ಈ ಬಾಡಿ ಬಿಲ್ಡರ್ ಗೆ ಬರೀ ೯೩ ವರ್ಷ ಕಣ್ರೀ…

ಹೌದು ಲೆಕ್ಕ ತಪ್ಪಿಲ್ಲ, ೩೯ ಅಲ್ಲ, ಪೂರ್ತಿ ೯೩.  ನೈನ್ಟೀ ತ್ರೀ. ೯೩ ರ ಡಾಕ್ಟರ್ ಚಾರ್ಲ್ಸ್ ಯುಗ್ಸ್ಟರ್ ಇಳಿ   ವಯಸ್ಸಾದರೂ ಸ್ಫೂರ್ತಿ ಮತ್ತು ಆರೋಗ್ಯದ ಚಿಲುಮೆ. ‘ಜಿಮ್’ ಒಳಕ್ಕೆ ಹೊಕ್ಕರೆ ೨೧ ವರ್ಷದ ಪೋರರೂ ಸದ್ದಿಲ್ಲದೇ ಗಂಟು ಕಟ್ಟಬೇಕು ಇವರ ವರ್ಕ್ ಔಟ್ ನೋಡಿ. ಸಾಧಾರಣವಾಗಿ ೭೦ ದಾಟುತ್ತಿದ್ದಂತೆ ಜನ ಕೋಲು ಹಿಡಿಯುತ್ತಾರೆ, ಗೋಡೆ ಸವರುತ್ತಾ ನಡೆಯುತ್ತಾರೆ, ವೀಲ್ ಚೇರ್ ಗುಲಾಮ ರಾಗುತ್ತಾರೆ ಇಲ್ಲಾ ಹಾಸಿಗೆ ಹಿಡಿಯುತ್ತಾರೆ. ಅಪರೂಪಕ್ಕೆ ಎಂಭತ್ತು ತೊಂಭತ್ತು ದಾಟಿದವರು ಗಟ್ಟಿ ಮುಟ್ಟಾ ಗಿ ಇರೋದು ಕಾಣಲು ಸಿಗುತ್ತಾರೆ. ತೊಂಭತ್ತರ ಹತ್ತಿರ ಇರುವ ಕೇರಳದ ಮಾಜಿ ಮುಖ್ಯಮಂತ್ರಿ ವೀ. ಎಸ್. ಅಚ್ಯುತಾನಂದನ್, ಈಗ ವಿಪಕ್ಷ ನಾಯಕ. ಎಂ, ಎಫ್ ಹುಸೇನ್ ಸಹ ಇಳಿ ವಯಸ್ಸನ್ನು ಅಣಕಿಸಿದವರ ಸಾಲಿಗೆ ಸೇರಿದವರು. ರಾಜಕಾರಣಿಗಳು ದೀರ್ಘಾಯುಷಿಗಳು, ನನ್ನ ಪ್ರಕಾರ. ಕಣ್ಣಿಗೆ ಕಂಡವರದ್ದನ್ನೆಲ್ಲಾ ನುಂಗೀ, ನುಂಗೀ ಅದೂ ಒಂದು ರೀತಿಯ ವ್ಯಾಯಮವೇನೋ ಎಂದು ನಮಗೆ ತೋರ ಬೇಕು, ಆ ತೆರನಾದ ಆರೋಗ್ಯ. ಹಾಗಾದರೆ ನಾವೆಲ್ಲರೂ ಬಯಸುವ, ತಹ ತಹಿಸುವ ಚಿರ ಯೌವ್ವನ ಅನ್ನೋದು ಇದೆಯೇ? ಇಲ್ಲಾ ಎಂದೇ ವೈದಕೀಯ ವಲಯದ ತೀರ್ಪು. ಆದರೆ ಯಾವಾಗಲೂ ಚಟುವಟಿಕೆಯಿಂದ ಇರುತ್ತಾ, ಸಿಕ್ಕಿದ್ದನ್ನೆಲ್ಲಾ ಉದರಕ್ಕೆ ಇಳಿ ಬಿಡದೆ ಕೇರ್ಫುಲ್ ಆಗಿದ್ದರೆ ಊರ ಹೊರಗಿನ ಚಿರ ಯಾತ್ರೆ ಸ್ವಲ್ಪ ಮುಂದೂಡ ಬಹುದು ಅಷ್ಟೇ. ಈಗಿನ ಕಾಲದ ಈಟಿಂಗ್ ಹ್ಯಾಬಿಟ್ಸ್, sedantary lifestyle ಕಾರಣ ಹದಿಹರೆಯದ ಹುಡುಗರಿಂದ ಹಿಡಿದು, ೨೦, ಮೂವತ್ತು, ನಲವತ್ತರ ಯುವಕರು ದಿಢೀರ್ ಎಂದು ಕಾರ್ಡಿಯಾಕ್ ಖಾಯಿಲೆಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಹೃದ್ರೋಗಕ್ಕೆ ಬಲಿಯಾದ ನಮ್ಮ ಸ್ನೇಹಿತರ, ಪರಿಚಯಸ್ಥರ, ನೆಂಟರಿಷ್ಟರ ನ್ನು ನೋಡಿಯೂ ನಾವು ವ್ಯಾಯಾಮದ ಕಡೆ ಗಮನ ಹರಿಸುತ್ತಿಲ್ಲ.

ನನ್ನ ಕತೆಯಂತೂ ಇನ್ನಷ್ಟು ಶೋಚನೀಯ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಗೆ ಬೇಕಾದ ಎಲ್ಲಾ ‘ಗೇರ್’ ಗಳಿದ್ದಾಗ್ಯೂ ಒಂದು ದಿನ ಹೋದರೆ ಎರಡು ವಾರ ರೆಸ್ಟ್. ನನ್ನನು ಕಟ್ಟಿಕೊಂಡು ನಡೀ ಎಂದು ದುರುಗುಟ್ಟುವ  ನೈಕೀ ಶೂ ನೋಡಿದ ಕೂಡಲೇ ಕಟುಕನ ಕೈಯ ಕತ್ತಿ ನೆನಪಾಗುತ್ತದೆ ನನಗೆ.  ಮಡದಿ ಎಷ್ಟೇ ಗೋಗರೆದರೂ ಊಹೂಂ ಎನ್ನುವ ಮೊಂಡುತನ. ನಡಿಗೆ monotonous ಎಂದು ಹೇಳಿ ಸೈಕಲ್ ಕೊಂಡು ಕೊಂಡೆ. ಪರ್ಸ್ ನ ಭಾರ ಕಡಿಮೆಯಾಯಿತೇ ವಿನಃ ಬೊಜ್ಜಿನ ಪ್ರಮಾಣ ಇಳಿಯಲಿಲ್ಲ. ಸೈಕಲ್ ನ  ಗಾಳಿ ಹೋದಾಗ ಗಾಳಿ ತುಂಬಿಸೋದು ಮಗನ ರೂಮಿನ ಮೂಲೆಗೆ ಅದನ್ನು ವಾಲಿಸಿ ಇಡೋದು, ಈ ಕೆಲಸವನ್ನ ಆವರ್ತಿಸಿ, ಆವರ್ತಿಸಿ ಸಾಕಾಗಿ ಹೋದರೂ ಇದುವರೆಗೆ ಒಂದೈದು ಕಿ. ಮೀ ದೂರ ಕ್ರಮಿಸಿಲ್ಲ. ದಿನಕ್ಕೆ ಸುಮಾರು ನಾಲ್ಕರಿಂದ ಐದು ಕೀ. ಮೀ. ಸೈಕ್ಲಿಂಗ್ ಮಾಡಿದರೆ ಹೃದ್ರೋಗದಿಂದ ಗೊಟಕ್ ಆಗುವ ಚಾನ್ಸ್ ಸುಮಾರು ಶೇಕಡಾ ಐವತ್ತು ಕಡಿಮೆಯಂತೆ. ಜಾಗಿಂಗ್ ಮಾಡಲು ಆಗದಿದ್ದರೂ, ಬಿರುಸಾದ ನಡಿಗೆ ಜಾಗಿಂಗ್ ಗಿಂತ ಒಳ್ಳೆಯದಂತೆ. ಒಟ್ಟಿನಲ್ಲಿ ಸೋಫಾದ ಮೇಲೆ ಕುಕ್ಕರು ಬಡಿಯುವುದಕ್ಕಿಂತ ಸೊಂಟ ನೆಟ್ಟಗೆ ಮಾಡಿ ಕಾರು, ಬೈಕಿನ ಕೀಲಿ ಮನೆಯಲ್ಲಿ ಬಿಟ್ಟು  ಮನೆಯಿಂದ ಹೊರಹೋದರೆ ಅಷ್ಟೊಂದು ಲಾಭ ನಮ್ಮ ಶರೀರಕ್ಕೆ. ಮೇಲೆ ಹೇಳಿದ ೯೩ ವರ್ಷದ ಬ್ರಿಟಿಶ್ ಡಾಕ್ಟರ್ ಥರ ವಲ್ಲದಿದ್ದರೂ ನಮ್ಮ ಕೈಗೋ, ಕಾಲಿಗೋ ಆಗುವ ಅಷ್ಟಿಷ್ಟು ಸಾಹಸದಲ್ಲಿ ನಾವು ತೊಡಗಿಸಿ ಕೊಳ್ಳದಿದ್ದರೆ ನಷ್ಟ ಮಾತ್ರ  ತುಂಬಲಾರದ್ದು.

ನೈಕೀ ಶೂ ಗಳ ದುರುಗುಟ್ಟು ವಿಕೆಯಿಂದ ಮೆಲ್ಲಗೆ ಪಾರಾಗಿ  ಸೈಕಲ್ ಹತ್ತಿರ ಬಂದರೆ ಮತ್ತೊಮ್ಮೆ ಹೋಗಿದೆ ಅದರ ಗಾಳಿ. ಗಾಳಿ ತುಂಬಿಸಿ ಈ ಸಂಜೆಯಿಂದಲೇ ಶುರು ಮಾಡುತ್ತೇನೆ ನನ್ನ ಮನೆಯ ಹೊರಗಿನ ವರ್ಕ್ ಔಟ್ ಯಾತ್ರೆ. ನೀವೂ ರೆಡಿ ತಾನೇ?

ಚಿತ್ರ ಕೃಪೆ. yahoo.com

5,300 ಕಿಲೋ ಮೀಟರು ಬರಿಗಾಲಿನಲ್ಲಿ ನಡೆದ ಈತ


ತನ್ನ ಹುಟ್ಟೂರು ಬೋಸ್ನಿಯಾ ಹೆರ್ಜೆಗೊವೀನಾ ದೇಶದ ‘ಬಾನೋವಿಚಿ’ ಪಟ್ಟಣದಿಂದ ಬರಿಗಾಲಿನಲ್ಲಿ ಹೊರಟ ೪೭ ರ ಹರೆಯದ ‘ಸೆನದ್’ ಸಾಧಿಸಲು ಹೊರಟಿದ್ದಾದರೂ ಏನನ್ನು? ಈತನ ಹಂಬಲ ಗಿನ್ನೆಸ್ ದಾಖಲೆಯೋ ಅಥವಾ ಮತ್ತಾವುದಾದರೂ ಕೀರ್ತಿಯ ಪತಾಕೆಯೋ ಅಲ್ಲ. ೧೪೦೦ ವರ್ಷಗಳ ಹಿಂದೆ ಮರಳುಗಾಡಿನ ನಿರಕ್ಷರಕುಕ್ಷಿ ತನಗೆ ಒದಗಿದ ದೇವವಾಣಿಯ ಅಪ್ಪಣೆ ಯನ್ನು ಸಾಕಾರ ಗೊಳಿಸಲು ಮಾಡಿದ ಮನಸ್ಸು ಅವನನ್ನು ನಡೆಯುವಂತೆ ಪ್ರೇರೇಪಿಸಿತು. ತಿಂಗಳುಗಟ್ಟಲೆ, ಅತ್ಯಂತ ಅಪಾಯಕಾರೀ ಪ್ರದೇಶಗಳನ್ನು ದಾಟಿ ಕೊನೆಗೂ ತನ್ನ ಗುರಿ ಮುಟ್ಟಿದ  ೪೭ ರ ಪ್ರಾಯದ  ಬೋಸ್ನಿಯಾದ ಪ್ರಜೆ ಸೆನೆದ್. ಪ್ರತೀ ವರ್ಷ ಹಜ್ ಬರುವ ಯಾತ್ರಿಕರಲ್ಲಿ ಕೆಲವರ ಅನುಭವ ಜನರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ.

ಉತ್ತರ ಪ್ರದೇಶದ ವೃದ್ಧ ಮಹಿಳೆಯೊಬ್ಬಳು ಪ್ರತೀ ದಿನ ಒಂದು ರೂಪಾಯಿ ರೀತಿ ಹತ್ತಾರು ವರ್ಷಗಳಿಂದ ಕೂಡಿಸಿಟ್ಟು ಹಜ್ ಗೆ ಬಂದಳು. ಹಜ್ ಗಾಗಿ ಪ್ರತೀ ದಿನ ಒಂದು ರೂಪಾಯಿ ಜೋಡಿಸುವ ಈ ಮಹಿಳೆಯನ್ನು ನೋಡಿ ಈಕೆಯ ಗಂಡನೂ ಸೇರಿ ಗೇಲಿ ಮಾಡಿದರೂ ಕಿವಿಗೊಡದೆ ತನ್ನ ಆಸೆಯನ್ನ ಪೂರ್ತಿ ಗೊಳಿಸಿಕೊಂಡಳು. ಗೇಲಿ ಮಾಡಿ ನಕ್ಕವರು ತಮ್ಮ ಗ್ರಾಮದ ಗಡಿ ದಾಟಲಿಲ್ಲ, ಗೇಲಿಗೆ ಕಿವಿಗೊಡದ ಈ ಮಹಿಳೆ ತನ್ನ ಬದುಕಿನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಳು ಪ್ರತೀ ದಿನ ಒಂದು ರೂಪಾಯಿ ಮೂಲಕ.

ನೂರಾರು ವರ್ಷಗಳಿಂದ ‘ಹಜ್’ ಎಂದು ಕರೆಯಲ್ಪಡುವ ಪವಿತ್ರ ಯಾತ್ರೆಗೆ ವಿಶ್ವದ ಮೂಲೆ ಮೂಲೆಗಳಿಂದ ಜನ ಬಂದು ಹೋಗಿದ್ದಾರೆ. ಒಂಟೆಯ ಸವಾರಿ ಮಾಡಿಯೂ, ದೋಣಿಯಲ್ಲೂ, ಕಾಲ್ನಡಿಗೆ ಯಲ್ಲೂ, ವಿಮಾನಗಳಲ್ಲೂ ಆಗಮಿಸಿ ಮಕ್ಕ ನಗರದಲ್ಲಿ ನೆರೆದಿದ್ದಾರೆ. ತಮ್ಮ ಕುಟುಂಬದವರನ್ನು, ಪ್ರೀತಿ ಪಾತ್ರರನ್ನು, ತಮ್ಮ ಹುಟ್ಟೂರನ್ನು ಬಿಟ್ಟು ಎರಡು ತುಂಡು ಬಟ್ಟೆ, ಅಗಾಧ ಭಕ್ತಿ ಇಟ್ಟುಕೊಂಡು ಹಜ್ ಗೆ ಬರುವ ಜನರಿಗೆ ತಾವು ಹಿಂದಿರುಗಿ ಹೋಗುತ್ತೇವೆ ಎನ್ನುವ ಭರವಸೆಯೂ ಇರುವುದಿಲ್ಲ. ತಮಗೆ ಅರ್ಥವಾಗದ, ಸುಡು ಬಿಸಿಲ ನಾಡಿಗೆ ದೇವನನ್ನು ಸಂಪ್ರೀತಿಗೊಳಿಸುವ ಏಕೈಕ ಉದ್ದೇಶ ಇಟ್ಟು ಕೊಂಡು ಈ ಹಜ್ ಯಾತ್ರೆಯನ್ನು ಮುಸ್ಲಿಮರು ಕೈಗೊಳ್ಳುತ್ತಾರೆ. ಮಕ್ಕಾ ನಗರದ ಪವಿತ್ರ ಕಾಬಾ ಮತ್ತು  ಅದರ ಸುತ್ತ ಮುತ್ತಲಿನ ಪವಿತ್ರ ಕ್ಷೇತ್ರಗಳ ಭೇಟಿ ಅವರ ಮೈ ಮನಕ್ಕೆ ಉಲ್ಲಾಸವನ್ನೀಯುತ್ತದೆ. ಬಡವ ಬಲ್ಲಿದ, ರಾಜ ಗುಲಾಮ, ಕರಿಯ ಬಿಳಿಯ ಎನ್ನುವ ಬೇಧ ಭಾವವಿಲ್ಲದೆ ಮನುಕುಲದ ಸಮಾನತೆಯ ಸಂದೇಶ ವನ್ನು ಸಾರುತ್ತಾರೆ. ಈ ಹಜ್ ಗೆ ಬರುವ ಯಾತ್ರಿಕರೆಲ್ಲರೂ ತಾವು ಯಾವ ಹಿನ್ನೆಲೆಯಿಂದ ಲಾದರೂ ಬಂದಿರಲಿ ಎಲ್ಲರ ವಸ್ತ್ರ, ಬಿಳಿ ಉಡುಗೆ, ಒಂದೇ ರೀತಿಯದ್ದಾಗಿರುತ್ತದೆ. ಎಲ್ಲರ ನಾಲಗೆಯ ಮೇಲೂ ಒಂದೇ ಮಂತ್ರ. ಓ, ಪ್ರಭುವೇ, ಇದೋ ನಾನು ಆಗಮಿಸಿದ್ದೇನೆ, ನಿನ್ನ ಸೇವೆಗೆ ಎಂದು. ನಿನ್ನ ಪ್ರಭುತ್ವವೇ ಮೇಲು, ನೀನು ಸರ್ವ ಶ್ರೇಷ್ಠ ಎನ್ನುವ ಅರ್ಹತಾ ಬರುವ “ತಲ್ಬಿಯಾ” ಮಂತ್ರವನ್ನು ಉಚ್ಚರಿಸುತ್ತಾರೆ. ಹಜ್ ಬಗ್ಗೆ ಬರೆದ ಓರ್ವ ಲೇಖಕಿಯ ಪ್ರಕಾರ ಒಂದೇ ತೆರನಾಗಿ ಉಟ್ಟು, ಒಂದೇ ಮಂತ್ರ ಪಠಿಸುತ್ತಾ ಒಂದೇ ಕಾಲಕ್ಕೆ ಕುಬ್ಜರೂ, ಶ್ರೇಷ್ಠರೂ ಆಗುತ್ತಾರಂತೆ. ಲಕ್ಷಗಟ್ಟಲೆ ಸೇರಿದ ಮನುಷ್ಯ ಸಮೂಹ ದೆದುರು ತಾನೆಷ್ಟು ಕುಬ್ಜ ಎಂದೂ, ಹಾಗೆಯೇ ತನ್ನ ಸುತ್ತ ನೆರೆದ ಆ ಜನರಾಶಿ ತನ್ನ ಕುಟುಂಬದ ಭಾಗ  ಎನ್ನುವ ಶ್ರೇಷ್ಟತೆಯ ಭಾವನೆಯ ಮಿಳಿತವೇ ಹಜ್ ಯಾತ್ರೆ ಎಂದು ಬರೆಯುತ್ತಾರೆ ಲೇಖಕಿ.

ನಿನ್ನೆ ಗುರುವಾರದಂದು ಹಜ್ ಯಾತ್ರೆಯ ಪ್ರಕ್ರಿಯೆಗಳಲ್ಲಿ ಶ್ರೇಷ್ಠ ಮತ್ತು ಮಹತ್ವದ ಭಾಗವಾದ “ಅರಫಾತ್”  ಮೈದಾನದಲ್ಲಿ ನಿಂತು ಮಾಡುವ ಪ್ರಾರ್ಥನೆ, ಸೂರ್ಯಸ್ತದ ನಂತರ ‘ಮುಜ್ದಲಿಫಾ’ ಎನ್ನುವ ವಿಶಾಲವಾದ ಬಯಲಿನಲ್ಲಿ ರಾತ್ರಿ ಕಳೆದು ‘ಮೀನಾ’ ಕಣಿವೆಗೆ ಬಂದು ಮನುಷ್ಯರನ್ನು ಚಂಚರನ್ನಾಗಿಸುವ, ದಿಕ್ಕು ತಪ್ಪಿಸುವ ಸೈತಾನನಿಗೆ ಕಲ್ಲು ಬೀಸಿ, ಪ್ರಾಣಿ ಬಲಿ ಕೊಟ್ಟು ಕೇಶ ಮುಂಡನೆ (ಪುರುಷರಿಗೆ ಮಾತ್ರ) ಮೂಲಕ ಹಜ್ ಯಾತ್ರೆಯ ಎಲ್ಲಾ ನಿಯಮಗಳನ್ನ ಪಾಲಿಸಿದಂತಾಗುತ್ತದೆ.

ಇಂದು “ಬಕ್ರೀದ್” ಹಬ್ಬ. ಈ ಶುಭ ಸಂದರ್ಭದಲ್ಲಿ ‘ಹಳೇ ಸೇತುವೆ’ ಯ ಮೇಲೆ ಹಾದು ಹೋಗುವ ಸನ್ಮಿತ್ರ ವೃಂದಕ್ಕೆ ನನ್ನ ಅಂತಾನಂತ ಶುಭಾಶಯಗಳು.

ಚಿತ್ರ ಕೃಪೆ: www.independent.co.uk

 

ಅತ್ಯಾಚಾರದ ಗರ್ಭಧಾರಣೆಗೆ “ದೈವೇಚ್ಚೆ” ಕಾರಣ

ಶೀಲಭಂಗದಿಂದ ಅಥವಾ ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಅಮೆರಿಕೆಯ ರಿಪಬ್ಲಿಕನ್ ಪಕ್ಷದ ನಾಯಕನೊಬ್ಬ. ಈಗ ಈ ಮಾತು ಅಮೆರಿಕೆಯ ರಾಜಕೀಯ ವಲಯದಲ್ಲಿ ಕಂಪನ ತರುತ್ತಿದೆ. ಡೆಮೊಕ್ರಾಟ್ ಪಕ್ಷದವರು ಈ ಮಾತನ್ನು ಹಿಡಿದು ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿದ್ದಾರೆ. ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಬಲಪಂಥೀಯ ಎಂದು ರಿಪಬ್ಲಿಕನ್ ಪಕ್ಷ ಪರಿಗಣಿಸಲ್ಪಟ್ಟಿದೆ ಅಮೆರಿಕೆಯಲ್ಲಿ. ತಲೆಕೆಟ್ಟ ಕೆಲವು ಕ್ರೈಸ್ತ ಪಾದ್ರಿಗಳೂ ಈ ಪಕ್ಷವನ್ನ ಬೆಂಬಲಿಸುತ್ತಾರೆ. ಬಲಪಂಥವೋ, ಎಡ ಪಂಥವೋ, ನಡು ಪಂಥವೋ, ಪಂಥ ಯಾವುದೇ ಇರಲಿ ಮಾನವೀಯ ಮೌಲ್ಯಗಳ ವಿಷಯ ಬಂದಾಗ ಸರಿಯಾದ ವಿವೇಚನೆ, ತೋರದ ಪಂಥ ತಿಪ್ಪೆ ಸೇರುವುದಕ್ಕೆ ಮಾತ್ರ ಲಾಯಕ್ಕು.

Let us get back to rape-induced pregnancy. ಮತ್ತೊಮ್ಮೆ ಗರ್ಭ ಧಾರಣೆಗೆ ಬರೋಣ. ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಈತನ ಹೆಸರು ರಿಚರ್ಡ್ ಮುರ್ಡೋಕ್. ಇಂಡಿಯಾನ ರಾಜ್ಯದಿಂದ ಸೆನೆಟ್ ಗಾಗಿ ಸ್ಪರ್ದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ. ತಾನಾಡಿದ  ಮಾತಿನಿಂದ ಎದ್ದ ವಿವಾದ ಈತನನ್ನು ವಿಚಲಿತನನ್ನಾಗಿಸಿದೆ.  ಈಗ ಈತ ಹೇಳುವುದು, “ನಾನು ಹೇಳಿದ ಅರ್ಥವೇ ಬೇರೆ. ನನ್ನ ಪಾಯಿಂಟ್ ಏನೆಂದರೆ ದೇವರು ಜೀವದ ಸೃಷ್ಟಿಗೆ ಕಾರಣ, ದೇವರಿಗ ಅತ್ಯಾಚಾರ ಇಷ್ಟವಿಲ್ಲ, ಅತ್ಯಾಚಾರ ಒಂದು horrible thing” ಈ ಸಮಜಾಯಿಷಿ ಈತನದು.

ಗರ್ಭಧಾರಣೆ ದೈವೇಚ್ಚೆ ಎಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಅದೆಂದರೆ “ತೇನ ವಿನಾ ತೃಣಮಪಿ ನ ಚಲತಿ”. ಈ ಮಾತಿನ ಅರ್ಥ ಒಂದು ಹುಲುಕಡ್ಡಿ ಅಲುಗಾಡಲೂ ಪರಮಾತ್ಮನ ಅಪ್ಪಣೆ ಬೇಕು. ಪವಿತ್ರ ಕುರ್’ಆನ್ ನ ಆರನೇ ಅಧ್ಯಾಯ, ೫೯ ನೇ ಸೂಕ್ತದಲ್ಲೂ ಇದೇ ಅರ್ಥ ಬರುವ ಮಾತಿದೆ. “Not a leaf fall but with His Knowledge”. ಈಗ ಈ ಮೇಲಿನ ಸೂಕ್ತಗಳನ್ನು ಉದ್ಧರಿಸಿ ಜಗತ್ತಿನಲ್ಲಿ ನಡೆಯುವ ಪ್ರತೀ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಮೋಸ ದಗಾ, ವಂಚನೆ… ಎಲ್ಲವಕ್ಕೂ ತಂದು ನಿಲ್ಲಿಸಲಿ ಪರಮಾತ್ಮನನ್ನು ಸಾಕ್ಷಿಯಾಗಿ.

 

ತಾಲಿಬಾನಿಗಳ ಅಟ್ಟಹಾಸಕ್ಕೆ ಕೊನೆ ಎಂದು?

ಮಲಾಲಾ. ನಾನು, ನೀವು ದಿನವೂ ನೋಡುವ, ಪುಸ್ತಕಗಳ ಹೊರೆಯೊಂದಿಗೆ ಕಣ್ಣುಗಳಲ್ಲಿ  ಕನಸನ್ನು ಹೊತ್ತು ಶಾಲೆಯ ಕಡೆ ದೃಢ ಹೆಜ್ಜೆ ಇಡುವ ಬಾಲಕಿಯರ ಹಾಗೆ ೧೫ ವರ್ಷದ ಓರ್ವ ಹೆಣ್ಣು ಮಗಳು.

ಪಾಕಿಸ್ತಾನದ ರಮಣೀಯ ನಿಸರ್ಗ ಪ್ರಾಂತ್ಯ ‘ಸ್ವಾತ್’ ಕಣಿವೆ ಪ್ರದೇಶವನ್ನು ವಶಪಡಿಸಿ ಕೊಂಡಿದ್ದ ತಾಲಿಬಾನ್ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ ನಾಲ್ಕು ನೂರು ಮೈಲು ಗಳ ವರೆಗೆ ತಲುಪಿದ್ದರು. ಭಾರೀ ಹೋರಾಟದ ನಂತರ ಪಾಕಿ ಸೈನ್ಯ ತಾಲಿಬಾನಿಗಳನ್ನು ಹಿಮ್ಮೆಟ್ಟಿ ಕಣಿವೆಯನ್ನು ವಶ ಪಡಿಸಿಕೊಂಡಿದ್ದರು. ಆದರೂ ತಾಲಿಬಾನಿಗಳ ಪ್ರಭಾವ ಕಡಿಮೆಯಾಗಲಿಲ್ಲ. ಕಾದಾಟ ತಾಲಿಬಾನಿಗಳ ಕಸುಬು, ಅಸ್ತ್ರ ಶಸ್ತ್ರಗಳು ಇವರ ಆಹಾರ, ಮಾನವ ಸಂಸ್ಕಾರಕ್ಕೆ ವಿರುದ್ಧವಾದ ನಡವಳಿಕೆ ಇವರ ಉಸಿರು. ಇವೆಲ್ಲವೂ ಮಿಳಿತವಾದಾಗ ವಿಶ್ವಕ್ಕೆ ಲಭ್ಯ ಅರಾಜಕತೆ, ಕ್ರೌರ್ಯ, ಅಟ್ಟಹಾಸ. ಇವರನ್ನು ಬಲಿ ಹಾಕಲು ಪಾಕಿಸ್ತಾನದಿಂದ ಹಿಡಿದು ಅಂತಾರಾಷ್ಟ್ರೀಯ ಸಮುದಾಯದರೆಗೆ ಯಾರಿಗೂ ಇಚ್ಛೆಯಿಲ್ಲ. ಇದೂ ಒಂದು ರೀತಿಯ ರಾಜಕಾರಣ. ತಾನೇ ಪೋಷಿಸಿದ ಶಿಶು ರಾಕ್ಷಸನಾಗಿ ವರ್ತಿಸಲು ತೊಡಗಿದಾಗ ಅಮೇರಿಕಾ ಎಚ್ಚೆತ್ತು ಅವರನ್ನು ಹದ್ದು ಬಸ್ತಿಗೆ ತರಲು ಯತ್ನಿಸಿತು. ಇದರ ನಡುವೆ ತಾಲಿಬಾನಿಗಳೊಂದಿಗೆ ಚರ್ಚೆ ಕೂಡಾ. ಏಕೆಂದರೆ ಇವರನ್ನು ಸಂಪೂರ್ಣ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕೆಗೆ ಇತಿಹಾಸದ ಪಾಠಗಳು ನೆನಪು ಮಾಡುತ್ತವೆ. ಈ ದ್ವಂದ್ವಗಳ ನಡುವೆ ತಾಲಿಬಾನ್ ತನಗೆ ತೋಚಿದ ರೀತಿಯಲ್ಲಿ ವರ್ತಿಸುತ್ತದೆ. ಇವರಿಗೆ ಹೆಣ್ಣುಮಗಳು ಎಂದರೆ ಮನೆಯ ನಾಲ್ಕು ಗೋಡೆಗಳ ಮಧ್ಯೆ, ಶಿಕ್ಷಣ ಪಡೆಯದೇ ಬದುಕಬೇಕಾದ ಹೆರುವ ಯಂತ್ರಗಳು. ಯಾರಾದರೂ ಧೈರ್ಯ  ಮಾಡಿ ಶಾಲೆಗೆ ಹೋಗುತ್ತೇವೆ ಎಂದರೆ ಮೊದಲು ಬೆದರಿಕೆ, ನಂತರ ಬಂದೂಕು. ಮಲಾಲಾ ಎನ್ನುವ ಪೋರಿಗೆ ಸಿಕ್ಕಿದ್ದು ಇವೆರಡು. ಬೆದರಿಕೆಗೆ ಸೊಪ್ಪು ಹಾಕದೆ ಶಾಲೆಯ ಕಡೆ ನಡೆಯುತ್ತಿದ್ದ ಈಕೆ ತಾಲಿಬಾನಿಗಳಿಗೆ ಕಣ್ಣುರಿ ತರುತ್ತಿದ್ದಳು. ಇಷ್ಟೊಂದು ಚಿಕ್ಕ ಹುಡುಗಿ ತಮ್ಮಂಥ ರಾಕ್ಷಸರನ್ನು ಎದುರಿಸುತ್ತಿದ್ದಾಳಲ್ಲ ಎಂದು. ಬೆದರಿಕೆ ಫಲಿಸದಾದಾಗ ಬಂದೂಕು ಚಲಾಯಿಸಿದರು. ತಲೆಯನ್ನ  ಹೊಕ್ಕು ಹೊರಬಂದ ಗುಂಡು ಸಹ ಮಲಾಲಾ ಳನ್ನು ಕೊಲ್ಲಲು ನಿರಾಕರಿಸಿತು. ಅದ್ಭುತವಾಗಿ ಸಾವಿನಿಂದ ಪಾರಾದ ಮಲಾಲಾ ಹೆಚ್ಚುವರಿ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲು ಅರಬ್ ಸಂಯುಕ್ತ ಸಂಸ್ಥಾನಗಳ ಆಳುವ ಕುಟುಂಬದ ಕಡೆಯಿಂದ ‘ಏರ್ ಅಂಬುಲೆನ್ಸ್’ ನ ನೆರವು ಸಿಕ್ಕಿತು. ಈಕೆಯ ಚಿಕತ್ಸೆ ಫಲಕಾರಿಯಾಗಲು ಇಡೀ ವಿಶ್ವ ದೇವರನ್ನು ಬೇಡುತ್ತಿದೆ.

ಮಲಾಲಳ ಮೇಲಿನ ಹಲ್ಲೆಯನ್ನು ಖಂಡಿಸುತ್ತಾ ಪಾಕಿಸ್ತಾನದ ರಾಜಕಾರಣಿ ಹೇಳಿದ್ದು, ತಾಲಿಬಾನ್ ಕರಾಳ ಶಕ್ತಿಗಳ ಗುಂಪಾಗಿದ್ದು, ಧರ್ಮ ಸಂಸ್ಕಾರ ವಿಹೀನರು ಎಂದು ಕಟುವಾಗಿ ಟೀಕಿಸಿದರು. ಮಲಾಲಾಳ ಮೇಲಿನ ಹಲ್ಲೆಕೋರರನ್ನು ಹಿಡಿದು ಕೊಟ್ಟವರಿಗೆ ಒಂದು ಕೋಟಿ ರೂಪಾಯಿಯ ಬಹುಮನವನ್ನು ಪಾಕ್ ಘೋಷಿಸಿದೆ.

ಮಹಿಳೆಯರಿಗೆ ಶಿಕ್ಷಣ ಕೂಡದು ಎನ್ನುವ ಐಡಿಯಾ ತಾಲಿಬಾನ್ ಗೆ ಕೊಟ್ಟವರಾರು ಎನ್ನುವುದು ತಿಳಿಯುತ್ತಿಲ್ಲ. ವೇಷದ ಸಹಾಯದಿಂದ ಮುಸ್ಲಿಮರ ಥರ ಕಾಣುತ್ತಾ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸುವ ದುಷ್ಟ ಶಕ್ತಿಗಳ ಸಂಗಮ ‘ತಾಲಿಬಾನ್’ ವರ್ತನೆಗೂ ಇಸ್ಲಾಂ ನ ಜನ್ಮ ಸ್ಥಳ ಸೌದಿ ಅರೇಬಿಯಾದ ನೀತಿಗೂ ಇರುವ ವ್ಯತ್ಯಾಸ ನೋಡಿ. ಇಸ್ಲಾಂ ನ  ತವರೂರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ  ರಾಜಕುಮಾರಿ ‘ನೂರಾ ಬಿಂತ್ ಅಬ್ದುಲ್ ರಹಮಾನ್’ ಮಹಿಳಾ ವಿಶ್ವವಿದ್ಯಾಲಯ ವಿಶ್ವದಲ್ಲೇ ಅತಿ ದೊಡ್ಡದು. 30 ಲಕ್ಷ ಚದರ ಮೀಟರುಗಳ ವಿಸ್ತೀರ್ಣದ ಈ ವಿಶ್ವ ವಿದ್ಯಾಲಯದಲ್ಲಿ ೨೬,೦೦೦ ವಿದ್ಯಾರ್ಥಿನಿಯರು ಕಲಿಯಬಹುದು. ವಿಶ್ವದ ಪ್ರತಿಭಾವಂತ ಪ್ರೊಫೆಸರ್ ಗಳನ್ನ ಆಕರ್ಷಿಸಲು ಸೌದಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತಿದೆ. ಈಗಿನ ರಾಜ ಅಬ್ದುಲ್ಲಾ ರ ಕನಸಿನ ಪ್ರಾಜೆಕ್ಟ್ ಈ ವಿಶ್ವವಿದ್ಯಾಲಯ.

ಹಲವು ಮುಸ್ಲಿಂ ದೇಶಗಳ ಪ್ರಧಾನಿಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮುಸ್ಲಿಂ ಮಹಿಳೆಯರಿಗೆ ತಮ್ಮ ದೇಶಗಳಲ್ಲಿ ಧಾರ್ಮಿಕ ಪಂಡಿತರಿಂದ ಯಾವುದೇ ತೊಡಕಾಗಲೀ, ಫತ್ವಾ ಗಳಾಗಲೀ ಎದುರಾಗಲಿಲ್ಲ. ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಈಜಿಪ್ಟ್ ದೇಶದ ಆಡಳಿತಗಾರ್ತಿಯಾಗಿ  ರಾಣಿ ‘ಶಜರ್ ಅಲ್-ದುರ್’ ಯಶಸ್ವಿಯಾಗಿದ್ದಳು. ವಿಧವೆಯಾಗಿದ್ದ ಈಕೆ ಕ್ರೈಸ್ತರ ಏಳನೆ ಧರ್ಮಯುದ್ಧ (ಕ್ರುಸೇಡ್) ದ ಮೇಲೆ ವಿಜಯ ಸಾಧಿಸಿದ್ದಳು.

ಪ್ರವಾದಿ ಮುಹಮ್ಮದರ ಪತ್ನಿ ‘ಆಯಿಷಾ’ ರಿಂದ ಪ್ರವಾದಿ ಅನುಚರರು ಅತೀ ಹೆಚ್ಚಿನ ಪ್ರವಾದಿ ವಚನಗಳನ್ನು ಸಂಗ್ರಹಿಸಿದ್ದರು. ಧರ್ಮದ ಅಥವಾ ರಾಜಕಾರಣದ ಯಾವುದೇ ವಿಷಯದಲ್ಲೂ ಅನುಮಾನ ಗಳು ತಲೆದೋರಿದಾಗ ಪ್ರವಾದೀ ಅನುವರ್ತಿಗಳು ಆಯಿಷಾ ರ ಗುಡಿಸಿಲಿನ ಕಡೆ ಧಾವಿಸುತ್ತಿದ್ದರು. ತನ್ನ ಮನೆಯ ಅಂಗಳದಲ್ಲಿ ಧರ್ಮ ಬೋಧನೆ ನಡೆಸುತ್ತಿದ್ದ ಆಯಿಷಾ ರಿಗೆ ವಿಶ್ವದ ಮೊಟ್ಟ ಮೊದಲ ‘ಮದ್ರಸಾ’ ದ ಸ್ಥಾಪಕರು ಎನ್ನುವ ಖ್ಯಾತಿ.

ಪ್ರವಾದಿಗಳ ನಿಧನಾ ನಂತರ ‘ಖಲೀಫಾ ಉಸ್ಮಾನ್’ ಪವಿತ್ರ ಕುರ್’ಆನ್ ಗ್ರಂಥವನ್ನು ಬರಹದ ರೂಪದಲ್ಲಿ ತರಲು ತೀರ್ಮಾನಿಸಿ ಪ್ರಥಮ ಆವೃತ್ತಿಯನ್ನು ದಿವಂಗತ ಖಲೀಫಾ ಉಮರ್ ರವರ ಪುತ್ರಿಗೆ ಗ್ರಂಥವನ್ನು ಸುರಕ್ಷಿತವಾಗಿ ಇಡುವ ಜವಾಬ್ದಾರೀ ನೀಡಿದ್ದರು. ಮಹಿಳೆಯರಿಗೆ ಈ ಜವಾಬ್ದಾರೀ ನೀಡಬಾರದು ಎನ್ನುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಮಹಿಳೆಯ ‘ವಧುದಕ್ಷಿಣೆ’ ವಿಷಯದಲ್ಲಿ ಖಲೀಫಾ ಉಮರ್ ತಪ್ಪಾದ ನಿರ್ಣಯ ನೀಡುವುದನ್ನು ಗಮನಿಸಿದ ಮಹಿಳೆಯೊಬ್ಬಾಕೆ ಕುರ್’ಆನ್ ಗ್ರಂಥದ ಆಧಾರದಲ್ಲಿ ಆ ತಪ್ಪನ್ನು ತಿದ್ದಿದಾಗ ಒಪ್ಪಿಕೊಂಡ ಖಲೀಫಾ ಉಮರ್ ಹೇಳಿದ್ದು, ಈ ಮಹಿಳೆ ಖಲೀಫಾನ ಮೇಲೆ ಗೆಲುವು ಸಾಧಿಸಿದಳು ಎಂದು.

ಈ ಮೇಲಿನ ಉದಾಹರಣೆಗಳೊಂದಿಗೆ ಇಸ್ಲಾಂ ಮಹಿಳೆಗೆ ಕೊಡಮಾಡಿದ ಹಕ್ಕುಗಳನ್ನು ನೋಡಿದಾಗ ತಾಲಿಬಾನ್ ಯಾವುದೇ ರೀತಿಯಲ್ಲಿ ಇಸ್ಲಾಂ ನ ಆದರ್ಶಗಳಿಗೆ ಪ್ರತಿ ಸ್ಪಂದಿಸದೆ ಕೇವಲ ಸ್ತ್ರೀ ಧ್ವೇಷಿ ಮತ್ತು ನರಸಂಹಾರಕ ಸ್ಯಾಡಿಸ್ಟ್ ಗಳ ಒಂದು ರಾಕ್ಷಸೀ ಸಂಘಟನೆ ಎಂದು ಹೇಳಬಹುದು. ಆಫ್ಘಾನಿಸ್ಥಾನ ದ ರಷ್ಯನ್ ಸೈನ್ಯವನ್ನು, ಕಮ್ಯುನಿಸ್ಟ್ ಪ್ರಭಾವವನ್ನು ಮಟ್ಟ ಹಾಕಲು, ತಾಲಿಬಾನ್ ನ ಸಹಾಯ ಪಡೆದ ಅಮೇರಿಕಾ ತಾಲಿಬಾನ್ ನ ಶಕ್ತಿಗೆ ಬೆನ್ನೆಲುಬಾಗಿ ನಿಂತಿದ್ದೆ ಒಂದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಕಮ್ಯುನಿಷ್ಟ್ ನ ನಿರ್ನಾಮದೊಂದಿಗೆ ‘ಇಸ್ಲಾಮಿಸ್ಟ್’ ಎನ್ನುವ ಭಸ್ಮಾಸುರ ನ ಸೃಷ್ಟಿಗೂ ಅಮೇರಿಕಾ ಕಾರಣಕರ್ತವಾಯಿತು. ತಾಲಿಬಾನ್ ಶಕ್ತಿಗಳ ನಿಗ್ರಹ ಮತ್ತು ಸಂಪೂರ್ಣ ನಿರ್ಮೂಲನೆ ನಾಗರೀಕ ಸಮಾಜದ ಆದ್ಯ ಕರ್ತವ್ಯ ವಾಗಬೇಕು. ಮಲಾಲಾ ಳ ಮೇಲೆ ನಡೆದ ವಿವೇಚನಾ ರಹಿತ ಕ್ರೂರ ಹಲ್ಲೆ ವಿಶ್ವದಾದ್ಯಂತ ನಾಗರೀಕ ಸಮಾಜವನ್ನು ಭೀತ ಗೊಳಿಸಿದರೂ ಸ್ವಾತ್ ಕಣಿವೆಯ ಹೆಣ್ಣು ಮಕ್ಕಳು ಮಾತ್ರ ತಾವು ತಾಲಿಬಾನ್ ಸೈತಾನಕ್ಕೆ ಬೆದರುವ ಹೆಣ್ಣುಮಕ್ಕಳಲ್ಲ ಎಂದು ಈ ಹೇಳಿಕೆಯೊಂದಿಗೆ ಸಾರಿದರು – “ಸ್ವಾತ್” ಕಣಿವೆಯ ಪ್ರತಿಯೊಬ್ಬ ಹೆಣ್ಣು ಮಗಳೂ ಓರ್ವ ಮಲಾಲಾ, ನಾವು ವಿದ್ಯೆ ಪಡೆದೇ ಸಿದ್ಧ, ಅವರು ನಮ್ಮನ್ನು ಸೋಲಿಸಲಾರರು” – ದಿಟ್ಟ ಮಾತುಗಳು ಮಲಾಲಾ ಳ ಗೆಳತಿಯರಿಂದ.

ಮಲಾಲಾ ಹೆಸರಿನ ಆರ್ಥ ಶೌರ್ಯ, ಧೈರ್ಯ, ‘ಪುಷ್ತು’ ಭಾಷೆಯಲ್ಲಿ. ರಾಕ್ಷಸರಿಗೆ ಹೆದರದೆ ಹೆಸರಿಗೆ ತಕ್ಕಂತೆ ನಡೆದುಕೊಂಡ ಮಾಲಾಲಾಳಿಗೆ ಅವಳ ದಿಟ್ಟ ಹೋರಾಟಕ್ಕೆ ಶುಭ ಹಾರೈಸೋಣ.

 

 

ಈಗ ಅತ್ಯಾಚಾರ ‘ಕಾಮನ್ ಫೆನಾಮೆನಾ’ ನಮ್ಮ ದೇಶದಲ್ಲಿ

ಈಗ ಅತ್ಯಾಚಾರ ಕಾಮನ್ ಫೆನಾಮೆನಾ ನಮ್ಮ ದೇಶದಲ್ಲಿ. ಟೈಮ್ಸ್ ಆಫ್ ಇಂಡಿಯಾ ದ ಆನ್ ಲೈನ್ ಆವೃತ್ತಿಯ ಮಧ್ಯ ಭಾಗದ ಸುದ್ದಿ ಯಲ್ಲಿ ದಿನವೂ ರಾರಾಜಿಸುವ ಚಟುವಟಿಕೆ ಈ ರೇಪು ಎನ್ನುವ ಅಸಹ್ಯ ಹುಟ್ಟಿಸುವ perversion. ಇದಕ್ಕೆ ಮುಖ್ಯ ಕಾರಣ ಎಂದರೆ ರೇಪಿಗೆ ತಕ್ಕ ಶಿಕ್ಷೆಯ ಕೊರತೆ ಅದರೊಂದಿಗೇ ಈ ನೀಚ ಕೃತ್ಯಕ್ಕೆ ಮಹಿಳೆಯನ್ನು ಹೊಣೆಯಾಗಿಸುವ  ನಾಚಿಕೆಗೆಟ್ಟ ವರ್ತನೆ. ಮಹಿಳೆ ಸರಿಯಾಗಿ ಬಟ್ಟೆ ಉಡಲು ಅಸಮರ್ಥಳಾದರೆ ರೇಪ್ ಬಂದು ಎರಗುತ್ತದೆ ಎನ್ನುವುದು ಬಹಳಷ್ಟು ಜನರ ವಕ್ರ ನ್ಯಾಯ. ವಯಸ್ಕ, ಹದಿಹರೆಯದ ಹೆಣ್ಣಿನ ಉಡುಗೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವುದಾದರೆ ಒಂದೂವರೆ, ಎರಡು, ಮೂರು ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಏನು ಸಮಜಾಯಿಷಿ?

ಇಂದು ೧೧ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಈ ಅಮಾನುಷ ಕೃತ್ಯಗಳು ನಾಗರೀಕ ಸಮಾಜದ ಕಣ್ಣು ತೆರೆಸಲು ವಿಫಲ ವಾಗುತ್ತಿರುವುದು ದಿಗಿಲನ್ನು ಹುಟ್ಟಿಸುತ್ತಿದೆ. ನನ್ನ ಪ್ರಕಾರ ಅತ್ಯಾಚಾರ ಭ್ರಷ್ಟಾಚಾರಕ್ಕಿಂತ ಕೀಳು, ಅಸಹ್ಯ. ಅತ್ಯಾಚಾರದ ವಿರುದ್ಧ ಅಣ್ಣಾ ಹಜಾರೆ, ಕೇಜರಿವಾಲ (ನಾನು ಈತನ ಫ್ಯಾನ್ ಅಲ್ಲ) ನಂಥವರು ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಬರೀ ಜನ ಸಾಮಾನ್ಯನ ಅಭಿಪ್ರಾಯ ಮಾತ್ರವಲ್ಲ ಮಂತ್ರಿ ಮಹೋದಯರೂ, ಪೊಲೀಸ್ ಅಧಿಕಾರಿಗಳೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.  ಈಗ ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಕೊಡುವ ಸಲಹೆ ಏನೆಂದರೆ ಹೆಣ್ಣು ಗಂಡುಗಳ ವಿವಾಹಾರ್ಹ ವಯಸ್ಸನ್ನು ಇಳಿಸಬೇಕು ಎನ್ನುವುದು. ಒಂದು ಕಡೆ ಸರಿಯಾಗಿ ಬಟ್ಟೆ ತೊಡು ಇಲ್ಲಾ ಮಾನ ಕಳೆದು ಕೊಳ್ಳಲು ತಯಾರಾಗು ಎನ್ನುವ ಎಚ್ಚರಿಕೆಗೆ ಮದುವೆ ವಯಸ್ಸನು ಇಳಿತ ಮಾಡಿದರೆ ರೇಪ್ ದರದಲ್ಲಿ ಕಡಿತ ಬರಬಹುದು ಎನ್ನುವ ವಾದಕ್ಕೆ ಜೋಡಿ ಎನ್ನುವಂತೆ ಬರುತ್ತಿದೆ ಮಂತ್ರಿಯ ಸಲಹೆ. ಈ ಮಾತಿನೊಂದಿಗೆ ಈ ಮು. ಮಂತ್ರಿ ಮುಘಲರನ್ನೂ ಎಳೆದು ತರುತ್ತಾನೆ. ಕುಣಿಯಲು ಬಾರದವಳು ನೆಲ ಡೊಂಕು ಎಂದಳಂತೆ, ಆಳನು ಬಾರದವನು ಮುಘಲರನ್ನು, ಪೋರ್ಚುಗೀಸರನ್ನು ಹೊನೆಯಾಗಿಸುತ್ತಾನೆ ತನ್ನ ಹೊಣೆಗೇಡಿತನಕ್ಕೆ.

ಒಟ್ಟಿನಲ್ಲಿ ಸಮಾಜದ ನಿಲುವು ಇಷ್ಟೇ. ಏನೇ ಆಗಲಿ, ಏನೇ ಬರಲಿ, ನಾವು ಮಾತ್ರ ನಮ್ಮ ಗಂಡು ಮಕ್ಕಳಿಗೆ ನೈತಿಕತೆಯ ಪಾಠ ಹೇಳೋಲ್ಲ, ಪರ ಹೆಣ್ಣನ್ನು ಗೌರವದಿಂದ ಕಾಣಲು ಉತ್ತೇ ಜಿಸೋಲ್ಲ ಎನ್ನುವ ಹೊಟ್ಟೆ ತೊಳೆಸುವಂಥ ಮೊಂಡುತನ. ನಮ್ಮ ಸಂಸ್ಕಾರ ಅಂಥದ್ದು, ಇಂಥದ್ದು ಎಂದು vainglorious ಆಗಿ ಕಣ್ಣು ಮುಚ್ಚಿ, ಎದೆಯುಬ್ಬಿಸಿ ನಡೆದರೆ ಸಾಲದು. ಅತ್ಯಾಚಾರದಂಥ ಅವಮಾನಕಾರೀ ಸಾಮಾಜಿಕ ಪಿಡುಗಿಗೆ ಇತಿಶ್ರೀ ಹಾಡಲೇ ಬೇಕು.              

ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.

ನಮ್ಮ ದೇಶ ಮತ್ತು ರಾಜ್ಯದಲ್ಲಿ ಏಲ್ಲಾ ತೆರನಾದ ವಿಘ್ನಗಳೂ ನಾಶವಾಗಿ ಶಾಂತಿ, ಪರಸ್ಪರ ಸಹಬಾಳ್ವೆ ನೆಲೆಸಲೆಂದು ಹಾರೈಸುತ್ತಾ,

picture courrtesy: http://www.hindustantimess.com

 

ಈ ಚಿತ್ರ ಮರೆತಿರಾ?

ಎಲೆಕ್ಟ್ರಿಕ್ ಸ್ಟೋವ್ವು, ಗ್ಯಾಸ್ ಸ್ಟವ್ವು, ಹಾಟ್ ಪ್ಲೇಟು, ಸೋಲಾರು, ಓವನ್ನು, ಕೂಕಿಂಗ್ ರೇಂಜ್,    ಇವೆಲ್ಲಾ ಕಾಣುತ್ತಾ ಬೆಳೆದ ಮಕ್ಕಳಿಗೆ ಈ ಚಿತ್ರವನ್ನ ತೋರಿಸಿದಾಗ ಏನನ್ನಿಸ ಬಹುದು? ಈಗ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಎರ್ರಾ ಬಿರ್ರಿ ಬಳಸಿದ ನಂತರ ಬಹುಶಃ ನಾವು ಬಂದು ಮುಟ್ಟುವುದು ಇಲ್ಲಿಗೋ ಏನೋ? ನಾಸ್ಟಾಲ್ಜಿಕ್ ಚಿತ್ರ, ನನಗಂತೂ ಇದನ್ನು ಕಂಡು, ಇಂಥ ಅಡುಗೆ ಮನೆಯಲ್ಲಿ ಉಂಡು ಪರಿಚಯವಿದೆ. ನಿಮಗೂ ಇದೆಯಾ………..?    

ಒಂದ್ನಿಮ್ಷ, ಒಂದ್ನಿಮ್ಷ. ಹೋಗ್ಬೇಡಿ. ಈ ಚಿತ್ರದಲ್ಲಿರುವ ಹೆಣ್ಣು ಮಗಳ ಮೊಗದ ಮೇಲಿನ ಮೊಗ್ಗಿನ ಮಂದಹಾಸ ಗಮನಿಸಿದಿರಾ? ಆ ಪ್ರಸನ್ನತೆ, ಸಂತೃಪ್ತ ಭಾವ contentment, ಮಣ್ಣಿನ ಒಲೆ, ಒಲೆಯ ಹತ್ತಿರ ಒಂದು ಡಬ್ಬ, ಬಹುಶಃ ಕೈ ಬೆರಳಿಗೆ ಸಿಗುವಷ್ಟು ಮಾತ್ರ ಇರಬಹುದು ಸಾಸುವೆ ಅಥವಾ ಕಾಫಿ ಪುಡಿ, ಇಷ್ಟೊಂದು ಬೇಸಿಕ್ಸ್ ಗಳ ನಡುವೆಯೂ ಆಕೆಯ ಮುಖದ ಮೇಲಿನ ತೃಪ್ತ ಭಾವ… ಹೊಳೆಯುವ ಡಿಸೈನರ್ ಅಡುಗೆ ಮನೆಯ ತುಂಬಾ ಅತ್ಯಾಧುನಿಕ ಫ್ರಿಜ್ಜು, ಮೈಕ್ರೋ ವೇವ್, ಸ್ಟೋವ್, ವಾಷಿಂಗ್ ಮೆಶೀನ್, ಮಿಕ್ಸರ್, ಕೌಂಟರ್ ಟಾಪ್ ಮೇಲೆ ಫೇಸ್ ಬುಕ್ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಲು ಕಾತುರದಿಂದ ಕಾಯುವ ಲ್ಯಾಪ್ ಟಾಪ್, ಇವುಗಳ ಮಧ್ಯೆ, ಇಷ್ಟೆಲ್ಲಾ ಸೌಲಭ್ಯಗಳ ನಡುವೆ ವೇಳೆ ಕಳೆಯುವ ಆಧುನಿಕ ಮನೆಯೊಡತಿಯ ಮುಖದ ಮೇಲೆ  ಕಾಣಲು ಸಿಕ್ಕೀತೆ ಮಂದಹಾಸ? ಕಾಣಲು ಸಿಗುವುದೇ ‘ಕಂಟೆಂಟ್ ಮೆಂಟ್’?

pic courtesy: www.cnn.com

ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ…

ಮೂಢ ನಂಬಿಕೆಗಳು ಪ್ರತೀ ಸಮಾಜದಲ್ಲೂ ಬೇರೂರಿವೆ. ಅದು ಪಾಶ್ಚಾತ್ಯವಿರಬಹುದು, ಅಥವಾ ದೇಸೀ ಇರಬಹದು. ಈ ನಂಬಿಕೆಗಳು ತಮ್ಮದೇ ಆದ ವೈವಿಧ್ಯ, ವೈಶಿಷ್ಟ್ಯವನ್ನ ಹೊಂದಿರುತ್ತವೆ. ಕಳೆದ ಜೂನ್ ತಿಂಗಳಿನಲ್ಲಿ ಭಾರತದಲ್ಲಿದ್ದಾಗ ನಮ್ಮ ಹಿತ್ತಲಿನ ಮರವೊಂದು ಇದೇ ನಂಬಿಕೆಯೊಂದಿಗೆ ತನ್ನ ಪಾಡಿಗೆ ತಾನು ಬೆಳೆಯುತ್ತಿತ್ತು. ನಮ್ಮ ಮನೆಯ ಹಿತ್ತಲಿನಲ್ಲಿ ಸುಮಾರು ೫,೦೦೦ ಚದರ ಅಡಿ ಖಾಲಿ ಸ್ಥಳವಿದೆ. ಅದರಲ್ಲಿ ಅಪ್ಪ ತೆಂಗು, ಮಾವು, ಗೋಡಂಬಿ, ಚಿಕ್ಕು, ಪೇರಳೆ, ಕಿತ್ತಳೆ, ಬಾಳೆ, ನೆಲ್ಲಿಕಾಯಿ, ಹಲಸು, ತೇಗ, ಮುಂತಾದ ಮರಗಳನ್ನ ನೆಟ್ಟಿದ್ದಾರೆ. ಒಂದು ಪುಟ್ಟ ಕಾಡು. ಈ ಸ್ಥಳ ನನ್ನ ನೆಚ್ಚಿನ ಅಡಗು ತಾಣ. ಉಯ್ಯಾಲೆಯಲ್ಲಿ ಕೂತು ಚಹಾ ಸೇವಿಸುತ್ತಾ, ಅಪ್ಪ ಅಮ್ಮ ಮರಗಳ ಪೋಷಣೆ ಮಾಡುವುದನ್ನು ನೋಡುತ್ತಾ   ಪತ್ರಿಕೆ ಓದುವುದು ವಾಡಿಕೆ. ಒಂದು ದಿನ ಹೀಗೇ ಕಣ್ಣಾಡಿಸುತ್ತಾ ಇದ್ದಾಗ ನಾನು ಗಮನಿಸದೆ ಇದ್ದ ಮರ ಕಣ್ಣಿಗೆ ಬಿತ್ತು. ಅಲ್ಲೇ ಇದ್ದ ಅಮ್ಮನನ್ನು ಇದೆಂಥ ಮರ ಎಂದು ಕೇಳಿದಾಗ ಅಮ್ಮ ಅದನ್ನು ‘ದೀಗುಜ್ಜೆ’ ಎಂದು ಕರೆಯುತ್ತಾರೆ ಎಂದರು. “ದ್ವೀಪದ ಹಲಸು” ಎಂದೂ ಹೇಳುತ್ತಾರಂತೆ. ಪಕ್ಕದಲ್ಲೇ ಇದ್ದ ಲ್ಯಾಪ್ ಟಾಪ್ ತೆರೆದು ಆಂಗ್ಲ ಭಾಷೆಯಲ್ಲಿ ಇದಕ್ಕೆ ಏನನ್ನುತ್ತಾರೆ ಎಂದು  ಗೂಗ್ಲಿಸಿದಾಗ ಸಿಕ್ಕಿತು ಉತ್ತರ, ‘bread fruit’. ಈ ‘ಬ್ರೆಡ್ ಫ್ರೂಟ್’ ಪದ ಸಹ ನನ್ನ ಕುತೂಹಲ ಕೆರಳಿಸಿತು, ಅದರ ಬಗ್ಗೆ ನಂತರ ರಿಸರ್ಚ್ ಮಾಡೋಣ ಎಂದು ಯಾವಾಗ ಈ ದೀಗುಜ್ಜೆ ಯನ್ನು ನೆಟ್ಟಿದ್ದು ಎಂದು ಅಮ್ಮನನ್ನು ಕೇಳಿದಾಗ ನಾಲ್ಕೈದು ವರ್ಷ ಆಯಿತು, ಕಳೆದ ಸಲ ಬಂದಾಗಲೂ ನೀನು ಕೇಳಿದ್ದೆ ಎಂದು ನನ್ನ ಮರೆವಿಗೆ ನಯವಾಗಿ ಗದರಿದರು. ಮುಂದುವರೆದು, ಈ ಮರ ನೆಟ್ಟವರು ಬೇಗನೆ ಸಾಯುತ್ತಾರಂತೆ, ಹಾಗಂತ ಜನ ಹೇಳುತ್ತಾರೆ ಎಂದು ಅಮ್ಮ ಹೇಳಿದಾಗ ಹೌಹಾರಿದ ನಾನು ಅಪ್ಪನೋ, ಅಮ್ಮನೋ ನೆಟ್ಟಿರಲಿಕ್ಕಿಲ್ಲವಲ್ಲ ಎಂದು   ಕೂಡಲೇ ಕೇಳಿದೆ ಸರಿ, ಈ ಮರವನ್ನ ನೆಟ್ಟವರಾರು ಎನ್ನುವ  ನನ್ನ ಪ್ರಶ್ನೆಗೆ ನಮ್ಮಲ್ಲಿಗೆ ಕೆಲಸಕ್ಕೆ ಬರುವ ರಮೇಶ್ ನೆಟ್ಟಿದ್ದು ಎಂದು ಉತ್ತರ ಬಂತು. ಮರ ನೆಟ್ಟು ನಾಲ್ಕೈದು ವರ್ಷ ಆಯಿತು, ಮರ ಚೆನ್ನಾಗಿ ಬೆಳೆಯುತ್ತಿದೆ, ನಾಲ್ಕಾರು ದೀಗುಜ್ಜೆ ಕಾಯಿಗಳನ್ನೂ ಬಿಟ್ಟಿದೆ. ರಮೇಶನೂ ಯಾವುದೇ ತೊಂದರೆಯಿಲ್ಲದೆ ತನ್ನ ಪಾಡಿಗೆ ತಾನು ದುಡಿದು, ಕುಡಿದು ಬದುಕುತ್ತಿದ್ದಾನೆ, ಸಾಕಷ್ಟು ಗಟ್ಟಿಮುಟ್ಟಾಗಿಯೂ ಇದ್ದಾನೆ, ಚೇಷ್ಟೆಗೋ, ಬೇರಾವುದೋ ಕಾರಣಕ್ಕೋ ಹೇಳಿರಬಹುದಾದ ಮಾತಿಗೆ ವಿನಾಕಾರಣ ಗಾಭರಿ ಪಟ್ಟೆನಲ್ಲಾ ಎಂದು ಮನದಲ್ಲೇ ಬೈದುಕೊಂಡೆ.

ಕಳೆದ ವರ್ಷ ಅಮೆರಿಕೆಗೆ ಹೋಗುವ ಅವಕಾಶ ಸಿಕ್ಕಿತು. ಪ್ರತೀ ವರ್ಷ ಮಾರಾಟ ಇಲಾಖೆಯಿಂದ ಸಮ್ಮೇಳನಕ್ಕೆ ಎಂದು ಕಂಪೆನಿಯಿಂದ  ಇಬ್ಬರು ಹೋಗುತ್ತಿದ್ದರು. ಈ ಸಲ ಲೆಕ್ಕಪತ್ರ ಇಲಾಖೆಯಿಂದ ಒಬ್ಬರನ್ನು ಕಳಿಸೋಣ ಎಂದು ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದರು. ಅಮೆರಿಕೆಗೆ ಹೋಗುವ ಮುನ್ನ ವಿಸಾ ಸಿಗುವ, ಸಾಹಸಿಕ ಆದರೂ ಸ್ವಾರಸ್ಯಕರ ಪ್ರಕ್ರಿಯೆ ಬಗ್ಗೆ, ಮತ್ತು ಪ್ರವಾಸದ ಬಗ್ಗೆ ಸಂಪದಕ್ಕೆ ಬರೆಯಲು ಆಗಲೇ ಇಲ್ಲ. ಸಮ್ಮೇಳನ ಇದ್ದಿದ್ದು ಅಮೆರಿಕೆಯ ‘ನಾರ್ತ್ ವೆಸ್ಟ್’ ಪ್ರಾಂತ್ಯದ ” ಓರಿಗನ್ ” ರಾಜ್ಯದಲ್ಲಿ. “ರೆಡ್ಮಂಡ್” ಒಂದು ಚಿಕ್ಕ ಪಟ್ಟಣ, ಅಲ್ಲಿಂದ ಅರ್ಧ ಘಂಟೆ ಪ್ರಯಾಣ ಮಾಡಿದರೆ “ಸನ್ ರಿವರ್ ರೆಸಾರ್ಟ್”. ೭,೦೦೦ ಎಕರೆ (ಹೌದು, ಏಳು ಸಾವಿರ ಎಕರೆ) ವಿಸ್ತೀರ್ಣದ ಈ ರೆಸಾರ್ಟ್ ನಲ್ಲಿ ನದಿಯೂ ಹರಿಯುತ್ತದೆ. ಒಂದು ದಿನ, ಸಮ್ಮೇಳನ ಮುಗಿದ ನಂತರ ಹೀಗೇ ಅಡ್ಡಾಡುತ್ತಾ ಇದ್ದಾಗ ಅಮೇರಿಕನ್ ಮಹಿಳೆಯೊಬ್ಬಳು ತನ್ನ ಕೈ ಮೇಲೆ ಒಂದ ದೊಡ್ಡ ಗಾತ್ರದ ಪಕ್ಷಿ ಕೂರಿಸಿ ಕೊಂಡು ಹೋಗುತ್ತಿದ್ದದ್ದು ನೋಡಿ ಮಾತನಾಡಿಸಿದೆ. ನೋಡಿದರೆ ಆ ಪಕ್ಷಿ ಬೇರೇನೂ ಅಲ್ಲ,  ಗೂಬೆ. ಅದರ ಕಾಲಿಗೆ ಬ್ಯಾಂಡೇಜ್ ಸಹ ಕಟ್ಟಿತ್ತು. ವಿಚಾರಿಸಿದಾಗ ಆಕೆ ಹೇಳಿದ್ದು, ನನ್ನ ಮನೆಯ ಹಿತ್ತಿಲಿನಲ್ಲಿ ಈ ಗೂಬೆ ಕಾಲಿಗೆ ಏಟು ಮಾಡಿಕೊಂಡು ಬಿದ್ದಿತ್ತು, ಅದನ್ನು ತಂದು ಶುಶ್ರೂಷೆ ಮಾಡಿ ಬ್ಯಾಂಡೇಜ್ ಕಟ್ಟಿದ್ದೇನೆ, ಆರಾಮವಾದ ಕೂಡಲೇ ಅದನ್ನು ಕಾಡಿಗೆ ಬಿಡುತ್ತೇನೆ ಎಂದು ಗೂಬೆಯನ್ನು ಅಕ್ಕರೆಯಿಂದ ನೋಡುತ್ತಾ ಹೇಳಿದಾಗ ನನಗೆ ಆಶ್ಚರ್ಯ. ನನಗೆ ತಿಳಿದಂತೆ ಯಾರದಾದರೂ ಮನೆಯ ಮೇಲೆ ಗೂಬೆ ಕೂತರೆ ಆ ಮನೆಯಲ್ಲಿ ಸಾವು ಸಂಭವಿಸುತ್ತದೆ, ಇಲ್ಲಿ ಇದಕ್ಕೆ ಅಮೇರಿಕನ್ ಮಹಿಳೆಯಿಂದ  ವರೋಪಚಾರ ಎಂದು ಮನದಲ್ಲೇ ನಗುತ್ತಾ ಇದರ ಹೆಸರೇನು ಎಂದು ಕೇಳಿದೆ. it is ‘great horned owl’ ಎಂದು ಹೇಳುತ್ತಾ ಅದರ ತಲೆಯ ಮೇಲೆ ಇದ್ದ ಎರಡು ಪುಟ್ಟ ಜುಟ್ಟನ್ನು ತೋರಿಸಿದಳು.  ಅಲ್ಲಲ್ಲ, ಅದಕ್ಕೆ ನೀನೇನೆಂದು ಕರೆಯುತ್ತೀಯಾ ಎಂದಾಗ ಆಕೆ ಹೇಳಿದ್ದು. “ನಾವು ಕಾಡಿನ ಪ್ರಾಣಿಗಳಿಗೆ ಹೆಸರಿಡುವುದಿಲ್ಲ, ಏಕೆಂದರೆ ಹೆಸರಿಟ್ಟ ಕೂಡಲೇ ಅದು ಸಾಕು ಪ್ರಾಣಿ (pet animal) ಯಾಗಿ ಬಿಡುತ್ತೆ” ಎಂದು ಹೇಳುತ್ತಾ, “ನನಗೆ ಈ ಗೂಬೆಯನ್ನ ಸಾಕು ಪ್ರಾಣಿಯನ್ನಾಗಿ ಇಟ್ಟು ಕೊಳ್ಳುವ ಇರಾದೆ ಇಲ್ಲ, he will be fine in the woods” ಎಂದು ಹೇಳಿ ತನ್ನ ದಾರಿ ಹಿಡಿದಳು. ಈ ಗೂಬೆ  ಅನುಭವ ಅಮೆರಿಕೆಯ ಬದುಕಿನ ತುಣುಕೊಂದನ್ನು ಸ್ಮೃತಿ ಪಟಲಕ್ಕೆ ಸಿಕ್ಕಿಸಿ ಕೊಳ್ಳುವ ಅವಕಾಶ ನನಗೆ ಕಲ್ಪಿಸಿತು.

ಆಂಗ್ಲ ಸಾಹಿತ್ಯದಲ್ಲಿ ನನಗೆ ಆಸಕ್ತಿ ಹುಟ್ಟಿಸಿದ್ದು ನನ್ನ ಮೂರು ಜನ ಸ್ನೇಹಿತರು. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅವರು ಕಲಿಯುತ್ತಿದ್ದರು. Somerset Maugham, Daphne Du Maurier, Thomas Hardy, jane Austen ಮತ್ತು D.H. Lawrence ಮುಂತಾದವರು ನನಗೆ ಇಷ್ಟ. ‘ಥಾಮಸ್ ಹಾರ್ಡಿ’ ನಿಸರ್ಗವನ್ನು ಚೆನ್ನಾಗಿ ವರ್ಣಿಸಿ ಬರೆದರೆ ಡೀ.ಎಚ್. ಲಾರೆನ್ಸ್ ತನ್ನ Lady Chatterley’s Lover ಪುಸ್ತಕದಲ್ಲಿ  ಲೈಂಗಿಕತೆಯನ್ನು ಚೆನ್ನಾಗಿ ವರ್ಣಿಸಿ ಬರೆದು ಅಂದಿನ ಮಡಿವಂತ ಸಮಾಜದಿಂದ ತಿರಸ್ಕಾರಕ್ಕೆ ಒಳಗಾದ ಲೇಖಕ. ಮೇಲಂತಸ್ತಿನ ವಿವಾಹಿತ ಮಹಿಳೆ ಮತ್ತು ಕೆಳ ಅಂತಸ್ತಿನ ಸೇವಕನೊಂದಿಗಿನ  ಚಕ್ಕಂದ ಈ ಪುಸ್ತಕದ ಕಥಾ ವಸ್ತು. ಈ ತೆರನಾದ ಚಕ್ಕಂದ ಈಗಿನ ಕಾಲದಲ್ಲಿ ನಮಗೂ, ಪಾಶ್ಚಾತ್ಯರಿಗೂ ಹೊಸತಲ್ಲದಿದ್ದರೂ, ೨೦ ನೇ ಶತಮಾನದ ಆದಿ ಭಾಗದಲ್ಲಿ ಇದು ಅಪರೂಪ.  taboo. ಬಿಸಿಯೇರಿಸುವ  ಸನ್ನಿವೇಶವೊಂದರಲ್ಲಿ ಕಥಾ ನಾಯಕಿ ಮತ್ತು ನಾಯಕ ತಲೆ ಒರೆಸಿ ಕೊಳ್ಳಲು ಟವೆಲ್ ಇಲ್ಲದಿದ್ದರಿಂದ ಬೆಡ್ ಶೀಟ್ ಉಪಯೋಗಿಸುತ್ತಾರೆ. ಒಂದೇ ಟವೆಲ್ ನಲ್ಲಿ ಇಬ್ಬರೂ ಒರೆಸಿಕೊಂಡರೆ ಜಗಳ ಆಗು ತ್ತಂತೆ ಎಂದು ಆಕೆ ಹೇಳಿದಾಗ ನಾಯಕ ಹೇಳುತ್ತಾನೆ, ಇರಬಹುದು, ಗೊತ್ತಿಲ್ಲ, ಆದರೆ ಇದು ಟವೆಲ್ ಅಲ್ಲವಲ್ಲಾ, ಬೆಡ್ ಶೀಟ್ ತಾನೇ ಎಂದು ಸಮಾಧಾನ ಮಾಡುತ್ತಾನೆ. ನಾವು ಕೇಳಿದ್ದೇವೆಯೇ ಈ ವಿಷಯವನ್ನು? ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ ಆಗಬಹುದಾದ ಜಗಳದ ಬಗ್ಗೆ?

 

ನಾಣ್ಯಕ್ಕೆ ಮತ್ತೊಂದು ಮುಖ

ಅಮೆರಿಕೆಯ ವಿರುದ್ಧ ನಡೆದ ವೈಮಾನಿಕ ಧಾಳಿಯ ವಾರ್ಷಿ ಕ ದಂದು ಪ್ರವಾದಿ ಮುಹಮ್ಮದರ ಮೇಲೆ ಅವಹೇಳನಕಾರೀ ವೀಡಿಯೊ ‘ಯೂ ಟ್ಯೂಬ್’ ಗಳಲ್ಲಿ ರಾರಾಜಿಸಿ ದೊಡ್ಡ ಅಂತಾರಾಷ್ಟ್ರೀಯ ವಿವಾದ ಸೃಷ್ಟಿಯಾಯಿತು. ಪ್ರತಿಭಟನಾರ್ಥವಾಗಿ  ಲಿಬ್ಯಾದ ಬೆಂಗಾಜಿ ಯಲ್ಲಿ ಅಮೇರಿಕನ್ ದೂತಾವಾಸದ ಮೇಲೆ ನಡೆದ ಆಕ್ರಮಣದಲ್ಲಿ ಅಮೆರಿಕೆಯ ರಾಯಭಾರಿಯನ್ನು ಮತ್ತು ಇತರೆ ಮೂರು ಅಮೆರಿಕನ್ನರನ್ನು ರಾಕೆಟ್ ಧಾಳಿ ನಡೆಸಿ ಕೊಲ್ಲಲಾಯಿತು. ಅಮೇರಿಕನ್ ರಾಯಭಾರಿ ಮುಅಮ್ಮರ್ ಗದ್ದಾಫಿ ವಿರುದ್ಧದ ಹೋರಾಟದಲ್ಲಿ ಲಿಬ್ಯನ್ನರ ಬೆಂಬಲಕ್ಕೆ ನಿಂತಿದ್ದವರು. ವೀಡಿಯೊಗೂ ಅವರಿಗೂ ಯಾವ ಸಂಬಂಧವೂ ಇರಲಿಲ್ಲ. ಅವರ ಹತ್ಯೆಯಿಂದ ಅಮೆರಿಕೆಗೂ ಲಿಬ್ಯಾಕ್ಕೂ ತೀವ್ರ ಆಘಾತವಾಗಿ ಲಿಬ್ಯಾದ ಸರಕಾರ ಅಮೆರಿಕೆಯ ಕ್ಷಮೆ ಕೇಳಿ ಕೊಲೆಗಡುಕರನ್ನು ಶೀಘ್ರದಲ್ಲೇ ಹಿಡಿಯುವುದಾಗಿ ಭರವಸೆ ನೀಡಿತು. ಈ ಭೀಕರ ಘಟನೆ ಮತ್ತು ವೀಡಿಯೊ ವಿವಾದದ ಬಗ್ಗೆ ಅಮೆರಿಕೆಯ

NPR ರೇಡಿಯೋದಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಯಿತು. “ನೀಲ್ ಕೋನನ್” ನಡೆಸಿಕೊಡುವ ‘ಟಾಕ್ ಆಫ್  ದಿ ನೇಶನ್’ ಒಂದು ಜನಪ್ರಿಯ ಕಾರ್ಯಕ್ರಮ. ಪಂಡಿತರು, ಶ್ರೋತೃಗಳೂ ಪಾಲುಗೊಳ್ಳುವ ಈ ಚರ್ಚಾ ಕಾರ್ಯಕ್ರಮ ಸ್ವಾರಸ್ಯಕರ ವಾಗಿರುತ್ತದೆ. ವೀಡಿಯೊ  ಮತ್ತು ರಾಯಭಾರಿಯ ಹತ್ಯೆ ಯ ಮೇಲೆ ನಡೆದ ಕಾರ್ಯಕ್ರಮವನ್ನ ಆಲಿಸುತ್ತಿದ್ದ ಮಹಿಳಾ ಶ್ರೋತೃವೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು. “ಲಿಬ್ಯಾದ ಬೆನ್ಗಾಜಿಯಲ್ಲಿ ನಡೆದ ಭೀಭತ್ಸ ಘಟನೆ ಬಗ್ಗೆ ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಅತ್ಯಂತ ದಾರುಣ ಈ ಘಟನೆ. ಈ ಘಟನೆಯ ಸಮಯ ರಾಯಭಾರಿಯ ಮೇಲೆ ಧಾಳಿ ನಡೆದಾಗ ಲಿಬ್ಯಾದವರು ರಾಯಭಾರಿಯನ್ನು ರಕ್ಷಿಸಲು ಹೋರಾಡಿದರು, ಸಾವು ನೋವುಗಳೂ ಆದವು, ಆದರೆ ಇದರ ಬಗ್ಗೆ ನಾವು ಮಾತನಾಡುತ್ತಿಲ್ಲ, ಇದು ಸರಿಯಲ್ಲ, ಲಿಬ್ಯನ್ನರ ಸಹಾಯವನ್ನೂ ನಾವು ಸ್ಮರಿಸಬೇಕು” ಎಂದು ಹೇಳಿದಾಗ ನನಗೆ ಅಚ್ಚರಿಯಾಯಿತು. ತನ್ನ ದೇಶದವರ ವಿರುದ್ಧ ನಡೆದ ಧಾಳಿಯ ಸಮಯದಲ್ಲೂ ಬೇರೊಬ್ಬರ ತ್ಯಾಗ, ಧೈರ್ಯ ದ ಬಗ್ಗೆ ಮೆಚ್ಚುಗೆ ಸೂಸಲು ಕ್ಯಾಲಿಫೋರ್ನಿಯಾ ಮೂಲದ ಈ ಅಮೇರಿಕನ್ ಮಹಿಳೆ ಒತ್ತಾಯ ಮಾಡುತ್ತಿದ್ದಾಳಲ್ಲ ಎಂದು. ಈ ಮಹಿಳೆಯ ಮಾತು ಕೇಳಿದ ಬೆಂಗಾಜಿಯಿಂದ ‘ಆನ್ ಲೈನ್’ ಇದ್ದ ಬಾತ್ಮೀದಾರ ಹೇಳಿದ್ದು, ‘ಹೌದು, ಲಿಬ್ಯನ್ನರು ಬಹು ಧೈರ್ಯದಿಂದ ಹೋರಾಡಿದರು. ರಾಯಭಾರಿಯನ್ನು ಉಳಿಸುವ ಪ್ರಯತ್ನ ಮಾಡಿದರು, ಅಷ್ಟೇ ಅಲ್ಲ ಈ ಧಾಳಿಯ ವಿರುದ್ಧ ಇಂದು ಸಂಜೆ ಒಂದೆರಡು ಪ್ರತಿಭಟನಾ ಪ್ರದರ್ಶನಗಳೂ ನಡೆದವು’ ಎಂದು ವರದಿ ಮಾಡಿದ.

ಯಾವುದೇ ಘಟನೆಯ ಬಗ್ಗೆ ಓದುವಾಗ ನಾಣ್ಯಕ್ಕೆ ಮತ್ತೊಂದು ಮುಖ ಇದ್ದೇ ಇರುತ್ತದೆ ಎನ್ನುವ ಭಾವನೆ ನಮ್ಮೊಂದಿಗೆ ಇದ್ದರೆ ಆ  ಅಮೇರಿಕನ್ ಮಹಿಳೆಯ ಮನಸ್ಸಿನಲ್ಲಿ ಮೂಡಿದ ವಿಚಾರಗಳು ನಮ್ಮ ಮನಸ್ಸಿನಲ್ಲೂ ಮೂಡದೆ ಇರದು. ಎಲ್ಲದಕ್ಕೂ ಸಂಯಮ, ತಾಳ್ಮೆ, ವಿಚಾರ ಮಾಡುವ ಮನಸ್ಸು ಇದ್ದಾಗ ವಿಷಯ ಮತ್ತಷ್ಟು ತಿಳಿಯಾಗುವುದು.

ಇಂಟರ್ನೆಟ್ ತಂತ್ರಜ್ಞಾನ “ಟೋನ್ ಚೆಕ್”

ಆಟೋ ಸೇವ್ ಆಯ್ತು, ಸ್ಪೆಲ್ ಚೆಕ್ ಆಯ್ತು, ಮತ್ತಿನ್ನೇನೋ ಬಂದವು.  ಈಗ ಬಂತು “ಟೋನ್ ಚೆಕ್”. ಗಣಕ ಯಂತ್ರವನ್ನು ಸ್ಟುಪಿಡ್ ಬಾಕ್ಸ್ ಎಂದು ಮೂದಲಿಸಿದ ವ್ಯಕ್ತಿ ಈಗ ಸ್ಟುಪಿಡ್. ನಮ್ಮ ಬದುಕನ್ನು ಸರಳವಾಗಿಸಿದ ಗಣಕ ಯಂತ್ರವನ್ನು ಹಾಗೆಂದು ಮೂದಲಿಸೋದು ಅಪರಾಧ. ಇರಲಿ ಈಗ “ಟೋನ್ ಚೆಕ್” ಗೆ ಬರೋಣ. ಟೋನ್ ಎಂದರೆ ಚರ್ಮದ tone ಅಲ್ಲ, ನಾವಾಡುವ ಸ್ವರ.  ಕೋಪಗ್ರಸ್ಥರಾದಾಗ ನಾವಾಡುವ ಮಾತುಗಳು ಕೇಳುಗರ ಅಥವಾ ಓದುಗರ ಮೇಲೆ ಬೀರುವ ಪರಿಣಾಮದ ಅರಿವು ಇದ್ದರೆ ತಾಪತ್ರಯಗಳು ಕಡಿಮೆ. ತಾಣವೊಂದರಲ್ಲಿ ಒಬ್ಬರೊಂದಿಗೆ ಚರ್ಚೆಗಿಳಿದಾಗ ಒಬ್ಬ ವ್ಯಕ್ತಿ ಹೇ, ಮಿಸ್ಟರ್, you are exposed ಎಂದು ನನ್ನನ್ನು ಮೂದಲಿಸಿತು. ತಮ್ಮ ideology ಗೆ ಧಕ್ಕೆ ತರುವ, ಟೀಕೆಗೆ ಒಳಪಡಿಸುವ ಯಾರನ್ನೇ ಆದರೂ ನಿರ್ದಯವಾಗಿ ಇಂಥ ಜನರು   ಬೇಟೆಯಾಡುತ್ತಾರೆ. ಇಂಥ ಜನರ ಬಗ್ಗೆ outlook ವಾರಪತ್ರಿಕೆಯಲ್ಲಿ CNN-IBN ನ ಸಾಗರಿಕ ಘೋಷ್ ಒಂದು ಲೇಖನ ಬರೆದಿದ್ದರು. ಒಬ್ಬ ಹೆಣ್ಣು ಮಗಳಿಗೆ ಈ ತೆರನಾಗಿ ಬರೆಯುವ, ಜರೆಯುವ ಜನ ಬೇರೆ ಯಾರನ್ನು ತಾನೇ ಬಿಟ್ಟಾರು?   ಅಂತರ್ಜಾಲ ಅನಾಮಿಕತನ (anonymity) ವನ್ನೂ ಕೊಡಮಾಡುವುದರಿಂದ ಎಗ್ಗಿಲ್ಲದೆ ಹರಿ ಹಾಯುತ್ತಾರೆ ಜನರ ಮೇಲೆ. ನಿಮಗೆ ನೋವಾಯಿತೋ ಇಲ್ಲವೋ, ಇದರ ಪರಿವೆ ಇಲ್ಲ. ಮನದೊಳಗೆ ಕೊಳೆತು ಕೂತಿದ್ದನ್ನು ಲೀಲಾಜಾಲವಾಗಿ ಯಾರದಾದರೂ ಮೇಲೆ ಡಂಪ್ ಮಾಡಿ ಮಗುಮ್ಮಾಗಿ ಇದ್ದು ಬಿಡುತ್ತಾರೆ.ಇವರುಗಳ ಈ ವರ್ತನೆಗೆ ರೋಸಿ ಹೋಗದ, ಇಂಟರ್ನೆಟ್ ಸಹವಾಸವೇ ಬೇಡ ಎಂದು ಕೈ ಚೆಲ್ಲದವರು ಸಂಖ್ಯೆಯಲ್ಲಿ  ಕಡಿಮೆ ಎಂದೇ ಹೇಳಬಹುದು.   

ಕೆಲವರ ಮೇಲೆ ಹೇಳಿದ ಹಾಗೆ, ಅವರ ವರ್ತನೆ deliberate. ಇನ್ನೂ ಕೆಲವರು ತಮಗೆ ಅರಿವಿಲ್ಲದೆ ಸ್ವಲ್ಪ ಖಾರವಾದ ಭಾಷೆ ಉಪಯೋಗಿಸುತ್ತಾರೆ. deliberate ಮತ್ತು ನಾಟ್ ಸೋ ಡೆಲಿಬರೆಟ್ ಪೈಕಿಯವರಿಗೆಂದೇ ಬಂದೈತೆ ಟೋನ್ ಚೆಕ್. ಲೇ, ಬೋ**ಮಗನೆ, ತಲೆಯೊಳಗೆ ಹೇ** ತುಂಬಿಸಿ ಕೊಂಡಿದ್ದೀಯ…ಅದೂ ಇದೂ ಎಂದು ಬಾಯಿಗೆ ಬಂದಂತೆ ಮಾತನಾಡಿ ಪೋಸ್ಟ್ ಎಂದು ಕೀಲಿಮಣೆಯ ಮೇಲೆ ಬೆರಳನ್ನು ಕುಕ್ಕಿದ ಕೂಡಲೇ ಬರುತ್ತೆ ವಾರ್ನಿಂಗ್. ತಮ್ಮಾ, (ತಂಗೀ ?) ನೀನು ಮಾಡುತ್ತಿರೋ ಕೆಲಸ ನಿನಗೆ ಹೇಳಿಸಿದ್ದಲ್ಲ, ಮತ್ತೊಮ್ಮೆ ಓದಿ ನೋಡು, ಇದೇ ರೀತಿ ನಿನಗೂ ಯಾರಾದರೂ ಬರೆದಾಗ ನಿನಗಾಗುವ ಸಂಕಟದ ಬಗ್ಗೆ ಯೋಚಿಸು, ಪರರಿಗೆ ಬಯಸಿದ್ದನ್ನೆ ನಿನಗೂ ಬಯಸಿದಾಗ ಆಗುವ ಅನುಭವ, ಅನುಭಾವದ ಕಡೆ ಗಮನ ಕೊಡು ಎಂದು ಗೋಗರೆಯುತ್ತೆ ಈ ಹೊಸ “ಟೋನ್ ಚೆಕ್” ತಂತ್ರಜ್ಞಾನ. ಆದರೆ ಕೆಲವು ಕಂಪೆನಿಗಳು ಈ ತಂತ್ರ ಜ್ಞಾನ ವನ್ನೂ ಅಳವಡಿಸಿಕೊಳ್ಳಲು ತಯಾರಿಲ್ಲವಂತೆ. ಏಕೆಂದರೆ ತಮ್ಮ ಉದ್ದಿಮೆಗಳ ಇಮೇಲ್ ಗೌಪ್ಯತೆ ಬಹಿರಂಗ ವಾದೀತು ಎನ್ನುವ ಆತಂಕ. 

ನೋಡಿ, ಯಾವ ಯಾವ ರೀತಿಯಲ್ಲಿ ನಮ್ಮ ಬಗ್ಗೆ ಖಯಾಲಿ, ನಿಗಾ ಇಟ್ಟು ಕೊಂಡಿರುತ್ತಾರೆ ಈ ಇಂಟರ್ನೆಟ್ ಉದ್ಯಮಿಗಳು. ಅದೇ ಸಮಯ, ಅಲ್ಲಿ ಉಗುಳಬಾರದು, ಇಲ್ಲಿ ಉಗುಳಬಾರದು, ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು, ಚೀಟಿ ಅಂಟಿಸಬಾರದು, ಗಲೀಜು ಮಾಡಬಾರದು, ಬಸ್ಸಿನಿಂದ ಹೊರಗೆ ಕೈ ಹಾಕಬಾರದು… ಅದನ್ನು ಮಾಡಬಾರದು…ಇದನ್ನು ಮಾಡಬಾರದು ಎಂದು ಪ್ರಬುದ್ಧರನ್ನು, ವಯಸ್ಕರನ್ನು ಗದರಿಸುವ ಪರಿಪಾಠ ಇಂಟರ್ನೆಟ್ ಗೆ ಬರಬಾರದಿತ್ತು “ಟೋನ್ ಚೆಕ್” ಆವಿಷ್ಕಾರದ ಮೂಲಕ.