ಅರ್ಧ ಘಂಟೆ, ಅರೆ ಬೆತ್ತಲೆ

ಗ್ರಂಥಾಲಯ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಶತಮಾನಗಳಿಂದ ಸುಣ್ಣ ಬಣ್ಣ ಕಾಣದೆ ಶಿಥಿಲ ಗೊಂಡ, ಒಳ ಹೋದ ಕೂಡಲೇ ಗ್ರಂಥಪಾಲಕ ಎನ್ನುವ ನಿಸ್ತೇಜ, ಸುಸ್ತಾದ, ಹಗಲುಗನಸು ಕಾಣುತ್ತಾ ಕೂತ ವ್ಯಕ್ತಿಯ ದರ್ಶನ ಮತ್ತು ಪುಸ್ತಕಗಳ ಕವಟು ವಾಸನೆ. musty smell. ಯಾವುದೇ ರೀತಿಯಿಂದಲೂ inviting ಅಲ್ಲದ ಒಂದು ತಾಣ, ಗ್ರಂಥಾಲಯ. ಆದರೆ ಎಲ್ಲಾ ಗ್ರಂಥಾಲಯಗಳೂ ಹಾಗೆ ಆಗ ಬೇಕಿಂದಿಲ್ಲವಲ್ಲ?  ಮನುಷ್ಯ ಕ್ರಿಯೇಟಿವ್ ಜೀವಿ. ಕಸದಲ್ಲೂ ರಸ ತೆಗೆಯುವ ಸೃಜನಶೀಲ. ಹೀಗಿರುವಾಗ ಗ್ರಂಥಾಲಯ ಏಕೆ ತನ್ನ creativity ಪರಿಧಿಯಿಂದ ಹೊರಗುಳಿಯಬೇಕು ? ಕಸಿವಿಸಿಯಾಗುವ creativity ಆದರೇನಂತೆ, ಒಂದರ್ಧ ಘಂಟೆಯಾದರೂ ಕಸಿವಿಸಿ ಯನ್ನು ತಡೆಹಿಡಿಯೋಕೆ ಆಗೋಲ್ವೆ? ಅದೂ ವಾರದ ಒಂದೇ ದಿನ ರೀ, ಬುಧವಾರ, ಅದೂ ಅರ್ಧ ಘಂಟೆ ಮಾತ್ರ, ಅದೂ ಜನಜಂಗುಳಿ ತೂಕಡಿಸಲು ಇಷ್ಟಪಡುವ ಮಧ್ಯಾಹ್ನದ ಸಮಯ.  

ಇಂಗ್ಲೆಂಡಿನ ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳು ಒಂದು “ಬ್ರೇಕ್ ಫಾಸ್ಟ್ ಕ್ಲಬ್” ಅನ್ನೋ ಒಂದು ಗುಂಪನ್ನು ಕಟ್ಟಿ ಕೊಂಡಿದ್ದು ಇದಕ್ಕೆ ಸೇರಿದವರು ಬುಧವಾರದ ಮಧ್ಯಾಹ್ನದ ನಂತರ ಅರ್ಧ ಘಂಟೆಗಳ ಕಾಲ ಸಲ್ಮಾನ್ ಖಾನ್ ರಾಗಲು ಉತ್ಸುಕರಾಗುತ್ತಾರೆ. ಅರೆ ನಗ್ನ ಎಂದ ಕೂಡಲೇ ಈ ನಟನ ಹೆಸರೇ ಅಲ್ಲವೇ ಎಲ್ಲರಿಗೂ ಹೊಳೆಯೋದು; (ನನ್ನ ತಂಗಿಯ ಎರಡೂವರೆ ವರ್ಷದ ಪೋರ ‘ಅಹ್ಮದ್’ ತನ್ನ ಅಂಗಿ ಬಿಚ್ಚಿ ಸಲ್ಮಾನ್ ಖಾನ್ ಎಂದು ಬೀಗಿದ).

ವರ್ಸೆಸ್ಟರ್ ಕಾಲೇಜಿನ ವಿದ್ಯಾರ್ಥಿಗಳ ಈ ತಿಕ್ಕಲುತನ ಸ್ವಲ್ಪ ಅತಿಯಾಗಿ ತೋರಿತು ಆಡಳಿತ ಮಂಡಳಿಗೆ. ಬೀದಿಯಲ್ಲಿ, ಬಸ್ಸುಗಳಲ್ಲಿ, ಕೆಫೆ ಗಳಲ್ಲಿ ಎಲ್ಲೆಂದರಲ್ಲಿ ನಗ್ನತೆ ನೋಡಿ, ನೋಡಿ ಬೇಸತ್ತಿದ್ದ ಅವರುಗಳಿಗೆ ಗ್ರಂಥಾಲಯವೂ ಪೆಡಂಭೂತವಾಗಿ ಕಾಡಿತು. ವಿದ್ಯಾರ್ಥಿಗಳಿಗೆ (ನಗ್ನಾರ್ಥಿ?) ಒಂದು ಸಂದೇಶ ಕಳಿಸಿದರು. ‘ಈ ಮೇಲ್’ ಸಂದೇಶ. ಕೂಡಲೇ ಮಾನವಾಗಿ ಬಟ್ಟೆ ತೊಟ್ಟುಕೊಂಡು ಬರುವುದು ಕ್ಷೇಮ, ನಿಮ್ಮ ಈ ನಗ್ನತೆ a piece of harmless fun ಆಗಿ ಕಂಡರೂ ಗ್ರಂಥಾಲಯಕ್ಕೆ ಬರುವ ಪುಸ್ತಕ ಪ್ರಿಯರಿಗೆ ನಿಮ್ಮೀ ನಡತೆ distraction ಆಗಿ ತೋರುತ್ತಿರೋದರಿಂದ ಕೂಡಲೇ ಈ ನಡವಳಿಕೆಗೆ ಪೂರ್ಣ ವಿರಾಮ ಹಾಕಬೇಕು ಎಂದು. ಈ ಧಮಕಿಗೆ ಕೆರಳಿ ವಿದ್ಯಾರ್ಥಿಗಳು ಪುಣ್ಯಕ್ಕೆ ಅರೆ ನಗ್ನರಲ್ಲ, ಗ್ರಹಚಾರಕ್ಕೆ ಪೂರ್ಣ ನಗ್ನಾರದಾರೋ ಎನ್ನುವುದು ಕಾದು ನೋಡಬೇಕಾದ ಬೆಳವಣಿಗೆ.

ಈ ಮೇಲೆ ಹೇಳಿದ ಗ್ರಂಥಾಲಯಕ್ಕೆ ಹೊರ ದೇಶಗಳ ನಾಯಕರೂ ಭೆಟ್ಟಿ ಕೊಡುತ್ತಾರಂತೆ. ಬಹುಶಃ ಇಟಲಿ ದೇಶದ ಪ್ರಧಾನಿ ಬೆರ್ಲಸ್ಕೊನಿ ಯಂಥ ನಾಯಕರಿಗೆ ವಿದ್ಯಾರ್ಥಿಗಳ ಈ ನಡತೆ ಕಸಿವಿಸಿ ತರದೇ ಕಚಗುಳಿ ತರ ಬಹುದೇನೋ?  

ಸರಿ, ಈ creativity ಗೆ ಸಿಕ್ಕ ಸ್ಫೂರ್ತಿಯಾದರೂ ಎಲ್ಲಿಂದ ಎಂದು ತಲೆ ಕೆರೆದುಕೊಳ್ಳುತ್ತಿದ್ದೀರೋ? ಮೇಲಿನ ಚಿತ್ರದಲ್ಲಿ ಎಡ ಮೂಲೆಯಲ್ಲಿ ಪುಸ್ತಕದ ಶೆಲ್ಫ್ ಗಳನ್ನು ಕಾಯಲೆಂದು ನಿಲ್ಲಿಸಿರುವ ಪ್ರತಿಮೆ ಆಗಿರಲಿಕ್ಕಿಲ್ಲ ತಾನೇ ಸ್ಫೂರ್ತಿಯ ಉಗಮ?  

ಚಿತ್ರ ಕೃಪೆ: http://thequirkyglobe.blogspot.com/2011/06/wednesday-is-half-naked-day-at-library.html

ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed state, ಪಾಕಿಸ್ತಾನದ ಈ degenaration ನೋಡಿ ಕನಿಕರ ಪಡುತ್ತಿದ್ದ ನಮಗೆ ಒಂದು ವಿಚಿತ್ರ ಆದರೆ  ಆಘಾತಕಾರಿಯಾದ ಬೆಳವಣಿಗೆ ಕಾಣಲು ಸಿಕ್ಕಿದೆ. ಒಂದು ಬೆಳಿಗ್ಗೆ ಅಮೆರಿಕೆಯ ದೂತಾವಾಸದ ಸಿಬ್ಬಂದಿಯೊಬ್ಬ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ ಬಂದು ನಿಲ್ಲುತ್ತದೆ, ಗುಂಡಿನ ಚಕಮಕಿ ನಡೆಯುತ್ತದೆ, ಬೈಕ್ ಸವಾರರಲ್ಲಿ ಇಬ್ಬರು ಸಾಯುತ್ತಾರೆ ಅಮೆರಿಕೆಯವನನ್ನು ಪೊಲೀಸರು ಬಂಧಿಸುತ್ತಾರೆ. ಪಾಕ್ ಬೀದಿಗಳಲ್ಲಿ  ಬೈಕ್ ನಲ್ಲಿ ಬರುವುದೂ, ಬಂದ ಕೂಡಲೇ ಗುಂಡಿನ ಕಾಳಗ ನಡೆಯುವುದೂ ಸಾಮಾನ್ಯವೇ. ನಾವು ನಮ್ಮ ಚಿತ್ರಗಳಲ್ಲಿ ಕಾಣುವುದನ್ನು ಅಲ್ಲಿ ನಿಜ ಜೀವನದಲ್ಲಿ ಆಡಿ ತೋರಿಸುತ್ತಾರೆ. ಆದರೆ ವಿಷಯದ ಗಾಂಭೀರ್ಯ ಇರುವುದು ಅಮೆರಿಕೆಯವ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದು. ಅದೂ ಸಾಧಾರಣ ಅಮೆರಿಕೆಯ ನಾಗರೀಕನಲ್ಲ. ದೂತಾವಾಸದ ಸಿಬ್ಬಂದಿ. ಅವನಿಗೆ ಇದ್ದೇ ಇರುತ್ತದೆ diplomatic immunity. ತನ್ನ ದೇಶದವರು ಸಿಕ್ಕಿಬಿದ್ದಾಗ ಸಹಜವಾಗಿಯೇ ಅಮೆರಿಕನ್ನರು ಕಿಡಿ ಕಿಡಿ ಯಾಗುತ್ತಾರೆ. ಈ ವಿಷಯದಲ್ಲೂ ಸಹ ಅಸಮಾಧಾನ ಗೊಂಡರು. ಮಾಮೂಲಿ ಪ್ರತಿಭಟನೆ ಕೆಲಸ ಮಾಡದಾದಾಗ ಅಮೆರಿಕೆಯಲ್ಲಿನ ಪಾಕ ರಾಜತಾಂತ್ರಿಕ ನನ್ನು ಕರೆಸಿ ನಮ್ಮ ಪ್ರಜೆಯನ್ನು ವಿಮುಕ್ತಿಗೊಳಿಸದಿದ್ದರೆ ನಿನ್ನನ್ನು ಒದ್ದೋಡಿಸುತ್ತೇವೆ ಎಂದು ಧಮಕಿ ಹಾಕಿದರು. ಧಮಕಿ ಕೇಳಿ ಮರಳಿದ ಆತ ನನಗೆ ಅಂಥ ಎಚ್ಹರಿಕೆಯನ್ನೇನೂ ಅಮೇರಿಕಾ ನೀಡಿಲ್ಲ ಎಂದು ಟ್ವೀಟಿಸಿ ಸುಮ್ಮನಾದ. ಆದರೆ ಅಮೇರಿಕ ನೇರವಾಗಿ ಅಲ್ಲಿನ ಸರಕಾರದ ಮೇಲೆ ಪ್ರಭಾವ ತೋರಿಸಲು ತೊಡಗಿತು. ಅಲ್ಲಿನ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಇವನು ದೂತಾವಾಸದ ಅಧಿಕಾರಿ ಅಲ್ಲ, ಬದಲಿಗೆ ಒಬ್ಬ ಗೂಢಚಾರ ಎಂದು ಕರೆದು ಅವನ ಬಳಿಯಿದ್ದ ಆಧುನಿಕ ಉಪಕರಣಗಳ ಹೆಸರುಗಳನ್ನೂ ಪಟ್ಟಿ ಮಾಡಿ ಬಹಿರಂಗಗೊಳಿಸಿದರು, charge sheet ಹಾಕಿ ಅತ್ತೆ ಮನೆಗೂ ಸಹ ಅಟ್ಟಿದರು. ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ? ಪಾಕಿಸ್ತಾನದ ಗಾಯಕ ಕೋಟ್ಯಂತರ ರೂಪಾಯಿ ಅನಧಿಕೃತವಾಗಿ  ತಂದ ಎಂದು ಬಂಧಿಸಿದ ಕೂಡಲೇ ಅವನನ್ನು ಬಿಡುಗಡೆ ಗೊಳಿಸಲು ಆದೇಶ.   

ಪ್ರಥಮ ಕೊಲ್ಲಿ ಯುದ್ಧದ ವೇಳೆ ಅಮೆರಿಕೆಯ ಯುದ್ಧ ವಿಮಾನಗಳಿಗೆ ಇಂಧನ ಹಾಕಬಾರದು ಎಂದು ನಿರ್ಣಯಿಸಿದ್ದ ನಮ್ಮ  ಸರಕಾರ ಕೊನೆಗೆ ಸದ್ದಿಲ್ಲದೇ ಇಂಧನ ತುಂಬಿಸಿ ಕೊಟ್ಟಿತು. ಬಿಳಿ ನಗು ನಮ್ಮ ಮೇಲೆ ಚೆನ್ನಾಗಿ ಪ್ರಭಾವ ಬೀರುತ್ತದೆ. ಈ ಪಾಠವನ್ನು ಅಮೆರಿಕನ್ನರಿಗೆ ನೀಡಿದ್ದು ನಮ್ಮನ್ನು ೨೦೦ ವರ್ಷ ಗಳ ಕಾಲ ಆಳಿದ ಬ್ರಿಟಿಷರು. ಇರಾನ್ ನಮ್ಮ ದೇಶದ ಆಪ್ತ ಮಿತ್ರ. ಆದರೆ ಇರಾನ ವಿರುದ್ಧದ ಭದ್ರತಾ ಮಂಡಳಿಯ ನಿರ್ಣಯಕ್ಕೆ ಪರವಾಗಿ ನಾವು ಮತ ಚಲಾಯಿಸಿ ಮಧ್ಯ ಪ್ರಾಚ್ಯದಲ್ಲಿನ ಒಂದು ದೇಶದ ಬೆಂಬಲವನ್ನು ಕಳೆದು ಕೊಂಡೆವು.

ಕೇಂದ್ರ ಸರಕಾರದಲ್ಲಿ ಕೆಲಸ ಮಾಡದ ಅಥವಾ ಮಾಡಲು ಬಾರದ ಒಂದು ಇಲಾಖೆ ಇದ್ದರೆ ಅದೇ ವಿದೇಶಾಂಗ ಇಲಾಖೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಎಂದರೆ ಗರಿ ಗರಿಯಾದ ಸೂಟು, ಅಥವಾ ರೇಶಿಮೆ ಸೀರೆ ಉಟ್ಟು ದೇಶ ಸುತ್ತುವುದು ಎನ್ನುವ ತಪ್ಪು ಕಲ್ಪನೆ ಮನೆ ಮಾಡಿದೆ. ನೆಹರೂ ಕಾಲಾದ outdated ರಾಜನೀತಿಯ ನಿಯಮಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವ ಭಾವನೆ ಬೇರೆ. ನಾವು ಯಾರ ಪರವೂ ಅಲ್ಲ, ಎಲ್ಲರ ಸವಾರಿ ನಮ್ಮ ಮೇಲೆ ನಡೆಯಲಿ ಎನ್ನುವ ನಿರ್ಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ. ಆ ನೀತಿಗೆ ಒಂದೇ ಒಂದು ಬದಲಾವಣೆಯಂತೂ ಕಾಣಲು ಸಿಕ್ಕಿದೆ. ಅದೇ ಅಮೇರಿಕಾ ಪರ ನೀತಿ. ಹಿಂದೆ ರಷ್ಯಾ ಪರ, ಈಗ ಅಮೇರಿಕಾ ಪರ. ನಮಗೇಕೆ ಸ್ವಂತಿಕೆ ಇಲ್ಲ ಅಥವಾ ಇರಕೂಡದು? ವಿನಾಕಾರಣ ಕಾರ್ಗಿಲ್ ಅನ್ನು ಆಕ್ರಮಿಸಿ ನಮ್ಮ ಸಾವಿರಾರು ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಸದೆ ಬಡಿಯುವ ಸುಂದರ, ಬಹುಶಃ ಇನ್ನೆಂದೂ ಬರದ ಅವಕಾಶವನ್ನು ನಾವು ಕಳೆದು ಕೊಂಡೆವು. ಇದಕ್ಕೆ ಕಾರಣ ನಮಗೆ ಅಮೇರಿಕೆಯಿಂದ ಬಂದ ಮನವಿ. ಅವರಿಗೆ ಬೇಕಾದಾಗ ಮನವಿ, ಅಥವಾ ಬೆದರಿಕೆ. ಈ ಎರಡರಲ್ಲಿ ಒಂದನ್ನು ಕೊಟ್ಟು ಅಮೇರಿಕಾ ತನ್ನ ಕೆಲಸವನ್ನೂ ಸಾಧಿಸಿ ಕೊಳ್ಳುತ್ತದೆ.

೨೦೦೧ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕೆಯ ಮೇಲೆ ನಡೆದ ಧಾಳಿಗೆ ತತ್ತರಿಸಿ ಪ್ರಪಂಚದ ಎಲ್ಲ ದೇಶಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿತು ಅಮೇರಿಕಾ. ಭಯೋತ್ಪಾದಕರು, ಅದಕ್ಕೆ ಧನ ಸಹಾಯ ನೀಡುವವರು ಯಾರದೇ ನೆಲದ ಮೇಲೆ ಇದ್ದರೋ ಅಮೆರಿಕೆಯ ಸುಪರ್ದಿಗೆ ಒಪ್ಪಿಸತಕ್ಕದ್ದು ಎನ್ನುವುದು ಮುಚ್ಚಳಿಕೆ. ವಿಧೇಯರಾಗಿ ಎಲ್ಲಾ ದೇಶಗಳೂ ತಲೆ ಬಾಗಿದವು. ನಮ್ಮ ದೇಶದ ಗಡಿ ನುಗ್ಗಿ ಒಂದು ನಗರವನ್ನು ತನ್ನ ಹಿಂಸೆಯಿಂದ ತತ್ತರಿಸುವಂತೆ ಮಾಡಿದ ಪಾಕ ಬಗ್ಗೆ ಮಾತ್ರ ಬೇರೆಯೇ ತೆರನಾದ ನಿಲುವು. ಉಗ್ರವಾಗಿ ಪ್ರತಿಭಟಿಸಿದಾಗ ಅಲ್ಲಿಂದ ಧಾವಿಸಿ ಬಂದ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಒಂದ್ರೆಅದು ಮೊಂಬತ್ತಿ ಗಳನ್ನು ಹಚ್ಚಿ, ಎರಡು ನಿಮಿಷ ಮೌನ ಆಚರಿಸಿ ಸಮಾಧಾನ ಮಾಡಿ ಹೋದರು. ಮುಂಬೈ ಮೇಲಿನ ಆಕ್ರಮಣದ ವೇಳೆಯೂ ಭಾರತಕ್ಕೆ ಒಂದು ಸುವರ್ಣಾವಕಾಶ ಇತ್ತು ಪಾಕಿಗೆ ಒಂದು “ಝಟ್ಕಾ” ನೀಡಲು. ಅಲ್ಲೂ ಬಿಳಿ ನಗೆ ನಮ್ಮ priority ಮರೆಯುವಂತೆ ಮಾಡಿತು. ಬಿಳಿ ನಗುವಿನ ಮಾಯೆ ಅಂಥದ್ದು.     

ನಮ್ಮ ರಕ್ಷಣಾ ಸಚಿವ (ಜಾರ್ಜ್ ಫೆರ್ನಾಂಡಿಸ್) ರನ್ನು ಬೆತ್ತಲೆ ಮಾಡಿ ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅದು ದೊಡ್ಡ ವಿಷಯವಲ್ಲ ನಂಗೆ. ಮೆಚ್ಚುಗೆ, ಅಬ್ಬಾ, ಎಂಥ ಭದ್ರತಾ ವ್ಯವಸ್ಥೆ ಅವರದು. ನಮ್ಮ ರಾಷ್ಟ್ರಪತಿ ಕಲಾಂ ರನ್ನು ವಿಮಾನ ನಿಲ್ದಾಣ ದಲ್ಲಿ ಅನುಚಿತವಾಗಿ ವರ್ತಿಸಿದಾಗಲೂ ನಿರ್ಲಿಪ್ತತೆ. ನಮ್ಮ ವಿದ್ಯಾರ್ಥಿಗಳನ್ನು ಅಲ್ಲಿನ ವಿದ್ಯಾಲಯವೊಂದು ಮೋಸ ಮಾಡಿ ನಂತರ ವಿದ್ಯಾರ್ಥಿಗಳು ಓಡಿ ಹೋಗದಂತೆ electronic tag ಅವರ ಕಾಲಿಗೆ ಕಟ್ಟಿ ಅವರ ಮೇಲೆ ನಿರಂತರ ನಿಗಾ ಇಟ್ಟಾಗಲೂ ನಮಗೆ ಅಮೆರಿಕೆಯ ನಡವಳಿಕೆ ಅಸಹನೀಯವಾಗಿ ತೋರುವುದಿಲ್ಲ. ಇನ್ನು ನಮಗೆ ತಿಳಿಯದ ಇನ್ಯಾವ್ಯಾವ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆಯೋ ದೇವರೇ ಬಲ್ಲ. ನಮ್ಮ ಸರಕಾರ ಗಳನ್ನು ನಡೆಸಲು ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲಾ ಅರವತ್ತು, ಎಪ್ಪತ್ತು ವಯಸ್ಸು ದಾಟಲೇ ಬೇಕು. ಒಂದೆರಡು ಅಪವಾದಗಳನ್ನು ಬಿಟ್ಟರೆ ವಯೋವೃದ್ಧರ ಕಾರುಬಾರು. ಅವರಿಗೆ ರೋಷ ಎಲ್ಲಿಂದ ತಾನೇ ಬರಬೇಕು.   

ಈಗಿನ ವಿಶ್ವ bi-polar ಆಗಬೇಕಿಲ್ಲ. ಪ್ರಪಂಚದ ತುಂಬಾ ದೊಡ್ಡದು. ಹಳೇ ಕಾಲದ ರೀತಿಯ ರಾಜಕಾರಣವನ್ನು ಅಲ್ಲ ನಾವು ಕಾಣುತ್ತಿರುವುದು. ಪಕ್ಕದ ಚೀನಾ ಅತ್ಯಾಧುನಿಕ ಆಯುಧಗಳನ್ನು ಶೇಖರಿಸುತ್ತಿದೆ ಎಂದು ನಮ್ಮ ಗೃಹ ಮಂತ್ರಿ ಕಳವಳ ವ್ಯಕ್ತ ಪಡಿಸಿದರು. ಅವರ ಮನೆಯೊಳಗೇ ಕೂತು ಅವರೇನಾದರೂ ಮಾಡಿಕೊಳ್ಳಲಿ. ನಮಗೇಕೆ ಅವರ ಉಸಾಬರಿ? 3G ಸ್ಕ್ಯಾಮು ಮತ್ತು ಸ್ವಿಸ್ ಮತ್ತು ಇತರೆ ಬ್ಯಾಂಕುಗಳಲ್ಲಿ ನಮ್ಮ ಜನ ಹುಗಿದಿಟ್ಟಿರುವ ಸಂಪತ್ತನ್ನು ಉಪಯೋಗಿಸಿ ನಮ್ಮ ಸೈನ್ಯವನ್ನೂ ಬಲ ಗೊಳಿಸಲಿ. ಭಾರತದ ನೇತೃತ್ವದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಧ್ರುವೀಕರಣ ನಡೆಯಲಿ. ನಮ್ಮೊಂದಿಗೆ ಹೆಜ್ಜೆ ಹಾಕಲು ಲ್ಯಾಟಿನ್ ಅಮೆರಿಕೆಯಲ್ಲೂ, ಮಧ್ಯ ಪ್ರಾಚ್ಯದೇಶ ಗಳಲ್ಲೂ, ಆಫ್ಫ್ರಿಕಾ ಖಂಡದಲ್ಲೂ ದೇಶಗಳಿವೆ.

* ಹಳೇ ಸೇತುವೆ.. ಹಳೇ ನೆನಪು, ಹೊಸ ಭರವಸೆ

 

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ “ಹಳೇ ಸೇತುವೆ” ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.  

 ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದು ಏಕೆಂದರೆ ನಾನು ನುರಿತ ಬರಹಗಾರನೇನೂ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಯೂ ಅಲ್ಲ, ಬರಹಗಾರರ ಗೆಳೆತನವೂ ಇಲ್ಲ. ಒಂದೆರಡು ಆನ್ ಲೈನ್ ಪತ್ರಿಕೆಗಳಲ್ಲಿ ಅಭಿಪ್ರಾಯ ಬರೆದು ಬರೆಯುವ ಧೈರ್ಯ ನನಗೆ ನಾನೇ ತಂದುಕೊಂಡೆ.   

ಬ್ಲಾಗ್ ಆರಂಭಿಸುವ ಬಗ್ಗೆ ಕೆಲವು ಲೇಖನಗಳನ್ನು ಓದಿದ ನಂತರ ನನಗೂ ನನ್ನದೇ ಆದ ಒಂದು ಬ್ಲಾಗ್ ಆರಂಭಿಸಿಕೊಳ್ಳುವ ಆಸಕ್ತಿ ಮೂಡಿತು. ಅದರಲ್ಲೂ ಪುಕ್ಕಟೆಯಾಗಿ ಬ್ಲಾಗ್ ರಚಿಸಿಕೊಳ್ಳಬಹುದು ಎಂದ ಮೇಲಂತೂ ಕೇಳಬೇಕೆ? ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ? ನಾನು ಹೈಸ್ಕೂಲಿನಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು. ಪುಕ್ಕಟೆ ಯಾಗಿ ಹೆಣ್ಣು ಸಿಕ್ಕರೆ ನನಗೊಂದು,ನಮ್ಮಪ್ಪನಿಗೊಂದು, ನಮ್ಮಜ್ಜನಿಗೊಂದಂತೆ. ಅದೇ ಸಮಯ ಅದಕ್ಕೆ ಒಂದಿಷ್ಟು ಕಾಸು ತಗಲುತ್ತದೆ ಅಂದಾಕ್ಷಣ ನನಗಿನ್ನೂ ಎಳೇ ಪ್ರಾಯ, ನಮ್ಮಪ್ಪನಿಗೊಂದು ಹೆಣ್ಣೀಗಾಗಲೇ ಇದೆ, ನಮ್ಮಜ್ಜನಿಗೆ ವಯಸ್ಸಾಯಿತು ಎಂದು ಜಾರಿಕೊಳ್ಳುತ್ತಾರಂತೆ.     

ಬ್ಲಾಗ್ ಗೆ ಹಳೇ ಸೇತುವೆ ಎಂದು ಹೆಸರಿಟ್ಟಾಗ ನನ್ನ ಸೋದರಿಯರು ಕೇಳಿದರು ಯಾಕೀ ಹೆಸರೆಂದು. ಈ ಸೇತುವೆ ತೋರಿಸಿ ಹೊಳೆಯಿಂದಾಚೆಯಿಂದ ಸೈತಾನ್ ಬರುತ್ತಾನೆ ಎಂದು ನನ್ನ ಚಿಕ್ಕಮ್ಮಂದಿರು ನಾನು ಚಿಕ್ಕವನಿದ್ದಾಗ ಹೆದರಿಸುತ್ತಿದ್ದರು. ಈ ಸೇತುವೆ ದಾಟಿ ಕೊಂಡೇ ನನ್ನ ಆಪ್ತ ಮಿತ್ರರನ್ನು ಭೆಟ್ಟಿಯಾಗಲು ನಾನು ಹೋಗುತ್ತಿದ್ದದ್ದು. ನನ್ನ ಪ್ರೀತಿಯ ತಮ್ಮ ಆಕಸ್ಮಿಕವಾಗಿ ನದಿಯಲ್ಲಿ ಜಾರಿ ಬಿದ್ದು ನಿಧನ ಹೊಡಿದ ನಂತರ ಅವನ ಅಂತಿಮ ಯಾತ್ರೆ ಸಹಾ ಇದೇ ಸೇತುವೆ ಮೇಲೇ ಹಾದು ಹೋಗಿದ್ದು. ಹಾಗಾಗಿ ಈ ಸೇತುವೆ ನನ್ನನ್ನು ಭಾವುಕನನ್ನಾಗಿ ಮಾಡುತ್ತದೆ. ಹಳೇ ನೆನಪುಗಳನ್ನು ನನಗೆ ತಲುಪಿಸುತ್ತದೆ. ಈ ಕಾರಣಗಳಿಗಾಗಿ ಹಳೇ ಸೇತುವೆ ಹಸರು ಆಪ್ತವಾಗಿ, ಪ್ರಸಕ್ತವಾಗಿ ಕಂಡಿತು.  

ಕನ್ನಡ ನಾಡಿನಿಂದ ಹೆಚ್ಚು ಕಡಿಮೆ ಇಪ್ಪತ್ತು ವರ್ಷ ಹೊರಗಿದ್ದುದರಿಂದ ನಾಡಿನೊಂದಿಗೆ ಮಾತ್ರವಲ್ಲ ನುಡಿಯೊಂದಿಗೂ ನಂಟು ಬಿಟ್ಟು ಹೋಗಿತ್ತು. ಆದರೆ ಮಾತೃ ಭಾಷೆ ನೀವೆಲ್ಲೇ ಇದ್ದರೂ ನಿಮ್ಮ ಬೆನ್ನು ಬಿಡದು. ಮಾತೃ ಭಾಷೆಯ ಮೋಡಿ ಇಲ್ಲಿದೆ ನೋಡಿ. ವ್ಯಕ್ತಿ ಏನೆಲ್ಲವನ್ನು ಕಳೆದುಕೊಂಡರೂ ಅವನ ಅಂತರಂಗದ ಭಾಷೆ ಅವನ ಉಸಿರಿನಂತೆ ಅವನೊಂದಿಗೆ ಇರುತ್ತದೆ. ಕೆಲವರು ಡ್ರಾಮ ಮಾಡಬಹುದು ದೇಶದ ಹೊರಗೆ ಇರುವುದರಿಂದ ಭಾಷೆ ಮರೆತು ಹೋಯಿತು ಎಂದು. ಅದು ಶುದ್ಧ, ಸೋಗಲಾಡಿತನ.  ನಾವು ಮನೆಯಲ್ಲಿ ಬೇರೆ ಭಾಷೆ ಮಾತನಾಡಿದರೂ ನನ್ನ ಮನದ, ಮೆಚ್ಚಿನ ನುಡಿ ಕನ್ನಡ. ಭೂಮಿ ತಾಯಿ ಇರುವಾ ತನಕ ನಗುತಾ ಇರಲಿ ಕನ್ನಡ ಎಂದಂತೆ ನನ್ನ ಮನದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಎಂದಿಗೂ ಇರುತ್ತದೆ.  

ಮನುಷ್ಯ ಸಂಬಂಧಗಳ ಥರ ಶಿಥಿಲವಾಗುತ್ತಿರುವ, ಸುಣ್ಣದ ಕಲ್ಲಿನಿಂದ ಕಟ್ಟಿದ, ಭದ್ರೆಯ ಆಪ್ತ ಮಿತ್ರ ಹಳೇ ಸೇತುವೆ ಜಾಗದಲ್ಲಿ ಮತ್ತೊಂದು ಸೇತುವೆ ಬಂದರೂ ಅಂತರ್ಜಾಲದಲ್ಲಿ ಹಳೇ ಸೇತುವೆ ಹೆಸರು ಖಾಯಮ್ಮಾಗಿ ಉಳಿಯುವಂತೆ ನನ್ನ ಬ್ಲಾಗ್ ಸಹಾಯ ಮಾಡಬಲ್ಲುದು ಎಂದು ನನ್ನ ನಂಬಿಕೆ.

ನನ್ನ ಬರವಣಿಗೆಯ ನಿಟ್ಟಿನಲ್ಲಿ ಸಂಪದದಿಂದ ಸಿಕ್ಕ ಸಹಾಯಕ್ಕೆ ನಾನೆಂದೂ ಋಣಿ. ಅದೇ ರೀತಿ google transliteration ಬಳಸುವ ನನಗೆ ಗೂಗಲ್ ನ ಈ ಸೌಲಭ್ಯ ಬಹಳ ಸಹಾಯಕವಾಯಿತು.

ಚಿತ್ರ ಕೃಪೆ: