೆ, ನಿಮ್ಮ ಮುಂದೆ ಇಟ್ಟಿದ್ದೇನೆ ನಾನು ನಂಬಿದ ನಂಬಿಕೆ, ಧರ್ಮ, ಮತ್ತು ಜೀವನ ರೀತಿಯ ಒಂದು ತುಣುಕನ್ನು.   

ಇಸ್ಲಾಂ ಅಂದರೇನು:  ಇಸ್ಲಾಂ ಅಂದರೆ ಶರಣಾಗುವುದು, ನಿರಾಕಾರನಾದ ಪ್ರಭುವಿನ ಆಜ್ಞೆಗಳಿಗೆ ಶರಣಾಗುವುದು ಎಂದು. ಸಲಾಂ ಎಂದರೆ ಶಾಂತಿ ಎನ್ನುವ ಪದದ ಮೂಲವೂ ಇದೇ ಆದ್ದರಿಂದ ಇಸ್ಲಾಂ ಶಾಂತಿಯ ಧರ್ಮವೂ ಹೌದು. ಆದರೆ characteristically ಇಸ್ಲಾಮನ್ನು ಶಾಂತಿಯ ಧರ್ಮ ಮಾತ್ರ ಎಂದು ವಿವರಿಸಲಾಗದು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕೆನ್ನುವ ಅಸ್ವಾಭಾವಿಕ impractical ನಡವಳಿಕೆಗೆ ಇಸ್ಲಾಂ ಒಪ್ಪದೇ ಸಾಮಾಜಿಕ ನ್ಯಾಯಕ್ಕಾಗಿ, ಮನುಷ್ಯನ ಸ್ವಾಭಾವಿಕ ಆತ್ಮ ಗೌರವಕ್ಕಾಗಿ, ಕುಟುಂಬ,ಜೀವ, ಸೊತ್ತುಗಳ ರಕ್ಷಣೆಗಾಗಿ ಸಿದ್ಧರಾಗಲು ಕರೆ ನೀಡುತ್ತದೆ. ಆದರೆ ಯಾವುದೇ ರೀತಿಯ ಹೋರಾಟವೂ ದೇವಾಜ್ಞೆಗಳ ಚೌಕಟ್ಟಿನಲ್ಲಿ, ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಬೇಕೆನ್ನುವ ಇಸ್ಲಾಂ ಅದೇ ಉಸಿರಿನಲ್ಲಿ ಎದುರಾಳಿಯನ್ನು ಕ್ಷಮಿಸಿ, ಹೃದಯ ವೈಶಾಲ್ಯತೆ ತೋರಿ ದೈವಸಂಪ್ರೀತಿಗಳಿಸಿಕೊಳ್ಳಲು ಕರೆ ನೀಡುತ್ತದೆ ತನ್ನ ಅನುಯಾಯಿಗಳಿಗೆ.  

ಇಸ್ಲಾಮಿನ ಮೂಲಭೂತ ನಂಬಿಕೆ ಮತ್ತು ಅಡಿಗಲ್ಲೆಂದರೆ ಏಕದೇವೋಪಾಸನೆ. ಈ ವಿಷಯದ ಬಗ್ಗೆ ಇಸ್ಲಾಂ ನ ನಿಲುವು uncompromising. ಏಕದೇವೋಪಾಸನೆಯ ಈ ವೈಶಿಷ್ಟ್ಯ ಕ್ರೈಸ್ತ ಧರ್ಮಕ್ಕೆ ಸೇರಿದ ಇಸ್ಲಾಂ ಟೀಕಾಕಾರರ ಮತ್ತು ಹಿಂದೂ ಧಾರ್ಮಿಕ ಗುರುಗಳ ಮೆಚ್ಚುಗೆಯನ್ನೂ ಗಳಿಸಿತು. ಈ ನಿಲುವನ್ನು ಯಾವುದೇ ಕಾರಣಕ್ಕೂ ಸಡಿಲಿಸದೆ ಇದ್ದ ಕಾರಣ ಪ್ರವಾದಿಗಳು ತಮ್ಮ ಹುಟ್ಟೂರಾದ ಮಕ್ಕಾ ಪಟ್ಟಣದಿಂದ ಹೊರಗಟ್ಟಲ್ಪಟ್ಟರು.

“ಕಾಬಾ” ಇರುವುದು ಮಕ್ಕಾ ನಗರದಲ್ಲಿ. ಚೌಕಾಕಾರದ, ಕಪ್ಪು ವಸ್ತ್ರದಿಂದ ಹೊದೆಯಲ್ಪಟ್ಟ ಈ ಕಟ್ಟಡದ ಸುತ್ತಾ ಆಗಿನ ಕಾಲದ ಮಕ್ಕಾ ಮತ್ತು ಅರೇಬಿಯಾದ ನಿವಾಸಿಗಳು ಪ್ರದಕ್ಷಣೆ ಹಾಕುತ್ತಿದ್ದರು. ೩೬೦ ಕ್ಕೂ ಹೆಚ್ಚು ವಿಗ್ರಹಗಳಿದ್ದ ಈ ಭವನಕ್ಕೆ ಸ್ತ್ರೀಯರು ನಗ್ನರಾಗಿ ಪ್ರದಕ್ಷಿಣೆ ಮಾಡುತ್ತಿದ್ದರು. ಸಾಮಾಜಿಕವಾಗಿ ಅಲ್ಲಿನ ಜನರು ಕುಡಿತ, ಜೂಜು, ಪರಸ್ತ್ರೀ ಸಂಗ, ಬಡ್ಡಿ ವ್ಯವಾಹಾರ, ವ್ಯಾಪಾರದಲ್ಲಿ ಮೋಸ, ತೂಕದಲ್ಲಿ ಮೋಸ, ಕಾಳ ಧಂಧೆ, ಹುಟ್ಟಿದ ಮಗು ಹೆಣ್ಣಾದರೆ ಜೀವಂತವಾಗಿ ಹೂಳುವುದು ಹೀಗೆ ನೂರಾರು ಅನಿಷ್ಟಗಳಿಂದ ತಮ್ಮ ಜೀವನ ಶೈಲಿಯನ್ನಾಗಿ ಮಾಡಿ ಕೊಂಡಿದ್ದರು. ಈ ದುರ್ವರ್ತನೆಗಳು ಕೂಡದು, ನಮ್ಮ ಪ್ರತೀ ಕ್ರಿಯೆಗಳು ದೇವನನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು, ಅವನ ಸಂಪ್ರೀತಿಗಾಗಿ ನಮ್ಮ ಬದುಕನ್ನು ಮುಡಿಪಿಡಬೇಕು ಎಂದ ಪ್ರವಾದಿಗಳ ಮಾತು ಅಲ್ಲಿನ ಜನರಿಗೆ ಹಿಡಿಸಲಿಲ್ಲ. ನಮ್ಮ ಆರಾಧನಾ ಕ್ರಮಗಳು ಮತ್ತು ಜೀವನ ರೀತಿಯನ್ನು ವಿರೋಧಿಸದೆ ಇದ್ದರೆ ನಿನ್ನ ಕಾಲಿನ ಬುಡಕ್ಕೆ ನಮ್ಮ ಸಂಪತ್ತನ್ನೆಲ್ಲಾ ಸುರಿಯುತ್ತೇವೆ, ನಿನ್ನನ್ನು ನಮ್ಮ ನಾಯಕನನ್ನಾಗಿ ಮಾಡುತ್ತೇವೆ, ರಾಜನನ್ನಾಗಿ ಅಂಗೀಕರಿಸುತ್ತೇವೆ ಎಂದು ಆಮಿಷ ತೋರಿಸಿದ ಬುಡಕಟ್ಟಿನ ಜನರ ಮಾತಿಗೆ ಒಪ್ಪದೇ ಆರಾಧನೆ ಸೃಷ್ಟಿ ಕರ್ತನಿಗೆ ಮಾತ್ರ, ನಮ್ಮ ಕೈಯ್ಯಾರೆ ಸೃಷ್ಟಿಸಿದ ಸೃಷ್ಟಿಗಳಿಗಲ್ಲ ಎಂದು ಸೊಲ್ಪವೂ ವಿಚಲಿತರಾಗದೆ ಧೃಢ ಸ್ವರದಲ್ಲಿ ಪ್ರವಾದಿಗಳು ಹೇಳಿದಾಗ ಅವರನ್ನು ಮಕ್ಕಾ ನಗರದಿಂದ ಹೊರಗಟ್ಟಿದರು ಅಲ್ಲಿನ ನಿವಾಸಿಗಳು.  ಪ್ರವಾದಿಗಳು ತಮ್ಮ ಅನುಚರರೊಂದಿಗೆ ಭಾರವಾದ ಹೃದಯದಿಂದ ತಮ್ಮ ಪ್ರೀತಿಯ ಮಕ್ಕಾ ಪಟ್ಟಣ ಬಿಟ್ಟು ಮದೀನಾ ನಗರಕ್ಕೆ ಬಂದರು. ಇದನ್ನು “ಹಿಜರಿ” ಎಂದು ಕರೆಯುತ್ತಾರೆ. ಹಿಜರಿ ಎಂದರೆ ವಲಸೆ ಎಂದರ್ಥ. ಏಕದೇವೋಪಾಸನೆಯ ವಿಷಯದಲ್ಲಿ ಮಕ್ಕಾ ಜನರೊಂದಿಗೆ ರಾಜಿ ಮಾಡಿ ಕೊಂಡಿದ್ದರೆ ಪ್ರವಾದಿಗಳು ಕಷ್ಟ ಕಾರ್ಪಣ್ಯ, ಸಾಮಾಜಿಕ ಬಹಿಷ್ಕಾರಗಳನ್ನು ಎದುರಿಸ ಬೇಕಿರಲಿಲ್ಲ. ಪ್ರವಾದಿಗಳ ಈ ನಿಲುವು ಅವರಿಗೆ ಹೊಸ ಬೆಂಬಲಿಗರನ್ನು ಗಳಿಸಿ ಕೊಟ್ಟಿತು.  

ಮಾನವರೆಲ್ಲಾ ಸಮಾನರು, “ಸನ್ನಡತೆಯ ಗಂಡು” ಮತ್ತು “ಸನ್ನಡತೆಯ ಹೆಣ್ಣು” ಇವೆರಡೇ ಜಾತಿಗಳು ಎಂದು ಸಾರಿದ ಪ್ರವಾದಿಗಳಿಗೆ ಮದೀನಾ ನಗರದಲ್ಲಿ ಅಭೂತಪೂರ್ವವಾದ ಸ್ವಾಗತ ಸಿಕ್ಕಿತು. ಕಡು ಕಪ್ಪ್ಪು ತ್ವಚೆಯ ಗುಲಾಮರು ಸಮಾಜದ ಕುಲೀನ ವರ್ಗದವರೊಂದಿಗೆ ಬೆರೆತು ಸರಿ ಸಮಾನರಾಗಿ ಬಾಳುತ್ತಿದ್ದರು. ನಮಾಜಿನ ಸಮಯ ನೀಡುವ ಕರೆ “ಅದಾನ್” ಪ್ರಪ್ರಥಮವಾಗಿ ಕಾಬಾ ಭವನದ ಮೇಲೆ ನಿಂತು ನೀಡಿದ್ದು ಇಥಿಯೋಪಿಯಾ ದೇಶದ ಗುಲಾಮ “ಬಿಲಾಲ್”. ಈ ಸಮಾನತೆಯ ಮೋಹಕ ಆದರ್ಶ ವಿಶ್ವದಾದ್ಯಂತ ದಂಡು ದಂಡಾಗಿ ಜನ ಇಸ್ಲಾಮಿಗೆ ಶರಣಾಗುವಂತೆ ಮಾಡಿತು.         

ಆರಾಧನೆ:  ದಿನದಲ್ಲಿ ಐದು ಹೊತ್ತು ಯಾವುದೇ ಸಮಜಾಯಿಷಿ ಇಲ್ಲದೆ ನಮಾಜ್ ನಿರ್ವಹಿಸುವುದು ಇಸ್ಲಾಮಿನ ಮತ್ತೊಂದು ಅಡಿಗಲ್ಲು. ಹೆಣ್ಣಿಗೆ ಶಾರೀರಿಕ ತೊಡಕು ಹೊರತು ಪಡಿಸಿ, ಮತ್ತು ಗಂಡು ತನ್ನ ಕೊನೆಯುಸಿರಿರುವವರೆಗೂ ನಮಾಜನ್ನು ನಿರ್ವಹಿಸಲೇಬೇಕು. ಪ್ರಯಾಣದಲ್ಲೂ, ಶಾರೀರಿಕ ಅಸ್ವಸ್ಥ ಸ್ಥಿತಿಯಲ್ಲೂ, ರಣರಂಗದಲ್ಲೂ, ಯಾವುದೇ ವಿನಾಯಿತಿ ಇಲ್ಲದೆ ಕ್ಲಪ್ತ ಸಮಯಕ್ಕೆ ಸೃಷ್ಟಿ ಕರ್ತನ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಅರುಣೋದಯ ದ ಪ್ರಾರ್ಥನೆ, ಸೂರ್ಯ ನೆತ್ತಿಗೆ ಬಂದಾಗಿನ ಹೊತ್ತು, ಅಪರಾಹ್ನ, ಸಂಜೆ, ಮತ್ತು ರಾತ್ರಿ ಇವು ನಮಾಜ್ ಗೆಂದು ನಿಯುಕ್ತ ಗೊಂಡ ಸಮಯಗಳು. ಸಮಯ ತಪ್ಪಿಸಿದರೆ ಆ ಆರಾಧನೆ  ಚಲಾವಣೆ ಕಳೆದು ಕೊಂಡ ಕಾಸಿನಂತೆ. ನಿರರ್ಥಕ. ಸಮಯ ತಪ್ಪಿಸಿದ ಆರಾಧನೆ ನನಗೆ ಬೇಡ ಎನ್ನುತ್ತಾನೆ ಪರಮಾತ್ಮ. ಈ ನಿಯಮದಲ್ಲಿ ಬದುಕಿನಲ್ಲಿ ಯಶಸ್ಸಿಗೊಂದು ಪಾಠ ಇಲ್ಲಿದೆ ನೋಡಿ. ನಮಾಜ್ ಸಮಯಪ್ರಜ್ಞೆಯನ್ನು ಜನರಲ್ಲಿ ಬೆಳೆಸುತ್ತದೆ, ಸಮಯದ ಮಹತ್ವದ ಬಗ್ಗೆ ನಿಷ್ಠುರತೆ ತೋರಿಸುತ್ತದೆ. ಆದರೆ ಈ ಸಾರವನ್ನು ಮುಸ್ಲಿಮ್ ಜನಾಂಗ ಅರಿಯದೆ ಇರುವುದು ಖೇದಕರ.

ಇಸ್ಲಾಮಿನಲ್ಲಿ ಸ್ತ್ರೀ:  ಮನೋಹರವಾದ, ವಿಶ್ವ ಕೊಂಡಾಡಿದ ಆದರ್ಶಗಳಾದ ಏಕ ದೇವೋಪಾಸನೆ, ಮನುಷ್ಯರಲ್ಲಿ ಸಮಾನತೆ, ಯಾವುದೇ ಪರಿಸ್ಥಿತಿಯಲ್ಲೂ ದೇವರ ಆರಾಧನೆಯಂಥ ವಿಚಾರಗಳು ಮಾತ್ರವಲ್ಲ ಹೆಣ್ಣಿನ ಸ್ವಾತಂತ್ರ್ಯದ ಕಡೆಗೂ ಇಸ್ಲಾಂ ಗಮನ ಹರಿಸಿತು. ಆಗಿನ ಕಾಲದಲ್ಲಿ ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು ಯಾರೂ ಕೇಳಿರದ, ಕಂಡಿಲ್ಲದ ಒಂದು ಬೆಳವಣಿಗೆ. ಪ್ರಪ್ರಥಮವಾಗಿ ಹೆಣ್ಣಿಗೆ ತನ್ನ ತಂದೆಯ ಆಸ್ತಿಯಲ್ಲಿ ಹಕ್ಕನ್ನು ನೀಡುವ ಮೂಲಕ ಒಂದು ಕ್ರಾಂತಿ ಕಾರೀ ಬೆಳವಣಿಗೆಗೆ ಇಸ್ಲಾಂ ನಾಂದಿ ಹಾಡಿತು. ಇಸ್ಲಾಂ ಅನುಷ್ಠಾನಕ್ಕೆ ತಂದ ೮೦೦  ವರುಷಗಳ ತರುವಾಯ ಇಂಗ್ಲೆಂಡ್ ಈ ಕಾನೂನನ್ನು ಅನುಷ್ಠಾನಕ್ಕೆ ತಂದಿತು. ಹೆಣ್ಣಿಗೆ ಆತ್ಮವಿಲ್ಲ ಮತ್ತು ಸ್ವರ್ಗ ಲೋಕದಿಂದ ಮನುಷ್ಯ ಹೊರ ಹಾಕಲ್ಪಟ್ಟಿದ್ದು ಹೆಣ್ಣಿನ ತಪ್ಪಿನಿಂದ, ಪ್ರಪಂಚದ ಎಲ್ಲಾ ಕೋಲಾಹ, ಕಲಹಗಳಿಗೆ ಹೆಣ್ಣೇ ಕಾರಣ ಎಂದು ಮಹಿಳೆಯನ್ನು ಪಾಶ್ಚಾತ್ಯರಂತೆ ಜರಿಯದೆ ದೇವರಿಗೆ ಭಯ ಪಟ್ಟು ಬದುಕುವ ಗಂಡು ಮತ್ತು ಹೆಣ್ಣು ಹೇಗೆ ಸಮಾನರು ಎಂದು ಕುರಾನಿನ ಸೂಕ್ತದಲ್ಲಿ ವಿವರವಾಗಿ ಹೇಳಲಾಗಿದೆ. ಈಗಿನ ಹೆಣ್ಣಿನ ಶೋಷಣೆಗೆ, ದುರ್ಗತಿಗೆ ಮನುಷ್ಯನ ಅತಿಯಾಸೆ ಮತ್ತು ದಬ್ಬಾಳಿಕೆ ಕಾರಣವೇ ಹೊರತು ಧರ್ಮವಲ್ಲ ಎನ್ನುವುದನ್ನು ಇಸ್ಲಾಮಿನ ಆದರ್ಶಗಳನ್ನು ಅರಿತವರಿಗೆ ಅರಿವಾಗುವುದು.   ವಿಧವೆಯರಿಗೆ ಅವರ ಉಡುಗೆ ತೊಡುಗೆಗಳಲ್ಲಿ ಯಾವುದೇ ನಿರ್ದಿಷ್ಟ ನಿರ್ಬಂಧ ಹೇರದೆ ಅವರ ಮರು ವಿವಾಹಕ್ಕೆ ಅನುವು ಮಾಡಿಕೊಡಲು ಸಮಾಜದಿಂದ ಇಸ್ಲಾಂ ಬಯಸುತ್ತದೆ.

ಸ್ತ್ರೀಯರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ ಎಂದು ಹೇಳುವ ಟೀಕಾಕಾರರಿಗೆ ಮುಸ್ಲಿಮ್ ಸಮಾಜ ಉತ್ತರ ನೀಡಿದೆ. ವಿಶ್ವದಲ್ಲಿ ಇದುವರೆಗೂ ಐದು (ತುರ್ಕಿ, ಪಾಕಿಸ್ತಾನ, ಬಾಂಗ್ಲ ದೇಶ, ಕಿರ್ಗಿಸ್ತಾನ್) ಮುಸ್ಲಿಂ ಮಹಿಳಾ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು ಅವರನ್ನು ಆರಿಸಿದ ಮತದಾರರಲ್ಲಿ ಪುರುಷರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು ಎನ್ನುವುದನ್ನು ಮನಗಾಣಬೇಕು. ಅಷ್ಟೇ ಅಲ್ಲದೆ ಜೋರ್ಡನ್, ಮತ್ತು ಕತಾರ್ ದೇಶಗಳ ರಾಣಿಯರು ಮತ್ತು ಸಿರಿಯಾ ದೇಶದ ಅಧ್ಯಕ್ಷರ ಪತ್ನಿ ಆ ದೇಶಗಳ ರಾಜಕಾರಣಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿರುವರು. ಪಾಕಿಸ್ತಾನದಲ್ಲಿ ಮೊಟ್ಟ ಮೊದಲ  ಮಹಿಳಾ ಬ್ಯಾಂಕನ್ನು ಸಂಸ್ಥಾಪನೆ ಮಾಡಿದ್ದು ಓರ್ವ ಮಹಿಳೆ.  

ಬಹು ಪತ್ನಿತ್ವ:  ಕೆಲವೊಂದು ಸನ್ನಿವೇಶಗಳಲ್ಲಿ, ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಪುರುಷ ಬಹು ಪತ್ನಿತ್ವ ಪಾಲಿಸಬಹುದು. ಆದರೆ ಪತ್ನಿಯರ ನಡುವೆ ನ್ಯಾಯ ಪಾಲಿಸುವಂತೆ ಇಸ್ಲಾಂ ಕಠಿಣ ಶರತ್ತುಗಳನ್ನು ಒಡ್ಡಿದ್ದರಿಂದ ಬಹುಸಂಖ್ಯಾತ ಮುಸ್ಲಿಮರು ಏಕ ಪತ್ನೀವ್ರತಸ್ಥರಾಗಿದ್ದಾರೆ ಎಂದು ನಾವು ಕಾಣಬಹುದು. ಈ ತೆರನಾದ ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದುವ ಸೌಲಭ್ಯವಿದ್ದರೂ ವಿಶ್ವದ ಶೇಕಡಾ ೯೫ ಕ್ಕೂ ಅಧಿಕ ಮುಸ್ಲಿಂ ಪುರುಷರು ಓರ್ವ ಪತ್ನಿಯಿಂದಲೇ ಸಂತೃಪ್ತರಾಗಬೇಕಾದರೆ ಮುಸ್ಲಿಮರಲ್ಲಿರುವ ಆಳವಾದ ಧಾರ್ಮಿಕ ಪ್ರಜ್ಞೆ ಮತ್ತು ದೈವ ಭಯ ಇರುವುದರಿಂದಲೇ ಸಾಧ್ಯ ಎಂದು ಮನಗಾಣಬಹುದು.  

ಮುಸ್ಲಿಮೇತರರೊಂದಿಗೆ ಇಸ್ಲಾಂ:  ಸಂಪೂರ್ಣ ಅರೇಬಿಯಾ ತನ್ನ ಉನ್ನತ ಆದರ್ಶಗಳಿಗೆ ತಲೆ ಬಾಗಿ ನಡೆಯುತ್ತಿದ್ದರೂ ಪ್ರವಾದಿಗಳು ಯಹೂದ್ಯರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು.

ಪ್ರವಾದಿಗಳ ನಂತರ ಖಲೀಫಾ ಆಳ್ವಿಕೆಯ ಪರಂಪರೆ ಆರಂಭವಾಯಿತು. ಪ್ರವಾದಿಗಳ ನಂತರದ ಸುಮಾರು ೫೦೦ -೬೦೦ ವರ್ಷಗಳನ್ನು ಇಸ್ಲಾಮಿನ ಸುವರ್ಣ ಯುಗ ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.

ಮುಸ್ಲಿಂ ಆಳ್ವಿಕೆಯಲ್ಲಿ ಮುಸ್ಲಿಮೇತರರ ಮೇಲೆ “ಜೆಜಿಯಾ” ತಲೆಗಂದಾಯ ವಿಧಿಸಿದ ಕಾರಣ ನೋಡೋಣ. ಎಲ್ಲಾ ಮುಸ್ಲಿಂ ರಾಜರುಗಳು ಈ ಪದ್ಧತಿಯನ್ನು ಅನುಸರಿಸಲಿಲ್ಲ. ಮುಸ್ಲಿಂ ಆಳ್ವಿಕೆಯಲ್ಲಿ, ಮುಸ್ಲಿಂ ದೇಶದಲ್ಲಿ ನೆಲೆಸುವ ಮುಸ್ಲಿಮೇತರರಿಗೆ ಕೆಲವು ಸೌಲಭ್ಯ ಕೊಡುವ ಕಾರಣ ಈ ತೆರಿಗೆ ವಿಧಿಸಲಾಯಿತು. ಮುಸ್ಲಿಮೇತರರು ಸೈನ್ಯದಲ್ಲಿ ಭಾಗವಹಿಸುವ ಅವಶ್ಯಕತೆಯಿಲ್ಲ, ಮತ್ತು ಪ್ರತೀ ಮುಸ್ಲಿಮನೂ ಪಾವತಿಸಲೇ ಬೇಕಾದ “zakah” ಎನ್ನುವ ತೆರಿಗೆಯಿಂದಲೂ ಮುಸ್ಲಿಮೇತರರಿಗೆ ವಿನಾಯಿತಿ ನೀಡಲಾಯಿತು. ಹಾಗೆಯೇ ಅವರ ಪ್ರಾಣ, ಆಸ್ತಿ ರಕ್ಷಣೆ ಸಹ ಮುಸ್ಲಿಂ ದೇಶದ ಹೊಣೆಯಾಗಿತ್ತು.  

ಯಾವ ಧರ್ಮಕ್ಕೆ ಸೇರಿದವನಾದರೂ ನೆರೆ ಹೊರೆಯವನೊಂದಿಗೆ ಸ್ನೇಹದಿಂದ  ಇರಲೂ, ನೆರೆಯವನ ಎಲ್ಲಾ ಅವಶ್ಯಕತೆ ಪೂರೈಸಲು ಮುಸ್ಲಿಮರನ್ನು ಇಸ್ಲಾಂ ಉತ್ತೇಜಿಸುತ್ತದೆ. ಇಸ್ಲಾಮಿನ ಎರಡನೇ ಖಲೀಫಾ (ಧರ್ಮಾಧಿಕಾರಿ, ಇಸ್ಲಾಮಿನಲ್ಲಿ “ರಾಜ” ಎನ್ನುವ ಪದ್ಧತಿಯಿಲ್ಲ, ಅದು ನವೀನ ಅವಿಷ್ಕಾರ) ಉಮರ್ ಅವರ ಕಾಲದಲ್ಲಿ ಒಬ್ಬ ಯಹೂದ್ಯ ವ್ಯಕ್ತಿ ತನ್ನ ಮನೆ ಪಕ್ಕದ ಖಾಲಿ ಜಾಗವನ್ನ ಮಾರುವಾಗ ದೊಡ್ಡ ಮೊತ್ತದ ಹಣ ಕೇಳುತ್ತಾನೆ. ಕಾರಣ ಕೇಳಿದಾಗ ಖಾಲಿ ಜಾಗದ ಪಕ್ಕದಲ್ಲಿ ಧರ್ಮ ನಿಷ್ಠ ಮುಸ್ಲಿಂ ವ್ಯಕ್ತಿ ವಾಸವಿರುವುದರಿಂದ ಆ ವ್ಯಕ್ತಿಯಿಂದ ಯಾವುದೇ ತಕರಾರು, ಸಮಸ್ಯೆಗಳು ಬರಲು ಸಾಧ್ಯವಿಲ್ಲದೆ ಇರುವುದರಿಂದ ಆ ಖಾಲಿ ಸ್ಥಳಕ್ಕೆ ಹೆಚ್ಚು ಹಣ ಎಂದು ವಿವರಣೆ ನೀಡುವ ಯಹೂದಿ ಪರೋಕ್ಷವಾಗಿ ಇಸ್ಲಾಮಿನ ಆದರ್ಶಗಳನ್ನು ಕೊಂಡಾಡುತ್ತಾನೆ.  

ಕೊನೆಯದಾಗಿ ಇಸ್ಲಾಮಿನ ಹೆಸರಿನಲ್ಲಿ ಹಿಂಸೆ, ರಕ್ತ ಪಾತ ಹರಿಸುತ್ತಿರುವವರು ತಾವು ನಂಬಿದ ಧರ್ಮದ ಆದರ್ಶಗಳಿಗೆ ದ್ರೋಹ ಬಗೆಯುತ್ತಿದ್ದು ಅವರ ಕುಕೃತ್ಯಗಳಿಗೆ ಇಸ್ಲಾಂನ  ಮೇಲೆ ಹೊಣೆ ಹೊರಿಸುವುದು ತಪ್ಪು.  ವಿನಾಕಾರಣ ಯಾವುದೇ ನಿರಪರಾಧಿ, ಮುಗ್ಧ ವ್ಯಕ್ತಿಯನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದಂತೆ ಎಂದು ಸಾರುವ ಇಸ್ಲಾಂ ಒಬ್ಬ ವ್ಯಕ್ತಿಯ ಜೀವ ಉಳಿಸಿದರೂ ಜೀವ ಉಳಿಸಿದ ವ್ಯಕ್ತಿ ಮಾನವ ಕುಲವನ್ನೇ ಉಳಿಸಿದ ಕೀರ್ತಿಗೆ ಪಾತ್ರನಾಗುತ್ತಾನೆ ಎಂದು ಹೇಳಿದ್ದರೆ ಭಯೋತ್ಪಾದನೆಯ ಬಗೆಗಿನ ಇಸ್ಲಾಮ್ ನ ನಿಲುವು ಏನು ಎಂದು ತಿಳಿಯುತ್ತದೆ.  ರಾಜಕೀಯ ಕಾರಣಗಳಿಗಾಗಿ ಹಿಂಸೆಯ ಮಾರ್ಗ ಹಿಡಿರುವ ದುರುಳರಿಗೆ ಅವರು ಮಾಡುತ್ತಿರುವುದು “ಪ್ರತಿಕ್ರಿಯಾತ್ಮಕ” ಹಿಂಸೆ ಎಂತಲೋ, “ಧರ್ಮಕ್ಕಾಗಿ ಕಯ್ಯೆತ್ತುವುದು” ಎಂತಲೂ ಮುಸ್ಲಿಮರು ಸಮರ್ಥಿಸದೆ ಒಕ್ಕೊರಲಿನಿಂದ ಖಂಡಿಸಿದ್ದಾರೆ. ರಕ್ತಪಾತ, ಸಾಮೂಹಿಕ ಕೊಲೆಯಂಥ ಕೃತ್ಯ ಎಸಗುವ ಜನರು ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ ಎಂದು ಕಳೆದವರ್ಷ ಹೈದರಾಬಾದಿನಲ್ಲಿ ಸೇರಿದ್ದ ದೇಶದ ಮುಸ್ಲಿಂ ಪಂಡಿತರುಗಳು ಇಸ್ಲಾಂ ವಿಶ್ವ ಶಾಂತಿ ಬಯಸುತ್ತದೆ ಎಂದು ಸಾರಿದ್ದರು.

ಮುಸ್ಲಿಮರಲ್ಲಿರುವ ಅನಕ್ಷರತೆ, ಮತ್ತಿತರ ನ್ಯೂನತೆಗಳಿಗೆ ಮುಸ್ಲಿಮರು ಹೊಣೆಯೇ ಹೊರತು ಅವರು ನಂಬುವ ಇಸ್ಲಾಂ ಧರ್ಮವಲ್ಲ. ಪವಿತ್ರ ಗ್ರಂಥ ಕುರಾನ್ ನ ಮೊದಲ ಸೂಕ್ತಗಳು ಆರಂಭಗೊಂಡಿದ್ದು ಈ ವಾಕ್ಯದಿಂದ; “ಓದು, ನಿನ್ನನ್ನು ಸೃಷ್ಟಿಸಿದ ಪ್ರಭುವಿನ ನಾಮದಿಂದ” ಎಂದು. ಇಸ್ಲಾಂ ಜ್ಞಾನಕ್ಕೆ ಎಷ್ಟು ಮಹತ್ವ ನೀಡಿದೆ ಎಂದು ಈ ಸೂಕ್ತದಿಂದ ತಿಳಿಯಬಹುದು. ಇಸ್ಲಾಂ ಧರ್ಮವನ್ನ ಅರಿಯಬೇಕೆಂದರೆ ನೇರವಾಗಿ ಧರ್ಮಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕೆ ವಿನಃ  ಮುಸ್ಲಿಮರ ನಡವಳಿಕೆ ನೋಡಿ ಇವರ ಧರ್ಮ ಹೀಗೆ ಎಂದು ತೀರ್ಪು ನೀಡುವುದು ತಪ್ಪು.      

ಪ್ರವಾದಿಗಳ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರಾಮಕೃಷ್ಣ ರಾವ್ ಸುಂದರವಾದ ಪುಸ್ತಿಕೆ ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿ ಇರುವ ಆ ಪುಸ್ತಿಕೆ ಸೌದಿ ಅರೇಬಿಯಾದ ಮಸೀದಿಗಳಲ್ಲೂ ಕಾಣಬಹುದು. ಪುಸ್ತಿಕೆಯ ಹೆಸರು Muhammad, the prophet of Islam.

ಧರ್ಮ ಮತ್ತು ಹಿಂಸೆ

“ಜಗತ್ತಿನಲ್ಲಿನ ಜಿಹಾದ್ ಮೂಲಕ “ಕಾಷಿರ್”(ಸುಳ್ಳು ದೇವರ ಆರಾಧಕರು ಅಥವಾ false religion worshipers) ಜನರನ್ನು ಕೊಂದು ನಮ್ಮ ಸತ್ಯ ಮತ್ತು ಏಕೈಕ ದೇವರ ಸಾಮ್ರಾಜ್ಯವನ್ನು ಸ್ಥಾಪಿಸಬೇಕು ಎಂದು ನಂಬುತ್ತದೆ” ಎಂದು ಅಂತರ್ಜಾಲದ ಮಾಧ್ಯಮವೊಂದರಲ್ಲಿ ಒಬ್ಬರ ಅಭಿಪ್ರಾಯ. ಮೇಲಿನ ಹೇಳಿಕೆ ನನ್ನ ಪ್ರಕಾರ ಬಾಲಿಶ. ಭಯೋತ್ಪಾದನೆ ಇಸ್ಲಾಂ ಧರ್ಮ ವಿರೋಧಿ ಎಂದು ಭಾರತದ ಮಾತ್ರವಲ್ಲ ಜಗತ್ತಿನ ಎಲ್ಲಾ ಮುಸ್ಲಿಮ ಧರ್ಮಗುರುಗಳು (ಉಲೇಮ) ಹೇಳಿಕೆ ನೀಡಿದ್ದಾರೆ. “ಕಾಫಿರ್” ಅನ್ನುವ ಪದದ ಬಗ್ಗೆ ಬಹಳಷ್ಟು ವಿವಾದಗಳಿವೆ. ಮುಸ್ಲಿಮೇತರರನ್ನು ಕಾಫಿರರೆಂದು ತೆಗಳಬಾರದು ಮತ್ತು ಸಂಬೋಧಿಸಬಾರದೆಂದು ಮುಸ್ಲಿಂ ಪಂಡಿತರ ಅಭಿಪ್ರಾಯ. ಅಷ್ಟಕ್ಕೂ ಕಾಫಿರ್ ಅನ್ನುವ ಪದಕ್ಕೆ ಹಲವು ಅರ್ಥಗಳಿವೆ. ಕಾಫಿರ್ ಅಂದರೆ “ವಿರೋಧಿಸುವವ” ಮತ್ತು “ಮರೆಮಾಚುವವ” ಎಂದೂ ಅರ್ಥೈಸುತ್ತಾರೆ. ಹೊಲದಲ್ಲಿ ರೈತ ಬೀಜ ಬಿತ್ತುವುದಕ್ಕೆ “ಕುಫ್ರ್” (ಕಾಫಿರ್ ನ ಮೂಲ ಪದ “ಕುಫ್ರ್”) ಎನ್ನುತ್ತಾರೆ, ಅಂದರೆ ಆತ ಬೀಜವನ್ನು ಬಿತ್ತಿ ಮಣ್ಣಿನಿಂದ ಮುಚ್ಚುತ್ತಾನೆ ಎಂದು ಅರ್ಥ. ನಿತ್ಯ ಜೀವನದಲ್ಲಿ ಮುಸ್ಲಿಮರನ್ನು ಧ್ವೇಷದಿಂದ ನಾವು ಸಾಬ, ತುರ್ಕ, ಮುಸಲ, “ಹಲಾಲ್ ಖೋರ್” (ಸಂಪದದಲ್ಲಿ ಕೇಳಿದ್ದು) ಹೀಗೆ ವಿವಿಧ ನಾಮಾವಳಿಗಳಿಂದ ಕರೆದು ಹಿಗ್ಗುವುದು ಒಂದು ಪರಿಪಾಠವಾದಾಗ ಹಾಗೆ ಕರೆಯುವವರನ್ನು ಬಹುಶಃ ಮುಸ್ಲಿಮರು ಬೇಸರದಿಂದ ಕಾಫಿರರೆಂದು ಕರೆಯುತ್ತಾರೇನೋ. ಆದರೂ ಬಹುಪಾಲು ಮುಸ್ಲಿಮರು ಹಿಂದೂಗಳನ್ನು ಹಾಗೆ ಕರೆಯುವುದನ್ನು ನಾನು ಕೇಳಿಲ್ಲ. (personally, any amount of provocation will not entice or induce me to label people as kafirs) ಒಬ್ಬನ ಮನಸ್ಸನ್ನು ನೋಯಿಸುವುದು, ಘಾಸಿಗೊಳಿಸುವುದು ಒಂದು ಮಸೀದಿಯನ್ನು ಕೆಡವಿದಂತೆ ಎಂದು ಹಿರಿಯರು ಹೇಳುತ್ತಾರೆ. ಅಂಥ ಉನ್ನತ ಸಂಸ್ಕಾರದಲ್ಲಿ ಮಿಂದ ಒಬ್ಬ ವ್ಯಕ್ತಿ ಯಾರ ಮನಸ್ಸನ್ನೂ ನೋಯಿಸುವುದಿಲ್ಲ.

“ಸೆಮೆಟಿಕ್” ಧರ್ಮಗಳು ಎಂದರೆ ಪ್ರವಾದಿ ಅಬ್ರಹಾಮರ ಧರ್ಮವನ್ನು ನಂಬಿ ನಡೆಯುವವರು ಎಂದು ಸಾಮಾನ್ಯ ತಿಳಿವಳಿಕೆ. ಸೆಮೆಟಿಕ್ ಪದಕ್ಕೆ ಬಹು ದೊಡ್ಡ ವ್ಯಾಖ್ಯಾನವಿದೆ. ಯಹೂದ್ಯ, ಕ್ರೈಸ್ತ, ಇಸ್ಲಾಂ ಧರ್ಮಗಳು ಸೆಮೆಟಿಕ್. ಆದರೂ ಸಹ ಕ್ರೈಸ್ತರು ಮತ್ತು ಯಹೂದ್ಯರು ಇಸ್ಲಾಮ್ ಧರ್ಮವನ್ನ ಸೆಮೆಟಿಕ್ ಎಂದು ಭಾವಿಸುವುದಿಲ್ಲ. ಇಸ್ಲಾಂ ಯಹೂದ್ಯರ “ಮೋಸೆಸ್”, ಮತ್ತು ಕ್ರೈಸ್ತರ “ಏಸು” ಇವರುಗಳನ್ನು ದೇವನ ಸಂದೇಶವಾಹಕರು ಎಂದು ನಂಬಿ ಗೌರವಿಸುತ್ತಾರೆ. ಅವರುಗಳನ್ನು ಏಕ ವಚನದಲ್ಲೂ ಸಂಬೋಧಿಸುವುದಿಲ್ಲ. ಅವರ ಹೆಸರುಗಳನ್ನು ತಮ್ಮ ಮಕ್ಕಳಿಗೆ ನಾಮಕರಣವನ್ನೂ ಮಾಡುತ್ತಾರೆ.(ನನ್ನ ಮಗಳ ಹೆಸರು “ಇಸ್ರಾ ಮರ್ಯಮ್”. ಮರ್ಯಮ್, ಯೇಸು ಮಾತೆ) ಪ್ರವಾದಿಗಳು ಯಹೂದ್ಯರನ್ನು ಮತ್ತು ಕ್ರೈಸ್ತರನ್ನು “ಒಡಂಬಡಿಕೆಗಳ ಜನ” ಎಂದು ಅವರನ್ನು ಗೌರವದಿಂದ ನಡೆಸಿ ಕೊಂಡಿದ್ದು ಮಾತ್ರವಲ್ಲ ಅವರೊಂದಿಗೆ ವ್ಯವಹಾರವನ್ನೂ ನಡೆಸುತ್ತಿದ್ದರು. ಪವಿತ್ರ ಕುರಾನಿನಲ್ಲಿ ಯಹೂದ್ಯರನ್ನು, ಕ್ರೈಸ್ತರನ್ನೂ, ಸೇಬಿಯನ್ನರನ್ನೂ “ಗ್ರಂಥಗಳ ಸಮುದಾಯ” ಎಂದು ಸಂಬೋಧಿಸಿದ್ದರಿಂದ ಅವರ ಮೇಲೆ unprovoked ಆಕ್ರಮಣ ಮಾಡುವಂತಿಲ್ಲ. ಧರ್ಮ ಯುದ್ಧ ಗಳ ಸಮಯದಲ್ಲಿ ಯಾವುದೇ ಕಾರಣಕ್ಕೂ ಇಗರ್ಜಿ, ಮತ್ತು ಕ್ರೈಸ್ತ ಸಂತರು ವಾಸಿಸುವ ನಿವಾಸಗಳ ಮೇಲೆ ಆಕ್ರಮಣ ಕೂಡದು ಎಂದು ಸ್ಪಷ್ಟವಾಗಿ ಇಸ್ಲಾಮಿನ ಪ್ರಥಮ ಖಲೀಫಾ ಅಬೂ ಬಕ್ಕರ್ ನಿರ್ದೇಶಿಸಿದ್ದರು.

ಇಸ್ಲಾಮಿನ ಎರಡನೇ ಖಲೀಫಾ ಉಮರ್ ಮುಸ್ಲಿಂ ಸೇನೆ ವಶಪಡಿಸಿಕೊಂಡ ಜೆರುಸಲೆಂ ನಗರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಇಗರ್ಜಿಗೆ ಹೋಗಿ ಧರ್ಮಗುರುಗಳನ್ನು ಭೇಟಿಯಾಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಪ್ರಾರ್ಥನೆಯ ಕರೆ ಕೇಳಿಬರುತ್ತದೆ. ಕೂಡಲೇ ಪಾದ್ರಿ ಉಮರ್ ರವರಿಗೆ ಪ್ರಾರ್ಥಿಸಲೆಂದು ಕಂಬಳಿಯನ್ನು ಇಗರ್ಜಿಯಲ್ಲೇ ಹಾಸುತ್ತಾರೆ. ಸೌಮ್ಯವಾಗಿ ನಿರಾಕರಿಸಿದ ಉಮರ್ ಇಗರ್ಜಿಯಿಂದ ಹೊರಕ್ಕೆ ಸ್ವಲ್ಪ ದೂರ ಹೋಗಿ ನಮಾಜ್ ನಿರ್ವಹಿಸುತ್ತಾರೆ. ಆಗ ಪಾದ್ರಿ ಕೇಳುತ್ತಾರೆ, ಖಲೀಫಾ ಉಮರ್, ಏಕೆ ಇಗರ್ಜಿಯಲ್ಲಿ ನಮಾಜ್ ಮಾಡಕೂಡದು ಎಂದೇನಾದರೂ ಇಸ್ಲಾಮಿನಲ್ಲಿ ಇದೆಯಾ ಎಂದು. ಆಗ ಉಮರ್ ಹೇಳುತ್ತಾರೆ, ಹಾಗೇನಿಲ್ಲ, ಆದರೆ ನಾನು ಇಗರ್ಜಿಯಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಭವಿಷ್ಯದಲ್ಲಿ ಧರ್ಮದ ತಿರುಳರಿಯದ ಮುಸ್ಲಿಂ ಮತಾಂಧರು ಈ ಇಗರ್ಜಿಯನ್ನೇ ಕೆಡವಿ ಮಸೀದಿ ನಿರ್ಮಿಸಬಹುದು ಎನ್ನುವ ಆತಂಕದಿಂದ ನಾನು ಬಯಲಿನಲ್ಲಿ ನಮಾಜ್ ಮಾಡಿದೆ ಎಂದು ಹೇಳುತ್ತಾರೆ. ಈ ಮಹಾನ್ ಚೇತನ ಆಡಿದ ಇಂಥ ಮಾತಿಗೆ ಸರಿಸಾಟಿಯಾದ ಒಂದೇ ಒಂದು ಮಾತನ್ನು ಚರಿತ್ರೆಯಿಂದ ಹೆಕ್ಕಿ ತೋರಿಸಲು ನಮಗೆ ಸಾಧ್ಯವಾಗದು.

ಸೆಮೆಟಿಕ್ ಧರ್ಮಗಳು ಹಿಂಸೆ ಯನ್ನು ಪ್ರೋತ್ಸಾಹಿಸುತ್ತವೆ ಎಂದು ಹೇಳುವುದು ಅಜ್ಞಾನದ ಕುರುಹು. ಮೇಲಿನ ಪರಧರ್ಮ ಸಹಿಷ್ಣುತೆಯ ಒಂದಲ್ಲ, ಲೆಕ್ಕವಿಲ್ಲದ ಉದಾಹರಣೆಗಳು ಇಸ್ಲಾಮೀ ಚರಿತ್ರೆಯಲ್ಲಿ ನಮಗೆ ಕಾಣಲು ಸಿಗುತ್ತವೆ. ಮುಸ್ಲಿಮರಿಗೆ ಆದರ್ಶ ವ್ಯಕ್ತಿಗಳು ಪ್ರವಾದಿಗಳು, ನಂತರ ಬಂದ ನಾಲ್ಕು ಖಲೀಫಾ ನಾಯಕರುಗಳು, ಪಾಶ್ಚಿಮಾತ್ಯರು ಈಗಲೂ ಕೊಂಡಾಡುವ ಸುಲ್ತಾನ್ ಸಲಾಹುದ್ದೀನ್ ಅಯ್ಯೂಬಿಯಂಥ ಮಹಾ ವ್ಯಕ್ತಿಗಳು. ಇವರಾರೂ ಧರ್ಮ ಬೇರೆ ಎಂದು ಹೇಳಿ ಪರಧರ್ಮೀಯರನ್ನು ನಿಕೃಷ್ಟವಾಗಿ ನಡೆಸಿಕೊಂಡಿಲ್ಲ. ಚರಿತ್ರೆಯಲ್ಲಿ ತಮ್ಮ ಸ್ವಾರ್ಥ, ಅಧಿಕಾರ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಬಂದ ದಂಡು ಕೋರರೋ, ಲೂಟಿಕೋರರೋ ಮುಸ್ಲಿಮರಿಗೆ ಆದರ್ಶ ಅಲ್ಲ ಹಾಗೂ ಧರ್ಮ ಸಮ್ಮತವಲ್ಲದ ಕೆಲಸ ಮಾಡಿದ ರಾಜರ ಬಗ್ಗೆ ಮುಸ್ಲಿಮರಿಗೆ ಹೆಮ್ಮೆಯೂ ಇಲ್ಲ.

ಒಂದು ಎರಡು ಬಾಳೆಲೆ ಹರಡು..

ನನ್ನ ಮಗಳು “ಇಸ್ರಾ” ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು. ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ “ಅಹ್ಮದ್” ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ ” ಅಯ್ಮನ್” ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು… ಡಮ್ಮರೆ ಡಮ್ಮಮ್ಮ,

ಮನೆ ಸುಟ್ಟೋಯ್ತು

ಯಾರ ಮಾನೆ

ಪೂಜಾರಿ ಮಾನೆ

ಯಾವ ಪೂಜಾರಿ

ಜುಟ್ಟು ಪೂಜಾರಿ

ಯಾವ ಜುಟ್ಟು

ಕೋಳಿ ಜುಟ್ಟು

ಯಾವ ಕೋಳಿ

ಬಾತು ಕೋಳಿ

ಯಾವ ಬಾತು

ಕೇಸರಿ ಬಾತು

ಯಾವ ಕೇಸರಿ

ತಿನ್ನೋ ಕೇಸರಿ

ಯಾವ ತಿನ್ನೋದು

ಹೊಡ್ತ ತಿನ್ನೋದು…. ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ.

ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, ” ನಿಧಾನಮು ಪ್ರಧಾನಮು” ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ? ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ… ಕೃಪೆ ನನ್ನ ಮುದ್ದಿನ ಮಗಳು.