ಹಗಲಿನಲ್ಲಿ ದೀಪ

ಇರುಳು ಕವಿಯುತ್ತಿದ್ದಂತೆ ವಾಹನ ಚಾಲಕರು (ಕೆಲವರು ಭಕ್ತಿಯಿಂದ ಕಸಿ ಮುಗಿದು ) ತಮ್ಮ ವಾಹನಗಳ ದೀಪಗಳನ್ನು ಉರಿಸುತ್ತಾರೆ. ಇದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ. ಆದರೆ ಹಗಲಿನಲ್ಲಿ? ಹಗಲಿನಲ್ಲಿ ದೀಪದ ವಾಹನಗಳಿಗೆ? ಇದೆ ಎನ್ನುತ್ತಾರೆ ಕೆಲವರು, ಅಲ್ಲಲ್ಲ ಹಲವರು. ವಿಶೇಷವಾಗಿ ಮುಂದುವರಿದ ದೇಶಗಲವರು. ಲಿಬ್ಯಾ ದೇಶದಿಂದ ಮುಸ್ಲಿಂ ಮಹಿಳೆಯೊಬ್ಬರು ಬ್ಲಾಗ್ ಪ್ರಕಟಿಸುತ್ತಾರೆ. ಸೊಗಸಾಗಿ ಆಂಗ್ಲ ಭಾಷೆಯಲ್ಲಿ ಬರೆಯುವ ಈ ಮಹಿಳೆ ಜೀವನದ ಹಲವು ಘಟನೆಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಈ ಮಹಿಳೆ ಕಾರನ್ನು ಹಗಲಿನಲ್ಲಿ ಓಡಿಸುವುದು ದೀಪಗಳನ್ನು ಉರಿಸಿಕೊಂಡು. ಹೀಗೆ ಪ್ರತಿ ಸಲವೂ ರಸ್ತೆಯಲ್ಲಿ ಹೋಗುವಾಗ ಜನ ಲೈಟ್ ಆಫ ಮಾಡುವಂತೆ ಈಕೆಗೆ ಸನ್ನೆ ಮಾಡುತ್ತಾರಂತೆ. ಕೆಲವರು ಕರ್ಕಶವಾಗಿ ಹಾರ್ನ್ ಮಾಡಿ ಎಚ್ಚರಿಸಿದರೆ ಇನ್ನೂ ಕೆಲವರು ಹಿಂದುಗಡೆಯಿಂದ ಲೈಟ್ ಬಿಟ್ಟು ಎಚ್ಚರಿಸುತ್ತಾರೆ. ತನಗಿಲ್ಲದ ಕಾಳಜಿ ಇವರಿಗೆಕೋ ಎಂದು ಸಿಡುಕುವ ಈ ಮಹಿಳೆ ಜನ ತಮ್ಮ ತಮ್ಮ ಕಾರುಗಳಲ್ಲಿ ತಮ್ಮ ಮಕ್ಕಳು ಕಿಟಕಿಯ ಹೊರಗೆ ನೇತಾಡುತ್ತಿದ್ದರೂ ಯಾವ ಪರಿವೆಯೂ ಇಲ್ಲದೆ ಓಡಿಸುವುದು ದೊಡ್ಡ ಒಗಟು ಎನ್ನುತ್ತಾರೆ. ಈ ಪರಿಪಾಠವನ್ನು ನಾನೂ ನೋಡುತ್ತಿರುತ್ತೇನೆ ಸೌದಿ ಅರೇಬಿಯಾದಲ್ಲಿ. ಮಕ್ಕಳು ಕಿಟಿಕಿಯಿಂದ ತಲೆ ಹೊರಕ್ಕೆ ಹಾಕಿದರೂ ಪಾಲಕರಿಗೆ ಏನೂ ಅನ್ನಿಸುವುದೇ ಇಲ್ಲ. ಕೆಲವರು ತಮ್ಮ ತೊಡೆಗಳ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಡ್ರೈವ್ ಮಾಡುವುದೂ ಇದೆ. ಕೆಲವೊಮ್ಮೆ ಪೊಲೀಸರು ಇಂಥ ವನ್ನು ನೋಡಿದಾಗ ವಿಒಳಶನ್  ಟಿಕೆಟ್ ಇಶ್ಯೂ ಮಾಡುತ್ತಾರೆ         

ಈಗ ದೀಪದ ಸಮಸ್ಯೆಗೆ ಬರೋಣ. ಕೆಲವೊಂದು ಕಾರುಗಳು ಸ್ಟಾರ್ಟ್ ಮಾಡಿದ ಕೂಡಲೇ ಲೈಟ್ಗಳನ್ನೂ ಉರಿಸುತ್ತವೆ. ನನ್ನ ಕಾರಿನಲ್ಲಿ ಆ ಸೌಲಭ್ಯ ಇಲ್ಲ. ನನ್ನ ಭಾವನ GMC YUKON ಕಾರಿಗೆ ಈ ಸೌಲಭ್ಯ ಇದೆ. ನಾನು ಅದನ್ನು ಓಡಿಸುವಾಗ ಹಗಲಿನಲ್ಲಿ ಉರಿದ ದೀಪಗಳನ್ನು ಆರಿಸಿಬಿಡುತ್ತೇನೆ. ಮೇಲೆ ಹೇಳಿದ ಬ್ಲಾಗ್ ಓದಿದ ನಂತರ ನನಗೂ ಕುತೂಹಲ ಉಂಟಾಗಿ “ಯಾಹೂ” ಮೊರೆ ಹೋದೆ; ನನ್ನದೇ ಆದ, (ನನಗೆ ಗೊತ್ತಿಲ್ಲದ) ಕಾರಣಕ್ಕೆ ನಾನು ಗೂಗ್ಲಿಸುವುದಿಲ್ಲ.     

ಮೊದಲಿಗೆ ಸಿಕ್ಕಿದ್ದು ಆಸ್ಟ್ರಿಯಾ ದೇಶದ ವೆಬ್ ತಾಣ. ಹಗಲಿನಲ್ಲಿ ದೀಪ ಉರಿಸಿ ವಾಹನ ಚಲಾಯಿಸುದರಿಂದ ಅಪಘಾತಗಳು ಕಡಿಮೆ ಆಗುತ್ತವೆ ಎಂದು ಅಭಿಪ್ರಾಯ. ಹಗಲಿನಲ್ಲಿ ದೀಪದ ಬಗ್ಗೆ ಆಸ್ಟ್ರಿಯಾ ಕಾನೂನನ್ನು ಸಹ ಮಾಡಿತ್ತು. ಅ೯೭೦ ರ ದಶಕದಿಂದಲೂ ಯೂರೋಪಿನ ಹಲವು ದೇಶಗಳಲ್ಲಿ ಇದು ಕಡ್ಡಾಯವಾಗಿತ್ತು ಕೂಡಾ. ಹೀಗೆ ದೀಪ ಉರಿಸಿ ಚಲಾಯಿಸಿದರೆ ಎಂದುರಿನಿಂದ ಬರುವ ವಾಹನಗಳಿಗೂ ಅನುಕೂಲ, ಪಾದಚಾರಿಗಳಿಗೂ, ಸೈಕಲ್ ಸವಾರರಿಗೂ, ರಸ್ತೆ ದಾಟುವ  ಮಕ್ಕಳಿಗೂ ವಾಹನ ಗೋಚರಿಸಿ ಅಪಘಾತಗಳು ಸಂಭವಿಸುವುದಿಲ್ಲವಂತೆ. ಹಗಲಿನಲ್ಲಿ ದೀಪ ಉರಿಸಿ ಚಾಲಾಯಿಸಿ ತಿಂಗಳಿಗೆ ಕನಿಷ್ಠ ೩೦ ಜೀವಗಳನ್ನು ಉಳಿಸಿ ಎಂದು ಆಸ್ಟ್ರಿಯಾ ವಾಹನ ಚಾಲಕರಿಗೆ ನಿರ್ದೇಶಿಸಿದೆ.ಮತ್ತೊಂದು ವೆಬ್ ತಾಣ ಆಟೋ ಮೋಟೋ ಪೋರ್ಟಲ್ ಡಾಟ್ ಕಾಂ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಈಗ ಇವನ್ನು ಓದಿ ನಾನೂ ನನ್ನ ಕಾರಿನ ಲೈಟು ಗಳನ್ನು ಹಗಲಿನಲ್ಲಿ ಆನ್ ಮಾಡಿ ಓಡಿಸಿದರೆ ಬೆಂಬಿಡದ ಭೂತದಂತೆ ಜನ ದೀಪ ಆರಿಸುವಂತೆ (ಲಿಬ್ಯಾದ ಮಹಿಳೆಗೆ ಅನುಭವ ಆದಂತೆ) ವಿವಿಧ ರೀತಿಗಳಲ್ಲಿ ನನ್ನನ್ನು ಪೀಡಿಸುವರೋ ಏನೋ? ಭಾರತದಲ್ಲಿ ಹೇಗೋ ಏನೋ ಗೊತ್ತಿಲ್ಲ, ಏಕೆಂದರೆ ಈ ಹೊಸ ವಿಚಾರ ನನಗೆ ಗೊತ್ತಾಗಿದ್ದೆ ಈಗ. ಅದೂ ಅಲ್ಲದೆ ನಮ್ಮಲ್ಲಿ ದಾರಿಹೋಕ  “ಸಮಾಜ ಸೇವಕರು” ಹೆಚ್ಚು. ಖಂಡಿತ ಜನ ಬೆನ್ನು ಬೀಳುತ್ತಾರೆ ಇಲ್ಲಾ ತಮಾಷೆ ಮಾಡಿ ನಗುತ್ತಾರೆ, ನೋಡ್ರಲಾ, ಹೈದ ಹೊಸದಾಗಿ ಕಾರ್ ತಗೊಂಡಿರ್ಬೇಕು, ಅದ್ಕೆ ಓಡುಸ್ತಾ ಇದ್ದಾನೆ ಲೈಟ್ ಹಾಕ್ಕೊಂಡು. ಬೇಡ ಬಿಡಿ, ಈ ಹೊಸ ಸಾಹಸ, ಜನ ತಾವಾಗೇ ತಿಳಿದುಕೊಳ್ಳುವವರೆಗೂ. ಏನಂತೀರಾ?

ಮರುಭೂಮಿಯ ಎಲೆಮರೆಕಾಯಿ

ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು ರೀತಿಯ ಮೋಜು, ನಮ್ಮಲ್ಲಿನ ತೋಟದಲ್ಲಿ ಊಟದ ಥರ ) ಹೊರಟೆವು. ನಗರದ ಪರಿಮಿತಿ ಬಿಟ್ಟು ಸ್ವಲ್ಪ ದೂರ ಬರುತ್ತಲೇ ತಪಾಸಣಾ ನಿಲುಗಡೆ. ಸೌದಿ ಅರೇಬಿಯಾದಲ್ಲಿ ಎಲ್ಲಿ ನೋಡಿದರೂ ತಪಾಸಣೆಯೇ. ನಗರದ ಗಡಿ ಬಿಟ್ಟಾಗ, ಬೇರೆ ನಗರ ಪ್ರವೇಶಿಸುವಾಗ, ಇವೆರೆಡರ ನಡುವೆ random ಆಗಿ patrol ಮಾಡುವ ಪೋಲೀಸರ ತಪಾಸಣೆ ಅಲ್ಲಲ್ಲಿ. ೧೯೯೦ ರ ಕೊಲ್ಲಿ ಯುದ್ಧಾ ನಂತರ ಇಲ್ಲಿನ ಅರಸು ಮನೆತನಕ್ಕೆ ಮುನಿದು ಅಲ್ ಕೈದಾ ನಡೆಸಿದ ಕೆಲವು ಭಯೋತ್ಪಾದಕ ಚಟುವಟಿಕೆಗಳ ನಂತರ ಹೆಚ್ಚಿನ ಬಂದೋಬಸ್ತು. ಈಗ ಈ ದೇಶ ತುಂಬಾ ಸುರಕ್ಷಿತ. ಸರಿ ತಪಾಸಣಾ ನಿಲುಗಡೆ ಸಮೀಪಿಸುತ್ತಲೇ ನಾನು ಕಾರನ್ನು ನಿಧಾನಗೊಳಿಸಿ ಕಿಟಕಿಯ ಗಾಜನ್ನು ಇಳಿಸಿದೆ. ನನ್ನತ್ತ ನೋಡಿದ ಸುಮಾರು ಇಪ್ಪತ್ತರ ಚಿಗುರು ಮೀಸೆಯ ಮಂದಸ್ಮಿತ ಪೋಲಿಸ್ ಕೇಳಿದ ನಾನು ಯಾವ ದೇಶದವನೆಂದು. ನಾನು ಭಾರತೀಯ ಎಂದು ಹೇಳುತ್ತಿದ್ದಂತೆಯೇ ಆಹ್, ಹಿಂದಿ ಎನ್ನುತ್ತಾ ಸ್ವಾಗತ (ಮರ್ಹಬ) ಎಂದು ಅರಬ್ಬಿಯಲ್ಲಿ ಹೇಳಿ ನನ್ನ ಗುರುತು ಚೀಟಿ ಮತ್ತು ವಾಹನ ಚಾಲನಾ ಪರವಾನಗಿಯನ್ನು ತೆಗೆಯಲು ಬಿಡದೆ ಮುಂದೆ ಹೋಗಲು ಬಿಟ್ಟ. ಭಾರತೀಯರಿಗೆ ಅರಬರು ಹಿಂದಿ ಎಂದು ಕರೆಯತ್ತಾರೆ. ಹಿಂದ್ ದೇಶದವ ಎಂದರ್ಥ. ಕೆಲವು ಪಂಡಿತರ ಪ್ರಕಾರ ಹಿಂದೂ ಶಬ್ದ ಮೂಲವೂ ಅದೇ. ಅದೇ ಪದದಿಂದಲೇ ಹಿಂದೂ ಎನ್ನುವ ಪದವೂ ಬಂದಿದ್ದು. ಭಾರತೀಯರ ಮೇಲಿನ ಪೋಲಿಸ್ ಪೇದೆಯ ನಂಬುಗೆ ನೋಡಿ ನನಗೆ ಭಾರತೀಯನಾಗಿ ಹುಟ್ಟಿದ್ದು ಧನ್ಯ ಎನ್ನಿಸಿತು. ಈ ಮರ್ಯಾದೆ, ಆತಿಥ್ಯ  ಭಾರತದಲ್ಲೂ ನನಗೆ ಸಿಗಲಿಕ್ಕಿಲ್ಲವೇನೋ? ಭಾರತೀಯರು ತಮ್ಮ ದೇಶದ ಒಳಗೆ ಜಾತಿ ಧರ್ಮ, ಭಾಷೆ ಎಂದು ಹೇಗಾದರೂ ಕಚ್ಚಾಡಿಕೊಳ್ಳಲಿ, ಸಾಗರೋಲ್ಲಂಘನ ಅಥವಾ ಸೀಮೋಲ್ಲಂಘನ ಮಾಡಿದ ಕೂಡಲೇ ನಮ್ಮ identity ಎಲ್ಲಿ ಹೋದರೂ ಒಂದೇ. identical. ಭಾರತೀಯ. Indian. ಪೂರ್ಣ ವಿರಾಮ.

 ಭಾರತೀಯತೆಯೇ ಗುಣ, ಬಾಕಿ ಎಲ್ಲಾ ಗೌಣ.

 ಬೇರಾವುದೇ ದೇಶದವರನ್ನು ಕಂಡರೂ, ವಿಶೇಷವಾಗಿ ಪಾಕಿ, ಆಫ್ಘನ್ ರನ್ನು ಕಂಡರಂತೂ ಪೊಲೀಸರಿಗೆ ದೊಡ್ಡ ಕೆಲಸ. ಬರೀ ಅವರ ಕಾಗದ ಪತ್ರ, ಜಾತಕವಲ್ಲ, ವಾಹನವನ್ನೂ ಕೆಳಗೆ ಮೇಲೆ ಎಂದು ಕನ್ನಡಿ ಹಿಡಿದು ಪರೀಕ್ಷಿಸಿ ಮುಂದೆ ಬಿಡುತ್ತಾರೆ. ಅಂಥ reputation ಅವರದು. ಹೊಡಿ ಬಡಿ ಕಡಿ ಎಂದರೆ ಇವರುಗಳು ಮುಂದೆ. ಹೆಚ್ಚು ಮಾತನಾಡಿದರೆ ಪೇದೆಯನ್ನೂ ತದುಕಲು ಹೆದರುವುದಿಲ್ಲ. ಹಾಗಾಗಿ ಇವರಿಗೆ ತಪಾಸಣಾ ಸ್ಥಳಗಳಲ್ಲಿ ವಿಶೇಷ ಮನ್ನಣೆ ಮತ್ತು ಮಣೆ. ವಿಷದ ಹಲ್ಲು ಇಲ್ಲ ಎಂದು ಚೆನ್ನಾಗಿ ಖಾತ್ರಿ ಪಡಿಸಿಕೊಂಡ ನಂತರವೇ ಹಸಿರು ನಿಶಾನೆ ಮುಂದೆ ಹೋಗಲು. ಆದರೆ ಭಾರತೀಯ ಹಾಗಲ್ಲ, ತಾನಿರುವ ನಾಡಿನ ಕಾನೂನಿಗೆ ತಲೆಬಾಗಿ ಇರುವಷ್ಟು ದಿನ ಯಾವ ತಕರಾರುಗಳಿಗೂ ಹೋಗದೆ ಎಲೆಮರೆಕಾಯಿಯಂತೆ ತನ್ನ ಪಾಡಿಗೆ ದುಡಿದು ದಣಿದು ಬಂದು ರೂಮಿನಲ್ಲಿ ತನ್ನ ಪ್ರೀತಿ ಪಾತ್ರರ ಭಾವ ಚಿತ್ರಗಳನ್ನು ನೋಡುತ್ತಾ ಮುದುಡಿ ಬಿದ್ದಿರುತ್ತಾನೆ ತನ್ನ ನಾಡಿನ ಕನಸನ್ನು ಕಾಣುತ್ತಾ.  

 ಈ ದೇಶದ ಬಿಗಿಯಾದ ಕಾನೂನಿನ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುತ್ತೇನೆ, ಮತ್ತು ಇಂಥವನ್ನು ನಾವೂ ಅಳವಡಿಸಿಕೊಂಡರೆ ಮುಂಬೈಯಲ್ಲಿ ಪಾಕಿ ಪಾತಕಿಗಳು ನಡೆಸಿದ ನರಸಂಹಾರದಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟಬಹುದು. ಈ ದೇಶಕ್ಕೆ ಉದ್ಯೋಗಕ್ಕಾಗಿ ಬರುವ ಪ್ರತಿಯೊಬ್ಬನೂ ತನ್ನ ಪಾಸ್ ಪೋರ್ಟನ್ನು ತನ್ನ ಯಜಮಾನನಿಗೆ (employer) ಒಪ್ಪಿಸಿ ಅದರ ಬದಲಿಗೆ “ಇಕಾಮ” ಎಂದು ಕರೆಯಲ್ಪಡುವ ಗುರುತಿನ ಕಾರ್ಡನ್ನು ಪಡೆಯಬೇಕು. ಈ ಕಾರ್ಡನ್ನು ತಾನು ತನ್ನ ರೂಮನ್ನು ಬಿಟ್ಟು ಎಲ್ಲೇ ಹೋದರೂ ಜೊತೆಗೇ ಒಯ್ಯಬೇಕು. ಅಲ್ಲಲ್ಲಿ ನಡೆಯುವ random ತಪಾಸಣೆಗಳಲ್ಲಿ ಗುರುತು ಚೀಟಿ ಇಲ್ಲದ್ದನ್ನು ಕಂಡರೆ ಯಾವುದೇ ಸಮಜಾಯಿಷಿಗೂ ಕಿವಿಗೊಡದೆ ಒಳಗೆ ತಳ್ಳುತ್ತಾರೆ. ಚೀಟಿಯನ್ನು ತಂದ ನಂತರವೆ ಬಿಡುಗಡೆ. ಹಜ್ ಸಮಯದಲ್ಲಿ ತಪಾಸಣೆ ಸ್ವಲ್ಪ ಜೋರು. ಯಾತ್ರಾರ್ಥಿಯಾಗಿ ಬಂದು ಮರಳಿ ತಮ್ಮ ದೇಶಕ್ಕೆ ವಾಪಸು ಹೋಗದೆ ದುಡಿಯಲು ಇಲ್ಲೇ ಉಳಿದು ಕೊಳ್ಳುವ ಜನರು ಅಸಂಖ್ಯ. ಅವರಲ್ಲಿ ಬಡ ರಾಷ್ಟ್ರಗಳ ಅರಬರು ಮತ್ತು ಆಫ್ರಿಕನ್ನರು ಹೇರಳ. ಹೀಗೆ ಅಕ್ರಮವಾಗಿ ಉಳಿದು ಕೊಳ್ಳುವ ಯಾವ ದೇಶದವನೇ ಆಗಲಿ, ಮುಸ್ಲಿಮನೇ ಆಗಿರಲಿ ಯಾವ ರಿಯಾಯ್ತಿಯೂ ಇಲ್ಲ. forced deportation.  

 ಮೇಲೆ ಹೇಳಿದ ಮದೀನಾ ಹೋಗುವ ದಾರಿಯಲ್ಲಿನ  ತಪಾಸಣೆ ಮುಗಿದ ಕೂಡಲೇ, ದೇವನೊಬ್ಬನೇ ಆರಾಧನೆಗೆ ಅರ್ಹ ಎಂದು ವಿಶ್ವ ಕೇಳುವಂತೆ ಮೊಳಗಿಸಿ, ಸಮಾನತೆಯ ಕಹಳೆ ಊದಿದ ಮರಳುಗಾಡಿನ ನಿರಕ್ಷರಕುಕ್ಷಿ, ಸಂಪತ್ತು, ಕೀರ್ತಿ ನಶ್ವರ, ದೈವಭಕ್ತಿ, ಸನ್ನಡತೆಯೇ ಶಾಶ್ವತ ಎಂದು ಜಗಕ್ಕೆ ಹೇಳಿ ಕೊಟ್ಟ ಮಹಾ ಪ್ರವಾದಿಯ ಪ್ರೀತಿಯ ಪಟ್ಟಣದ ಕಡೆ ಕಾರು ಸಾಗುತ್ತಿದ್ದಂತೆ ನನಗೊಂದು ಕರೆ ಬಂದಿತು. ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ store assistant ನನ್ನು ಗುರುತು ಚೀಟಿ ಇಲ್ಲದೆ ತನ್ನ ರೂಮಿನ ಹೊರಗಿನ browsing center ಹತ್ತಿರ ಅಡ್ಡಾಡುತ್ತಿದ್ದ ಎಂದು ಪೊಲೀಸರು ಬಂಧಿಸಿದರು ಎಂದು ಸುದ್ದಿ. ಜೆಡ್ಡಾ ಬಿಟ್ಟು ತುಂಬಾ ದೂರ ಬಂದಿದ್ದರಿಂದ ನಾನು ನಮ್ಮ ಮಾನವ ಸಂಪನ್ಮೂಲ ವಿಭಾಗದ ಸೌದಿಗೆ ಫೋನಾಯಿಸಿ ವಿಚಾರಿಸಲು ಹೇಳಿದೆ. ಸೌದಿಯ ವಿವರಣೆಗೂ ಪೊಲೀಸರು ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಬಹಳಷ್ಟು ಮನವಿಯ ನಂತರವೇ ಆತನನ್ನು ಅವರು ಬಿಟ್ಟಿದ್ದು. ಹಿಡಿಯಲ್ಪಟ್ಟವನು ಮುಸ್ಲಿಂ ಮಾತ್ರವಲ್ಲ, ಪೊಲೀಸರು ಮರ್ಯಾದೆ ಕೊಡುವ, ಗೌರವಿಸುವ ವಿಶ್ವಾಸಿಗಳು ಬಿಡುವ  ದೊಡ್ಡ ಗಡ್ದವನ್ನೂ ಹುಲುಸಾಗಿ ಬೆಳೆಸಿದ್ದ. ಊಹೂಂ, ಚೀಟಿ ಇಲ್ಲವೋ ನಡಿ ಮಾವನ ಮನೆಗೆ ಎಂದರು ಪೊಲೀಸರು. ಧರ್ಮ, ಜಾತಿ ಎಲ್ಲಾ ಆಮೇಲೆ. ಈ ಗುರುತಿನ ಚೀಟಿಯ ನಿಯಮ ಬರೀ ವಿದೇಶೀಯರಿಗೆ ಮಾತ್ರವಲ್ಲ, ಸೌದಿ ಗಳೂ “ಬುತಾಕ” ಅಥವಾ “ಹವ್ವಿಯ್ಯ” ಎನ್ನುವ ಕಾರ್ಡನ್ನು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಹಣ ಪಾವತಿಸುವಾಗಲಾಗಲಿ, ಬೇರೆ ಯಾವುದೇ ಕಾರ್ಯಗಳಿಗೂ ಮೊದಲಿಗೆ ಕಾರ್ಡ್ ನ ದರ್ಶನ ಆಗಬೇಕು, ಇಲ್ಲದಿದ್ದರೆ ಕಾನೂನಿನ ದುರ್ದರ್ಶನ. ನಾನು ಮನೆಯಲ್ಲಿ ಮರೆತೆ, ಅತ್ತೆ ಮನೆಯಲ್ಲಿ ಬಿಟ್ಟು ಬಂದೆ ಹಾಗೆ ಹೀಗೆ ಎಂದು ಕತೆಗಳನ್ನ ನೇಯ್ದರೆ ಅವು ನಮ್ಮ ಕಿವಿಗಳಿ ಗೇ ಇಂಪು. ಕೇಳಿಸಿಕೊಳ್ಳುವವನ ಕಿವಿಗಲ್ಲ. ಎಷ್ಟೋ ಜನ ಸೌದಿಗಳು ಗೊಗರೆಯುವುದನ್ನು  ನೋಡಿದ್ದೇನೆ, ನಾನು ಕಾರ್ಡನ್ನು ಮರೆತು ಬಂದೆ, ನನ್ನ ಕೆಲಸ ಮಾಡಿ ಕೊಡು ಎಂದು. ಕೇಳುವವರು ಬೇಕಲ್ಲ.  ನಮ್ಮ ದೇಶದಲ್ಲೂ ಇಂಥ ಒಂದು ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು. ಎಷ್ಟೇ ಹಣ ಖರ್ಚಾದರೂ ಭಾರತದ ಪ್ರತೀ ಪೌರನಿಗೆ ಒಂದು ಗುರುತು ಚೀಟಿಯನ್ನು ಹೊಂದಿಸಲೇ ಬೇಕು.

 ಅಕ್ರಮವಾಗಿ ನಮ್ಮ ಗಡಿ ಹಾರಿ ಬರುವ ನೇಪಾಳಿ ಮತ್ತು ಇತರೆ ದೇಶಗಳ ಜನರನ್ನು ತಡೆಯಲು ಇದೇ ಮಾದರಿಯ ಕಾರ್ಡು ಮತ್ತು ತಪಾಸಣೆ ನಮಗಿರಬೇಕು. ಅದಕ್ಕೆ ತಗಲುವ ಖರ್ಚು ದುಂದು ಖರ್ಚಲ್ಲ.  ದೇಶದ ಗಡಿ, ಜನ ಸುರಕ್ಷಿತವಾಗಿರಬೇಕೆಂದರೆ ನಾವು ನಿಷ್ಟುರರಾಗಿರಬೇಕು. ನಮ್ಮ ಒಳ್ಳೆಯತನವನ್ನು, ಹೃದಯ ವೈಶಾಲ್ಯತೆಯನ್ನು  ದೇಶದ ಒಳಗೆ ನೆಲೆಸಿ ಕೊಂಡಿರುವ ಸಹ ಭಾರತೀಯರಿಗೆ ಮಾತ್ರ ಮೀಸಲಿಟ್ಟರೆ ಸಾಕು.

* ಕರಿಯರೇ, ಹೊರ ನಡೆಯುವಿರಾ?

ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದ ವಾಶಿಂಗ್ಟನ್ ಉಪನಗರದಲ್ಲಿ ಒಂದು “ವಾಲ್ ಮಾರ್ಟ್” ಮಳಿಗೆ. ೧೬ ವರ್ಷದ ಪೋರನೊಬ್ಬ ಮಳಿಗೆಗೆ ಹೋಗಿ ಅಲ್ಲಿಟ್ಟಿದ್ದ ಮೈಕನ್ನು ಹಿಡಿದು ಘೋಷಿಸಿದ, ಕರಿಯರೇ, ಮಳಿಗೆ ಬಿಟ್ಟು ಕೂಡಲೇ ಹೊರನಡೆಯಿರಿ ಎಂದು. ಈ ಒಂದು ಮಾತಿನಿಂದ ಇಡೀ ಮಳಿಗೆಯಲ್ಲಿದ್ದ ಗ್ರಾಹಕರು ಮಾತ್ರವಲ್ಲ, ಅದರೊಂದಿಗೆ ನಗರವೂ ದಿಗ್ಭ್ರಾಂತವಾಯಿತು. ಪೊಲೀಸರು ಬಂದರು ವಿಚಾರಿಸಲು, ಅಧಿಕಾರಿಗಳೂ ಬಂದರು, ಘಟನೆಯನ್ನು ಖಂಡಿಸಲು. ಇದು ವಿಶ್ವಕ್ಕೆ ಸಮಾನತೆಯನ್ನು ಬೋಧಿಸುವ ಹಿರಿಯಣ್ಣ ಅಮೆರಿಕೆಯ ಪರಿಸ್ಥಿತಿ. ಕರಿಯ ಅಧ್ಯಕ್ಷ ನಾದರೇನು, ಸೇನೆಯ ದಂಡನಾಯಕನಾದರೇನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾದರೇನು, ಹುಟ್ಟು ಗುಣ ಎಲ್ಲಿಂದ ಹೋಗಬೇಕು? ಈ ಹುಡುಗನ ಮಾತಿನಿಂದ ಹಿಟ್ಲರ್ ತನ್ನ ಸಮಾಧಿಯಲ್ಲಿ ಮಲಗಿ ಮುಸಿ ಮುಸಿ ನಗುತ್ತಿರಬೇಕು. ಅವನಿಗೂ ಕರಿಯರೆಂದರೆ ತಾತ್ಸಾರ ತಾನೇ? ಈ ಆಧುನಿಕ ಯುಗದಲ್ಲೂ ಬಿಳಿಯರಿಗೆ ಕರಿಯರನ್ನು ಸಮಾನತೆಯಿಂದ, ಗೌರವದಿಂದ ಕಾಣಲು ಕಷ್ಟವಾಗುತ್ತಿರುವುದು ವಿಪರ್ಯಾಸವೇ ಸರಿ.

ಸರಿ ಸುಮಾರು 1400 ವರ್ಷಗಳ ಹಿಂದಿನ ಮಾತು. ಬಿಲಾಲ್ ಇಥಿಯೋಪಿಯಾ ದೇಶದಿಂದ ಅರಬ್ ದೇಶಕ್ಕೆ ಬಂದ ಹದಿಹರೆಯದ ಜೀತದಾಳು. ಅಪ್ಪಟ ಕರಿಯ. ಪ್ರವಾದಿಗಳ ಸಮಾನತೆಯ ಸಂದೇಶ ಕೇಳಿ ಇಸ್ಲಾಂ ನ ದೀಕ್ಷೆ ಪಡೆಯುತ್ತಾನೆ. ಈ ಕಾರಣಕ್ಕಾಗಿ ಅವನ ಯಜಮಾನ ಬಹಳಷ್ಟು ಕಿರುಕುಳ ಕೊಡುತ್ತಾನೆ. ಇದ ನೋಡಿ ಪ್ರವಾದಿಗಳ ಸಹವರ್ತಿಯೊಬ್ಬರು ಬಿಲಾಲ್ ನನ್ನು ಖರೀದಿಸಿ ಜೀತದಿಂದ ವಿಮೋಚನೆಗೊಳಿಸುತ್ತಾರೆ. ಇದನ್ನು ಕಂಡ ಪ್ರವಾದಿಗಳ ಮತ್ತೊಬ್ಬ ಅನುಚರ ಉಮರ್ ಉದ್ಗರಿಸುತ್ತಾರೆ, “ನಮ್ಮ ಒಡೆಯ ಅಬು ಬಕರ್ ಮತ್ತೊಬ್ಬ “ಒಡೆಯ ಬಿಲಾಲ್” ನನ್ನು ವಿಮೋಚಿಸಿದರು” ಎಂದು. ಅಗರ್ಭ ಶ್ರೀಮಂತ, ಬಿಳಿ ವರ್ಣದ ಉಮರ್ ಕರಿಯ ಬಿಲಾಲ್ ರನ್ನು ಸಂಬೋಧಿಸಿದ್ದು “ಒಡೆಯ” ಎಂದು. ಇಸ್ಲಾಂ ಅರೇಬಿಯಾದಲ್ಲಿ ಸ್ಥಾಪಿತವಾದ ನಂತರ ಪವಿತ್ರ ಕಾಬಾ ಭವನದ ಮೇಲೆ ನಿಂತು ಪ್ರಾಥನೆಯ ಕರೆಯನ್ನು ನೀಡಲು ಬಿಲಾಲ್ ರನ್ನು ಪ್ರವಾದಿಗಳು ಆಮಂತ್ರಿಸಿದಾಗ ಇಡೀ ಅರೇಬಿಯಾ ಕೆಂಡಾ ಮಂಡಲ. ಒಬ್ಬ ಕರಿಯ, ಅದೂ ಮಾಜಿ ಜೀತದಾಳು ಪವಿತ್ರ ಕಾಬಾದ ಮೇಲೆ ನಿಲ್ಲುವುದು ಎಂದರೇನು ಎಂದು ಸಿಡುಕುತ್ತಾರೆ. ಆಗ ಪ್ರವಾದಿಗಳು ಹೇಳುತ್ತಾರೆ, ಈ ದಿನದೊಂದಿಗೆ ಹುಟ್ಟಿನಿಂದ ಬಂದ ಎಲ್ಲಾ ವಿಶೇಷ ಸವಲತ್ತುಗಳು, ಮರ್ಯಾದೆಗಳು, ಹಕ್ಕುಗಳು ನಿಂತವು, ಮಾನವರೆಲ್ಲರೂ ಸಮಾನರು ಮತ್ತು ಎಲ್ಲರೂ ಆ ಮಹಾ ಪ್ರಭು ಸೃಷ್ಟಿಸಿದ ಆದಮನ ಮಕ್ಕಳು ಎಂದು ಸಾರುತ್ತಾರೆ.

ಘಟನೆಯ ನಂತರ ಹುಡುಗ ಎಳೆ ಪ್ರಾಯದವನು ಎಂದು ಪೊಲೀಸರು ಅವನ ಹೆತ್ತವರಿಗೆ ಅವನನ್ನು ಒಪ್ಪಿಸಿ ಅವನನ್ನು ಇನ್ನೊಮ್ಮೆ juvenile court ಗೆ ಹಾಜರುಪಡಿಸಲು ನಿರ್ಧರಿಸಿದರು. ಎಳೆ ಪ್ರಾಯದ ಹುಡುಗನಿಗೆ ಇಂಥ ದೊಡ್ಡ ಮಾತನ್ನು ಹೇಳಿಕೊಟ್ಟವರಾರೋ? ಗೌಪ್ಯತೆ ಕಾಪಾಡುವ ಉದ್ದೇಶದಿಂದ ಹುಡಗನ ಹೆಸರನ್ನಾಗಲಿ, ಅವನು ಬಿಳಿಯನೆಂದಾಗಲಿ ಪೊಲೀಸರು ಮಾಹಿತಿ ನೀಡಲಿಲ್ಲ. ಒಟ್ಟಿನಲ್ಲಿ ಅಮೆರಿಕೆಯ ಬಿಳಿ ನಗುವಿನ ಬಹಿರಂಗದ ಹಿಂದೆ ಅಡಗಿದೆ ಕರಾಳ ಅಂತರಂಗ.

* ತಿಳಿವಳಿಕೆಗೆ ತಿಳಿಸಾರು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.   

ಸುಪ್ರಸಿದ್ಧ ತತ್ವಜ್ಞಾನಿ ಕಾರ್ಲ್ ಜಂಗ್ ಹೇಳುತ್ತಾನೆ, ಹೃದಯದೊಳಕ್ಕೆ ನಾವು ಇಣುಕಿ ನೋಡಿಕೊಂಡಾಗಲೇ ನಮ್ಮ ದೃಷ್ಟಿ ತಿಳಿಯಾಗುವುದು ಎಂದು. ಯಾರು ತಮ್ಮ ಹೃದಯದ ಹೊರಕ್ಕೆ ನೋಡುತ್ತಾರೋ ಅವರು ಕನಸನ್ನು ಕಾಣುವರು, ಮತ್ತು ಯಾರು ತಮ್ಮ ಹೃದಯದೊಳಕ್ಕೆ ಇಣುಕಿ ನೋಡುತ್ತಾರೋ ಅವರು ಎಚ್ಚೆತ್ತುಕೊಳ್ಳುವರು. ಇಷ್ಟೆಲ್ಲಾ ಸರ್ಕಸ್ ಮಾಡಲು ನಮಗಿದೆಯೇ ವ್ಯವಧಾನ, ಸಮಯ? ದಿನವೂ ನಮ್ಮ ಚಟುವಟಿಕೆಗಳ ಬಗ್ಗೆ ನಾವು ತೆಗೆದುಕೊಳ್ಳಬೇಕು stock taking. taking stock of the situation ಅಂತಾರಲ್ಲ ಹಾಗೆ, ನಮ್ಮ ಅಂತರಂಗ ಬಹಿರಂಗದ stock taking.  ಸೂಫಿ ಸಂತ ರೊಬ್ಬರು ಈ ಮಾತನ್ನು ಹೇಳುತ್ತಾರೆ, ಎಂದಿಗೂ ಅಹಂಕಾರದಿಂದ ಬೇರೆಯವರ ಮೇಲೆ ಸವಾರಿ ಮಾಡಬೇಡ, ಹಾಗೂ ನಿನ್ನ ಅಡಿಯಾಳುಗಳ ಮೇಲಂತೂ ನಿನ್ನ ದರ್ಪ ಬೇಡವೇ ಬೇಡ. ನಿಮ್ಮಲ್ಲಿ ಅಂತರಂಗ, ಬಹಿರಂಗ ಶುದ್ಧಿಯಿಲ್ಲದಿದ್ದರೆ ಸೃಷ್ಟಿ ಕರ್ತನ ಬಳಿ ನೀವು ಸಲ್ಲುವುದಿಲ್ಲ.

ನಾವು ತಿಂಡಿಗೋ  ಊಟಕ್ಕೋ ಹೋಗುವ ರೆಸ್ಟುರಾಂಟ್ ನಲ್ಲಿ ಕೆಲಸಮಾಡುವ ಮಾಣಿ (ವೇಟರ್) ನ ಹತ್ತಿರದ ನಮ್ಮ ವರ್ತಿಸುವ ರೀತಿಯನ್ನು ನೋಡೋಣ. ಮುಖ ಸಿಂಡರಿಸಿಕೊಂಡು ಆರ್ಡರ್ ಕೊಡುವ ನಮಗೆ ಇಷ್ಟು ಜ್ಞಾನವೂ ಇರುವುದಿಲ್ಲ ಆರ್ಡರ್ ತೆಗೆದುಕೊಂಡು ಹೋಗಿ ಅಡುಗೆ ಮನೆಯಿಂದ ಆತ ನಮ್ಮ ಮುಂದೆ ತಂದಿಡುವುದು ನಾವು ಸೇವಿಸುವ ಆಹಾರವನ್ನು ಎಂದು. ಮಾಣಿ ಮಾಡುತ್ತಿರುವುದು ಅತ್ಯಂತ ಗೌರವಾರ್ಹವಾದ ಕೆಲಸ ಎಂದು ನಮಗೆಂದಾದರೂ ತೋಚಿದ್ದಿದೆಯೇ? ಅವನನ್ನು ಕೆಲಸಕ್ಕಿಟ್ಟ ಯಜಮಾನನಿಂದ ಹಿಡಿದು, ಅಡುಗೆ ಭಟ್ಟನವರೆಗೆ  ನಮ್ಮನೂ ಸೇರಿಸಿ ಅವನ ಪಾಡು ನೋಡಿ. ಹರಿದು ತಿನ್ನುವ ತೋಳಗಳು. ಮರುಕ ತೋರುವುದಿಲ್ಲವೇ? ಆದರೆ ಈ ರೀತಿಯ ನಡವಳಿಕೆ ನಮ್ಮ ದೇಶದಲ್ಲಿ ಅಥವಾ ದಕ್ಷಿಣ ಏಶಿಯಾದ ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ಮುಂದುವರಿದ ದೇಶಗಳಲ್ಲಿ ಚೆನ್ನಾಗಿ ಕಲಿತವರು ಮಾಣಿಯ ಕೆಲಸ ಮಾಡುವುದರಲ್ಲಿ ಯಾವುದೇ ಅವಮಾನವನ್ನೂ ಕಾಣುವುದಿಲ್ಲ. ಏಕೆಂದರೆ ಮಾಣಿಯ ಕೆಲಸ ಹಲವು ಗುಣ ವೈಶಿಷ್ಟ್ಯ ಗಳನ್ನು ನಮಗೆ ಕಲಿಸುತ್ತದೆ. ಯಾವ ರೀತಿ ಅತಿಥಿಯನ್ನು ಬರಮಾಡಿಕೊಳ್ಳಬೇಕು, ಉಪಚರಿಸಬೇಕು, ಅವರಿಗಿಷ್ಟವಾದ ಆಹಾರದೊಂದಿಗೆ ಅವರನ್ನು ಹೇಗೆ  ಸತ್ಕರಿಸಬೇಕು, ಅವರೊಡನೆ ಯಾವ ರೀತಿ ವರ್ತಿಸಬೇಕು…..ಇತ್ಯಾದಿ. ಹೀಗಿರುವಾಗ ನಮಗೆ ಈ ಉದ್ಯೋಗದ ಬಗ್ಗೆ ತಾತ್ಸಾರ. ನಮ್ಮ ಸಂಸ್ಕಾರವೇ ಯಜಮಾನಿಕೆಯ ಸಂಸ್ಕಾರ ನೋಡಿ. ಕೈಯ್ಯಲ್ಲಿ ಒಂದಿಷ್ಟು ಕಾಸು ಓಡಾಡುತ್ತಿದ್ದರೆ ನೆಲ ಕಾಣುವುದಿಲ್ಲ ನಮಗೆ. ಯಜಮಾನ ಎಂದರೆ ಮುಖ ಗಂಟಿಕ್ಕಿಕೊಂಡಿರಬೇಕೆಂದು ಸಮಾಜದ ಅಲಿಖಿತ ನಿಯಮ. ನಾವು ಯಾವ ರೀತಿ ಇವರೊಂದಿಗೆ ವರ್ತಿಸುತ್ತೇವೆಯೋ ಅದೇ ರೀತಿಯೇ ನಮ್ಮ ಮಕ್ಕಳೂ ನಮ್ಮನ್ನು ಅನುಕರಿಸುವುದು.

ಸಂಪತ್ತು ಸ್ಥಿರವಲ್ಲ. ಅಗರ್ಭ ಶ್ರೀಮಂತರು ಯಾವುದಾದರೂ ಒಂದು ಕಾರಣಕ್ಕೆ ತಮ್ಮ ಸಂಪತ್ತನ್ನೆಲ್ಲಾ ಕಳೆದು ಕೊಂಡು ಬೀದಿಗೆ ಬಂದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ೧೯೯೦ ರಲ್ಲಿ ಇರಾಕಿನ ಆಗಿನ ಅಧ್ಯಕ್ಷ ಸದ್ದಾಮ್ ಪಕ್ಕದ ಪುಟ್ಟ ರಾಷ್ಟ್ರ ಕುವಿತನ್ನು ಆಕ್ರಮಿಸಿ ಅದು ತನ್ನ ೧೯ ನೆ ಪ್ರಾಂತ್ಯ ವೆಂದು ಘೋಷಿಸಿ ವಿಶ್ವವನ್ನೇ ದಿಗಿಲುಗೊಳಿಸಿದ. ರಾತ್ರೋ ರಾತ್ರಿ ಕುವೈತ್ ನ ಅರಸ ದೇಶ ಬಿಟ್ಟು ಹೆಲಿಕಾಪ್ಟರ್ ನಲ್ಲಿ ಸೌದಿ ಗೆ ಬಂದಿಳಿದು ಆಶ್ರಯ ಬೇಡಿದ. ವಿಶ್ವದ ಅಗರ್ಭ ಶ್ರೀಮಂತ ರಲ್ಲಿ ಒಬ್ಬನಾಗಿದ್ದ ಅರಸ “ಅಲ್-ಸಬಾ” ಕೆಲವೇ ಘಂಟೆಗಳಲ್ಲಿ ಎಲ್ಲವನ್ನೂ ಕಳೆದು ಕೊಂಡ. ಅಲ್ಲಿಯವರೆಗೂ ಕುವೈತ್ ನ ಹಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಿದೇಶಿ ವಿನಮಯ ಹೊಂದಿತ್ತು. ಈ ಘಟನೆಯ ನಂತರ ಕುವೈತ್ ನ ಹಣಕ್ಕೆ ವಿಶ್ವದ ಅತ್ಯಂತ ಬಡ ರಾಷ್ಟ್ರದ ಹಣದ ಮುಂದೆ ಯಾವ ಬೆಲೆಗೂ ಬರದೇ ಹೋಯಿತು. ಕುವೈತಿ ನೋಟುಗಳು ಬೀದಿಗಳಲ್ಲಿ ಚೆಲ್ಲಾಟ, ಡ್ರಾ ಆದ ನಂತರ ಗೋತಾ ಹೊಡೆದ ಲಾಟರಿ ಟಿಕೆಟುಗಳು ರಸ್ತೆಯ ಮೇಲೆ ದಿಕ್ಕಾ ಪಾಲಾದಂತೆ. ತನ್ನ ದೇಶವನ್ನು ಮರಳಿ ಕೊಡಿಸುವಂತೆ ಸರಕಾರಗಳನ್ನು ಒತ್ತಾಯಿಸಲು ವಿಶ್ವದ ರಾಜಧಾನಿಗಳನ್ನು ಅಲೆದ, ಗೋಗರೆದ. ನೋಡಿ, ಕೇವಲ ಕೆಲವೇ ಘಂಟೆಗಳ ವಿದ್ಯಮಾನ ತಂದ ಅವಸ್ಥೆ.

ಈ ಅರಸ (ಮಧ್ಯ ಪ್ರಾಚ್ಯದ ಎಲ್ಲ ಅರಸರ ಕತೆಯೂ ಇದೇ) ತಾನು ಹೋಗುವ ಕಡೆಯೆಲ್ಲಾ ಅವನದೇ ಖಾಸಗಿ ಹೆಲಿ ಪ್ಯಾಡು, ಅರಮನೆಗಳು, ರೋಲ್ಲ್ಸ್ ರಾಯ್ಸ್ ಕಾರುಗಳು. ಧಿಡೀರನೇ ಎಲ್ಲವನ್ನೂ – ರಾಜ್ಯ, ಕೋಶ, ಪದವಿ, ಪೀಠ – ಕಳೆದುಕೊಂಡು ಬೀದಿಯಲ್ಲಿ ಅಸಹಾಯಕನಾಗಿ ತಲೆ ಮೇಲೆ ಕೈ ಹೊತ್ತು ಕೂರುವ ಬೇಡುವವನ ಪರಿಸ್ಥಿಗೆ ಬಂದು ಬಿಟ್ಟ. ಸಂಪತ್ತಿನ ಅಹಂಕಾರದಿಂದ ಕುವೈತಿ ಅರಸ ಒಂದು ಸಭೆಯಲ್ಲಿ ಸದ್ದಾಮನನ್ನು ಹೀನಾಯವಾಗಿ ನಡೆಸಿಕೊಂಡ, ಆದ್ದರಿಂದ ಸದ್ದಾಮ್ ಈ ಶಿಕ್ಷೆ ನೀಡಿದ ಎನ್ನುವವರೂ ಇದ್ದಾರೆ. ಅದೇನೇ ಇರಲಿ ಕೆಲ ತಿಂಗಳ ಕಾಲ ಅವನು ಬೀದಿ ಪಾಲಾದದ್ದು ವಾಸ್ತವವೇ.      

ಒಬ್ಬ ವ್ಯಕ್ತಿ ಅಸಹಾಯಕನಾಗಿ ಬೀದಿ ಬದಿಯ ಕಟ್ಟೆಯ ಮೇಲೆ ತಲೆಯನ್ನು ತನ್ನ ಕೈಗಳಲ್ಲಿ ಹೊತ್ತು ಅಳುತ್ತಾ ಕುಳಿತಿರುತ್ತಾನೆ. ದಾರಿ ಹೋಕನೊಬ್ಬ ಇದನ್ನು ಕಂಡು ಕನಿಕರ ಪಟ್ಟು ಅಲ್ಲೇ ಹತ್ತಿರದ ಹೂವಿನ ಅಂಗಡಿಗೆ ಹೋಗಿ ಒಂದು ಹೂವಿನ ಗುಚ್ಚವನ್ನು ಖರೀದಿಸಿ ಆ ವ್ಯಕ್ತಿಗೆ ಕೊಟ್ಟು, take heart my friend, life is still good, Lord will help you ಎಂದು ಸಾಂತ್ವನದ ಮಾತುಗಳನ್ನು ಆಡಿ ಹೋಗುತ್ತಾನೆ. ಈ spontaneous gesture ಆ ನೊಂದ ವ್ಯಕ್ತಿಗೆ ದೊಡ್ಡ ಅಸರೆಯನ್ನೇ ನೀಡುತ್ತದೆ. Dont sweat over small things (ಚಿಕ್ಕ ವಿಷಯಗಳ ದೊಡ್ಡದು ಮಾಡುವುದು ಬೇಡ) ಎಂದು ಹೇಳುವುದಿದೆ. ಆದರೆ ಇಂಥ ಸನ್ನಿವೇಶಗಳಲ್ಲಿ ಚಿಕ್ಕ- ಚಿಕ್ಕ, ಪುಟ್ಟ- ಪುಟ್ಟ, ಹೃದಯವನ್ನು ಅರಳಿಸುವ ಚಮತ್ಕಾರಗಳನ್ನು ನಾವು ಮಾಡಲು, ಪ್ರದರ್ಶಿಸಲು ತೊಡಗಿದರೆ ನಮ್ಮ worth ಕೂಡಾ ಚಮತ್ಕಾರಗಳನ್ನು ಸಾಧಿಸುತ್ತದೆ. ಈ ತೆರನಾದ ಚಮತ್ಕಾರಗಳನ್ನು ಅನಾವರಣ ಮಾಡಲು ನಮಗಿದೆಯೇ ವ್ಯವಧಾನ? where is time? we are in hurry. ಮೇಲೆ ಕೂತ, ನಮ್ಮ ನಾಗಾಲೋಟ ಗಮನಿಸುತ್ತಿರುವ ಆ “ಹರಿ” ನಮ್ಮ ಆಕಾಂಕ್ಷೆಗಳು ಪೂರ್ತಿಯಾಗುವ ಮುನ್ನ ನಮ್ಮನ್ನು ಕರೆಸಿಕೊಳ್ಳದಿರಲಿ.

ಒಬ್ಬ ವ್ಯಕ್ತಿ, ಒಬ್ಬನ ಬಳಿ ಹೋಗಿ ೧೦೦ ಡಾಲರ್ ನ ಚಿಲ್ಲರೆ ಕೇಳುತ್ತಾನೆ. ದೊಡ್ಡ ಮುಗುಳ್ನಗುವಿನೊಂದಿಗೆ ಓಹ್ ಸ್ಸಾರಿ, ನನ್ನಲ್ಲಿದ್ದಿದ್ದರೆ ಖಂಡಿತ ನಿನಗೆ ಕೊಡುತ್ತಿದ್ದೆ ಎಂದು ಹೇಳಿದಾಗ ಚಿಲ್ಲರೆಗೆ ಬಂದ ವ್ಯಕ್ತಿ ಅವನ ಮುಗುಳ್ನಗುವಿಗೆ ಮಾರು ಹೋಗಿ ನನಗಿನ್ನು ಚಿಲ್ಲರೆಯ ಅವಶ್ಯಕತೆಯಿಲ್ಲ ನಿನ್ನ ಆ ದೊಡ್ಡ, ಮನಃಪೂರ್ವಕವಾಗಿ ಬಂದ ಮುಗುಳ್ನಗುವೇ ನನಗೆ ಸಿಕ್ಕ ಚಿಲ್ಲರೆ, you made my day ಎಂದು ವಂದಿಸಿ ಹೋಗುತ್ತಾನೆ. ನೋಡಿ ಒಂದೇ ಒಂದು ನಗು, ಪುಕ್ಕಟೆಯಾಗಿ ದೈವದತ್ತವಾಗಿ, ulterior motive ಇಲ್ಲದೆ ಬಂದ, ಸೂರ್ಯನ ರಶ್ಮಿ ಗಳಂಥ ಬೆಚ್ಚಗಿನ ಮುಗುಳ್ನಗು. ಮುಖ ಸಿಂಡರಿಸಲು ನೂರಾರು ಸ್ನಾಯುಗಳು ಕೆಲಸ ಮಾಡುತ್ತವಂತೆ. ಮಂದಾಹಸಕ್ಕೆ ಕೆಲವೇ ಸ್ನಾಯುಗಳು.  

ಬಾಲಿವುಡ್ ತಾರೆಯೊಬ್ಬ (ಅಮೀರ್ ಖಾನ್ ಇರಬೇಕು) ಹೊರಗೆ ರೆಸ್ಟುರಾಂಟ್ ಗೆ ಹೋದರೆ ತಾನು  ಆರ್ಡರ್ ಮಾಡಿದ ಆಹಾರ ಹೆಚ್ಚು ಎಂದು ತೋರಿದರೆ ಅದನ್ನು ಹಾಳು ಮಾಡದೆ ಮನೆಗೆಂದು (take home) ಕಟ್ಟಿಸಿಕೊಂಡು ಹೊರಗೆಲ್ಲಾದರೂ ಕೂತು ಬೇಡುವವರಿಗೆ ಕೊಡುತ್ತಾನಂತೆ. ನಾವು? ಹೊಟ್ಟೆ ಬಿರಿಯುವ ಹಾಗೆ ತಿಂದು ಉಳಿದದ್ದನ್ನು ನಾಳೆ ಬೆಳಿಗ್ಗೆಗೋ, ಮಧ್ಯಾಹ್ನಕ್ಕೋ ಆಯಿತು ಎಂದು ಕಟ್ಟಿಸಿಕೊಂಡು ಹೋಗುತ್ತೇವೆ. ನಾಳೆಯ ಬಗ್ಗೆ ಅಷ್ಟೊಂದು ಖಾತರಿ. ಇಸ್ತ್ರಿ ಪೆಟ್ಟಿಗೆ ಒಂದು ವರ್ಷದ ಖಾತರಿಯೊಂದಿಗೆ ಬರುತ್ತದೆ, ಆದರೆ ಮನುಷ್ಯನ ಜೀವಕ್ಕೆ ಒಂದು ಸೆಕೆಂಡಿನ ಖಾತರಿಯೂ ಇಲ್ಲ ಎಂದು ಬಹುತೇಕ ಜನರಿಗೆ, ಬಹಳಷ್ಟು ಸಮಯ ಅರಿವೇ ಇರುವುದಿಲ್ಲ.     

ಮಾರುಕಟ್ಟೆಗಳ ತಿಕ್ಕಲುತನ ಮತ್ತು ಹೊಸ ಅಂತರ್ಜಾಲ ತಂತ್ರಜ್ಞಾನದ development ಗಳಿಂದ ಬಹಳಷ್ಟು ಜನ ಹಣ ಬಾಚಿಕೊಳ್ಳ ತೊಡಗಿದರು. ಸುಲಭವಾಗಿ ಬಂದ ಹಣವನ್ನು ಯಾವ ರೀತಿ ಬಳಸಬೇಕೆಂದು ಅರಿಯದೆ ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮಾರುಕಟ್ಟೆಯಲ್ಲಿ ಬೆಲೆಗಳು ಸಾಮಾನ್ಯ ಜನರಿಗೆ ಎಟುಕದಂತೆ ಮಾಡಿದರು. ಕಳೆದ ವರ್ಷದ ಆರ್ಥಿಕ ಸಂಕಷ್ಟದಲ್ಲಿ ಸಾಫ್ಟ್ ವೇರ್ ಕಂಪೆನಿಗಳು ಉದ್ಯೋಗಿಗಳಿಗೆ ಸೋಡಾ ಚೀಟಿ ಕೊಟ್ಟಾಗ ಸಂತಸ ಪಟ್ಟವರೂ ಇದ್ದಾರೆ. ದೊಡ್ಡ ದೊಡ್ಡ ಸಂಬಳ ತೆಗೆದು ಕೊಳ್ಳುವ ಈ ಉದ್ಯೋಗಿಗಳು ವರ್ತಕ ಹೇಳಿದ ಬೆಲೆ ಕೊಟ್ಟು ಸಾಮಾನು ಕೊಂಡರು. ಕಾಲದ ಸವಾಲನ್ನು ಎದುರಿಸಿದ “ಚೌಕಾಸಿ” ದೂರ ಉಳಿಯಿತು. what? haggling for bargain? NO!  ಪ್ರಳಯ ಡಿಕ್ಲೇರ್ ಆಯ್ತೇನೋ ಎನ್ನಬೇಕು, ಆ ತೆರನಾದ frantic shopping spree. baskin’ robbins, cafe coffee day, pub, pizza hut, glittering mall ಇವರ ತಾಣಗಳು.  ಇದು ಸಮಾಜದ ಕೆಲ ವರ್ಗಗಳ, ಕಡಿಮೆ ಸಂಬಳ ಪಡೆಯುವ, ಒಂದೊಂದು ರೂಪಾಯಿಯನ್ನೂ, ಪೈಸೆಯನ್ನೂ ಜೋಪಾನವಾಗಿ ಕಾಪಾಡಿ, ಬೇಕಿದ್ದ ಕಡೆ ಮಾತ್ರ ಖರ್ಚು ಮಾಡುವ ಜನರನ್ನು ಬಾಧಿಸಿ ಅವರು ಮನಸಾರೆ ಶಪಿಸುವಂತಾಯಿತು.

ಬದುಕಿನ ಪ್ರತಿ ಘಟ್ಟಗಳಲ್ಲೂ ನಮಗೆ ಸವಾಲುಗಳಿರುತ್ತವೆ. ಧನದಲ್ಲೂ, ಆರೋಗ್ಯದಲ್ಲೂ, ಅಧಿಕಾರದಲ್ಲೂ ಸವಾಲುಗಳಿರುತ್ತವೆ. ಇವನ್ನು ಸಮರ್ಥವಾಗಿ ಎದುರಿಸಲು ವಿಫಲರಾದಾಗ ಉಂಟಾಗುತ್ತದೆ ಕ್ಲೇಶ, ತರುತ್ತದೆ ಮತ್ಸರ. ಆದರೆ ಇಂಥ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಹೊರಬರಲು, ನಮಗೆ ವಿದೇಶೀ ಗುರುವಿನ ಅಗತ್ಯ ಬರಬಹುದೇ? ಬರಕೂಡದು. ಈ ವಿದೇಶಿ ಗುರು ಹೇಳಿಕೊಡುವುದು ಪೂರ್ವ ದಿಕ್ಕಿನ ಆದರ್ಶಗಳನ್ನು. ನಮ್ಮ ಅಜ್ಜ ಅಜ್ಜಿಯಂದಿರು ನಮಗೆ ಹೇಳಿ ಕೊಟ್ಟ ನೀತಿ ಕಥೆಗಳನ್ನು. ಸೂಫಿ ವರ್ಯರು, ಮುನಿಗಳು ಹೇಳಿದ ಸತ್ಯವನ್ನು. ನಮ್ಮ ಆದರ್ಶಗಳನ್ನು ನಮಗೆ ಹೇಳಿಕೊಡಲು ನಮ್ಮಿಂದ ಫೀಸನ್ನೂ ಪೀಕುತ್ತಾನೆ, ತನ್ನ ಮೂರನೇ ವಿವಾಹ ವಿಚ್ಛೇದನಕ್ಕಾಗಿ ಹೋರಾಡಿ ಬಂದ, ಸೂಟು ಬೂಟು ತೊಟ್ಟ, ತಲೆಗೆ ಫಳ, ಫಳ ಹೊಳೆಯುವ “ಜೆಲ್” ಹಚ್ಚಿಕೊಂಡ ವಿದೇಶೀ ಗುರು. ದೇಶೀ ಆದರ್ಶಗಳ ವಿದೇಶೀ ಗುರು.      

ಸರ್ವಿಸ್ ಗೆಂದು ಬಿಟ್ಟಿದ್ದ ನನ್ನ ಕಾರನ್ನು ತರಲು ಟ್ಯಾಕ್ಸಿ ಯಲ್ಲಿ ಹೋಗುವಾಗ ಚಾಲಕ ಹೇಳಿದ, ಈ ಅರಬರಿಗೆ ಹಣದ ಮದ ಸರಿಯಾಗಿ ಹತ್ತಿದೆ, ತಾವೇನು ಮಾಡುತ್ತಿದ್ದೇವೆ ಎಂದು ತಮಗೆ ಗೊತ್ತಿರುವುದಿಲ್ಲ. “ಕ್ಯಾಮೆಲ್ ಟು ಕ್ಯಾಮ್ರೀ” transformation ಕಣ್ಣಿವೆ ಇಕ್ಕುವಷ್ಟರಲ್ಲಿ ಆಯಿತು ಎಂದು. ಇದರರ್ಥ ಒಂಟೆ ಸವಾರಿ ಮಾತ್ರ ಮಾಡಿ ಗೊತ್ತಿದ್ದ ಅರಬ್ ಕ್ಯಾಮ್ರೀ (ದುಬಾರಿ ಕಾರು) ಕಾರಿನಲ್ಲಿ ಓಡಾಡ ತೊಡಗಿದಾಗ ಆದ confusion.

yes, money brings confusion, when priorities are lost. ಈ ಕಹಿ ಸತ್ಯ ನಮಗೆ ಅನ್ವಯಿಸದೆ ಇರಲಿ.

* ಅಪಹರಣ, ಅತ್ಯಾಚಾರ, ನಂತರ ವಿವಾಹ

ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ತನ್ನ ವಿವಾಹ ದ ದಿನವನ್ನು ಒಂದು ಹನಿ ಕಣ್ಣೀರಿನೊಂದಿಗೆ ಸ್ಮರಿಸುತ್ತಾಳೆ. ಆದರೆ ಇಥಿಯೋಪಿಯ ದೇಶದಲ್ಲಿ ಓರ್ವ ಹೆಣ್ಣಿನ ಈ ಕಣ್ಣೀರು ಬೇರೆಯದೇ ಆದ ವ್ಯಥೆಯನ್ನು ಹೇಳುತ್ತದೆ. “ನುರಾಮೆ ಅಬೇದೋ” ತನ್ನ ಗುಡಿಸಿಲಿನಲ್ಲಿ ಕುಳಿತು ತಾನು ಪತ್ನಿಯಾದ ದಿನವನ್ನು ನೆನೆಸುತ್ತಾಳೆ. ಕನ್ಯಾಪಹರಣ ದ ರಾಜಧಾನಿಯಾದ ಗುಡ್ಡ ಗಾಡಿನಲ್ಲಿ ಆಕೆಯ ವಾಸ. ೪೦ ವರ್ಷಗಳ ಯಾತನೆಯನ್ನು ಆಕೆ ಹೇಳಲು ಹೊರಟರೆ ಆಕೆ ಯನ್ನು ಬಂಧಿಸಿದವರು ಅದಕ್ಕೆ ಆಸ್ಪದ ಕೊಡುವುದಿಲ್ಲ; ಒಳ್ಳೆಯ ಹೆಣ್ಣುಮಕ್ಕಳು ಈ ರೀತಿ ಮಾತನಾಡುವುದಿಲ್ಲ ಎಂದು. ಆದರೂ ಆಕೆ ತನ್ನ ವ್ಯಥೆಯ ಗಾಥೆಯನ್ನು ನಿಧಾನವಾಗಿ ಹೇಳುತ್ತಾಳೆ, ಆಗಾಗ ತನ್ನ ಒಡಲಿನಿಂದ ತನಗರಿವಿಲ್ಲದೆ ಬರುವ ನಗುವಿನೊಂದಿಗೆ. 

ತುಳಿತಕ್ಕೊಳಗಾದ ಬಡವನ ಮತ್ತೊಂದು ಅಸ್ತ್ರ ನಗು. ಒಣ ನಗು.  

ಮಲಗಿದ್ದ ನುರಾಮೆ ಎಚ್ಚರಗೊಂದಿದ್ದು ಅಬ್ಬರದ ಗಲಾಟೆ ಕೇಳಿ. ಆಕೆಯ ಕುಟುಂಬದಲ್ಲಿ ಗಂಡಸರ ಸಂಖ್ಯೆ ೧೦ ಅಥವಾ ಹೆಚ್ಚು. ಆಕೆಯ ತಂದೆಯ ಎದುರಿನಲ್ಲಿ ಅವರೆಲ್ಲಾ ಅರಚುತ್ತಿದ್ದರು. ವಿದ್ಯುಚ್ಚಕ್ತಿ ಇಲ್ಲದ ಕಗ್ಗತ್ತಲ ರಾತ್ರಿ ಆಕೆಗೆ ಎಲ್ಲವೂ ಮಸುಕು. ಆಕೆ ಕೇವಲ ೮ ವರ್ಷ ದ ಪೋರಿಯಾದರೂ ಅಲ್ಲಿ ಏನು ನಡೆಯುತ್ತಿದೆ ಎಂದು ಆಕೆ ಶಂಕಿಸಿದಳು.

ಆಕೆ ಜನ ಪಿಸುಗುಟ್ಟುವುದನ್ನು ಕೇಳಿದ್ದಳು, ಹುಡುಗಿ ಪ್ರಾಯಕ್ಕೆ ಬಂದಾಗ ಗಂಡು ಆಕೆಯನ್ನು ಬಲಾತ್ಕಾರ ಮಾಡಿ ನಂತರ ತನ್ನ ಸೇವೆಗಾಗಿ ಆಕೆಯನ್ನು ಇಟ್ಟುಕೊಳ್ಳುತ್ತಾನೆಂದು. ಜೀವನ ಪೂರ್ತಿ ಆಕೆ ಅವನ ಸೇವಕಳು. “ಅದು ಇಲ್ಲಿನ ಸಂಸ್ಕೃತಿ” ಆದರೆ ಖಂಡಿತ ಅವಳ ಸಂಸ್ಕೃತಿಯಾಗಿರಲಿಲ್ಲ. ಬೇರೆಲ್ಲಾ ಹುಡಗಿಯರ ಹಾಗೆ ಆಕೆಗೂ ಅದು ಇಷ್ಟವಿರಲಿಲ್ಲ. ಬಂದವರಿಂದ ತಪ್ಪಿಸಿಕೊಳ್ಳಲು ಅರಚುತ್ತಾ ಗುಡಿಸಿಲಿನಿಂದ ಹೊರಗೋಡಿ ಮರದ ಹಿಂದೆ ಅವಿತುಕೊಂಡಳು. ಆದರೂ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ತನ್ನನ್ನು ನೋಡಿಬಿಟ್ಟ.

ಆಕೆಯನ್ನು ಎಳೆದು ಕೊಂಡು ತನ್ನ ಮನೆಗೊಯ್ದ ಆ ವ್ಯಕ್ತಿ ಅವನ ಕುಟುಂಬದವರ ಮುಂದೆಯೇ ಆಕೆಯನ್ನು ಬಲಾತ್ಕಾರ ಮಾಡಿ ಮರು ದಿನ ಮದುವೆಗೆಂದು ಕರೆದೊಯ್ದು ದಿಗ್ಭ್ರಮೆಗೊಂಡ ಅವಳಿಂದ ಕೆಲವೊಂದು ಕಾಗದಗಳಿಗೆ ಸಹಿಯನ್ನು ಹಾಕಿಸಿ ಕೊಳ್ಳುತ್ತಾನೆ. ಸಹಿ ಮಾಡುತ್ತಾ ಆಕೆ ಅಲ್ಲಿಂದ ಹೇಗೆ ಪಾರಾಗುವುದರ ಬಗ್ಗೆ ಯೋಚಿಸುತ್ತಾಳೆ.  

ಮೂರು ದಿನಗಳ ನಂತರ ತನ್ನನ್ನು ಆತ ತನ್ನನ್ನು ಒಂಟಿಯಾಗಿ ಬಿಟ್ಟ ಕೂಡಲೇ ಬರಿಗಾಲಿನಲ್ಲಿ ಆಕೆ ಓಡುತ್ತಾಳೆ ತನ್ನ ಗುಡಿಸಿಲಿಗೆ, ತನ್ನ ಬದುಕಿಗೆ, ತನ್ನ ಬಾಲ್ಯದ ದಿನಗಳಿಗೆ. ಸಂತಸದ ಕಣ್ಣೀರಿಡುತ್ತಾ ಗುಡಿಸಿನೊಳಗೆ ಬಂದ ಆಕೆಗೆ ತಂದೆಯ ಉಪದೇಶ ಆಕೆಯನ್ನು ಧೃತಿಗೆಡಿಸುತ್ತದೆ. ಆತನೊಂದಿಗೆ ನಾನು ಲೈಂಗಿಕ ಸಂಬಂಧ ಹೊಂದಿದ ಕಾರಣ ನಾನು ಯಾರಿಗೂ ಬೇಡ, ಒಳ್ಳೆಯ ಪತ್ನಿಯಾಗಿ ಅವನೊಡನೆ ಬದುಕಬೇಕು ಎಂದು ಅಪ್ಪನ ಉಪದೇಶ. ಅಪ್ಪನ ಮಾತಿಗೆ ಅಮ್ಮ ದುಃಖಿತಳಾದರೂ ಹೂಂಗುಟ್ಟು  ತ್ತಾಳೆ. ಇವರ ಮಾತನ್ನು ನಾನು ಕೇಳಲೇ ಬೇಕು, ಬೇರೆ ದಾರಿಯೇ ಇಲ್ಲ, ದೇವರೇ ನನಗೆ ದಾರಿ ತೋರಿಸು ಎನ್ನುತ್ತಾ ಆಕೆ ಗಂಡನ ಮನೆಗೆ ಮರಳುತ್ತಾಳೆ.

ಕೆಲವರ್ಷಗಳಲ್ಲೇ ಆರು ಮಕ್ಕಳನ್ನು ಹೆತ್ತ ಆಕೆ ಹೇಳುತ್ತಾಳೆ ಹೆಣ್ಣಿನ ಬದುಕು ದುಸ್ತರ ಎಂದು.

ನುರಮೆ ಗೆ ಬೇರೆಯೇ ರೀತಿ ಬದುಕುವ ಆಸೆಯಿತ್ತು. ಚೆನ್ನಾಗಿ ಕಲಿತು ನನ್ನ ಬದುಕನ್ನು ನಾನೇ ಆರಿಸಿಕೊಳ್ಳಲು ಸಾಧ್ಯವಿತ್ತು. ಆದರೆ ಆ ಅವಕಾಶ ಈಗ ಆಕೆಗಿಲ್ಲ. ನನಗೀಗ ವಯಸ್ಸಾಯಿತು, ನಾನು ಸಂತುಷ್ಟಳಾಗೇ ಇರಬೇಕು. ನನಗೆ ಮಕ್ಕಳಿದ್ದಾರೆ ಮತ್ತು ಅವರನ್ನು ನಾನು ಪ್ರೀತಿಸುತ್ತೇನೆ ಎಂದು ಕೈಚೆಲ್ಲಿ ಹೇಳುವ ಆಕೆ ಕೂಡಲೇ ಈ ಮಾತನ್ನೂ ಸೇರಿಸುತ್ತಾಳೆ, ನನ್ನ ಗಂಡನೂ ಒಳ್ಳೆಯವನೇ, ಅವನು ನನ್ನನ್ನು ಹೊಡೆಯುವುದಿಲ್ಲ, ನಾನವನನ್ನು ಪ್ರೀತಿಸುತ್ತೇನೆ, ಆತ ಬಹಳ ಒಳ್ಳೆಯವನು.   

ನಾನು ಭೇಟಿ ಮಾಡಿದ ಮಹಿಳೆಯರೆಲ್ಲರ ಅತ್ಯಾಚಾರದ ಕಥೆಯೂ ಇದೇ ಆದರೂ ಆಶಾವಾದಿಗಳಾಗಿ “ನುರಾಮೆ” ರಂತೆಯೇ  ಮಾತನಾಡುತ್ತಾರೆ. ಎಲ್ಲರೂ ಹೇಳುವುದು ಮೊದಲ ಐದು ವರ್ಷಗಳು ಮಾತ್ರ ಕಷ್ಟ ಎಂದು. ಆದರೆ ನುರಾಮೆ ಈ ತೆರನಾದ ವ್ಯವಸ್ಥೆಗೆ ತನ್ನ ಮಗಳನ್ನು ಮಾತ್ರ ನೂಕುವುದಿಲ್ಲ ಎಂದು ದೃಢತೆಯಿಂದ ಹೇಳುತ್ತಾಳೆ. 

ಇಥಿಯೋಪಿಯ ದಲ್ಲಿ ನುರಾಮೆ ತೆರನಾದ ಘಟನೆಗಳು ದಿನವೂ ನಡೆಯುತ್ತವೆ. ಒಂದು ಅಂಕಿ ಅಂಶಗಳ ಪ್ರಕಾರ ಶೇಕಡಾ ೬೯ ವಿವಾಹಗಳು ಆರಂಭವಾಗುವುದು ಅಪಹರಣ ಮತ್ತು ಅತ್ಯಾಚಾರಗಳಿಂದ. ಕ್ರೈಸ್ತ ಮತ್ತು ಮುಸ್ಲಿಮರಿರುವ ಈ ನಾಡಿನಲ್ಲಿ ಎಲ್ಲರೂ ಇದೇ ರೀತಿಯ ವ್ಯವಸ್ಥೆಗೆ ತಮ್ಮನು ಒಡ್ಡಿ ಕೊಂಡಿದ್ದಾರೆ. ಶತಮಾನಗಳಿಂದ ಈ ವ್ಯವಸ್ಥೆ ಇದ್ದರೂ ಕಳೆದ ದಶಕದಿಂದೀಚೆಗೆ ಇದರ ವಿರುದ್ಧ ಧ್ವನಿಗಳು ಕೇಳಿಬರುತ್ತಿವೆ. 

ಹೌದು ನನ್ನ ಹಲವು ಪತ್ನಿಯರು ಇದೇ ರೀತಿ ಅಪಹರಣದ ಮೂಲಕ ಬಂದವರು ಎಂದು ಮತ್ತೊಬ್ಬ ನುಡಿಯುತ್ತಾನೆ. ಕುಂಬಾರನಾದ ಈತನಿಗೆ ಏಳು ಹೆಂಡಿರು ಮತ್ತು ಅವರೆಲ್ಲರೂ ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಾರೆ. ಇವನಿಗೆ ಮಹಿಳೆಯರ ಅಪಹರಣ “ಪ್ರೇಮದ ಕುರುಹು”. ಹೆಣ್ಣಿಗೆ ಗಂಡನಾದವನು ಜೇನು ತುಪ್ಪದಂತೆ, ಜೇನು ಸಿಕ್ಕಿದ ಕೂಡಲೇ ಆಕೆ ಸಂತುಷ್ಟಳು ಎಂದು ಹೇಳುವಾಗ ಅವನಲ್ಲಿ ತುಂಟತನ  ಎದ್ದು ಕಾಣುತ್ತದೆ.  ಅವನ ಪ್ರಕಾರ ಮಹಿಳೆಯರು ಕಾರ್ಖಾನೆಗಳಿದ್ದಂತೆ. ಗಂಡನ ಆಜ್ಞೆಗಳನ್ನು ಪಾಲಿಸುತ್ತಾ ಇರುವುದೇ ಮಹಿಳೆಯರಿಗೂ ಇಷ್ಟ ಎಂದು ಅವನ ಅಭಿಪ್ರಾಯ.  

ಇಥಿಯೋಪಿಯಾ ಇನ್ನೂ ಕಗ್ಗತ್ತಲಿನಲ್ಲಿದೆ ಎಂದು ಮೇಲಿನ ಘಟನೆಗಳೇ ಸಾಕ್ಷಿ.

Abducted. Raped. Married. Can Ethiopia’s wives ever break free? ಶೀರ್ಷಿಕೆಯಡಿ ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಇಂದು ಪ್ರಕಟವಾದ “ಜೊಹಾನ್ ಹರಿ” ಯವರ ಲೇಖನದ ಒಂದು ಭಾಗವನ್ನು ನನಗೆ ತಿಳಿದ ಮಟ್ಟಿಗೆ ಭಾಷಾಂತರಿಸಿದ್ದೇನೆ. ಹರಿ, ರೋಬರ್ಟ್ ಫಿಸ್ಕ್ ರಂತೆಯೇ ಜನಪ್ರಿಯ ಅಂಕಣಕಾರ. ಕಳೆದ ವಾರ ಪಲೆಸ್ತಿನ್ ಸಮಸ್ಯೆ ಬಗ್ಗೆ ಮನೋಜ್ಞವಾಗಿ ಹರಿ ಬರೆದಿದ್ದರು. ಮೇಲಿನ ಲೇಖನವನ್ನು ಪೂರ್ತಿಯಾಗಿ ಓದಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ.

http://www.independent.co.uk/news/world/africa/abducted-raped-married-can-ethiopias-wives-ever-break-free-1922263.html 

 

* ಹೆಣ್ಣಿಗೆ ಅಭಯ, ಅಬಾಯಾ

ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ “ಅಬಾಯಾ” ಎನ್ನುತ್ತಾರೆ)   “ಹಿಜಾಬ್” ದೊಡ್ಡ ಅನಾಹುತವನ್ನೇ ಸೃಷ್ಟಿಸಿತು.  ತನ್ನ ಕೂದಲನ್ನು ಮರೆಮಾಡಲು ಉಪಯೋಗಿಸುವ ಒಂದು ತುಂಡು ಬಟ್ಟೆ ಇಷ್ಟೊಂದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, ಮುಸ್ಲಿಂ ಮಹಿಳೆಯಂತೂ ಕನಸಿನಲ್ಲೂ ಕಂಡಿರಲಿಕ್ಕಿಲ್ಲ ದೊಂಬಿಯಿಂದ  ಉಂಟಾದ ಈ ರಕ್ತಸಿಕ್ತ  ಚಿತ್ರಣವನ್ನು. 

ಮುಸ್ಲಿಂ ಮಹಿಳೆ ತನ್ನ ಶರೀರವನ್ನು ಪ್ರದರ್ಶನಕ್ಕಿಡದೆ ಮರ್ಯಾದೆಯಿಂದ, ತನ್ನನ್ನು ಅನಾವಶ್ಯಕ ನೋಟ ಬೀರುವ ಕಣ್ಣುಗಳಿಂದ ರಕ್ಷಿಸಿಕೊಳ್ಳುವುದು ಸುಶಿಕ್ಷಿತ ಸಮಾಜಕ್ಕೆ ಮುಳುವಾಗಿ ಕಂಡಿತು. ಕಾಣದೆ ಏನಾದೀತು ಹೇಳಿ, ಬಿಕಿನಿ ಎಂದು ಕರೆಸಿಕೊಳ್ಳುವ ಒಂದು ತುಂಡು ಬಟ್ಟೆ ಉಟ್ಟು ಸಮುದ್ರ ತೀರದ ಮೇಲೆ “ನೀರೆ” ನಡೆದಾಡಿದರೆ ಆಕೆ ಅಧುನಿಕ ಮನೋಭಾವವುಳ್ಳ ಹೆಣ್ಣು ಎಂದು ಪುರಸ್ಕಾರ. ಅದು ಸಲ್ಲದು, ನನ್ನ ಶರೀರ ನನ್ನ ಮಾನ, ಪರ ಪುರುಷನ ಕಣ್ಣುಗಳ ತಣಿಸಲು ಅಲ್ಲ ಎಂದರೆ ಅದು ಕೂಡದು. ಅದು ಹೆಣ್ತನಕ್ಕೆ ಆಗುವ ಅಪಮಾನ. ಹೆಣ್ಣಿನ ಶೋಷಣೆ. ಮತಾಂಧತೆಯ ಪರಾಕಾಷ್ಠೆ. islam is a regressive religion. ಬೇಕಾದ ರೀತಿಯಲ್ಲಿ ವ್ಯಾಖ್ಯಾನ. ಕಪಿಯ ಕೈಗೆ ಸಿಕ್ಕ ಮಾಣಿಕ್ಯವಾಯಿತು ಲೇಖನಿ.  ಓರ್ವ ಹೆಣ್ಣಿಗೆ ತಾನು ಏನನ್ನು ಉಡಬೇಕೆಂದು ಹೇಳಲು ಹೊರಗಿನವರ ಅಪ್ಪಣೆ. ಪುರುಷನೊಬ್ಬ ಅಷ್ಟೊಂದು ಶುದ್ಧ ಹಸ್ತದವನಾಗಿದ್ದರೆ, ಎಲ್ಲರೂ ಸಚ್ಚಾರಿತ್ರ್ಯ ದವರೇ ಆಗಿದ್ದರೆ ಏಕೆ ಬೇಕು ಮಹಿಳೆಯರಿಗೆ ವಿಶೇಷ ರೈಲು, ಏಕೆ ಬೇಕು ಮಹಿಳೆಯರಿಗೆ ಪ್ರತ್ಯೇಕ ಸರತಿ, ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್ಲುಗಳು? ಕೇರಳದಲ್ಲಿ ಬಸ್ಸಿನಲ್ಲಿ ಮಹಿಳೆಯರು ಹಿಂದಿನ ಸಾಲಿನಲ್ಲಿ ಕೂರಬೇಕು, ಏಕೆ?

ಅಚ್ಚರಿಯ ಸಂಗತಿ ಏನೆಂದರೆ ಮುಸ್ಲಿಂ ಮಹಿಳೆ ಧರಿಸುವ ಹಿಜಾಬ್ ನ ಬಗ್ಗೆ ವಿಶೇಷ ಕುತೂಹಲ. ಒಂದು ರೀತಿಯ ಕಾಳಜಿ. ಆಕೆಯನ್ನು ಕತ್ತಲ ಕೂಪದಿಂದ ಹೊರತರುವ ಉತ್ಕಟೇಚ್ಚೆ. ಈ ಕಾಳಜಿ, ನೋವು ಗಲಭೆಗಳ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ  ಮಹಿಳೆಯರ ಬಗ್ಗೆ ಇರಲಿಲ್ಲ. ಇಂಥ ಘಟನೆಗಳ ಬಗ್ಗೆ ಯಾವುದಾದರೂ ಮಹಿಳಾ ಸಂಘಟನೆಗಳು ಸೊಲ್ಲೆತ್ತಿದ್ದು ಓದಿದ್ದೀರಾ?     

ನಾನು ಹಿಜಾಬ್ ನ ದೊಡ್ಡ ಅಭಿಮಾನಿಯೇನೂ ಅಲ್ಲ. ಆದರೆ ಅದನ್ನು ವಿರೋಧಿಸುವವರ ಪೈಕಿಯವನೂ ಅಲ್ಲ. ನನ್ನ ಪತ್ನಿ ಹಿಜಾಬ್ ಧರಿಸುತ್ತಾಳೆ. ಮದುವೆಯಾದ  ಹೊಸತರಲ್ಲಿ ನಾನು ನನ್ನ ಪತ್ನಿಗೆ ಸಾಂದರ್ಭಿಕವಾಗಿ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದಾಗ ನನ್ನ ಮಡದಿ ಕೇಳಿದ್ದು, ಏಕೆ ಈ ಪ್ರಶ್ನೆ ನನ್ನನ್ನು ಮದುವೆ ಮುನ್ನ ನೋಡಲು ಬರುವಾಗಲೇ ಕೇಳಬಹುದಿತ್ತಲ್ಲ ಅಂತ. ಅದರ ಅರ್ಥ ಹಿಜಾಬ್ ವಿರೋಧಿಸುವ ನಿನ್ನನ್ನು ನಾನು ವರಿಸುತ್ತಿರಲಿಲ್ಲ ಎಂದು. ಇದು ಆಕೆಯ ಅಪ್ಪ ಹೇಳಿ ಕೊಟ್ಟಿದ್ದರಿಂದಲೋ, ಅಥವಾ ಆಕೆಯ ಅಮ್ಮ ಕಲಿಸಿದ್ದರಿಂದಲೋ ಸಿಕ್ಕಿದ ವಿವೇಕವಲ್ಲ. ತನ್ನ ಸುತ್ತ ಮುತ್ತ ನಡೆಯುವ ಆಗುಹೋಗುಗಳನ್ನು ನೋಡಿ ಕಲಿತ ಪಾಠ. ಅಷ್ಟು ಮಾತ್ರ ಅಲ್ಲ ತಾನು ಆರಾಧಿಸುವ ತನ್ನ ಸೃಷ್ಟಿಕರ್ತನ ಅಪ್ಪಣೆಗೆ ವಿಧೇಯಳಾಗುವ ಅಭಿಲಾಷೆ.

ಹಿಜಾಬ್ ಅಂದರೆ ಶರೀರವನ್ನು ಕಪ್ಪು ಬಟ್ಟೆಯಿಂದ ಸಂಪೂರ್ಣವಾಗಿ ಸುತ್ತಬೇಕು ಎಂದಲ್ಲ. ಮುಖ ಮತ್ತು ಮುಂಗೈಗಳು ಮಾತ್ರ ಕಾಣುವಂತೆ, ಅಂಗ ಸೌಷ್ಠವ ತೋರಿಸದ ಸಡಿಲವಾದ ಉಡುಪು. ಭಾಜಪದ ನಾಯಕಿ ಸುಷ್ಮಾ ಅವರ ಉಡುಗೆ ನೋಡಿದ್ದೀರಾ? ಹೆಚ್ಚು ಕಡಿಮೆ ಆ ರೀತಿಯದೇ. ಹಾಗೆ ಧರಿಸದೆ ಇದ್ದಾಗ ಹೆಣ್ಣು ಬಿಚ್ಚೋಲೆ ಗೌರಮ್ಮ. ಸಾಕಷ್ಟು ಅಂಗಗಳ ಪ್ರದರ್ಶನ ನಡೆದರೆ ಆಧುನಿಕ ಫ್ಯಾಶನ್ ಜೊತೆ ಹೆಜ್ಜೆ ಹಾಕುತ್ತಿರುವ ಮಹಿಳೆ. liberated woman. stylish. modern. chic.  ತನಗೆ ಬೇಕಾದ ರೀತಿಯಲ್ಲಿ, ಕನಿಷ್ಠ ಉಡುಗೆ ತೊಟ್ಟು ನಡೆಯುವ ಮಹಿಳೆಯ ಬಗ್ಗೆ ಮುಸ್ಲಿಂ ಮಹಿಳೆ ಚಕಾರ ಎತ್ತದೆ ಇದ್ದರೆ ಅದೇ ರೀತಿಯದಾದ ಪ್ರತ್ಯುಪಕಾರವನ್ನು ನಿರೀಕ್ಷಿಸಬಾರದೇ ಹಿಜಾಬ್ ಧರಿಸುವ ಹೆಣ್ಣು? ಹೆಣ್ಣನ್ನು ಇಂದು ಅಪ್ಪಟ ವ್ಯಾಪಾರದ ವಸ್ತುವಾಗಿಸಿ, ಗಂಡು ತೊಡುವ ಒಳ ಉಡುಪಿನಿಂದ ಹಿಡಿದು, ಕಾರನ್ನು ಮಾರಲೂ ಹೆಣ್ಣನ್ನು ಉಪಯೋಗಿಸುವ ನಾಗರೀಕತೆಗೆ ಹಿಜಾಬ್ ತೊಡಕಾಗಿ ಕಂಡರೆ, ಹಿನ್ನಡೆಯಾಗಿ ಕಂಡರೆ ಅಚ್ಚರಿಯಿಲ್ಲ.  ಹೆಣ್ಣನ್ನು ಅಶ್ಲೀಲವಾಗಿ ಬಿಂಬಿಸಿ ಪಾನ್ ಪರಾಗ್ ಅಥವಾ ಮತ್ಯಾವುದಾದರೂ ವಸ್ತುವಿನ ಜಾಹೀರಾತು ಇಲ್ಲದ ಚದರಡಿ ಜಾಗ ಸಿಕ್ಕೀತೆ ರಸ್ತೆಯಲ್ಲಿ? ಹೀಗೆ ಹೆಣ್ಣು ಮಕ್ಕಳನ್ನು ವ್ಯಾಪಾರದ, ಭೋಗದ ವಸ್ತುವನ್ನಾಗಿ ಉಪಯೋಗಿಸುವ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಷ್ಟು ಜೋಪಾನದಿಂದ ಇಟ್ಟು ಕೊಳ್ಳುತ್ತಾರೆ ನೋಡಿ. 

ಗಂಡು ಮತ್ತು ಹೆಣ್ಣಿಗೆ ಇಸ್ಲಾಂ ಕೆಲವೊಂದು ಶಿಷ್ಟಾಚಾರಗಳನ್ನು ನೀಡಿದೆ. ತಮ್ಮ ದೃಷ್ಟಿಗಳನ್ನು ಬೇಡದ ಕಡೆ ನೆಡದೆ ನೆಲದ ಮೇಲೆ ಇಟ್ಟು, ಸುಶೀಲರಂತೆ ನಡೆಯಲು ಇಸ್ಲಾಂ ಬಯಸುತ್ತದೆ ತನ್ನ ಅನುಯಾಯಿಗಳಿಂದ. ಎಷ್ಟೋ ಪುರುಷರು ಶರೀರವನ್ನು ಬಿಗಿದಪ್ಪುವ ಜೀನ್ಸ್ಗಳನ್ನೂ ಧರಿಸುವುದಿಲ್ಲ.

ಹಿಜಾಬ್ ನ ಬಗ್ಗೆ ಮುಸ್ಲಿಂ ಪಂಡಿತರಲ್ಲೂ ಹಲವು ಅಭಿಪ್ರಾಯಗಳಿವೆ.  ಶರೀರವನ್ನು ಸಂಪೂರ್ಣವಾಗಿ ಹೊದ್ದು ಕಣ್ಣನ್ನು ಮಾತ್ರ ತೋರಿಸಿ ಧರಿಸುವ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದು ವಿಶ್ವ ಪ್ರಸಿದ್ಧ, ೧೧೦೦ ವರ್ಷಗಳ ಇತಿಹಾಸ ಇರುವ ಇಜಿಪ್ಟ್ ದೇಶದ al-azhar ವಿಶ್ವ ವಿದ್ಯಾಲಯದ ಕುಲಪತಿ ಶೇಖ್ ತಂತಾವಿ ಹೇಳಿಕೆ ನೀಡಿದರು. ಹಾಗೆ ಸಂಪೂರ್ಣವಾಗಿ ಹಿಜಾಬ್ ಧರಿಸುವುದು ಇಸ್ಲಾಮಿಗಿಂತ ಮುಂಚಿನ ರೂಢಿ, ಆ ರೀತಿಯ ಧರಿಸುವಿಕೆಗೆ ಇಸ್ಲಾಮಿನ ಅನುಮೋದನೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಮುಖವನ್ನು ತೆರೆದಿಟ್ಟು ಧರಿಸುವ ಹಿಜಾಬ್ ಹೆಣ್ಣಿಗೆ ಒಳ್ಳೆಯದು ಎನ್ನುವುದು ಎಲ್ಲ ಪಂಡಿತರ ಅಭಿಪ್ರಾಯ.   

ಹಿಜಾಬ್ ಬಗ್ಗೆ ಪ್ರಸಿದ್ಧ ಸಾಹಿತಿ Naomi Wolf ಹೇಳಿದ್ದು”

Choice is everything. But Westerners should recognise that when a woman in France or Britain chooses a veil, it is not necessarily a sign of her repression, and the feminist on the other side of the veil debate.

“I put on a shalwar kameez and a headscarf in Morocco for a trip to the bazaar. Yes, some of the warmth I encountered was probably from the novelty of seeing a Westerner so clothed; but, as I moved about the market – the shape of my legs obscured, my long hair not flying about me – I felt a novel sense of calm and serenity. I felt, yes, in certain ways, free,”

* ಅಭಿವ್ಯಕ್ತಿ ಸ್ವಾತಂತ್ರ್ಯ

View Imageಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?

ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ “ಕೃತಿ” ಗಳನ್ನು ಖಂಡಿಸೋಣ. ಆದರೆ ಹೇಗೆ? ಹುಸೇನರ ಕುಂಚ ತನ್ನ ಪಾತ್ರಗಳನ್ನು ವಿವಸ್ತ್ರಗೊಳಿಸಿ ಆತ ತನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವಂತೆ ಮಾಡಿದರೆ ಇದರ ಬಗ್ಗೆ ನಮ್ಮ ಲೇಖನಿಯನ್ನು (ಕೀಲಿಗಳನ್ನು) ಸಂಭ್ರಮದಿಂದ ಹರಿಬಿಟ್ಟು ನಾವೂ ವಿವಸ್ತ್ರರಾದೆವು. ನಮ್ಮ ಮಟ್ಟಿಗೆ ಹುಸೇನ್ ದೇಶ ಕಳೆದುಕೊಂಡರೂ ಆತನ ಮಟ್ಟಿಗೆ ದೇಶದ ಪರಿಕಲ್ಪನೆ ಅವನಿಗೆ ಇಲ್ಲವಂತೆ. ಆತನ ಅಥವಾ ಯಾವುದೇ ಕಲಾವಿದನ ರಾಜ್ಯ ಭೌಗೋಳಿಕ ಅಲ್ಲವಂತೆ. ಅವರದು ಕುಂಚದ ಸಾಮ್ರಾಜ್ಯ. ಅವರುಗಳು ಕುಂಚ ಮಾತೆಯ ಸುಪುತ್ರರು. ಅವರು ಗೀಚುವ ಗೆರೆಗಳೇ ಅವರ ಗಡಿ. ವ್ಯಾಪ್ತಿಯಿಲ್ಲದ ಸರಹದ್ದು. ಗಾಳಿ ಬಂದ ಕಡೆ ತೂರಿ ಕೊಳ್ಳುವ ಹಾಗೆ. ಕುಂಚ ತೋರಿದೆಡೆ ಪಯಣ. “ಕಾಯಾ, ವಾಚಾ, ಕುಂಚ” ಇವರ ಮಂತ್ರ.

ಹುಸೇನರ ಬಗ್ಗೆ ಟೀಕಿಸಿ ಬಂದ ವಾಕ್ಯ ರತ್ನಗಳನ್ನೂ, ವ್ಯಂಗ್ಯವನ್ನೂ ನೋಡಿದಾಗ ಸುಶಿಕ್ಷಿತ ಸಮಾಜಕ್ಕೆ ಇನ್ನಷ್ಟು ಶಿಕ್ಷಣದ ಅವಶ್ಯಕತೆ ಎದ್ದು ಕಾಣುತ್ತದೆ. ಇಲ್ಲಿ ನಮಗೆ ತೋಚಿದ ರೀತಿಯಲ್ಲಿ ಬರೆದು ನಾವು ಸಾಧಿಸಿದ್ದು ನಮ್ಮ ತಿಳುವಳಿಕೆಯ ಕೊರತೆಯ ಪ್ರದರ್ಶನ. ಈ ಮಾತನ್ನು ನಾನು ಹೇಳುತ್ತಿರುವ ಉದ್ದೇಶ ದಯಮಾಡಿ ಅರ್ಥ ಮಾಡಿಕೊಳ್ಳಿ. ನಾನು ಸೇರಿದ ಸಮಾಜ ಇಂಥ ವಿಷಯಗಳು ಬಂದಾಗ ಹದ್ದು ಮೀರಿ ಅಸಹನೆ ಮೆರೆದು, ಕಲ್ಲು ಹೊಡೆದು, ಅರಚಾಡಿ ತಮಗೆ ತೋಚಿದ ರೀತಿಯಲ್ಲಿ ಅಸಮಾಧಾನವನ್ನೂ ಕೋಪವನ್ನೂ ಪ್ರದರ್ಶಿಸಿತು. ಪರಿಣಾಮ? ದೊಡ್ಡ ನಾಮ. ಡೆನ್ಮಾರ್ಕಿನಿಂದ ಹಿಡಿದು ಶಿವಮೊಗ್ಗದವರೆಗೂ ನಮ್ಮ ಕಾಲು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂಗ್ಲೆಂಡಿನಿಂದ, ಇರಾನಿನವರೆಗೂ ನಾವು ನಗೆಪಾಟಲಿಗೀಡು. ಪವಿತ್ರ ಕುರಾನ್ “ಸಹನೆ, ಸಂಯಮ” ವನ್ನು ಜೀವನ ರೀತಿಯಾಗಿಸುವಂತೆ ಪದೇ, ಪದೇ ಹಲವು ಕಡೆಗಳಲ್ಲಿ ಸಾರಿದರೂ ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿರುವ ಸಮಾಜದ ಒಂದು negligible ಭಾಗ ಅಸಹನೆಯ ವಿಷವನ್ನು ಪಸರಿಸುತ್ತಾ ಸಾಗುತ್ತಿದೆ. (and verily whoso is patient and forgiveth, that verily is the steadfast heart of things 42-43) ಸಹನಾಮಯಿಗಳೂ, ಕ್ಷಮಾಶೀಲರೂ ಆದವರು ಸಮರ್ಪಕ ಕಾರ್ಯಗಳನ್ನೇ ಮಾಡುವರು. ಪವಿತ್ರ ಕುರಾನಿನ ಈ ಸೂಕ್ತಕ್ಕೂ ಧರ್ಮದ ಭಾರವನ್ನು ತಮ್ಮ ಮೆದುಳಿಲ್ಲದ, ಚಿಂತಿಸದ ತಲೆಯ ಮೇಲೆ ಹೊತ್ತು ಹೇಸಿಗೆಯ ವಾತಾವರಣವನ್ನು ಸೃಷ್ಟಿಸಿಕೊಂಡಿರುವ ಬೆರಳೆಣಿಕೆಯ ಜನರ ನಡವಳಿಕೆಗೂ ಇರುವ ವ್ಯತ್ಯಾಸ ನೋಡಿ. ಹುಸೇನರ ಕುರಿತ ಲೇಖನಕ್ಕೆ ಪ್ರತಿಕ್ರಿಯಾ ರೂಪದಲ್ಲಿ ಬಂದ ಮಹಾ ವಾಕ್ಯಗಳನ್ನು ಆಫ್ಘಾನಿಸ್ತಾನದ “ಪಷ್ತು” ಭಾಷೆಗೋ ಅಥವಾ ಕಂದಹಾರದ ಯಾವುದಾದರೂ ಭಾಷೆಗೋ ಅನುವಾದಿಸಿ ನೋಡಿ. ಕಣ್ಣಿನೆದುರು ಬಂದು ನಿಲ್ಲುವುದಿಲ್ಲವೇ ಮುಲ್ಲಾ ಉಮರನ, ಅವನಂಥವರ ಹೇಳಿಕೆಗಳು, ಹಾವ ಭಾವಗಳು? ಸರಿಯೋ ತಪ್ಪೋ? ಆವೇಶದಿಂದ ಬರೆದಾಗ ನಮ್ಮ ನಿಜ ವೇಷ ಸರ್ವವೇದ್ಯವಾಗಿ ಬಿಡುತ್ತೆ. ಹಾಗಾಗುವುದು ಬೇಡ. ನಮ್ಮ ನಂಬಿಕೆಗಳನ್ನು, ಆದರ್ಶಗಳನ್ನು ರಕ್ಷಿಸಲು ವೈಚಾರಿಕ ಮಾರ್ಗಗಳಿವೆ. ವಿಚಾರವಂತರು ಎಂದು ಬಿರುದು ಇಟ್ಟುಕೊಂಡು ನಮ್ಮ ಭಾವನೆಗಳೊಂದಿಗೆ ಚೆಲ್ಲುತನ ತೋರುವ ವಿಚಾರವಾದಿಗಳಿಗೆ ಒಳ್ಳೆಯ ಮಾತಿನಲ್ಲಿ ತಿಳಿ ಹೇಳೋಣ. ಅವರ ಸೃಷ್ಟಿ (ಅದೆಂಥದ್ದೇ ಮಹಾಕಾವ್ಯವಾಗಿರಲಿ, ಇತಿ”ಹಾಸ್ಯ”ವಾಗಿರಲಿ, ಚಿತ್ರವಾಗಿರಲಿ) ಕೀಳು ಅಭಿರುಚಿಯಿಂದ ಕೂಡಿದ್ದು ಎಂದು ಜನರಲ್ಲಿ ಅರಿವು ಮೂಡಿಸಿ ಅಂಥ ಕಲಾವಿದರಿಗೆ ಮಣೆ ಹಾಕುವುದರಿಂದ ಜನರನ್ನು ತಡೆಯೋಣ. ಆದರೆ ಎಲ್ಲವೂ ನಾಗರೀಕ ಶೈಲಿಯಲ್ಲಿ. ನಮ್ಮ ಮನೆ (charity begins at home), ಮತ್ತು ಶಿಕ್ಷಣ ಹೇಳಿಕೊಟ್ಟ ಮಾದರಿಯಲ್ಲಿ. ಕಾಲದ ಪರೀಕ್ಷೆ ಗೆದ್ದು ನಾವು ಉಳಿಸಿಕೊಂಡು ಬಂದ ಸಂಸ್ಕೃತಿಯ ರೀತಿಯಲ್ಲಿ. ಅಪನಂಬಿಕೆ, ಅಸಹನೆಯಿಂದ ರೋಸಿದ, ಬಳಲಿದ ವಿಶ್ವ ನಮ್ಮೆಡೆ ದೃಷ್ಟಿ ಬೀರುತ್ತಿದೆ…

Time tested value ಗಳಿಗಾಗಿ. let us not disappoint.