ವ್ಯಾಟಿಕನ್ ನಿಯಮ

ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನ ಮಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು ಹೋಗುವುದು ಸಹಜವೇ. contraception (ಗರ್ಭನಿರೋಧಕ) ಬಳಕೆಯಿಂದ ಹಿಡಿದು climate change ವರೆಗೆ ಚರ್ಚಿಸಲು ಪೋಪ್ ರನ್ನು ಭೇಟಿಯಾಗುತ್ತಾರೆ ಜನ. ಪೋಪ್ ರನ್ನು ಭೇಟಿಯಾದ ಬ್ರಿಟಿಷ ತಂಡದ ಕುರಿತು ನನ್ನ ಆಸಕ್ತಿ ಏನೆಂದರೆ, ತಂಡದಲ್ಲಿ ‘ಸಯೀದ ಹುಸೇನ್ ವಾರ್ಸಿ’ ಎನ್ನುವ ಮುಸ್ಲಿಂ ಮಹಿಳೆ ಸಹ ಇದ್ದರು. ಈಕೆ ಬ್ರಿಟಿಷ್ ಮಂತ್ರಿಮಂಡಲದ ಏಕೈಕ ಮುಸ್ಲಿಂ ಮಹಿಳಾ ಸಚಿವೆ. ವಾರ್ಸಿ ಪೋಪ್ ರನ್ನು ಕಾಣಲು ಹೋಗುವಾಗ vatican protocol ಪ್ರಕಾರ ಕಪ್ಪು ವಸ್ತ್ರ ಮತ್ತು ಸ್ಕಾರ್ಫ್ ಧರಿಸಿದ್ದರು. ಇದು ವಿಶ್ವದ ಅತಿ ಚಿಕ್ಕ ದೇಶವಾದ ಸುಮಾರು ೧೧೦ ಎಕರೆ ವಿಸ್ತೀರ್ಣದ ವ್ಯಾಟಿಕನ್ ನ ನಿಯಮ.

ವ್ಯಾಟಿಕನ್ ಕ್ರೈಸ್ತರ ಅತ್ಯಂತ ಪವಿತ್ರ ಕ್ಷೇತ್ರ. ತೋಚಿದ ರೀತಿಯ ಉಡುಗೆ ತೊಡುಗೆ ಸಲ್ಲದು. ಶಿಷ್ಟಾಚಾರಗಳು ಎಲ್ಲೆಲ್ಲಿ ಅವಶ್ಯಕವೋ ಅವುಗಳನ್ನ ಗೌರವಿಸಿ, ಅನುಸರಿಸಬೇಕು. ಈ ತೆರನಾದ ನಿಯಮಗಳು ಯಾವುದೇ ಸಮಾಜ ಅಥವಾ ಸಂಸ್ಕೃತಿಗಳಲ್ಲಿದ್ದರೆ ಅವುಗಳಿಗೆ ಬೇರೆಯೇ ತೆರನಾದ ಅರ್ಥ ಕೊಟ್ಟು ಟೀಕಿಸಬಾರದು. ನಮಗೊಂದು ನ್ಯಾಯ, ಪರರಿಗೊಂದು ನ್ಯಾಯ, ಈ ಬೇಧ ಭಾವ ಉದ್ಭವಿಸಿದಾಗ ಸಹಜವಾಗಿಯೇ ಸಂಘರ್ಷಕ್ಕೆ ಹಾದಿ ಮಾಡಿ ಕೊಡುತ್ತದೆ.

ಕ್ರೈಸ್ತರ ಪವಿತ್ರ ಕ್ಷೇತ್ರ ದಂತೆಯೇ ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರ ಗಳಾದ ಮಕ್ಕಾ ಮತ್ತು ಮದೀನಾ ನಗರಗಳು ಸೌದಿ ಅರೇಬಿಯಾದಲ್ಲಿವೆ. ವಿಶೇಷವೇನೆಂದರೆ ಕೇವಲ ಮಕ್ಕಾ, ಮದೀನ ಮಾತ್ರ ಪವಿತ್ರ ನಗರಗಳಲ್ಲ, ಬದಲಿಗೆ ಇಡೀ ಸೌದಿ ಅರೇಬಿಯಾ ದೇಶವೇ ಇಸ್ಲಾಮಿನ ಪುಣ್ಯ ಭೂಮಿ. ಹಾಗೆಂದು ಮುಸ್ಲಿಂ ವಿಧ್ವಾಂಸರ ಅಭಿಪ್ರಾಯವೂ ಹೌದು. ಮಕ್ಕಾ, ಮದೀನ ನಗರಗಳಿಗೆ ಮುಸ್ಲಿಮೇತರರು ಬರುವ ಹಾಗಿಲ್ಲ, ಹಾಗೆಯೇ ಸೌದಿ ಅರೇಬಿಯಾ ದೇಶಕ್ಕೆ ಬರುವವರೂ ವಸ್ತ್ರದ ವಿಷಯದಲ್ಲಿ modesty ತೋರಿಸಬೇಕು. ಮಹಿಳೆಯರು ನೀಳ, ಕಪ್ಪು ಬಟ್ಟೆ ಧರಿಸಬೇಕು. ಇದಕ್ಕೆ ಹಿಜಾಬ್ ಎನ್ನುತ್ತಾರೆ. ಸ್ವಾರಸ್ಯವೇನೆಂದರೆ ವ್ಯಾಟಿಕನ್ ವಿಷಯದಲ್ಲಿ ತೋರಿಸುವ ಸಜ್ಜನಿಕೆ ಮುಸ್ಲಿಂ ಧರ್ಮೀಯ ಆಚರಣೆಗೆ ಇಲ್ಲದಿರುವುದು. ಸೌದಿ ಅರೇಬಿಯಾದ ಉಡುಗೆ ಮತ್ತು ಇತರೆ ನಿಯಮಗಳ ಬಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ.

ಭಾವನೆಗಳನ್ನು ಮನ್ನಿಸುವ ಔದಾರ್ಯ ಎಲ್ಲರಿಗೂ ಏಕೆ ಲಭ್ಯವಲ್ಲ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಋತು ಗಾನ

ಋತು ಚಕ್ರ ಒಂದು ರೀತಿಯ ರಾಕೆಟ್ ಸೈನ್ಸ್ ಕೆಲವರಿಗೆ. ಒಬ್ಬ ಗಂಡು ಋತು ಚಕ್ರದ ಬಗ್ಗೆ ಬರೆದಾಗ ಸಹಜವಾಗಿಯೇ ಹುಬ್ಬುಗಳು ಮೇಲೇರುತ್ತವೆ. ಏಕೆಂದರೆ ಇದು ಪುರುಷರ domain ಅಲ್ಲ. writer’s block ನಿಂದ ಹೊರಬರಲು ವಿಷಯವೊಂದನ್ನು ಹುಡುಕುತ್ತಿದ್ದಾಗ ಹೊಳೆಯಿತೀ ವಿಷಯ, ಹಳೇ ಲಾಪ್ ಟಾಪ್ ಬದಲಿಸಿ ಮೊನ್ನೆ ತಾನೇ ಕೊಂಡ ಹೊಸ ಅತಿ ತೆಳುವಾದ “ಅಲ್ಟ್ರಾ ಬುಕ್’ ಲಾಪ್ ಟಾಪ್ ನಿಂದ ಹೊರಹೊಮ್ಮಿದ ಲೇಖನ ಓದಿ.

ನಾನು ಬೆಂಗಳೂರಿನಲ್ಲಿ ಮೆಡಿಕಲ್ ಟ್ರಾನ್ಸ್ ಕ್ರಿಪ್ಶನ್ ಮಾಡುತ್ತಿರುವಾಗ ಟ್ರೈನರ್ ಒಬ್ಬರು ಅಮೇರಿಕನ್ ಮಹಿಳೆ. ಆಕೆ human anatomy ವಿಷಯ ಕಲಿಸುವಾಗ ಋತು ಚಕ್ರದ ವಿಷಯ ಬಂತು. ಕೆಣಕಲೆಂದೇ ಏನೋ ಹುಡುಗರನ್ನು ಒಬ್ಬೊಬ್ಬರಾಗಿ ಎಬ್ಬಿಸಿ you know how long menstruation lasts ಎಂದು ಕೇಳಿದಾಗ ಇಡೀ ತರಗತಿಯೇ ನಗೆಗಡಲಲ್ಲಿ ಮುಳುಗುವ ಉತ್ತರ ಬರುತ್ತಿತ್ತು. ಒಬ್ಬ ಹತ್ತು ದಿನ ಎಂದರೆ, ಮತ್ತೊಬ್ಬ ಇನ್ನೂ ಮುಂದಕ್ಕೆ ಹೋಗಿ ಆರು ತಿಂಗಳು ಎಂದು ಬಿಟ್ಟ. ಆಕೆ ನಗುತ್ತಾ ಮಹಿಳೆಯರ ಈ ಮಾಸಿಕ ವಿದ್ಯಮಾನವನ್ನು ವಿವರಿಸಿ knives fly in the kitchen and this is the time guys have to leave town ಎಂದು ಹೇಳಿದಾಗ ಹೆಣ್ಣು ಮಕ್ಕಳು ಗಹಗಹಿಸಿ ನಕ್ಕಿದ್ದರು.

ನಾನು ಚಿಕ್ಕವನಿದ್ದಾಗ ಕೆಲವರು ಹೇಳಿದ್ದು ಕೇಳಿದ್ದೇನೆ, ಅವಳು ದೊಡ್ಡವಳಾದಳು ಎಂದು. ನಿನ್ನೆ ನಾನು ಹೇಗೆ ನೋಡಿದ್ದೇನೋ ಹಾಗೆಯೇ ಇದ್ದಾಳಲ್ಲಾ ಇವಳು, ಮತ್ತೆ ದೊಡ್ಡವಳಾದಳು ಎಂದರೆ ಏನರ್ಥ ಎನ್ನುವ ನನ್ನ ಹುಡುಗು ಜಿಜ್ಞಾಸೆಗೆ ಉತ್ತರ ಸಿಕ್ಕಿರಲಿಲ್ಲ. ಈಗಿನ ಥರ ಉತ್ತರ ಕೊಡುವಷ್ಟು ಬೆಳೆದಿರಲಿಲ್ಲ ಸಮಾಜ ಆಗ.

ಸೌದಿ ಅರೇಬಿಯಕ್ಕೆ ಬಂದಾಗ ಇಲ್ಲಿ ಕಾಣುವುದೆಲ್ಲಾ ಹೊಸತು ನನಗೆ. ಒಮ್ಮೆ ಒಂದು ಮನೆಯ ಮೇಲೆ ಸೌದಿ ದೇಶದ ಧ್ವಜ ಹಾರಿದ್ದನ್ನು ಕಂಡೆ. ನಮ್ಮ ದೇಶದಲ್ಲಿ ಮನೆಗಳ ಮೇಲೆ, ಅಲ್ಲಿ ಇಲ್ಲಿ ಎಂದು ಬಾವುಟ ಹಾರಿಸುವ ಹಾಗಿಲ್ಲವಲ್ಲ. ಹಾಗಾಗಿ ಕುತೂಹಲದಿಂದ ಒಬ್ಬ ಶ್ರೀಲಂಕೆಯ ವ್ಯಕ್ತಿಯ ಹತ್ತಿರ ಕೇಳಿದಾಗ ಆತ ಹೇಳಿದ ಆ ಮನೆಯ ಹುಡುಗಿ ವಯಸ್ಸಿಗೆ ಬಂದಿದ್ದಾಳೆ, ಅದನ್ನು ತಿಳಿಸುವುವ ಉದ್ದೇಶದಿಂದ ಬಾವುಟ ಹಾರಿಸುತ್ತಾರೆ ಎಂದಿದ್ದ ಕುಚೋದ್ಯಭರಿತ ಹಾಸ್ಯದ ಯಾವುದೇ ಸುಳಿವನ್ನೂ ಕೊಡದೆ. ನಮ್ಮ ದೇಶದಲ್ಲಿ ಕೆಲವರು ಮನೆಯ ಜಗುಲಿಯ ಸುತ್ತ ಒಂದು ಬೆಡ್ ಶೀಟ್ ಮರೆ ಮಾಡಿ ಅಲ್ಲಿ ಹುಡಗಿಯನ್ನು ಕೂರಿಸುವುದನ್ನು ನಾನು ನೋಡಿದ್ದೇನೆ. ಇನ್ನೂ ಒಂದು ಸಮುದಾಯದವರು ಚಪ್ಪರ ಹಾಕಿ ಹುಡುಗಿ ಸಿಂಗರಿಸಿ ಯನ್ನು ಕೂರಿಸುತ್ತಾರೆ. ಈಗ ಇದೆಲ್ಲಾ ಬದಲಾಗಿರಬೇಕು. ಇದು ಬದಲಾಗಿದೆಯೇ, ಇಲ್ಲವೇ ಎಂದು ಗಮನಿಸಲೇ ಬೇಕಾದ, ಕುತೂಹಲ ಭರಿತ ವಿಷಯವೂ ಅಲ್ಲ ಅನ್ನಿ ಇದು.

ಏನೇ ಇರಲಿ, ಮಹಿಳೆಯರಿಗೆ ಆಗುವ ಈ ಜೈವಿಕ ಬದಲಾವಣೆ ವಿವಿಧ ಸಮಾಜಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಿಸುತ್ತದೆ. ಕ್ರೈಸ್ತರ ಹಳೆ ಒಡಂಬಡಿಕೆ ಪ್ರಕಾರ ಋತು ಚಕ್ರ ಅರ್ಧ ಸಾವಿನಂತೆ. ಪವಿತ್ರ ವಾದುದನ್ನು ಅಪವಿತ್ರ ಗೊಳಿಸುತ್ತದೆ ಋತು ಚಕ್ರ ಎನ್ನುವ ಅಭಿಪ್ರಾಯದೊಂದಿಗೆ ಅದು ಒಂದು ಶಾಪ ಎನ್ನುವ ಅಭಿಪ್ರಾಯ ಹಳೆ ಒಡಂಬಡಿಕೆ ಕಾಲದ ಜನರದ್ದಾಗಿತ್ತು. ಇಥಿಯೋಪಿಯಾ ದೇಶದಲ್ಲಿ ಈ ಅವಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಅದಕ್ಕೆಂದೇ ನಿರ್ಮಿಸಲಾಗಿದ್ದ ಗುಡಿಸಿಲಿಗೆ ಹೋಗಿ ವಾಸವಾಗುವ ಪದ್ಧತಿ ಇದೆಯಂತೆ. ದೇವತೆಯರನ್ನು ಆರಾಧಿಸುವ ಪ್ರಾಚೀನ ಸಮಾಜಗಳಲ್ಲಿ ಋತು ಚಕ್ರ ಒಂದು ಪವಿತ್ರ ಕ್ರಿಯೆ. ಹಾಗೂ ತಿಂಗಳಿನ ಆ ಅವಧಿಯಲ್ಲಿ ಮಹಿಳೆ ಹೆಚ್ಚು ಬಲಶಾಲೀ ಎನ್ನುವ ಅಭಿಪ್ರಾಯವೂ ಇತ್ತು. ಅಷ್ಟೇ ಅಲ್ಲ ಈ ಅವಧಿಯಲ್ಲಿ ಮಹಿಳೆ ಗದ್ದೆ ಹೊಲದಲ್ಲಿ ಓಡಾಡಿದರೆ ಬೆಳೆ ಚೆನ್ನಾಗಿ ಆಗುವ ನಂಬಿಕೆ ಇತ್ತಂತೆ.

 ಇಸ್ಲಾಮಿನಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ, ಈ ಸಮಯದಲ್ಲಿ ಮಹಿಳೆ ನಮಾಜ್ ನಿರ್ವಹಿಸುವಂತಿಲ್ಲ , ಪವಿತ್ರ ಕುರಾನ್ ಪಠಿಸುವಂತಿಲ್ಲ, ವೃತಾಚಾರಣೆ ಪಾಲಿಸುವಂತಿಲ್ಲ. ಒಮ್ಮೆ ಪ್ರವಾದಿಗಳು ತಮ್ಮ ಪತ್ನಿಗೆ ನೀರು ಕೊಡೆಂದು ಕೇಳಿದಾಗ, ನಾನು ಋತುಮತಿ ಯಾಗಿದ್ದೇನೆ ಎನ್ನುವ ಉತ್ತರ ಬಂತು. ಆಗ ಪ್ರವಾದಿಗಳು ಕೇಳಿದರು, ಅದರಲ್ಲೇನು ತಪ್ಪು? ಋತು ಚಕ್ರ ಆಗೋದು ಬಿಡೋದು ನಿನ್ನ ಕೈಯಲ್ಲಿಲ್ಲವಲ್ಲ ಎಂದು ಉತ್ತರಿಸಿದ್ದರು. ಅಂದರೆ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ದೈನಂದಿನ ಚಟುವಟಿಕೆ ಸಾಂಗವಾಗಿ ನಡೆಸಬಹುದು ಎಂದಾಗಿತ್ತು ಪ್ರವಾದಿಗಳ ಅಭಿಪ್ರಾಯ.

ಸ್ಟೀವ್ ಜಾಬ್ಸ್ ರವರ ಆಪಲ್ ಕಂಪೆನಿ ಮೊದಲ ಬಾರಿಗೆ i pad ತಯಾರಿಸಿ ಅದಕ್ಕೆ ಹೆಸರೇನೆಂದು ಇಡಬೇಕು ಎಂದು i pad ಒಳಗೊಂಡು ಒಂದೆರಡು ಹೆಸರುಗಳನ್ನು ಕೊಟ್ಟು ಜನರ ಅಭಿಪ್ರಾಯ ನೋಡಿದಾಗ ಬಹಳ ಜನ ಹೇಳಿದ್ದು i pad ಹೆಸರು ಬೇಡ, ಇದು ಸ್ತ್ರೀಯರ ಋತುಚಕ್ರವನ್ನು ನೆನಪಿಸುತ್ತದೆ, kotex pad, ‘always ‘ pad ಗಳ ತೆರನಾದ ಹೆಸರು ಬೇಡ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೂ ಆಪಲ್ ಸಂಸ್ಥೆ ಇವುಗಳನ್ನು ಕಿವಿಗೆ ಹಾಕಿ ಕೊಳ್ಳದೆ ವಿಶ್ವಕ್ಕೆ ನೀಡಿದರು i pad . ಎಲ್ಲರೊಳಗೊಂದಾಗು ಎನ್ನುವ ಮಾತಿನಲ್ಲಿ ಆಪಲ್ ಗೆ ನಂಬಿಕೆಯಿಲ್ಲ. ಸ್ವಲ್ಪ ಸರಿದು ನಿಂತು ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ ಕಾಲಿಡುತ್ತಾರೆ ಆಪಲ್ ಜನ. ಹಾಗಾಗಿ ಅಷ್ಟೊಂದು ಯಶಸ್ವಿ ಈ ಕಂಪೆನಿ.

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಬಂದು ಕೇಳಿದಳು, ಬೆಳಗ್ಗಿನಿಂದ ಲಾಪ್ ಟಾಪ್ ಅನ್ನ ಅಂಟಿಸಿ ಕೊಂಡು ಕೂತಿದ್ದೀರಾ (ಶುಕ್ರವಾರ ರಜೆ ಯಾದ್ದರಿಂದ), ಸಾಕು ಏಳಿ ಈಗ ಎಂದಾಗ ನಾನು, ತಡಿಯೇ ಋತು ಚಕ್ರದ ಬಗ್ಗೆ ಬರೆಯುತ್ತಿದ್ದೇನೆ ಎಂದಿದ್ದೇ ತಡ, ಓಹೋ, ನಿಮಗೂ ಶುರು ಆಗ್ಬಿಡ್ತಾ ಅದು… ಅಲ್ಲಾ ಮತ್ತೆ… ಎಂದು ಸಿಡುಕಿ ಮರೆಯಾದಳು.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ಪ್ರಳಯವಂತೆ, ಇದೇ ತಿಂಗಳಂತೆ, ಸತ್ಯವಾಗ್ಲೂ ಅಂತೆ

ಪ್ರಳಯದ ಬಗ್ಗೆ ಆಗಾಗ ನಾವು ಓದುತ್ತಲೇ ಇರುತ್ತೇವೆ, ಓದಿ ಗಾಭರಿಯಾಗಿ ಸಿಕ್ಕ ಸಿಕ್ಕವರನ್ನು ವಿಚಾರಿಸುತ್ತೇವೆ. ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮೂಲದ ಖ್ಯಾತ ವಾರಪತ್ರಿಕೆ ಪ್ರಳಯದ ಬಗ್ಗೆ ಒಂದು ಲೇಖನ ಹಾಕಿ ಅದು ಎಷ್ಟು ಜನಪ್ರಿಯ ಆಯಿತು ಎಂದರೆ ಆ ಲೇಖನದ ಪುಸ್ತಿಕೆ ಸಹ ಮಾರಾಟಕ್ಕೆ ಬಂದು ಲಕ್ಷ ಗಟ್ಟಲೆ ಜನ ಕೊಂಡು ಓದಿದರು. ಇಂಥ ಜನರಲ್ಲಿ, ಗಾಭರಿ, ಭಯ, ಹುಟ್ಟಿಸಿ ಹಣ ಮಾಡಿಕೊಳ್ಳುವ ದಂಧೆ ಬಹಳ ಹಳತು. ಈಗ ಅಮೆರಿಕೆಯ ಕ್ಯಾಲಿಫೋರ್ನಿಯಾದ ಧರ್ಮ ಬೋಧಕ ಹೆರಾಲ್ಡ್ ಕ್ಯಾಂಪಿಂಗ್  ಗುಲ್ಲೆಬ್ಬಿಸಿದ್ದಾನೆ ಇದೇ ತಿಂಗಳು ೨೧ ಕ್ಕೆ ಅದೂ ಆರು ಘಂಟೆಗೆ ಸರಿಯಾಗಿ ಪ್ರಳಯವಾಗಲಿದೆ ಅಂತ. ಪವಿತ್ರ ಬೈಬಲ್ ಗ್ರಂಥವನ್ನು ಅವನೂ ಅವನ ಮಿತ್ರರೂ decipher ಮಾಡಿದ್ದಾರಂತೆ. 89 ವರ್ಷ ಪ್ರಾಯದ ಈ ವ್ಯಕ್ತಿ ೭೦ ವರ್ಷಗಳ ಅವಿರತ ಬೈಬಲ್ ಅಧ್ಯಯನದಿಂದ ಪ್ರಳಯದ ಬಗ್ಗೆ ಪವಿತ್ರ ಗ್ರಂಥದಲ್ಲಿರುವುದನ್ನು ಜಗತ್ತಿಗೆ ಸಾರುತ್ತಿದ್ದಾನೆ. ಅದರಲ್ಲಿ ಪ್ರಳಯದ ವಿಷಯ ಸಿಕ್ಕಿತಂತೆ. ದೇವ ವಾಣಿ ಇರುವುದು ಮನುಷ್ಯರಿಗೆ ದಾರಿ ದೀಪವಾಗಿ. ಅದರ ಸಂದೇಶ ನೇರವಾದ ಭಾಷೆಯಲ್ಲಿ ಇರಬೇಕು.  ಯಾವುದೇ ಒಂದು ಉಪಕರಣ ಕೊಂಡಾಗ ಅದರೊಂದಿಗೆ ಬರುವ catalogue  ರೀತಿ. ಅದನ್ನು decipher ಮಾಡೋ ಅವಶ್ಯಕತೆ ಬರಕೂಡದು. ಏಕೆಂದರೆ decipher ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತಾ ಹೋಗುತ್ತದೆ. ಅದರೊಂದಿಗೆ decipher ಮಾಡಲ್ಪಟ್ಟ ಸಂದೇಶವೂ ಕೂಡಾ. ಅವರವರ ಬುದ್ಧಿ ಮತ್ತೆಗೆ ಅನುಸಾರ decipher ಕೆಲಸ ನಡೆಯುತ್ತದೆ.

ಹಿಂದೂ ಶಾಸ್ತ್ರಗಳಲ್ಲಿ ಪ್ರಳಯದ ಬಗ್ಗೆ ಉಲ್ಲೇಖ ಇರುವುದನ್ನು ಕಾಣಬಹುದು. ಕಲಿಯುಗದ ಅವಸಾನದಲ್ಲಿ ಪ್ರಳಯ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಅದೇ ರೀತಿ “ಏಕದೇವೋಪಾಸನೆ” ಗೆ ಒತ್ತು ನೀಡುವ ಅಬ್ರಾಹಾಮಿಕ್ ಧರ್ಮಗಳಾದ ಯಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲೂ ಇದರ ಪ್ರಸ್ತಾಪ ಇದೆ. ಇಸ್ಲಾಂ ಧರ್ಮದಲ್ಲಿ ಪ್ರಳಯವನ್ನು “ಯೌಮ್ ಅಲ್ ಕಿಯಾಮ” (ಅಂತ್ಯ ದಿನ) ಎಂದು ಕರೆಯುತ್ತಾರೆ.

ಇಸ್ಲಾಮಿನಲ್ಲಿ ಪ್ರಳಯದ ದಿನದ ಬಗ್ಗೆ ಉಲ್ಲೇಖ ಕೆಲವೊಂದು ದೃಷ್ಟಾಂತ ಗಳೊಂದಿಗೆ ಕೊಡಲಾಗಿದೆ. ಏಕಾ ಏಕಿ ಪ್ರಳಯ ಆರಂಭ ಆಗೋಲ್ಲ. ತಂದೆ ಮಗನನ್ನು ಕೊಲ್ಲುವುದು, ತಾಯಿ ಮಗನ, ತಂದೆ ಮಗಳ ನಡುವಿನ ಲೈಂಗಿಕ ಸಂಬಂಧ, ಅನ್ಯಾಯಗಳು, ಬಡ್ಡಿ, ಮೋಸ, ವಂಚನೆ, ಕೊಲೆ ಸುಲಿಗೆ, ಕುಡಿತ,  ದಿನನಿತ್ಯದ ಪ್ರತಿಯೊಬ್ಬರ ಧಂಧೆಯಾಗಿ, ಜೀವನ ರೀತಿಯಾಗಿ ಮಾರ್ಪಟ್ಟು ಇಂಥ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರು ಇದನ್ನು ಸ್ವಾಭಾವಿಕ ಎಂದು ಪರಿಗಣಿಸಿ ಉಡಾಫೆಯಿಂದ ಬದುಕುವುದು. ಆಳುವವರು ಅತಿ ಕ್ರೂರಿಗಳಾಗಿ ಮಾರ್ಪಡುವುದು. ಬಡವರಿಗೆ ಸಲ್ಲಬೇಕಾದ ಪಾಲನ್ನು ಕೊಡದೆ ಸ್ವತಃ ಸ್ವಾಹಾ ಮಾಡುವುದು. ಹೀಗೆ ಅನ್ಯಾಯ, ಅಕ್ರಮ, ಕ್ರೌರ್ಯಗಳು ಮುಗಿಲು ಮುಟ್ಟಿದಾಗ ಇನ್ನೂ ಗಂಭೀರವಾದ ಕೆಲವು ಘಟನೆಗಳು ಜರುಗುವುದು ಪ್ರಳಯಕ್ಕೆ ಮುನ್ನ.

ಪ್ರಥಮವಾಗಿ ಪವಿತ್ರ ಮಕ್ಕಾ ನಗರದಲ್ಲಿರುವ ಕಪ್ಪು ಚೌಕಾಕಾರದ “ಕಾಬಾ” ಭವನ ವನ್ನು ನಾಶ ಮಾಡ ಲಾಗುವುದು.

ಒಂದು ವಿಚಿತ್ರ, ಭೀಕರ ಜಂತುವಿನ ದರ್ಶನ ವಿಶ್ವಕ್ಕೆ ಆಗುವುದು.

ಭಯಂಕರ ಚಂಡಮಾರುತ ಬೀಸಿ ಬೆಟ್ಟ ಗುಡ್ಡಗಳು, ಪರ್ವತಗಳು ಹತ್ತಿಯ ಉಂಡೆಗಳಾಗಿ ಹಾರುವುವು.

ಅಂತಿಮವಾಗಿ, ಪೂರ್ವ ದಿಕ್ಕಿನಲ್ಲಿ ಹುಟ್ಟುವ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುವನು. ಈ ಬೆಳವಣಿಗೆಯೊಂದಿಗೆ ಮನುಷ್ಯನ ಎಲ್ಲಾ ಲೆಕ್ಕಾಚಾರಗಳ ಕಡತವನ್ನು ಮುಚ್ಚಲಾಗುವುದು.( end of year accounting ಥರ).

ಮೇಲೆ ಹೇಳಿದ ವರ್ಣನೆ ಇಸ್ಲಾಂ ಗ್ರಂಥ ಗಳಲ್ಲಿರುವ ನೂರಾರು ದೃಷ್ಟಾಂತ ಗಳಿಂದ ಆರಿಸಿದ್ದು.         

ಪ್ರಳಯದ ಬಗ್ಗೆ ಕನ್ನಡದ ನ್ಯೂಸ್ ಚಾನಲ್ ನವರು ದುಗುಡ, ಭಯ ಮಿಶ್ರಿತ ಧ್ವನಿಯಲ್ಲಿ ವಿವರಣೆ, ವರ್ಣನೆ ನೀಡುವುದನ್ನು ಕೇಳಿದವರು ಕಂಪಿಸುವುದರಲ್ಲಿ ಅನುಮಾನವಿಲ್ಲ. ಒಂದು ಆಂಗ್ಲ ಚಿತ್ರದ ತುಣುಕೊಂದನ್ನು ತೋರಿಸುತ್ತಾ ಪ್ರಳಯವಂತೆ, ಹಾಗಾಗುತಂತೆ, ಹೀಗಾಗುತ್ತಂತೆ ಎಂದು ಅಂತೆ ಕಂತೆಗಳನ್ನು ಪುಂಖಾನು ಪುಂಖವಾಗಿ ಬಿಡುತ್ತಾ ಜನರಲ್ಲಿ ಗಾಭರಿ ಹುಟ್ಟಿಸುವ ಇವರ ನಡವಳಿಕೆಗೆ ಏನನ್ನಬೇಕೋ? ಈ ವರದಿಗಳನ್ನು ನೋಡಿದ ಜನ ಗಾಭರಿಯಾಗೋ ಬದಲು ಆ ಚಾನಲ್ ಗಳಿಗೆ ಇ –ಮೇಲ್ ಮೂಲಕ ಛೀಮಾರಿ ಹಾಕಿ ಇಂಥ ಬೊಗಳೆ ಗಳನ್ನು ಜನ ಸಹಿಸರು ಎನ್ನುವ ಸಂದೇಶವನ್ನು ಕೊಡಬೇಕು.

ಬಹುಪತ್ನಿತ್ವ ಮತ್ತು popular perception

ಬಹುಪತ್ನಿತ್ವ ಎಂದ ಕೂಡಲೇ popular perception ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆ ಯಾಗುವವರು ಎಂದು. ಈ ತಪ್ಪು ತಿಳಿವಳಿಕೆಗೆ ಜನರ ತಿಳಿಗೇಡಿತನಕ್ಕಿಂತ ಮಾಧ್ಯಮಗಳ ಮತ್ತು ಹಗೆ ವರ್ತಕ ರಾಜಕಾರಣಿಗಳ ಕುಚೋದ್ಯದ ಅಪಪ್ರಚಾರ ಕಾರಣ ಎನ್ನಬಹುದು. ಹೌದು ಇಸ್ಲಾಂ ಬಹುಪತ್ನಿತ್ವ ವನ್ನು ಅನುಮತಿಸುತ್ತದೆ ಷರತ್ತುಗಳೊಂದಿಗೆ. ಈ ಶರತ್ತುಗಳೇ ನನ್ನಂಥ ಮತ್ತು ಶೇಕಡಾ 90 ಕ್ಕಿಂತ ಹೆಚ್ಚು ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದಲು ಇಷ್ಟ ಪಡದೆ ಇರುವುದು. ದೇವ ವಾಣಿ “ಪವಿತ್ರ ಕುರ್’ ಆನ್” ನಲ್ಲಿ ವಿಶ್ವಾಸ ಇಡುವ ಮುಸ್ಲಿಮನೊಬ್ಬ ದೇವರು ವಿಧಿಸಿದ ಶರತ್ತುಗಳನ್ನು ಅವಗಣಿಸಿ ತನ್ನ ಶಾರೀರಿಕ ತೃಷೆಗಾಗಿ ಪಾಪವನ್ನು ತನ್ನ ಮೇಲೆ ಹೇರಿಕೊಳ್ಳಲಾರ. ಹಾಗೆಯೇ ಬಹುಪತ್ನಿತ್ವ ಇಸ್ಲಾಮಿನ prerogative ಮಾತ್ರ ಅಲ್ಲ ಎಂದು ಈ ಕುರಿತು ನಡೆದ ಅಧ್ಯಯನಗಳು ಸ್ಥಿರೀಕರಿಸುತ್ತವೆ.

ಹಿಂದೂ ಧರ್ಮೀಯರ ಬೌಧಾಯನ ಧರ್ಮಶಾಸ್ತ್ರದಲ್ಲಿ ಬ್ರಾಹ್ಮಣರು ನಾಲ್ಕು ಹೆಂಡಿರನ್ನೂ, ಕ್ಷತ್ರಿಯ ಮೂರು, ವೈಶ್ಯ ಎರಡು ಮತ್ತು ಶೂದ್ರ ಒಂದು ಹೆಣ್ಣನ್ನು ಮದುವೆಯಾಗಬಹುದು. ಭಗವಾನ್ ಶ್ರೀ ಕೃಷ್ಣನೂ, ಮತ್ತು ಪಾಂಡವರೂ ಬಹುಪತ್ನಿತ್ವವನ್ನು ಆಚರಿಸಿದವರು.      

ಕನ್ನಡದ ಸುಪ್ರಸಿದ್ಧ ವೆಬ್ ತಾಣವೊಂದರಲ್ಲಿ ಒಬ್ಬರು “ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!” ಶೀರ್ಷಿಕೆಯಡಿ ಮೈಸೂರಿನ ರಾಜ ಮನೆತನ ಬಹುಪತ್ನಿತ್ವವನ್ನು ಆಚರಿಸುತ್ತಿತ್ತು ಎಂದು ಬರೆದಿದ್ದರು. . ಅದರ ತುಣುಕೊಂದನ್ನು ಕೆಳಗೆ ನೀಡಿದ್ದೇನೆ.

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ “ಎಫಿಗ್ರಾಫಿಯಾ ಕರ್ನಾಟಿಕ” ಸಂಪುಟ ೫ ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ಈ ಚೂರ್ಣಿಕೆಯನ್ನು ಸಿದ್ಧ ಪಡಿಸಿದ ಕಲಾವಿದ ತಿಪ್ಪಣ್ಣ ಎನ್ನುವ ವ್ಯಕ್ತಿ.

ಮೈಸೂರು ರಾಜರುಗಳು ಮತ್ತು ಅವರ ಸಂಸಾರ:

ದೊಡ್ಡ ದೇವರಾಜ ವೊಡೆಯರ್ – 53 ಹೆಂಡಿರು 11 ಮಕ್ಕಳು

ಚಿಕ್ಕ ದೇವರಾಜ ವೊಡೆಯರ್ – 22 ಹೆಂಡಿರು, 2 ಮಕ್ಕಳು

ಕಂತೀರವ ಮಹಾರಾಜ ವೊಡೆಯರ್ – 3 ಹೆಂಡಿರು, 5 ಮಕ್ಕಳು

ವಮ್ಮಡಿ ದೊಡ್ಡ ಕೃಷ್ಣ ರಾಜ ವೊಡೆಯರ್ – 45 ಹೆಂಡಿರು, 2 ಮಕ್ಕಳು

ವಮ್ಮಡಿ ಚಾಮರಾಜ ವೊಡೆಯರ್ – 3 ಹೆಂಡಿರು, ಮಕ್ಕಳಿಲ್ಲ

ಇಮ್ಮಡಿ ಕೃಷ್ಣರಾಜ ವೊಡೆಯರ್ – 8 ಹೆಂಡಿರು, 9 ಮಕ್ಕಳು

ಮುಮ್ಮಡಿ ಖಾಸಾ ಚಾಮರಾಜ ವೊಡೆಯರ್ – 10 ಹೆಂಡಿರು ಮತ್ತು 4 ಮಕ್ಕಳು

ಮುಮ್ಮಡಿ ಶ್ರೀ ಕೃಷ್ಣ ರಾಜ ವೊಡೆಯರ್ ಬಹಾದುರ್ – 20 ಹೆಂಡಿರು

ಚಾಮರಾಜ ವೊಡೆಯರ್ – 65 ಹೆಂಡಿರು

ಬೆಟ್ಟ ಚಾಮರಾಜ ವೊಡೆಯರ್ – 13 ಹೆಂಡಿರು, 6 ಮಕ್ಕಳು

ರಾಜ ವೊಡೆಯರ್  – 8 ಹೆಂಡಿರು, 6 ಮಕ್ಕಳು

ಇಮ್ಮಡಿ ರಾಜ ವೊಡೆಯರ್ – 19 ಹೆಂಡಿರು.

ಮೇಲೆ ಹೇಳಿದ ಅರಸರು ವಿವಿಧ ಕಾರಣಗಳಿಗಾಗಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಇಟ್ಟು ಕೊಂಡಿರಬಹುದು ಮತ್ತು ಅವರುಗಳು ಬದುಕಿದ ಕಾಲದಲ್ಲಿ ಹಾಗೆ ಬಹುಪತ್ನೀ ವೃತಸ್ಥರಾಗುವುದು ರೂಢಿಯೂ ಇದ್ದಿರಬೇಕು. ಅರಸರು ಈ ರೀತಿ ಮಾಡಿದಾಗ ಸಮಾಜದ ಪ್ರತಿಷ್ಟಿತ ಗಣ್ಯರೂ ಸಹ 20, 30 ಅಲ್ಲದಿದ್ದರೂ 2, 3 ಪತ್ನಿಯರನ್ನಾದರೂ ಹೊಂದಿರುವ ಸಾಧ್ಯತೆ ಹೆಚ್ಚು ಎಂದೇ ಹೇಳಬಹುದು. ಹಾಗಾಗಿ ಬಹುಪತ್ನಿತ್ವ ಆಗಿನ ಕಾಲದಲ್ಲಿ ubiquitous ಎನ್ನಬಹುದು.  

ಆಫ್ರಿಕಾದ swaziland ದೇಶದ ರಾಜ ಪ್ರತೀ ವರ್ಷವೂ ಸುರ ಸುಂದರ ಕನ್ಯೆಯರ ಮೇಳ ಏರ್ಪಡಿಸಿ ತನಗೆ ಚೆಂದುಳ್ಳಿಯಾಗಿ ಕಂಡ ಚಕೋರಿ ಯನ್ನು ಮದುವೆಯಾಗಿ ತನ್ನ ಚಂದ್ರಮಂಚದ ಸಂಗಾತಿಯರ ಸಾಲಿಗೆ ಸೇರಿ ಕೊಳ್ಳುತ್ತಾನಂತೆ. ಅವನ ಅದೃಷ್ಟಕ್ಕೆ ನಾವು ಹಲುಬಿ ಕರುಬಿ ಫಲವಿಲ್ಲ ಎನ್ನಿ, ಏಕೆಂದರೆ ಇರುವ ಒಬ್ಬ ಹೆಂಡತಿಯ ಆಸೆ, ಅಭಿಲಾಷೆ, ಬೇಕು ಬೇಡಗಳನ್ನು ಪೂರೈಸುವತ್ತ ನಾವು ನಡೆಸುವ ಕುಸ್ತಿ ಕಸರತ್ತೇ ಸಾಕು ಬೇಕಾಗಿರುವಾಗ  ಮತ್ತೊಂದು, ಮಗುದೊಂದು, ಇನ್ನೊಂದು ….ಹೀಗೆ ಹೆಂಡತಿಯರನ್ನು ನಮ್ಮ ಗೋಣಿನ ಸುತ್ತಾ ಪೋಣಿಸುತ್ತಾ ಹೋದರೆ  ಒಂದು ದಿನ ಅದೇ ನಮಗೆ ಉರುಳಾಗಿ ನಮ್ಮ ಅವಸಾನಕ್ಕೆ ಕಾರಣವಾಗಬಹುದು ಎನ್ನುವುದರಲ್ಲಿ ಸಂಶಯ ಬೇಡ, ಏನಂತೀರ?

ಜಿಹಾದ್ ಎಂದರೇನು?

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ “ಮದ್ರಸಾ” ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಜಿಹಾದ್ ಪದದ ಕುರಿತು ಯಾರ ಬಾಯಲ್ಲೂ ಕೇಳಿರಲಿಲ್ಲ.  ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ. ನನಗೂ ಈ ಪದದ ಬಗ್ಗೆ ಅರಿಯಲು ಇಷ್ಟೊಂದು ವರ್ಷಗಳು ಬೇಕಿರಲಿಲ್ಲ.  ೧೭೦ ಕೋಟಿ ಮುಸ್ಲಿಮ್ ಜನಸಂಖ್ಯೆಯಿರುವ ಪ್ರಪಂಚದಲ್ಲಿ ಈ ತೆರನಾದ ನಿರರ್ಥಕ ಹಿಂಸೆಯಲ್ಲಿ ತೊಡಗಿಸಿಕೊಂಡವರು ಕೆಲವೇ ಲಕ್ಷಗಳಷ್ಟು ದುರುಳರು, ಧರ್ಮ ದ್ರೋಹಿಗಳು. ಬಹುಪಾಲು ಮುಸ್ಲಿಮರು ಎಲ್ಲರಂತೆ ದುಡಿಯುತ್ತಾ, ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಶ್ರಮ ಪಡುತ್ತಿರುವವರು. ಅವರಿಗೆ ಹಿಂಸೆ ಬೇಕಿಲ್ಲ. ಅವರಿಗೆ ಬೇಕಿರುವುದು ರೋಟಿ, ಕಪಡಾ, ಔರ್ ಮಕಾನ್. ತಿನ್ನಲು ಆಹಾರ, ಉಡಲು ಬಟ್ಟೆ, ಮತ್ತು ತಲೆಯ ಮೇಲೊಂದು ಸೂರು.        

ಆಸ್ಟ್ರೇಲಿಯಾದಲ್ಲಿ ಜಿಹಾದ್ ನ ಬಗ್ಗೆ ಒಂದು ಸಮ್ಮೇಳನದಲ್ಲಿ ಮಾತನಾಡಿದ ಇಸ್ಲಾಮೀ ವಿಧ್ವಾಂಸರು ಹೇಳಿದ್ದು, ಜಿಹಾದ್ ಎಂದರೆ ಶ್ರಮ ಎಂದು ಹೇಳುತ್ತಾ ಒಂದು ಒಳ್ಳೆಯ ಸುಸಂಸ್ಕೃತ ಸಮಾಜ ಕಟ್ಟಲು ವಿಶ್ವದ ಎಲ್ಲಾ ದೇಶಗಳ ಥರಾ ಆಸ್ಟ್ರೇಲಿಯಾ ದೇಶದ ಸರಕಾರ ಸಹ ಜಿಹಾದ್ ಇಲಾಖೆಗಳನ್ನು ಹೊಂದಿದೆ, ಅದೆಂದರೆ ಗೃಹ ಅಥವಾ ರಕ್ಷಣಾ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ  ಮತ್ತು ವಿದ್ಯಾ ಇಲಾಖೆ. ಅದರ ಅರ್ಥ ಸಮಾಜದ ರಕ್ಷಣೆ, ಒಳಿತು ಮತ್ತು ಉನ್ನತಿಗಾಗಿ ಜನ ನೇಮಿಸಿದ, ಆರಿಸಿದ ಸರಕಾರ ಪರಿಶ್ರಮ ಪಡುವುದು ಎಂದು.

ಜಿಹಾದ್ ಪದದ ಮೂಲ “ಜಹ್ದ್” ಎನ್ನುವ ಅರಬ್ ಪದದಿಂದ. ಅದರ ಅರ್ಥ ಶ್ರಮ ವಹಿಸುವುದು. ಒಬ್ಬ ದುಶ್ಚಟ ಬಿಡಲು, ಕುಡಿತ ನ್=ಬಿಡಲು , ಜೂಜಾಟ ಬಿಡಲು ಪರಿಶ್ರಮಿಸುವ ಹಾಗೆಯೇ ಜಿಹಾದ್ ಎನ್ನುವುದು ಸಹ ಒಳ್ಳೆಯ ನಡತೆಗೆ ಒಬ್ಬ ಮಾಡುವ ಪರಿಶ್ರಮ. ಮೇಲೆ ಹೇಳಿದ ಮೂಲ ಪದದಿಂದ ಬಂದ ಮತ್ತೆರಡು ಪದಗಳೆಂದರೆ ಇಜ್ತಿಹಾದ್, ಮತ್ತು ತಹಜ್ಜುದ್.

ಇಜ್ತಿಹಾದ್ ಎಂದರೆ  ಜ್ಞಾನಾರ್ಜನೆ ಎಂದು. ಈ ಇಜ್ತಿಹಾದ್ ನ ಪರಿಣಾಮವೇ ಒಂದು ಸಾವಿರ ವರ್ಷಗಳಿಗೂ ಮೊದಲು ಬಾಗ್ದಾದ್, ಕೈರೋ ಮತ್ತು ಡಮಾಸ್ಕಸ್ ನಗರಗಳಲ್ಲಿ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯಗಳು ಸ್ಥಾಪಿತ ಗೊಂಡಿದ್ದು ಮತ್ತು ಅಲ್ಲಿಂದಲೆ ಅಂಧಕಾರದಲ್ಲಿದ್ದ ಅಇರೋಪ್ಯ ದೇಶಗಳಿಗೆ ಜ್ಞಾನ ಹರಡಿದ್ದು.

“ಇಜ್ತಿಹಾದ್” ನ ಪರಿಣಾಮವೇ ಇರಬೇಕು ಹಿಂದೂ ವೇದಗಳನ್ನು ಮುಘಲ್ ಚಕ್ರವರ್ತಿ  ಷಾಜಹಾನನ ಮಗ “ದಾರಾ ಶಿಕೋ” ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಭಾಷಾಂತರಿಸಿ ವಿಶ್ವಕ್ಕೆ ಪರಿಚಯಿಸಿದ್ದು. ಆಗಲೇ ವೇದಗಳ ಸೊಗಸು ವಿಶ್ವಕ್ಕೆ ತಿಳಿದಿದ್ದು, ಅದರ ಕಂಪು ಪಸರಿದ್ದು.   

“ತಹಜ್ಜುದ್: ಎಂದರೆ ಏಕಾಂತದ ಆರಾಧನೆ: ಗಾಢ ನಿದ್ದೆಯಿಂದ ರಾತ್ರಿ ಎಚ್ಚರವಾದರೆ ಕೂಡಲೇ ಎದ್ದು ನಮಾಜ್ ಮಾಡಬೇಕೆಂದು ನಿಯಮವಿದೆ. ಆ ನಮಾಜ್ ಕಡ್ಡಾಯವಲ್ಲ,  ಆದರೆ ಬಹಳಷ್ಟು ಜನ ಈ ತಹಜ್ಜುದ್ ನಮಾಜ್ ಮಾಡುತ್ತಾರೆ. ಏಕೆಂದರೆ ನೀರವ ರಾತ್ರಿಯಲ್ಲಿ ಇಡೀ ವಿಶ್ವ ಗಾಢ ನಿದ್ದೆಯಲ್ಲಿರುವಾಗ ತನ್ನನ್ನು ಸೃಷ್ಟಿಸಿದ ಪ್ರಭುವನ್ನು ನೆನೆದು ಸಾಷ್ಟಾಂಗ ಮಾಡಿದರೆ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಲ್ಲದೆ ಅವನು ದೇವರಿಗೆ ತೀರಾ ಹತ್ತಿರದವನಾಗುತ್ತಾನೆ ಎನ್ನುವ ನಂಬಿಕೆಯಿಂದ.  

ಈಗ ನನ್ನ ಈ ಬರಹವನ್ನ ಅತ್ಯಂತ  ಸಂಯಮದಿಂದ ಯಾವುದೇ ಆವೇಶಕ್ಕೆ ಒಳಗಾಗದೆ ನೀವು ಓದುತ್ತಿದ್ದರೆ ನೀವು ಜಿಹಾದ್ ಮಾಡುತ್ತಿದ್ದೀರಿ ಎಂದರ್ಥ. ಅಂದರೆ ಕಾತುರತೆಯನ್ನು ಹತ್ತಿಕ್ಕಿ ಶಾಂತರಾಗಿ ಸಂಯಮದಿಂದ ಮುಂದೆ ಬರೆದಿದ್ದನ್ನು ಓದುವ, ನೀವು ಮಾಡುವ ಯತ್ನ ಅಥವಾ ಪರಿಶ್ರಮ, ಇದೇ ನಿಜವಾದ ಜಿಹಾದ್ ನ ಅರ್ಥ.  

ಈ ಮೇಲಿನ ವಿಶ್ಲೇಷಣೆ ನೋಡಿದಾಗ ಜಿಹಾದ್ ಪದಕ್ಕೂ ಹಿಂಸೆ, ಭಯೋತ್ಪಾದನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನಮಗೆ ತಿಳಿಯುತ್ತದೆ. “ಜುಹ್ದ್” ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೂ ಕೌಶಲ್ಯವನ್ನೂ, ಉತ್ತಮ ಪಡಿಸಿ ಕೊಳ್ಳಲು ಮಾಡುವ ಪ್ರಾಮಾಣಿಕ ಯತ್ನ, “ಇಜ್ತಿಹಾದ್” ಎಂದರೆ ಆ ಪ್ರಾಮಾಣಿಕ ಯತ್ನದ ಕಡೆ ಜ್ಞಾನದ ಸಹಾಯ ಪಡೆಯುವುದು ಮತ್ತು ತನ್ನ ಪರಿಶ್ರಮ ಮತ್ತು ಜ್ಞಾನಾರ್ಜನೆಯ ಅನ್ವೇಷಣೆಯಲ್ಲಿ ತನ್ನನ್ನು ಸೃಷ್ಟಿಸಿದ ತನ್ನ ಭಗವಂತನ ಸಹಾಯ ಯಾಚಿಸುವುದು ಏಕಾಂತದ ಆರಾಧನೆಯಾದ ” ತಹಜ್ಜುದ್” ಮೂಲಕ. ಹಾಗಾದರೆ ಯುದ್ಧಕ್ಕೆ, ಹೋರಾಟಕ್ಕೆ ಅರಬ್ಬೀ  ಏನೆಂದು ಕರೆಯುತ್ತಾರೆ?   

ಜಿಹಾದ್ ಎಂದರೆ ಯುದ್ಧ ಹಿಂಸೆ ಮಾತ್ರ ಅಲ್ಲ ಎಂದಾದರೆ ಯುದ್ಧ ಮತ್ತು ಈ ತೆರನಾದ ಸ್ವರಕ್ಷಣೆಯ ಹೋರಾಟಕ್ಕೆ “ಹರ್ಬ್” ಮತ್ತು “ಕತ್ಲ್” ಎಂತಲೂ ಕರೆಯತ್ತಾರೆ. “ಹರ್ಬ್” ಎಂದರೆ ಯುದ್ಧ. “ಕತ್ಲ್” ಎಂದರೆ ಕೊಲೆ ಎಂದು. (ಹಿಂದೀ ಮತ್ತು ಉರ್ದು ಭಾಷೆಯಲ್ಲಿ ಕೂಡಾ ಕತ್ಲ್ ಅಂದರೆ ಕೊಲೆ ಎಂದೂ, ಕಾತಿಲ್ ಎಂದರೆ ಕೊಲೆಗಾರ ಎಂದೂ ಕರೆಯುತ್ತಾರೆ).

ಹಾಗಾದರೆ ಮಾಧ್ಯಮಗಳು ಮತ್ತು ಇಸ್ಲಾಂ ಟೀಕಾಕಾರ ರಿಗೆ ಈ ವಿವರಣೆ ಆಗಲಿ, ಅರಬ್ಬೀ ವ್ಯಾಕರಣದ ಈ ಅಂಶಗಳಾಗಲಿ ತಿಳಿದಿಲ್ಲ ಎಂದಲ್ಲ. ಇಸ್ಲಾಮನ್ನು ದೂಷಿಸುವ ಪರಿಪಾಠ ಇಂದು ನಿನ್ನೆಯದಲ್ಲ. ಕ್ರೈಸ್ತರ ಮೊದಲ ಧರ್ಮ ಯುದ್ಧ ದ (crusade) ನಂತರ ಮತ್ತು ಎರಡನೇ ಧರ್ಮ ಯುದ್ಧದಲ್ಲಿ ಇಂಗ್ಲೆಂಡಿನ ರಾಜ richard the lion heart ಮುಸ್ಲಿಮರ ವಿರುದ್ಧ ನಡೆದ ಜೆರುಸಲೆಂ ಕದನದಲ್ಲಿ ಸೋತ ನಂತರ ಆರಂಭ ಗೊಂಡ ಈ wittch hunting and slandering campaign ನಿರಂತರವಾಗಿ ನಡೆದುಕೊಂಡು ಬಂದು ಸೆಪ್ಟಂಬರ್ ಧಾಳಿಯ ನಂತರ ಆಧುನಿಕ ರೂಪ ಪಡೆದುಕೊಂಡಿತು.  

ಜಿಹಾದ್ ಅಂದರೆ ಯುದ್ಧ ಅಲ್ಲವೇ ಅಲ್ಲ ಎಂತಲೋ? ಸ್ವರಕ್ಷಣೆಗೆ ರಾಷ್ಟ್ರಗಳು ಯುದ್ಧ ಸಾರಿವೆ, ಅವನ್ನು ಜಿಹಾದ್ ಎಂದೂ ಕರೆಯಲಾಗಿದೆ. ಆದರೆ ಕಂದಹಾರದ, ಪಾಕಿಸ್ತಾನದ ಗುಡ್ಡ ಗಾಡಿನಲ್ಲಿ ಅವಿತುಕೊಂಡು ನಮ್ಮ ಮೇಲೆ ಮತ್ತು ಅಲ್ಲಿನ ಮುಗ್ಧ ಜನರ ಮೇಲೆ ಆಕ್ರಮಣ ನಡೆಸಿ ರಕ್ತ ಪಾತ ಎಸಗುವ ಮತಾಂಧರು ಜಿಹಾದ್ ಅಲ್ಲ ಮಾಡುತ್ತಿರುವುದು. ಧರ್ಮದ್ರೋಹದ, ಅಮಾನವೀಯ ಕೃತ್ಯ.

ಇಸ್ಲಾಮೀ ರಾಜಕೀಯ ಶಾಸ್ತ್ರದಲ್ಲಿ ಎರಡು ರೀತಿಯ ರಾಷ್ಟ್ರ ಸಮೂಹಗಳ ಉಲ್ಲೇಖವಿದೆ. ಒಂದು, “ದಾರುಲ್ ಹರ್ಬ್”, ಮತ್ತೊಂದು “ದಾರುಲ್ ಇಸ್ಲಾಮ್”. ದಾರುಲ್ ಹರ್ಬ್ ಎಂದರೆ ಶತ್ರು ರಾಷ್ಟ್ರ. ಕಾರಣವಿಲ್ಲದೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ ಮತ್ತು ಚೀನಾ ದೇಶಗಳಂತೆ. ಇಂಥ ರಾಷ್ಟ್ರಗಳು ದಾರುಲ್ ಹರ್ಬ್ ವ್ಯಾಖ್ಯಾನಕ್ಕೆ ಬರುತ್ತವೆ. ದಾರುಲ್ ಇಸ್ಲಾಂ ಎಂದರೆ ಮುಸ್ಲಿಂ ರಾಷ್ಟ್ರ. ಮುಸ್ಲಿಂ ರಾಷ್ಟ್ರ ಮಾತ್ರವಲ್ಲ ಇಸ್ಲಾಮನ್ನು ಗೌರವಿಸಿ, ಆದರಿಸಿ ಮುಸ್ಲಿಮರ ಆರಾಧನೆಗೆ ಅನುಕೂಲ ಮಾಡಿಕೊಡುವ, ಮಸೀದಿ, ಮದ್ರಸಗಳನ್ನು ಕಟ್ಟಲು ಸಹಾಯ ಮಾಡುವ, ಸರಿಸಮನಾದ ಹಕ್ಕುಗಳನ್ನೂ ನೀಡಿ ಕಾಳಜಿ ವಹಿಸುವ ಮುಸ್ಲಿಮೇತರ ರಾಷ್ಟ್ರವೂ ದಾರುಲ್ ಇಸ್ಲಾಂ ವ್ಯಾಖ್ಯಾನದ ಅಡಿಗೆ ಬರುತ್ತದೆ. ನಮ್ಮ ಭವ್ಯ ಭಾರತ ಈ ರಾಷ್ಟ್ರದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ಮುಸ್ಲಿಮರನ್ನು, ಅವರ ಸಂಸ್ಕೃತಿಯನ್ನು ಆದರಿಸುವ ರೀತಿ ನೋಡಿ ಜಗತ್ತಿನ ಇತರೆ ಇಸ್ಲಾಮೀ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಮೋಘ ಭಾರತೀಯ ಸಂಸ್ಕಾರವನ್ನು,  ಹೃದಯ ವೈಶಾಲ್ಯತೆಯನ್ನು ಕೊಂಡಾಡಿವೆ.  ಹೀಗಿರುವಾಗ ಈ ದೇಶದ ಮೇಲೆ ಶಸ್ತ್ರ ಪ್ರಯೋಗ ಮಾಡುವುದು, ಅಮಾಯಕರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಅಂಥ ವಿದ್ರೋಹಿಗಳನ್ನು ನೇರ ಮಾಡಲು ಸಾಧ್ಯವಿಲ್ಲದಿದ್ದರೆ ನೇರವಾಗಿ ನೇಣಿಗೆ ಕಳಿಸಬೇಕಾದ್ದು ನಾಗರೀಕ ಸಮಾಜ ಮಾಡಬೇಕಾದ ಪ್ರಥಮ ಕೆಲಸ.

ಪ್ರಪಂಚದಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ಜನರು ಒಂದಲ್ಲ ಒಂದು ರೀತಿಯ ಹೋರಾಟದಲ್ಲಿ ನಿರತರಾಗಿದ್ದನ್ನು ನಾವು ಕಂಡಿದ್ದೇವೆ. ಯೂರೋಪ್ ಖಂಡದಲ್ಲಿ ೬೦ ಲಕ್ಷ ಯೂಹೂದ್ಯರನ್ನು ಕೊಂದಿದ್ದು, gas chamber ಗಳಿಗೆ ಕಳಿಸಿ ನಿರ್ನಾಮ ಮಾಡಿದ್ದು “ನಾಜಿಗಳು”. ನಾಜಿಗಳು ಯಾವ ಧರ್ಮೀಯರೆಂದು ಯಾರಿಗಾದರೂ ತಿಳಿದಿದೆಯೇ? ಬೋಸ್ನಿಯಾದಲ್ಲಿ ೮೦ ಸಾವಿರಕ್ಕೂ ಮುಸ್ಲಿಮರನ್ನು ಕೊಂದವರು “ಸರ್ಬಿಯನ್ನರು”. ಸರ್ಬಿಯನ್ನರು ಯಾವ ಧರ್ಮೀಯರೆಂದು ಎಲ್ಲೂ ಉಲ್ಲೇಖವಿಲ್ಲ. ಶ್ರೀಲಂಕೆಯಲ್ಲಿ ಅಮಾಯಕ ತಮಿಳರ ಹಿಂಸೆ, ಕೊಲೆ ನಡೆಸಿದ್ದು “JVP” ಯವರು, JVP ಯವರು ಯಾವ ಧರ್ಮದರೆಂದು ಉಲ್ಲೇಖವಿಲ್ಲ. ಅದೇ ಶ್ರೀಲಂಕೆಯಲ್ಲಿ ೨೫ ವರ್ಷಗಳಿಗೂ ಹೆಚ್ಚು ಕಾಲ ಬೌದ್ಧರನ್ನೂ, ಅಲ್ಲಿನ ದೊಡ್ಡ ದೊಡ್ಡ ನಾಯಕರನ್ನೂ ಕೊಂದವರು “ವ್ಯಾಘ್ರರು”. ವ್ಯಾಘ್ರರು ಯಾವ ಧರ್ಮೀಯರೆಂದು ಉಲ್ಲೇಖವಿಲ್ಲ. ಇತ್ತೀಚೆಗೆ ಅಮೆರಿಕೆಯಲ್ಲಿ ಅಪಾರ ಆಯುಧ ಶೇಖರಿಸಿ ದೊಡ್ಡ ರೀತಿಯ ಹಿಂಸೆಗೆ ಅಣಿಯಾಗುತ್ತಿದ್ದ ಜನರು “ಹುಟಾರಿ” ಪಂಗಡದವರು. “ಹುಟಾರಿ” ಗಳು ನಂಬಿದ ಧರ್ಮ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಆದರೆ ಈ ಮಾನದಂಡ ಮುಸ್ಲಿಮರೆಂದು ಕರೆದುಕೊಂಡು ಧರ್ಮಕ್ಕೆ ಕಳಂಕ ತರುವ ಜನರಿಗೆ ನೀಡಲು ಮಾಧ್ಯಮ, ಕುಬುದ್ಧಿಯ ಪಂಡಿತರು ತಯಾರಿಲ್ಲ. ಸಿಕ್ಕಿ ಹಾಕಿಕೊಂಡವನ ಹೆಸರು ಮುಸ್ಲಿಂ ಆದರೆ ಸಾಕು ಟಾಮ್ ಟಾಮ್ ಶುರು; ಮುಸ್ಲಿಮ್ ಭಯೋತ್ಪಾದಕ, ಶಂಕಿತ ಮುಸ್ಲಿಂ ತೀವ್ರವಾದಿ, ಮುಸ್ಲಿಂ ಮೂಲಭೂತವಾದಿ, islamic activist, muslim radical, muslim fundamentalist…………………ಯಾವ ರೀತಿಯ ಲೇಬಲ್ಲುಗಳು ಬೇಕು ನಿಮಗೆ, ಆ ರೀತಿಯ ಲೇಬಲ್ಲುಗಳು ತಯಾರು. ಹಾಗಾದರೆ ಮೇಲೆ ನಾನು ಉದ್ಧರಿಸಿದ ಹತ್ಯಾಕಾಂಡಗಳ ಕರ್ತೃಗಳು ಯಾರು? “ಹುಟಾರಿ”, “ನಾಜಿ” ಎಂದರೆ ಮಂಗಳ ಗ್ರಹದಿಂದಲೋ ಅಥವಾ ಬೇರಾವುದು ಗ್ರಹದಿಂದ ಬಂದಪ್ಪಳಿಸಿದ ಅನರ್ಥವೋ? ವ್ಯಾಘ್ರ ಅಂದರೆ ಒಂದು ರೀತಿಯ ಸೊಂಕೋ, ರೋಗವೋ? JVP ಎಂದರೆ AIDS ರೀತಿಯ ಬ್ಯಾನೆಯೋ? ಸರ್ಬಿಯನ್ ಎಂದರೆ ಪ್ರಳಯವೋ, ಜ್ವಾಲಾಮುಖಿಯೋ? ಏಕೀ ಇಬ್ಬಂದಿತನ? ಲೇಖನಿಗೆ ದ್ರೋಹ ಬಗೆಯುವ ಪರಿಪಾಠ? ಲೇಖನಿ ಹುತಾತ್ಮನ ರಕ್ತಕ್ಕಿಂತಲೂ ಪವಿತ್ರ ಅಂತಾರೆ. ಆದರೆ ಮೇಲೆ ಹೇಳಿದ ಉದಾಹರಣೆಗಳಲ್ಲಿ ಎಷ್ಟೊಂದು ಪಾವಿತ್ರ್ಯ ಅವಿತುಕೊಂಡಿದೆ ನೋಡಿ. 

ಜನರನ್ನು ಲೇಬಲ್ ಅಡಿಯಲ್ಲಿ ವ್ಯಾಖ್ಯಾನಿಸಿ ದೂರ ಮಾಡುವುದಕ್ಕಿಂತ ಒಳ್ಳೆಯ ಕೆಲಸ ಸಂವಾದದ ಪ್ರಕ್ರಿಯೆ ಶುರು ಮಾಡುವುದು. ಜನರ ಮಧ್ಯೆ ಕಂದಕ ತೋಡಲೆಂದೇ ಅವತರಿಸಿದ ಸಮೂಹವನ್ನು ನಾಗರೀಕ ಸಮಾಜ ದೂರ ಮಾಡಿ ಎಲ್ಲರೂ ಮೇಲೆ ಕೂತ ಭಗವಂತನ ಮಕ್ಕಳು, ಎಲ್ಲರಿಗೂ ಸರಿಸಮನವಾಗಿ ವಿಶಾಲವಾದ ಭೂಮಿಯನ್ನು ಹರಡಿ ತಾರತಮ್ಯ ಮಾಡದೆ ಗಾಳಿ ಬೆಳಕು ನೀರು ಒದಗಿಸುತ್ತಿರುವ ಮಹಾ ಪ್ರಭುವಿನ ಮಕ್ಕಳೆಂದು ಭಾವಿಸಿ ಬದುಕನ್ನು ಸಾಗಿಸುವುದು. ಹಕ್ಕಿಯಂತೆ ಹಾರಲು ಕಲಿತ, ಮೀನಿನನಂತೆ ಈಜಲು ಕಲಿತ ಮನುಷ್ಯ ಮನುಷ್ಯನ  ರೀತಿ ಬಾಳಲು ಕಲಿಯುವುದನ್ನು ಕಲಿಯುವುದು ಅತ್ಯವಶ್ಯಕ. man should “relearn” how to live like a man.

ನಾ ಕಂಡುಕೊಂಡ ಇಸ್ಲಾಂ

ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತೆ ಚಿತ್ರಿಸಲಾಗುತ್ತಿದೆ ಮುಸ್ಲಿಮರನ್ನು ಮತ್ತು ಅವರು ನಂಬಿಕೊಂಡು ಬಂದ ಧರ್ಮವನ್ನು. ಸೆಪ್ಟಂಬರ್ ೧೧, ೨೦೦೧ ರಲ್ಲಿ ಅಮೆರಿಕೆಯ ಗಗನಚುಂಬಿ ಕಟ್ಟಡಗಳನ್ನು ೧೯ ಜನ ಅರಬ್ ಮೂಲದ ಯುವಕರು ಕದ್ದೊಯ್ದ ವಿಮಾನಗಳನ್ನು ಕ್ಷಿಪಣಿಗಳಂತೆ ಉಪಯೋಗಿಸಿ ನೆಲಸಮಗೊಳಿಸಿದ್ದು, ಸಾವಿರಾರು ಜನರ ಸಾವು ನೋವುಗಳಿಗೆ ಕಾರಣವಾಗಿದ್ದು ಇಸ್ಲಾಮಿನ ಬಗ್ಗೆ ಭಯ ಜನರ ಮನಸ್ಸಿನಲ್ಲಿ ಬೇರೂರಲು ಸಹಾಯಮಾಡಿತು. ತಮ್ಮ ಸ್ವಾರ್ಥ, ಕ್ಷುಲ್ಲಕ, “ಅಡಗಿರಿಸಿದ ಕಾರ್ಯತಂತ್ರ” ಸಾಧಿಸುವ ನಿಟ್ಟಿನಲ್ಲಿ ಇಸ್ಲಾಂ ವಿರೋಧಿಗಳು ಮಾಧ್ಯಮಗಳ ಸಹಾಯದಿಂದ ಈ ಭಯ ಜನರ ಮನಸ್ಸಿನಲ್ಲಿ ಮತ್ತಷ್ಟು ಬೇರೂರಿಸಿ ಒಬ್ಬ ಮುಸ್ಲಿಮನ ದರ್ಶನವಾದರೂ ಮುಗಿಬೀಳುವಂತೆ ಅಥವಾ ವಿಷ ಜಂತುವನ್ನು  ಕಂಡಂತೆ ಆಡಲು ಕಾರಣಕರ್ತರಾದರು.

ಇಷ್ಟೊಂದು ನಿರ್ಭೀತಿಯಿಂದ, ಅಸಾಧಾರಣ ದೈರ್ಯದಿಂದ, ಸ್ವಂತ ಜೀವವನ್ನೂ ಲೆಕ್ಕಿಸದೆ ಆಕ್ರಮಣ ಮಾಡಿದವರ  ideology ಯಾವುದು, ಅದರ ಉದ್ದೇಶವೇನು ಹೀಗೆ ಕುತೂಹಲ ಮುಗಿಲು ಮುಟ್ಟಿ ಇಸ್ಲಾಮಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದ್ದವರೆಲ್ಲಾ ಏಕಾಏಕಿ ಇಸ್ಲಾಮಿನ ಪಂಡಿತರಾಗಿ ಪುಸ್ತಕಗಳನ್ನೂ, ಲೇಖನಗಳನ್ನೂ ಬರೆದರು. ತನಗೆ ಅರ್ಥವಾಗದ ಖಾಯಿಲೆ ತಗುಲಿ ಕೊಂಡಾಗ ಖೊಟ್ಟಿ ವೈದ್ಯರ ಮೊರೆ ಹೋಗುವ ವ್ಯಕ್ತಿಯ ಹಾಗೆ ಜನರು ಅರೆ ಬುದ್ಧಿವಂತ ಪಂಡಿತರ ಮೊರೆ ಹೋದರು ಇಸ್ಲಾಮನ್ನು ಅರಿಯಲು. ಆದರೆ ಅವರಿಗೇ ಸಿಕ್ಕಿದ್ದು ಅರೆಬೆಂದ, ಕಪೋಲಕಲ್ಪಿತ ವಿಚಾರಗಳು. ಈ ಬೆಳವಣಿಗೆ ಪಾಶ್ಚಾತ್ಯ ದೇಶಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಸಾಗರ ದಾಟಿ ನಮ್ಮ ತೀರಕ್ಕೂ ಬಂದವು ಸಂಶಯಗಳು, ಕಪೋಲಕಲ್ಪಿತ ವಿಚಾರಗಳು. ೮೦೦ ವರ್ಷಗಳಿಗೂ ಮಿಕ್ಕು ಆಳಿದ ಒಂದು ಸಂಸ್ಕೃತಿ, ತಮ್ಮ ಭಾಷೆ, ಉಡುಗೆ, ತೊಡುಗೆ, ವಾಸ್ತು ಶಿಲ್ಪಿ, ಸಂಗೀತ ಹೀಗೆ ಬದುಕಿನ ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ತನ್ನದೇ ಆದ, ಎಂದಿಗೂ ಅಳಿಸಲಾಗದ, ಛಾಪನ್ನು ಒತ್ತಿದ ಧರ್ಮವನ್ನು ಮತ್ತೊಮ್ಮೆ ನಾಡಿನವರಿಗೆ ಪರಿಚಯಮಾಡಿ ಕೊಡಬೇಕಾದ ಅವಶ್ಯಕತೆ ಬಗ್ಗೆ  ದುಃಖ ತೋರಿದರೂ ನಾನು ನಂಬಿದ ಮತ್ತು ೧೬ ಕೋಟಿಗೂ ಮಿಕ್ಕು ಭಾರತೀಯರು ಕೊಂಡಾಡುವ ಒಂದು ಸಂಸ್ಕೃತಿಯ ಬಗ್ಗೆ ಬರೆಯೋಣ ಎನ್ನಿಸಿತು. ಭಾರತವನು ಆಳಿದ ಮುಸ್ಲಿಮ ಅರಸರು, ಚಕ್ರವರ್ತಿಗಳು ಆಳಬೇಕಾದ ರೀತಿಯಲ್ಲಿ ಆಳಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರುತ್ತಿರಲಿಲ್ಲವೇನೋ. ನಾನು ಇಸ್ಲಾಂ ಪಂಡಿತನಲ್ಲ. ನನ್ನ ದೈನಂದಿನ ಬದುಕಿನ ಇಸ್ಲಾಮನ್ನು ನಿಮಗೆ ಪರಿಚಯ ಮಾಡಿಸುವತ್ತ ನನ್ನ ಪ್ರಯತ್ನ ಮಾಡುತ್ತೇನೆ. ಸಂದು ಹೋದ ಕಾಲದ, ವೈಭವದ ಬಗ್ಗೆ ಪ್ರಲಾಪಿಸದೆ, ಹಲುಬದೆ, ನನ್ನ ಸಂಸ್ಕೃತಿ ಮಾತ್ರ ಮೇಲು ಎನ್ನುವ ಉಡಾಫೆತನ ತೋರಿಸದೆ, ನಿಮ್ಮ ಮುಂದೆ ಇಟ್ಟಿದ್ದೇನೆ ನಾನು ನಂಬಿದ ನಂಬಿಕೆ, ಧರ್ಮ, ಮತ್ತು ಜೀವನ ರೀತಿಯ ಒಂದು ತುಣುಕನ್ನು.   

ಇಸ್ಲಾಂ ಅಂದರೇನು:  ಇಸ್ಲಾಂ ಅಂದರೆ ಶರಣಾಗುವುದು, ನಿರಾಕಾರನಾದ ಪ್ರಭುವಿನ ಆಜ್ಞೆಗಳಿಗೆ ಶರಣಾಗುವುದು ಎಂದು. ಸಲಾಂ ಎಂದರೆ ಶಾಂತಿ ಎನ್ನುವ ಪದದ ಮೂಲವೂ ಇದೇ ಆದ್ದರಿಂದ ಇಸ್ಲಾಂ ಶಾಂತಿಯ ಧರ್ಮವೂ ಹೌದು. ಆದರೆ characteristically ಇಸ್ಲಾಮನ್ನು ಶಾಂತಿಯ ಧರ್ಮ ಮಾತ್ರ ಎಂದು ವಿವರಿಸಲಾಗದು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕೆನ್ನುವ ಅಸ್ವಾಭಾವಿಕ impractical ನಡವಳಿಕೆಗೆ ಇಸ್ಲಾಂ ಒಪ್ಪದೇ ಸಾಮಾಜಿಕ ನ್ಯಾಯಕ್ಕಾಗಿ, ಮನುಷ್ಯನ ಸ್ವಾಭಾವಿಕ ಆತ್ಮ ಗೌರವಕ್ಕಾಗಿ, ಕುಟುಂಬ,ಜೀವ, ಸೊತ್ತುಗಳ ರಕ್ಷಣೆಗಾಗಿ ಸಿದ್ಧರಾಗಲು ಕರೆ ನೀಡುತ್ತದೆ. ಆದರೆ ಯಾವುದೇ ರೀತಿಯ ಹೋರಾಟವೂ ದೇವಾಜ್ಞೆಗಳ ಚೌಕಟ್ಟಿನಲ್ಲಿ, ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಬೇಕೆನ್ನುವ ಇಸ್ಲಾಂ ಅದೇ ಉಸಿರಿನಲ್ಲಿ ಎದುರಾಳಿಯನ್ನು ಕ್ಷಮಿಸಿ, ಹೃದಯ ವೈಶಾಲ್ಯತೆ ತೋರಿ ದೈವಸಂಪ್ರೀತಿಗಳಿಸಿಕೊಳ್ಳಲು ಕರೆ ನೀಡುತ್ತದೆ ತನ್ನ ಅನುಯಾಯಿಗಳಿಗೆ.  

ಇಸ್ಲಾಮಿನ ಮೂಲಭೂತ ನಂಬಿಕೆ ಮತ್ತು ಅಡಿಗಲ್ಲೆಂದರೆ ಏಕದೇವೋಪಾಸನೆ. ಈ ವಿಷಯದ ಬಗ್ಗೆ ಇಸ್ಲಾಂ ನ ನಿಲುವು uncompromising. ಏಕದೇವೋಪಾಸನೆಯ ಈ ವೈಶಿಷ್ಟ್ಯ ಕ್ರೈಸ್ತ ಧರ್ಮಕ್ಕೆ ಸೇರಿದ ಇಸ್ಲಾಂ ಟೀಕಾಕಾರರ ಮತ್ತು ಹಿಂದೂ ಧಾರ್ಮಿಕ ಗುರುಗಳ ಮೆಚ್ಚುಗೆಯನ್ನೂ ಗಳಿಸಿತು. ಈ ನಿಲುವನ್ನು ಯಾವುದೇ ಕಾರಣಕ್ಕೂ ಸಡಿಲಿಸದೆ ಇದ್ದ ಕಾರಣ ಪ್ರವಾದಿಗಳು ತಮ್ಮ ಹುಟ್ಟೂರಾದ ಮಕ್ಕಾ ಪಟ್ಟಣದಿಂದ ಹೊರಗಟ್ಟಲ್ಪಟ್ಟರು.

“ಕಾಬಾ” ಇರುವುದು ಮಕ್ಕಾ ನಗರದಲ್ಲಿ. ಚೌಕಾಕಾರದ, ಕಪ್ಪು ವಸ್ತ್ರದಿಂದ ಹೊದೆಯಲ್ಪಟ್ಟ ಈ ಕಟ್ಟಡದ ಸುತ್ತಾ ಆಗಿನ ಕಾಲದ ಮಕ್ಕಾ ಮತ್ತು ಅರೇಬಿಯಾದ ನಿವಾಸಿಗಳು ಪ್ರದಕ್ಷಣೆ ಹಾಕುತ್ತಿದ್ದರು. ೩೬೦ ಕ್ಕೂ ಹೆಚ್ಚು ವಿಗ್ರಹಗಳಿದ್ದ ಈ ಭವನಕ್ಕೆ ಸ್ತ್ರೀಯರು ನಗ್ನರಾಗಿ ಪ್ರದಕ್ಷಿಣೆ ಮಾಡುತ್ತಿದ್ದರು. ಸಾಮಾಜಿಕವಾಗಿ ಅಲ್ಲಿನ ಜನರು ಕುಡಿತ, ಜೂಜು, ಪರಸ್ತ್ರೀ ಸಂಗ, ಬಡ್ಡಿ ವ್ಯವಾಹಾರ, ವ್ಯಾಪಾರದಲ್ಲಿ ಮೋಸ, ತೂಕದಲ್ಲಿ ಮೋಸ, ಕಾಳ ಧಂಧೆ, ಹುಟ್ಟಿದ ಮಗು ಹೆಣ್ಣಾದರೆ ಜೀವಂತವಾಗಿ ಹೂಳುವುದು ಹೀಗೆ ನೂರಾರು ಅನಿಷ್ಟಗಳಿಂದ ತಮ್ಮ ಜೀವನ ಶೈಲಿಯನ್ನಾಗಿ ಮಾಡಿ ಕೊಂಡಿದ್ದರು. ಈ ದುರ್ವರ್ತನೆಗಳು ಕೂಡದು, ನಮ್ಮ ಪ್ರತೀ ಕ್ರಿಯೆಗಳು ದೇವನನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು, ಅವನ ಸಂಪ್ರೀತಿಗಾಗಿ ನಮ್ಮ ಬದುಕನ್ನು ಮುಡಿಪಿಡಬೇಕು ಎಂದ ಪ್ರವಾದಿಗಳ ಮಾತು ಅಲ್ಲಿನ ಜನರಿಗೆ ಹಿಡಿಸಲಿಲ್ಲ. ನಮ್ಮ ಆರಾಧನಾ ಕ್ರಮಗಳು ಮತ್ತು ಜೀವನ ರೀತಿಯನ್ನು ವಿರೋಧಿಸದೆ ಇದ್ದರೆ ನಿನ್ನ ಕಾಲಿನ ಬುಡಕ್ಕೆ ನಮ್ಮ ಸಂಪತ್ತನ್ನೆಲ್ಲಾ ಸುರಿಯುತ್ತೇವೆ, ನಿನ್ನನ್ನು ನಮ್ಮ ನಾಯಕನನ್ನಾಗಿ ಮಾಡುತ್ತೇವೆ, ರಾಜನನ್ನಾಗಿ ಅಂಗೀಕರಿಸುತ್ತೇವೆ ಎಂದು ಆಮಿಷ ತೋರಿಸಿದ ಬುಡಕಟ್ಟಿನ ಜನರ ಮಾತಿಗೆ ಒಪ್ಪದೇ ಆರಾಧನೆ ಸೃಷ್ಟಿ ಕರ್ತನಿಗೆ ಮಾತ್ರ, ನಮ್ಮ ಕೈಯ್ಯಾರೆ ಸೃಷ್ಟಿಸಿದ ಸೃಷ್ಟಿಗಳಿಗಲ್ಲ ಎಂದು ಸೊಲ್ಪವೂ ವಿಚಲಿತರಾಗದೆ ಧೃಢ ಸ್ವರದಲ್ಲಿ ಪ್ರವಾದಿಗಳು ಹೇಳಿದಾಗ ಅವರನ್ನು ಮಕ್ಕಾ ನಗರದಿಂದ ಹೊರಗಟ್ಟಿದರು ಅಲ್ಲಿನ ನಿವಾಸಿಗಳು.  ಪ್ರವಾದಿಗಳು ತಮ್ಮ ಅನುಚರರೊಂದಿಗೆ ಭಾರವಾದ ಹೃದಯದಿಂದ ತಮ್ಮ ಪ್ರೀತಿಯ ಮಕ್ಕಾ ಪಟ್ಟಣ ಬಿಟ್ಟು ಮದೀನಾ ನಗರಕ್ಕೆ ಬಂದರು. ಇದನ್ನು “ಹಿಜರಿ” ಎಂದು ಕರೆಯುತ್ತಾರೆ. ಹಿಜರಿ ಎಂದರೆ ವಲಸೆ ಎಂದರ್ಥ. ಏಕದೇವೋಪಾಸನೆಯ ವಿಷಯದಲ್ಲಿ ಮಕ್ಕಾ ಜನರೊಂದಿಗೆ ರಾಜಿ ಮಾಡಿ ಕೊಂಡಿದ್ದರೆ ಪ್ರವಾದಿಗಳು ಕಷ್ಟ ಕಾರ್ಪಣ್ಯ, ಸಾಮಾಜಿಕ ಬಹಿಷ್ಕಾರಗಳನ್ನು ಎದುರಿಸ ಬೇಕಿರಲಿಲ್ಲ. ಪ್ರವಾದಿಗಳ ಈ ನಿಲುವು ಅವರಿಗೆ ಹೊಸ ಬೆಂಬಲಿಗರನ್ನು ಗಳಿಸಿ ಕೊಟ್ಟಿತು.  

ಮಾನವರೆಲ್ಲಾ ಸಮಾನರು, “ಸನ್ನಡತೆಯ ಗಂಡು” ಮತ್ತು “ಸನ್ನಡತೆಯ ಹೆಣ್ಣು” ಇವೆರಡೇ ಜಾತಿಗಳು ಎಂದು ಸಾರಿದ ಪ್ರವಾದಿಗಳಿಗೆ ಮದೀನಾ ನಗರದಲ್ಲಿ ಅಭೂತಪೂರ್ವವಾದ ಸ್ವಾಗತ ಸಿಕ್ಕಿತು. ಕಡು ಕಪ್ಪ್ಪು ತ್ವಚೆಯ ಗುಲಾಮರು ಸಮಾಜದ ಕುಲೀನ ವರ್ಗದವರೊಂದಿಗೆ ಬೆರೆತು ಸರಿ ಸಮಾನರಾಗಿ ಬಾಳುತ್ತಿದ್ದರು. ನಮಾಜಿನ ಸಮಯ ನೀಡುವ ಕರೆ “ಅದಾನ್” ಪ್ರಪ್ರಥಮವಾಗಿ ಕಾಬಾ ಭವನದ ಮೇಲೆ ನಿಂತು ನೀಡಿದ್ದು ಇಥಿಯೋಪಿಯಾ ದೇಶದ ಗುಲಾಮ “ಬಿಲಾಲ್”. ಈ ಸಮಾನತೆಯ ಮೋಹಕ ಆದರ್ಶ ವಿಶ್ವದಾದ್ಯಂತ ದಂಡು ದಂಡಾಗಿ ಜನ ಇಸ್ಲಾಮಿಗೆ ಶರಣಾಗುವಂತೆ ಮಾಡಿತು.         

ಆರಾಧನೆ:  ದಿನದಲ್ಲಿ ಐದು ಹೊತ್ತು ಯಾವುದೇ ಸಮಜಾಯಿಷಿ ಇಲ್ಲದೆ ನಮಾಜ್ ನಿರ್ವಹಿಸುವುದು ಇಸ್ಲಾಮಿನ ಮತ್ತೊಂದು ಅಡಿಗಲ್ಲು. ಹೆಣ್ಣಿಗೆ ಶಾರೀರಿಕ ತೊಡಕು ಹೊರತು ಪಡಿಸಿ, ಮತ್ತು ಗಂಡು ತನ್ನ ಕೊನೆಯುಸಿರಿರುವವರೆಗೂ ನಮಾಜನ್ನು ನಿರ್ವಹಿಸಲೇಬೇಕು. ಪ್ರಯಾಣದಲ್ಲೂ, ಶಾರೀರಿಕ ಅಸ್ವಸ್ಥ ಸ್ಥಿತಿಯಲ್ಲೂ, ರಣರಂಗದಲ್ಲೂ, ಯಾವುದೇ ವಿನಾಯಿತಿ ಇಲ್ಲದೆ ಕ್ಲಪ್ತ ಸಮಯಕ್ಕೆ ಸೃಷ್ಟಿ ಕರ್ತನ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಅರುಣೋದಯ ದ ಪ್ರಾರ್ಥನೆ, ಸೂರ್ಯ ನೆತ್ತಿಗೆ ಬಂದಾಗಿನ ಹೊತ್ತು, ಅಪರಾಹ್ನ, ಸಂಜೆ, ಮತ್ತು ರಾತ್ರಿ ಇವು ನಮಾಜ್ ಗೆಂದು ನಿಯುಕ್ತ ಗೊಂಡ ಸಮಯಗಳು. ಸಮಯ ತಪ್ಪಿಸಿದರೆ ಆ ಆರಾಧನೆ  ಚಲಾವಣೆ ಕಳೆದು ಕೊಂಡ ಕಾಸಿನಂತೆ. ನಿರರ್ಥಕ. ಸಮಯ ತಪ್ಪಿಸಿದ ಆರಾಧನೆ ನನಗೆ ಬೇಡ ಎನ್ನುತ್ತಾನೆ ಪರಮಾತ್ಮ. ಈ ನಿಯಮದಲ್ಲಿ ಬದುಕಿನಲ್ಲಿ ಯಶಸ್ಸಿಗೊಂದು ಪಾಠ ಇಲ್ಲಿದೆ ನೋಡಿ. ನಮಾಜ್ ಸಮಯಪ್ರಜ್ಞೆಯನ್ನು ಜನರಲ್ಲಿ ಬೆಳೆಸುತ್ತದೆ, ಸಮಯದ ಮಹತ್ವದ ಬಗ್ಗೆ ನಿಷ್ಠುರತೆ ತೋರಿಸುತ್ತದೆ. ಆದರೆ ಈ ಸಾರವನ್ನು ಮುಸ್ಲಿಮ್ ಜನಾಂಗ ಅರಿಯದೆ ಇರುವುದು ಖೇದಕರ.

ಇಸ್ಲಾಮಿನಲ್ಲಿ ಸ್ತ್ರೀ:  ಮನೋಹರವಾದ, ವಿಶ್ವ ಕೊಂಡಾಡಿದ ಆದರ್ಶಗಳಾದ ಏಕ ದೇವೋಪಾಸನೆ, ಮನುಷ್ಯರಲ್ಲಿ ಸಮಾನತೆ, ಯಾವುದೇ ಪರಿಸ್ಥಿತಿಯಲ್ಲೂ ದೇವರ ಆರಾಧನೆಯಂಥ ವಿಚಾರಗಳು ಮಾತ್ರವಲ್ಲ ಹೆಣ್ಣಿನ ಸ್ವಾತಂತ್ರ್ಯದ ಕಡೆಗೂ ಇಸ್ಲಾಂ ಗಮನ ಹರಿಸಿತು. ಆಗಿನ ಕಾಲದಲ್ಲಿ ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು ಯಾರೂ ಕೇಳಿರದ, ಕಂಡಿಲ್ಲದ ಒಂದು ಬೆಳವಣಿಗೆ. ಪ್ರಪ್ರಥಮವಾಗಿ ಹೆಣ್ಣಿಗೆ ತನ್ನ ತಂದೆಯ ಆಸ್ತಿಯಲ್ಲಿ ಹಕ್ಕನ್ನು ನೀಡುವ ಮೂಲಕ ಒಂದು ಕ್ರಾಂತಿ ಕಾರೀ ಬೆಳವಣಿಗೆಗೆ ಇಸ್ಲಾಂ ನಾಂದಿ ಹಾಡಿತು. ಇಸ್ಲಾಂ ಅನುಷ್ಠಾನಕ್ಕೆ ತಂದ ೮೦೦  ವರುಷಗಳ ತರುವಾಯ ಇಂಗ್ಲೆಂಡ್ ಈ ಕಾನೂನನ್ನು ಅನುಷ್ಠಾನಕ್ಕೆ ತಂದಿತು. ಹೆಣ್ಣಿಗೆ ಆತ್ಮವಿಲ್ಲ ಮತ್ತು ಸ್ವರ್ಗ ಲೋಕದಿಂದ ಮನುಷ್ಯ ಹೊರ ಹಾಕಲ್ಪಟ್ಟಿದ್ದು ಹೆಣ್ಣಿನ ತಪ್ಪಿನಿಂದ, ಪ್ರಪಂಚದ ಎಲ್ಲಾ ಕೋಲಾಹ, ಕಲಹಗಳಿಗೆ ಹೆಣ್ಣೇ ಕಾರಣ ಎಂದು ಮಹಿಳೆಯನ್ನು ಪಾಶ್ಚಾತ್ಯರಂತೆ ಜರಿಯದೆ ದೇವರಿಗೆ ಭಯ ಪಟ್ಟು ಬದುಕುವ ಗಂಡು ಮತ್ತು ಹೆಣ್ಣು ಹೇಗೆ ಸಮಾನರು ಎಂದು ಕುರಾನಿನ ಸೂಕ್ತದಲ್ಲಿ ವಿವರವಾಗಿ ಹೇಳಲಾಗಿದೆ. ಈಗಿನ ಹೆಣ್ಣಿನ ಶೋಷಣೆಗೆ, ದುರ್ಗತಿಗೆ ಮನುಷ್ಯನ ಅತಿಯಾಸೆ ಮತ್ತು ದಬ್ಬಾಳಿಕೆ ಕಾರಣವೇ ಹೊರತು ಧರ್ಮವಲ್ಲ ಎನ್ನುವುದನ್ನು ಇಸ್ಲಾಮಿನ ಆದರ್ಶಗಳನ್ನು ಅರಿತವರಿಗೆ ಅರಿವಾಗುವುದು.   ವಿಧವೆಯರಿಗೆ ಅವರ ಉಡುಗೆ ತೊಡುಗೆಗಳಲ್ಲಿ ಯಾವುದೇ ನಿರ್ದಿಷ್ಟ ನಿರ್ಬಂಧ ಹೇರದೆ ಅವರ ಮರು ವಿವಾಹಕ್ಕೆ ಅನುವು ಮಾಡಿಕೊಡಲು ಸಮಾಜದಿಂದ ಇಸ್ಲಾಂ ಬಯಸುತ್ತದೆ.

ಸ್ತ್ರೀಯರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ ಎಂದು ಹೇಳುವ ಟೀಕಾಕಾರರಿಗೆ ಮುಸ್ಲಿಮ್ ಸಮಾಜ ಉತ್ತರ ನೀಡಿದೆ. ವಿಶ್ವದಲ್ಲಿ ಇದುವರೆಗೂ ಐದು (ತುರ್ಕಿ, ಪಾಕಿಸ್ತಾನ, ಬಾಂಗ್ಲ ದೇಶ, ಕಿರ್ಗಿಸ್ತಾನ್) ಮುಸ್ಲಿಂ ಮಹಿಳಾ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು ಅವರನ್ನು ಆರಿಸಿದ ಮತದಾರರಲ್ಲಿ ಪುರುಷರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು ಎನ್ನುವುದನ್ನು ಮನಗಾಣಬೇಕು. ಅಷ್ಟೇ ಅಲ್ಲದೆ ಜೋರ್ಡನ್, ಮತ್ತು ಕತಾರ್ ದೇಶಗಳ ರಾಣಿಯರು ಮತ್ತು ಸಿರಿಯಾ ದೇಶದ ಅಧ್ಯಕ್ಷರ ಪತ್ನಿ ಆ ದೇಶಗಳ ರಾಜಕಾರಣಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿರುವರು. ಪಾಕಿಸ್ತಾನದಲ್ಲಿ ಮೊಟ್ಟ ಮೊದಲ  ಮಹಿಳಾ ಬ್ಯಾಂಕನ್ನು ಸಂಸ್ಥಾಪನೆ ಮಾಡಿದ್ದು ಓರ್ವ ಮಹಿಳೆ.  

ಬಹು ಪತ್ನಿತ್ವ:  ಕೆಲವೊಂದು ಸನ್ನಿವೇಶಗಳಲ್ಲಿ, ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಪುರುಷ ಬಹು ಪತ್ನಿತ್ವ ಪಾಲಿಸಬಹುದು. ಆದರೆ ಪತ್ನಿಯರ ನಡುವೆ ನ್ಯಾಯ ಪಾಲಿಸುವಂತೆ ಇಸ್ಲಾಂ ಕಠಿಣ ಶರತ್ತುಗಳನ್ನು ಒಡ್ಡಿದ್ದರಿಂದ ಬಹುಸಂಖ್ಯಾತ ಮುಸ್ಲಿಮರು ಏಕ ಪತ್ನೀವ್ರತಸ್ಥರಾಗಿದ್ದಾರೆ ಎಂದು ನಾವು ಕಾಣಬಹುದು. ಈ ತೆರನಾದ ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದುವ ಸೌಲಭ್ಯವಿದ್ದರೂ ವಿಶ್ವದ ಶೇಕಡಾ ೯೫ ಕ್ಕೂ ಅಧಿಕ ಮುಸ್ಲಿಂ ಪುರುಷರು ಓರ್ವ ಪತ್ನಿಯಿಂದಲೇ ಸಂತೃಪ್ತರಾಗಬೇಕಾದರೆ ಮುಸ್ಲಿಮರಲ್ಲಿರುವ ಆಳವಾದ ಧಾರ್ಮಿಕ ಪ್ರಜ್ಞೆ ಮತ್ತು ದೈವ ಭಯ ಇರುವುದರಿಂದಲೇ ಸಾಧ್ಯ ಎಂದು ಮನಗಾಣಬಹುದು.  

ಮುಸ್ಲಿಮೇತರರೊಂದಿಗೆ ಇಸ್ಲಾಂ:  ಸಂಪೂರ್ಣ ಅರೇಬಿಯಾ ತನ್ನ ಉನ್ನತ ಆದರ್ಶಗಳಿಗೆ ತಲೆ ಬಾಗಿ ನಡೆಯುತ್ತಿದ್ದರೂ ಪ್ರವಾದಿಗಳು ಯಹೂದ್ಯರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು.

ಪ್ರವಾದಿಗಳ ನಂತರ ಖಲೀಫಾ ಆಳ್ವಿಕೆಯ ಪರಂಪರೆ ಆರಂಭವಾಯಿತು. ಪ್ರವಾದಿಗಳ ನಂತರದ ಸುಮಾರು ೫೦೦ -೬೦೦ ವರ್ಷಗಳನ್ನು ಇಸ್ಲಾಮಿನ ಸುವರ್ಣ ಯುಗ ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.

ಮುಸ್ಲಿಂ ಆಳ್ವಿಕೆಯಲ್ಲಿ ಮುಸ್ಲಿಮೇತರರ ಮೇಲೆ “ಜೆಜಿಯಾ” ತಲೆಗಂದಾಯ ವಿಧಿಸಿದ ಕಾರಣ ನೋಡೋಣ. ಎಲ್ಲಾ ಮುಸ್ಲಿಂ ರಾಜರುಗಳು ಈ ಪದ್ಧತಿಯನ್ನು ಅನುಸರಿಸಲಿಲ್ಲ. ಮುಸ್ಲಿಂ ಆಳ್ವಿಕೆಯಲ್ಲಿ, ಮುಸ್ಲಿಂ ದೇಶದಲ್ಲಿ ನೆಲೆಸುವ ಮುಸ್ಲಿಮೇತರರಿಗೆ ಕೆಲವು ಸೌಲಭ್ಯ ಕೊಡುವ ಕಾರಣ ಈ ತೆರಿಗೆ ವಿಧಿಸಲಾಯಿತು. ಮುಸ್ಲಿಮೇತರರು ಸೈನ್ಯದಲ್ಲಿ ಭಾಗವಹಿಸುವ ಅವಶ್ಯಕತೆಯಿಲ್ಲ, ಮತ್ತು ಪ್ರತೀ ಮುಸ್ಲಿಮನೂ ಪಾವತಿಸಲೇ ಬೇಕಾದ “zakah” ಎನ್ನುವ ತೆರಿಗೆಯಿಂದಲೂ ಮುಸ್ಲಿಮೇತರರಿಗೆ ವಿನಾಯಿತಿ ನೀಡಲಾಯಿತು. ಹಾಗೆಯೇ ಅವರ ಪ್ರಾಣ, ಆಸ್ತಿ ರಕ್ಷಣೆ ಸಹ ಮುಸ್ಲಿಂ ದೇಶದ ಹೊಣೆಯಾಗಿತ್ತು.  

ಯಾವ ಧರ್ಮಕ್ಕೆ ಸೇರಿದವನಾದರೂ ನೆರೆ ಹೊರೆಯವನೊಂದಿಗೆ ಸ್ನೇಹದಿಂದ  ಇರಲೂ, ನೆರೆಯವನ ಎಲ್ಲಾ ಅವಶ್ಯಕತೆ ಪೂರೈಸಲು ಮುಸ್ಲಿಮರನ್ನು ಇಸ್ಲಾಂ ಉತ್ತೇಜಿಸುತ್ತದೆ. ಇಸ್ಲಾಮಿನ ಎರಡನೇ ಖಲೀಫಾ (ಧರ್ಮಾಧಿಕಾರಿ, ಇಸ್ಲಾಮಿನಲ್ಲಿ “ರಾಜ” ಎನ್ನುವ ಪದ್ಧತಿಯಿಲ್ಲ, ಅದು ನವೀನ ಅವಿಷ್ಕಾರ) ಉಮರ್ ಅವರ ಕಾಲದಲ್ಲಿ ಒಬ್ಬ ಯಹೂದ್ಯ ವ್ಯಕ್ತಿ ತನ್ನ ಮನೆ ಪಕ್ಕದ ಖಾಲಿ ಜಾಗವನ್ನ ಮಾರುವಾಗ ದೊಡ್ಡ ಮೊತ್ತದ ಹಣ ಕೇಳುತ್ತಾನೆ. ಕಾರಣ ಕೇಳಿದಾಗ ಖಾಲಿ ಜಾಗದ ಪಕ್ಕದಲ್ಲಿ ಧರ್ಮ ನಿಷ್ಠ ಮುಸ್ಲಿಂ ವ್ಯಕ್ತಿ ವಾಸವಿರುವುದರಿಂದ ಆ ವ್ಯಕ್ತಿಯಿಂದ ಯಾವುದೇ ತಕರಾರು, ಸಮಸ್ಯೆಗಳು ಬರಲು ಸಾಧ್ಯವಿಲ್ಲದೆ ಇರುವುದರಿಂದ ಆ ಖಾಲಿ ಸ್ಥಳಕ್ಕೆ ಹೆಚ್ಚು ಹಣ ಎಂದು ವಿವರಣೆ ನೀಡುವ ಯಹೂದಿ ಪರೋಕ್ಷವಾಗಿ ಇಸ್ಲಾಮಿನ ಆದರ್ಶಗಳನ್ನು ಕೊಂಡಾಡುತ್ತಾನೆ.  

ಕೊನೆಯದಾಗಿ ಇಸ್ಲಾಮಿನ ಹೆಸರಿನಲ್ಲಿ ಹಿಂಸೆ, ರಕ್ತ ಪಾತ ಹರಿಸುತ್ತಿರುವವರು ತಾವು ನಂಬಿದ ಧರ್ಮದ ಆದರ್ಶಗಳಿಗೆ ದ್ರೋಹ ಬಗೆಯುತ್ತಿದ್ದು ಅವರ ಕುಕೃತ್ಯಗಳಿಗೆ ಇಸ್ಲಾಂನ  ಮೇಲೆ ಹೊಣೆ ಹೊರಿಸುವುದು ತಪ್ಪು.  ವಿನಾಕಾರಣ ಯಾವುದೇ ನಿರಪರಾಧಿ, ಮುಗ್ಧ ವ್ಯಕ್ತಿಯನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದಂತೆ ಎಂದು ಸಾರುವ ಇಸ್ಲಾಂ ಒಬ್ಬ ವ್ಯಕ್ತಿಯ ಜೀವ ಉಳಿಸಿದರೂ ಜೀವ ಉಳಿಸಿದ ವ್ಯಕ್ತಿ ಮಾನವ ಕುಲವನ್ನೇ ಉಳಿಸಿದ ಕೀರ್ತಿಗೆ ಪಾತ್ರನಾಗುತ್ತಾನೆ ಎಂದು ಹೇಳಿದ್ದರೆ ಭಯೋತ್ಪಾದನೆಯ ಬಗೆಗಿನ ಇಸ್ಲಾಮ್ ನ ನಿಲುವು ಏನು ಎಂದು ತಿಳಿಯುತ್ತದೆ.  ರಾಜಕೀಯ ಕಾರಣಗಳಿಗಾಗಿ ಹಿಂಸೆಯ ಮಾರ್ಗ ಹಿಡಿರುವ ದುರುಳರಿಗೆ ಅವರು ಮಾಡುತ್ತಿರುವುದು “ಪ್ರತಿಕ್ರಿಯಾತ್ಮಕ” ಹಿಂಸೆ ಎಂತಲೋ, “ಧರ್ಮಕ್ಕಾಗಿ ಕಯ್ಯೆತ್ತುವುದು” ಎಂತಲೂ ಮುಸ್ಲಿಮರು ಸಮರ್ಥಿಸದೆ ಒಕ್ಕೊರಲಿನಿಂದ ಖಂಡಿಸಿದ್ದಾರೆ. ರಕ್ತಪಾತ, ಸಾಮೂಹಿಕ ಕೊಲೆಯಂಥ ಕೃತ್ಯ ಎಸಗುವ ಜನರು ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ ಎಂದು ಕಳೆದವರ್ಷ ಹೈದರಾಬಾದಿನಲ್ಲಿ ಸೇರಿದ್ದ ದೇಶದ ಮುಸ್ಲಿಂ ಪಂಡಿತರುಗಳು ಇಸ್ಲಾಂ ವಿಶ್ವ ಶಾಂತಿ ಬಯಸುತ್ತದೆ ಎಂದು ಸಾರಿದ್ದರು.

ಮುಸ್ಲಿಮರಲ್ಲಿರುವ ಅನಕ್ಷರತೆ, ಮತ್ತಿತರ ನ್ಯೂನತೆಗಳಿಗೆ ಮುಸ್ಲಿಮರು ಹೊಣೆಯೇ ಹೊರತು ಅವರು ನಂಬುವ ಇಸ್ಲಾಂ ಧರ್ಮವಲ್ಲ. ಪವಿತ್ರ ಗ್ರಂಥ ಕುರಾನ್ ನ ಮೊದಲ ಸೂಕ್ತಗಳು ಆರಂಭಗೊಂಡಿದ್ದು ಈ ವಾಕ್ಯದಿಂದ; “ಓದು, ನಿನ್ನನ್ನು ಸೃಷ್ಟಿಸಿದ ಪ್ರಭುವಿನ ನಾಮದಿಂದ” ಎಂದು. ಇಸ್ಲಾಂ ಜ್ಞಾನಕ್ಕೆ ಎಷ್ಟು ಮಹತ್ವ ನೀಡಿದೆ ಎಂದು ಈ ಸೂಕ್ತದಿಂದ ತಿಳಿಯಬಹುದು. ಇಸ್ಲಾಂ ಧರ್ಮವನ್ನ ಅರಿಯಬೇಕೆಂದರೆ ನೇರವಾಗಿ ಧರ್ಮಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕೆ ವಿನಃ  ಮುಸ್ಲಿಮರ ನಡವಳಿಕೆ ನೋಡಿ ಇವರ ಧರ್ಮ ಹೀಗೆ ಎಂದು ತೀರ್ಪು ನೀಡುವುದು ತಪ್ಪು.      

ಪ್ರವಾದಿಗಳ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರಾಮಕೃಷ್ಣ ರಾವ್ ಸುಂದರವಾದ ಪುಸ್ತಿಕೆ ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿ ಇರುವ ಆ ಪುಸ್ತಿಕೆ ಸೌದಿ ಅರೇಬಿಯಾದ ಮಸೀದಿಗಳಲ್ಲೂ ಕಾಣಬಹುದು. ಪುಸ್ತಿಕೆಯ ಹೆಸರು Muhammad, the prophet of Islam.

* ಫೇಸ್ ಬುಕ್ ಮುಸ್ಲಿಂ ವಿರೋಧಿ ?

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ “ಫತ್ವ” ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ “ಫ್ಯಾಷೆನ್ ಟ್ರೆಂಡ್” ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ. 

ಈಜಿಪ್ಟ್ ದೇಶದ ಈ ಧರ್ಮ ಗುರು ಫೇಸ್ ಬುಕ್ ಮುಸ್ಲಿಂ ವಿರೋಧಿ ಅಂದ ಕೂಡಲೇ ನಾನಾಗಲಿ, ಲಕ್ಷಾಂತರ ಮುಸ್ಲಿಮರಾಗಲಿ ಫೇಸ್ ಬುಕ್ ನಿಂದ ಹೊರನಡೆಯುವಷ್ಟು ಬಾಲಿಶರಲ್ಲ. ಅಷ್ಟಕ್ಕೂ ಆ ಧರ್ಮ ಗುರು ನೀಡಿದ ವಿವರಣೆ ಸ್ವಲ್ಪ ನೋಡೋಣ. ಫೇಸ್ ಬುಕ್ ಮೂಲಕ ಅನೈತಿಕ ಸಂಬಂಧ ಅರಸಿ ವೈವಾಹಿಕ ಸಂಬಂಧವನ್ನು ಹಾಳುಗೆಡವುವರ ಬಗ್ಗೆ ಮಾತ್ರ ಈ ಎಚ್ಚರಿಕೆ. ಧರ್ಮ ಸಂದೇಶಗಳನ್ನೂ ಸಾರಲೂ, ವ್ಯಾವಹಾರಿಕವಾಗಿಯೋ, ಬರೀ ಸ್ನೇಹಕ್ಕಾಗಿಯೋ ಉಪಯೋಗಿಸುವವರ ವಿರುದ್ಧ ಅಲ್ಲ ಈ  “ಫತ್ವ”. 

ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ. ಹಾಗೂ  ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ. ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ. ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು  ಮಾಡಿಕೊಂಡವರು ಹಲವರು. ವಿವಾಹಿತರಾಗಿಯೂ ಸಂಬಂಧಗಳನ್ನು ಹುಡುಕಿಕೊಂಡು ನಡೆಯುವ, ಸುಳ್ಳು ಪ್ರೊಫೈಲ್ ಗಳನ್ನು ನಂಬಿ ತಮ್ಮ ಬದುಕನ್ನು ಕೆಡಿಸಿ ಕೊಂಡವರೂ ಇದ್ದಾರೆ. ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ “ಶನಿ ಪೆಟ್ಟಿಗೆ” ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ – ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು.  ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು. 

ಹಾಗೆಂದು ತಂತ್ರ ಜ್ಞಾನಕ್ಕೆ ಬೆನ್ನು ತಿರುಗಿಸಿ ಬದುಕಬೇಕೆಂದಲ್ಲ. ಮಿತಿಯನ್ನು ಅರಿತು ಪ್ರಜ್ಞಾ ಶೀಲತೆ ಮೆರೆದರೆ ಅದೇ ಚೆಂದ.