ನಿಸರ್ಗದ ವೈಪರೀತ್ಯಕ್ಕೋ ಅಥವಾ ಬೇರಾವುದಾದರೂ ನಿಗೂಢ ಕಾರಣಗಳಿಗೋ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಆಂಧ್ರದ ಜನನಾಯಕ, ಜನಪ್ರಿಯ ಮುಖ್ಯಮಂತ್ರಿ Y.S. ರಾಜಶೇಖರ ರೆಡ್ಡಿಯವರ ಅಕಾಲಿಕ ಮರಣ ಆಂಧ್ರಕ್ಕೆ ಮಾತ್ರವಲ್ಲ ದೇಶಕ್ಕೆ ಒಂದು ದೊಡ್ಡ ಆಘಾತ ಮತ್ತು ನಷ್ಟ. ಯಾರೇ ಸಾವನ್ನಪ್ಪಿದರೂ ತುಂಬಲಾರದ ನಷ್ಟ ಎಂದು ಅನುಕಂಪದ ಮಾತು ಹೇಳುವುದಿದೆ . ಆದರೆ ಈ ಮಾತು ವೈ ಎಸ್ಸ್ ಆರ್ ಅವರಿಗೆ ಅನ್ವಯಿಸುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಬಡತನವನ್ನು, ನಿಸ್ಸಹಾಯಕತೆಯನ್ನು ಇವೆಲ್ಲಕ್ಕೂ ಕಾರಣವಾಗುವ ಅಧಿಕಾರಶಾಹಿಯ ಮೊಂಡುತನವನ್ನು ಕಣ್ಣಾರೆ ಕಂಡು ಪರಿಹಾರ ಕಂಡುಕೊಳ್ಳಲು ಸ್ವತಃ ಪ್ರಯಾಣಿಸಿ ಪ್ರಯತ್ನಿಸುವ ರಾಜಕಾರಣಿಗಳು ವಿರಳ. ಕೇವಲ ಇವರ ವರ್ಚಸ್ಸಿನ್ನಿದಲೇ ಆಂಧ್ರ ರಾಜ್ಯವನ್ನು ಕಾಂಗ್ರೆಸ್ ತೆಕ್ಕೆಗೆ ಬೀಳಿಸಿಕೊಂಡ ಈ ಜನನಾಯಕ ಕೇಂದ್ರದ ಕಾಂಗ್ರೆಸ್ ನಾಯಕರುಗಳ ಮದ್ಧ್ಯೆ ಕಂಗೊಳಿಸುತ್ತಿದ್ದರು. ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಬಿಲ್ ಗೇಟ್ಸ್ ಮುಂತಾದ ಸೊಫ್ಟ್ವೇರ್ ಜನರ ಹಿಂದೆ ಅಲೆದು ಕೇವಲ ಹೈದರಾಬಾದ್ ನಗರವನ್ನು ( ನಮ್ಮ S.M. Krishna ಬೆಂಗಳೂರಿಗೆ ಇದ್ದ ಹಾಗೆ ) ಉದ್ಧಾರ ಮಾಡಿ ರೈತರ ಬಡ ಬಗ್ಗರ ಕಷ್ಟದ ಕಡೆ ಕಿವುಡುತನ ಪ್ರದರ್ಶಿಸಿದರೆ YSR ಹಳ್ಳಿ ಗ್ರಾಮಗಳ ಕಡೆ ದೃಷ್ಟಿ ಹರಿಸಿ ಜನ ಮೆಚ್ಚ್ಚುಗೆ ಸಾಧಿಸಿದರು. ಹೈದರಾಬಾದ್ನ ನೀರಿನ ಕಾರಂಜಿ ಚಿಲುಮೆಗಳನ್ನು, ರೈತರು ಹನಿ ಹನಿ ನೀರಿಗಾಗಿ ಪರಿತಪಿಸುವುದನ್ನು ಹೋಲಿಸಿ ಚುನಾವಣೆ ಗೆದ್ದು ತಾನು ಜನನಾಡಿ ಬಲ್ಲ ರಾಜಕಾರಣಿ ಎಂದು ದೇಶಕ್ಕೆ ತೋರಿಸಿದರು.
ಆದರೆ ವಿಧಿಯ ಆಟವೇ ಹೀಗೆ. ಜನಸೇವೆ ಮಾಡಿ ಲಕ್ಷಗಟ್ಟಲೆ ಜನರ ಮುಖದ ಮೇಲೆ ಮಂದಹಾಸ ತರಿಸುವ ರಾಜಕಾರಣಿಗಳು ಇಂಥ ಅವಘಡದಲ್ಲಿ ಸಾವನ್ನಪ್ಪಿದರೆ ಹೊಡಿ ಬಡಿ ಕಡಿ ಎಂದು ರಕ್ತಪಾತವೇ ನಮ್ಮ ಧರ್ಮ ಎಂದು ಸಮಾಜವನ್ನು ಒಡೆದು ಆಳುವ ರಾಜಕಾರಣಿಗಳು ದೀರ್ಘಾಯುಷಿಗಳಾಗಿ ಭೂಮಿಗೆ ಭಾರವಾಗಿ ಮೆರೆಯುತ್ತಾರೆ.
ಮಣ್ಣಿನ ಮಗ ರಾಜಶೇಖರ ರೆಡ್ಡಿಯವರಿಗೆ ಅಂತಿಮ ವಿದಾಯ ಹೇಳುತ್ತಾ…